Sunday, November 30, 2014

ಅಂತರಂಗ - ಬಹಿರಂಗ

  ೧೯೭೬ ನೇ ಇಸವಿ ಡಿಸೆಂಬರ್ ೭ನೇ ತಾರೀಕಿನ ಮಂಗಳವಾರ ದಂದು ನಾನು ಅಧಿಕೄತವಾಗಿ ಉದ್ಘೋಷಕಿಯಾಗಿ ಮಂಗಳೂರು ಆಕಾಶವಾಣಿ ಪ್ರವೇಶಿಸಿದಾಗ "ಕಚ್ಚಾ" ಉತ್ಪನ್ನವಾಗಿರಲಿಲ್ಲ. ನನಗೆ ಅದಾಗಲೇ ಇದ್ದ ಸಾರ್ವಜನಿಕ ಬದುಕಿನ ಪೂರ್ವಾನುಭವ ಮತ್ತು ಅಂದಿನ ಆಯ್ಕೆಯ ವ್ಯವಸ್ಥೆಯೂ ಕೂಡ ಬಲಿಷ್ಠವಾಗಿತ್ತು. ಅದಾಗಲೇ ಸಾರ್ವಜನಿಕ ಬದುಕಿನಲ್ಲಿ ಹಾಡು, ಭಾಷಣ, ಹರಿಕಥೆ...ಇತ್ಯಾದಿ ಪ್ರದರ್ಶನ ನೀಡುತ್ತಿದ್ದು ಮೈಸೂರು ಆಕಾಶವಾಣಿಯಲ್ಲಿ ಹರಿಕಥೆಯ ವಿಭಾಗದಲ್ಲಿ ಅದಾಗಲೇ  ನಾನು ಮಾನ್ಯತೆ ಪಡೆದ ಕಲಾವಿದೆಯಾಗಿದ್ದೆ.

  ಆದರೂ ಎಳಸುತನವಿದ್ದ ನನಗೆ - ಕಲಿಯುವುದು ತುಂಬ ಇತ್ತು. ಆಕಾಶವಾಣಿಯ ಭಾಗವಾಗುವ ದೄಷ್ಟಿಯಿಂದ ನೋಡಿದರೆ ನಾನು ಕಚ್ಚಾ ಮಾಲೇ ಆಗಿದ್ದೆ. ಅದಾಗಲೇ ಧ್ವನಿವರ್ಧಕ ಉಪಕರಣದ ಎದುರಿಗೆ ನೂರಾರು ಬಾರಿ ನಿಂತ ಅನುಭವವಿದ್ದರೂ, ಪ್ರಸಾರ ಕಕ್ಷದ ಧ್ವನಿ ವರ್ಧಕದ ಬಳಕೆಗೂ ವೇದಿಕೆಯ ಧ್ವನಿ ವರ್ಧಕದ ಬಳಕೆಗೂ ಸೂಕ್ಷ್ಮ ವ್ಯತ್ಯಾಸವಿತ್ತು. ಆರಂಭದಲ್ಲಿ ಬೆಂಗಳೂರಿನ ವೈದೇಹಿ, ಮಾಲತಿ ಶರ್ಮ ಮುಂತಾದ ನನ್ನ ಹಿರಿಯ ಸಹೋದ್ಯೋಗಿಗಳಿಂದ, ಅನಂತರ ಮಂಗಳೂರಿನ ನನ್ನ ಹಿರಿಯ ಸಹೋದ್ಯೋಗಿ ಶ್ರೀ ಶಂಕರ್.ಎಸ್.ಭಟ್ ಅವರ ಮಾರ್ಗದರ್ಶನದಲ್ಲಿ ನನ್ನ ಧ್ವನಿಯನ್ನು ಪಳಗಿಸಿಕೊಳ್ಳುತ್ತ ಬಂದೆ. ಮಾತನಾಡುತ್ತ, ನಾನೇ ಅದನ್ನು ಧ್ವನಿ ಮುದ್ರಿಸುತ್ತ ಮತ್ತು ಅದನ್ನು ನಾನೇ ಕೇಳುತ್ತ ಧ್ವನಿಯ ಅಪಾರ ಸಾಧ್ಯತೆಗಳನ್ನು ಮತ್ತು  ಸೂಕ್ಷ್ಮ ಸಂಗತಿಗಳನ್ನು ಅರ್ಥ ಮಾಡಿಕೊಳ್ಳುತ್ತ ಬಂದೆ.

