Saturday, November 4, 2017

ಕಾಡುವ ರೋಗಿಗಳು, ವೈದ್ಯರು ಮತ್ತು ಕಾಡಿನ ನ್ಯಾಯದ ಪ್ರತೀಕವೆನಿಸುತ್ತಿರುವ ಸರಕಾರಗಳು.


ನಮ್ಮ  ಕರ್ನಾಟಕವು ಕಲೆ, ಸಾಹಿತ್ಯ, ಸಂಸ್ಕೃತಿ, ಸಜ್ಜನಿಕೆ, ಶಿಕ್ಷಣದ ಮಜಲಿನಲ್ಲಿ ವಿಶ್ವದಲ್ಲೇ ಪ್ರಸಿದ್ಧಿ ಪಡೆದಿದ್ದ ರಾಜ್ಯ. ಆದರೆ ಈ ನವೆಂಬರ ೩ ರಂದು - ಅಂತಹ ಭವ್ಯ ಪರಂಪರೆಗೆ ಮಸಿ ಬಳಿದ ದಿನವಾಗಿ ದಾಖಲಾಗುವಂತಾಯಿತು. ಸರ್ವಜ್ಞನ ಕಾಲದ ಮೇಟಿ ವಿದ್ಯೆಗೂ ಇವತ್ತಿನ ಮೇಟಿ ವಿದ್ಯೆಗೂ ಅರ್ಥಾತ್ ಸಂಬಂಧವಿಲ್ಲ ಎಂಬುದನ್ನು ಪ್ರದರ್ಶಿಸಲು ಕಾರಣವಾದದ್ದು - ಇಂದಿನ ಕರ್ನಾಟಕ ಸರಕಾರವು ತರಾತುರಿಯಿಂದ ಜ್ಯಾರಿಗೆ ತರಲು ಮುಂದಾಗಿದ್ದ KPME(A) - (ಖಾಸಗಿ ಆಸ್ಪತ್ರೆಗಳ ನಿಯಂತ್ರಣ ತಿದ್ದುಪಡಿ) ಕಾಯಿದೆಯ - ನಡೆ.


"ಜನೋಪಕಾರಿ" ಎಂದು ಸರಕಾರವು ಬಣ್ಣಿಸುತ್ತಿರುವ ಈ ಕಾಯಿದೆಯು ಏನು ಹೇಳುತ್ತದೆ ?

೧. ವೈದ್ಯರ ಫೀಸನ್ನು ನಿರ್ಧರಿಸುವುದು ಸರಕಾರ. ಈಗ ಮುಂದಿಡಲಾದ ವೈದ್ಯರ Consultation ಶುಲ್ಕ...  ತಾಲೂಕು ಮಟ್ಟದಲ್ಲಿ - ೫೦, ಜಿಲ್ಲಾ ಮಟ್ಟದಲ್ಲಿ - ೧೦೦, ಮೆಟ್ರೋ ನಗರಗಳಲ್ಲಿ - ೧೫೦. ಶಸ್ತ್ರ ಚಿಕಿತ್ಸೆಯ ದರವನ್ನೂ ಸರಕಾರವೇ ನಿರ್ಧರಿಸಿ, ಹೇರಲಾಗುತ್ತದೆ. ಉದಾ: Appendectomy ನಡೆಸಿದರೆ - ತಾಲೂಕು ಮಟ್ಟದ ವೈದ್ಯರಿಗೆ ಕೇವಲ ೯೦೦ ರೂಪಾಯಿ ನೀಡಬೇಕಂತೆ. (ಶರಿ ಸರ್.)

೨. ಅಕಸ್ಮಾತ್, "ವೈದ್ಯರು ೯೦೦ ರೂ.ಗಿಂತ ಹೆಚ್ಚು ಪಡೆದುಕೊಂಡಿದ್ದಾರೆ" ಎಂದು ಯಾವುದೇ ಒಬ್ಬ ರೋಗಿಯು ದೂರು ನೀಡಿದರೆ, ಅಥವ - ವೈದ್ಯರು ತನ್ನೊಂದಿಗೆ ಯುಕ್ತ ರೀತಿಯಲ್ಲಿ (properly) ಮಾತನಾಡಿಲ್ಲ ಎಂಬ ದೂರು ಸಲ್ಲಿಸಿದರೆ - ಅಂತಹ "ಅಪರಾಧಿ ವೈದ್ಯರಿಗೆ" ೫ ವರ್ಷ ಜೈಲು ಶಿಕ್ಷೆ ಮತ್ತು ೫ ಲಕ್ಷ ದಂಡ ವಿಧಿಸಲಾಗುವುದು.
(ಕಾನೂನಿನ ದುರುಪಯೋಗದಲ್ಲಿ ತಮ್ಮ ತಮ್ಮ ಮತದಾರ ಬಂಧುಗಳನ್ನು ಈಗಾಗಲೇ ಪಳಗಿಸಿಬಿಟ್ಟಿರುವ ನಮ್ಮ "ಕಾನೂನು ನಿರ್ಮಾತೃ ದೊಣ್ಣೆನಾಯಕರು" - ಈ ಕಾನೂನು ಜ್ಯಾರಿಯಾದರೆ.. ಏನೇನೆಲ್ಲ ಮಾಡಿಸಬಹುದು ಎಂಬುದನ್ನು -  ಪ್ರಜ್ಞಾವಂತರಾದ ನಾಗರಿಕರಿಗೆ ಹೇಳುವ ಅಗತ್ಯವಿಲ್ಲ. ಸಣ್ಣ ಪುಟ್ಟ ಕಾರಣಗಳು ಇಲ್ಲದಿರುವಾಗಲೂ - ಬಿಟ್ಟಿ ಸೇವೆ ಪಡೆಯುವ ದುರುದ್ದೇಶದಿಂದಲೇ - ವೈದ್ಯರನ್ನು "Blackmail" ಮಾಡುವ ಧಂದೆಯನ್ನೇ ನಡೆಸುವ ಹೊಸ ರಾಕ್ಷಸೀ ಕೇಂದ್ರಗಳು ಸಮಾಜದಲ್ಲಿ ಅಟ್ಟಹಾಸಗೈಯ್ಯಲು ತೊಡಗಬಹುದು.)
ಇಷ್ಟೇ ಅಲ್ಲ...
ಅಪರಾಧೀ ಸ್ಥಾನಕ್ಕೆ ತಳ್ಳಲ್ಪಡುವ ಯಾವುದೇ ವೈದ್ಯನಿಗೆ ತನ್ನ ವಾದವನ್ನು ಮಂಡಿಸಲು ಯಾವುದೇ ವಕೀಲರ ನೆರವನ್ನು ನಿರಾಕರಿಸಲಾಗುತ್ತದೆ; ವೈದ್ಯರು ಏಕಾಂಗಿಯಾಗಿ ಕ್ರೂರ ವಿಚಾರಣೆಯನ್ನು ಎದುರಿಸಿ, ತಮ್ಮ ಅಹವಾಲನ್ನು ತಾವೇ ಮಂಡಿಸಬೇಕಾಗುತ್ತದೆ.

