Saturday, September 19, 2015

ನಾನೊಲಿದಂತೆ (7) - ಜಾಲತಾಣಗಳೆಂಬ ಪಟ್ಟಾಂಗ ಚಾವಡಿ

   ಸಹಜ ಪ್ರೀತಿಯಿಲ್ಲದ ಸಾಮಾಜಿಕ ಪರಿಸರದಲ್ಲಿ ನಾವಿಂದು ಬದುಕುತ್ತಿದ್ದೇವೆ. ಇಡೀ ಊರೇ ಕುಟುಂಬದಂತಿದ್ದು ಪರಸ್ಪರ ಕಷ್ಟ ಸುಖಗಳಲ್ಲಿ ಪಾಲ್ಗೊಳ್ಳುತ್ತಿದ್ದ ಹಳೆಯ ಗಮಾರತ್ವ(?)ವನ್ನು ಬಿಟ್ಟು ನಾವೆಲ್ಲರೂ ಈಗ SMART ಆಗುತ್ತಿದ್ದೇವೆ! ನಮ್ಮ ಪ್ರೀತಿಯ ವ್ಯಾಖ್ಯೆಯೂ ಬದಲಾಗಿದೆ. ನಮ್ಮ ಕಿಸೆಭಾರವು ತಪ್ಪುಗಳನ್ನೂ ಒಪ್ಪು ಎಂದು ಸಿದ್ಧಪಡಿಸುತ್ತ - ತಲೆಭಾರದ ಸಂತತಿಯನ್ನು ಹುಟ್ಟು ಹಾಕುತ್ತಿದೆ. ಅಂತಹ ಟೊಳ್ಳು ಗಟ್ಟಿಗಳನ್ನು ಸಜ್ಜನರೂ - ದಾಕ್ಷಿಣ್ಯದಿಂದ ಸಹಿಸಿಕೊಳ್ಳುತ್ತಿದ್ದಾರೆ! ಇಂದಿನ ಮಾತು ವರ್ತನೆಗಳಲ್ಲಿ ಈ ಪ್ರವೃತ್ತಿಯು ಸ್ಪಷ್ಟವಾಗಿ ಕಾಣುತ್ತಿದೆ. ಮನೋವಾಕ್ಕಾಯಗಳಲ್ಲಿ ವಾಸಿಸುತ್ತಿದ್ದ "ಪ್ರೀತಿ" ಎಂಬ ಅನೂಹ್ಯ ಸ್ವಭಾವವು ಹೃದಯಕ್ಕೆ ಇಳಿದು, ಈಗ ಬೆರಳಿನ ತುದಿ ಸೇರಿ - ಜಾರಿ ಬೀಳುವ ಹಂತದಲ್ಲಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಇಣುಕಿ ನೋಡಲು ಆರಂಭಿಸಿದ್ದ ನನಗೆ ಅಲ್ಲಿ ಹರಿದಾಡುವ ವಿಷಯಗಳು, ಮನೋಸ್ಥಿತಿಯನ್ನು ನೋಡುವಾಗ "ನಾವು ಹೋಗುತ್ತಿರುವುದು ಎಲ್ಲಿಗೆ?" ಎಂಬ ಪ್ರಶ್ನೆಯೂ ಮೂಡುತ್ತಿದೆ. "ನನ್ನ POST ನ್ನು LIKE ಮಾಡಿ" ಎನ್ನುವ, "ನನ್ನ ಮಗಳಿಗೆ ಕೃಷ್ಣನ ವೇಷದ ಸ್ಪರ್ಧೆಯಲ್ಲಿ ಬಹುಮಾನ ಬಂದಿದೆ..." ಎಂಬಂತಹ ಸಾಮಾನ್ಯ ಬಯಕೆಯ ಸಾಧಕರು,...ತಮ್ಮ ಸಿದ್ಧಾಂತವನ್ನು ಜಾಹೀರುಗೊಳಿಸಲು ಹಟತೊಟ್ಟು ಯತ್ನಿಸುವವರು, ಹಿಂದಿನ ಮಹಾಸಾಧಕರ ಚಿತ್ರಗಳ ಹೆಗಲೇರಿ ನಿಂತು ದೊಡ್ಡವರಾಗಲು ಯತ್ನಿಸುವವರು, ವ್ಯಕ್ತಿ-ಜಾತಿಯ ಗುಂಪುಗಳನ್ನು ಮಾಡಿಕೊಂಡು ಪರಸ್ಪರ ಬೆನ್ನು ತಟ್ಟಿಕೊಳ್ಳುವವರು...ಹೀಗೆ ನೂರಾರು ವೇಷಗಳಿಂದ ದಿನದಿನವೂ ಕುಬ್ಜ ಕಾಲಕ್ಷೇಪವಾಗಿ ಬಿದ್ದು ಹೊರಳುತ್ತಿರುವ ಜಾಲತಾಣಗಳನ್ನು ನಾವು ಗಮನಿಸುತ್ತಿದ್ದೇವೆ.



    ಸದ್ಯಕ್ಕೆ ನಮ್ಮ ಭಾರತದಲ್ಲಿ ಮನೆಮನೆಯಲ್ಲೂ ಸಾಮಾಜಿಕ ಜಾಲತಾಣದ ಉಪದ್ವ್ಯಾಪವು ಇನ್ನೂ ಆರಂಭವಾಗಿಲ್ಲ. ಆದರೆ ಪುಸ್ತಕಗಳನ್ನು ಓದುವುದನ್ನೇ ಮರೆತ ಇಂದಿನ ಯುವಜನಾಂಗದ ದೊಡ್ಡ ಭಾಗವು ಜಾಲತಾಣಗಳ ತೆವಲು-ಅಮಲಿಗೆ ಬಲವಾಗಿ ಸಿಲುಕಿಕೊಂಡಿದೆ ಎನ್ನುವುದೇ ಆತಂಕದ ವಿಷಯ. "ಮಕ್ಕಳು ಹೇಗೋ ಬೆಳೆಯುತ್ತಾರೆ" ಎನ್ನುವ ಮತ್ತು "ಮಕ್ಕಳು ಏನಾದರೂ ಮಾಡಿಕೊಂಡಿರಲಿ; ನಮ್ಮ ತಂಟೆಗೆ ಬರದಿರಲಿ" ಎನ್ನುವ ಪಾಲಕ - ಮನೆಮಂದಿಯ ಹೊಣೆಗೇಡಿತನದಿಂದಲೇ - ಯಾವುದೋ ಒಂದು ಅವಲಂಬನೆಗಾಗಿ - ತರತಮದ ಅರಿವಿಲ್ಲದ ಅಪ್ರಬುದ್ಧರೂ ಜಾಲತಾಣದ ಜಾಲದಲ್ಲಿ ಸಿಲುಕಿ ಹಾದಿ ತಪ್ಪುತ್ತಿದ್ದಾರೆ ಎಂದೂ ಅನ್ನಿಸುತ್ತದೆ. ತಮಗೆ ಗೊತ್ತಿಲ್ಲದ ವಿಷಯಗಳಲ್ಲೂ ಪ್ರಕಾಂಡ ಪಾಂಡಿತ್ಯ ಮೆರೆಯುತ್ತಿರುವ ಕೆಲವು ತಾಣವೀರರನ್ನು ನೋಡಿದರೆ "ದೇವರೇ, ಇವರನ್ನು ಕ್ಷಮಿಸು; ಇವರಿಗೆ ತಾವು ಏನು ಮಾಡುತ್ತಿದ್ದೇವೆಂಬುದೇ ತಿಳಿದಿಲ್ಲ" ಎಂದೂ ಅನ್ನಿಸುತ್ತದೆ. ಜಾಲತಾಣವನ್ನು ಕಸದ ಬುಟ್ಟಿಯಾಗಿಸುವ ಪ್ರಯತ್ನದಲ್ಲಿ ಇಂಥವರ ಪಾತ್ರವು ಬಲು ದೊಡ್ಡದು. ಜಾಲತಾಣದ ಸದುಪಯೋಗವನ್ನು ಎಷ್ಟು ತಲೆಗಳು (ಬಲ-ಎಡ!) ಪಡೆಯುತ್ತಿವೆ ಎಂಬುದು ಚಿಂತನೆಗೆ ಯೋಗ್ಯವಾದ ವಿಷಯ.

   40-50 ವರ್ಷಗಳ ಹಿಂದೆ ಒಂದು ರೇಡಿಯೋ ಎಂಬುದಿತ್ತು. ಅದೂ ಕೆಲವು ಮನೆಗಳಲ್ಲಿ. ಅಂದು ಸುದ್ದಿಯಿಲ್ಲದೆ, ಸದ್ದಿಲ್ಲದೆ ಇದ್ದ ಚೆಂದದ ಸಾಮಾಜಿಕ ಬದುಕು - ತನ್ನಷ್ಟಕ್ಕೆ ಮೌನವಾಗಿತ್ತು. ಸಾಮಾಜಿಕ ತಳಮಳಗಳು ಕನಿಷ್ಠ ಪ್ರಮಾಣದಲ್ಲಿದ್ದವು. ಊರಿನ ಒಬ್ಬ ವ್ಯಕ್ತಿಗೆ ಸಂಕಟವು ಎದುರಾದರೆ ನೆರೆಹೊರೆಯವರು ಅವರಿಗೆ ವಾಸ್ತವವಾಗಿ (RIP...OMG ಇತ್ಯಾದಿ ಶಾಬ್ದಿಕವಾಗಿ ಅಲ್ಲ!) ಹೆಗಲು ಕೊಡುತ್ತಿದ್ದ ಕಾಲವದು. ಜಾಲತಾಣದ ಇಂದಿನ ಬದುಕು ಹೇಗಿದೆ? ಇಂದು ನಮ್ಮ ನೆರೆಮನೆಯವರ ಪರಿಚಯವೂ ನಮಗಿಲ್ಲ. ಆದರೆ ನಮ್ಮ ಕಬಂಧಬಾಹುವು ಗುರುತು ಪರಿಚಯವಿಲ್ಲದ ಯಾರ್ಯಾರನ್ನೋ ಗೆಳೆಯರೆಂದು ಭ್ರಮಿಸಿ ದಿನವೂ ಮುಟ್ಟಿ ಮುಟ್ಟಿ ಬರುತ್ತಿದೆ! ಪ್ರತ್ಯಕ್ಷ ಸಂವಹನವು ಹುಸಿಯಾಗಿ - ಪರೋಕ್ಷವೇ ನಿಜವೆನ್ನಿಸುತ್ತಿದೆ. ಮನಸ್ಸನ್ನು ನಿರ್ದಯವಾಗಿ ಹಿಂಡುವ, ಹೃದಯಹೀನ ಏಕತಾನತೆಯ ಪೇಟೆ ಸಂಸ್ಕೃತಿಯು ಈಗ ಪ್ರವಾಹದಂತೆ ಎಲ್ಲೆಡೆಗೂ ನುಗ್ಗುತ್ತಿದೆ. ಅಸಭ್ಯತೆಗೆ ಸಭ್ಯತೆಯ ಉಡುಪು ತೊಡಿಸಿ ಸಭ್ಯರಾದಂತೆ ಹಿಗ್ಗುತ್ತಿರುವ ನಮಗೆ ಅನರ್ಹವನ್ನೆಲ್ಲ Grace marks ಕೊಟ್ಟು ಅರ್ಹರಾಗಿಸುವ ವ್ಯಾಧಿಯೂ ಬಡಿದಿದೆ! ಎಲ್ಲವೂ SMART! ಎಲ್ಲರೂ SMART! ಎಲ್ಲರೂ "ಯಂತ್ರವಾಹಕರು". ಆದರೆ ಮುಖಗೋಡೆಯ ಮೇಲೆ ಕುಣಿಯುತ್ತಿರುವ ಹೆಚ್ಚಿನ ಛದ್ಮವೇಷಗಳು - ಆವೇಶವಿಲ್ಲದ, ಕಾರ್ಯಸಾಧನೆಗೆ ತೊಡಗದ ಬರಿಯ ಸುದ್ದಿಪ್ರಿಯ ವೇಷಗಳು! ನಿತ್ಯದ ಯಾಂತ್ರಿಕ ಬದುಕನ್ನು ಇಂದು ಯಂತ್ರಗಳೇ ಆಳುತ್ತಿವೆ. ಪ್ರೀತಿಯಿಲ್ಲದ ಶಬ್ದಗಳು "LIKE" ಗಳಾಗಿ ಹೊರಳಾಡುತ್ತಿವೆ.



   ಮೊನ್ನೆ ಪೇಟೆಗೆ ಹೋದಾಗ ನನಗೆ ಕಂಡ ಕೆಲವು ದೃಶ್ಯಗಳು "ಇದು ಯಾಕೆ ಹೀಗೆ?" ಎಂಬ ಪ್ರಶ್ನೆಗಳನ್ನು ಮೂಡಿಸಿದ್ದಂತೂ ಸತ್ಯ. ನಾನು ಕಂಡ ನೂರಾರು ಜನರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ, ವಿಚಿತ್ರ ಭಂಗಿಯಲ್ಲಿ, ತಮ್ಮ MOBILE ನೊಂದಿಗೆ ಆಟವಾಡುತ್ತಿದ್ದರು. ಕೆಲವರು ಮಾತನಾಡುತ್ತಿದ್ದರೆ, ಕೆಲವರು ಅದರಲ್ಲಿ ಏನನ್ನೋ ದಾಖಲಿಸುತ್ತಿದ್ದರು. ಅತಿಥಿಯೊಬ್ಬರನ್ನು ನಿರೀಕ್ಷಿಸುತ್ತ ನಿಂತಿದ್ದ ನನ್ನ ಪಕ್ಕದಲ್ಲೇ ದುಃಖಾರ್ತನಾಗಿ MOBILE ನಲ್ಲಿ ಮಾತಾಡುತ್ತಿದ್ದ ಒಬ್ಬ ವ್ಯಕ್ತಿಯು ಅಂದು ಸುಮಾರು ಅರ್ಧ ಗಂಟೆಗೂ ಮಿಕ್ಕಿ ತನ್ನ ಪ್ರೀತಿಯೊಡನೆ ಚೌಕಾಶಿ ನಡೆಸುತ್ತಿತ್ತು. ನೋಡಿ ಕೇಳಿದ ನಾನು ಅಲ್ಲಿಂದ ಹೊರಡುವಾಗ "ಶಬ್ದಪ್ರೀತಿಯು ಸರ್ವವ್ಯಾಪಿ" ಎಂದು ನನಗೆ ಖಾತ್ರಿಯಾಯಿತು. ತಮಾಷೆ ಎಂದರೆ, ಇಂದಿನ ಪ್ರೀತಿಗೂ ಊರು ಸುತ್ತುವ ಹುಚ್ಚು! ಬಯಲು ಆಲಯದೊಳಗೋ ಆಲಯವು ಬಯಲೊಳಗೋ ಎಂದು ಅಂದು ನನಗೆ ತಿಳಿಯಲಾಗದೆ ಹೋಗಿತ್ತು. ಹೊಸ್ತಿಲು ದಾಟಿ ಮನೆಯ ಒಳಗೆ ಬಂದ ಕೂಡಲೇ - ಹೆಚ್ಚಾಗಿ ಮಾಯವಾಗುವ "MOBILE ಪ್ರೀತಿ!" ಗಳಲ್ಲಿ ಅಂದು ನನ್ನ ಸ್ನಾನವಂತೂ ಆಗಿತ್ತು. ನಮಗೆ ನಾವೇ ಗಾಯ ಮಾಡಿಕೊಳ್ಳುವ ಇಂತಹ ಸುದೀರ್ಘ ಬೀದಿ ಪ್ರೇಮಗಳಿಗೆಲ್ಲ ವೈಜ್ಞಾನಿಕ ಸೌಲಭ್ಯಗಳ ಉಪಯೋಗವಾಗಬೇಕೆ? ಜಕ್ಕವಕ್ಕಿಗಳ ಶಾಬ್ದಿಕ ಪ್ರೀತಿಯು ಯಶಸ್ಸು ಕಂಡರೆ ಸಂತೋಷ; ಇಲ್ಲವಾದರೆ?

