Monday, November 27, 2023

Rotary



ಈ ರೋಟರಿ ಎಂಬ ಸಂಸ್ಥೆ ತೋರಿಸುತ್ತ ಬಂದ ಸಾಮಾಜಿಕ ಕಳಕಳಿ, ಜನಪರ ಕೆಲಸಗಳಿಂದಾಗಿ - ಸಮಾಜದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿರುವ ಒಂದು ಸಮೂಹವಾಗಿದೆ.
ಸಮಾಜದ ಕೆನೆವರ್ಗವನ್ನೇ ಹೆಚ್ಚಾಗಿ ಒಳಗೊಂಡಿರುವ ಇಂಥ ಸಂಸ್ಥೆಗಳು - ಶಿಸ್ತು ಮತ್ತು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುತ್ತ ಬರುತ್ತಿರುವುದರಿಂದಾಗಿ, ಸಮಾಜದ ಮನ್ನಣೆಗೂ ಪಾತ್ರವಾಗುವಂತಾಗಿದೆ.

ಆದರೆ..
ನನ್ನ ಮತ್ತು ರೋಟರಿಯ ಸಂಬಂಧ ಅನ್ನುವುದು - ಸ್ವಲ್ಪ ಮಿತವಾಗಿದೆ ಎಂದೇ ಹೇಳಬೇಕಾಗುತ್ತದೆ.
ನಾನು ನನ್ನ ಬಾಲ್ಯವನ್ನು ಕಳೆದದ್ದು ಕೋಟೇಶ್ವರ ಮತ್ತು ಕುಂದಾಪುರದಲ್ಲಿ. ಕೋಟೇಶ್ವರದಲ್ಲಿದ್ದಾಗ ನಾನು ಬಹಳ ಚಿಕ್ಕ ಪ್ರಾಯದವಳಾಗಿದ್ದೆ; ಅದು ನನ್ನ ೧೦ ವರ್ಷದ ಒಳಗಿನ ಅವಧಿ; ಆಗ - ಅಂದರೆ, ೧೯೬೫ ರ ವರೆಗಿನ ಅವಧಿಯಲ್ಲಿ ನಾನು ರೋಟರಿ ಎಂಬ ಹೆಸರನ್ನೂ ಕೇಳಿದ ನೆನಪಿಲ್ಲ.
ಆದರೆ... ನಾನು ಕುಂದಾಪುರ ಸೇರಿಕೊಂಡ ನಂತರ ರೋಟರಿಯ ಕುರಿತು ಕೇಳಿಸಿಕೊಳ್ಳಲು ಆರಂಭವಾಗಿತ್ತು.
ಅದಕ್ಕೆ ಮುಖ್ಯ ಕಾರಣ... ನನ್ನ ಮಾವ ಶ್ರೀ ಎ. ಎಸ್. ಎನ್. ಹೆಬ್ಬಾರ್.
ಶ್ರೀ ಎ. ಎಸ್. ಎನ್. ಹೆಬ್ಬಾರ್ ಅವರು - ಬಹುಶಃ, ಸುಮಾರು ೧೯೭೦ ರ ಹೊತ್ತಿನಲ್ಲಿ ರೋಟರಿಯಲ್ಲಿ ಸಕ್ರಿಯರಾಗಿದ್ದರು ಅನ್ನಿಸುತ್ತದೆ. ಆಗ, ಪತ್ರಿಕೆಗಳಲ್ಲೂ ರೋಟರಿಯ ಆಗುಹೋಗುಗಳ ಸುದ್ದಿಗಳು ಆಗೊಮ್ಮೆ ಈಗೊಮ್ಮೆ ಪ್ರಕಟವಾಗುತ್ತಿದ್ದುದನ್ನೂ ನಾನು ನೋಡಿದ್ದೆ. ಇವೆಲ್ಲ ರೋಟರಿಯ "ಹೊರನೋಟ" ಅಷ್ಟೇ ಆಗಿತ್ತು.
ಅನಂತರ, ನನ್ನ ರೋಟರಿ ಪ್ರವೇಶದ ಒಂದು ಸಂದರ್ಭವೂ ಬಂತು. ಅದು - ಕಲಾವಿದೆಯಾಗಿ.
ನಾನು ವಿದ್ಯಾರ್ಥಿಯಾಗಿರುವಾಗಲೇ ರಂಗಭೂಮಿಯಲ್ಲಿ ಅಭಿನಯಿಸಲು ತೊಡಗಿದ್ದೆ. ಮತ್ತು - ಹರಿಕತೆಗಳನ್ನೂ ನೀಡಲು ಆರಂಭಿಸಿದ್ದೆ. ಆಗ ಕುಂದಾಪುರದ ರೋಟರಿಯ ಪದಾಧಿಕಾರಿಯಾಗಿದ್ದ ಎಸ್. ಪಿ. ತೋಳಾರ್ ಎಂಬವರು, ರೋಟರಿಯಲ್ಲಿ ಅರ್ಧ ಗಂಟೆಯ ಹರಿಕತೆ ಮಾಡುವಂತೆ ನನ್ನನ್ನು ಆಹ್ವಾನಿಸಿದ್ದರು. ಆ ಸಂದರ್ಭದಲ್ಲಿ - ರೋಟರಿಯ ಕಾರ್ಯಶೈಲಿ, ಆಗುಹೋಗುಗಳನ್ನು ಹತ್ತಿರದಿಂದ ನೋಡುವ ಒಂದು ಸಂಜೆ ನನಗೆ ಒದಗಿತ್ತು. ಆದರೆ... "ಹರಿಕತೆ ಎಂಬುದು ರೋಟರಿಯಂಥ ವೇದಿಕೆಗಳಿಗೆ ಒಗ್ಗದ ಕಲಾ ಮಾಧ್ಯಮ" ಎಂದೂ ಅವತ್ತು ಅನ್ನಿಸಿತ್ತು. ಏಕೆಂದರೆ, ಇಂಥ ಸಂಸ್ಥೆಗಳ ಅಭಿರುಚಿ, ಆಸಕ್ತಿಗಳು - ಬೇರೆಯೇ ಆಗಿರುವುದೇ ಕಾರಣ ಇರಬಹುದೇನೋ ?
ಆದರೆ... ನಾನು ಗಮನಿಸಿದ ಅಥವ ನನಗೆ ಆಗ ಅನ್ನಿಸಿದ ಇನ್ನೊಂದು ವಿಶೇಷ ಏನೆಂದರೆ... "ಸಮಾಜದ ತೀರ ಸಾಮಾನ್ಯರಿಂದ ಪೂರ್ತಿಯಾಗಿ ಬೇರೆಯಾದ ಒಂದು ಪ್ರಪಂಚವನ್ನು ಇಂಥ ಸಂಸ್ಥೆಗಳು ಸೃಷ್ಟಿಸಿಕೊಂಡಿವೆಯೇ ? ಇದು - ಉಳ್ಳವರ ಸ್ವರ್ಗವೆ ?" ಅನ್ನುವ ಭಾವನೆಯೂ - ಆಗ ನನ್ನ ಬಾಲ್ಯದ ಕಾಲದಲ್ಲಿ ಮೂಡಿತ್ತು.
ಆದರೆ, ಅಂದಿನಿಂದ ಇಂದಿನವರೆಗಿನ ತನ್ನ ಹಾದಿಯಲ್ಲಿ - ರೋಟರಿಯು - ಹೆಚ್ಚು ಹೆಚ್ಚು ಜನಸಾಮಾನ್ಯರನ್ನು ಒಳಗೊಳ್ಳುವಲ್ಲಿ ಯಶಸ್ವಿಯಾಗಿದೆ. ಬಹುಶಃ ನನ್ನ ಚಿಂತನೆಯ ಶೈಲಿಯಲ್ಲೂ ಸ್ವಲ್ಪ ಪರಿವರ್ತನೆ ಆಗಿದ್ದಿರಲೂಬಹುದು !
ಈಗ ನಾನು ಸ್ವಲ್ಪ ಪ್ರಾಯೋಗಿಕವಾಗಿಯೂ ಯೋಚಿಸುತ್ತಿದ್ದೇನೆ.
ಇಂಥ ಸಂಸ್ಥೆಗಳು ತಮ್ಮ ಸ್ವಂತ ಮನರಂಜನೆಗಾಗಿ, ತಾವೇ ದುಡ್ಡು ಖರ್ಚು ಮಾಡುತ್ತ, ಅದರಿಂದ ಸಾಂಘಿಕ ಸುಖವನ್ನು ಪಡೆಯುತ್ತಿದ್ದರೆ... ಅದನ್ನು ಯಾರೂ ಪ್ರಶ್ನಿಸಲಾಗುವುದಿಲ್ಲ.
ಈ ಬಗೆಯ ಸಂಸ್ಥೆಗಳ ಸದಸ್ಯರು, - ತಮ್ಮ ಸದಸ್ಯರ ದೇಣಿಗೆಯಿಂದ - ಮತ್ತು
ಸ್ವಂತ ಸಮಯ, ದೈಹಿಕ ಶ್ರಮದ ಮೂಲಕ ಒಂದಷ್ಟು ಸಾಮಾಜಿಕ ಕೆಲಸಗಳನ್ನು - ಈ ಸದಸ್ಯರು ಸ್ವಯಂ ಸ್ಫೂರ್ತಿಯಿಂದ ಮಾಡುವುದಾದರೆ - ಅಂತಹ ಕೆಲಸಗಳನ್ನು ಪ್ರೀತಿಯಿಂದ ಸ್ವಾಗತಿಸಿ, ಪ್ರೋತ್ಸಾಹಿಸುವುದು ಸಮಾಜದ ಕರ್ತವ್ಯವೇ ಆಗುತ್ತದೆ.

ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಸುಲಭದ ವಿಷಯವೇನಲ್ಲ. ಹೀಗಿರುವಾಗ - ಬಹಳ ಸ್ವಾರ್ಥಿಯಾದ ಮನುಷ್ಯರನ್ನು - ಯಾವುದೋ ಕೆಲವು ಧ್ಯೇಯಗಳ ಕೆಳಗೆ ಒಂದುಗೂಡಿಸುವುದು - ಅಭಿನಂದನೀಯ ಪ್ರಯತ್ನವೆಂದೇ ಹೇಳಬೇಕಾಗುತ್ತದೆ.


ಮನುಷ್ಯ ಸಮಾಜವನ್ನು ಹೀಗೂ ಗುರುತಿಸಬಹುದು.
ಮುಖ ಉಳ್ಳವರ - ಇಲ್ಲದವರ, ಮುಖ ಮುಚ್ಚಿಕೊಳ್ಳುವ - ತಗ್ಗಿಸುವ, ಮುಖಕ್ಕೆ ಮುಖ ಕೊಡುವ - ಕೊಡದಿರುವವರ, ಇನ್ನೊಂದು ಮುಖದ ಮೂಲಕವೇ ತಮ್ಮನ್ನು ಬಿಂಬಿಸಿಕೊಳ್ಳುವವರ - ಅಂದರೆ - ಹಿಂಬಾಲಕರಾಗಿಯೇ ಇರುವವರ, ಆಗಾಗ ಮುಖದ ಬಣ್ಣ ಬದಲಿಸುವವರ, ಮುಖ ಇರುವುದೇ ಪ್ರದರ್ಶನಕ್ಕಾಗಿ - ಅಂದುಕೊಂಡಿರುವ... ಹೀಗೆ...  ...
"ಮುಖ ಮುಖೇನವೇ" ತಮ್ಮ ಪರಿಚಯವನ್ನು ಸ್ಥಾಪಿಸಿಕೊಳ್ಳುತ್ತಿರುವ ಮನುಷ್ಯರಿಂದ ತುಂಬಿ ತುಳುಕುತ್ತಿರುವ ಭೂಮಿ ಇದು.

ಮುಖ ಅಂದರೆ... ನಾನು ಅಥವ ನನ್ನನ್ನು - ಅಥವ - ಜೀವಿಗಳ ಹೆಸರನ್ನು ನಿರ್ದೇಶಿಸಿ ಪ್ರತಿನಿಧಿಸುವ ಒಂದು ಅಂಗ. ಅದನ್ನು - ಮುಖ ಎನ್ನಲಾಗುತ್ತದೆ. ಉದಾ: ಶಂಕರ ಅಂದಾಗ, ಶಿವಭಕ್ತನೊಬ್ಬನಿಗೆ ಕೈಲಾಸದ ಪರಶಿವನ ನೆನಪಾದರೆ, ಸಂಸಾರಿಗಳಿಗೆ ಅವರ ಮಾವನೋ ಭಾವನೋ ಸೋದರನ ಮುಖವೋ - ತಕ್ಷಣಕ್ಕೇ ಮನಸ್ಸಿನಲ್ಲಿ ಮೂಡುತ್ತದೆ.
ನನಗೆ - ರೋಟರಿ ಅಂದಾಗ - ನನ್ನ ಮಾವ ನೆನಪಾದ ಹಾಗೆ !
ಅಂದರೆ - First Circle ನಲ್ಲಿರುವ ವಸ್ತು ಜೀವಿಗಳು - ನಮ್ಮ ಮನಸ್ಸಿನಲ್ಲಿ ಮೊದಲು ಮೂಡುತ್ತಾರೆ. ಆದ್ದರಿಂದ - ನಮ್ಮ ಮನಸ್ಸಿನ First Circle ನ್ನು ಎಚ್ಚರದಿಂದ ಕಟ್ಟಿಕೊಂಡು, ಪೋಷಿಸಬೇಕಾಗುತ್ತದೆ.

ವ್ಯಕ್ತಿಯೊಬ್ಬ ಸಹಸ್ರಾರು ಜನರನ್ನು ಪ್ರೇರೇಪಿಸುವಂತೆ ಬದುಕನ್ನು ಸವೆಸಿದ್ದರೆ, ಉದಾ: ರಾಮಕೃಷ್ಣ ಪರಮಹಂಸ, ವಿವೇಕಾನಂದ, ರಮಣ ಮಹರ್ಷಿಗಳು, ಅರವಿಂದರು, ಗಾಂಧೀಜಿ... ಹೀಗೆ. ಅಥವ ಸಾರ್ವಜನಿಕ ಬದುಕಿನಲ್ಲಿ ಮನುಷ್ಯರು ಸಾಕಷ್ಟು ಹೊರಳಾಡಿ ಯಾವುದೋ ಮಾರ್ಗದಲ್ಲಿ ಜನಪ್ರಿಯರಾಗಿದ್ದರೆ ... ಉದಾ: ಇಂದಿರಾ ಗಾಂಧಿ, ನರೇಂದ್ರ ಮೋದಿ... ಮುಂತಾದವರು...  ಹೆಸರು ಹೇಳಿದ ಕೂಡಲೇ - ಅವರ ಮುಖದೊಂದಿಗೇ ಜನರ ಮನಸ್ಸಿನಲ್ಲಿ ವ್ಯಕ್ತಿಯೊಬ್ಬ ಅಚ್ಚಾಗಿ ಹೋಗುವ ರೀತಿ ಇದು.

ನಾನು, ಇವತ್ತು, ಹೀಗೆಲ್ಲ ಯಾಕಾಗಿ ಮುಖಾನ್ವೇಷಣೆ ಅಥವ ಮುಖಸ್ತುತಿ ಮಾಡುತ್ತಿರಬಹುದು ? ಅಂತ  - ನಿಮಗೀಗ ಅನ್ನಿಸುತ್ತಿರಬಹುದು..
ಈಗ - ರಂಗಪ್ರವೇಶ ಮಾಡುವ ಸಮಯ.