೩. ವೈದ್ಯರ ಮೇಲ್ವಿಚಾರಣೆಗೆ ೫ ಸದಸ್ಯರ ಒಂದು ಕಮಿಟಿಯನ್ನು ಸ್ಥಾಪಿಸುತ್ತಾರಂತೆ. ಅದರಲ್ಲಿ ಅವಿದ್ಯಾವಂತನೂ ಆಗಿರಬಹುದಾದ - ಜಿಲ್ಲಾ ಪಂಚಾಯತ್ ನ ಅಧ್ಯಕ್ಷ, ಜಿಲ್ಲಾ ಆರೋಗ್ಯ ಅಧಿಕಾರಿ (DHO), ಜಿಲ್ಲಾ ದಂಡಾಧಿಕಾರಿ (DC) ಹಾಗೂ ಒಬ್ಬ ಆಯುರ್ವೇದ ವೈದ್ಯರು ಒಳಗೊಂಡಿರುತ್ತಾರಂತೆ. ಈ ೫ ಮಂದಿ ಸೇರಿಕೊಂಡು ಖಾಸಗಿ ವೈದ್ಯರಿಗೆ - ಸರಕಾರೀ ಮದ್ದು ಅರೆಯುತ್ತಾರಂತೆ ! ಈ ಯಾವುದೇ ಮಹಾನುಭಾವರು (ತಮಗೆ ಆರ್ಥಿಕ ಸಂಕಟ ಒದಗಿದಾಗೆಲ್ಲ) ಯಾವುದೇ ಖಾಸಗಿ ವೈದ್ಯರ ಆಸ್ಪತ್ರೆಗೆ ಹೋಗಿ, ಅವರವರಿಗೆ ಖುಶಿ ಕಂಡಂತೆ ಯಾವುದೇ ದಾಖಲೆ ಪತ್ರಗಳನ್ನು ಕೇಳಬಹುದು; ಓದಬಹುದು; ಧಮಕಿ ಹಾಕಬಹುದು ! ಯಾವುದೇ ಕೋರ್ಟಿನಲ್ಲೂ ಈ ಬಗೆಯ ಸರ್ವಾಧಿಕಾರವನ್ನು ವೈದ್ಯರು ಪ್ರಶ್ನಿಸುವ ಅಧಿಕಾರ - ಬಹುಶಃ - ಹೇಗೂ ಇರುವುದಿಲ್ಲ !.

೪. ಇವತ್ತಿನ RTI activists ಎಂಬ ಹೆಸರಿನಲ್ಲಿ ಅದನ್ನೇ ತಮ್ಮ ಜೀವನೋಪಾಯ ಮಾಡಿಕೊಂಡಿರುವ ಕೆಲವು ಮಂದಿಯಂತೆ, ..ಈ KPMEA act ಗೆ ಒಪ್ಪಿಗೆ ದೊರೆತರೆ ಇನ್ನೊಂದಷ್ಟು "ಬಿಲ್ವಿದ್ಯಾ ಪರಿಣತರು" ಉದ್ಯೋಗ ಸಂಪಾದಿಸುವಂತಾಗಬಹುದು. ನಮ್ಮ ಸರಕಾರಗಳು ಉದ್ಯೋಗ ಸೃಷ್ಟಿಸುವ ರೀತಿ ಇದು ! ಪ್ರತೀ ಆಸ್ಪತ್ರೆಯಲ್ಲೂ ಹೀಗೆ "ಮೇಯಲು ಬರುವವರನ್ನು" ಮೇಯಿಸುವುದಕ್ಕೆಂದೇ ಒಂದು ವಿಭಾಗವನ್ನು ತೆರೆಯಬೇಕಾಗಬಹುದು.

೫. ಯಾವುದೇ "ಸರಕಾರೀ ಕಿರಿಕಿರಿ" ಇಲ್ಲದೆ ವೈದ್ಯ ವೃತ್ತಿ ನಡೆಸಬೇಕಾದರೆ - ತಿಂಗಳು ತಿಂಗಳು - "ಹಫ಼್ತಾ" ಸಲ್ಲಿಸುವ ಸಂಪ್ರದಾಯವನ್ನು ಬೆಳೆಸಿಕೊಳ್ಳಲೇಬೇಕಾಗುತ್ತದೆ. ತತ್ಪರಿಣಾಮವಾಗಿ, ಅಡ್ಡದಾರಿಯಿಂದ ಹಣದೋಚುವ ಕ್ರಿಯೆಯನ್ನು ನಡೆಸುತ್ತಿದ್ದಾರೆಂದು ಹೇಳಲಾಗುವ ವೈದ್ಯ ಮಹಾಶಯರುಗಳ ವ್ಯವಹಾರಗಳನ್ನೆಲ್ಲ ಶಾಸನಬದ್ಧಗೊಳಿಸಿದಂತಾಗಬಹುದು - ಅಷ್ಟೆ. ಔಷಧದ ಮಳಿಗೆಯನ್ನು (Pharma) ಈಗಾಗಲೇ ಈ ಚಾಳಿಗೆ ಒಗ್ಗಿಸಿದಂತೆಯೇ, ವೈದ್ಯವಲಯಕ್ಕೂ ಶಾಸನದ ಬಡಿಗೆ ತೋರಿಸಿ, ಹಫ಼್ತಾರಾಧನೆಗೆ ವಿಶೇಷ ಪಡೆಯನ್ನು ಸಿದ್ಧಪಡಿಸುತ್ತಿರುವ ಸರಕಾರೀ ಅಟ್ಟಹಾಸದಂತೆಯೂ - ಈ ಸರಕಾರೀ ಘೋಷವು ಕೇಳಿಸಿದಂತಾಗುತ್ತಿದೆ.

ಆದರೆ... ಬಹುಪಾಲು ವಿಕಲ ಚೇತನ ಸ್ಥಿತಿಯಲ್ಲಿರುವ ಸರಕಾರೀ ಆಸ್ಪತ್ರೆಗಳು ಈ ಕಾಯಿದೆಯ ಅಡಿಯಲ್ಲಿ ಬರುವುದಿಲ್ಲವಂತೆ !