   "ಮೀನಿನ ಹೆಜ್ಜೆಯನ್ನಾದರೂ ಗುರುತಿಸಬಹುದು; ಆದರೆ ಮನುಷ್ಯನ ಮನಸ್ಸನ್ನು ತಿಳಿಯಲಾಗದು" ಎಂಬುದು ಹಳೆಯ ನಾಣ್ನುಡಿ; ಸಾರ್ವಕಾಲಿಕ ಅನುಭವಾಮೃತ. ಹೀಗಿರುವಾಗ ದಿನಕ್ಕೊಂದು ವೇಷ ಕಟ್ಟುವ FACE BOOK ನ್ನು ಷೋಡಶೋಪಚಾರಗಳಿಂದ ಪೂಜಿಸುವುದಾದರೂ ಏಕೆ? FACE IS THE MIRROR OF MIND ಎನ್ನುತ್ತಾರೆ. ಆದರೆ MAKE UP ಇಲ್ಲದಂತಹ - ಅಲ್ಪಸ್ವಲ್ಪ ನಿಜರೂಪ ದರ್ಶನವಾಗುತ್ತಿದ್ದ ಕಾಲದ ಮಾತದು. ಇಂದಿನ Face Book ನಲ್ಲಿ ಎಷ್ಟೋ ಜನರು ಹಲವಾರು ಕಾರಣಗಳಿಂದ ತಮ್ಮ ವಿಳಾಸದ ಮುಖವನ್ನೇ ತೋರಿಸುವುದಿಲ್ಲ. (ಅವರ ವಿಚಾರಗಳನ್ನೇ ಮುಖ - ಎಂದು ಅಂದುಕೊಳ್ಳಬೇಕು!) ಒಂದೊಮ್ಮೆ ಮುಖ ತೋರಿಸಿದರೂ - ಮುಖ ನೋಡಿ ಮನಸ್ಸನ್ನು ಅಳೆಯುವ ಶಕ್ತಿಯು ಎಲ್ಲರಿಗೂ ಇರುವುದೂ ಇಲ್ಲ. ನನಗಂತೂ ಇಲ್ಲ. ಹೀಗಿರುವಾಗ Face Book ಎನ್ನುವುದು ಎಷ್ಟು ಸಾಚಾ? ಎಂದೂ ಯೋಚಿಸಬೇಕು. ಅಲ್ಲಿ ಮೂಡುವ ಬಹುಪಾಲು ವಿಷಯಗಳು ಯಾವುದೇ ಸಾಕ್ಷಿಯಿಲ್ಲದ, ಪರಾಂಬರಿಸದೆ ದಾಖಲಿಸುವ ಸ್ವಯಂ ಪ್ರಮಾಣೀಕೃತ ವಿವರಗಳು. ಅಲ್ಲಿನ ವಿವರಗಳನ್ನು ಅವಲಂಬಿಸಿ ಆಕಾಶವಾಣಿಯಲ್ಲಿ ಮಾತನಾಡಿ, ನಾನೊಮ್ಮೆ ಎಡವಿದ್ದೆ. ನಾನು ಕಂಡಂತೆ, ಯಾವುದೇ ಉತ್ತರದಾಯಿತ್ವವಿಲ್ಲದ ಸಚಿತ್ರ ಶಬ್ದಸಂತೆಯದು! ಆದರೆ Face Book ನ ಒಂದಷ್ಟು ವ್ರತಧಾರಿಗಳು ಅದನ್ನು ಪವಿತ್ರವೆಂಬಂತೆ ಆರಾಧಿಸುತ್ತ ತಮ್ಮ ರಸಮಯ ಬದುಕನ್ನು ನಷ್ಟಗೊಳಿಸಿಕೊಳ್ಳುತ್ತಿದ್ದಾರೆ ಎಂಬುದಂತೂ ನನ್ನಂಥವರಿಗೆ ಎದ್ದು ಕಾಣುವ ವಿಷಯ. ಆದರೆ ಪರಿವರ್ತನಶೀಲವಾದ ಈ ಪ್ರಕೃತಿಯಲ್ಲಿ ಯಾವುದೂ ಸ್ಥಾಯಿಯಲ್ಲ; ಎಲ್ಲವೂ ಹಾರಿ ಬೀಳುವ, ಬಿದ್ದು ಏಳುವ ನಿರಂತರ ಅಲೆಗಳು. ಆದ್ದರಿಂದ ಕೆಲವು ಚರ್ಯೆಗಳನ್ನು ನೋಡುತ್ತ ಕಾಯಬೇಕು.




    ಹಿಂದೆ ನನ್ನ ಅಜ್ಜನ ಮನೆಯಲ್ಲಿ ಸಂಜೆಯ ಹೊತ್ತಿಗೆ ಅಕ್ಕಪಕ್ಕದ ಮನೆಯ ಹೆಂಗಸರೆಲ್ಲರೂ ಹೆಬ್ಬಾಗಿಲ ಜಗಲಿಯಲ್ಲಿ ಕೂತು ಪಟ್ಟಾಂಗ ಹೊಡೆಯುತ್ತಿದ್ದುದನ್ನು ನಾನು ನೋಡಿದ್ದೇನೆ. "ಅವಳ ಗಂಡ ಯಾರನ್ನೋ ಇಟ್ಟುಕೊಂಡಿದ್ದಾನೆ; ಅವಳು ಯಾರ ಜೊತೆಗೋ ಓಡಿಹೋದಳು; ಅವಳು ಅಂಬಡು ಮಕ್ಕಳನ್ನು ಹೆತ್ತಳಂತೆ; ಅವರ ಮಗನಿಗೆ ಶಾಲೆಯ ಪಾಠ ತಲೆಗೆ ಹತ್ತದೆ ಬೆಂಗಳೂರಿನ ಹೋಟೇಲಿಗೆ ಕೆಲಸಕ್ಕೆ ಕಳಿಸಿದರಂತೆ; ಅವಳ ಹೆರಿಗೆ ಕಷ್ಟ ಆಗಿ ದೈವಕ್ಕೆ ಹರಕೆ ಹೊತ್ತ ಮೇಲೆ ಹೆರಿಗೆ ಆಯಿತಂತೆ...." ಇಂತಹ ರಂಜನೀಯ ವಿಷಯಗಳು ಅಂದಿನ ಪಟ್ಟಾಂಗ ಚಾವಡಿಯಲ್ಲಿ ಪ್ರಸ್ತಾಪವಾಗುತ್ತಿದ್ದವು. ಇಂದಿನ FACEBOOK ಕೂಡ ಇಂತಹುದೇ "High Fi ಪಟ್ಟಾಂಗ ಚಾವಡಿ" ಎಂದು ನನಗನಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಹಿಂದೆ ಹೆಂಗಸರು ಮತ್ತು ಗಂಡಸರು ತಮ್ಮ ತಮ್ಮದೇ  ವೃತ್ತದಲ್ಲಿ ಪ್ರತ್ಯೇಕವಾಗಿ ಪಟ್ಟಾಂಗ ಹೊಡೆಯುತ್ತಿದ್ದರೆ ಇಂದು ಸರ್ವಸಮಾನತೆ(!)ಯಿದೆ.

    ನಮ್ಮ ಬದುಕಿನ ಒಂದೊಂದು ಕ್ಷಣವೂ ಎಷ್ಟು ಅಮೂಲ್ಯ !! ಅಂತಹ ಬದುಕನ್ನು ನಾವು ಪೋಕುಬಾರದ ವಿಷಯಗಳಲ್ಲಿಯೇ ಕಳೆದುಬಿಡಬೇಕೆ? ಇಂದಿನ ಯುವಜನರು ಅವರವರ ಅಂಗೈ ನೋಡಿಕೊಳ್ಳುತ್ತ ತಮ್ಮ ಕರಸ್ಥಲದಲ್ಲಿ ಇಂಬುಗೊಂಡ Mobile ನ ಜೊತೆಗೆ ಯೋಗಭಂಗಿಯಲ್ಲಿರುವುದನ್ನು ಕಂಡಾಗಲೆಲ್ಲ ಮೊದಮೊದಲು ನನಗೆ ಕುತೂಹಲವೆನಿಸುತ್ತಿತ್ತು. ಎಚ್ಚರವಾಗಿರುವಷ್ಟೂ ಹೊತ್ತು ಲಿಂಗಭಾವದಲ್ಲಿ ಮುಳುಗುವ ಶರಣರಂತೆ Mobile ಹಾವದಲ್ಲಿರುವ ಇಂದಿನ ನಮ್ಮ ಯುವ ಜನರು ಲೌಕಿಕ ಯೋಗದ ಹೊಸ ವ್ಯಾಖ್ಯೆಯನ್ನು ಬರೆಯುತ್ತಿದ್ದಾರೆಯೆ? ಅಂಗೈಯಲ್ಲಿರುವ Mobile ನ್ನು ನೋಡಿ ನೋಡಿ ಅವಲಕ್ಷಣಕ್ಕೆ ಒಳಗಾಗುವುದೆಂದರೆ ಇದೇ ಅಲ್ಲವೇ? ಇಂತಹ ಅಧಿಕಪ್ರಸಂಗದ ಪರಮಾವಧಿಗೆ ಏರುವುದಕ್ಕೆ ಇವರಿಗೆಲ್ಲ ಇಂಬುಗೊಡುತ್ತಿರುವುದು ನಾವೇ ಅಲ್ಲವೆ?

    Whatsapp, Twitter....time pass ಗಾಗಿ Mall ಗಳಲ್ಲಿ ಸುತ್ತುತ್ತ Shopping ಮಾಡುವುದು... ಇವುಗಳೆಲ್ಲವೂ ಇಂದಿನ ಅಗತ್ಯವೆಂಬುದು - ದುರ್ಬಳಕೆಯೇ ಹೆಚ್ಚಾದಾಗ - ಒಪ್ಪುವ ಮಾತಲ್ಲ. ಅದು ಇಂದಿನ "ದುಡ್ಡು ಸೊಕ್ಕಿನ Fashion" ಆಗಿ ದಾರಿ ತಪ್ಪುತ್ತಿದೆ. ಊರಿನ ಕಸವನ್ನು ನಾವೇ ಎತ್ತಿ ತಂದು ನಮ್ಮ ಮನೆಯಲ್ಲಿ ತುಂಬಿಕೊಂಡು ಬೃಂದಾವನವಾಗಬೇಕಿದ್ದ ಮನೆಯನ್ನು Dumping Yard ಮಾಡುತ್ತಿದ್ದೇವೆ ಅನ್ನಿಸುವುದಿಲ್ಲವೆ?

   Amitabh Bacchan ಎಂಬ ಪ್ರತಿಭಾವಂತ ನಟನೊಬ್ಬ ತನ್ನ ಕಲಾ ಬದುಕಿನ ಬಗೆಗೆ ದಿನವಿಡೀ ಹೇಳಿದರೂ ಕೇಳಬಹುದು. ಆದರೆ "ನನ್ನ ಹೆಂಡತಿ - ಮಗ, ನನ್ನ ಸೊಸೆ, ನನ್ನ ಮೊಮ್ಮಗು....I Happy - You happy" ಎನ್ನುತ್ತಿದ್ದರೆ ಅವುಗಳ ಬಗೆಗೆ ನಮಗೆ ಆಸಕ್ತಿ ಬೇಕೆ? ಹಾಗೇನಾದರೂ ಆಸಕ್ತಿಯಿದ್ದರೆ ಅದನ್ನು ಕೆಟ್ಟ ಕುತೂಹಲ ಎನ್ನುತ್ತಾರೆ. ಅವರೆಲ್ಲ ಹೇಳುವುದಾದರೂ ಏನನ್ನು? ಅವರ ನಿತ್ಯ ಬದುಕಿನ ಒಂದು ಸುಂದರ ಮುಖವನ್ನು ಮಾತ್ರ! ಅದನ್ನು ತಿಳಿದುಕೊಳ್ಳಲು ಇತರ ಸಾಮಾಜಿಕ ಬದುಕುಗಳು ತಮ್ಮ ದುಡಿಮೆಯ ಸಮಯವನ್ನು ವ್ಯರ್ಥ ಮಾಡಬೇಕೆ? Celebrity ಗಳೂ ಎಲ್ಲರಂತೇ ಮನುಷ್ಯರು. ಆದರೆ ಎಲ್ಲರಲ್ಲಿಲ್ಲದ ಇನ್ನೊಂದು ವೈಶಿಷ್ಟ್ಯವು ಅವರಲ್ಲಿರಬಹುದು. ಆದರೆ ಕಷ್ಟ ಸುಖಗಳು ಯಾರಿಗೂ ತಪ್ಪಿದ್ದಲ್ಲ. ಅವು ಬರುತ್ತ ಹೋಗುತ್ತ ಇರುತ್ತವೆ. ಕೇವಲ ಓದಿ ಕೇಳಿ ಸುಖಿಸುವ "Gossip ಚಟ"ದ ಚಂಡಮುಂಡರಾಯರಿಗೆ ಇನ್ನೊಬ್ಬರ ವೈಯ್ಯಕ್ತಿಕ ಆಗುಹೋಗುಗಳಿಂದ ಆಗಬೇಕಾದ್ದೇನು? ಅಂತಹ ಬಿಟ್ಟಿ ಸುಖವನ್ನು ಯಾರೂ ಒದಗಿಸಲೂಬಾರದು. ಅಂತಹುದನ್ನು ಪ್ರೋತ್ಸಾಹಿಸಲೂ ಬಾರದು - ಅಲ್ಲವೆ? ಪರರ ಸಾಧನೆಯನ್ನು ಮೆಚ್ಚುವುದು ಸಜ್ಜನಿಕೆಯಾದರೂ ಕಿಟಕಿಯಿಂದ ಇಣುಇಣುಕಿ ನೋಡುವಷ್ಟು ಕುತೂಹಲವು ಅಪೇಕ್ಷಣೀಯವಲ್ಲ. ಸಾಧಕರಿಂದ ಸ್ಫೂರ್ತಿ ಪಡೆಯುವುದು ತಪ್ಪಲ್ಲ. ಆದರೆ ಅಂತಹ ಸ್ಫೂರ್ತಿಯು ಕಾರ್ಯರೂಪಕ್ಕೆ ಬಂದರೆ ಮಾತ್ರ ಜಾಲತಾಣಗಳ ಸದುಪಯೋಗವಾದಂತೆ. ನಮ್ಮ ಸಾಧನೆಯಿಂದಲೇ ನಾವು ಸಾಧಕರಾಗಬೇಕಲ್ಲದೆ ಯಾವುದೋ ಸಾಧಕರ ಹಿಂಬಾಲ-ಮುಂಬಾಲವಾಗಿ ಸಾಧಿಸುವುದೇನಿದೆ?

    ಈ ಹಿನ್ನೆಲೆಯಲ್ಲಿ, ನಮ್ಮ ಬದುಕಿನ ಶೈಲಿಯು ನಿಯಂತ್ರಿತವಾಗಬೇಕಿದೆ. ಅದಕ್ಕಾಗಿ, ನಾವು ಅಕ್ಷರ ಪ್ರೀತಿಯನ್ನು  ಬೆಳೆಸಿಕೊಳ್ಳಬೇಕಿದೆ. ಎಂದಿನವರೆಗೆ ಆಯ್ದ ಉತ್ತಮ ಪುಸ್ತಕವನ್ನು ಕೈಯಲ್ಲಿ ಹಿಡಿದು ಓದುವ ಪ್ರವೃತ್ತಿಯು ನಮ್ಮಲ್ಲಿ ಬೆಳೆಯುವುದಿಲ್ಲವೋ ಅಲ್ಲಿಯವರೆಗೆ ಅವರಿವರ ಚಿತ್ರ ನೋಡಿ ಸುಖಿಸುವ ಬಾಲಿಶತನವೂ ತೊಲಗುವುದಿಲ್ಲ. ಸಂಪರ್ಕ ಕ್ರಾಂತಿಯು ತಂದಿಟ್ಟ ಎಲ್ಲ ವೈಜ್ಞಾನಿಕ ಆವಿಷ್ಕಾರಗಳನ್ನೂ ಹದವರಿತು ಉಪಯೋಗಿಸಲು ಸಾಧ್ಯವಿದೆ. ಅಂತಹ ಬೌದ್ಧಿಕ ಪ್ರಬುದ್ಧತೆಯಿಲ್ಲದವರೂ ಅವನ್ನು ಬಳಸತೊಡಗಿದಾಗ "ಮಂಗನ ಕೈಯ ಮಾಣಿಕ್ಯದಂತೆ" - ಆವಿಷ್ಕಾರಗಳಿಂದ ಲಾಭಕ್ಕಿಂತ ನಷ್ಟವೇ ಜಾಸ್ತಿಯಾಗಬಹುದು.