ಇವತ್ತು, ಮಂಗಳೂರಿನ ರೋಟರಿಯವರು ನಾರಾಯಣಿ ಎಂಬ ಮುಖವನ್ನು ಆಹ್ವಾನಿಸಿದ್ದು ಯಾಕೆಂದರೆ... ಬಹುಶಃ, ಈ ನಾರಾಯಣಿ ಎಂಬ ಒಂದು ಜೀವ - ಒಂದಷ್ಟು ವರ್ಷ - ಆಕಾಶವಾಣಿಯಲ್ಲಿ ಎನೌನ್ಸರ್ ಆಗಿದ್ದಳು.. ಎಂಬ ಕಾರಣಕ್ಕೆ.
Default ಆಗಿ, ಆಕೆಯ ಧ್ವನಿಯನ್ನು ನಿಮ್ಮಲ್ಲಿ ಕೆಲವರು, ಕೆಲವು ಬಾರಿ ಕೇಳಿರಲೂಬಹುದು.
ಏಕೆಂದರೆ,  ನಾನು ೨೦೧೫ ರಲ್ಲಿ... ಅಂದರೆ ೩ ವರ್ಷಗಳ ಹಿಂದೆಯೇ ಆಕಾಶವಾಣಿಯಿಂದ ನಿವೃತ್ತಳಾಗಿದ್ದೆ.
ಆದರೆ, ಜನರು ಆಕಾಶವಾಣಿಯ ಶ್ರೋತ್ರತ್ವವನ್ನು ಸಡಿಲಿಸಿಕೊಳ್ಳುತ್ತ ಬಂದು, ಸುಮಾರು ೧೦-೧೨ ವರ್ಷಗಳೇ ಕಳೆದು  ಹೋಗಿದೆ. ಆದ್ದರಿಂದ, ಈಗ ೨೫-೩೦ ವಯೋಮಾನದ ಹುಡುಗರಿಗೆ ನನ್ನ ಧ್ವನಿಯ ಅಥವ - ಆಗ ನಾನು ನೀಡುತ್ತಿದ್ದ ಕಾರ್ಯಕ್ರಮಗಳ ಪರಿಚಯವಾಗಲೀ - ಮುಖ ಬಿಡಿ, ನನ್ನ ಹೆಸರೂ ಕೂಡ ನೆನಪಿನಲ್ಲಿ ಇರಲಾರದು. ಅದರಲ್ಲಿ  ಆಶ್ಚರ್ಯವೇನೂ ಇಲ್ಲ. ಅದು ಈ ಭೂಮಿಯ ಗುಣ. ಮುಂದೆ ಮುಂದೆ ನಡೆಯುವಾಗ, ಹಿಂದಿನ ಅನೇಕ ಮುಖಗಳು Delete ಆಗಲೇಬೇಕಾಗುತ್ತದೆ.
ಆದ್ದರಿಂದ, ಈಗಂತೂ ನಾನು - "ಮುಖದ ಅಚ್ಚು ಒತ್ತದ ಅನಾಮಿಕಾ" ಎಂದುಕೊಳ್ಳಲು ನನಗೆ ಯಾವ ಸಂಕೋಚವೂ ಇಲ್ಲ..

ಇನ್ನೊಂದು ವಿಷಯ ಏನೆಂದರೆ - ನಾನಿದ್ದ ಆಕಾಶವಾಣಿಯ ಎನೌನ್ಸರ್ ಗಿರಿ ಎಂಬ ವೃತ್ತಿಗೆ - ಮುಖವೇ ಇರುವುದಿಲ್ಲ; ಬರೇ ಧ್ವನಿಯಷ್ಟೇ ಓಡಾಡುವ ವ್ಯವಸ್ಥೆ ಅದು. ಆದರೆ ಅಷ್ಟೇ ಅಲ್ಲದೆ,... ನಾನು - ಹರಿಕತೆ, ಸಂಗೀತ.. ಇತ್ಯಾದಿ ಪ್ರದರ್ಶನ ಕಲೆಯಲ್ಲೂ ಅಲ್ಪಸ್ವಲ್ಪ ತೊಡಗಿಕೊಂಡದ್ದರಿಂದ - ಕೆಲವರಿಗೆ ನನ್ನ ಮುಖ ಪರಿಚಯ ಇದ್ದರೂ ಇರಬಹುದು.
ನಾನು ಬರೆಯಲು ತೊಡಗಿದ್ದು ಬಹಳ ತಡವಾಗಿ. ನನ್ನ ೩-೪ ಪುಸ್ತಕಗಳು ಪ್ರಕಟವಾಗಿದ್ದರೂ ಕೂಡ - ಇಂದಿನ ಸಮಾಜದಲ್ಲಿ ದೃಶ್ಯಪ್ರಿಯತೆಯೇ ಹೆಚ್ಚುತ್ತಿದ್ದು, ಓದುವ ಹವ್ಯಾಸ - ಅದರಲ್ಲೂ ಕನ್ನಡದ ಪುಸ್ತಕಗಳನ್ನು ಓದುವ ಹವ್ಯಾಸವು ಹಿಂದೆ ಸರಿಯುತ್ತಿರುವುದರಿಂದ ಮತ್ತು ಇವತ್ತಿನ ಸಮಾಜದಲ್ಲಿ ಅಸಂಖ್ಯಾತ ಬರಹಗಾರರು ಕಾಣಿಸಿಕೊಳ್ಳುತ್ತಿರುವುದರಿಂದಾಗಿ - ಆ ನಿಟ್ಟಿನಲ್ಲೂ ನನ್ನ ಮುಖ ಮಸುಕಾಗಿಯೇ ಇದೆ.
ಒಟ್ಟಿನಲ್ಲಿ - ನಾನೀಗ - "ಮುಖ ಇದ್ದೂ... ಇಲ್ಲದವಳು ಅಥವ - ಮುಖ ಮಸುಕಾದವಳು" ಎನ್ನಬಹುದು.

ಹೀಗಿದ್ದೂ ನೀವು ರೋಟರಿಯವರು - ಅದೇಕೋ.. ನನ್ನನ್ನು - ಬನ್ನಿ ಅಂತ ಆಹ್ವಾನಿಸಿದ್ದೀರಿ; ನಾನು - ಮುಖ ಹೊತ್ತುಕೊಡೇ ಬಂದಿದ್ದೇನೆ.

ನಮ್ಮ ಸಾಮಾಜಿಕ ಚಟುವಟಿಕೆಗಳೆಲ್ಲದರ ಹಿಂದೆಯೂ - ಮನುಷ್ಯರ - "ಮುಖ ತೋರಿಸುವ ಸ್ವಭಾವವು" - ಪರೋಕ್ಷವಾಗಿ ಕೆಲಸ ಮಾಡುತ್ತಿರುತ್ತದೆ.
"ಈ ಮುಖ ಎಂಬುದು ಒಂದು ಜೀವಿಯ ಗುರುತು" ಎಂದು ಸ್ಥೂಲವಾಗಿ ಹೇಳಿದರೂ ಕೂಡ -
"ಮುಖ ಏಕೆ ಬೇಕು ?" ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು - ಅಂತ ನನಗೆ ಆಗಾಗ ಅನ್ನಿಸುತ್ತಿರುತ್ತದೆ.

ಸಾಮಾನ್ಯವಾಗಿ ಎಲ್ಲ ಮನುಷ್ಯರೂ - ಬೇರೆಬೇರೆ ಉದ್ಯೋಗಗಳನ್ನು ಮಾಡುತ್ತಾರೆ. ಇಲ್ಲಿ ಸೇರಿರುವ ನಿಮ್ಮಲ್ಲಿ ವೈದ್ಯರಿರಬಹುದು; ವಕೀಲರಿರಬಹುದು, ವ್ಯಾಪಾರಿಗಳಿರಬಹುದು; ಶಿಕ್ಷಕರಿರಬಹುದು... ಇನ್ನೆಷ್ಟೋ ಬಗೆಯ ವೃತ್ತಿಪರರಿರಬಹುದು. ಅಥವ - ಅಂತಹ ವೃತ್ತದಲ್ಲಿ ಬದುಕನ್ನು ಸಾಗಿಸುತ್ತಿರುವವರಿರಬಹುದು.
ನೀವೆಲ್ಲರೂ ನಿಮ್ಮ ನಿಮ್ಮ ಉದ್ಯೋಗ ನಡೆಸುತ್ತಿದ್ದೀರಿ. ಯಾಕೆ ?
ಮುಖ್ಯವಾಗಿ, ಹೊಟ್ಟೇಪಾಡು. ಅಷ್ಟೆ.
ಆದರೆ - ಹೊಟ್ಟೇಪಾಡನ್ನು ನಿರ್ವಹಿಸುವಲ್ಲಿಗೇ ಯಾವ ಮನುಷ್ಯರೂ ನಿಲ್ಲುವುದಿಲ್ಲವಲ್ಲ ?
ಮನುಷ್ಯರ ಆಕಾಂಕ್ಷೆಗಳ ಸರಪಳಿ ಉದ್ದಕ್ಕೆ ಬಿಚ್ಚಿಕೊಳ್ಳುತ್ತಲೇ ಹೋಗುತ್ತದೆ.
"ಒಂದಷ್ಟು ಹಣ ಶೇಖರಿಸಿ ಇಡುವ; ನಾಳೆಗೆ ಬೇಕಾದೀತು" - ಅಂದುಕೊಳ್ಳತೊಡಗುತ್ತೇವೆ; ಆಮೇಲೆ - ಅಂಥ ಹಣಕ್ಕೆ ದಿಕ್ಕುದೆಸೆ ತೋರಿಸುವ ಪ್ರಯತ್ನ ಶುರುವಾಗುತ್ತದೆ; ಹಣದ ಜೊತೆಗೆ ಸ್ವಲ್ಪ ಹೆಸರೂ ಬಂದರೆ ಬರಲಿ - ಅನ್ನಿಸತೊಡಗುತ್ತದೆ; ಅಧಿಕಾರ ಚಲಾಯಿಸುವಂಥ ಸ್ಥಾನ ಒದಗಿದರೆ ಅದೂ ಬರಲಿ ಅನ್ನಿಸುತ್ತದೆ; ಕೊನೆಗೆ - ತಮ್ಮ ಹಣ, ಕೀರ್ತಿ, ಅಧಿಕಾರ... ಇವನ್ನೆಲ್ಲ ಗುರುತಿಸಿ ಜೈಕಾರ ಹೇಳುವ ಒಂದಷ್ಟು ಜನರು - ತಮ್ಮ ಸುತ್ತಮುತ್ತ ತಿರುಗಾಡುತ್ತಿರಲಿ.. ಅನ್ನಿಸತೊಡಗುತ್ತದೆ. ಮಾಧ್ಯಮಗಳಲ್ಲಿ ನಮ್ಮದೇ ಶಂಖನಾದ ಮೊಳಗುತ್ತ ಇರಬೇಕು - ಅನ್ನಿಸುತ್ತಿರುತ್ತದೆ. ಹೀಗೆ, ತೀರದ ಆಕಾಂಕ್ಷೆಗಳ ಸರಪಳಿಯಿಂದಲೇ ನಮ್ಮ ಬದುಕುಗಳು ತೇಕುತ್ತ ಬಂದಿವೆ.
ಇವೆಲ್ಲ ಆಕಾಂಕ್ಷೆಗಳೂ - ಮನುಷ್ಯರಲ್ಲಿ ಸುಪ್ತವಾಗಿರುವ - " ಮುಖ ಉಳಿಸಿ ಹೋಗುವ ಪ್ರಯತ್ನ"ದ ಒಂದು ಭಾಗವೇ ಆಗಿದೆ.
ಇದು ಹೇಗಿದೆ ಅಂದರೆ...
ಒಂದರ್ಥದಲ್ಲಿ - ನಮ್ಮೆಲ್ಲರದೂ ಸನ್ಯಾಸೀ ಸಂಸಾರದಂತೆ.

