Wednesday, February 3, 2016

ಮರು ಓದು ....ಅಮೆರಿಕಾದಲ್ಲಿ ಗೊರೂರು

ಕೆಲವು ಪುಸ್ತಕಗಳು ಮರು ಓದಿಗೆ ಅರ್ಹವಾಗಿರುತ್ತವೆ. ರಸಾಸ್ವಾದವು - ಕೆಲವೊಮ್ಮೆ ಮರು ಓದಿನಲ್ಲಿಯೇ ಹೆಚ್ಚು....
ವಿರಾಮದಲ್ಲಿ ಓದಬಹುದಾದ ಅಂತಹ ಪುಸ್ತಕಗಳಲ್ಲಿ ಒಂದು - "ಅಮೆರಿಕಾದಲ್ಲಿ ಗೊರೂರು". ಪ್ರತಿಯೊಬ್ಬ ಕನ್ನಡಿಗನ ಮನೆಯಲ್ಲಿ ಇರಲೇಬೇಕಾದ ಪುಸ್ತಕವಿದು. ಊರೂರು ಓಡಾಡಿ ಮೈ ಹುಡಿ ಮಾಡಿಕೊಂಡು ಕಿಸೆ ಖಾಲಿ ಮಾಡಿಕೊಂಡು ಅದೂ ಇದೂ ತಿಂದು ಆರೋಗ್ಯವನ್ನೂ ಕೆಡಿಸಿಕೊಳ್ಳುವ ಶಕ್ತಿಯಿಲ್ಲದವರಿಗೆ ಮತ್ತು ಓದಿ ಸುಖಿಸುವ ಕಲೆ ತಿಳಿದವರೆಲ್ಲರಿಗೂ ಪ್ರವಾಸ ಕಥನಗಳು ರಸದೂಟವಿದ್ದಂತೆ.


ಡಾ. ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಅಮೆರಿಕಾ ದೇಶದ ಪ್ರವಾಸ ಕಥನ - "ಅಮೆರಿಕಾದಲ್ಲಿ ಗೊರೂರು" ಎಂಬ  ಪುಸ್ತಕವು ಪ್ರವಾಸ ಕಥನಗಳ ಸಾಲಿನಲ್ಲಿ ಕಿರೀಟಪ್ರಾಯವಾದುದು. 1977 ರ ಅಗೋಸ್ತ್ 15 ರಂದು ಪತ್ನಿಯೊಂದಿಗೆ ದೆಹಲಿಯಿಂದ ಅಮೆರಿಕಕ್ಕೆ ಹೊರಟ ಗೊರೂರರು ಕೆಲವು ವಾರ "ಪರದೇಸಿ"ಯಾಗಿದ್ದು ಅಮೆರಿಕ - ಕೆನಡಾದಲ್ಲಿ ಅಲೆದಾಡಿದ, ಅಲ್ಲಿ ಕಂಡು ಅನುಭವಿಸಿದ ರಸಾನುಭವಗಳು, ಅವರ ಅನ್ನಿಸಿಕೆಗಳು -"ಅಮೆರಿಕಾದಲ್ಲಿ ಗೊರೂರು" ಪ್ರವಾಸ ಕಥನದಲ್ಲಿವೆ.
 

ಇದು ಒಮ್ಮೆ ಓದಿ ಪಕ್ಕದಲ್ಲಿಡುವ ಪುಸ್ತಕವಲ್ಲ. ಬಹುಶಃ ನಾನು ಇದು 3 ನೇ ಬಾರಿ ಈ ಪುಸ್ತಕದಲ್ಲಿ ಮುಳುಗಿದ್ದೇನೆ. ತಮ್ಮ ತಿರುಗಾಟದುದ್ದಕ್ಕೂ 80 ರ ವಯಸ್ಸನ್ನು ಲೇವಡಿ ಮಾಡುವಂತೆ ತೋರುವ ಲೇಖಕರ ಜೀವನೋತ್ಸಾಹ, ಅವರು ಉಳಿಸಿಕೊಂಡಿದ್ದ ಬಾಲ್ಯದ ಕುತೂಹಲವು ಈ ಕಥನದ ಪ್ರತೀ ಪುಟದಲ್ಲೂ ಎದ್ದು ತೋರುತ್ತದೆ. ಅಮೆರಿಕ ಎಂಬ ಚುಂಬಕದ ಗುಣಾವಗುಣಗಳನ್ನು ಇಲ್ಲಿ ಸೊಗಸಾಗಿ ಚಿತ್ರಿಸಿರುವ ಗೊರೂರರು ಪ್ರವಾಸದುದ್ದಕ್ಕೂ ಯಾವುದೇ ಟಿಪ್ಪಣಿ ಮಾಡಿಕೊಳ್ಳದೆ ತಮ್ಮೊಳಗೆ ದಾಖಲಾಗಿದ್ದ ನೆನಪುಗಳನ್ನು ಆ "80" ಎನ್ನುವ ಭೂತದೊಂದಿಗೆ ಹೋರಾಡುತ್ತ ಓದುಗರಿಗೆ ತೆರೆದಿಟ್ಟ ರೀತಿಯೂ ಅನನ್ಯವಾಗಿದೆ. IBH ಪ್ರಕಾಶನವು ಹೊರತಂದಿರುವ ಈ ಪುಸ್ತಕವು ಹಲವಾರು ಮುದ್ರಣಗಳನ್ನೂ ಕಂಡಿದೆ. ಕೆಲವೇ ವಾರಗಳ ಕಾಲ ಅಮೆರಿಕದಲ್ಲಿದ್ದ ವಯೋವೃದ್ಧ ಗೊರೂರರು ಅಷ್ಟು ಕಡಿಮೆ ಅವಧಿಯಲ್ಲಿ ಅಮೆರಿಕದ ಬದುಕಿನ ವಿಸ್ತೃತ ನೋಟವೊಂದನ್ನು ತಾವು ಕಂಡಂತೆ ಹೃದ್ಯವಾಗಿ ಕಥನಿಸಿದ್ದಾರೆ. ಪುಸ್ತಕ ದ್ವೇಷಿಗಳಲ್ಲದ ಎಲ್ಲರನ್ನೂ ಮುದಗೊಳಿಸುವ ಪ್ರವಾಸ ಕಥನವಿದು. ಸುಲಲಿತ ಭಾಷೆ, ನಿರೂಪಣೆಯು ಅವರ ಅನುಭವಗಳಿಗೆ ಕಲಶವಿಟ್ಟಂತಿದೆ. ವೃದ್ಧಾಪ್ಯದಿಂದಾಗಿ ಹೆಬ್ಬೆರಳು, ಮುಷ್ಟಿಯನ್ನು ಪೀಡಿಸುತ್ತಿದ್ದ ನೋವಿನ ಕಾರಣದಿಂದ ತಮ್ಮ ಮಿತ್ರರಿಗೆ ಹೇಳಿ ಅವರಿಂದ ಬರೆಸಿ, ಒಮ್ಮೊಮ್ಮೆ ತಾವೇ ಬರೆದು - ಅಂತೂ ಸಾಧ್ಯವಾದಷ್ಟು ಅನುಭವವನ್ನು ಹಂಚಿಕೊಂಡು, ಗೊರೂರರು ನಮಗೆಲ್ಲ ಉಪಕರಿಸಿದ್ದಾರೆ. ಅಮೆರಿಕದ ಈ ಕಥನವನ್ನು ಓದಿದವರು ಯಾವುದೇ ಶ್ರಮವಿಲ್ಲದೆ, ಖರ್ಚಿಲ್ಲದೆ, ತಾವೇ ಅಮೆರಿಕಕ್ಕೆ ಹೋಗಿ ಬಂದರೂ ಪಡೆಯಲಾಗದಷ್ಟು ವಿಷಯಗಳನ್ನು ತಿಳಿದು ತೃಪ್ತರಾಗಬಹುದು. ಅಮೆರಿಕದಿಂದ ಹಿಂದಿರುಗಿದ ನಂತರ ಅವರ ಅನುಭವವನ್ನು ಅವರ ಬಾಯಿಂದಲೇ ಆಲಿಸಿದ ಪುಣ್ಯಾತ್ಮರಾದ ದಿ. ಪು.ತಿ.ನರಸಿಂಹಾಚಾರ್, ದಿ. ಹಾ.ಮಾ.ನಾಯಕರು, ಶ್ರೀ ಹಂ.ಪ. ನಾಗರಾಜಯ್ಯ, ದಿ. ಜಿ.ನಾರಾಯಣ ಮುಂತಾದವರ ಒತ್ತಾಸೆಯಿಂದ ಮೂಡಿ ಬಂದಿರುವ ಈ ಪ್ರವಾಸ ಕಥನವು "ಪ್ರವಾಸ ಕಥನ" ಎಂಬ ಸಾಗರದ ಅಮೂಲ್ಯ ರತ್ನ. ನನಗಂತೂ ಅಮೆರಿಕಕ್ಕೆ ನಾನೇ ಹೋಗಿ ಕಂಡು ಬಂದುದಕ್ಕಿಂತ ಹೆಚ್ಚು ವಿಸ್ತಾರವಾದ ವರ್ಣನೆಯನ್ನೊಳಗೊಂಡ ಈ ಪ್ರವಾಸ ಕಥನವು ವಿಶೇಷ ಮುದ ನೀಡಿದೆ. 317 ಪುಟಗಳ ಈ ಹೊತ್ತಗೆಯು ಪ್ರತೀ ಮನೆಯಲ್ಲೂ ಇರಲೇ ಬೇಕಾದ ಸಂಪತ್ತು. ಕುತೂಹಲ ಉಳಿಯುವಂತೆ ಬರೆಯುವ ರೀತಿ, ಹಿತವಿಲ್ಲದ ವಿಷಯಗಳನ್ನು ಮಂಡಿಸುವಾಗ ತೋರಿಸಿದ ಸಂಯಮ, ಎಲ್ಲ ಬದುಕುಗಳನ್ನೂ ಸಮಭಾವದಿಂದ ಓಲೈಸಿದ ಹಿರಿಮೆ, ಪರದೇಶದಲ್ಲಿ ಎದುರಾದ ಕಿರಿಕಿರಿಗಳನ್ನು ಆಡುತ್ತಾಡುತ್ತ ನಿಭಾಯಿಸಿದ ರೀತಿ, ಹೊಸ ಭಾರತದ ಅನಧಿಕೃತ ರಾಯಭಾರಿಯಂತೆ - ಭಾರತೀಯ ಸಂಸ್ಕೃತಿಯ ನಿಜಮುಖವಾಗಿ ಅಮೆರಿಕನ್ನರ ವಿಶ್ವಾಸ ಗಳಿಸಿದ ಬಗೆ, ಕೆಲವೊಮ್ಮೆ ಅದರಿಂದಲೇ ಉಂಟಾದ ಪೇಚಾಟಗಳು... ಹೀಗೆ ಗೊರೂರರ ಕಣ್ಣಿಗೆ ಬಿದ್ದ - ಬೀಳಿಸಿಕೊಂಡ ಸಂಗತಿಗಳು ಒಂದೆರಡಲ್ಲ. ವೀಸ, ಪಾಸ್ ಪೋರ್ಟ್, ಭದ್ರತಾ ಪರೀಕ್ಷೆ, ಡಾಲರ್ ಲೆಕ್ಕ... ಎಂಬ ಮುಜುಗರಗಳಿಲ್ಲದೆ - ತಮ್ಮ ಜೊತೆಗೆ ಈ ಕಥಾನಕದ ಓದುಗರನ್ನೂ ಅಮೆರಿಕಕ್ಕೆ ಕರೆದೊಯ್ಯುವ ಗೊರೂರರನ್ನು ಇಡಿಯಾಗಿ ಕಾಣಲು "ಅಮೆರಿಕಾದಲ್ಲಿ ಗೊರೂರು" (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೃತಿ) ಓದಲೇಬೇಕು. ನಗುತ ನಗುತ ಬಾಳುವ ಜೀವನ ದರ್ಶನವು ಗೊರೂರರ ಎಲ್ಲ ಬರಹಗಳಲ್ಲಿಯೂ ಕಾಣುವಂತೆ ಇಲ್ಲಿಯೂ ಬಲು ಸುಂದರವಾಗಿದೆ....