   ನಮ್ಮ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ಪ್ರತಿಯೊಂದು ಬದುಕಿಗೂ ಅದರದ್ದೇ ಆದ ಇತಿಮಿತಿಯೆಂಬುದೊಂದಿದೆ. "ನನಗೆ ಸಾವಿರಾರು ಜನ FRIENDS ಇದ್ದಾರೆ !! ನನಗೆ 1000 Likes ಬಂದಿದೆ !!" ಇತ್ಯಾದಿ ಅನ್ನಿಸಿಕೆಗಳು ಅತ್ಯಂತ ಬಾಲಿಶ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಈ LIKE ಗಳ ಹಿಂದೆ ನೂರಾರು ಬಗೆಯ ಚಿಂತನೆಯ ಮನಸ್ಸುಗಳಿರುತ್ತವೆ! ಕೆಲವೊಮ್ಮೆ ಕೈಕೋಚಿನಿಂದಲೂ Like ಗಳು ಸಿಡಿಯುವುದಿದೆ....ಅಲ್ಲವೆ? "ಮುಂದೆ ಭಲಾ ಎಂದು ಹಿಂದಾಡಿಕೊಂಬುವ" ಜನರೂ - ಮಜಾನೋಡಲು ಹುಸಿನಗುತ್ತ LIKE ಒತ್ತಬಹುದಲ್ಲವೆ? Friend request ಕಳಿಸಬಹುದಲ್ಲವೆ? Follow ಮಾಡಬಹುದಲ್ಲವೆ? ಜನರ ಮನಸ್ಸು ಸದಾ Mobile mode ನಲ್ಲಿಯೇ ಇರುತ್ತದೆ. ಮಾಧ್ಯಮದ ನನ್ನ ಅನುಭವದ ಹಿನ್ನೆಲೆಯಿಂದಲೇ ನಾನು ಇವನ್ನೆಲ್ಲ ಹೇಳುತ್ತಿದ್ದೇನೆ. ಆದ್ದರಿಂದ ಜನ ಮೆಚ್ಚುಗೆಗಾಗಿ - ಕೈಕಾಲು ಹೊಡೆಯುತ್ತ ಏದುಸಿರು ಬಿಡುತ್ತ ಬದುಕುವುದೆಂದರೆ - ಅದು ದೊಡ್ಡ ದುರಂತ. ನಮ್ಮ ಬದುಕು-ಕೆಲಸಗಳು ಜನೋಪಯೋಗಿಯಾಗಿದ್ದರೆ - ಆಗ, ಅದು ಸಾಧನೆ. ಈ ಹಾದಿಯಲ್ಲಿ ಕೆಲವೊಮ್ಮೆ "ನಮ್ಮ ಕೆಲಸಗಳನ್ನು ಜನರು ಮೆಚ್ಚಿದರೆ ಸಂತೋಷ; ಮೆಚ್ಚದಿದ್ದರೆ ಹೆಚ್ಚು ಸಂತೋಷ " ಎಂಬ ಶೈಲಿಯನ್ನೂ ರೂಢಿಸಿಕೊಳ್ಳಬೇಕಾಗುತ್ತದೆ.

    ಆದರೆ ನಮಗೀಗ - ಏಕಕಾಲದಲ್ಲಿ ಹತ್ತಾರು ಕೆಲಸಗಳನ್ನು ಮಾಡುತ್ತ "SMART" ಎಂದು ಅನ್ನಿಸಿಕೊಳ್ಳುವ ಗರಬಡಿದಂತಿದೆ. ಹೀಗೆ ಮನಸ್ಸು ಸೀಳಾಗಿ ಚದುರಿಹೋಗಿರುವ ಕೆಲವು SMART ಗಳು ತಮ್ಮ ಪೊಳ್ಳು ಪ್ರತಿಷ್ಠೆಯನ್ನು ಮೆರೆಸಲು ಜಾಲತಾಣಗಳನ್ನು ಅವಲಂಬಿಸುವುದೂ ಹೆಚ್ಚುತ್ತಿದೆ. ನನ್ನ ಒಬ್ಬ ಗೆಳತಿಯು "ನಮ್ಮ ಕುಟುಂಬದವರೆಲ್ಲ ಸೇರಿ ಒಂದು GROUP ಮಾಡಿಕೊಂಡಿದ್ದೇವೆ ; Whatsappನಲ್ಲಿ ನಾವು ಆಗಾಗ ಸಂಧಿಸುತ್ತೇವೆ" ಎಂದು ಹೇಳಿದಾಗ - "ಹಾಗೆ ಸಂಧಿಸಿ ಏನು ಮಾಡುತ್ತೀರಿ?" ಎಂದು ನಾನು ಕೇಳಿದ್ದೆ. "ನರೇಂದ್ರ ಮೋದಿಯನ್ನು ಕೆಲವರು ಮೆಚ್ಚಿ, ಕೆಲವರು ತೆಗಳಿ ಬರೆಯುತ್ತಾರೆ....ಅವರ ವಾದವನ್ನು ಓದಲಿಕ್ಕೆ ಖುಷಿಯಾಗುತ್ತದೆ...ಮೊನ್ನೆ - ಆ ಅಯ್ಯಪ್ಪ ಎಂಬವರು Flightನಲ್ಲಿ ಹೋಗಿ ಪಿತೃಗಳಿಗೆ ಗಯಾಶ್ರಾದ್ಧ ಮಾಡಿದರಂತೆ...ಹೀಗೆ ತುಂಬ ಸುದ್ದಿ ಗೊತ್ತಾಗುತ್ತದೆ" ಎಂದು ಆ ಗೆಳತಿಯು ಹೇಳುತ್ತಿದ್ದಳು.  ಯಾರೋ ಎಲ್ಲೋ ಶ್ರಾದ್ಧ ಮಾಡಿದ ವಿಷಯವು - Whatsapp ಗುಂಪಿನ - ಗೋವಿಂದವಾಗಬೇಕೆ?
 

  ಯಾರು ಯಾರೋ ತಮ್ಮ ಮಜಕ್ಕಾಗಿ ಊರಿನ ಪಂಚಾಯ್ತಿಕೆ ಮಾಡುತ್ತಿದ್ದರೆ ಅವೆಲ್ಲವೂ ನಮ್ಮ ನಿತ್ಯ ಬದುಕಿಗೆ ಅನಿವಾರ್ಯವೇ? ದೇಶವೆಂಬ ಮನೆಯ ಉಸ್ತುವಾರಿಯನ್ನು ನೋಡಿಕೊಳ್ಳಲು ಮೋದಿಯವರನ್ನು ನಾವು ನೇಮಿಸಿಯಾಗಿದೆ; ಅವರ ಅವಧಿ ಮುಗಿದಮೇಲೆ "ಅವರದು ಉಸ್ತುವಾರಿಯಾ? ಸುಸ್ತುವಾರಿಯಾ?" ಎಂದು ನಿರ್ಧರಿಸಿ ಭವಿಷ್ಯದ ಮತ ಚಲಾಯಿಸುವುದಷ್ಟೇ ನಮ್ಮ ಕೆಲಸ. ಅದನ್ನು ಬಿಟ್ಟು, ದಿನ ಬೆಳಗಾದರೆ ಪ್ರಧಾನಿ ಮೋದಿಯ ಚಿಂತೆಯನ್ನು ನಾವೇ ಮಾಡುವುದಾದರೆ ಅವರನ್ನು ನೇಮಿಸಿದ್ದು ವ್ಯರ್ಥವಾದಂತೆ - ಅಲ್ಲವೆ? ಹಲವು ಕಾಲೆಳೆತಗಳ ನಡುವೆಯೂ ನಮ್ಮ ಪ್ರಧಾನಿಯವರು ಅವರ ಕೆಲಸವನ್ನು ತಲೆತಗ್ಗಿಸಿ ಮಾಡುತ್ತಿದ್ದಾರೆ ಅನ್ನಿಸುತ್ತದೆ. ಇತ್ತ ನಮ್ಮ ಕೆಲಸವನ್ನು ನಾವು ಮಾಡಿದರೆ ಅಷ್ಟು ಸಾಕಾಗುತ್ತದೆ. ಅವರವರ ಕೆಲಸವನ್ನು ಅವರವರು ಮಾಡುತ್ತ ಹೋಗುವುದನ್ನೂ ಸಭ್ಯತೆಯೆನ್ನುತ್ತಾರೆ. ಅಂತಹ ಸಭ್ಯತೆಯನ್ನು -  ವಿಪರೀತ ಬಲಿತು ನಿಂತ ತಾಂತ್ರಿಕ ದೈತ್ಯರಿಗೆ ಕಲಿಸಲಾಗುವುದಿಲ್ಲ. ಬೆರಳ ತುದಿಯಿಂದ ಹಲವು ಪ್ರಭೃತಿಗಳು ನಡೆಸುತ್ತಿರುವ ಬುದ್ಧಿ ಪ್ರದರ್ಶನದ ಚರ್ಚೆಗಳಿಂದ ಇಂದಿನವರೆಗೆ ಸಾಧಿಸಿದ ಸಕಾರಾತ್ಮಕ ಸಾಧನೆಗಳೆಷ್ಟು? ಏನಾದರೂ ಕಾಣುತ್ತಿದೆಯೆ? ಸಭ್ಯ ಪ್ರೀತಿ ಮತ್ತು ಸದುದ್ದೇಶವಿಲ್ಲದ ಬರಹಗಳು ಬಂದ ವೇಗಕ್ಕಿಂತ ರಭಸವಾಗಿ ಹಿಂದೆ ಹೋಗುತ್ತವೆ. ಪ್ರೀತಿಯಿಲ್ಲದ - ಸತ್ಯವಲ್ಲದ ವಿಚಾರಗಳು ಬತ್ತಿ ಹೋಗುತ್ತವೆ; ನಾವು ಆಡುವ ಮಾತಿನಲ್ಲಿ - ಕೃತಿಯಲ್ಲಿ ನಮ್ಮ ಹೃದಯವು ಕಾಣಿಸಬೇಕು. ಶಬ್ದಗಳು ಒಡಲಿನಿಂದಲೇ ಸಹಜವಾಗಿ ಮೂಡಬೇಕು; ಆಡಂಬರದ ಬುದ್ಧಿಮತ್ತೆಯ ಪ್ರದರ್ಶನವಾಗಬಾರದು. ಜಾಲತಾಣಗಳಲ್ಲಿ ಮೂಡುವ ಎಷ್ಟೋ ಒಣ ದೃಶ್ಯಗಳು - ಪಟ್ಟಾಂಗಗಳು ಸಾರ್ವಕಾಲೀನ ವ್ಯರ್ಥ ಕ್ರಿಯೆ.

    ಇಂದು ಭಾರತದ ರಸ್ತೆಗಳಲ್ಲಿ ದಿನನಿತ್ಯವೂ ನಡೆಯುತ್ತಿರುವ ದುರ್ಘಟನೆಗಳಿಗೆ ಮಾನವೀಯ ಸಹಾಯಹಸ್ತ ಚಾಚಬಹುದಾದ ಯುವಜನರು, Face Book ನ ಹೀರೋ ಆಗುವ ಉಮೇದಿನಿಂದ, ದಾರುಣ ಘಟನೆಯ ವಿವಿಧ ಭಂಗಿಯ ಫೊಟೋ ಕ್ಲಿಕ್ಕಿಸುತ್ತ ನಮ್ಮ ದೇಶದ ವಿರೋಧ ಪಕ್ಷದವರಂತೆ - ವಿರೋಧೀ ಮಾಧ್ಯಮಗಳಂತೆ ವರ್ತಿಸುತ್ತಿರುವುದನ್ನು ನೋಡುತ್ತಿದ್ದೇವೆ. ಮನುಷ್ಯತ್ವವನ್ನೂ ಮರೆಸುವಂತಹ ಇದೆಂತಹ ಅಮಲು?  "ಜಾಲತಾಣಗಳೇ ಗತಿ ಮತಿ ಇತಿ" ಎಂಬಂತಹ ಶೂನ್ಯ ಕರ್ಮಗಳು ನಮಗೆ ಯಾಕೆ ಬೇಕು? ಯಾವುದೇ ರೀತಿನೀತಿಯನ್ನು ಅರಿಯದ ಅಪಾತ್ರರನ್ನು ಯಾವ ಜ್ಞಾನವೂ ಉದ್ಧರಿಸಲಾಗದು - ಅಲ್ಲವೆ? 

   ಆದರೆ ಅದಾಗಲೇ ನಾವು ಬಹು ದೂರ ಬಂದಾಗಿದೆ. ನಮ್ಮ ಬಹುಸಂಖ್ಯೆಯ ಅಭಿರುಚಿಗಳೆಲ್ಲವೂ ಚಟಗಳಾಗಿ ಬದಲಾಗಿಯಾಗಿದೆ. ಹಾರುವುದು ನಮಗೆ ಅಭ್ಯಾಸವಾಗಿ ಹೋಗಿದೆ. ಈ ಹಂತದಲ್ಲಿ Face Book, Whatsapp, Twitter...ನಂತಹ ಹಾರುವ-ಹೋರುವ Fashion ನಿಂದ ದೂರವಾಗುವುದು ಅಸಂಭವವಾದರೂ ಅವನ್ನು ನಿಯಂತ್ರಿಸಿಕೊಳ್ಳುವುದು ಸಾಧ್ಯವಿದೆ.

    ಎಂದೂ ನನಸಾಗದ ಸುಂದರ ಕನಸುಗಳನ್ನು ಕಾಣುತ್ತ ನಾವು ತಿರುಕರಾಗುವ ಬದಲು ವಾಸ್ತವವನ್ನು ದೃಢಗೊಳಿಸುವುದು ಒಳ್ಳೆಯದು. ತಿರುಕ ಎಂದರೆ ನೆಲೆಯಿಲ್ಲದವ; ಭಿಕ್ಷುಕ - ಎಂದರ್ಥ. ಅಂದ ಮಾತ್ರಕ್ಕೇ ದುಡ್ಡಿಗೂ ತಿರುಕತನಕ್ಕೂ ಗಂಟುಹಾಕಬಾರದು. ದುಡ್ಡಿದ್ದವರು ತಿರುಕರಲ್ಲ ಎಂದು ಅರ್ಥವಲ್ಲ. ನಿಜಾರ್ಥದಲ್ಲಿ ಹಣವಂತನೇ ಈ ಭೂಮಿಯ ಬಲಾಢ್ಯ ತಿರುಕ. ಸಂಪತ್ತಿಗಾಗಿ, ಸಂಪತ್ತಿನಿಂದ, ಸಂಪತ್ತಿಗೋಸ್ಕರ - ಸಂಪತ್ತು ಎಂಬುದು ನಡೆಸುವಷ್ಟು ತಿರುಕತನವನ್ನು ಬಡಪಾಯಿಗಳು ನಡೆಸುವುದಿಲ್ಲ. ಹಣವು ತನ್ನೊಂದಿಗೆ ತರುವ ನಕಾರ-ಶಕಾರಗಳೆಲ್ಲವನ್ನೂ ಹಣವುಳ್ಳವನು ಹೊರಲೇ ಬೇಕಾಗುತ್ತದೆ; ಜೋಪಾನಮಾಡುವ ಭಯದಲ್ಲಿಯೇ ನಿಂತಲ್ಲಿ ನಿಲ್ಲದೆ "ಭಾಗ್ತಾ" ಬದುಕಬೇಕಾಗುತ್ತದೆ. ಇಂದಿನ Fashion ಜಾಲಗಳು ಕಲ್ಮಷಗೊಳ್ಳುವಲ್ಲಿಯೂ ಹೊಟ್ಟೆಯ ಚಿಂತೆಯಿಲ್ಲದ ಕೃತಘ್ನ ಕಾಂಚಾಣದ ಪರೋಕ್ಷ ಪಾತ್ರವಿದೆ. ಸಮಾಜದಲ್ಲಿ ಇಲ್ಲಸಲ್ಲದ ಸ್ಪರ್ಧೆಯನ್ನು ಹುಟ್ಟು ಹಾಕುವ, ಅಡಗಿದ್ದ ಸಮಸ್ಯೆಗಳನ್ನು ಊದಿ ಎಬ್ಬಿಸಿ - ಹಬ್ಬಿಸುವ ಜಾಲವಾಡಿಗಳ ತ(ರ)ಲೆಯಿಂದ ಅಂತರವನ್ನು ಕಾಯ್ದುಕೊಂಡು ಸ್ವಂತ ಬದುಕನ್ನು ಶ್ರದ್ಧೆಯಿಂದ ಕಟ್ಟಬಲ್ಲ ನಿರ್ಧನ ಸಮಾಧಾನಿಯು ಸಹಜ ಶ್ರೀಮಂತ! ಆತನೇ ಸುಖಿ!