ತನ್ಮಧ್ಯೆ, ಪ್ರತಿಯೊಬ್ಬ ಪ್ರಜೆಗೂ "Universal Health Card" ತರುತ್ತಾರಂತೆ. ಇದು - ರೋಗಿಯೊಬ್ಬ ಅತ್ತೆ ಮನೆಗೆ ಅಳಿಯ ಬಂದಂತೆ ಯಾವುದೇ ಆಸ್ಪತ್ರೆಗಳಿಗೆ ಬಂದು, ಚಿಕಿತ್ಸೆಯ ಉಪಚಾರ ಪಡೆದುಕೊಂಡು ಹೋಗುವ ಕ್ರಮವಂತೆ ! ಸರಕಾರವೇ ಅಂತಹ ರೋಗಿಗಳ ವೆಚ್ಚವನ್ನು ಅನಂತರ (?) ಆಸ್ಪತ್ರೆಗಳಿಗೆ ಪಾವತಿಸುವುದಂತೆ. ಆಸ್ಪತ್ರೆಗಳಿಗೆ ಇಂತಹ "ಸರಕಾರೀ ಬಾಕಿಗಳು" ಬಂದು ತಲುಪುವಾಗ ವರ್ಷಗಳು ಕಳೆಯುವುದೂ ಇದೆಯಂತೆ ! ಸಣ್ಣ ಸಣ್ಣ ಆಸ್ಪತ್ರೆಗಳು ಬದುಕುವುದಾದರೂ ಹೇಗೆ ? ಎಂದು ಅಲವತ್ತುಕೊಳ್ಳುವ ವೈದ್ಯರೂ ಇದ್ದಾರೆ. ಹೀಗೆ ಎಲ್ಲರೂ ಬಂದು ಹೋಗುವ ಅತಿಥಿಗಳಾದರೆ, ತಮ್ಮ ಆಸ್ಪತ್ರೆ ಸಿಬ್ಬಂದಿಗಳ ಸಂಬಳ, ಮೇಲ್ಖರ್ಚುಗಳನ್ನೆಲ್ಲ ನಿಭಾಯಿಸುವುದಾದರೂ ಹೇಗೆ ? ಎಂಬ ಚಿಂತೆಯು ಯಾವುದೇ ವೈದ್ಯರನ್ನು ಕಾಡಿದರೆ ಅದರಲ್ಲಿ ಆಶ್ಚರ್ಯ ಪಡಬೇಕಾದ ಕಾರಣವು ಕಾಣುವುದಿಲ್ಲ. ತನಗೆ ಸಂಬಂಧವಿಲ್ಲದ ಅಥವ ತಕ್ಷಣ ಗಮನ ಹರಿಸಬೇಕಾದ ಉಳಿದೆಲ್ಲ ಕೆಲಸಗಳನ್ನು ಬದಿಗೊತ್ತಿ, ಇಂತಹ ಗೋಷ್ಬಾರಿ ವ್ಯವಹಾರಗಳನ್ನು ಯಾವುದೇ ಸರಕಾರ ಯಾಕೆ ನಡೆಸಬೇಕು ? ತಮ್ಮಿಂದ  ಆಸ್ಪತ್ರೆಗಳಿಗೆ ಸಲ್ಲಬೇಕಾದ ಹಣವನ್ನು ತಕ್ಷಣ Digital Transfer ಮಾಡಬಾರದೇಕೆ ? ಈ ಸರಕಾರೀ ಬಾಬುಗಳು ಕೊಡಬೇಕಾದ ಹಣವನ್ನು ಬಾಕಿಯಿರಿಸಿಕೊಂಡು, ಮೀನಮೇಷ ನೋಡುತ್ತಿದ್ದರೆ... ಈ ಬಿಲ್ಲ್ ಗಳನ್ನೆಲ್ಲ ಮಂಜೂರು ಮಾಡಿಸಿಕೊಳ್ಳಲು, ಅಕಸ್ಮಾತ್, Suitcase ಹಿಡಿದುಕೊಂಡು ಓಡಾಡಬೇಕಾದೀತೆ ? (Development, ಸಾಮಾಜಿಕ ನ್ಯಾಯ ಮುಂತಾದ ಹೆಸರಿನಲ್ಲಿ ಇತ್ತೀಚೆಗೆ ದಿನನಿತ್ಯವೂ ಸೃಷ್ಟಿಸಲ್ಪಡುತ್ತಿರುವ ಇಂತಹ "ಮಾಯಾ ಜಿಂಕೆ"ಗಳನ್ನು, ಅವುಗಳ ಮಾಯಕಗಳನ್ನು ಒಪ್ಪಿ ಸ್ವೀಕರಿಸುವಂತೆ ಪ್ರಜೆಗಳನ್ನು ರೂಪಿಸುತ್ತಿರುವುದರಿಂದಾಗಿ, ಎಲ್ಲಬಗೆಯ ಅಪರಾತಪರಾಗಳೂ "ಪ್ರಜಾಭಾಗ್ಯ" ಆಗಿ ಹೋಗುವಂತಾಗಿರುವುದರಿಂದ - ವಿಶ್ವಾಸ ಭಾಗ್ಯವೇ ಕ್ಷೀಣಿಸುವಂತಾಗಿದೆ ! ) ಅಕಸ್ಮಾತ್, ದೊಡ್ಡ ಆಸ್ಪತ್ರೆಗಳು ಇಂತಹ ಬೆನ್ನುಬೀಳುವ ಓಡಾಟಗಳನ್ನು ಹೇಗೋ ನಿಭಾಯಿಸಿದರೂ... ಸಣ್ಣ ಕ್ಲಿನಿಕ್ ಗಳನ್ನಿಟ್ಟುಕೊಂಡವರೇ ಈ ಕಾಯ್ದೆಯ ಬಲಿಪಶುವಾಗುವ ಸಾಧ್ಯತೆಯೂ ಹೆಚ್ಚು.

ಈ ಸರಕಾರಗಳಿಗೆ ಸಮಾಜದ ಯಾವುದೇ ವ್ಯವಸ್ಥೆಗಳು ಪೂರ್ತಿ ಸುವ್ಯವಸ್ಥಿತವಾಗಿಬಿಟ್ಟರೆ... ಏನೇನೂ ಸಮಾಧಾನವಿಲ್ಲ ಅನ್ನಿಸುವುದಿಲ್ಲವೇ ? ಸರಕಾರಗಳಿಗೆ ನಿಜವಾಗಿಯೂ ಜನಪರ ಕಾಳಜಿ ಇದ್ದರೆ - ಅನೇಕ ಮಾರ್ಗಗಳೂ ಇದ್ದೇ ಇರುತ್ತವೆ. ಸರಕಾರೀ ಆಸ್ಪತ್ರೆಗಳನ್ನು ಖಾಸಗಿಯವರ ಆಸ್ಪತ್ರೆಗಳಿಗಿಂತ - ಎಲ್ಲ ವಿಭಾಗಗಳಲ್ಲೂ ಉತ್ತಮಗೊಳಿಸಿ, ತದನಂತರ ಹುಟ್ಟುಹಾಕುವ ಆರೋಗ್ಯಕರ ಸ್ಪರ್ಧೆಯ ಮೂಲಕವೇ ವ್ಯವಸ್ಥೆಯನ್ನು ಸರಿಪಡಿಸುವುದನ್ನು ಬಿಟ್ಟು, ಅರೆಬೆಂದ "ಬಿಲ್ವಿದ್ಯೆ" ಪ್ರದರ್ಶಿಸಲು ಹೊರಟದ್ದು - ಶಿಷ್ಟತೆ ಅನ್ನಿಸದು. ಜನರ ತೆರಿಗೆ ದುಡ್ಡನ್ನು ತಮ್ಮ ವೋಟ್ ಬ್ಯಾಂಕ್ ರಾಜಕೀಯದ ತೆವಲಿನಲ್ಲಿ - ಪುಕ್ಕಟೆ ಜನಪ್ರಿಯತೆಗಾಗಿ ದುರುಪಯೋಗ ಪಡಿಸುತ್ತಿರುವುದರ ಉತ್ತಮ ಮಾದರಿ ಇದು. ಬಿಟ್ಟಿ ತಿನ್ನುವ "Subsidy ಜನಾಂಗ"ವನ್ನು ರೂಪಿಸುತ್ತಿರುವ ಬುದ್ಧಿಗೇಡಿಗಳನ್ನು ಶಾಸಕರನ್ನಾಗಿ ಆಯ್ಕೆಮಾಡಿ ಕಳಿಸಿರುವ ಬುದ್ಧಿಗೇಡಿ ಪ್ರಜೆಗಳು ಇದಕ್ಕಿಂತ ಹೆಚ್ಚೇನನ್ನೂ ಪಡೆಯುವ ಅರ್ಹತೆ ಹೊಂದಿರಲಾರರು - ಎಂಬುದೂ ವಾಸ್ತವ.