ಸನ್ಯಾಸಿಯೊಬ್ಬ ಕರುಣೆಯಿಂದ ಒಂದು ಬೆಕ್ಕನ್ನು ಸಾಕತೊಡಗಿದ ಕತೆ ನೆನಪಿಸಿಕೊಳ್ಳಿ. ಅನಾಥವಾಗಿ ಅಸಹಾಯ ಸ್ಥಿತಿಯಲ್ಲಿದ್ದ ಒಂದು ಬೆಕ್ಕು ಪರಿವ್ರಾಜಕನಾಗಿದ್ದ ಸನ್ಯಾಸಿಯೊಬ್ಬನ ಎದುರಿಗೆ ನರಳುತ್ತ ಬಿದ್ದುದನ್ನು ಕಂಡಾಗ - ಆತನಲ್ಲಿ ದಯೆ ಉಕ್ಕುತ್ತದೆ.  ಆತ ಆ ಬೆಕ್ಕನ್ನು ಕೈಯ್ಯಿಂದ ಎತ್ತಿ ಉಪಚಾರ ಮಾಡುತ್ತಾನೆ. ತನ್ನ ಕುಟೀರಕ್ಕೆ ಹೊತ್ತು ತರುತ್ತಾನೆ. ಈ ಬೆಕ್ಕಿನ ಜವಾಬ್ದಾರಿ ತನ್ನದು ಅನ್ನಿಸತೊಡಗಿದಾಗ, ತನ್ನ ಬೆಕ್ಕು ಎಂಬ ಮಮಕಾರದಿಂದ - ಬೆಕ್ಕಿನ ಆರೋಗ್ಯ ಸುಧಾರಿಸುವವರೆಗೂ ತಾನೇ ರಕ್ಷಣೆ ಮಾಡಬೇಕು ಅಂದುಕೊಂಡ ಸನ್ಯಾಸಿ, ಬರಬರುತ್ತ... ಬೆಕ್ಕಿನ ಯೋಗಕ್ಷೇಮದ ಚಿಂತೆಯಲ್ಲೇ ಮುಳುಗಿ ಹೋಗುತ್ತಾನೆ. ಸನ್ಯಾಸಿಗೆ - ತನ್ನ ತಪಸ್ಸು ಧ್ಯಾನಗಳೆಲ್ಲ ನಗಣ್ಯವಾಗಿ, ಬೆಕ್ಕಿನ ಧ್ಯಾನವೇ ಪೂರ್ತಿಯಾಗಿ ಆವರಿಸಿಕೊಂಡುಬಿಡುತ್ತದೆ !

ಬೆಕ್ಕಿಗೆ ಕುಡಿಯಲು ಹಾಲು ಬೇಕು; ಅದಕ್ಕಾಗಿ ಹಸು ಸಾಕಿದ. ಹೀಗೆ... ಸನ್ಯಾಸಿಯ ಸಂಸಾರದಲ್ಲಿ - ಬೆಕ್ಕು ಮತ್ತು ಹಸು - ಎರಡಾಯಿತು.
ಆದರೆ, ಸನ್ಯಾಸಿಯ ಧ್ಯಾನ, ಯೋಗಾಭ್ಯಾಸ, ಅಧ್ಯಾತ್ಮ ಚಿಂತನೆ... ಇವೆಲ್ಲ ನಿಂತೇ ಹೋಗುವ ಸ್ಥಿತಿ ಬಂತು. ಬೆಳಗಿನಿಂದ ಸಂಜೆಯವರೆಗೂ ಸನ್ಯಾಸಿಗೆ - ಮನೆವಾರ್ತೆಯೇ ಆಯಿತು. ಬೆಕ್ಕು ಮತ್ತು ಹಸುವಿನ ಉಪಚಾರದಲ್ಲೇ ಸನ್ಯಾಸಿಯು ಮುಳುಗಿಹೋದ.
ಸ್ವಲ್ಪ ದಿನ ಆಗುವಾಗ, ಸನ್ಯಾಸಿಗೆ ಗಾಬರಿಯಾಗತೊಡಗಿತು.

"ಅಯ್ಯಬ್ಬ. ಇದೇನಾಗ್ತಾ ಇದೆ ? ನನಗೆ ಇವೆಲ್ಲ ಆಗೋಹೋಗೋ ಕಸುಬಲ್ಲ. ಇದಕ್ಕೆ ಏನಾದರೊಂದು ಪರಿಹಾರ ಮಾಡಬೇಕು.." ಅಂದುಕೊಂಡ ಸನ್ಯಾಸಿ. ಆದರೆ ಹೇಗೆ ? ಅನ್ನುವ ಚಿಂತೆಯಲ್ಲಿ ಬಿದ್ದ.
ಕೊನೆಗೊಂದು ಉಪಾಯ ಹೊಳೆಯಿತು.

ತನ್ನ ಜೊತೆಗಿದ್ದ ಬೆಕ್ಕು ಮತ್ತು ಹಸುವಿನ ಯೋಗಕ್ಷೇಮ ನೋಡಿಕೊಳ್ಳಲು ಒಬ್ಬ ಹೆಂಗಸನ್ನು ನೇಮಿಸಿಕೊಂಡುಬಿಟ್ಟ. ಅಲ್ಲಿಗೆ ಸಮಸ್ಯೆ ಮುಗಿಯಿತು ಅಂದುಕೊಂಡ.
ಆದರೆ ಹಾಗಾಗಲಿಲ್ಲ. ಹೊಸದಾಗಿ ಸೇರಿಕೊಂಡ ಹೆಂಗಸಿಗೆ ಬೇಕಾದ ವಸತಿ, ಆಹಾರದ ಪೂರೈಕೆಯ ಚಿಂತೆ ಸೇರಿಕೊಂಡಾಗ, ತನ್ನ ಕುಟೀರವನ್ನು ಸ್ವಲ್ಪ ವಿಸ್ತರಿಸಿದ. ಸುತ್ತಮುತ್ತ ಸೊಪ್ಪುಸದೆ, ಹಸಿರು ಬೆಳೆಸಿದ. ಕುಡಿಯುವ ನೀರಿಗಾಗಿ ಬಾವಿ ತೋಡಿಸಿದ.
ಸನ್ಯಾಸಿಯು ಪಕ್ಕಾ ಗೃಹಸ್ಥನಾಗಿಹೋದ.