    ಜಾಲತಾಣಗಳ ಅತಿಯಾದ Exposure ನಿಂದ ಅನೇಕ ಠಕ್ಕುತನವು ಸುತ್ತಿಕೊಳ್ಳುತ್ತವೆ. "ಆ Friend ನ್ನು ನೋಡಿ; Half pant, low jeans ಹಾಕುತ್ತಿದ್ದಾರೆ; ನೀವೆಂಥ ಹಳ್ಳೀ ಗುಗ್ಗು? ನೀವೂ ಹಾಕಿ..." ಎನ್ನುತ್ತ ತನ್ನ ಗಂಡನನ್ನು "ವಿದೂಷಕ"ನನ್ನಾಗಿಸುವ ಸ್ಪರ್ಧೆ, "ಈ LADY ಯನ್ನು ನೋಡೇ; ಎಷ್ಟು ಚೆಂದದ Hair Cut ಅಲ್ವಾ? ಅವರ ಹಾಗೆ ನೀನೂ ನಿನ್ನ ತಲೆ ಬೋಳಿಸಿಕೋ..." ಎನ್ನುವ ಠಕ್ಕು ಸ್ಪರ್ಧೆಗಳೆಲ್ಲ ನಮಗೆ ಬೇಕೆ? ಯುಕ್ತಾಯುಕ್ತ ವಿವೇಚನೆಯಿಲ್ಲದೆ - ಜಾಲತಾಣದ ಪ್ರಚೋದನೆಗೆ ಸಿಲುಕಿ ನಡೆಸುವ - ಇಂತಹ ತೋರಿಕೆಯ ಸ್ಪರ್ಧೆಯಿಂದ ಸ್ವರೂಪ ನಾಶವಲ್ಲದೆ ಬೇರೇನು ಉಪಯೋಗವಿದೆ? ಜಾಲಗಳಲ್ಲಿ ಸಿಲುಕಿರುವವರು ಕ್ಷುಲ್ಲಕ ಸ್ಪರ್ಧೆಗಳಿಗೆ ಸಿಲುಕದಂತೆ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಈ ಭೂಮಿಯಲ್ಲಿ ನಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಯಾವುದೇ ಹೊರ ವೇಷವು ಸಹಕರಿಸಲಾರದು. ಯಾರದೋ ಶಿಫಾರಸ್ಸಿನ ಅಂಗೀಕಾರ ಮುದ್ರೆಗಾಗಿ - ಯಾರೂ ಕಾಯಬೇಕಾಗಿಯೂ ಇಲ್ಲ. ಆದ್ದರಿಂದ ಅರ್ಥವಿರದ ಅದೃಶ್ಯ ಸ್ಪರ್ಧೆಗಿಳಿಯಬೇಕಾಗಿಲ್ಲ. ಪ್ರೀತಿ ಸದ್ಭಾವ ಇರುವಲ್ಲಿ ಎಂದೂ ಸ್ಪರ್ಧೆ ಇರುವುದಿಲ್ಲ. ಸ್ಪರ್ಧೆ ಇರುವಲ್ಲಿ ಪ್ರೀತಿ ನಾಸ್ತಿ; ಸುಖವೂ ಇರುವುದಿಲ್ಲ.

    ನಾವು ಅನುಕರಿಸಿ ಅನುಸರಿಸಬೇಕಿರುವುದು ಆದರ್ಶಗಳನ್ನು; ಇಡಿಇಡಿಯಾದ ವ್ಯಕ್ತಿಗಳನ್ನಲ್ಲ. ಏಕೆಂದರೆ ಯಾವ ವ್ಯಕ್ತಿಯೂ ಪರಿಪೂರ್ಣನಲ್ಲ. ಹಳ್ಳಿಯವ, ಢಿಲ್ಲಿಯವ, ಇಟೆಲಿಯವ...ಎಲ್ಲರೂ ಸಾಮಾನ್ಯ ಮನುಷ್ಯರೇ. ಕೆಲವರು ಶ್ರಮಿಕರು, ಕೆಲವರು ನೇತಾರರು, ಕೆಲವರು ಮಾರರು - ಶೂರರು, ಕೆಲವರು ಕಲಾವಿದರು....ಕೆಲವರು ಗಂಟು ಕಳ್ಳರು....ಅಷ್ಟೆ. ಯಾರೋ ಒಬ್ಬರಂತೆ ಇನ್ನ್ಯಾರೋ ಆಗಲು ಹೊರಟಾಗ ಅನಾರೋಗ್ಯಕರ ಸ್ಪರ್ಧೆ ಹುಟ್ಟುತ್ತದೆ. ಇಂದಿನ ತಾಣಜಾಲದಲ್ಲಿ ಮೂಡುತ್ತಿರುವ - ಉಂಡು ಹೇತ ಪ್ರತಿಯೊಂದು ಹೆಜ್ಜೆಯ ಫೊಟೋ ದರ್ಶನವು - ಒಬ್ಬರಂತೆ ಇನ್ನೊಬ್ಬರಾಗಲು ಹೊರಟಿರುವ ಸಾಮಾಜಿಕ ಅನಾರೋಗ್ಯದ ಒಂದು ಲಕ್ಷಣ. ನಮ್ಮ ಚೆಂದದ ಬದುಕೆಂಬುದು ಇಂತಹ ಬೀದಿ ಕುಲುಕಾಟದ, ಬೇಡದ "ಹೈದರ್ಮಿಣಿ ವಿದ್ಯೆ"ಯಲ್ಲಿಯೇ ಕಳೆದು ಹೋಗುತ್ತಿದೆ. ಹಳ್ಳಿಯವನು ನದಿಯ ನೀರಿನಲ್ಲಿ ಅಂಡು ತೊಳೆದರೆ, ಪೇಟೆಯವನು ಬೋರ್ ವೆಲ್ ನೀರಿನಲ್ಲಿ ತೊಳೆಯಬಹುದು. ಇನ್ನೂ High fi ಆದ ಇಟೆಲಿಯವನು ಕಾಗದ (Tissue Paper) ದಲ್ಲಿ ತನ್ನ ಅಂಡನ್ನು ಒರೆಸಿಕೊಂಡು ಕೃತಾರ್ಥನಾಗಬಹುದು. ಅಂದರೆ, ಎಲ್ಲ ಕಡೆಯೂ ಶುಚಿತ್ವದ ರೀತಿಯಲ್ಲಿ ಮಾತ್ರ - ಅಂಡಾಳಿನ ಶಕ್ತಿ ಸಾಮರ್ಥ್ಯಕ್ಕೆ ತಕ್ಕಂತೆ ವ್ಯತ್ಯಾಸ ಕಾಣುತ್ತದೆ. ಆದ್ದರಿಂದ ನಮಗೆ ಯಾವ Fashion ಶೈಲಿಯು ಸೂಕ್ತ ಎಂದು ಆಯ್ದುಕೊಳ್ಳುವುದು ನಮ್ಮ ವಿವೇಚನೆಗೇ ಬಿಟ್ಟ ವಿಚಾರ. ಅದರಂತೇ ಯಾವ ತಾಣಗಳಿಂದಲೂ - ವಿವೇಚನೆಯಿಲ್ಲದೆ ನಾವು ಸ್ಫೂರ್ತಿಯನ್ನು ಪಡೆಯಬೇಕಾಗಿಲ್ಲ; ಹೊಂದಿಕೆಯಾಗದ, ಅರ್ಥವಾಗದ ಯಾರನ್ನೂ ಯಾವುದನ್ನೂ - ನಾವು ಕಣ್ಣು ಮುಚ್ಚಿ ಅನುಸರಿಸಬೇಕಾಗಿಲ್ಲ.

    ಜಾಲತಾಣದಲ್ಲಿ ಜಾಲಾಡಿದರೆ ಒಂದಷ್ಟು ಉತ್ತಮ ವಿಚಾರಗಳೂ ವಿವರಗಳೂ ಸಿಗುವುದಿದೆ. ಅವನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಸದುಪಯೋಗಪಡಿಸಿಕೊಳ್ಳುವ ಶಕ್ತಿಯನ್ನು ಬೆಳೆಸಿಕೊಳ್ಳುವುದು ಇಂದಿನ ಅಗತ್ಯ. ಆದರೆ ಒಟ್ಟಾರೆಯಾಗಿ ನೋಡಿದರೆ, ಒಂದು ಚಮಚ ಉಂಡು ನಾಲ್ಕು ಚಮಚದಷ್ಟು ವಿಸರ್ಜಿಸುವಂತೆ ಕಾಣುತ್ತಿರುವ ಇಂದಿನ ಸಾಮಾಜಿಕ ಜಾಲ ತಾಣಗಳು ನಮ್ಮಲ್ಲಿರುವ ಸೃಜನಶೀಲತೆಯನ್ನು ಅಡ್ಡದಾರಿ ಹಿಡಿಸುತ್ತ ಹೊಸಕಿ ಹಾಕುವಂತೆ ಕಾಣುವುದಂತೂ ಸುಳ್ಳಲ್ಲ. ಅಲ್ಲಿ ಹೊರಳಾಡುವ ಬಹುಪಾಲು ಸರಕುಗಳು ಸ್ಪರ್ಧಾತ್ಮಕ ಅನುಕರಣೆ! ಅನುಕರಣೆಯಿಂದ ನಮ್ಮ ಸೃಜನಶೀಲತೆಯು ನಿಶ್ಚಯವಾಗಿ ಸೊರಗುತ್ತದೆ. ಬೇರಿಲ್ಲದ ಎಲೆಯಿಲ್ಲದ ಬೋಳು ಮರಗಳ ಈ ಜಾಲತಾಣದ ಅರ್ಧಸತ್ಯದ ಕತೆಗಳಲ್ಲಿ ಎಷ್ಟು ವಿಹರಿಸಬೇಕು ಎಂಬ ಚೊಕ್ಕ ನಿರ್ಧಾರವು ನಮ್ಮದಾಗಿರಲಿ. ನಿರ್ದಿಷ್ಟ ಸಮಯ ಮತ್ತು ಸಪಾತ್ರ ಸಂವಹನವೆಂಬ ಬೇಲಿಯನ್ನು ನಮಗೆ ನಾವೇ ಹಾಕಿಕೊಂಡು ನಮ್ಮನ್ನು ಕಟ್ಟಿಹಾಕಿಕೊಳ್ಳದಿದ್ದರೆ LIKE ಗಳನ್ನು ಒತ್ತುವುದರಲ್ಲಿ, ಲೆಕ್ಕ ಹಾಕುವುದರಲ್ಲಿಯೇ ಬದುಕು ಮುಗಿಯಬಹುದು. ಇಂದಿನ ಜಾಲತಾಣಗಳ ಪಟ್ಟಾಂಗದಲ್ಲಿ ಮುಳುಗಿ ಹೋದರೆ ನಮ್ಮ ಜೊತೆಗೆ ಮುಂದಿನ ಪೀಳಿಗೆಯೂ ಕಳೆದುಹೋಗಬಹುದು. ನಮ್ಮ ಬದುಕಿಗೆ ನಾವೇ ಶಿಲ್ಪಿಗಳು. "Curious Cats ಮತ್ತು Opportunist Fox ಗಳು ಎಲ್ಲ ಕಾಲದಲ್ಲಿಯೂ ಸುತ್ತಮುತ್ತೆಲ್ಲ ಇರುತ್ತವೆ" ಎಂಬ ಎಚ್ಚರವಿದ್ದರೆ ಮಾತ್ರ ದಾರಿ ಸ್ಪಷ್ಟವಾದೀತು.  

                                                                                                       - ನಾರಾಯಣೀ ದಾಮೋದರ್

Saturday, September 5, 2015

ನಾನೊಲಿದಂತೆ (6) - ಭೋಜನ ಕಾಲೇ ಮಧ್ಯೆ...

ಕೆಲವು ವರ್ತನೆ ವ್ಯವಹಾರಗಳು ಹಳ್ಳಹಿಡಿಯುತ್ತಿದೆಯೆಂದು ಅನ್ನಿಸಿದಾಗ ನಮ್ಮ ಮನಸ್ಸು ನಾವು ಹಾದು ಬಂದ ಕೆಲವು ಉತ್ತಮ ಕ್ಷಣಗಳೊಂದಿಗೆ ಹೋಲಿಸಲು ತೊಡಗುತ್ತದೆ... ಆಗ ಹಳೆಯದೆಲ್ಲವೂ ಮತ್ತೊಮ್ಮೆ ಇಣುಕಿ ಓಡುತ್ತದೆ. ತಮ್ಮ ಬದುಕಿನಲ್ಲಿ ಅಂತಹುದೇ ಅನುಭವಗಳನ್ನು ಹೊಂದಿದವರಿಗೆ ಕೆಲವು ಘಟನೆಗಳು ವಾಸ್ತವ ಅನ್ನಿಸಿದರೆ - ಮನೆ ಬಿಟ್ಟು ಊರಿನ ಕೇರಿಯಲ್ಲೇ ಅಡ್ಡಾಡುತ್ತ ಹೊರಹೊರಗೇ ಉಂಡು ತಿಂದು ದಿನ ಕಳೆಯುವ ವಿಶಿಷ್ಟ ಅನುಭವಿಗಳಿಗೆ - ಸಾಮಾನ್ಯವೆಂದು (ಏನ್ಮಹಾ?) ಅನ್ನಿಸುವುದೂ ಇದೆ.

ಬ್ರಾಹ್ಮಣನು ಭೋಜನಪ್ರಿಯ ಎಂದು ಹೇಳುತ್ತ...ಅವರು ಊಟ ಮಾಡುವುದರಲ್ಲಿ (ಮಾತ್ರ!) ಪರಿಣತರು ಎಂದು ವಿಡಂಬನಾತ್ಮಕವಾಗಿ ಆಡಿಕೊಳ್ಳುವ ಹಿಂದುಮುಂದಿಲ್ಲದವರನ್ನು ನಾನು ನೋಡಿದ್ದೇನೆ. ಹಿಂದೆ ಸುಸಂಸ್ಕೃತ ವಿದ್ಯಾ ಸಂಪನ್ನರನ್ನು ಮಾತ್ರ "ಬ್ರಾಹ್ಮಣ" ಎನ್ನುತ್ತಿದ್ದ ಅವಧಿಯಲ್ಲಿ ಅಂತಹ ಬ್ರಾಹ್ಮಣರು ಪ್ರಚುರಪಡಿಸಿದ್ದ ಸಮತೂಕದ ಭೋಜನದ ಶೈಲಿಯನ್ನು - "ಸಂಸ್ಕರಿತ" - ಎಂಬ ಅರ್ಥದಲ್ಲಿ ಬಳಕೆಯಲ್ಲಿದ್ದ ಅನುಭವೋಕ್ತಿಯಿದು. ಅಂತಹ ಶುಚಿ, ರುಚಿ, ಪೌಷ್ಟಿಕಯುಕ್ತ ಸಂಸ್ಕರಿತ ಭೋಜನವು ಪ್ರಿಯವೂ ಆಗುತ್ತಿದ್ದ ತೃಪ್ತಿಯಲ್ಲಿ ಈ ನುಡಿಗಟ್ಟು ಪಾರಂಪರಿಕವಾಗಿ ನಡೆಯುತ್ತ ಬಂದಿರಬಹುದು ! ಆದರೆ ನಮ್ಮ ಆಹಾರ ಸೇವನೆಯ ಶೈಲಿಯು ಪರಿಷ್ಕಾರಗೊಂಡು ಸ್ವೀಕಾರಾರ್ಹತೆ ಹೊಂದುವ ಹಂತವನ್ನು ತಲುಪಲು ದೀರ್ಘ ಅವಧಿಯನ್ನು ವ್ಯಯಿಸಿದೆ. ಬೆಂಕಿಯನ್ನು ಉತ್ಪತ್ತಿ ಮಾಡಿ ಜೋಪಾನ ಮಾಡುತ್ತಿದ್ದಲ್ಲಿಂದ ಹಿಡಿದು ಇಂದಿನವರೆಗೆ ಸಹಸ್ರಾರು ವರ್ಷಗಳೇ ಹಿಡಿದಿವೆ. ಬದುಕಿನೊಂದಿಗೆ ಊಟ ಉಡುಗೆಗಳೂ ಸುಸಂಸ್ಕಾರ ಹೊಂದುತ್ತ ಬಂದಿವೆ. ಕಾಲಕಾಲಕ್ಕೆ ಅನೇಕ ಪರೀಕ್ಷೆಗೆ ಒಳಪಟ್ಟು ಸಿದ್ಧವಾಗಿರುವ ಪಾಕಶಾಸ್ತ್ರವು "ಪರೀಕ್ಷಿಸಿಯೇ ಸ್ವೀಕರಿಸಿದ" ಸುರಕ್ಷಿತ ಆಹಾರ ವಿಜ್ಞಾನ. ಅತ್ಯಂತ ಶಾಸ್ತ್ರೀಯವಾದ ನೆಲೆಗೆ ಬ್ರಾಹ್ಮಣ ಶೈಲಿಯ ಊಟವು ಬಂದು ನಿಲ್ಲಲು ಆ ಕಲೆಯ ಹಿಂದೆ ದುಡಿದ ಅನೇಕ ಸಂಶೋಧಕರ ದೇಣಿಗೆಯಿದೆ. ಪಾಕಶಾಸ್ತ್ರದಿಂದ ಹಿಡಿದು ಊಟಕ್ಕೆ ಕುಳಿತುಕೊಳ್ಳುವ ಶೈಲಿ, ಬಡಿಸುವ ಶೈಲಿ, ಒಂದರ ನಂತರವೇ ಇನ್ನೊಂದನ್ನು ಉಣ್ಣುವ ಕ್ರಮ, ಎಲೆಯ ಮುಂದೆ ಕುಳಿತ ಹಸಿದವರ ಅತೃಪ್ತಿಯ ಬದುಕುಗಳಲ್ಲೂ ತೃಪ್ತಿಯ ನವರಸ ಕ್ಷಣಗಳನ್ನು ಎಳೆದು ತಂದಿಟ್ಟ ಬಗೆ ... ಇವೆಲ್ಲವೂ ಅಧ್ಯಯನ ಯೋಗ್ಯ ವಿಷಯಗಳು. ಕರ್ಮಭೂಮಿಯಲ್ಲಿ ಕರ್ಮ ಸವೆಸುವ ಕಠಿಣ ಹಾದಿಯಲ್ಲಿ ಬಸವಳಿದ ಜೀವಿಗಳು ನಡುನಡುವೆ ಆಹ್ಲಾದದ ಕ್ಷಣಗಳನ್ನು ಅನುಭವಿಸುತ್ತ ನವೋತ್ಸಾಹವನ್ನು ತುಂಬಿಕೊಳ್ಳುವ ಪ್ರಯತ್ನವೂ ಇದಾಗಿರಬಹುದು. ಬೆವರು ಸುರಿಸಿ ದುಡಿಯುವ ದೇಹಕ್ಕೆ ಶಕ್ತಿ ಮತ್ತು ಆರೋಗ್ಯದ ಅಂಶಗಳನ್ನು ಮರುಪೂರೈಕೆ ಮಾಡುವ ಶಾಸ್ತ್ರೀಯ ನೆಲೆಯಲ್ಲಿಯೇ ರೂಪುಗೊಂಡಿರುವುದು ಮಾತ್ರ ಭಾರತೀಯ ಭೋಜನ ಶೈಲಿಯ ವೈಶಿಷ್ಟ್ಯ. ಬ್ರಾಹ್ಮಣರ ಅದೃಷ್ಟವೋ ಅಥವ ಒಳಿತನ್ನು ಸ್ವೀಕರಿಸಲಾಗದ ಇತರ ವರ್ಗದ ಜನರಿಂದ ಅನುಸರಿಸಲಾಗದುದರಿಂದಲೋ - ಬ್ರಾಹ್ಮಣ ಭೋಜನ ಎಂಬುದು - "ಜಾತಿಯಲ್ಲಿ ಬ್ರಾಹ್ಮಣ" ಎಂದು ಕರೆಸಿಕೊಳ್ಳುವವರ ಸುಪರ್ದಿಯಲ್ಲಿಯೇ ಈಗಲೂ ಸುಭದ್ರವಾಗಿದೆ; ಸಂಸ್ಕರಣೆಗೊಳ್ಳುತ್ತಲೇ ಇದೆ !