ರುಚಿ ನೋಡಲು...ಪುಸ್ತಕದ ಒಂದೆರಡು ಭಾಗ... ಇಲ್ಲಿ ಕಾಣುವ ಅಮೆರಿಕವು - 1977 ರ ಅಮೆರಿಕ ಎಂಬುದನ್ನು ನೆನಪಿಟ್ಟುಕೊಂಡು ಓದಿ. ಇಂದು ಅಮೆರಿಕದಲ್ಲಿ ಕಾರುಬಾರು ನಡೆಸುತ್ತ ಚುರುಕಾಗಿರುವ ಹಲವರು ಒಂದೋ ಆಗ ಹುಟ್ಟಿರಲಿಲ್ಲ ಅಥವ ಎಲ್ಲೋ ನೇಪಥ್ಯದಲ್ಲಿದ್ದರು.
 
ಎರಡು ಅಧ್ಯಾಯಗಳ ಕೆಲವು ಅಂಶಗಳು...

ಅಮೆರಿಕನ್ ದೂರದರ್ಶನ :

"ಒಂದು ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ ಗೆ ನಾವು ಹೋಗಿದ್ದೆವು...ಅದೊಂದು ಅಸಾಧ್ಯವಾದ  ಕಟ್ಟಡ. ಅಲ್ಲಿ ಜನಗಳೆಷ್ಟೋ, ಚಿತ್ರ ತಯಾರಕರೆಷ್ಟೋ, ಸ್ಟುಡಿಯೋಗಳು, ಸೆಟ್ ಗಳು, ಗೊಂದಲವೋ ಗೊಂದಲ. ಟೆಲಿವಿಷನ್ ಪ್ರಸಿದ್ಧಿ ಅಮೆರಿಕದಲ್ಲಿ ಜನಪ್ರಿಯತೆ ಮತ್ತು ಉಪಯುಕ್ತತೆಯ ತುದಿಯನ್ನು ಮುಟ್ಟಿದೆ...."

"ಟೆಲಿವಿಷನ್ ಅಮೆರಿಕದಲ್ಲಿ ವ್ಯಾಪಾರ ಮತ್ತು ಮನರಂಜನೆಯ ಮುಖ್ಯ ಸಾಧನ. ಅಮೆರಿಕದಲ್ಲಿ ಯಾವುದೂ ವ್ಯಾಪಾರವಾಗಬೇಕು. ವ್ಯಾಪಾರೀ ಸಾಧನವಾಗಬೇಕು. ಹಾಗಾದರೆ ಅದು ಎಷ್ಟೇ ಅಲ್ಪವಾದುದಾಗಿರಲಿ, ತುಚ್ಛವಾದುದಾಗಿರಲಿ ಅದಕ್ಕೆ ಒಂದು ಸ್ಥಾನ ಸಿಕ್ಕುತ್ತದೆ. ದೇವರು ಸಹ ವ್ಯಾಪಾರವಾಗುವ ಒಂದು ಮಾಲು ಆಗಿ ಬಂದರೆ, ಎಲ್ಲ ಅಮೆರಿಕನ್ ರೂ ಅತ್ಯಂತ ಗಾಢವಾದ ಭಕ್ತರಾಗುವುದರಲ್ಲಿ ಸಂದೇಹವಿಲ್ಲ. ಅಮೆರಿಕನ್ ರು ಕೇಳುವುದು ಒಂದೇ ಪ್ರಶ್ನೆ. "ಅದು ಡಾಲರ್ ಆಗುತ್ತದೆಯೇ?" ವಸ್ತುಗಳನ್ನು ಹೀಗೆ ಡಾಲರ್ ಆಗಿ ಪರಿವರ್ತಿಸುವುದರಲ್ಲಿ ಟೆಲಿವಿಷನ್ ಪಾತ್ರ ಅತಿ ಮುಖ್ಯವಾದುದು. ಅಮೆರಿಕನ್ ಟೆಲಿವಿಷನ್ ಕೆಲಸವೇ ವ್ಯಾಪಾರದ ವಸ್ತುಗಳನ್ನು ನಿತ್ಯವೂ ಅನೇಕ ಸಲ - ನೋಡುವವರಿಗೆ ಬೇಸರಿಕೆ ಹುಟ್ಟಿಸುವವರೆಗೆ ಪ್ರದರ್ಶನ ಮಾಡುವುದು...ಅತ್ಯುತ್ಕೃಷ್ಟ ನಟನಟಿಯರೂ ತಮ್ಮ ಆಕರ್ಷಕ ಅಭಿನಯದ ಮಧ್ಯದಲ್ಲಿ ನಿಲ್ಲಿಸಿ, ಯಾವುದೋ ತಿಂಡಿಯನ್ನೋ, ಶೌಚದ ಕಾಗದವನ್ನೋ ಜಾಹೀರು ಮಾಡುತ್ತಾರೆ. ಅದು ಅಸಹ್ಯವೂ ಅಪ್ರಕೃತವೂ ಅಲ್ಪವೂ ಆದ ಕಾರ್ಯವಾಗಿ ತೋರುತ್ತದೆ...ಇವೆಲ್ಲ ಜ್ಞಾನ ಪ್ರಚಾರ, ಮನರಂಜನೆ ಇವುಗಳೆಲ್ಲದಕ್ಕಿಂತ ಬರೀ ವ್ಯಾಪಾರಕ್ಕೆ ಮಾತ್ರ ಉಪಯೋಗವಾಗುತ್ತಿದೆ...ನ್ಯೂಯಾರ್ಕಿನ ಕಾಲೇಜೊಂದರಲ್ಲಿ ಭಾಷಣ ಮಾಡುತ್ತಿರುವಾಗ "ನಿಮ್ಮದು ಊಟ - ತಿಂಡಿ ಬಹಳ ಹೆಚ್ಚು. ನಿಮ್ಮ ಟೆಲಿವಿಷನ್ ಅದರಿಂದಲೇ ತುಂಬಿದೆ" ಎಂದೆ. ಆಗ ಮಹಿಳೆಯೊಬ್ಬಳು "ಹೌದು. ಈಗ ನಮಗೂ ಹಾಗೆ ತೋರುತ್ತಿದೆ. ನೀವು ಹೇಳುವವರೆಗೆ ನಮಗೆ ತಿಳಿದಿರಲಿಲ್ಲ. ಹೀಗೆಯೇ ನಿಮ್ಮಲ್ಲಿಯೂ ಇರಬಹುದಾದ ಅನೇಕ ದೋಷಗಳು, ಯಾರಾದರೂ ಹೇಳುವವರೆಗೆ ನಿಮಗೂ ತಿಳಿಯುವುದಿಲ್ಲ." ಎಂದಳು. ಆ ಹುಡುಗಿಯ ಬುದ್ಧಿವಂತಿಕೆಯ ಉತ್ತರವನ್ನು ನಾನು ಮೆಚ್ಚಿದೆ.... ಜಾಹೀರಾತುಗಳಲ್ಲಿ ಹೊಸ ಹೊಸ ಬಗೆಯ ಬುದ್ಧಿವಂತಿಕೆ ಕಂಡು ಹಿಡಿದರೆ, ಅಮೆರಿಕದಲ್ಲಿ ಅದಕ್ಕೆ ನ್ಯೂಟನ್ , ಐನ್ ಸ್ಟೈನ್ ರ ಪ್ರತಿಭೆಗಿಂತ ಹೆಚ್ಚು ಬೆಲೆ ಕೊಡುತ್ತಾರೆ...." (ಅನಂತರದ ಕೇವಲ ೨೦ ವರ್ಷಗಳಲ್ಲಿ ನಾವು ಭಾರತೀಯರು, ಅಮೆರಿಕದವರ ದುಡ್ಡು ಗೋರುವ ನೇತ್ಯಾತ್ಮಕ (?) ಅಂಶಗಳಲ್ಲೆಲ್ಲ ಅಮೆರಿಕಕ್ಕಿಂತಲೂ ಒಂದು ಹೆಜ್ಜೆ ಮುಂದಿರುವ ಛಲ ಹೊತ್ತು ಸಾಧಿಸುವ ಪಣ ತೊಟ್ಟಿದ್ದೇವೆ! ಇವನ್ನೆಲ್ಲ ಕಾಣುವ ಭಾಗ್ಯ ಸುದೈವವಶಾತ್ ಗೊರೂರರಿಗಿರಲಿಲ್ಲ.)