ಸರಕಾರೀ ಸೇವೆಗೆ ವೈದ್ಯರನ್ನು ಆಕರ್ಷಿಸುವಂತಹ ವಾತಾವರಣವನ್ನು ಸರಕಾರೀ ಆಸ್ಪತ್ರೆಗಳ ವಲಯದಲ್ಲಿ - ಗುಣಮಟ್ಟವನ್ನು ಎತ್ತರಿಸುವುದರ ಮೂಲಕವೇ ಯಾಕೆ ಮೂಡಿಸಬಾರದು ? ಗುಲಾಮರಂತೆ ನಡೆಸಿಕೊಳ್ಳುವ ಸರಕಾರೀ ಸಂಸ್ಕೃತಿಗೆ ಹೇಸಿಕೊಂಡೇ ಅನೇಕ ವೈದ್ಯರು ಸರಕಾರಗಳತ್ತ ಸುಳಿಯುತ್ತಿಲ್ಲ ಎಂಬುದು - ಈ ಭಂಡರಿಗೆ ಅರ್ಥವಾಗದೇ ಏನಲ್ಲ. ಇನ್ನು, ಏನೂ ದಿಕ್ಕಿಲ್ಲದವರನ್ನು ಅಥವ ಅನಿವಾರ್ಯತೆಯ ಸಂದರ್ಭವನ್ನು ಬಿಟ್ಟು, ಉಳಿದಂತೆ - ಅನೇಕ ದಿನಗೂಲಿ ವರ್ಗದವರೂ - ತಮಗೆ ಕಷ್ಟವಾದರೂ ಖಾಸಗಿ ಆಸ್ಪತ್ರೆಗಳಿಗೇ ಏಕೆ ಹೋಗುತ್ತಿದ್ದಾರೆ ? ಏಕೆಂದರೆ - ಬದುಕುವ ಆಸೆ. ಸರಕಾರೀ ಆಸ್ಪತ್ರೆಗಳ ಸ್ಥಿತಿಗತಿ ಹೇಗಿರಬಹುದೆಂಬುದಕ್ಕೆ ಇದೇ ಜೀವಂತ ನಿದರ್ಶನ. ತನ್ನ ಮೂಗಿನ ಸಿಂಬಳ ತೆಗೆಯಲು ಬಾರದವರು ಊರಿನವರ ಸಿಂಬಳವನ್ನು ಒರೆಸಲು ಹೋದರೆ - ಅದು - ಅಧಿಕಪ್ರಸಂಗ ಎನ್ನಿಸುತ್ತದೆ. ಅದಕ್ಕೆ ಉದಾಹರಣೆಯೇ ಈಗ ತರಲು ಹೊರಟಿರುವ KPME(A) - ಕಾನೂನು. ಶತಾಯಗತಾಯ - ತಮ್ಮ ಅಧಿಕಾರಬಲದಿಂದಾದರೂ ವೈದ್ಯರನ್ನು "ಕ್ರಿಮಿನಲ್ ಗಳಂತೆ" ಬಿಂಬಿಸಿ, ತಮ್ಮ ಕೊಳಕು ಸಾಮ್ರಾಜ್ಯದ ಗುಲಾಮರನ್ನಾಗಿಸುತ್ತೇವೆ ಎಂದು ಪಣತೊಟ್ಟಂತೆ - ಆಳುವ ವರ್ಗವು ಹೀಗೇ ವ್ಯವಹರಿಸುತ್ತ ಹೋದರೆ - ಅದು "ಹಿಟ್ಲರ್ ರಾಜ್ಯ" ಆಗುತ್ತದೆ.

ಐಶಾರಾಮಿ ವೈದ್ಯಕೀಯ ಕಾಲೇಜುಗಳನ್ನು ನಡೆಸುತ್ತ, ಡೊನೇಶನ್ ರೂಪದಲ್ಲಿ ವಿದ್ಯಾರ್ಥಿಗಳನ್ನು ಸಾಲಗಾರರನ್ನಾಗಿಸುತ್ತ, ಪ್ರತಿಭಾವಂತ ವಿದ್ಯಾರ್ಥಿಗಳ ಕುಟುಂಬಗಳನ್ನು ಭಿಕಾರಿಗಳಾಗಿಸುತ್ತಿರುವ ರಾಜಕೀಯ ಧುರೀಣರು - ತಮ್ಮ ಸ್ವಂತ ಕಮಾಯಿಯ ಕಾಲೇಜುಗಳಲ್ಲಿ - ಪ್ರತಿಭಾವಂತರಾದ ವಿದ್ಯಾರ್ಥಿಗಳಿಗೆಲ್ಲರಿಗೂ ಉಚಿತವಾಗಿ ಓದಲು ಯಾಕೆ ಅನುವು ಮಾಡಿಕೊಡಬಾರದು ? ಬದಲಾವಣೆ ಆಗುವುದಿದ್ದರೆ - ಇಲ್ಲಿಂದಲೇ - ಅವರಿಂದಲೇ - ಹೀಗೆ ಶುರುವಾಗಲಿ. ಈಗ ತರಬೇಕೆಂದು ಹೊರಟ ಕಾಯಿದೆಯ ಅನುಸಾರವೇ ವೈದ್ಯರು ತಮ್ಮ ಶುಲ್ಕವನ್ನು ಪಡೆಯುತ್ತ ಹೋಗಬೇಕಾದ ಸ್ಥಿತಿಯೊಂದು ಒದಗಿದರೆ, ಇಡೀ ಜೀವನಪರ್ಯಂತ - ವೈದ್ಯರೆಂಬವರು ತಮ್ಮ ಸ್ವಂತ ಬದುಕನ್ನು ನಿಭಾಯಿಸುವುದನ್ನು ಬಿಡಿ; ವಿದ್ಯಾಭ್ಯಾಸಕ್ಕೆಂದು ಅವರು ವ್ಯಯಿಸಿದ ಹಣವನ್ನು ಕೂಡ - ಮರಳಿ ಗಳಿಸಿಕೊಳ್ಳುವುದು ಅಸಾಧ್ಯವಾಗಬಹುದು ! ಸರಕಾರೀ ವೈದ್ಯರು, ಶಾಸಕರು, ಸಂಸದರಿಗೆ ಈಗ ಒದಗಿಸುತ್ತಿರುವ... ತತ್ಕಾಲೀನ ಆರ್ಥಿಕ ಸೌಲಭ್ಯಗಳಿಂದ ಹಿಡಿದು, ಪೆನ್ಶನ್ ನ ವರೆಗಿನ ಎಲ್ಲ ಸೌಲಭ್ಯಗಳನ್ನು ಖಾಸಗಿ ವೈದ್ಯರಿಗೂ ಒದಗಿಸುತ್ತಾರಂತೇನು ? ಯಾವುದೇ ಹಕ್ಕು ಚಲಾಯಿಸುವವರು - ಮೊತ್ತಮೊದಲು ತಮ್ಮ ಕರ್ತವ್ಯಗಳನ್ನು ನಿಭಾಯಿಸಿರಬೇಕಾಗುತ್ತದೆ ಅಲ್ಲವೇ ?