ಆದ್ದರಿಂದಲೇ ರುಚಿ ಶುಚಿಯಾದ ಅಂದಿನ  "ಉಡುಪಿ ಹೋಟೆಲು"ಗಳು ಎಲ್ಲಿ ಹೋದರೂ ಜನಪ್ರಿಯವಾಗುತ್ತ, ನಂಬಿ ಅನುಸರಿಸಿದವರ ಕೈಬಿಡದೆ ರಕ್ಷಿಸುತ್ತ ಬಂದಿದೆ. (ಆದರೆ ಇಂದು ಉಡುಪಿಯಲ್ಲೂ ಅಂದಿನ ಗುಣಮಟ್ಟದ ಹೋಟೆಲುಗಳಿಲ್ಲ. ವ್ಯಾಪಾರವು ಧರ್ಮವಾಗಿದ್ದ ಕಾಲವು ಹೋಗಿದೆ!) ಎಲ್ಲರಿಗೂ ಎಲ್ಲ ಕಲೆಯೂ ಸಿದ್ಧಿಸಲಾರದು - ಆಕರ್ಷಣೆಯೂ ಸಿದ್ಧಿಸದು ಎಂಬುದಕ್ಕೆ ಶಾಸ್ತ್ರೀಯ ಪಾಕ ಕಲೆಯೂ ಉತ್ತಮ ದೃಷ್ಟಾಂತವಾಗಬಲ್ಲದು.

ಅಡುಗೆಯೂ ವಿಶಿಷ್ಟವಾದ ಕಲೆ. "ಅವಳು ಏನು ತಯಾರಿಸಿದರೂ ಅದರಲ್ಲಿ ಒಂದು ರುಚಿ ಇರುತ್ತದೆ...ಅವಳದು ಅಡುಗೆ ಕೈ..." ಎಂಬ ಶಿಫಾರಸ್ಸನ್ನು ಪಡೆಯುತ್ತಿದ್ದ ಅನೇಕರನ್ನು ನಾನೂ ಕಂಡಿದ್ದೇನೆ; ಉಂಡು ಅನುಭವಿಸಿದ್ದೇನೆ. ವೇದಿಕೆಯ ಮೇಲೆ ಪ್ರದರ್ಶಿಸುವುದು ಮಾತ್ರ ಕಲೆಯೆ? ಹಾಗೆ ಆಗಬಾರದು. ಜೀವನದ ರಂಗಭೂಮಿಯೇ ಅಡುಗೆಯ ಕೋಣೆ. ಮೂರು ಹೊತ್ತೂ ಉಣ್ಣುವುದಕ್ಕೆ ಮಾತ್ರ ಬಂದು ಕೂರುವವರಿಗೆ ಆ ಪಕ್ವಾನ್ನದ ಗುಟ್ಟನ್ನು ತಿಳಿಯುವ, ಅದನ್ನು ಮಾಡಿ ಕಲಿಯುವ ಆಸಕ್ತಿಯೂ ಇರಬೇಕು. ಜೀವನದಲ್ಲಿ ಯಶಸ್ಸು ಕಾಣಲು, ಅಡುಗೆಯ ರಂಗದಲ್ಲಿ ಸಶಕ್ತವಾಗಿ ಅಭಿನಯಿಸುವ ಕಲೆಯೂ ತಿಳಿದಿರಬೇಕು. ನಿತ್ಯಬದುಕಿನ ಪ್ರತಿಯೊಂದು ಕ್ಷಣವನ್ನೂ ಕಲಾತ್ಮಕವಾಗಿ ಸುಸಂಸ್ಕರಿತಗೊಳಿಸಿಕೊಳ್ಳುತ್ತ ಬಂದ ಬದುಕು ನಮ್ಮದು. ಬ್ರಾಹ್ಮಣ ಭೋಜನವು ನಾಗರಿಕತೆಯ ಉತ್ತುಂಗದ ಚಿಹ್ನೆಯೂ ಹೌದು.

ಈ "ಅಡುಗೆ" ಎನ್ನುವುದು ಮನೆಯ ಸದಸ್ಯರ ನಡುವೆ ಉತ್ತಮ ಬಾಂಧವ್ಯವನ್ನು ಬೆಸೆಯುವ ಒಂದು ಕರ್ಮೋಪಕರಣವೂ ಹೌದು. "ಒಬ್ಬರು ಒಳಗೆ ಬಂದರೆ - ಇಬ್ಬರು ಹೊರಗೆ ಹೋಗಬೇಕು" ಎನ್ನುವಂತಹ ಇಂದಿನ ಮನೆಗಳ ಕೋಳಿಗೂಡಿನಂತಹ ಅಡುಗೆ ಕೋಣೆಯಲ್ಲಿಯೂ - ಮನಸ್ಸಿದ್ದರೆ ಕೂಡಿ ದುಡಿಯುವುದು ಸಾಧ್ಯವಿದೆ. ಮಾತಾಡುತ್ತ ನಗುತ್ತ ನಿಷ್ಠೆಯಿಂದ ನಿತ್ಯಯಜ್ಞದಂತೆ ಅಡುಗೆಯನ್ನು ಮಾಡುತ್ತ, ಕೆಲವೊಮ್ಮೆ ಪರಸ್ಪರ ಮುಖ ಊದಿಸಿಕೊಳ್ಳುತ್ತ, ಮತ್ತೆ ರಾಜಿಯಾಗುತ್ತ ಜತೆಯಲ್ಲಿಯೇ ಕೆಲಸ ಮಾಡುವ - ಬದುಕುವ ಮಜವೇ ಬೇರೆ. ಹೊಂದಿಕೊಂಡು ಬದುಕುವ ಪಾಠವು ಸಿಗುವುದೇ ಮನೆಯ ಅಡುಗೆ ಕೋಣೆಯಲ್ಲಿ.

ಹೀಗೆ ಪ್ರತೀದಿನವೂ ಯಜ್ಞಕಾರ್ಯ ನಡೆಸುವ ಅಡುಗೆ ಕೋಣೆಯು ಇಡೀ ಮನೆಗೆ ಶೋಭೆ ನೀಡುವ ಒಂದು ಪವಿತ್ರ ಕರ್ಮಸ್ಥಾನ. ಆ ಯಜ್ಞ ಕ್ಷೇತ್ರವು ಅತ್ಯಂತ ಸ್ವಚ್ಛವಾಗಿರಬೇಕು. "ಅಡುಗೆಯನ್ನು ಮಾಡಿ ಮುಗಿಸಿ ಹೊರಗೆ ಬಂದಾಗ - ಆ ಅಡುಗೆಯ ಕೋಣೆಯಲ್ಲಿ ಅದುವರೆಗೆ ಗಂಟೆಗಟ್ಟಲೆ ಸೃಜನಶೀಲ ಕೆಲಸವೊಂದು ನಡೆದಿತ್ತು ಎಂಬ ಕುರುಹೂ ಕಾಣಿಸಬಾರದು. ಅಷ್ಟು ಸುವ್ಯವಸ್ಥಿತವಾಗಿಟ್ಟೇ ಅಲ್ಲಿಂದ ಹೊರಗೆ ಬರಬೇಕು..." ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಟ್ಟವಳು ನನ್ನ ಅಮ್ಮ. ಅದು ಪ್ರತಿಯೊಬ್ಬ ಅಮ್ಮಂದಿರಿಂದ ಸಿಗಬೇಕಾದ ಪಾಠವೂ ಹೌದು.



ನನ್ನ ಬಾಲ್ಯ ಕಾಲದಲ್ಲಿ ನಮ್ಮ ಮನೆಯಲ್ಲಿ ವಿಶೇಷದ ಅಡುಗೆಯಿದ್ದಾಗ ಕುಪ್ಪಯ್ಯ ಮಧ್ಯಸ್ಥರೆಂಬ ಒಬ್ಬರು ಅಡುಗೆಯವರು ಬರುತ್ತಿದ್ದರು. ಆಗಲೇ ಅವರು ಸುಮಾರು 50 ವರ್ಷಕ್ಕೂ ಮಿಕ್ಕಿದ ವಯಸ್ಕರಾಗಿದ್ದರು. ಅವರ ಅಡುಗೆಯನ್ನೂ ಅಡುಗೆಯ ಶೈಲಿಯನ್ನೂ ನನ್ನ ಅಮ್ಮನು ಬಾಯ್ತುಂಬ ಹೊಗಳುತ್ತಿದ್ದಳು. ಅವರ ಕಾಲಾನಂತರ ಅಡುಗೆ ಮಾಡಲು ಬರುತ್ತಿದ್ದ ಕೆಲವು ಅಡುಗೆಯವರ ಮಾತು, ಕೆಲಸದ ಶೈಲಿಯನ್ನು ಕಂಡಾಗಲೆಲ್ಲ ನನ್ನ ಅಮ್ಮನು ಅಂದಿನ ಕುಪ್ಪಯ್ಯ ಮಧ್ಯಸ್ಥರನ್ನು ನೆನಪಿಸಿಕೊಳ್ಳುತ್ತ ಪಚಗುಟ್ಟುತ್ತಿದ್ದಳು. ಹಳೆಯ ಪುರಾಣ ಶುರುಮಾಡುತ್ತಿದ್ದಳು. ಯಾವುದೇ ಪುರಾಣವು ಸುಮ್ಮನೆ ನೆನಪಾಗುವುದಿಲ್ಲ. ಒಂದಕ್ಕೊಂದು ಹೋಲಿಸಿಕೊಳ್ಳುವ ಮನಸ್ಸಿಗೆ "ಪುರಾಣ ಕನವರಿಕೆ"ಯು ನೆಚ್ಚಿನ ಸಂಗಾತಿ. ಒಬ್ಬ ಅಡುಗೆಯವರು ಅಡುಗೆಗೆಂದು ಒಳಗೆ ಹೊಕ್ಕರೆಂದರೆ ಇಡೀ ಅಡುಗೆ ಕೋಣೆಯು ರಣರಂಗದಂತೆ "ಮುರಿದಟ್ಟೆಗಳ, ಸುರಿದ ಕರುಳ, ಒರೆದ ಬಸೆಯ, ಕೊರೆದ ಸುಂಟಿಗೆಯ, ಹರಿದ ಕೆನ್ನೀರ...ತ್ಯಾಜ್ಯದ ಸಾಲು - ಯಮನುಂಡು ಕಾರಿದಂತೆ..." ಪರಿವರ್ತಿತವಾದಾಗಲೆಲ್ಲ ನಮ್ಮ ಅಮ್ಮನ ಪುರಾಣವು ಶುರುವಾಗುತ್ತಿತ್ತು !!

ಅಂತೂ ಆಹ್ವಾನಿತ ಅಡುಗೆಯವರ ಕೆಲಸವೆಲ್ಲವೂ ಮುಗಿದು ಅವರು ನಿರ್ಗಮಿಸಿದ ನಂತರ, ಅಲ್ಲಿನ ದೃಶ್ಯವನ್ನು ಅದಾಗಲೇ ಕಂಡಿರುತ್ತಿದ್ದ ಅಮ್ಮನು ತನ್ನ ಅಡುಗೆ ಕೋಣೆಯನ್ನು ಪ್ರವೇಶಿಸಲು ಮನಸ್ಸಾಗದೆ "ಜಾನಿಸುತ್ತ" ಕೂರುತ್ತಿದ್ದಳು. ಸಂಜೆಯಾಗುವಾಗ ಆ ಅಡುಗೆಯ ಕೋಣೆಯೆಂಬ ರಣರಂಗವನ್ನು ಸಿಡುಕುತ್ತ ಪ್ರವೇಶಿಸುತ್ತಿದ್ದ ಅಮ್ಮನು... "ಮಾಡಿದ್ದನ್ ಈಗ ತೀಡ್ಕಣ್ಕ್... ಈ ರಾಮಾಯಣನ್ನ ಹೇಂಗ್ ಸರಿ ಮಾಡೂದಾ?" ಅಂತ ತಲೆಯ ಮೇಲೆ ಆಕಾಶವೇ ಬಿದ್ದ ಹಾಗೆ ನಿಂತುಕೊಳ್ಳುತ್ತಿದ್ದುದು ಈಗಲೂ ನೆನಪಾಗುತ್ತದೆ. ಅಟ್ಟ ಒಲೆಯ ಸುತ್ತಲೂ ಸಾಸಿವೆ, ಕರಿಬೇವು, ನೆಲದ ತುಂಬ ಹಳದಿ ಕೆಂಪು ಬಣ್ಣದ ರಸಗುರುತುಗಳು, ಒಲೆಯ ಮೇಲೆ - ಕೆಳಗೆಲ್ಲ ಉಕ್ಕಿ ಕರಟಿದ ಸಂಬಾರ ವಿಶೇಷಗಳು, ಬುಡ ಕರಟಿದ ಪಾತ್ರೆಗಳು, ಮಿಕ್ಸರ್ ನಲ್ಲಿ ಒಣಗಿ ಗಟ್ಟಿಯಾದ ಅವಶೇಷಗಳು, ಸಿಂಕಿನಲ್ಲಿ ಶೇಖರವಾದ ತ್ಯಾಜ್ಯ ವಸ್ತುಗಳ ಜೊತೆಗೆ ಗೋಡಂಬಿ-ದ್ರಾಕ್ಷಿಯ ತುಂಡುಗಳು, ಇಷ್ಟಿಷ್ಟು ಹಾಲನ್ನು ಉಳಿಸಿ ಬಿಸಾಡಿದ ಹಾಲಿನ ಪ್ಯಾಕೆಟ್ ಗಳು, ಬಾಣಲೆಯಲ್ಲಿ ಕೇಜಿಗಟ್ಟಲೆ ಉಳಿಸಿದ ಅಟ್ಟೆಣ್ಣೆ.... ಇವನ್ನೆಲ್ಲ ಹುಬ್ಬು ಗಂಟಿಕ್ಕಿಕೊಂಡು ನೋಡುತ್ತ... ಅಡುಗೆ ಕೋಣೆಗೆ ಎರಡು ಮೂರು ಸುತ್ತು ಬರುತ್ತಿದ್ದ ನಮ್ಮ ಅಮ್ಮ ಈಗಲೂ ನನಗೆ ನೆನಪಾಗುತ್ತಾಳೆ.