ಗೊರೂರರು ಬರೆಯುತ್ತಾರೆ.."ಹೀಗೆ ಅಮೆರಿಕದಲ್ಲಿ ಅನಿವಾರ್ಯವಾಗಿರುವ ಟೆಲಿವಿಷನ್ ನಿಂದ ಅನೇಕ ಕೇಡುಗಳು ಸಂಭವಿಸುತ್ತವೆ. ಅಮೆರಿಕದ ಜನತೆ ಮೊದಲೇ ಮಾತನಾಡುವುದು ಕಡಿಮೆ. ಟೆಲಿವಿಷನ್ ಬಂದುದರಿಂದ, ಒಬ್ಬರನ್ನೊಬ್ಬರು ನೋಡಿ ಮಾತನಾಡುವುದಕ್ಕೆ ಹೋದರೂ ಟೆಲಿವಿಷನ್ ನೋಡುತ್ತ ಮೌನವಾಗಿ ಕುಳಿತು ಬಿಡುತ್ತಾರೆ. ಮನೆಯಲ್ಲಿ ತಂದೆ - ತಾಯಿ ಮಕ್ಕಳಲ್ಲಿ ಸಂಭಾಷಣೆ ಕಡಿಮೆಯಾಗಿದೆ. ಸ್ವಾಭಾವಿಕವಾಗಿಯೇ ಜಗತ್ತಿನ ಎಲ್ಲ ಭಾಗಗಳಲ್ಲಿಯೂ ತಲೆಮಾರಿನ ಅಂತರದಿಂದಾಗಿ ತಂದೆ ತಾಯಿ ಮತ್ತು ಮಕ್ಕಳ ನಡುವೆ ಅಂತರ ಹೆಚ್ಚಾಗುತ್ತಿದೆ... ಟೆಲಿವಿಷನ್ ನೋಡುವುದರಿಂದ ಬಾಲಾಪರಾಧಗಳು ಹೆಚ್ಚುತ್ತಿವೆ. ಈ ಅಪರಾಧಗಳಲ್ಲಿ ಕಳುವಿನಿಂದ ಹಿಡಿದು, ಖೂನಿವರೆಗೆ ಇವೆ... 18 ವರ್ಷದ ಒಬ್ಬ ಅಪ್ರಾಪ್ತ ವಯಸ್ಕನು ಕಳುವು ಮಾಡಿ, ಪೋಲೀಸಿಗೆ ಸಿಗುವ ಭಯದಿಂದ ಆ ಹೆಂಗಸನ್ನು ಕೊಲೆ ಮಾಡಿದ. ವಿಚಾರಣೆಯ ಕಾಲದಲ್ಲಿ "ಟೆಲಿವಿಷನ್ ನಲ್ಲಿ ಹಿಂಸೆಯನ್ನು ನೋಡಿನೋಡಿ, ನಾನು ಕಳವು ಮಾಡಿ ಕೊಲೆ ಮಾಡಿದೆ. ನಾನು ಹುಟ್ಟಿದಂದಿನಿಂದ ಟೆಲಿವಿಷನ್ ನೋಡುವುದರ ಹೊರತು ಮತ್ತೇನನ್ನೂ ಮಾಡಿಲ್ಲ. ಟೆಲಿವಿಷನ್ ನೇ ನನ್ನ ಮನೆ. ನನ್ನ ಪಾಠಶಾಲೆ, ನನ್ನ ಚರ್ಚು" ಎಂದು ಹೇಳಿದ. ಇಂತಹ ಹಲವು ಬಗೆಯ ಅಪರಾಧಗಳು ಅಶಿಕ್ಷಿತರಿಂದ - ಅಥವ ದಾರಿದ್ರ್ಯ, ಅವಶ್ಯಕತೆಯಿಂದ ಸಂಭವಿಸುತ್ತವೆ ಎಂದಲ್ಲ. ಇದು ಜಗತ್ತಿನ ಎಲ್ಲೆಲ್ಲಿಯೂ ನಾಗರಿಕತೆ, ಸಭ್ಯತೆ, ಸಹಜೀವನಕ್ಕೆ ಸವಾಲಾಗಿರುವ ಹಿಂಸಾ ಪ್ರವೃತ್ತಿ; ಅಮೆರಿಕದ ಅತಿ ಸೌಖ್ಯ ಎಂಬುದು ಜೀವನದ ವಾಸಿಯಾಗದ ವ್ರಣ...." ಹೀಗೆ ತಾವು ಅಮೆರಿಕದಲ್ಲಿದ್ದಾಗ ಘಟಿಸಿ, ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಟೆಲಿವಿಷನ್ ಪ್ರೇರಿತ ಹಲವಾರು ಹಿಂಸಾ ದೃಷ್ಟಾಂತಗಳೊಂದಿಗೆ ಗೊರೂರರು ಉತ್ತಮ ಬದುಕಿನತ್ತ ಓದುಗರು ಚಿಂತಿಸುವಂತೆ ಮಾಡುತ್ತಾರೆ.