ಇಷ್ಟೆಲ್ಲ ಪರಿವರ್ತನೆಯನ್ನು ನೋಡಿದ ಊರಿನ ಜನ - ಸುಮ್ಮನಿರ್ತಾರಾ ? ತಲೆಗೊಂದೊಂದು ಟೀಕೆಟಿಪ್ಪಣಿ ನಡೆದು, ಸನ್ಯಾಸಿಯ ವಾರ್ತೆ - ಊರೆಲ್ಲ ಹಬ್ಬತೊಡಗಿತು.
ಸನ್ಯಾಸಿಯ ಮನೆಯಲ್ಲಿ - ಸನ್ಯಾಸಿಯ ಜೊತೆಯಲ್ಲಿ, ಹೆಂಗಸೊಬ್ಬಳು ಇರುವುದನ್ನು ಕಂಡು, ಜನರೆಲ್ಲ ಗುಸುಗುಸು ಶುರುಮಾಡಿದಾಗ, ಆ ಹೆಂಗಸನ್ನು ಅಪವಾದದಿಂದ ಪಾರುಮಾಡುವ ಉದ್ದೇಶದಿಂದ ಸನ್ಯಾಸಿಯು ಅವಳನ್ನು ಮದುವೆ ಆಗಿಯೂಬಿಟ್ಟ. ಅಲ್ಲಿಗೆ ಸನ್ಯಾಸಿ - Classic - ಪೂರ್ಣ ಸಂಸಾರಿ ಆದ.
ಹಲ್ವ ಮಾಡಲು ಹೊರಟು, ಪಾಯಸ ಮಾಡಿದಂತಾಯ್ತು. ಏನೋ Twist ಅಂದುಕೊಳ್ಳುವ ಜಮಾನಾ - ಆಗ ಬಹುಶಃ  ಬಂದಿರಲಿಲ್ಲವೋ ಏನೋ ? ಆದ್ದರಿಂದಲೇ, ಸನ್ಯಾಸಿ - ಕಂಗಾಲಾದ.
"ಏನೋ ಮಾಡಲು ಹೋಗಿ ಏನೋ ಆಯಿತಲ್ಲ ? ತನ್ನಲ್ಲಿ ಹುಟ್ಟಿದ - ಕರುಣೆ ಎಂಬ ಗುಣವೂ ಕೂಡ ತನ್ನನ್ನು ಹಾದಿ ತಪ್ಪಿಸಿತಲ್ಲ ?" ಎಂಬ ಚಿಂತೆ ಶುರುವಾಗಿ, ಬೆಕ್ಕು, ಹಸುಗಳನ್ನು ಆ ಹೆಂಗಸಿಗೇ ಕೊಟ್ಟ ಆ ಸನ್ಯಾಸಿಯು ಎಲ್ಲಿಗೋ ಹೊರಟು ಹೋದ.
ಹೀಗೇ.
ನಮ್ಮೆಲ್ಲರದೂ - ಒಂದು ಬಗೆಯ ಸನ್ಯಾಸೀ ಸಂಸಾರಗಳೇ ಆಗಿವೆ.

ಕರುಣೆ, ದಯೆ, ಹಂಚಿ ತಿನ್ನುವ ಮನೋಭಾವ... ಇವೆಲ್ಲವೂ ಬದುಕನ್ನು ಸುಂದರಗೊಳಿಸುವ ಮೌಲ್ಯಗಳೆನ್ನುವುದರಲ್ಲಿ ಸಂಶಯವಿಲ್ಲ. ಆದರೆ ಅವುಗಳಿಗೆ - ಅಂತಹ ಮೌಲ್ಯಗಳಿಗೂ ಕೂಡ Side Effects ಇರುತ್ತವೆ  ಎಂಬ ಎಚ್ಚರ ತಪ್ಪಲು - ಈ ಸಂಸಾರದಲ್ಲಿ ಅವಕಾಶವೇ ಇಲ್ಲ. ಸಂಸಾರದಲ್ಲಿ ಹೇಗೋ ಮೈಮನಸ್ಸು ತೇಲಿ, ಬಿದ್ದು - ತೇಲುವವರನ್ನು, ಹಲವಾರು ಆಕರ್ಷಣೆಗಳ ಮೂಲಕ - ಅವರವರು ತಲುಪಬೇಕಾದ ದಡದ ಲಕ್ಷ್ಯದಿಂದ ದೂರ ಸೆಳೆದೊಯ್ಯುವ ತೆರೆಗಳು - ಕೊನೆಗೊಮ್ಮೆ, ಸ್ವಲ್ಪಸ್ವಲ್ಪವೇ ಮುಳುಗಿಸುತ್ತ ಹೋಗಬಹುದು.
ಕೊನೆಗೊಮ್ಮೆ, ಗಾಬರಿಯಿಂದ ಸುತ್ತ ನೋಡಿದರೆ ದಡವೇ ಕಾಣದಂತಾಗಿ ಹೋಗುವ ಸಂಸಾರ ಇದು. ತಾವು ಸಂಕಲ್ಪಿಸಿದ್ದ ಬದುಕಿನ ಮೂಲ ಉದ್ದೇಶವೇ ಮರೆಯಾಗಿ ಹೋಗುವಂತೆ ಮಾಡಬಲ್ಲ ದೈತ್ಯ ಶಕ್ತಿ - ಈ ಕಾಲದ ಪ್ರವಾಹಕ್ಕಿದೆ.
ನಮ್ಮ ಯಾವುದೇ ಸಾಮಾಜಿಕ ಚಟುವಟಿಕೆಗಳು - ಇತಿಮಿತಿಯಲ್ಲಿ - ದಿಕ್ಕು ತಪ್ಪಿಸದಂತಿದ್ದರೆ ಮಾತ್ರ  - ನಿಜವಾದ ಆತ್ಮತೃಪ್ತಿ ಸಿಗಬಹುದು.
ಇಲ್ಲವಾದರೆ, ಚಡಪಡಿಕೆಗಳು ಮಿತಿಮೀರಿಹೋದಾಗ, - ಸಂಸಾರಿಯು - ಸನ್ಯಾಸಿಯಾಗುವಂತಾಗಬಹುದು;
ಸನ್ಯಾಸಿಯು - ತನ್ನ ಲಕ್ಷ್ಮಣ ರೇಖೆ ದಾಟಿಹೋದರೆ, - ಸಂಸಾರಿಯಾಗಿ ಬಿಡುವ ಚಮತ್ಕಾರಗಳೂ ಸಂಭವಿಸಿ ಬಿಡಬಹುದು...
ಕಾಯಕದಲ್ಲಿ ತೊಡಗಿಕೊಳ್ಳುವ ಮನಸ್ಸು ಸಂಭ್ರಮಿಸುವ ಬದಲು, ವ್ಯರ್ಥ ತಳಮಳಗಳು ಹೆಚ್ಚಬಹುದು. ಅಲ್ಲವೇ ?

ಅದಕ್ಕಾಗಿ...
ನಮ್ಮ ಮನಸ್ಸಿನ First Circle ನಲ್ಲಿ - ಯಾವುದೇ Delete ಮಾಡುವಂತಹ ಕಸಗಳು ತುಂಬಿಕೊಳ್ಳದಂತೆ  ಸ್ವಲ್ಪ ಎಚ್ಚರದಿಂದ  ಸಾಮಾಜಿಕವಾಗಿ ತೊಡಗಿಕೊಳ್ಳುವವರು ಮಾತ್ರ - ಯಾವುದೇ ಸಹಜೀವನದ ಪ್ರಯೋಜನವನ್ನು ತಾವು ಹೊಂದಿ ಇತರರಿಗೂ ತಲುಪಿಸುವುದರಲ್ಲಿ ಸ್ವಲ್ಪ ಯಶಸ್ಸು ಕಾಣಬಹುದೇನೋ.

ಆದರೆ ಚಂಚಲ ಮನಸ್ಸನ್ನು ನಿಯಂತ್ರಿಸುವಂತಹ ಈ ಬಗೆಯ ಸಾಧನೆಯು ಸುಲಭವೇನಲ್ಲ.

ನಮ್ಮ ವ್ಯಾವಹಾರಿಕ ಉದ್ಯೋಗವೂ ಹಾಗೇ.