"ಚಿಂತೆ ಮಾಡುತ್ತ ಎಷ್ಟು ಸುತ್ತು ಬಂದರೂ ಕ್ರಿಯೆಗೆ ತೊಡಗದೆ ಉತ್ತರ ಕಾಂಡವು ಹೊಮ್ಮುವುದಾದರೂ ಹೇಗೆ? ಬರೇ ಯೋಚನೆ ಮಾಡಿದರೆ ಕೆಲಸ ಮುಂದೆ ಸಾಗುತ್ತದೆಯೆ? ಒಂದು ಕರ್ಮವನ್ನು ಇನ್ನೊಂದು ಕರ್ಮದಿಂದಲೇ ಸವೆಸಬೇಕು! ನಿವಾರಿಸಬೇಕು! ಕರ್ಮಭಾವವನ್ನು ಎತ್ತರಿಸಬೇಕು! ಸೀರೆಯ ನೆರಿಗೆ ಎತ್ತಿ ಕಟ್ಟಿ, ಕೆಲಸ ಶುರುಮಾಡು" ಎಂದೂ ಅಮ್ಮನೇ ದಾರಿ ತೋರಿಸುತ್ತಿದ್ದಳು. ಅದಾಗಲೇ ವಯಸ್ಸಾಗಿದ್ದ ಅಮ್ಮನನ್ನು ಆಗ ನಾವು ಸಂತೈಸುತ್ತಿದ್ದೆವು. "ಅಮ್ಮ, ನೀನು ಈಗ ಸುಮ್ಮನೆ ಹೊರಗೆ ಕೂತಿರು. ಒಂದು ಗಂಟೆ ಬಿಟ್ಟು ಒಳಗೆ ಬಾ... ಆಗ ನೋಡು..ನಿನ್ನ ಅಡುಗೆ ಕೋಣೆಯು ಥಳಥಳ ಹೊಳೆಯುತ್ತಿರುತ್ತದೆ..." ಎಂದು ಹೇಳಿ ಅವಳನ್ನು ಹೊರಗೆ ಕೂಡಿಸಿ ನಾವು ಒಟ್ಟಾಗಿ ಶುದ್ಧೀಕರಣ ಕಾರ್ಯದಲ್ಲಿ ಧುಮುಕುತ್ತಿದ್ದುದೂ ಈಗ ನೆನಪಾಗುತ್ತದೆ. ಹೊರಗೆ ಕೂತ ಅಮ್ಮನ ಬಾಯಿಂದ ಆಗ ಸಹಸ್ರ ನಾಮಾರ್ಚನೆ... ಪುರಾಣ ವಾಚನ ನಡೆಯುತ್ತಲೇ ಇರುತ್ತಿತ್ತು. ಅವಳ ಮಾತುಗಳನ್ನು ಕೇಳುತ್ತ ಕೆಲಸ ಮಾಡುತ್ತಿದ್ದ ನಮಗೆ ಸಮಯ ಸರಿದದ್ದೇ ತಿಳಿಯುತ್ತಿರಲಿಲ್ಲ. "ಅಡುಗೆ ಮಾಡುವುದು ಹೀಗಾ? "ಇನ್ನೊಬ್ಬರ ಮನೆಯ ಕೆಲಸ" ಎಂದುಕೊಂಡು ಮಾಡುವ ಕೆಲಸಗಳೆಲ್ಲವೂ ಹೀಗೇ ಆಗುವುದು. ಯಾರೇ ಆದರೂ ಒಂದು ಕೆಲಸ ಮಾಡಿ ಹೋದ ಮೇಲೆ ಅದನ್ನು ಮಾಡಿಸಿಕೊಂಡವರು ಹಿಡಿ ಶಾಪ ಹಾಕುವ ಹಾಗಿರಬಾರದು; ಮೆಚ್ಚಿಕೊಳ್ಳುವ ಹಾಗಿರಬೇಕು..." ಎನ್ನುತ್ತಲೇ - ಸುಮ್ಮನೆ ಕೂರಲಾರದೆ ತಾನೂ ಒತ್ತರೆಯಲ್ಲಿ ತೊಡಗಿಕೊಳ್ಳುತ್ತಿದ್ದ ಅಮ್ಮ ಈಗಲೂ ನನಗೆ ನೆನಪಾಗುತ್ತಾಳೆ. "ಅಮ್ಮ, ನಾವು ಅಪೇಕ್ಷಿಸುವ ಹಾಗೇ ಕೆಲಸ ಮಾಡುವವರು ನಮಗೆ ಕಾಣಿಸಿದರೆ ಅದು ನಮ್ಮ ಭಾಗ್ಯ. ಏನೋ... ನಾವು ಕರೆದಾಗ ನಮಗಾಗಿ ಬಂದು, ನಮ್ಮ ಕೆಲಸದ ಭಾರವನ್ನು ಒಂದು ದಿನದ ಮಟ್ಟಿಗೆ ಸುಧಾರಿಸಿ ಕೊಟ್ಟು ಹೋದರಲ್ಲ? ಈಗ ಮುಗಿಯಿತಲ್ಲ? ಬಿಟ್ಟುಬಿಡು..." ಎನ್ನುತ್ತ - ನಾವು ಮಕ್ಕಳು - ಅವಳನ್ನು ಸಂತೈಸುತ್ತಿದ್ದುದೂ ಇತ್ತು.

ಒಮ್ಮೆ, ಒಬ್ಬರು ಅಡುಗೆಯವರು ದೇವೀಪೂಜೆಯ ನೈವೇದ್ಯಕ್ಕೆ "ಗುಡಾನ್ನ" ಮಾಡಿದ್ದರು. ಅನಂತರ ಅಡುಗೆಕೋಣೆಯ ಸಿಂಕಿನಲ್ಲಿ ದ್ರಾಕ್ಷಿ, ಗೋಡಂಬಿ, ಉತ್ತುತ್ತೆ, ಬಾದಾಮು... ಎಲ್ಲವೂ ಇನ್ನೊಮ್ಮೆ ಗುಡಾನ್ನ ತಯಾರಿಸಲು ಸಾಕಾಗುವಷ್ಟು ಬಿದ್ದಿದ್ದವು!! ಈ ಅನ್ಯ ವಸ್ತುಗಳ ಒತ್ತಡದಿಂದ ಸಿಂಕಿನ ನೀರು ಹರಿದು ಹೋಗದಂತಾಗಿ ನೀರು ಕಟ್ಟಿಕೊಂಡಿತ್ತು!

ಹೀಗಾದಾಗಲೆಲ್ಲ ಅಮ್ಮ - ಮತ್ತೆ ಮತ್ತೆ ಹಿಂದೆ ಸರಿಯುತ್ತಿದ್ದಳು... ಯಾವುದೇ "ಉತ್ತಮ"ವನ್ನು ಸವಿದವರಿಗೆ "ಕನಿಷ್ಠ"ಗಳ ಜೊತೆಗೆ ಏಗುವಾಗ ಹೀಗೆಲ್ಲ ಆಗುವುದು ಸ್ವಾಭಾವಿಕ. ಅಮ್ಮನ ಕತೆಯೂ ಅದೇ ಆಗಿತ್ತು. ಅವಳಿಗೆ ಪುರಾಣ ನೆನಪಾಗುತ್ತಿದ್ದುದು ಇಂತಹ ಕ್ಷಣಗಳಲ್ಲಿ... "ಹೆಣೆ, ಸುಮ್ ಸುಮ್ನೆ ಮಾತಾಡುಕೆ ನಂಗೇನ್ ಮಂಡೆ ಕೆಟ್ಟಿತ್ತಾ? ಕೆಲಸ ಮಾಡುದ್ ಹೀಂಗಲ್ಲ.." ಎನ್ನುತ್ತ ಹಿಂದೆ ಸರಿಯುತ್ತಿದ್ದಳು.

"ಆ ಕುಪ್ಪಯ್ಯ ಮಧ್ಯಸ್ಥರು ಅಡುಗೆಗೆ ಬಂದರೆ ಎಷ್ಟು ನಿಶ್ಚಿಂತೆಯಿರುತ್ತಿತ್ತು... ಒಂಚೂರೂ ಹಾಳುಧೂಳು ಮಾಡದೆ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು; ಮನೆಯವರು ಒದಗಿಸಿದ ಮಿತ ವಸ್ತುಗಳಿಂದಲೇ ಎಷ್ಟು ಬಗೆಯ ರುಚಿರುಚಿಯಾದ ವ್ಯಂಜನಗಳನ್ನು ಸಿದ್ಧಪಡಿಸುತ್ತಿದ್ದರು... ಒಂದು ಸೌತೆಕಾಯಿಯಿಂದ ವ್ಯಂಜನಗಳ ಗುರುತೇ ಸಿಗದ ಹಾಗೆ ಮೂರ್ನಾಲ್ಕು ಬಗೆಯ ಪಾಕವನ್ನು ಮಾಡಿಡುತ್ತಿದ್ದರು... ಇಲ್ನೋಡು... ಎಲ್ಲ ತರಕಾರಿಯನ್ನೂ ಅರ್ಧರ್ಧ ಕತ್ತರಿಸಿ ಉಪಯೋಗಿಸಿದ್ದಾರಲ್ಲ? ಕತ್ತರಿಸಿ ಉಳಿಸಿದ ತರಕಾರಿ ನಾಳೆಗೆ ಹಾಳಾಗುವುದಿಲ್ಲವಾ? ಕಸದ ರಾಶಿ ನೋಡು... ಕಾಲಿಡಲೂ ಜಾಗ ಇಲ್ಲ... ಇಡೀ ಅಡುಗೆಕೋಣೆಯ ಗುರುತು ಸಿಗದಿದ್ದ ಹಾಗೆ ಮಾಡಿ ಇಡುವುದು ಯಾಕೆ? ಆ ಕುಪ್ಪಯ್ಯ ಮಧ್ಯಸ್ಥರು ಅಡುಗೆ ಪೂರೈಸಿ ಹೊರಟುಹೋದ ಮೇಲೆ ಆ ಅಡುಗೆ ಕೋಣೆಯನ್ನು ಒಮ್ಮೆ ಗುಡಿಸಿ ಒರೆಸಿದರೆ ನನ್ನ ಅಡುಗೆ ಕೋಣೆಯು ಮತ್ತೊಮ್ಮೆ ತಯಾರಾಗಿ ಬಿಡುತ್ತಿತ್ತು. ಈಗಿನ ಅಡುಗೆಯವರು ಚೆಲ್ಲಿಹೋದ ವಸ್ತುಗಳಿಂದ - ಇನ್ನೊಂದು ಸಮಾರಂಭವನ್ನೇ ಮಾಡಬಹುದು; ಇನ್ನೊಂದಷ್ಟು ಜನರಿಗೆ ಊಟ ಹಾಕಬಹುದು... ಇದೆಂತಹ ಕೆಲಸಗಾರರು ಈಗ ಹುಟ್ಟಿಕೊಂಡಿದ್ದಾರೆ?... ಮಗಾ, ಇನ್ನು ಮುಂದೆ ನನ್ನಿಂದ ಆಗುವಷ್ಟು ಜನರಿಗೆ ನಾನೇ ಅಡುಗೆ ಮಾಡ್ತೇನೆ... ಯಾವ ಅಡುಗೆಯವರನ್ನೂ ಕರೆಸುವುದು ಬೇಡ. ಈ ಹಾಳು - ಧೂಳಾಗುವುದನ್ನು ನನಗೆ ನೋಡಲಿಕ್ಕೆ ಆಗುವುದಿಲ್ಲ. ನಮ್ಮಿಂದ ಅಡುಗೆ ಮಾಡಲು ಆಗುವಷ್ಟು ಜನರಿಗೆ ಮಾತ್ರ ಊಟ ಹಾಕಿದರೆ ಸಾಕು... ಈ ಅಡುಗೆಯವರ ಸಹವಾಸವೇ ಬೇಡ..." ಹೀಗೆ ಗೊಣಗುಟ್ಟುತ್ತ ಮುಂದಿನ ಎರಡು ದಿನಗಳವರೆಗೂ ಅಮ್ಮನ ಪುರಾಣಪ್ರವಚನ ನಡೆಯುತ್ತಿತ್ತು. ಮುಂದೂ... ಮತ್ತೊಮ್ಮೆ ಅಡುಗೆಯವರನ್ನು ನಾವು ಕರೆಸುವುದು, ಅನಂತರ ಅಮ್ಮನ ಗೊಣಗಾಟ... ಇವೆಲ್ಲವೂ ಮರುಕಳಿಸುತ್ತಲೇ ಇತ್ತು.



ಕೆಲವು ವರ್ಷಗಳ ನಂತರ ಇನ್ನೊಬ್ಬರು ಅಡುಗೆಯವರು ಬಂದಿದ್ದರು. ಮನೆಯ ಸುತ್ತಲೂ ಓಡಾಡಿ ಕೆಲವು ಎಲೆ, ಬೇರುಗಳನ್ನು ತಾವೇ ಕಿತ್ತು ತಂದು, ನಾವು ಸೂಚಿಸಿದ ವ್ಯಂಜನಗಳ ಜೊತೆಗೆ ಇನ್ನೊಂದು ಹೊಸ ವ್ಯಂಜನವನ್ನೂ ತಯಾರಿಸಿದ್ದ ಅವರು, "ಇದೇನು ಹೇಳಿ? ಉಂಡು ರುಚಿ ನೋಡಿ ಪತ್ತೆ ಮಾಡಿ ನೋಡುವ.." ಎನ್ನುತ್ತ, ಅವರೇ ಬಡಿಸುತ್ತ ಊಟದ ಪಂಙ್ತಿಯಲ್ಲಿ ಓಡಾಡುತ್ತಿದ್ದರು. "ತುಂಬ ರುಚಿಯಾಗಿದೆ; ಯಾವುದರದ್ದೆಂದು ಗೊತ್ತಾಗುವುದಿಲ್ಲ..." ಎನ್ನುತ್ತ ಎಲ್ಲರೂ ಮತ್ತೆ ಮತ್ತೆ ಅದನ್ನು ಕೇಳಿ ಹಾಕಿಸಿಕೊಂಡು ರುಚಿಯ ಸಂಶೋಧನೆಯಲ್ಲಿ ಮುಳುಗುವಂತಾಗಿತ್ತು. ಆಗ ಆ ಅಡುಗೆಯವರು - ಎರಡು ಎಲೆ, ಒಂದು ಬೇರನ್ನು ಹಿಡಿದುಕೊಂಡು ಊಟದ ಪಂಙ್ತಿಯಲ್ಲಿ ಪ್ರದರ್ಶಿಸುತ್ತ "ನೋಡಿ...ಇದರ ತಂಬುಳಿ; ಇದರ ಚಟ್ನಿ..." ಎನ್ನುತ್ತ ಖುಶಿ ಪಡುತ್ತಿದ್ದರು. ರುಚಿಯಾಗಿ ಅಡುಗೆ ತಯಾರಿಸುವುದು ಮಾತ್ರವಲ್ಲದೆ ತಾವು ಮಾಡಿದ ಹೊಸ ರುಚಿಯನ್ನು ಎಲ್ಲರಿಗೂ ಖುಶಿಯಾಗುವಂತೆ ತಲುಪಿಸುತ್ತಿದ್ದ ಅವರ ಅಡುಗೆ ಮತ್ತು ಕಾರ್ಯಶೈಲಿಯನ್ನು ನೋಡಿ ನಾವೂ ಖುಶಿಪಟ್ಟಿದ್ದೆವು.