ಮುಂದುವರಿದು, "ಇದರಿಂದ ಅಮೆರಿಕನ್ ಜೀವನವೆಲ್ಲ ಕೊಲೆ, ದರೋಡೆ, ವ್ಯಭಿಚಾರ ಇವುಗಳಿಂದಲೇ ತುಂಬಿದೆ ಎಂದು ಭಾವಿಸಲಾಗದು. ಅಮೆರಿಕನ್ ರು ಇಂತಹ ಸುದ್ದಿಗಳನ್ನು ಸ್ವಲ್ಪ ಪ್ರಾಮುಖ್ಯವಾಗಿಯೇ ಪ್ರಕಟಿಸುತ್ತಾರೆ. ಅದಕ್ಕೆ ಮುಖ್ಯ ಕಾರಣ ಇವು ಸ್ವಲ್ಪ ರಂಜಕವಾದ, ಆಕರ್ಷಣೀಯವಾದ - ನಿತ್ಯದ ಮಾಮೂಲು ಸುದ್ದಿಗಳಿಗಿಂತ ಭಿನ್ನವಾದುವು ಎಂಬುದು. ಮತ್ತೊಂದು ಕಾರಣ, ಅಮೆರಿಕ ಜೀವನದಲ್ಲಿಯ - ಬಾಲಕರಿಂದ ಹಿಂಸಾ ಪ್ರವೃತ್ತಿ , ಸಮಾಜ ಘಾತುಕ ಪ್ರವೃತ್ತಿ ಎಂಬುದು ಅಪಾಯಕಾರೀ ಬೆಳವಣಿಗೆ; ಇದು ಚೆನ್ನಾಗಿ ಪ್ರಚಾರವಾಗಲಿ ಎಂಬುದೂ ಉದ್ದೇಶವಾಗಿರಬಹುದು. ಒಟ್ಟಿನಲ್ಲಿ ಅಂತಹ ಸುದ್ದಿಗಳು ಪತ್ರಿಕೆ, ವೇದಿಕೆ, ಟೆಲಿವಿಷನ್, ರೇಡಿಯೋ ಎಲ್ಲೆಲ್ಲಿಯೂ ಪ್ರಸ್ತಾಪಿಸಲ್ಪಡುತ್ತವೆ. ಕ್ರಿಸ್ತ ಪಾದ್ರಿಗಳು "ಯೇಸುವಿನ ಪುನರವತಾರಕ್ಕೆ ಇದು ಸಕಾಲ. ಇನ್ನು ಮುವ್ವತ್ತೆರಡು ವರ್ಷಕ್ಕೆ ಏಸು ಖಂಡಿತವಾಗಿ ಈ ಜಗತ್ತಿನಲ್ಲಿ ಕಾಣಿಸಿಕೊಳ್ಳುತ್ತಾನೆ" ಎಂದು ಪ್ರಚಾರ ಮಾಡುತ್ತಾರೆ....ಈಚಿನ ದಿನಗಳಲ್ಲಿ ಹಿಂಸಾ ಪ್ರವೃತ್ತಿಯು ಹೆಚ್ಚಾಗಿ, ಖೂನಿ ಸಹ ಅಮೆರಿಕದ ಬಾಲಕರಿಗೆ ಆಟವಾಗಿದೆ. ಶಾಂತಿ ಮತ್ತು ಕಾನೂನು ರಕ್ಷಣೆಯ ಹೊಣೆ ಹೊತ್ತಿರುವ ಪೋಲೀಸಿನವರಿಗೆ, ನ್ಯಾಯಾಧಿಪತಿಗಳಿಗೆ, ಸಮಾಜ ಕಾರ್ಯಕರ್ತರಿಗೆ, ಇಡೀ ರಾಷ್ಟ್ರಕ್ಕೇ ಈ ಸಮಸ್ಯೆಯು ದೊಡ್ಡ ತಲೆನೋವಾಗಿದೆ. ಈಚಿನ ದಿನಗಳಲ್ಲಿ ಅಮೆರಿಕದಲ್ಲಿ "ಸ್ಯಾಮ್ ನ ಮಗ ಮಾಡಿದ ಖೂನಿಗಳು" (SON OF SAM ಎಂಬುದೇ ಅವನ ಹೆಸರು) ಎಂಬ ಪ್ರಸಂಗವು ಜಗತ್ತಿನ ದೃಷ್ಟಿಯನ್ನೆಲ್ಲ ಆಕರ್ಷಿಸಿತು. ಈಗ ಅವನೇ ಒಬ್ಬ ಧೀರ ಎಂದಾಗಿಬಿಟ್ಟಿದೆ. ನ್ಯೂಯಾರ್ಕಿನಂತಹ ನಗರದಲ್ಲಿ ಅವನು ಈ ವರೆಗೆ ಏಳು ಖೂನಿಗಳನ್ನು ಮಾಡಿದ್ದಾನೆ. ಅವನ ವಿಚಾರಣೆಯ ದಿನ ಅವನ ಸುತ್ತಮುತ್ತ ಸಾವಿರಾರು ಜನ ಇರುತ್ತಾರೆ. ಪೋಲೀಸ್ ಕಾವಲನ್ನೂ ಮೀರಿ ಒಬ್ಬ ಪತ್ರಕರ್ತ ಅವನ ಮುಖಕ್ಕೆ ಒಂದು ಧ್ವನಿವರ್ಧಕವನ್ನು ಹಿಡಿದ. ಸನ್ ಆಫ್ ಸ್ಯಾಮನು ..."ನಾನು ಖೂನಿ ಮಾಡಲು ಬಯಸುವುದಿಲ್ಲ. ಆದರೆ ಈ ಶಕ್ತಿಗಳು ನನ್ನನ್ನು "ಹೋಗು ಖೂನಿ ಮಾಡು, ಯಾಕೆ ಸುಮ್ಮನಿದ್ದೀ, ಅದೇ ನಿನ್ನ ಕೆಲಸ ಎಂದು ದೂಡುತ್ತವೆ" ಅಂದ. "ದೂಡುವವರು ಯಾರು ?" ಎಂದು ಕೇಳಿದಾಗ "ಅದೇ...ಶಕ್ತಿಗಳು..." ಎಂದು ಹೇಳಿದ. ಇಂತಹ ವಿಕೃತಿಯ ಸುದ್ದಿಗಳು ಪತ್ರಿಕೆಗಳಲ್ಲಿ, ಟೆಲಿವಿಷನ್ ನಲ್ಲಿ ನಿತ್ಯವೂ ಬರುತ್ತಿವೆ. ಟೆಲಿವಿಷನ್ ನೋಡುವ ಸಣ್ಣ ಮಕ್ಕಳಿಗೂ ಇಂತಹ ಸುದ್ದಿಗಳು ಗೊತ್ತಾಗುತ್ತವೆ. ಕೋರ್ಟಿನಲ್ಲಿ - ಏಳು ನಿಷ್ಕರುಣಿ ಕೊಲೆಗಳಿಗಾಗಿ ಅವನ ವಿಚಾರಣೆಯಾಗುತ್ತಿದ್ದರೂ ಅವನ ವಿಷಯದಲ್ಲಿ ಒಂದು ಭಯಂಕರ ಅದ್ಭುತ ರೌದ್ರ ಆಕರ್ಷಣೆ ಸೃಷ್ಟಿಯಾಗುತ್ತಿದೆ. ಅವನ ಈ ಜನಪ್ರಿಯತೆ, ಪ್ರಚಾರ, ಪ್ರಸಿದ್ಧಿಗಳಿಂದ ಅವನು ನಿರಪರಾಧಿ ಎಂದು ಭಾವಿಸಿ ಎಲ್ಲ ಜ್ಯೂರಿಗಳೂ ಜಡ್ಜರೂ ಈ ನರಘಾತುಕನನ್ನು ಬಿಡುಗಡೆ ಮಾಡಿಬಿಡುತ್ತಾರೋ ಎಂದು ವಿವೇಕಿಗಳು ಅಮೆರಿಕದಲ್ಲಿ ಚಿಂತಾಕ್ರಾಂತರಾಗಿದ್ದಾರೆ. ಅಮೆರಿಕದಲ್ಲಿ ಈಗ ಮರಣದಂಡನೆಯನ್ನು ಕಾರ್ಯಗತಗೊಳಿಸದಿರುವುದರಿಂದ ಈಚೆಗೆ - ಇವನಿಗೆ 98 ವರ್ಷ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ..." (ಗೊರೂರರು ಅಮೆರಿಕ ದರ್ಶನ ಮಾಡಿ ಅದಾಗಲೇ 38 ವರ್ಷ ಸಂದು ಹೋಗಿದೆ. ಈಗ ನೋಡಿದರೆ - "GREAT" ಅನ್ನಿಸಿಕೊಳ್ಳುವ ಚಪಲದಲ್ಲಿ Business Management ಕಲಿಯುತ್ತಿರುವ ಇಂದಿನ ಭಾರತೀಯರು ಇಂಥದ್ದನ್ನೆಲ್ಲ ಅವರಪ್ಪನಂತೆ ಅನುಕರಿಸಿ ಅಮೆರಿಕವನ್ನು ನಿವಾಳಿಸಿ ಬಿಸಾಡುವಷ್ಟು ಕಲಿತು, ಮಾಧ್ಯಮ ಪರಿಣತಿಯನ್ನೂ ಪಡೆದು, ಪತ್ರಿಕೆ ಮತ್ತು ಇತರ ಮಾಧ್ಯಮಗಳನ್ನು ವ್ಯಾಪಾರೀ ಸಂಸ್ಥೆಯಾಗಿಸುವಲ್ಲಿ ನಿಸ್ಸೀಮರಾಗಿದ್ದಾರೆ ! ದುರ್ಮಾರ್ಗಕ್ಕೆ ಉಪದೇಶಕರು ಬೇಕಾಗುವುದಿಲ್ಲ; ಸನ್ಮಾರ್ಗಕ್ಕೆ ಎಷ್ಟು ಉಪದೇಶಕರಿದ್ದರೂ ಸಾಕಾಗುವುದಿಲ್ಲ. (?) )  

ಗೊರೂರರು ಮುಂದುವರಿಯುತ್ತ "ಟೆಲಿವಿಷನ್ ನಿಂದ ಏನೂ ಉಪಯೋಗವಿಲ್ಲ ಎಂಬುದು ನನ್ನ ಅಭಿಪ್ರಾಯವಲ್ಲ. ಆದರೆ ಅದರಿಂದ ಎಷ್ಟು ಜ್ಞಾನ ಪ್ರಸಾರವಾಗುತ್ತದೆ, ಫಲದಾಯಕವಾಗುತ್ತದೆ ಎಂದು ಆಸಕ್ತರು ಕೂಗುತ್ತಿದ್ದಾರೋ, ಅಷ್ಟು ಆಗುತ್ತಿಲ್ಲವೆಂಬುದು, ಅಮೆರಿಕದಂತಹ ಟೆಲಿವಿಷನ್ ಸಮೃದ್ಧ ರಾಷ್ಟ್ರದ ಜನತೆಯ ಮತ ಸಹ. ಆದುದರಿಂದ ನಾವೂ ಸಹ ಟೆಲಿವಿಷನ್ ನ ಅತಿಪ್ರಸರಣದ ಹುಚ್ಚನ್ನು ನಿಲ್ಲಿಸಿ, ಹಳ್ಳಿಗಳಲ್ಲಿ ರಸ್ತೆ, ಬಾವಿ, ಹಿಂದುಳಿದವರಿಗೆಲ್ಲ ಮನೆ, ಉತ್ತಮವಾದ ಸಾರಿಗೆ ವ್ಯವಸ್ಥೆ, ಬಸ್ ನಿಲ್ದಾಣಗಳಲ್ಲಿ ಸ್ವಚ್ಛವಾದ ಪಾಯಿಖಾನೆಯ ಗೃಹ, ಕುಡಿಯುವ ಸ್ವಚ್ಛ ನೀರು, ಹಳ್ಳಿಗಳಿಗೆಲ್ಲ ಗಾಳಿ ಬೆಳಕುಳ್ಳ ಶಾಲಾ ಕಟ್ಟಡ..ಮುಂತಾದವುಗಳತ್ತ ನಮ್ಮ ಗಮನ ಹರಿಸುವುದು ವಿವೇಕವಾಗುತ್ತದೆ. ಟೆಲಿವಿಷನ್ ಕಾರ್ಯಕ್ರಮಗಳನ್ನು ಸಿದ್ಧಗೊಳಿಸುವುದಕ್ಕಾಗಿಯೇ ಅನೇಕ ಸಂಸ್ಥೆಗಳು ಹುಟ್ಟಿಕೊಂಡಿರುವ ಅಮೆರಿಕದಲ್ಲಿಯೇ ಅದಕ್ಕೆ ಬೇಕಾದಷ್ಟು ವಿಷಯಗಳನ್ನು ಒದಗಿಸಲು ಸಾಧ್ಯವಿಲ್ಲದಿರುವಾಗ, ನಾವು ಇಪ್ಪತ್ತನಾಲ್ಕು ಗಂಟೆಯೂ ಟೆಲಿವಿಷನ್ನನ್ನು ತೋರಿಸಬೇಕಾದರೆ, ಇನ್ನು ಬರೀ ಫಿಲ್ಮ್ ಗಳನ್ನು ಮಾತ್ರ ತೋರಿಸಬೇಕು. ಈಗಲೇ ಡೆಲ್ಲಿ ಟೆಲಿವಿಷನ್ ನೋಡಿದರೆ, ಅದರ ತೀರ ಸಾಮಾನ್ಯ ಮಟ್ಟದಿಂದ ನಮಗೆ ಬೇಸರಿಕೆಯೇ ಬರುವುದು." (ಆದರೆ, "ಕುರುಡರ ರಾಜ್ಯದಲ್ಲಿ ಒಕ್ಕಣ್ಣನೇ ರಾಜ" ಎನ್ನುವಂತೆ ಇಂದಿನ ಇತರ ದುಶ್ಶಾಸನ ದೃಶ್ಯಾಸುರರಿಗೆ ಹೋಲಿಸಿಕೊಂಡು ದೂರದರ್ಶನವೇ ಪರವಾಗಿಲ್ಲ ಎಂಬ ಅನಿವಾರ್ಯ ಸಂಧಿಯಲ್ಲಿ ಇಂದಿನ ಭಾರತೀಯರಿದ್ದಾರೆ !)