ಯಾವುದೇ ಬಗೆಯಲ್ಲಿ ಸಾಬೀತಾಗುವ - ಬೇಜವಾಬ್ದಾರಿಯ ವೈದ್ಯವರ್ತನೆಗಳಿಗೆ - ಈಗಾಗಲೇ ಇರುವ ಅಪರಾಧ ದಂಡಸಂಹಿತೆಯ ಅಡಿಯಲ್ಲಿ ಬರುವಂತಹ ಸಾಮಾನ್ಯ ಶಿಕ್ಷೆಯ ಪರಿಧಿಯಲ್ಲಿ ಎಲ್ಲ ವೈದ್ಯರೂ ಬರುತ್ತಾರೆ; ಸಾಬೀತಾಗುವ ಅಪರಾಧಗಳಿಗೆ ಎಲ್ಲ ವೈದ್ಯರೂ ಬಾಧ್ಯರು ಮತ್ತು ಅದರಲ್ಲಿ ಯಾವುದೇ ವಿನಾಯಿತಿಯ ಅಗತ್ಯವೂ ಇರಬಾರದು. ಆದರೆ, ಜೊತೆಜೊತೆಗೆ, ... ಯಾವುದೇ ನಾಗರಿಕ ಸಮಾಜದಲ್ಲಿ ಸಜ್ಜನಿಕೆಯೂ ಸಂಚರಿಸುತ್ತಿರುವಂತಿರಬೇಕು. ಅಲ್ಲವೆ ?  ಮನೋಪೀಡೆಗಳನ್ನು ಕೊಡುವ ಮನುಷ್ಯ ವರ್ಗಗಳಿಂದ ಹಿಡಿದು ಸಮಾಜದ ಎಲ್ಲರೂ - "ಕೇವಲ ದೇಹವಾಗುವ ಹಂತದಲ್ಲಿ" ಅಂತಹ ಧರಾಶಾಯಿಯಾಗುವ ದೇಹಗಳನ್ನು ಎದ್ದು ನಿಲ್ಲುವಂತೆ ಮಾಡುತ್ತ ಬಂದಿರುವ, ಈಗಲೂ ಮಾಡುತ್ತಿರುವ ವೈದ್ಯವರ್ಗವನ್ನು - ಕೇವಲ ಬೆರಳೆಣಿಕೆಯ ಘಟನೆಗಳನ್ನು ಆಧರಿಸಿ, ಉದ್ಧಟತನದಿಂದ ನಿಭಾಯಿಸಲು ಹೊರಟಿರುವುದು ಸಮಂಜಸವೇ ? ಸರಕಾರಗಳಿಗೂ ನೈತಿಕ ಬದ್ಧತೆಗಳಿಲ್ಲವೆ ? ಸರಕಾರ ನಡೆಸುವುದೆಂದರೆ - ಸ್ವೇಚ್ಛಾಚಾರವೆ ? ಯೋಚಿಸಬೇಕು. ಸುವ್ಯವಸ್ಥಿತಗೊಳಿಸುವುದು ಅಂದರೆ - "ಒಂದು ಕಡೆಯ ಅವ್ಯವಸ್ಥೆಯನ್ನು ಇನ್ನೊಂದು ಕಡೆಗೆ ವರ್ಗಾಯಿಸುವುದು" ಎಂಬ ಅರ್ಥವೇ ? "ವಿವಿಧ ಅವ್ಯವಸ್ಥೆಗಳಲ್ಲಿ ಏಕತೆಯನ್ನು " ತರಲು ಹೊರಟಂತೆ ಕಾಣುವುದಿಲ್ಲವೆ ? ಆದ್ದರಿಂದಲೇ ಇಂದಿನ ವ್ಯವಹಾರಗಳು - ಹೊಳೆಯಪ್ಪನಿಗೆ ದೊಣ್ಣೆಯಪ್ಪನ ಆಜ್ಞೆ ಯಂತೆ ಕಾಣುತ್ತಿದೆ !

ಸರಕಾರದ ಮೂಗಿನ ಅಡಿಯಲ್ಲಿಯೇ ನಾಯಿಕೊಡೆಗಳಂತೆ ಹುಟ್ಟಿಕೊಂಡಿರುವ ಹಲವಾರು ಲೂಟಿಕೋರ ಕಾಲೇಜುಗಳ ಸಾಮ್ರಾಜ್ಯಗಳನ್ನು ಸರಕಾರಕ್ಕೆ ನಿಯಂತ್ರಿಸಲು ಏಕೆ ಸಾಧ್ಯವಾಗುವುದೇ ಇಲ್ಲ ? ಇದರಿಂದಾಗಿ, ಬಹುಶಃ ಒಳ ಒಳ ವ್ಯವಹಾರದಲ್ಲಿ ಎಲ್ಲೋ ಕಮಿಶನ್ ಸಂದಾಯವಾಗುತ್ತಿರಬಹುದು - ಅಂದುಕೊಳ್ಳುವಂತಾಗಿದೆ; ದರಿದ್ರ Party Fund ರೋಗ - ಇದ್ದರೂ ಇರಬಹುದು. "ಯಾವುದೇ ಮೆಡಿಕಲ್ ಕಾಲೇಜಿನ ತರಗತಿಯನ್ನು ಪ್ರವೇಶಿಸಬೇಕೆಂದಿದ್ದರೆ... ಲಕ್ಷ ಲಕ್ಷ  ಕಕ್ಕು.." ಎಂಬ ನೀತಿಯನ್ನು ಪ್ರಸನ್ನಚಿತ್ತರಾಗಿ ನೋಡುತ್ತ, ದುಡ್ಡು ಎಣಿಸುತ್ತ ಆನಂದಿಸುತ್ತಿರುವ ಸರಕಾರಗಳು - ಅಲ್ಲಿಂದ ಹೊರಬಂದ ವೈದ್ಯರುಗಳಿಂದ - "ಈಗ ನೀವು ಮಾತ್ರ ಚಿಲ್ಲರೆ ಪುಡಿಗಾಸಿಗೇ ತೃಪ್ತರಾಗಿಬಿಡಿ.." ಎಂಬ ನಿರೀಕ್ಷೆಯನ್ನು ಮಾಡುತ್ತಿರುವುದನ್ನು ನೋಡಿದರೆ - ನಮ್ಮ ಆಡಳಿತ ಸೂತ್ರವನ್ನು ಹಿಡಿದವರು ಎಂತಹ ಮೂಢರೆನ್ನುವುದು ಅರ್ಥವಾಗುತ್ತದೆ ! ಇವರಿಗೆಲ್ಲ - ರಾಜಕೀಯ ಶಾಸ್ತ್ರವೂ ಗೊತ್ತಿಲ್ಲ; ಅರ್ಥಶಾಸ್ತ್ರವೂ ಗೊತ್ತಿಲ್ಲ; ಗೊತ್ತಿರುವುದು ಕೇವಲ ಜನಮರಳು ಶಾಸ್ತ್ರ - ಅಂದುಕೊಳ್ಳುವಂತಾಗಿದೆ.