ಅದು - ಬರಬರುತ್ತ - ಹೊಟ್ಟೇಪಾಡು ಎಂಬ ಮೂಲ ಆಶಯದಿಂದ ಕ್ರಮೇಣ ದೂರ ಸರಿಯುವುದನ್ನು ನಾವೆಲ್ಲರೂ ಗ್ರಹಿಸಬೇಕಾಗುತ್ತದೆ. ನಮ್ಮ ಬದುಕಿನ ಮಾರ್ಗದಲ್ಲಿ ಎಷ್ಟು ತನ್ಮಯವಾಗಿ ನಾವು ನಡೆಯುತ್ತಿರುತ್ತೇವೆಂದರೆ - ನಡುವಿನಲ್ಲೆಲ್ಲೋ ಗುರಿ ತಲುಪುವ ನೇರ ಮಾರ್ಗವನ್ನು ಬಿಟ್ಟು, ದೂರದ ಕವಲುದಾರಿಯನ್ನು ಹಿಡಿದದ್ದು ನಮ್ಮ ಅರಿವಿಗೇ ಬಂದಿರುವುದಿಲ್ಲ.
ಎಲ್ಲರೂ ಕನ್ನಡಿ ನೋಡಿಕೊಂಡು - "ಅರೆ, ನಾನು ಎಷ್ಟು ಬದಲಾಗಿದ್ದೇನೆ ? ನನ್ನ ಮುಖ ಎಷ್ಟು ಬದಲಾಗಿದೆ ?" ಅಂದುಕೊಳ್ಳುವುದು ಸುಮಾರಾಗಿ ಅದೇ ಅವಧಿಯಲ್ಲಿ. ಮನಸ್ಸು ತಳಮಳಕ್ಕೆ ಒಳಗಾಗುವ ಬದುಕಿನ ಅವಧಿ ಅದು.
ಬುದ್ಧಿಯು ನಮ್ಮನ್ನು ಅಲುಗಿಸಿ ಎಚ್ಚರಿಸುವ ಅವಧಿ ಅದು. ಆಗ ನಾವು ಕನ್ನಡಿ ನೋಡುತ್ತೇವೆ.
ಆದರೆ ಆ ಹೊತ್ತಿನಲ್ಲೂ ಅರ್ಥ ಆಗುವುದಿಲ್ಲ; ಅಥವ ಅರ್ಥ ಮಾಡಿಕೊಳ್ಳುವ ಮಾನಸಿಕ ಸ್ಥಿತಿ
ಇರಬೇಕೆಂದೇನೂ ಇಲ್ಲ. ಆದ್ದರಿಂದ, ಅಲ್ಲಿ ಇಲ್ಲಿ ಓಡಾಡುತ್ತ "ಮುಖ ಗುರುತಿಸಿಕೊಳ್ಳುವ ಸಂಭ್ರಮ" ಇರುತ್ತದೆ.
ಕೊನೆಗೂ ಕಾರ್ಯಕಾರಣ ತಿಳಿಯದ ಅಯೋಮಯ ಸ್ಥಿತಿಯಲ್ಲಿ ದೇಹ ಸಿಂಗಾರದ Beauty Parlor ಗೂ ಹೋಗಿ ಬಾಗಿಲು ತಟ್ಟುತ್ತೇವೆ.
ಅಲ್ಲಿಗೆ ... ಇನ್ನೊಂದು ಕಿರಿಕಿರಿಯನ್ನು ಆಹ್ವಾನಿಸಿ, ಹೊಸ ಕಿರಿಕಿರಿಗೆ ನಮ್ಮನ್ನು ಒಡ್ಡಿಕೊಂಡಂತೆ ಆಗುವುದೂ ಇದೆ.

ರೋಟರಿಯಂಥ ಸಂಸ್ಥೆಗಳು ಹರಿಕತೆಗೆ ಯೋಗ್ಯ ಸ್ಥಳಗಳಲ್ಲ ಎಂಬ ನನ್ನ ಪೂರ್ವ ನಂಬಿಕೆಯನ್ನು ಹುಸಿಮಾಡಿಕೊಳ್ಳುವ ಉದ್ದೇಶದಿಂದ - ಹರಿಕತೆಯ ನೆರಳನ್ನು ಮಾತ್ರ ಪರಿಚಯಿಸುವುದಕ್ಕಾಗಿ ಇಷ್ಟು ಹೊತ್ತು ಸನ್ಯಾಸಿ ಸಂಸಾರದ ಪ್ರಸಂಗವನ್ನು ನಿಮ್ಮೆದುರಿಗೆ ಇಟ್ಟಿದ್ದೇನೆ.

ಎಲ್ಲರೂ ಉದ್ಯೋಗ ನಡೆಸುವುದು ಹೊಟ್ಟೇಪಾಡಿಗಾಗಿ. ಹರಿದಾಸ ಎಂದುಕೊಂಡವರೂ ಕೂಡ.
ಹೌದಾ ? ಹಾಗಾ ? ಅಷ್ಟೇನಾ ? ಎಂದು ಹೊರಗಿನ ಯಾರೂ ನಮ್ಮನ್ನು ಕೆದಕಿ ಕೇಳುವುದಿಲ್ಲ. ಆದರೆ ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಲು ಸಾಧ್ಯವಿದೆ.
"ನಾನು ಕೇವಲ ಹೊಟ್ಟೆಪಾಡಿಗಾಗಿ ದುಡಿಯುತ್ತಿದ್ದೇನಾ ?" ಅಂತ ನಮಗೆ ನಾವೇ ಕೇಳಿಕೊಂಡಾಗ... ಹೊಟ್ಟೇಪಾಡಿಗೆ ಹೊರತಾದ ಇನ್ನೂ ನೂರು ಉದ್ದೇಶಗಳು ಕೂಡ ಇಣುಕುತ್ತವೆ.
ಅದು ಮುಖ್ಯವಾಗಿ - ನಮ್ಮ ಸ್ವಾತಂತ್ರ್ಯದ ಹಂಬಲ ಮತ್ತು ತನ್ನ ಮುಖವನ್ನು ಈ ಭೂಮಿಯಲ್ಲಿ ಅಚ್ಚೊತ್ತಿ ಹೋಗಬೇಕೆಂಬ - ಮನುಷ್ಯರ ಅದಮ್ಯ ಹಂಬಲ. ನಮ್ಮೆಲ್ಲರ ಉದ್ಯೋಗ ಲಾಲಸೆಯ ಹಿಂದೆ ಈ ಕಾರಣಗಳೂ ಇರುತ್ತವೆ.

ಮನುಷ್ಯರಿಗೆ ಹುಟ್ಟಿನಿಂದಲೂ ಅದೇನೋ ಅಭದ್ರತೆ. ಮುಖ್ಯವಾಗಿ, ಅದರಿಂದಾಗಿಯೇ - ತಾನು ಉಳಿಯುವುದಿಲ್ಲ ಅಥವಾ ತಾನು ಸಾಯುತ್ತೇನೆ, ಹೇಗಿದ್ದರೂ ಸಾಯಲೇಬೇಕು ಎಂಬ ಹೊಟ್ಟೆಯೊಳಗಿನ ಚಳಿಯಿಂದಾಗಿಯೇ ಮನುಷ್ಯರಿಗೆ - "ಏನಾದರೂ ಸಾಧಿಸಬೇಕು; ತಾನು ಸತ್ತರೂ - ಈ ಮನುಷ್ಯ ಸಂತಾನವು ಯುಗಯುಗಗಳಲ್ಲೂ ತನ್ನನ್ನು - ತನ್ನ ಮುಖ ಸಹಿತವಾಗಿ  ನೆನಪಿಸಿಕೊಳ್ಳುತ್ತಿರಬೇಕು..." ಅನ್ನುವ ಚಪಲ. ಆದರೆ ಇವೆಲ್ಲವೂ ಗುರಿತಪ್ಪಿದ ಸನ್ಯಾಸಿಯೊಬ್ಬ ತನ್ನ ಸ್ವಕರ್ಮದಿಂದಲೇ ಸಂಸಾರದೊಳಗೆ ಜಾರಿ ಬಿದ್ದಂಥ ಸನ್ನಿವೇಶಗಳಂತೆಯೇ ತೋರುವುದಿಲ್ಲವೆ ?

ಹೀಗಿದ್ದೂ...
ಜನೋಪಯೋಗಿ ಕೆಲಸಗಳಲ್ಲಿ ನಿಸ್ವಾರ್ಥದಿಂದ ತೊಡಗಿಕೊಳ್ಳುವುದು, ಪ್ರತಿಫಲಾಪೇಕ್ಷೆಯಿಲ್ಲದೆ ಪರಸ್ಪರ - ಕಷ್ಟಸುಖಗಳಿಗೆ ಸ್ಪಂದಿಸುವುದು... ಇವೆಲ್ಲವೂ ಸಾಮಾನ್ಯ ಮನುಷ್ಯರ ಕೈಗೆಟಕುವ ಸಾಧನೆಗಳು ಎಂಬುದರಲ್ಲಿ ಸಂಶಯವಿಲ್ಲ.
ಆದರೆ ಯಾವುದೇ ಸೇವೆಯೂ ಕೂಡ ವ್ಯಸನವಾಗಿ, ಚಟವಾಗಿ ಹೋದರೆ, ಬದುಕುಗಳೇ ಕಳೆದುಹೋಗಿ... ಸುಖಕ್ಕಿಂತ ಯಾತನೆಗಳೇ ಹೆಚ್ಚಾಗುವ ಸಾಧ್ಯತೆಯೂ ಇಲ್ಲದಿಲ್ಲ.
ರೋಟರಿಯಂಥ ಸಂಸ್ಥೆಗಳು ಹಲವಾರು ವರ್ಷಗಳಿಂದ ನಿಸ್ವಾರ್ಥದ ಸೇವಾ ಕೆಲಸಗಳಲ್ಲಿ ತೊಡಗಿಕೊಂಡಂತೆ ಕಾಣುತ್ತದೆ. ಇವೆಲ್ಲವೂ ಒಂದರ್ಥದಲ್ಲಿ - "ಮುಖ ಉಳಿಸಿ ಹೋಗುವ" ಪ್ರಯತ್ನಗಳಷ್ಟೇ ಆಗದೆ ಇನ್ನಷ್ಟು ಸ್ವಚ್ಛವಾಗುವ ಸಾಕಷ್ಟು  ಅವಕಾಶಗಳಿವೆ. ಬದುಕು ಕಳೆದುಹೋಗದ ಎಚ್ಚರದಲ್ಲಿ ನಡೆಸಲಾಗುವ - ಅಂಥ ಯಾವುದೇ ಸಮಾಜಸೇವಾ ಕೈಂಕರ್ಯಗಳನ್ನು ಮುಕ್ತವಾಗಿ ಸ್ವಾಗತಿಸುವ ಮತ್ತು ಬೆಂಬಲಿಸುವ.