"ಅಮೆರಿಕದವರು ಜನಸಂಖ್ಯೆಯ ಬಾಹುಳ್ಯದ ಭಯದಿಂದ ಮತ್ತು ಸ್ವಂತ ಸುಖದ ಆಸೆಯಿಂದ ಮಕ್ಕಳನ್ನು ಪಡೆಯಲು ಬಯಸುವುದಿಲ್ಲ. ಆದರೆ ಮಕ್ಕಳ ಆಸೆ, ಆಕರ್ಷಣೆ ಅವರಿಗೆ ಇಲ್ಲದಿಲ್ಲ. ಮಕ್ಕಳ ಸ್ಥಾನವನ್ನು ನಾಯಿ, ಬೆಕ್ಕುಗಳು (ಕೆಲವು ವೇಳೆ ಇಲಿಗಳು ಸಹ) ಆಕ್ರಮಿಸುತ್ತವೆ. ನಾಯಿ ಪ್ರಥಮ ಆಕರ್ಷಣೆ. ನಾಯಿಯನ್ನು ಮಗುವನ್ನು ಎತ್ತಿಕೊಳ್ಳುವಂತೆಯೇ ಎತ್ತಿಕೊಂಡು ತಿರುಗುತ್ತಿರುತ್ತಾರೆ. ಪಾಠಶಾಲೆಯ ಮಕ್ಕಳಿಗೂ ನಾಯಿ ಅತಿ ಪ್ರಿಯ. ನಾಯಿಯನ್ನು ಎತ್ತಿಕೊಂಡ ವಿದ್ಯಾರ್ಥಿಯ ಸುತ್ತ ಅದನ್ನು ಮುದ್ದಾಡುತ್ತ ನೂರಾರು ಹುಡುಗರು ಸೇರುತ್ತಾರೆ. ಕೆಲವರು ನಾಯಿಗೇ ಮುತ್ತು ಕೊಡುತ್ತಾರೆ. ಅದನ್ನೆಲ್ಲ ನೋಡಿದರೆ ನಮಗೆ ಮೈ ಜುಂ ಎನ್ನುತ್ತದೆ. ಅಲ್ಲದೆ ನಾವೇ ಅಷ್ಟೊಂದು ಮೆಚ್ಚುವ ಅದರ ಸ್ವಚ್ಚತೆಯ ಬಗೆಗೇ ನಮಗೆ ಸಂಶಯವುಂಟಾಗುತ್ತದೆ. ಒಂದು ಸಲ ಇದು ನನ್ನ ಅನುಭವಕ್ಕೆ ಬಂದಿತು. ನನ್ನ ಕಡೆಗೆ ಒಂದು ನಾಯಿಯು ಬೊಗಳುತ್ತ ಬಂದಾಗ, ನಾನು ಅದನ್ನು ಗದರಿಸಲು, ಒಬ್ಬ - ಅದರ ಯಜಮಾನ -"ಗದರಿಸಬೇಡಿ. ನನ್ನ ನಾಯಿಯನ್ನು ನೀವು ಹಾಗೆ ದಬಾಯಿಸಬಾರದು. ಮೃದುವಾಗಿ ಮಾತಾಡಿ" ಎಂದ ! ಸ್ವಲ್ಪ ಹಾಲು ಕಡಿಮೆ ಕೊಟ್ಟಿತೆಂದು ಹಸುವನ್ನು ಕುಯ್ದು ತಿನ್ನುವ ಜನ ಇವರು !..." (ಗೊರೂರರು ಮತ್ತು ಅವರಂತಹ ಸಜ್ಜನರು - ಅಂದೇ - ಸತ್ತು ಬದುಕಿದರು ! ಅಮೆರಿಕದ ವಿಕೃತಿಗಳನ್ನು ಮಾತ್ರ ಹುಡುಕಿ ಹುಡುಕಿ ಆಯ್ದುಕೊಂಡು ಬರುವ, ಅರ್ಧ ಕೊಡ ತುಂಬಿದಂತಿರುವ ಇತ್ತೀಚಿನ ಭಾರತೀಯ ಮನಸ್ಸುಗಳು ಭಾರತವನ್ನು ಅಮೆರಿಕದ ತ್ಯಾಜ್ಯ ಸಂರಕ್ಷಣಾ ಕೇಂದ್ರವಾಗಿಸಿಕೊಂಡಾಗಿದೆ. ಮಾನವ ಹಕ್ಕುಗಳ ಹೆಸರಿನಲ್ಲಿ ಕುಟುಂಬ ಒಡೆಯುತ್ತಿರುವ, ಕರುಣೆಯ ಹೆಸರಿನಲ್ಲಿ ಧಾರ್ಷ್ಟ್ಯವನ್ನು ಪ್ರತಿಪಾದಿಸುತ್ತಿರುವ - ಭಾರತೀಯ ವೇಷ ತೊಟ್ಟ ಹಲವಾರು ಸೇವಾ ಸಂಸ್ಥೆಗಳು ಇಂದು ಡಾಲರ್ ನುಂಗುತ್ತ ಭಾರತೀಯರ ಹುಂಬತನದ (ಮುಗ್ಧತೆ?) ಲಾಭ ಪಡೆಯುತ್ತ ಗುಪ್ತ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸುವಲ್ಲಿ ತನ್ಮಯವಾಗಿವೆ ! ಈಗ ಭಾರತದಲ್ಲಿ ನಾಯಿ ಬೆಕ್ಕುಗಳಿಗೆ ಕೊಡುತ್ತಿರುವ ಸ್ಥಾನಮಾನವು ಹಿರಿಯರಿಗೆ, ಹೆತ್ತ ಅಪ್ಪ ಅಮ್ಮನಿಗೂ ಸಿಗದಂತಹ ವಾತಾವರಣವು ನಿರ್ಮಾಣವಾಗಿದೆ. ಇದರಿಂದಲೂ -"ಕರುಣೆ ಒಸರುವ" ವ್ಯಾಪಾರಕ್ಕೆ ಅವಕಾಶ ಮಾಡಿಕೊಂಡಿದ್ದಾರೆ. CANDLE ಬೆಳಕಿನ ಮಂದ ಉರಿಯಲ್ಲಿ ಹೊಸಹೊಸ ಕಾನೂನುಗಳನ್ನು ಎಳೆದು ತರಲೂ ಯತ್ನಿಸುತ್ತಿದ್ದಾರೆ. ಹೀಗೆ...ಭಾರತವು ಅಮೆರಿಕವಾದಂತಾಗಿದೆ ! ಅಥವ ವಿಶ್ವಗುರುವಾಗುವ ದಿಕ್ಕಿನಲ್ಲಿ ಸಾಗುತ್ತಿದೆ...)