ಅಡುಗೆಯಲ್ಲಿ ಆಸಕ್ತಿಯಿದ್ದರೆ ಮತ್ತು "ತನ್ನದೇ ಕಾರ್ಯಕ್ರಮ" ಎಂಬ ಸಜ್ಜನಿಕೆಯಿದ್ದರೆ ಮಾತ್ರ ಇವೆಲ್ಲವೂ ಸಾಧ್ಯ. 100 ಜನರಿಗೆ ಬೇಕಾದಷ್ಟು ಅಡುಗೆ ತಯಾರಿಸಲು ಹೇಳಿದರೆ ಅಲ್ಲಿಂದಲ್ಲಿಗೆ ಸರಿಹೊಂದುವಂತೆ ಅವರು ಅಡುಗೆಯ ಪ್ರಮಾಣವನ್ನು ನಿಯಂತ್ರಿಸುತ್ತಿದ್ದ ರೀತಿಯು ಮಾತ್ರ ನನ್ನನ್ನು ಅಚ್ಚರಿಯಲ್ಲಿ ಕೆಡವಿದ್ದೂ ಇದೆ. ತಮ್ಮ ಕರ್ತವ್ಯವನ್ನು ಪೂರೈಸಿ ಹಿಂದಿರುಗುವ ಮೊದಲು ಖರ್ಚಾಗದೆ ಉಳಿದ ಭಕ್ಷ್ಯವನ್ನು ಹೇಗೆ ಜೋಪಾನ ಮಾಡಬಹುದು ಎಂಬ ಕಿವಿಮಾತನ್ನೂ ಹೇಳುತ್ತಿದ್ದ ಅಡುಗೆಯವರು - ಆ ಅಡಿಗರು! "ನಿಮ್ಮ ಅಡುಗೆ ತುಂಬ ಚೆನ್ನಾಗಿತ್ತು.." ಎಂದು ಮನೆಯೊಡೆಯ ಹೇಳಿದರೆ "ನಾವಂತೂ ಎಲ್ಲ ಕಡೆಯೂ ಒಂದೇ ರೀತಿ ತಯಾರಿಸುತ್ತೇವೆ. ಕೆಲವು ಸಾರಿ ತುಂಬ ರುಚಿಯಾಗಿರುತ್ತದೆ; ಕೆಲವು ಸಾರಿ ಹಾಗಿರುವುದಿಲ್ಲ. ಎಲ್ಲವೂ ಮಾಡಿಸಿದವರ ಪುಣ್ಯ! ಅನ್ನದಾತಾ ಸುಖೀಭವ!.."ಎನ್ನುತ್ತ ಕೈಯೆತ್ತಿ ಆಶೀರ್ವದಿಸುತ್ತಿದ್ದರು. ಆಗ "ಅಯ್ಯೋ ಮಾರಾಯ್ರೇ, ಅನ್ನದಾತ ನೀವು... ನಾವು ಉಂಡವರು; ಆದ್ದರಿಂದ ನೀವೂ ಸುಖವಾಗಿರಿ..."

ಹೀಗೆ - "ನೀವು ದೊಡ್ಡವರು - ನೀವು ದೊಡ್ಡವರು..." ಎಂದು ಪರಸ್ಪರ ಶುಭ ಹಾರೈಸಿಕೊಳ್ಳುವ ಸಜ್ಜನಿಕೆಯೂ ಮನೆಯಲ್ಲಿ ಪ್ರಕಾಶಿಸುತ್ತಿದ್ದುದುಂಟು. ಯಾವುದೇ ಕ್ರಿಯೆಯಲ್ಲಿ ತೊಡಗಿಕೊಳ್ಳುವವರು ಹೀಗೆ "ಕರ್ಮಣ್ಯ" ರಾದರೆ - ನಿಷ್ಣಾತರಾದರೆ - ಕುಶಲರಾದರೆ - ಮುಖ್ಯವಾಗಿ ಸಜ್ಜನರಾದರೆ ಅವರ ಕರ್ಮವು ಅವರಿಗೂ ಇತರರಿಗೂ ಸುಖ ನೀಡುತ್ತದೆ.

ಆದರೆ ಇಂದಿನ ಕಾರ್ಯಶೈಲಿಯು ಬದಲಾಗಿದೆ. ಯಾವುದೇ ಪುರಾಣವಾಚನದಿಂದ ಸರಿಹೋಗಲಾರದಷ್ಟು ಬದಲಾಗಿದೆ. ಒಂದೆಡೆ... ಮಾಡುವ ಕೆಲಸಕ್ಕೂ ಪಡೆಯುವ ಸಂಬಳಕ್ಕೂ ಅರ್ಥಾತ್ ಹೊಂದಿಕೆಯಿಲ್ಲದ - ಧನರಾಶಿಯ ಮೇಲೆ ಕೂತು ಮೂಲೆಮೂಲೆಗೆ ಹಾಯುತ್ತಿರುವ ಜಂಬದ ಮ್ಯಾಜಿಕ್, ಇನ್ನೊಂದೆಡೆ...ಅಂತಹ ದುಡ್ಡನ್ನು ಬೆವರು ಸುರಿಸುತ್ತ ತೊಳೆದು ಬಳಿದು ಬಿಡುವ ಇನ್ನೊಂದು ಲಾಜಿಕ್. ಇಂತಹ ಸಾಮಾಜಿಕ ಅಸಮಂಜಸ ಭಾವನೆಲೆಯಿಂದಾಗಿ - ಕಲಾತ್ಮಕವಾಗಿ ಕೆಲಸಮಾಡುವ - "ಎಲ್ಲರೂ ನಮ್ಮವರು" ಎಂಬ ಇಚ್ಛಾಶಕ್ತಿಯಲ್ಲಿಯೇ ಲೋಪವಾದಂತಿದೆ. "ಇವರಿಗೇನು ಧಾಡಿಯಾ? ಎಲ್ಲೆಲ್ಲೋ ದುಡ್ಡು ಚೆಲ್ಲುವ ಜನ... ದಾರಿ ಬದಿಯ ಏನೇನನ್ನೋ ತಿಂದು ಸುಖಿಸುವ ಜನ; ಇವರಿಗೆಲ್ಲ ಏನು ಮಾಡಿಹಾಕಿದರೂ ನಡೆಯುತ್ತದೆ; ಏನೋ ಎತ್ತಿ ಬಡಿದು ಕುಕ್ಕಿ ಹೋಗಿಬಿಡುವ... ನಮಗೇನಂತೆ?" ಎಂಬ ಹುಚ್ಚು ಅಡುಗೆಯಾಟಗಳಿಂದ ತಾತ್ಕಾಲಿಕ ಉಪಕಾರವಾದರೂ - ವೃತ್ತಿ ಮತ್ತು ವ್ಯಕ್ತಿ - ಎರಡರದೂ ಗೌರವ ಕುಸಿಯುತ್ತದೆ. ಒಮ್ಮೊಮ್ಮೆ ಅಧ್ವಾನಗಳೂ ಸಂಭವಿಸುವುದಿದೆ.

ಇತ್ತೀಚೆಗೆ ಮಂಗಳೂರಿನ ಒಬ್ಬರು ಅಡುಗೆಯವರಲ್ಲಿ ಒಂದು ಭಕ್ಷ್ಯವನ್ನು ಸಿದ್ಧಪಡಿಸಲು ಕೇಳಿಕೊಂಡಿದ್ದೆ. "ಒಂದು ಸಣ್ಣ Function ಇದೆ; ತೆಂಗಿನಕಾಯಿಯ ಸುಕ್ಕಿನುಂಡೆ ಮಾಡಿಕೊಡಿ.." ಅಂದಾಗ, "ಹಾಗೆಂದರೇನು?" ಅಂದರು. ಆಗ ಅಚ್ಚುಕಟ್ಟಾಗಿ ಕೂತು "ತಯಾರಿಸುವ ವಿಧಾನ" ವನ್ನು ಅವರಿಗೆ ವಿವರಿಸಿದೆ. "ಬಹಳ ಸುಲಭದ ಸಾಂಪ್ರದಾಯಿಕ ತಿಂಡಿ ಇದು. ನಾನೇ ಮನೆಯಲ್ಲಿ ಮಾಡಿದರೆ, ಕರಿದು ಉಳಿದ ಎಣ್ಣೆಯನ್ನು ಮತ್ತೊಮ್ಮೆ ಉಪಯೋಗಿಸಲು ಮನಸ್ಸೊಪ್ಪದೆ, ಅದನ್ನು ಚೆಲ್ಲುವಾಗ ಪ್ರತೀ ಬಾರಿಯೂ ಬೇಸರವಾಗುತ್ತದೆ. ಅದಕ್ಕೇ ನಿಮಗೆ ಹೇಳುತ್ತಿದ್ದೇವೆ. ಹೊಸ ಎಣ್ಣೆಯಲ್ಲಿಯೇ ತಯಾರಿಸಿ. ನಿಮ್ಮ ವೆಚ್ಚವನ್ನು ದಾಕ್ಷಿಣ್ಯವಿಲ್ಲದೆ ವಸೂಲಿ ಮಾಡಬಹುದು.." ಎಂದಿದ್ದೆ.

ತಕ್ಕಷ್ಟು ಬೆಲ್ಲದ ಹದವಾದ ಪಾಕ ಮಾಡಿಕೊಂಡು ಅದಕ್ಕೆ 10-12 ತೆಂಗಿನಕಾಯಿಯ ತುರಿ, ಸ್ವಲ್ಪ ಬೊಂಬಾಯ್ ರವೆ, ಏಲಕ್ಕಿ ಹುಡಿ, ಮತ್ತು ಪರಿಮಳಕ್ಕೆ ಎರಡು ಚಮಚ ತುಪ್ಪವನ್ನು ಬೆರೆಸಿ ಇಡಿ. ಸ್ವಲ್ಪ ತಣಿದ ಮೇಲೆ ಉಂಡೆ ಕಟ್ಟಿ. ನೆನಸಿಟ್ಟ ಎರಡು ಸಿದ್ದೆ ಅಕ್ಕಿಯನ್ನು ನುಣ್ಣಗೆ ಅರೆದು ಹಿಟ್ಟನ್ನು ತಯಾರಿಸಿಕೊಳ್ಳಿ. ಎರಡು ಚಿಟಿಕೆ ಉಪ್ಪನ್ನು ಆ ಅಕ್ಕಿಯ ಹಿಟ್ಟಿಗೆ ಮಿಶ್ರಮಾಡಿ, ಕಟ್ಟಿ ಇರಿಸಿದ ಉಂಡೆಯನ್ನು ಅದ್ದಿ ಹಾಕುವಷ್ಟು ದಪ್ಪಕ್ಕೆ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ಬಾಣಲೆಯಲ್ಲಿ ತೆಂಗಿನೆಣ್ಣೆಯನ್ನು ಹಾಕಿ ಕಾಯಿಸಿ, ಕಟ್ಟಿಟ್ಟ ಒಂದೊಂದೇ ಉಂಡೆಯನ್ನು ಆ ಆಕ್ಕಿಯ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ. ಬೆಂದ ಬಣ್ಣ ಬಂದ ಮೇಲೆ ಎತ್ತಿಡುತ್ತ ಬನ್ನಿ ಅಷ್ಟೆ..." ಅಂದೆ.

ನನ್ನ ಕತೆಯನ್ನೆಲ್ಲ ಕೇಳಿದ ಮೇಲೆ ಆ ಮಹಾನುಭಾವರು "ನೋಡಿ, ಈ ಮಂಗಳೂರಿನಲ್ಲಿ ಯಾರೂ ಇದನ್ನು ತಯಾರಿಸುವುದಿಲ್ಲ. ಉಡುಪಿ - ಕುಂದಾಪುರದ ಕಡೆ ತಯಾರಿಸಬಹುದು...ಕೇಳಿ ನೋಡಿ.." ಅಂದರು. "ತಯಾರಿಸುವ ವಿಧಾನವನ್ನು ನಾನು ಹೇಳಿದ್ದೇನಲ್ಲ? ಹಾಗೇ ತಯಾರಿಸುವುದೂ ಕಷ್ಟವೆ?" ಎಂದು ನಾನು ಚೌಕಾಸಿಗಿಳಿದೆ. "ಇಲ್ಲ; ಇಲ್ಲ. ನಾವು ಅದನ್ನು ತಯಾರಿಸುವುದೇ ಇಲ್ಲ... ನಾವು ದಿನವೂ ತಯಾರಿಸುವ ಹಿಟ್ಟಿನ ಹೋಳಿಗೆ, ಚಿಕ್ಕಿ, ನೆಲಗಡಲೆ ಉಂಡೆ, ಎಳ್ಳಿನುಂಡೆ... ಬೇಕಿದ್ದರೆ ಹೇಳಿ... ಮಾಡಿಕೊಡುತ್ತೇವೆ..." ಅಂದರು!

ಹೇಗಿದೆ?... "ಸ್ವಾಮೀ, ನನಗೆ ತೊಕ್ಕೊಟ್ಟಿಗೆ ಹೋಗಬೇಕು.. ಬರ್ತೀರಾ?" ಎಂದು ರಿಕ್ಷಾದವರನ್ನು ಕೇಳಿದರೆ "ತೊಕ್ಕೊಟ್ಟಿಗೆ ಬರಲಾಗುವುದಿಲ್ಲ; ನಾನು ಕೂಳೂರಿಗೆ ಹೋಗುತ್ತಿದ್ದೇನೆ; ನೀವೂ ಕೂಳೂರಿಗೆ ಬರುವುದಾದರೆ ರಿಕ್ಷಾ ಹತ್ತಿ... " ಎನ್ನುವಂತಿಲ್ಲವೇ ಕಾರ್ಯಶೈಲಿ?!!!

"ಅದೇಕೋ ಸಾಯಲಾರೆ... ಅದಕ್ಕೇ ಬದುಕಿದ್ದೇನೆ" ಎನ್ನುವಂತಹ ಭಾವ-ಬದುಕುಗಳಿವು. ತಾವು ಮಾಡುವ ಕೆಲಸದಲ್ಲಿ ಪ್ರೀತಿಯಿಲ್ಲದಿದ್ದರೆ ಶ್ರದ್ಧೆಯಿಲ್ಲದಿದ್ದರೆ ಇಂತಹ ಹಾಸ್ಯಪ್ರಸಂಗಗಳೂ ಹುಟ್ಟುತ್ತಿರುತ್ತವೆ. ನಮ್ಮದೇ ಕ್ಷೇತ್ರದ ವಿಷಯ ನಮಗೇ ಗೊತ್ತಿಲ್ಲ ಎನ್ನುವಾಗ ಸಂಕೋಚವಾಗುವುದು ಸಹಜ. ಆದರೆ ಅವರ ಮುಖದಲ್ಲಿ ಅಂತಹ ಬದಲಾವಣೆಯೇನೂ ಕಾಣಿಸಲಿಲ್ಲ. ಅನಂತರ ಕಾಯಿ ಸುಕ್ಕಿನುಂಡೆಯನ್ನು ನಾವೇ ತಯಾರಿಸಿ ತಿಂದೆವು - ಅಷ್ಟೆ.

ಗೊತ್ತಿಲ್ಲ ಎನ್ನುವುದು - ಕೆಲಸಗಳ್ಳತನ, ಅಸಡ್ಡೆ, ಬೇಜವಾಬ್ದಾರಿತನ... ಮುಂತಾದವುಗಳ ಒಂದು ಲಕ್ಷಣವೂ ಹೌದು. ಈ ಬದುಕಿನಲ್ಲಿ - ಕಲಿಯುವುದು ಎಂಬುದು ಮುಗಿಯುವುದೇ ಇಲ್ಲ. ಆದರೆ ಕಲಿಯುವ ಮನಸ್ಸು ಬೇಕು. ಹೊಸಹೊಸತನ್ನು ಕಲಿಯುವ ಉತ್ಸಾಹವೇ ಇಲ್ಲದಿದ್ದರೆ ಹೊಸ ರಂಜನೆಯಾದರೂ ಸಿಗುವುದು ಹೇಗೆ? ಅಡುಗೆ ಎಂದರೆ - ನಿತ್ಯವೂ ಮನಸ್ಸಿಗೆ - ದೇಹಕ್ಕೆ ಕೊಡುವ ವ್ಯಾಯಾಮ. ಮನೆಯ ವಿಚಾರಕ್ಕೆ ಬಂದರೆ, ಅಡುಗೆಯು ಕುಟುಂಬದ ಸದಸ್ಯರನ್ನು ದಿನವೂ ಹತ್ತಿರ ತರುವ ಬ್ರಹ್ಮಾಸ್ತ್ರ! ಶ್ರದ್ಧೆಯಿಂದ ಮಾಡಿದ ಅಡುಗೆಗೆ ರುಚಿಯೂ ಜಾಸ್ತಿ! ದಿನವೂ "I love you" ಎನ್ನುತ್ತ ನಾಟಕ ಮಾಡುವ ಬದಲು, ಊಟಕ್ಕೆ ಕೂತ ಸದಸ್ಯರು ಚಪ್ಪರಿಸಿಕೊಂಡು ಉಣ್ಣುವಂತೆ ಮಾಡಿದರೆ ಅದರಿಂದ ಸಂಬಂಧಗಳು ಗಟ್ಟಿಯಾಗುತ್ತವೆ. ಹೊಟ್ಟೆಯ ಕಾಳಜಿಯ ನೀರೆರೆಯದೆ ಪ್ರೀತಿಯ ಬಳ್ಳಿ ಹಬ್ಬಲಾರದು. ಹೊಟ್ಟೆ ತಣಿಯದೆ ಯಾವ ತತ್ತ್ವೋಪದೇಶವೂ ರುಚಿಸುವುದಿಲ್ಲ! ಅಡುಗೆಯು ಬದುಕನ್ನು ರಸಮಯಗೊಳಿಸುವ ಕಲೆ. ರುಚಿಕಟ್ಟಾದ ಅಡುಗೆಯ ಮಧ್ಯಸ್ಥಿಕೆಯಲ್ಲಿ ಪ್ರೀತಿಯು ಸಹಜವಾಗಿ ಅರಳುತ್ತದೆ. ಸ್ವಚ್ಛ ಅಡುಗೆಯ ನಿತ್ಯ ಕರ್ಮವೀರರಿಗೆ - ತೃಪ್ತಿಯು ಸುಲಭದ ತುತ್ತು.