ಸ್ವಾಮೀ, ತಮ್ಮ ಯಾವುದೇ ವಿರಾಟ್ ಸಾಮರ್ಥ್ಯವನ್ನು - ಮೂಲದಲ್ಲಿ, ಶೈಕ್ಷಣಿಕ ಹಂತದಲ್ಲಿಯೇ ನೀವು ಪ್ರದರ್ಶಿಸಿಬಿಡಿ; ನಿಮ್ಮ ನ್ಯಾಯಪರತೆ, ಜನಪರ ಕಾಳಜಿಯ ಕೈಚಳಕಗಳನ್ನು ಅಲ್ಲೇ ತೋರಿಸಿ. ವೈದ್ಯಕೀಯ ಶಿಕ್ಷಣವು ಯಾವುದೇ ಪ್ರತಿಭಾವಂತರಿಗೆ ಹೊರೆ ಎನ್ನಿಸದಂತಹ ವಾತಾವರಣವನ್ನು - ಮೊದಲು ನಿರ್ಮಿಸಿ. ಇಷ್ಟನ್ನು ಮಾಡಿದ ಮೇಲೆ, ಯಾವುದೇ ಪುಳಕಯ್ಯಂದಿರುಗಳು ಊರಿನ ಶುದ್ಧೀಕರಣಕ್ಕೆ ಹೊರಟರೆ ಸಾಕಾಗುತ್ತದೆ. ಹೀಗಾದಾಗ - ಸಮರ್ಥ ವೈದ್ಯಪಡೆಯನ್ನು ತರಬೇತುಗೊಳಿಸಿ, ಸಮಾಜಕ್ಕೆ ಉಪಕರಿಸಿದಂತೆಯೂ ಆದೀತು; ಪ್ರತಿಭಾಪಲಾಯನವೂ ನಿಂತೀತು; ಆರೋಗ್ಯ ಕ್ಷೇತ್ರವು ಸುಭಿಕ್ಷವಾದೀತು. ಹೀಗಾದಾಗ ಮಾತ್ರ - ಊರಿಗೆ ಬುದ್ಧಿ ಹೇಳಲು ಹೊರಟವರಿಗೆಲ್ಲ ನೈತಿಕ ಅಧಿಕಾರವೂ ಬರುತ್ತದೆ; ಈಗ ರಾಜಕಾರಣಿಗಳ ಕುರಿತು ಕೆಲವರಲ್ಲಿರುವ ಮೂಢನಂಬಿಕೆಯು ತೊಲಗುವಂತಾಗಿ, ಜನರೂ ಅವರನ್ನು ನಂಬುವಂತಾಗಿ, ಪ್ರೀತಿಯಿಂದಲೇ - ಆಗ ಗೌರವಿಸತೊಡಗುತ್ತಾರೆ. ಆದರೆ... ಈಗಿರುವ ಕಲಕಿದ ಕಕಮಕ ಸ್ಥಿತಿಯಲ್ಲಿಯೇ ಅಧಿಕಪ್ರಸಂಗಕ್ಕೆ ಹೊರಟರೆ - ನನ್ನಂತಹ ಯಾರ್ಯಾರೋ ಹೇಳುವುದನ್ನೆಲ್ಲ ಕೇಳಿಸಿಕೊಳ್ಳಬೇಕಾಗುತ್ತದೆ. ಅಷ್ಟೆ.

"ನೀವು ಯಾವುದೇ ವಿಷಯ ಎತ್ತಿದರೂ ರಾಜಕಾರಣಿಗಳಿಗೇ ಯಾಕೆ ಗುರಿಯಿಡುತ್ತೀರಿ ?" ಎಂದು - ಅತೀ ಮುಗ್ಧರಂತೆ ನನ್ನನ್ನು ಪ್ರಶ್ನಿಸುವವರೂ ಇದ್ದಾರೆ. ನಾನು ಹೇಳುವುದಿಷ್ಟೆ. ಈ ರಾಜಕಾರಣಿಗಳ ಮುಂದಾಲೋಚನೆಯಿಲ್ಲದ ನೀತಿಯಿಂದಾಗಿ ಭಾರತದ ಶಿಕ್ಷಣ ಕ್ಷೇತ್ರವು ಸದ್ಯೋಭವಿಷ್ಯದಲ್ಲಿ ಸರಿಪಡಿಸಲಾಗದಷ್ಟು ಕುಲಗೆಟ್ಟು ಹೋಗಿದೆ. ಇದರಿಂದಾಗಿಯೇ ಹೃದಯಹೀನ ಸಂತಾನವು ಈಗ ಬೆಳೆದು ನಿಲ್ಲುವಂತಾಗಿದೆ. ಇಂದಿನ ಹಲವಾರು ಸಮಸ್ಯೆಗಳಿಗೆ - ಭಾವಶೂನ್ಯತೆಯ ಪೀಳಿಗೆಗಳನ್ನು ಬೆಳೆಸಿ ನಿಲ್ಲಿಸಿರುವುದೇ ಕಾರಣ. ಶಿಕ್ಷಣ ಪಡೆಯುವುದೇ ದುಡ್ಡು ಸಂಪಾದಿಸಲು - ಎಂಬ ನೀತಿಯನ್ನು ಪ್ರಚುರಪಡಿಸುವಂತಿರುವ ಸರಕಾರಗಳ ಅಪರೋಕ್ಷ / ಪರೋಕ್ಷ ನಡೆಗಳಿಂದಾಗಿ, ಅವರಿವರೆನ್ನದೆ ಎಲ್ಲರೂ ಅರೆಹುಚ್ಚರಂತೆ, ಬೀದಿ ಮೆರವಣಿಗೆಗಳಲ್ಲಿ ನಾಚಿಕೆ ಬಿಟ್ಟು - ಹೀಗೆಲ್ಲ ತೊಡಗಿಕೊಳ್ಳಬೇಕಾದ ಪರಿಸ್ಥಿತಿ - ಈಗ ಬಂದಿದೆ. ಬೆರಳೆಣಿಕೆಯ ಮಂದಿ ನಡೆಸುತ್ತಿರುವ "ಕೊಳಕು ರಾಜಕಾರಣಕ್ಕೆ" - ಎಲ್ಲರೂ ಬಲಿಯಾಗುವಂತಾಗಿದೆ.