ಗೊರೂರರು ಅಮೆರಿಕದ ಸುಖ ವೈಭೋಗಗಳಿಗೆ ದಂಗಾಗಿದ್ದರು. ಅಮೆರಿಕನ್ನರು ತಮ್ಮ ಕೆಲಸದಲ್ಲಿ ತೋರುವ ಶ್ರದ್ಧೆ, ಶಿಸ್ತು, ಸಮಪಾಲನೆ, ಸ್ವಚ್ಚತೆಯನ್ನು ನೋಡಿ ಪ್ರಭಾವಿತರಾಗಿದ್ದರು. ಅಂತಹ ದೃಶ್ಯಗಳನ್ನು ಕಂಡಾಗೆಲ್ಲ "ಅಯ್ಯೋ, ನನ್ನ ಭಾರತವು ಹೀಗೆ ಎದ್ದು ನಿಲ್ಲುವುದು ಯಾವಾಗ ? ಎಂದು ಅವರ ಒಡಲು ಮರುಗುತ್ತಿದ್ದುದು ಓದುಗರ ಅನುಭವಕ್ಕೆ ದಕ್ಕುತ್ತದೆ. "ನಮ್ಮ ವೇದ, ಉಪನಿಷತ್ತು, ಗಾಂಧಿ - ಇವುಗಳೇ ನನ್ನನ್ನು ಅಮೆರಿಕದಲ್ಲಿ ಬಚಾಯಿಸಿದ್ದು" ಎಂದು ಹೇಳುವ ಗೊರೂರರು ಅಲ್ಲಿ ಕುದುರೆ ಸವಾರಿ ಮಾಡಿದರು; ಮುಷ್ಟಿ ಯುದ್ಧ ನೋಡಿದರು; ಸರ್ಕಸ್ ಕಂಡರು; ಸಾರ್ವಜನಿಕ ಪುಸ್ತಕ ಭಂಡಾರವನ್ನು ಸಂದರ್ಶಿಸಿದರು; ಪೋಸ್ಟ್ ಮನ್ ದಂಪತಿಗಳನ್ನೂ ಮಾತಾಡಿಸಿದರು; ಜ್ಯೋತಿಷ್ಯ ಹೇಳಿದರು; ಶ್ರಾದ್ಧ ಮಾಡಿಸಿದರು; ಪೌರ ಸಭೆಯ ಚುನಾವಣೆಯು ನಡೆಯುವಲ್ಲಿಗೆ ಹೋಗಿ ಇಣುಕಿ, ಗೊರೂರತ್ವವನ್ನು ಛಾಪಿಸಿ ಬಂದರು; ಸಹಜ ಕುತೂಹಲಕ್ಕೆ ಬಲಿಯಾಗಿ ಕೋರ್ಟಿಗೆ ಸಾಕ್ಷಿಯಾಗಿ ಹೋಗುವ ತೊಂದರೆಗೂ ಸಿಕ್ಕಿಕೊಂಡರು; ಕೆಲವೇ ವಾರಗಳಲ್ಲಿ ಇನ್ನೂ ಹಲವು ಫಜೀತಿಗಳನ್ನು ತಮ್ಮದೇ ಶೈಲಿಯಲ್ಲಿ ನಿಭಾಯಿಸಿದರು. ಎಡ್ಮಂಟನ್ ವಿಧಾನ ಸಭೆಯ ಕಾರ್ಯಕಲಾಪಗಳನ್ನು ಹತ್ತಿರದಿಂದ ನೋಡಿದರು; ಭಾರತದ ಗಾಂಧೀಜಿಯ ಸಹಚಾರಿ ಎಂದು ತಿಳಿದ ಮೇಲೆ ಅಲ್ಲಿ ಅವರು ವಿಶೇಷ ಗೌರವಕ್ಕೂ ಪಾತ್ರರಾದರು; ರಾಕಿ ಪರ್ವತ-ಗ್ಲೇಸಿಯರ್- ನ್ಯಾಶನಲ್ ಪಾರ್ಕ್ ನೋಡಿದರು. ಕೆನಡಕ್ಕೂ ಹೋಗಿ ನಯಾಗರ ಮಂಜುಕನ್ಯೆಯ ದರ್ಶನದೊಂದಿಗೆ ಒಂದು ರಾತ್ರಿ ಟ್ಯಾಕ್ಸೀವಾಲನ ಮನೆಯಲ್ಲಿ ಅತಿಥಿಯಾಗಿದ್ದು ಬಂದರು; ಹೊಲ ಗದ್ದೆಗಳಲ್ಲಿ ಸುತ್ತಿದರು; ಅಮೆರಿಕನ್ ಪಶುಗಳನ್ನೂ ಸವರಿ ಗೆಳೆತನ ಕುದುರಿಸಿಕೊಂಡರು. ಒಂದು ರಾತ್ರಿಯನ್ನು ಜೈಲು ಕೋಣೆಯಲ್ಲಿಯೂ ಕಳೆದರು. ಕರೆದಲ್ಲಿಗೆ ಹೋಗಿ ಉಪನ್ಯಾಸ ನೀಡಿದರು. ಶಾಲೆಗಳಿಗೆ ಕರೆದು, ಕರೆಯದೆಯೂ ಹೋಗಿ ಭಾರತದ ಸಂಸ್ಕೃತಿಯ ಧ್ವಜವನ್ನು ಹಾರಿಸಿ ಬಂದರು. ಅಮೆರಿಕದ ಮಕ್ಕಳಿಗೆ ಪಂಚತಂತ್ರದ ಕತೆ ಹೇಳಿದರು; ಅವರೊಂದಿಗೆ ಸಂಭಾಷಿಸಿದರು. ಅಮೆರಿಕದ ಅಂಕೆಯಲ್ಲಿದ್ದ ಸೌಂದರ್ಯ ಸಮೃದ್ಧಿಯನ್ನು ಕಂಡು ಹಿರಿಹಿರಿ ಹಿಗ್ಗಿದರು; ಸ್ವಚ್ಛಂದತೆಯ ಉಸಿರಾಡುತ್ತಿದ್ದ ಅವರ ಬಿಚ್ಚು ಸ್ವಾತಂತ್ರ್ಯವನ್ನು ಕಂಡು ಬೆಚ್ಚಿಬಿದ್ದರು. ಆದರೂ ಅಲ್ಲಿದ್ದ ಕೊನೆಯ ಕ್ಷಣದ ವರೆಗೂ ಅಮೆರಿಕವನ್ನು ಉಂಡು ತೇಗಿದರು; ಆದರೆ ಬೀಗಲಿಲ್ಲ. ಕೊನೆಯಲ್ಲಿ "ಭಾರತದ ನಾಗರಿಕತೆಯೇ ಅತ್ಯುತ್ತಮ. ನಮ್ಮ ಸಂಸ್ಕೃತಿಯೇ ಉಚ್ಚ. ಸಂಸ್ಕೃತ ಭಾಷೆಯು ಜ್ಞಾನಕ್ಕೆಲ್ಲ ಕೇಂದ್ರ. ಇಲ್ಲಿನ ಜನ, ಪ್ರಕೃತಿ, ಜೀವನ, ಗಿಡಮರ, ಬಿಡುವು, ಅತ್ಯಾತುರವಿಲ್ಲದ ಚಿಂತನಾಪರ ವಿಚಾರಶೀಲ ಜೀವನ, ಇಲ್ಲಿಯ ಆರ್ಷೇಯ ಧರ್ಮ, ಧಾರ್ಮಿಕ ಪುರುಷರು, ಇವೇ ನಮಗೆ ತುಂಬ ಪ್ರಿಯ." ಎಂಬ ತೀರ್ಮಾನಕ್ಕೂ ಬಂದರು. (ಹಿತ್ತಲ ಗಿಡವು ಮದ್ದಲ್ಲ ಎನ್ನುವವರ ಮಧ್ಯದಲ್ಲಿ "ಹಿತ್ತಲ ಗಿಡವೇ ಉತ್ತಮ ಮದ್ದು !" ಅಂದುಕೊಂಡು ತಾವೇ ತಾವಾಗಿ ನಿಂತರು.)


ಮತ್ತೆ ನ್ಯೂಯಾರ್ಕ್ : ಅಮೆರಿಕದ ಬೇಸಿಗೆಯ ವಿಹಾರ ಸ್ಥಳಗಳನ್ನೆಲ್ಲ ನೋಡಿಕೊಂಡು ಗೊರೂರರು ಎಡ್ಮಂಟನ್ ನಲ್ಲಿರುವಾಗ ನ್ಯೂಯಾರ್ಕಿನ ಕನ್ನಡಕೂಟದವರಿಂದ ಅವರಿಗೆ ಆತ್ಮೀಯ ಆಹ್ವಾನ ಬಂತು. ಅವರು ಇದ್ದ ಸ್ಥಳದಿಂದ 3000 ಮೈಲು ದೂರದಲ್ಲಿದ್ದ ನ್ಯೂಯಾರ್ಕಿಗೆ ಗೊರೂರರು ಹೊರಟೇ ಬಿಟ್ಟರು. ಈ ಭೇಟಿಯಲ್ಲಿ ಅವರಿಗೆ ಅಪೂರ್ವವಾದ ಅನುಭವಗಳಾದವು. ಕೆಲವು ಕಾಲೇಜುಗಳಿಗೆ ಹೋಗಿ ಉಪನ್ಯಾಸವನ್ನೂ ನೀಡಿದರು.