ಆಕಾಶವಾಣಿಗೆ ಲಕ್ಷಾಂತರ ಶ್ರೋತೃಗಳಿದ್ದಾರೆ. ಮೈಕಿನ ಮುಂದೆ ಕುಳಿತ ಉದ್ಘೋಷಕರು ಈ ವಿಚಾರವನ್ನು ಮೊತ್ತಮೊದಲು ಮರೆಯಬೇಕು. ಯಾರೋ ಒಬ್ಬನೇ ಒಬ್ಬ ಮಿತ್ರನೊಂದಿಗೆ ಮಾತನಾಡುತ್ತಿದ್ದೇನೆ ಎಂಬ ಭಾವವನ್ನು ತುಂಬಿಕೊಳ್ಳಬೇಕು. ಒಬ್ಬ ಉದ್ಘೋಷಕ ಆಕಾಶವಾಣಿಯಲ್ಲಿ ಸಂಬೋಧಿಸುವಾಗ, ಅಲ್ಲಿ ಆತ್ಮೀಯ ಬಂಧುತ್ವದ ಭಾವವೇ ಜೀವಾಳವಾಗಿದೆ. ಭೌತಿಕವಾದ "ಹಗ್ಗು- ಮಗ್ಗು"ಗಳಲ್ಲಿ ಜಗ್ಗಿ ಕುಗ್ಗಿ ಹೋಗುತ್ತಿರುವ ಇಂದಿನ ಪೀಳಿಗೆಯವರಿಗೆ ನುಡಿ ಭಾವಕ್ಕೆ ಆಂತರ್ಯದ ಪ್ರೀತಿ ಹೊದೆಸುವ ತಾಳ್ಮೆಯಾಗಲಿ ನಾಜೂಕುತನವಾಗಲಿ ಮರೆತುಹೋದಂತಾಗಿದೆ. ಹಾಗಾಗಬಾರದು. ಮಾತು - ಹೊಡೆದಂತಿರಬಾರದು; ಮಿಡಿದಂತಿರಬೇಕು. "ನಿನ್ನೊಡನೆ ನಿನಗಾಗಿಯೇ ನಾನು ಮಾತನಾಡುತ್ತಿದ್ದೇನೆ" ಎಂಬ ಧ್ವನಿಯುಪಚಾರ ವು ಉದ್ಘೋಷಕರ ಯಶಸ್ಸಿನ ಪ್ರಥಮ ಸೋಪಾನ. ನಮ್ಮ ಧ್ವನಿಯಲ್ಲಿ "HOMELY" ಸ್ಪರ್ಶ ಬೇಕು. ಹಾಗಾದಾಗಲೇ ರೇಡಿಯೋ ಎಂಬುದು ಪ್ರತೀ ಮನೆಯ ಸದಸ್ಯನಾಗಲು ಸಾಧ್ಯ. ಅಧಿಕಾರವಾಣಿಯಿಂದ ಅಪ್ಪಣೆ ಕೊಡಿಸುತ್ತ ಯಾರನ್ನಾದರೂ ಸ್ವಾಧೀನದಲ್ಲಿಡಲು ಸಾಧ್ಯವೇ ? ಸ್ನೇಹ ಭಾವ ಒಂದಿದ್ದರೆ ನಿಮ್ಮ "ವಿಚಾರವನ್ನು" - ಒಪ್ಪದಿದ್ದರೂ ಮಾತಿನ ಆರ್ದ್ರ ಲಹರಿಯನ್ನು ಆನಂದಿಸದೆ ಇರಲಾರರು - ಅಲ್ಲವೇ?

  ಬಹು ದೀರ್ಘ ಕಾಲ - ಬಗೆ ಬಗೆಯ ಉದ್ಘೋಷಣೆಗಳನ್ನು, ನಿರೂಪಣೆಗಳನ್ನು ಕೇಳಿ, ನೋಡಿದ ನನ್ನ ಅನುಭವವನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದೂ ನನ್ನ ತುಡಿತಗಳಲ್ಲ್ಲಿ ಒಂದು. ಆದ್ದರಿಂದಲೇ ಮಾತಿನ ಕಲೆಯನ್ನು ಬಗೆದು ನೋಡುವ ಮತ್ತು ಅಲ್ಲಿ ನಾನು ಕಂಡದ್ದನ್ನು ನಿಮಗೂ ಹೇಳುವ ಮನಸ್ಸಾಗಿದೆ.

  ಕೇಳುವವರಿಹರೆಂದು ನಾ ಬಲ್ಲೆ  -  ಓದುವವರೂ ಇಹರೆಂದು ಬಲ್ಲೆ. ಆದ್ದರಿಂದಲೇ "ಬಹುಜನ ಹಿತಾಯ ಬಹುಜನ ಸುಖಾಯ" ಎಂಬ ಆಕಾಶವಾಣಿಯ ಧ್ಯೇಯವಾಕ್ಯದ ಆಶ್ರಯದಲ್ಲಿ ಸುದೀರ್ಘಕಾಲ ಮಾತನಾಡುತ್ತ ಆಡುತ್ತ ನನ್ನ ಅರಿವಿಗೆ ಬಂದ ಮತ್ತು ನಾನು ಅರಗಿಸಿಕೊಂಡ ಎಷ್ಟೋ ರೋಚಕ ಅನುಭವಗಳನ್ನು ನಿಮ್ಮ ಮುಂದೆ ಇಡಲಿದ್ದೇನೆ.

ನನ್ನ ಬ್ಲಾಗಿನ ಹಲವಾರು ಬರಹಗಳಲ್ಲಿ ಅಂತಹ ಅನುಭವಗಳು ಸಾಂದರ್ಭಿಕವಾಗಿ ಹೊಕ್ಕು ಹೊರಡುತ್ತವೆ.... ಆಸಕ್ತರು ಒಂದೊಂದಾಗಿ ಓದುತ್ತ ಹೋಗಬಹುದು.

                                            *****     *****     *****     *****


Monday, November 17, 2014

ಒಂದು ಪತ್ರ...ಪ್ರೀತಿಯಿಂದ

ಪ್ರಿಯ ಓದುಗರೇ,
ಸುಮಾರು ನಾಲ್ಕು ಸಂವತ್ಸರದ ಬಳಿಕ ಮತ್ತೆ ಬ್ಲಾಗಿಸುತ್ತಿದ್ದೇನೆ. ೨೦೧೫ ರ ಮಾರ್ಚ್ ತಿಂಗಳಿಂದ ನಾನು ನಿವೄತ್ತಿಯ ಸುಖದತ್ತ ಮುಖ ಮಾಡಲಿದ್ದೇನೆ. ಇನ್ನು ಬಿಡುವಾಗಿ, ನನ್ನ ಮಾಧ್ಯಮದ ಬದುಕಿನ ಒಂದೊಂದೇ ಅನುಭವಗಳನ್ನು ನಿಮ್ಮ ಮುಂದಿಡುತ್ತೇನೆ. ಆಗದೆ ?...

 ನಿಮ್ಮ.. ನಾರಾಯಣಿ.