ಒಂದೊಂದು ಶೈಕ್ಷಣಿಕ ಸಂಸ್ಥೆಗಳ ಒಳಗೂ - ಸಕ್ರಿಯವಾಗಿರುವ ಪಕ್ಷ ರಾಜಕಾರಣವನ್ನು ಪ್ರೋತ್ಸಾಹಿಸುತ್ತ ಬಂದಿರುವ ಇಂತಹ ಅಲ್ಪಮತಿ ರಾಜಕಾರಣಿಗಳಿಗೆ ಯಾರೂ ಮಂಗಳಾರತಿ ಮಾಡಬಾರದೇ ? ಯಾಕೆ ? ಸ್ವಾಮೀ, ಆಳಲು ಹೊರಟವರಿಗೆ ಅಹಂಕಾರವೊಂದೇ ಸಾಕಾಗುವುದಿಲ್ಲ; ಭವಿಷ್ಯದ ಕುರಿತ ಚಿಂತನೆಯನ್ನು ಹೊಂದಿದ ಪ್ರಬುದ್ಧತೆಯು ಬೇಡವೇ ? ಸಂಬಂಧಿತ ಪ್ರಜಾ ವರ್ಗದ ಜೊತೆಯಲ್ಲಿ ಕೂತು ಸಮಗ್ರ ವಿಚಾರ ವಿಮರ್ಶೆ ನಡೆಸಿ ಯೋಗ್ಯ ನಿರ್ಧಾರಗಳನ್ನು ಕೈಗೊಳ್ಳುವ ಕುಶಲ ಮತಿಯು ಬೇಡವೇ ? ತಾವು ತೆಗೆದುಕೊಂಡ ನಿರ್ಧಾರಗಳನ್ನು ಆಗಿಂದಾಗ ಪರಾಮರ್ಶಿಸಿ ಸೂಕ್ತ ಕಾಲದಲ್ಲಿ ಸೂಕ್ತ ಬದಲಾವಣೆಗಳನ್ನು ತರಬೇಡವೇ ? ಈ ಸರಕಾರಗಳು ಹಂಚುತ್ತಿರುವುದು ಯಾವುದೇ ಶಾಸಕ / ಸಂಸದರ ಖಾಸಗಿ ಆಸ್ತಿಯನ್ನೇನೂ ಅಲ್ಲವಲ್ಲ ? ಅವೆಲ್ಲವೂ ನಮ್ಮ - ಪ್ರಜೆಗಳ ತೆರಿಗೆಯ ದುಡ್ಡು ತಾನೇ ? ಅಡುಗೆ ಮಾಡಿದವ ಅಥವ ಮಾಡಿದ ಅಡುಗೆಯನ್ನು ಬಡಿಸಿದವನು - ತಾನೇ ಆ ಮನೆಯ ಒಡೆಯ ಅಂದುಕೊಂಡರೆ - ಅಂಥವರನ್ನು ತಕ್ಷಣವೇ ಮನೆಯಿಂದ ಹೊರದಬ್ಬುವ ಅನಿವಾರ್ಯತೆ ಮೂಡುತ್ತದೆಯಲ್ಲವೆ ? ಇವತ್ತಿನ ಸರಕಾರಗಳ ಮರುಳುತನವು ಈಗ ಈ ಹಂತ ತಲುಪಿದಂತಾಗಿದೆ. ಕೇವಲ ವೋಟಿನಲ್ಲಿಯೇ ದೃಷ್ಟಿ ನೆಟ್ಟು ಪಕ್ಷ ರಾಜಕಾರಣ ಮಾಡುವುದರಲ್ಲಿಯೇ ಮುಳುಗಿಕೊಂಡು, ತೋಳು ತಟ್ಟುತ್ತ, ತೊಡೆ ತಟ್ಟುತ್ತ, ಅಸಂಬದ್ಧ "ಮೀಟರ್" ಓಡಿಸುತ್ತ, ಕೂತು ಆಕಳಿಸುತ್ತ, ಅಸಹ್ಯ ದೇಹಭಾಷೆಯನ್ನು ಪ್ರದರ್ಶಿಸುತ್ತ - ಕೊನೆಗೆ ... ತಮ್ಮನ್ನು ಎಲ್ಲರೂ ಹಾಡಿಹೊಗಳಬೇಕೆಂದು ಈ ಮಂತ್ರಿಮಾಗಧರೆಲ್ಲ ಅಪೇಕ್ಷಿಸುವುದಾದರೂ ಹೇಗೆ ? ಭಂಡತನ.  ಆದ್ದರಿಂದಲೇ ಶ್ರುತಿ ತಪ್ಪಿದ ಹಾಡಿನ "ತಪ್ಪಿನ ಮೀಟರ್"ಗಳು - ರಾಜಕಾರಣಿಗಳತ್ತಲೇ ತಿರುಗಿ, ಸ್ಥಬ್ಧವಾಗಿ ಅಲ್ಲೇ ನಿಂತು ಹೋಗುತ್ತಿವೆ; ಒಮ್ಮೊಮ್ಮೆ ಅಪಸ್ವರವನ್ನೂ ಹೊಮ್ಮಿಸುತ್ತವೆ ! 

ಇನ್ನು, ಈ ವೈದ್ಯಕೀಯ ಕ್ಷೇತ್ರವು Business ಆಗಿದ್ದು - ರಾತ್ರಿ ಬೆಳಗಾಗುವಾಗ ಪರಿವರ್ತಿತವಾದ ಪವಾಡವೇನಲ್ಲ. "ಇಂದಿನ ವೈದ್ಯರು ಸಾವಿರ ಪರೀಕ್ಷೆಗಳನ್ನು ಮಾಡಿಸಿ, ದುಡ್ಡು ಗಬರುತ್ತಾರೆ" ಎಂಬ ದೂರು ಜನಜನಿತವಾಗುವಂತಾದುದಕ್ಕೆ ಸುಮಾರು ೪೦ ವರ್ಷಗಳ ಇತಿಹಾಸವಿದೆ. ವಿದೇಶಗಳೊಂದಿಗೆ ಹೋಲಿಸದೆ, ಕೇವಲ ಭಾರತೀಯ ದೃಷ್ಟಿಕೋನದಿಂದ ಮಾತ್ರ ನೋಡಿದರೆ... ವೈದ್ಯ ಪರಿಸರದಲ್ಲಿ "ದುಡ್ಡು ಗಬರುವ" ಮಾತುಗಳಲ್ಲಿ ಸತ್ಯಾಂಶವೂ ಇದೆ. ಇತ್ತೀಚಿನ ಸುಮಾರು ೩೦ ವರ್ಷಗಳಲ್ಲಿ ಆಗಿರುವ ಚಮತ್ಕಾರಿಕ ಬದಲಾವಣೆ ಇದು. ಇದರ ಕಾರಣವೂ - ಮುಖ್ಯವಾಗಿ, ನೀತಿವೈಫಲ್ಯದಿಂದಾಗಿರುವ ಶಿಕ್ಷಣದ ವ್ಯಾಪಾರೀಕರಣವೇ ಆಗಿದೆ.