"ಅಮೆರಿಕದಲ್ಲಿ ವಿದ್ಯಾರ್ಥಿಗಳು ಉಪಾಧ್ಯಾಯರಿಂದ ಕಲಿಯುವುದಕ್ಕಿಂತ ಹೆಚ್ಚಾಗಿ ಪುಸ್ತಕ ಭಂಡಾರದಲ್ಲಿ (Library) ಕಲಿಯುತ್ತಾರೆ. ತಮ್ಮ ಬಹುಪಾಲು ಕಾಲವನ್ನು - ತರಗತಿಯಲ್ಲಿ ಕಳೆಯುವುದಕ್ಕಿಂತ ಹೆಚ್ಚಾಗಿ ಅವರು ಗ್ರಂಥಾಲಯದಲ್ಲಿ ಕಳೆಯುತ್ತಾರೆ. ಅವರ ಸಮಗ್ರ ತಿಳುವಳಿಕೆ, ತರಗತಿಯಲ್ಲಿ ಕಲಿತುದಕ್ಕಿಂತ ಹೆಚ್ಚು ಪೂರ್ಣವೂ ವಿಶಾಲವೂ ಆಗಿರುತ್ತದೆ. ಅವರು ತುಂಬ ಬುದ್ಧಿವಂತಿಕೆಯ ಪ್ರಶ್ನೆಗಳನ್ನೇ ಹಾಕುತ್ತಿದ್ದರು. ಒಂದು ಸಭೆಯಲ್ಲಿ ಒಬ್ಬ ವಿದ್ಯಾರ್ಥಿನಿ "ಭಾರತದಲ್ಲಿ ಈಗ ಹರಿಜನರಿಗೆ ತೊಂದರೆ ಕಡಿಮೆಯಾಗಿದೆಯೆ ?" ಎಂದು ಕೇಳಿದಳು. ನಾನು ಹರಿಜನ ಚಳುವಳಿ, ಗಾಂಧೀಜಿಯ ಪಾತ್ರಗಳನ್ನು ವಿವರಿಸಿ, "ಕಾನೂನಿನಲ್ಲಿ ಪೂರ್ಣವಾಗಿ ಅಸ್ಪೃಶ್ಯತೆ ತೊಲಗಿದೆ; ಆದರೆ ಇದು ಹಳೆಯ ಬೇರೂರಿರುವ ರೋಗ; ಮುಖ್ಯವಾಗಿ ಆಚರಣೆಯಲ್ಲಿ ಬದಲಾವಣೆಯಾಗಬೇಕು. ಅಸ್ಪೃಶ್ಯತೆ ತಪ್ಪು ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಸರ್ಕಾರಗಳೂ ಪ್ರಜೆಗಳೂ ಇದನ್ನು ತೊಡೆದು ಹಾಕಲು ಸರ್ವ ಪ್ರಯತ್ನವನ್ನೂ ಮಾಡುತ್ತಿದ್ದಾರೆ" ಎಂದೆ. ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಭಾರತದ ಪರಿಸ್ಥಿತಿ, ರಾಜಕೀಯ ತಕ್ಕಮಟ್ಟಿಗೆ ಗೊತ್ತಿದೆ...ಒಬ್ಬ ವಿದ್ಯಾರ್ಥಿ "ಗ್ರಾಮಾಂತರಗಳಲ್ಲಿ ನಿರುದ್ಯೋಗ ನಿವಾರಣೆ, ರಸ್ತೆ - ಸಾರಿಗೆ ಸೌಕರ್ಯ, ಕುಡಿಯುವ ನೀರು ಇವುಗಳ ಪರಿಸ್ಥಿತಿಯು ಉತ್ತಮಗೊಂಡಿದೆಯೆ ?" ಎಂದು ಕೇಳಿದ. ಅವನ ಪ್ರಶ್ನೆ ನನಗೆ ನಿಜವಾಗಿಯೂ ಮಾರ್ಮಿಕವಾಗಿ ತೋರಿತು. ಭಾರತದ ರಾಜಕೀಯಕ್ಕಿಂತ ಅವನಿಗೆ ಇದು ಪ್ರಮುಖವಾಗಿತ್ತು. ಆಗ ನಾನು "ನೀನು ಭಾರತಕ್ಕೆ ಹೋಗಿದ್ದೆಯಾ ?" ಎಂದು ಕೇಳಿದೆ. "ಇಲ್ಲ...ಆದರೆ ನನ್ನ ತಂದೆ ಪ್ರತೀ ವರ್ಷವೂ ಬಿಸಿನೆಸ್ ಗಾಗಿ ಹೋಗಿ ಬರುತ್ತಿದ್ದಾರೆ. ಭಾರತದ ವಿಷಯವೆಲ್ಲ ನಮಗೆ ಗೊತ್ತು. ಬೆಂಗಳೂರು ಸುಂದರ ನಗರವೆಂದೂ ಆದರೆ ಅಲ್ಲಿಯ ಸಾರಿಗೆ ವ್ಯವಸ್ಥೆಯು ಬಹಳ ಅಸಮರ್ಪಕವಾಗಿದೆಯೆಂದೂ ಹೇಳುತ್ತಾರೆ..." ಎಂದ. ನಾನು " ಬೆಂಗಳೂರು ಬಹಳ ಬೇಗ ಬೇಗ ಬೆಳೆಯುತ್ತಿರುವ ನಗರ. ನಗರದ ಬೆಳವಣಿಗೆಯ ವೇಗದಲ್ಲಿ ಸೌಕರ್ಯಗಳೂ ಓಡಲಾರವು. ನಗರದ ಜನ ಬುದ್ಧಿವಂತರಾದುದರಿಂದ ಹೇಗೋ ಸರಿಹೋಗುತ್ತದೆ. ಆದರೆ ಗ್ರಾಮಾಂತರಗಳು ಹಿಂದುಳಿದಿರುವುದರಿಂದ ಅವುಗಳ ಅಭಿವೃದ್ಧಿಗೆ ಗಮನ ಕೊಡಬೇಕು. ಬಸ್ ಗಾಡಿಗಳ ಸಂಖ್ಯೆ ಸಾಲದು. ಸಾಲದುದಕ್ಕೆ ಪೆಟ್ರೋಲ್ ಅಭಾವ " ಎಂದೆ. ಆಗ ಒಬ್ಬ ವಿದ್ಯಾರ್ಥಿ " ಪೆಟ್ರೋಲ್ ಅಭಾವವಾದರೆ ಪ್ರಾಣಿಗಳ ಸಾರಿಗೆ ಏರ್ಪಡಿಸಬಹುದಲ್ಲ ? ಕುದುರೆ ಎತ್ತುಗಳ ಗಾಡಿ, ಸಾರೋಟುಗಳನ್ನು ಏಕೆ ಬಳಸಬಾರದು ? ಇದರಿಂದ ನಿರುದ್ಯೋಗ ಸಮಸ್ಯೆಯೂ ಪರಿಹಾರವಾಗುವುದಿಲ್ಲವೆ ? ವಿಕೇಂದ್ರೀಕರಣದಿಂದಾಗಿ ಹಳ್ಳಿ ಹಳ್ಳಿಗಳಲ್ಲಿ ಜನರಿಗೆ ಉದ್ಯೋಗ ದೊರೆಯುವುದಿಲ್ಲ. ಎಲ್ಲರೂ ಖಾದಿ ಧರಿಸಿದರೆ ಎಲ್ಲರಿಗೂ ಉದ್ಯೋಗ ಎಂದು ಗಾಂಧಿ ಹೇಳಿದರಲ್ಲ. ಭಾರತದಲ್ಲಿಯೂ ಬಟ್ಟೆ ಯಂತ್ರಗಳು ದಿನದಿನಕ್ಕೂ ಹೆಚ್ಚುತ್ತಿವೆ ಎಂದು ಕೇಳಿದೆ.." ಎಂದ. ನನಗೆ ತೋರಿದ ಪ್ರತ್ಯುತ್ತರ ಕೊಟ್ಟೆ. ಈ ಪ್ರಶ್ನೆಗಳನ್ನು ಕೇಳುತ್ತಿದ್ದವರು ಅಮೆರಿಕನ್ ಶ್ರೋತೃಗಳು. ಸಾಮಾನ್ಯ ಅಮೆರಿಕನ್ನರಿಗೆ ಭಾರತದ ವಿಷಯದಲ್ಲಿ ಅಷ್ಟೊಂದು ಸಾಮಾನ್ಯ ತಿಳುವಳಿಕೆ ಇಲ್ಲವಾದರೂ ತಿಳಿದವರು ನಮ್ಮ ಸಮಸ್ಯೆಗಳನ್ನು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆಂಬುದು ಆಶ್ಚರ್ಯ ಹುಟ್ಟಿಸಿತು... ಒಬ್ಬ ವಿದ್ಯಾರ್ಥಿಯು " ಜಗತ್ತಿನ ನಾನಾ ಭಾಷೆಗಳಿಗೆ ಭಾರತದ ಪ್ರಾಚೀನ ಮಹಾಕಾವ್ಯಗಳೂ ಗ್ರಂಥಗಳೂ ಅನುವಾದವಾಗಿವೆ. ರಷ್ಯದ ಗೂಸೋವ, ರಾಮಾಯಣವನ್ನು ನಾಟಕಕ್ಕೆ ಅಳವಡಿಸಿ ಈಗ ಹದಿನೇಳು ವರ್ಷಗಳಿಂದಲೂ ಪ್ರದರ್ಶಿಸುತ್ತಿದ್ದಾರೆ. ಮಹಾಭಾರತವೂ ರಷ್ಯನ್ ಗೆ ಪದ್ಯಾನುವಾದವಾಗಿದೆ. ಈಚೆಗೆ ಬಂದ ನಿಮ್ಮ ಗ್ರಂಥಗಳು ಹೀಗೆ ಯಾವುದಾದರೂ ಭಾಷೆಗೆ ಅನುವಾದವಾಗಿದೆಯೆ ? " ಎಂದು ಕೇಳಿದ... ಆ ವಿದ್ಯಾರ್ಥಿಗಳ, ಉಪಾಧ್ಯಾಯರ, ಭಾರತೀಯ ಉದ್ಗ್ರಂಥಗಳ ಜ್ಞಾನವನ್ನು ನೋಡಿ ನಾನು ಅವಾಕ್ಕಾದೆ. ನಾನೂ ಸಹ ವ್ಯಾಸ ವಾಲ್ಮೀಕಿ ಉಪನಿಷತ್ ಋಷಿಗಳಿಂದ ನಾಲ್ಕು ಅಕ್ಷರಗಳನ್ನು ಭಿಕ್ಷೆ ಬೇಡಿ ಇಟ್ಟುಕೊಂಡದ್ದರಿಂದ ಹೇಗೋ ನಿಭಾಯಿಸಿದೆ... ಒಂದು ಸಂದರ್ಭದಲ್ಲಿ - "ನೀವು ಚಂದ್ರಲೋಕಕ್ಕೆ ಹೋಗಿ ಬಂದದ್ದು ಹೀಗೆ. ಭಾರತದ ನಚಿಕೇತ ಸಾವಿರಾರು ವರುಷಗಳ ಹಿಂದೆ ಯಮಲೋಕಕ್ಕೆ ಹೋದದ್ದು ಹಾಗೆ.." ಎನ್ನುತ್ತ ಅವರಿಗೆ ವಾಜಶ್ರವಸ್ಸಿನ ಯಾಗ, ನಚಿಕೇತನನ್ನು ಯಮನಿಗೆ ಕೊಟ್ಟದ್ದು, ವಿಧೇಯತೆಯಿಂದ ಯಮಲೋಕಕ್ಕೆ ಹೋದ ನಚಿಕೇತನು ಉಪವಾಸ ಕೂತು ಏಕನಿಷ್ಠೆಯಿಂದ ಯಮನನ್ನು ಒಲಿಸಿಕೊಂಡದ್ದು, ಆಗ ಮೆಚ್ಚಿ ಸ್ವರ್ಗಲೋಕದ ವೈಭೋಗಗಳನ್ನೆಲ್ಲ ಕೊಡಲು ಯಮನು ಇಚ್ಛಿಸಿದರೂ ಅವನ್ನೆಲ್ಲ ತಿರಸ್ಕರಿಸಿದ ನಚಿಕೇತನು "ಇವೆಲ್ಲವೂ ಅಪ್ರಯೋಜಕ; ಇಂದ್ರಿಯಗಳು ದುರ್ಬಲವಾಗಿ ಮುಪ್ಪು ಬಂದೇ ಬರುತ್ತದೆ. ಜೀವವು ಅಲ್ಪ, ಅಶಾಶ್ವತ. ನಿನ್ನ ಐಶ್ವರ್ಯ, ಆಮೋದಗಳನ್ನು ನೀನೇ ಇಟ್ಟುಕೋ. ನನಗೆ ಶಾಶ್ವತ ಜ್ಞಾನವನ್ನು ಬೋಧಿಸು " ಎಂದು ಕೊನೆಗೂ ಯಮನಿಂದ ಜ್ಞಾನ ಪಡೆದ ನಚಿಕೇತನ ಕತೆ ಹೇಳಿದೆ. "ನೀವೆಲ್ಲರೂ ಭೋಗಗಳನ್ನು ಅನುಭವಿಸಿ ಅನುಭವಿಸಿ ಸಾಕಾಗಿ ಅವುಗಳಲ್ಲಿಯೂ ಜಿಗುಪ್ಸೆಪಟ್ಟು ದಿಕ್ಕೆಟ್ಟವರಾಗಿದ್ದೀರಿ. ಇವೆಲ್ಲವನ್ನೂ ಮೀರಿದುದು ಮತ್ತಾವುದಾದರೂ ಈ ಬಾಳಿನಲ್ಲಿ ಉಂಟೆ ? ಎಂಬುದನ್ನು ಚಿಂತಿಸಲು ನಿಮಗೆ ಈಗ ವಿರಾಮವೂ ಮನಶ್ಶಾಂತಿಯೂ ಇದೆ" ಎಂದೆ. ಶ್ರೋತೃಗಳಲ್ಲಿ ಕೆಲವರು "ಹೌದು. ಆದರೆ ನಮಗೆ ಮಾರ್ಗದರ್ಶಕರಿಲ್ಲ. ಭಾರತವರ್ಷವು ತನ್ನ ಭಾರತೀಯ ಮೌಲ್ಯಗಳನ್ನು ಆಧುನಿಕ ಜಗತ್ತಿನ ಸಮಸ್ಯೆಗಳಿಗೆ ಅನ್ವಯಿಸಿ ವಿಜ್ಞಾನವನ್ನು ಆಧ್ಯಾತ್ಮೀಕರಿಸಿ ಜಗತ್ತಿಗೆ ಮಾರ್ಗದರ್ಶನ ಮಾಡುವುದೆಂದು ನಾವು ನಿರೀಕ್ಷಿಸುತ್ತಿದ್ದೇವೆ" ಎಂದರು. ಒಬ್ಬ ಪ್ರೊಫೆಸರ್ ರು "ನಾವು ಭೌತ ಸುಖಗಳ ಪರಾಕಾಷ್ಠತೆಯನ್ನು ಅನುಭವಿಸಿಯಾಯಿತು. ಇನ್ನು ಆಧ್ಯಾತ್ಮಿಕದತ್ತ ಹೋಗಬೇಕು.." - ಎಂದರು. "