ಕೀರ್ತಿ, ಹಣ, ಜನಸಂಪಾದನೆ, ಅಧಿಕಾರ... ಇವೆಲ್ಲವೂ ನಮ್ಮ ಮುಖದ ಪ್ರತಿನಿಧಿಗಳು.
ನಾವೇ ಉಳಿಯುವುದಿಲ್ಲ. ಅಂದಮೇಲೆ ಈ  ಮುಖ ಎಷ್ಟು ಕಾಲ ಉಳಿದೀತು?
ಉಳಿಯುತ್ತದೆಯೆ ? ಆದರೂ ನಾವೆಲ್ಲ ಮುಖಕ್ಕೆ ಪ್ರದಕ್ಷಿಣೆ ಬರುತ್ತಲೇ ಇದ್ದೇವೆ. ನಾನೂ ನಿಮ್ಮಂತೆ ಒಂದಷ್ಟು ವರ್ಷ, ಸುಮಾರು ೩೮ ವರ್ಷ ಕಾಲ ಮಂಗಳೂರು ಆಕಾಶವಾಣಿಯಲ್ಲಿ ಎನೌನ್ಸರ್ ಆಗಿ ಉದ್ಯೋಗ ನಿರ್ವಹಿಸುತ್ತ ಮುಖ ಪ್ರದಕ್ಷಿಣೆ ಹಾಕಿದವಳೇ. ಏನು ಮಾಡುತ್ತಿದ್ದೇನೆ ಎಂದು ಯೋಚಿಸಲಿಕ್ಕೂ ವ್ಯವಧಾನ ಇಲ್ಲದ ಅವಧಿ ಅದು!
 
ಸಂಗೀತ, ಹರಿಕತೆ, ನಾಟಕ.. ಮುಂತಾದ ಕಲಾಮಾಧ್ಯಮದಲ್ಲಿ ಅದಾಗಲೇ ಅಭಿರುಚಿ ಬೆಳೆಸಿಕೊಂಡು, ರಾಜ್ಯಾದ್ಯಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದ ನನಗೆ - ಕೇಂದ್ರ ಸರಕಾರದ ಹುದ್ದೆ - ಆಕಾಶವಾಣಿಯಲ್ಲಿ ಉದ್ಯೋಗ ಸಿಕ್ಕಿದಾಗ ತುಂಬ ಸಂತೋಷವಾಗಿತ್ತು. ಅದನ್ನು ಭರಪೂರ ಅನುಭವಿಸಿದ ಖುಶಿ ನನಗಿದೆ. ಪ್ರತೀ ಬಾರಿ, ಆಕಾಶವಾಣಿಯಲ್ಲಿ ನಾರಾಯಣೀ ದಾಮೋದರ್ ಎಂಬ ಶಬ್ದ ಪ್ರಸಾರವಾದಾಗಲೆಲ್ಲ - ಅದೇನೋ ಸಾಧಿಸಿದ ಹುಚ್ಚು ಅನುಭವ ನನಗಾದದ್ದಿದೆ.
ಇದನ್ನೇ ಅಹಂ ತೃಪ್ತಿ ಅನ್ನುವುದು. ನಮ್ಮ ಮುಖಕ್ಕೆ ನಾವೇ ಪ್ರದಕ್ಷಿಣೆ ಬರುವುದೆಂದರೂ ಇದೇ.

ಆಕಾಶವಾಣಿಯಲ್ಲಿ ಮುಖ ಕಾಣಿಸದಿದ್ದರೂ - ಕೇವಲ ಧ್ವನಿಯ ಮೂಲಕವೇ ಶ್ರೋತೃಗಳನ್ನು
ರಂಜಿಸಬೇಕಾದ ವೃತ್ತಿ ನನ್ನದಾಗಿತ್ತು. ಯಾವುದೇ ಭಾವನೆಯನ್ನು ಆಂಗಿಕ ಸಹಾಯವಿಲ್ಲದೆ ಕೇವಲ ಧ್ವನಿಯಿಂದಲೇ ಸಂವಹನ ಸಾಧಿಸುವುದು ನಿಜವಾಗಿಯೂ ಸವಾಲಿನ ಕೆಲಸ. ನನ್ನ ಸೇವಾವಧಿಯ ಉದ್ದಕ್ಕೂ ನನ್ನ ನಿರ್ವಹಣೆಯು ಶ್ರೋತೃಗಳ ಪ್ರಶಂಸೆಗೆ ಪಾತ್ರವಾಗಿತ್ತು ಎಂಬುದೇ ನನಗೆ ಸಿಕ್ಕಿದ ದೊಡ್ಡ ಮುಖ ಪೂಜೆ!

ಇನ್ನು - ಮನುಷ್ಯಸಹಜವಾದ ಮತ್ಸರ, ಪಿತೂರಿ, ಕಾಲೆಳೆಯುವುದು ಇವೆಲ್ಲವೂ ಕಲಾವಿದರಿರುವ ಕಡೆಗಳಲ್ಲಿ ಸ್ವಲ್ಪ ಹೆಚ್ಚು ಎಂದೇ ಹೇಳಬಹುದು. 
ಮನುಷ್ಯಮಾತ್ರರಲ್ಲಿ ಸಾಮಾನ್ಯ ವಿಚಾರ ಅಂತ ಅಂದುಕೊಂಡರೂ ಅಡ್ಡಿಯಿಲ್ಲ.
 
ಒಂದು ಸಾಂಸ್ಕೃತಿಕ ಪರಿಸರದ ಸಂಸ್ಥೆಯಾಗಿ ಆಕಾಶವಾಣಿಗೆ ನಾನು ತಲೆಬಾಗುತ್ತೇನೆ. ನನ್ನ ಬದುಕಿನ ಅತ್ಯಂತ ಆನಂದದ ಕ್ಷಣಗಳನ್ನು ಆಕಾಶವಾಣಿಯಲ್ಲಿ ಮಾತನಾಡುತ್ತ, ಹಾಡುತ್ತ, ಅಭಿನಯಿಸುತ್ತ - ನಾನು ಪಡೆದಿದ್ದೇನೆ.