ಇಂದಿನ ಅಡುಗೆಯವರಿಗೆ ಹೊಸ ಸೌಲಭ್ಯಗಳೆಲ್ಲವೂ ಸಿಗುತ್ತಿವೆ. ಗ್ರೈಂಡರ್, ಮಿಕ್ಸರ್, ಗ್ಯಾಸ್ ಒಲೆ, ಕುಕ್ಕರ್... ಮುಂತಾದ ಸೌಲಭ್ಯಗಳಿಂದಾಗಿ ಅಡುಗೆಯ ಕೆಲಸದ ಅರ್ಧ ಭಾರವು ಇಳಿದುಹೋಗುತ್ತದೆ. ಇಂದಿನ ಅಡುಗೆಯವರಲ್ಲಿ - "ಅರೆಯುವ ಸಾಂಪ್ರದಾಯಿಕ ಕಲ್ಲಿನಲ್ಲಿ ಅರೆದರೆ ಅದರ ರುಚಿಯೇ ಬೇರೆ; ಕಲ್ಲಿನಲ್ಲೇ ಅರೆಯಿರಿ.." ಅಂದರೆ - "ಇಲ್ಲಮ್ಮ; ತಡ ಆಗ್ತದೆ; ಮಿಕ್ಸರ್ ಕೊಡಿ;  ಗ್ರೈಂಡರ್ ಕೊಡಿ..." ಅನ್ನುತ್ತಾರೆ. ಅದನ್ನು ಶಿಸ್ತಿನಿಂದ ಎಚ್ಚರದಿಂದ ಉಪಯೋಗಿಸಿದರೆ ಪರವಾಗಿಲ್ಲ. ಆದರೆ ಅಡುಗೆಯ ಯುದ್ಧ ಮುಗಿದ ಮೇಲೆ ಆ ಗ್ರೈಂಡರ್ ನ್ನು ತೊಳೆಯಲು ಗಂಡಾಳಿನ ಸಹಾಯವೇ ಬೇಕಾಗುವಂತೆ ಅದಕ್ಕೆ ಸರ್ವಾಂಗ ಸುಂದರವಾಗಿ ಮೆತ್ತಿ ಇಡುವವರೂ ಇದ್ದಾರೆ! ಇದು ಕೆಲಸದ ರೀತಿ ಅಲ್ಲ; ಬೇಕಾಬಿಟ್ಟಿ - ಕರ್ತವ್ಯಚ್ಯುತಿ!

ನಿತ್ಯದ ಅಡುಗೆಯು ಸುಲಭದ ಸಂತೋಷ ನೀಡುವ ಕ್ರಿಯೆ. ಆದರೆ "ಅಡುಗೆಯ ವೃತ್ತಿ" ಎಂಬುದು ಬಲು ಕಷ್ಟದ ಉದ್ಯೋಗವೂ ಹೌದು. ಅಡುಗೆಗೆಂದು ಎಲ್ಲೆಲ್ಲೋ ಸುತ್ತಬೇಕು; ವಿಭಿನ್ನ ಸಂಸ್ಕಾರದವರೊಂದಿಗೆ ಏಗಬೇಕು. ಗುರುತು ಪರಿಚಯವಿಲ್ಲದ ಸ್ಥಳ, ಸಂದರ್ಭಗಳನ್ನು ನಿಭಾಯಿಸುವುದು ಊಟ ಮಾಡುವಷ್ಟು ಸುಲಭವೇನಲ್ಲ. 100 ಜನರಿಗೆ ಅಡುಗೆ ಮಾಡಲು ಆದೇಶಿಸಿದಲ್ಲಿ 200 ಜನರು ಬಂದು ಊಟಕ್ಕೆ ಕುಳಿತುಕೊಳ್ಳುವುದೂ ಇದೆ. ಆಗ ಮನೆಯ ಯಜಮಾನರ ಮರ್ಯಾದೆಯನ್ನು ಉಳಿಸುವ ಕೆಲಸವನ್ನು ಅಡುಗೆಯವರು ದಕ್ಷತೆಯಿಂದ ನಿರ್ವಹಿಸಿದ್ದನ್ನು ನಾನು ಕಂಡಿದ್ದೇನೆ. ವಿಭಿನ್ನ ವರ್ತನೆಯ ಜನರೊಂದಿಗೆ ನಿತ್ಯವೂ ವ್ಯವಹರಿಸಬೇಕಾದ ಅನಿವಾರ್ಯತೆಯನ್ನು ಸಹಜವಾಗಿ ಸ್ವೀಕರಿಸುವ ಕ್ರೀಡಾ ಮನೋಭಾವವಿದ್ದಾಗ ಮಾತ್ರ ಅಡುಗೆಯ ವೃತ್ತಿಯನ್ನು ಸಮಾಧಾನದಿಂದ ನಿಭಾಯಿಸಬಹುದು.

ಗಂಟೆಗಟ್ಟಲೆ ಬೆಂಕಿಯ ಮುಂದೆ ನಿಂತು ಬೆವರು ಸುರಿಸಿ ದುಡಿಯುವ ಅಡುಗೆಯ ಕಾರ್ಮಿಕರು ಊಟ ಮಾಡುವುದನ್ನೂ ನಾನು ನೋಡಿದ್ದೇನೆ. ಹತ್ತಾರು ಬಗೆಯ ಪದಾರ್ಥಗಳನ್ನು ತಯಾರಿಸುವ ಇವರು ಯಾವುದೋ ಒಂದು ಸಾರನ್ನು ಸುರಿದುಕೊಂಡು ಉಂಡು ಎದ್ದು ಬಿಡುತ್ತಾರೆ. ಉಂಡವನಿಗೆ ಹಸಿವೆ ಜಾಸ್ತಿ; ಉಣ್ಣುವುದನ್ನಷ್ಟೇ ಮಾಡುವವರಿಗೆ ಇನ್ನೂ ಜಾಸ್ತಿ! ಆದರೆ ಅಡುಗೆಯನ್ನು ಸಿದ್ಧಪಡಿಸುವವರಿಗೆ ಹಸಿವೆ ಕಡಿಮೆ. ಊಟದ ಹೊತ್ತಿನಲ್ಲಿ ದೈಹಿಕವಾಗಿ, ಮಾನಸಿಕವಾಗಿ ಬಸವಳಿದ ಸ್ಥಿತಿಯಲ್ಲಿರುವ ವಿಶೇಷದ ಅಡುಗೆಯವರು ಊಟದ ಶಾಸ್ತ್ರ ಮಾಡಿ ಎದ್ದು ಬಿಡುತ್ತಾರೆ. ನಿತ್ಯವೂ ವಿಶೇಷದ ಅಡುಗೆಯನ್ನು ಮಾಡಿ, ಕಂಡು, ತಾವು ಮಾಡಿದ್ದನ್ನು ತಾವೇ ಉಂಡು, ಆ ಘಾಟನ್ನು ಅನುಭವಿಸುವ ಅಂತಹ ಮಂದಿಗೆ ಅಂತಹ ಭರ್ಜರಿ ಊಟವು ಬೇಕೆಂದು ಅನ್ನಿಸುವುದೇ ಇಲ್ಲ. ಕೆಲವರು "ನಾವು ರಾತ್ರಿ ಮನೆಗೆ ಹೋಗಿ ಹೆಂಡತಿ ಮಾಡಿ ಹಾಕುವ ಗಂಜಿ-ಉಪ್ಪಿನಕಾಯಿ ಊಟವನ್ನು ಹೊಟ್ಟೆ ತುಂಬ ಉಣ್ಣುತ್ತೇವೆ... ನಮಗೆ ಅದೇ ಇಷ್ಟ!..." ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ. ದೊಡ್ಡ ಪ್ರಮಾಣದಲ್ಲಿ ಅಡುಗೆ ಮಾಡುವ, ಅಡುಗೆಯನ್ನೇ ಅವಲಂಬಿಸಿರುವ ವೃತ್ತಿನಿರತರು - ನಿಷ್ಠೆಯನ್ನು ಮತ್ತು "ಅಗ್ನಿಕಾರ್ಯ" ಎಂಬ ಮನೋವಿನಮ್ರತೆಯನ್ನು ರೂಢಿಸಿಕೊಂಡರೆ ಆ ಉದ್ಯೋಗವು ಅವರಿಗೆ ಹಿಂಸೆಯೆನಿಸುವುದಿಲ್ಲ. ನೂರು ಊರು, ನೂರಾರು ಬಗೆಯ ಜನರನ್ನು ಕಂಡು ವ್ಯವಹರಿಸುವ ಅಡುಗೆಯ ವೃತ್ತಿಯನ್ನು ಮತ್ತು ಆ ವೃತ್ತಿಧರ್ಮವನ್ನು ಆಯಾ  ವೃತ್ತಿನಿರತರು, ಯಾವುದೇ ಕೀಳರಿಮೆಯಿಲ್ಲದೆ ಸ್ವತಃ ಗೌರವದಿಂದ ಕಾಣಲು ಸಾಧ್ಯವಾದರೆ - ಇತರರಿಗೂ ಗೌರವ ಮೂಡುತ್ತದೆ; ವೃತ್ತಿಗೂ ವೃತ್ತಿನಿರತರಿಗೂ ಗೌರವ ಹೆಚ್ಚುತ್ತದೆ; ಆತ್ಮತೃಪ್ತಿಯೂ ಸಿಗುತ್ತದೆ.

ಅಡುಗೆಯ ಕೆಲಸವು ಕೀಳಲ್ಲ. ಅದಕ್ಕಾಗಿ ಕೀಳರಿಮೆಯೂ ಸಲ್ಲ. ಅನೇಕ ವರ್ಷಗಳಿಂದ "ಲೋಕಾಸ್ಸಮಸ್ತಾಸ್ಸುಖಿನೋ ಭವಂತು" ಎನ್ನುತ್ತ ಜಗದ ಜೀವಿಗಳಿಗೆ ಉಣ್ಣಿಸುತ್ತ, ಶಕ್ತ್ಯೋತ್ಸಾಹಗಳನ್ನು ತುಂಬುತ್ತ ಬಂದಿರುವ ವರ್ಗವಿದು. ಬದಲಾದ, ಆಗುತ್ತಿರುವ ಸಾಮಾಜಿಕ ಸನ್ನಿವೇಶದಲ್ಲಿ ಯಜ್ಞವೆಂಬ ಭಾವದಿಂದ ಇಳಿದು - ವ್ಯವಹಾರದ ನೆಲೆಗೆ ಕುಸಿದಿರುವ ಆಹಾರ ತಯಾರಿಯ ವಿಭಾಗವು - ಪ್ರಾಮಾಣಿಕ, ಶುದ್ಧ ಆಹಾರವನ್ನು ನೀಡುವ ಸಂಕಲ್ಪ ಮಾಡಿ, ಸ್ಥಿತ್ಯಂತರದ ಸನ್ನಿವೇಶದಲ್ಲಿಯೂ ಸಾಮಾಜಿಕ ದೇಹಸ್ವಾಸ್ಥ್ಯದ ಉದ್ದೇಶವನ್ನೇ ಹೊಂದಿದ್ದರೆ - ಸ್ವಾಂತ ಸುಖ ನೆಮ್ಮದಿಯ ಜೊತೆಗೆ ಸಮಷ್ಟಿಯ ಸುಖವನ್ನೂ ಕಾಪಾಡಿದಂತಾದೀತು.

ಪಾಕಕಲೆಯನ್ನು ಉಪಾಸಿಸುವವರು ಎಂದೂ ಸೋಲುವುದಿಲ್ಲ. ಆದರೆ ಆತ್ಮವಿಶ್ವಾಸ ಬೇಕು. ಕಷ್ಟಸಹಿಷ್ಣುಗಳಾಗಬೇಕು. ಅಡುಗೆಯ ಕಲೆಯು ಮುಂದಿನ ದಿನಗಳಲ್ಲಿ ಅತ್ಯಂತ ಬೇಡಿಕೆಯುಳ್ಳ ಕಲೆಯಾಗಿ ಪರಿವರ್ತಿತವಾಗಲಿದೆ. "ಇಂಗು ತೆಂಗು ಇದ್ದರೆ ಮಂಗವೂ ಅಡುಗೆ ಮಾಡುತ್ತದೆ " ಎಂಬ ನಾಣ್ನುಡಿಯಿದೆ ! ಆದರೆ "ಕಲಿಯುವ ಮನಸ್ಸಿದ್ದರೆ..." ಎಂಬುದನ್ನು ಸೇರಿಸಿ ಆ ನುಡಿಗಟ್ಟನ್ನು ಓದಿಕೊಳ್ಳಬೇಕು. ಒಲೆಯ ಮೇಲೆ ಪಾತ್ರೆಯನ್ನು ಅಂಗಾತ ಇಡಬೇಕಾ? ಕವುಚಿ ಇಡಬೇಕಾ? ಎಂದೂ ಗೊತ್ತಿಲ್ಲದವರ ಸಂಖ್ಯೆಯೂ ಈಗೀಗ ಹೆಚ್ಚಾಗುತ್ತಿದೆ. ELECTRIC OVEN ನ ಮಾರ್ಗದರ್ಶನದಂತೆ ವಿಧೇಯವಾಗಿ ನಡೆಯುವ ಏಕಾಂಗವೀರರು ಹೆಚ್ಚುತ್ತಿದ್ದಾರೆ! ಪೇಟೆಯಲ್ಲಿ ಸಿಗುವ ಸಿದ್ಧ ಪ್ಯಾಕೇಟುಗಳ ಆಹಾರವನ್ನು OVEN ನ ಒಳಗಿಟ್ಟು ಕೇವಲ ರೂಪ ಬದಲಿಸಿಕೊಂಡು (!) ಮಾಡಿದ್ದುಣ್ಣುತ್ತ ದಿನದೂಡುವವರೂ ಹೆಚ್ಚುತ್ತಿದ್ದಾರೆ. ಇಂತಹ ಕಾಲಘಟ್ಟದಲ್ಲಿ, ಪಾಕ ಪ್ರವೀಣರು ಈ ದುರ್ದಿನಗಳ ದುರುಪಯೋಗ ಮಾಡಿಕೊಳ್ಳದೆ - ಸ್ವಾಮಿ ಕಾರ್ಯವೆಂಬ ಶ್ರದ್ಧೆಯಿಂದ - ಪಾಕಶಾಸ್ತ್ರದ ಸದುಪಯೋಗಪಡಿಸಿಕೊಂಡರೆ ಮುಂದಿನ ದಶಕವು ನಿಸ್ಸಂಶಯವಾಗಿ "ಪಾಕ ಶಾಸ್ತ್ರ"ದ ಮಡಿಲನ್ನು ಏರಲಿದೆ! ಏಕೆಂದರೆ ರುಚಿಗೆ ಒಲಿಯದ ಸೃಷ್ಟಿಯಿಲ್ಲ ! ಈ ಹಂತದಲ್ಲಿ ಅಡುಗೆಯನ್ನು ಬಲ್ಲವರು ತಮ್ಮ ಶಾಸ್ತ್ರೀಯ ರೀತಿ ನೀತಿ ಗಳನ್ನು ಅನುಸರಿಸಿ ಅದರ ನಿತ್ಯಾನುಷ್ಠಾನವನ್ನು ನಡೆಸಿದರೆ - ಅಡುಗೆಯವರೂ ಗೆಲ್ಲುತ್ತಾರೆ; ಅದನ್ನು ಸೇವಿಸಿದವರೂ ಉಳಿಯುತ್ತಾರೆ....     

ರೀತಿ ನೀತಿ - ಇದು ಜೋಡಿ ಪದ. ಪ್ರತಿಯೊಂದು ಕೆಲಸದ ನಿರ್ವಹಣೆಗೂ ರೀತಿಯಿರುವಂತೆ ನೀತಿಯೂ ಇರುತ್ತದೆ. "ನಾವು ಮಾಡುವ ಕೆಲಸ ಹೀಗಿರಲಿ ಜೀಯ; ನಿಸ್ಸೀಮ ನಿಸ್ಪೃಹತೆ ಗೆಲ್ಲುವುದು ತಿಳಿಯ..."

                                                              ()()()()()()()()