ಹೀಗೆ ಅಮೆರಿಕದಲ್ಲಿ ಗೊರೂರರು ತಮ್ಮನ್ನು ಸ್ಥಾಪಿಸಿ ಬಂದರು. ತಮ್ಮ ಸ್ವಂತ ರೂಪಾಯಿಯನ್ನೇ ಡಾಲರಾಗಿಸಿಕೊಂಡು ಯಾವುದೇ ಪ್ರಾಯೋಜಕರಿಲ್ಲದೆ ತಮ್ಮ ಬಂಧುಗಳು, ಮಕ್ಕಳನ್ನೇ ಅವಲಂಬಿಸಿಕೊಂಡು ಗೊರೂರರು ಅಮೆರಿಕ ಸುತ್ತಿ ಬಂದರು. ತಮ್ಮ ಜತೆಯಲ್ಲಿಯೇ ಅಮೆರಿಕಕ್ಕೆ ಕರೆದೊಯ್ದಿದ್ದ ಹೆಂಡತಿಯ ಬಲದಿಂದ - ಅಯ್ಯಂಗಾರರ ವೈಶಿಷ್ಟ್ಯವಾದ ಹುಳಿಯನ್ನವನ್ನೇ (ಪುಳಿಯೋಗರೆ) ಬಹುಪಾಲು ನೆಚ್ಚಿಕೊಂಡು - ಒಟ್ಟಾರೆಯಾಗಿ, ತಮ್ಮ ಹೊಟ್ಟೆಯಲ್ಲಿ ಭಾರತವನ್ನಿಟ್ಟುಕೊಂಡೇ ಗೊರೂರರು ಅಮೆರಿಕ ಸುತ್ತಿದರು. ಅವರನ್ನು ಅಮೆರಿಕದ ದಿಕ್ಕುದಿಕ್ಕಿಗೆ ಸುತ್ತಿಸಿ ಅಮೆರಿಕದ ಅಂತಃದರ್ಶನ ಪಡೆಯಲು ಸಹಕರಿಸಿದ ಅವರ ಮಕ್ಕಳು, ಅಳಿಯ, ಬಂಧುಬಳಗವನ್ನೂ - ಪುಸ್ತಕ ಓದಿ ಆನಂದಿಸುವವರು ಸ್ಮರಿಸಿಕೊಳ್ಳಲೇಬೇಕು. ಅನನ್ಯ ಅನುಭವ ನೀಡುವ ಪ್ರವಾಸ ಕಥನ - "ಅಮೆರಿಕಾದಲ್ಲಿ ಗೊರೂರು". ಅಂದರೆ - ನೂರಾರು ಅನುಭವಗಳ ಉತ್ಸವದ ನುಡಿತೋರಣ. ಒಂದು ನಿಮಿಷಕ್ಕಿಂತ ಹೆಚ್ಚು ಹೊತ್ತು ಕೂತು ಏಕಾಗ್ರತೆಯಿಂದ ಪಠ್ಯೇತರ ಓದನ್ನು ನಡೆಸುವ ತಾಳ್ಮೆಯಿಲ್ಲದ ಇಂದಿನ ಯುವ ಪೀಳಿಗೆಗೂ ಇಂತಹ ಸರಕು ತಲುಪಬೇಕಾಗಿದೆ.

ಇಂದು, "ಯಂತ್ರಗಳು ( INTERNET, MOBILE...ಇತ್ಯಾದಿ...) ವಿಸರ್ಜಿಸುವ ಅಕ್ಷರಗಳನ್ನಷ್ಟೇ ಓದುತ್ತೇವೆ" ಎಂದು ಪ್ರತಿಜ್ಞೆ ಮಾಡಿದವರೂ ನಿಯಮಿತವಾಗಿ. ಸಾಂಪ್ರದಾಯಿಕ ಓದಿನ ಶೈಲಿಗೆ ಮರಳುವುದಕ್ಕೆ ಇದು ಸಕಾಲ. ಉತ್ತಮ ಅಭಿರುಚಿಯನ್ನು ಬೆಳೆಸುವುದಕ್ಕೆ ಇಂತಹ ಪುಸ್ತಕಗಳು ಸಹಕರಿಸುತ್ತವೆ. ವ್ಯರ್ಥ ಸ್ಪರ್ಧೆಯ ಇಂದಿನ ದಿನಪತ್ರಿಕೆಗಳ ಓದಿನಿಂದ ಮನಸ್ಸು ಕಲುಷಿತವಾದರೆ - ಗೊರೂರು ರಾಮಸ್ವಾಮಿ ಐಯ್ಯಂಗಾರ್ ಮತ್ತು ಅವರ ಅವಧಿಯ ಲೇಖಕರ ಪುಸ್ತಕಗಳು ನಮ್ಮನ್ನು ಮತ್ತೊಮ್ಮೆ ಸ್ವಚ್ಛಗೊಳಿಸಿ, ಹಳಿ ಹತ್ತಿಸಬಲ್ಲವು.

ಸ್ನೇಹಿತರೇ, ಅಕ್ಷರ ಜ್ಞಾನ ಇರುವವರೆಲ್ಲರೂ ಕೈಯ್ಯಲ್ಲಿ ಪುಸ್ತಕವನ್ನು ಹಿಡಿದು ಅಕ್ಷರಾಮೃತ ಸವಿಯುವುದರಿಂದ ಯಾವುದೇ ವಿಷಪೂರಿತ ತರಂಗಗಳ ಸಂಪರ್ಕವಿಲ್ಲದೆ ಸರ್ವಾಂಗ ಆರೋಗ್ಯಕ್ಕೂ ಹಿತವೆನಿಸೀತು. ಬೇಸರ ಓಡಿಸುವ, ಪ್ರಸನ್ನತೆ ನೀಡುವ ರುಚಿಕಟ್ಟಾದ ಓದು - ಇಂದಿನ ಅಗತ್ಯ. "ಅಮೆರಿಕಾದಲ್ಲಿ ಗೊರೂರು" - ಇಂದಿನ ಯುವ ಜನರು ಓದಲೇಬೇಕಾದ ಪುಸ್ತಕ. ಸಾಧ್ಯವಾದರೆ, ಇನ್ನೂ ಓದಿಲ್ಲದಿದ್ದರೆ - ಒಮ್ಮೆ ಓದಿ. ಶ್ರೀ ಹಾ.ಮಾ.ನಾಯಕರ ಮುನ್ನುಡಿಯಿಂದ ತೊಡಗಿ ಪೂರ್ತಿಯಾಗಿ ಓದಿ. ಮರು ಓದಿಗೂ ಅರ್ಹವಾದ ಮಾಹಿತಿಯುಕ್ತ ಪುಸ್ತಕ ಇದು.

3 comments:

  1. Very nice article madam. It is thought provoking. Congrats

    ReplyDelete
  2. ಈ ಪುಸ್ತಕದ ಬಗ್ಗೆ ಕೇಳಿದ್ದುಂಟು ....ಆದರೆ ಓದಿರಲಿಲ್ಲ ...ಈಗ ಕೊಂಡು ಓದಬೇಕೆನಿಸುತ್ಹ್ಹದೆ...

    ReplyDelete