ಅದಕ್ಕೆ ಕಾರಣವೂ ಇದೆ.
ನಾನು ಉದ್ಯೋಗ ನಡೆಸಿದ್ದು ಕೂಡ ಬರೇ ಹೊಟ್ಟೇಪಾಡಿಗಲ್ಲ. ಮುಖ ಉಳಿಸಿ ಹೋಗುವ ಕೆಲವು ಕೆಲಸಗಳನ್ನು ಉದ್ದೇಶಿತವಾಗಿಯೂ ಅನುದ್ದೇಶಿತವಾಗಿಯೂ ನಾನು ನಡೆಸಿದ್ದರೂ ಕೂಡ - ನನ್ನ ಸ್ವಾತಂತ್ರ್ಯದ ಹಂಬಲಕ್ಕೆ ಆಕಾಶವಾಣಿಯಲ್ಲಿ ಸೃಷ್ಟಿಸಲಾಗುತ್ತಿದ್ದ  ಕೃತಕ ತಡೆಗಳು ನನ್ನನ್ನು ಒಮ್ಮೊಮ್ಮೆ ವಿಚಲಿತಗೊಳಿಸಿದ್ದೂ ಉಂಟು.
ಅಂಥ ಹಲವಾರು - ಸರಕಾರೀ ಅವ್ಯವಸ್ಥೆಗಳಿಂದಾಗಿ, ಮಂಗಳೂರು ಆಕಾಶವಾಣಿಯ ಆಂತರಿಕ ಆಡಳಿತ ಶೈಲಿಯ ಕುರಿತು ಮಾತ್ರ ನನಗೆ ಸ್ವಲ್ಪ ಅಸಮಾಧಾನವಿದೆ. ಆದರೆ,
"ಮೊದಲು ಬಂದ ಕಿವಿಗಿಂತ ಕೊನೆಗೆ ಬಂದ ಕೋಡಿಗೇ ಕಿಮ್ಮತ್ತು ಜಾಸ್ತಿ" ನೀಡಿದರೂ ಕೂಡ - ಕಿವಿಯೇನು ಉದುರಿ ಬೀಳುವುದಿಲ್ಲ. ಆಕಾಶವಾಣಿಯಲ್ಲಿ ನಾನು ಸವೆಸಿದ ಕೊನೆಯ ೩-೪ ವರ್ಷಗಳು ಹೀಗೇ ಇದ್ದವು!
ಒಂದು ರೀತಿಯಲ್ಲಿ - ತಟಸ್ಥ ಎಂದೂ ಅನ್ನಬಹುದು.
ನಮ್ಮ ಭಾರತದ ಸರಕಾರೀ ವ್ಯವಸ್ಥೆ ಎಂಬುದು ವರ್ಷದಿಂದ ವರ್ಷಕ್ಕೆ ಹೇಗೆ ಕುಸಿಯುತ್ತ ಬರುತ್ತಿತ್ತು ಎಂಬುದಕ್ಕೆ ಆಗ ನಾನೂ ಸಾಕ್ಷಿಯಾಗಿದ್ದೆ. ನೀತಿಯೇ ಸೋತಾಗ ವ್ಯಕ್ತಿಗಳು ಅಸಹಾಯಕರಾಗುವುದು ಸಹಜ. ಹೀಗಾಗಿಯೇ "ನನ್ನ ಅಹಂ - ಪೂರ್ತಿಯಾಗಿ ತೃಪ್ತಿಗೊಂಡಿಲ್ಲ" ಎಂದು ನೀವು ಅಂದುಕೊಂಡರೆ - ಅದು ಪೂರ್ತಿ ಸುಳ್ಳಲ್ಲ. ಆದರೆ ಅದೇ ಸತ್ಯವೂ ಅಲ್ಲ. ಅಹಂ ಎಂಬುದಕ್ಕೆ ಪೂರ್ತಿ ತೃಪ್ತಿ ಎನ್ನುವುದು ಅಸಂಭವ. 
ಇತರ ಆಗುಹೋಗುಗಳನ್ನು ಪಕ್ಕಕ್ಕಿಟ್ಟರೆ... ನನ್ನ ಉದ್ಘೋಷಕಿಯ ಉದ್ಯೋಗವು ಮಾತ್ರ ನನಗೆ ಪ್ರತೀ ದಿನವೂ ಸಂತೋಷ ಕೊಡುತ್ತಿತ್ತು; ಆ ದೃಷ್ಟಿಯಿಂದ ಪೂರ್ಣ ತೃಪ್ತಿಯಿಂದಲೇ ನಾನು ನನ್ನ ಸಂಸ್ಥೆಯಿಂದ ನಿರ್ಗಮಿಸಿದ್ದೆ.

ಹೀಗಿದ್ದೂ...
ನಿವೃತ್ತಿಯಾದ ನಂತರ ಕೂತು ಯೋಚಿಸಿದರೆ - "ಪೂರ್ತಿ ತೃಪ್ತಿ ಎಂಬುದೇ ಒಂದು ಕ್ಲೀಷೆ" ಅನ್ನಿಸುತ್ತಿದೆ.
ಇವತ್ತಿನ ಮನುಷ್ಯರು ನಾಯಿಗಳನ್ನು ವಿಪರೀತ ಪ್ರೀತಿಸುವುದನ್ನು ನೋಡುತ್ತೇವೆ. ಅಪ್ಪ ಅಮ್ಮ ಮಗ ಮಗಳು, ಗಂಡ ಹೆಂಡತಿ ಅಜ್ಜ ಅಜ್ಜಿ - ಹೀಗೆ ಮನೆಯ ಸದಸ್ಯರು ಪರಸ್ಪರ ಪ್ರೀತಿಸುವುದು ಕಡಿಮೆಯಾಗುತ್ತ ಅದೇ ಹೊತ್ತಿನಲ್ಲಿ "ನಾಯಿಪ್ರೀತಿ" ಹೆಚ್ಚುತ್ತಿರುವಂತೆ ನನಗೆ ಕಾಣುವುದೂ ಇದೆ.
ದಯವಿಟ್ಟು ತಪ್ಪು ತಿಳಿಯಬೇಡಿ. ನನಗೂ ನಾಯಿ ಇಷ್ಟವೇ. ಪ್ರಾಮಾಣಿಕ ಸ್ವಭಾವ, ನೀತಿ ನಿಯತ್ತು ನಿಷ್ಠೆ ಇರುವ, ದುಷ್ಟ ಮನುಷ್ಯರ ನಡುವೆಯೂ ತಾಳ್ಮೆಯಿಂದ ಸಹಬಾಳ್ವೆ ನಡೆಸುತ್ತಿರುವ ನಾಯಿ - ನಿಜವಾಗಿಯೂ ಪ್ರೀತಿಸಬಹುದಾದ ಪ್ರಾಣಿಯೇ ಹೌದು. ಆದರೆ, ನನ್ನ ಪ್ರಶ್ನೆ ಅದಲ್ಲ.
ಈ ಸ್ವಾರ್ಥೀ ಕಪಟ ಬುದ್ಧಿಯ ಮನುಷ್ಯರು ಅದೇಕೆ ನಾಯಿಯನ್ನು ಮನುಷ್ಯರಿಗಿಂತ ಹೆಚ್ಚು ಪ್ರೀತಿಸುತ್ತಿರಬಹುದು ? ಎಂಬುದೇ ಯೋಚಿಸಬೇಕಾದ ವಿಷಯ.
ನನಗೆ ಅನ್ನಿಸುವುದು ಏನೆಂದರೆ...
ಮನುಷ್ಯನು ಸಂಘ ಜೀವಿ, ಆಂತರ್ಯದಲ್ಲಿ ಭಯಗ್ರಸ್ತ ಜೀವಿ, ಏಕಾಂತಕ್ಕೆ ನಲುಗುವ ಜೀವಿಯೂ ಹೌದು. ಮನುಷ್ಯರ ಸಂಕೀರ್ಣ ಭಾವಗಳೊಂದಿಗೆ ತಿಣುಕಾಡಲು ಹಿಂಜರಿಯುವ ಇಂದಿನ ಪೀಳಿಗೆಯು - ಈ ಕಾರಣದಿಂದಲೇ ತಾನು ಹೇಳಿದಂತೆ ಕೇಳಿಕೊಂಡು ಇರುವ ಪ್ರಾಣಿಗಳನ್ನು ಹೆಚ್ಚು ಆತ್ಮೀಯವಾಗಿಸಿಕೊಳ್ಳುತ್ತಿರಬಹುದೇ? ಲಾಭ ಜಾಸ್ತಿ; ಖರ್ಚು ಕಮ್ಮಿ; ಜವಾಬ್ದಾರಿ ಕನಿಷ್ಠ ಎಂಬ ವ್ಯಾವಹಾರಿಕತೆಯೂ ಇರಬಹುದೆ? ಗೊತ್ತಿಲ್ಲ. 
ಇವೆಲ್ಲದರ ನಡುವೆಯೂ ರೋಟರಿಯಂಥ ಸಂಸ್ಥೆಗಳು ಮನುಷ್ಯರನ್ನೇ ಜೊತೆ ಮಾಡಿಕೊಂಡು ಕೂಡಿ, ಆಡಿ, ಹಾಡಿ, ತಿರುಗಾಡಿ, ತಮ್ಮ ಸ್ವಂತ ರಂಜನೆಯ ಜೊತೆಗೆ ಸಾಮಾಜಿಕ ಕಳಕಳಿಯನ್ನೂ ತೋರುತ್ತ ಸಮಾಜ ಮುಖಿಯಾಗಿ ಚಟುವಟಿಕೆ ನಡೆಸುತ್ತಿರುವುದು - ಬದುಕನ್ನು ಸುಂದರಗೊಳಿಸಿಕೊಳ್ಳುವ ಶ್ರೇಷ್ಠ ಕಾಯಕ ಎನ್ನಬಹುದು.