ಶಿಕ್ಷಕ ಮತ್ತು ವೈದ್ಯರನ್ನು ಅತ್ಯಂತ ಪೂಜ್ಯಭಾವದಿಂದ ನೋಡುತ್ತಿದ್ದ ಸಾಮಾಜಿಕ ದೃಷ್ಟಿಯು ಬದಲಾಗುತ್ತ ಬಂದಿರುವುದನ್ನೂ ಇಲ್ಲಿ ಗಮನಿಸಬೇಕು. ಇದಕ್ಕೆ - ಜನರಲ್ಲಿ (ವೈದ್ಯ ವರ್ಗದ ಸಹಿತ) ಸ್ವಾಭಾವಿಕವಾಗಿ ಪರಂಪರಾಗತವಾಗಿ ಬೇರೂರಿದ್ದ - Moral Ethics ಕುಂಠಿತಗೊಳ್ಳುವಂತಾದುದೇ ಕಾರಣ. ಆಧುನಿಕ ಶಿಕ್ಷಣದ ಹೊಡೆತದಿಂದಾಗಿ, ಸ್ವ ಇಚ್ಛೆಯಿಂದ ಜನರು ಅನುಸರಿಸುತ್ತಲೇ ಬಂದಿದ್ದ ಹಲವಾರು ಭಾರತೀಯ ಮೌಲ್ಯಗಳನ್ನು - ನಮ್ಮ ನೀತಿ ನಿರೂಪಕರು - ಸ್ವತಃ - ತುಷ್ಟೀಕರಣ ಎಂಬ ಮೂಢನಂಬಿಕಾ ರೋಗಗ್ರಸ್ತರಾಗಿ, ಉದ್ದೇಶಿತವಾಗಿ ಕಡೆಗಣಿಸುತ್ತ ಬಂದಿಲ್ಲವೇ ? ಹೀಗೆ ಸರ್ವತೋಮುಖವಾಗಿ, ವ್ಯಾಪಾರಕ್ಕೇ ಕುಳಿತಂತೆ ವರ್ತಿಸತೊಡಗಿದ ಕೊಳಕು ರಾಜಕೀಯವೇ - ವೈದ್ಯಕೀಯ ಕ್ಷೇತ್ರದ ಇಂದಿನ ಗೊಂದಲಗಳಿಗೂ ಮೂಲ ಕಾರಣ ಮತ್ತು ನೇರ ಕಾರಣ. ಇದನ್ನು - ಪ್ರಜೆಗಳ ಆರೋಗ್ಯದ ಜತೆಗೆ ನಮ್ಮ ಸರಕಾರಗಳು ನಡೆಸಿದ ಕ್ರೂರ ಚೆಲ್ಲಾಟ ಎಂದೂ ವರ್ಣಿಸಬಹುದು.

ಇನ್ನು, ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ರೋಗಿಗಳು ಸಾಯುತ್ತಾರೇನು ? ಬಳಲುತ್ತಾರೇನು ? ಶೋಷಣೆಗಳಿಗೆ ಒಳಗಾಗುತ್ತಾರೇನು ? ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರವೇ ಬೇಜವಾಬ್ದಾರಿಯ ವರ್ತನೆಗಳು ಸಂಭವಿಸುತ್ತವೇನು ? ಸತ್ತ ಹೆಣವನ್ನೂ ಹೆಕ್ಕಿಕೊಂಡು ಹೋಗುವ, ಸತ್ತವರ / ಬದುಕಿದ್ದವರ ಅಂಗಾಂಗಗಳನ್ನೂ ಮಾರಿ ತಿನ್ನುವ ರಕ್ಕಸತನಗಳಿಗೆ ಸರಕಾರೀ / ಖಾಸಗಿ ಎಂಬ ಭೇದಭಾವ ಇರುತ್ತದೇನು ? ಸರಕಾರಿ ಆಸ್ಪತ್ರೆಗಳಲ್ಲಿದ್ದ ರೋಗಿಗಳು ಅಜರಾಮರರೇ ? ಸರಕಾರೀ ವೈದ್ಯರು ಮಾತ್ರ - ದೇವರೆ ? ಸರಕಾರೀ ಆಸ್ಪತ್ರೆಗಳಲ್ಲಿ ಅಮೃತ ಹಂಚುತ್ತಿದ್ದಾರೇನು ? ಸರಕಾರೀ ಆರೋಗ್ಯ ವಲಯದ Infrastructure ಯಾಕಿಷ್ಟು ಹಾಸ್ಯಾಸ್ಪದವಾಗಿದೆ ? ನಾಲ್ಕು ನೋಟು ಕಿಸೆಯಲ್ಲಿದ್ದವರು ಯಾರೂ - ತೀರ ಅನಿವಾರ್ಯವಾಗದೆ - ಸರಕಾರದ ಬೋರ್ಡ್ ಇರುವಲ್ಲಿ ಇಣುಕಿಯೂ ನೋಡುವುದಿಲ್ಲವಲ್ಲ - ಯಾಕೆ ? ಯೋಚಿಸಬೇಕು. ಅದು ಅಲ್ಲಿನ ವೈದ್ಯರ ದೋಷವೆ ? ಅಥವ ಸರಕಾರದ ಕಾರ್ಯವಿಧಾನದ ವೈಫಲ್ಯವೆ ? ಅಥವ ಕಾಡಿಗೆಯ ಡಬ್ಬದಲ್ಲಿ ಮುಳುಗಿ ಎದ್ದವರೆಲ್ಲರೂ ಕಪ್ಪು  ಕಪ್ಪಾಗುವಂತಹ ಸಹಜ ಸ್ಥಿತ್ಯಂತರವೆ ? ಯಾವುದೇ ಮನೆಯ ಮಕ್ಕಳು ಕೆಟ್ಟುಹೋದರೆ, ಆಗ - ಆಯಾ ಕುಟುಂಬದ ಹಿರಿಯರೂ ಆತ್ಮನಿರೀಕ್ಷಣೆ ಮಾಡಿಕೊಳ್ಳಬೇಕಾಗುತ್ತದಲ್ಲವೆ ?

ಇವತ್ತು, ನಮ್ಮ ಸಮಾಜದ ಕೆಲವು ವರ್ಗಕ್ಕೆ - ಅಸಂಬದ್ಧ ಕೆಲಸಗಳನ್ನು ಮಾಡುತ್ತ ತಿಂಗಳಿಗೆ ಲಕ್ಷಾಂತರ ಸಂಬಳ ಎಣಿಸುವ ವಿಚಿತ್ರ ಅವಕಾಶ ದೊರೆಯುತ್ತಿದೆ; ಅದರಿಂದಾಗಿ ವಿಚಿತ್ರ ಸನ್ನಿವೇಶಗಳೂ ಏರ್ಪಡುತ್ತಿವೆ.

ದುಡ್ಡು ಸೊಕ್ಕಿದ ಇಂದಿನ - ಅಂತಹ ಕೆಲವರು, ತಮ್ಮ ಮನೆಯ ಹಿರಿಯರನ್ನು ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳಿಗೇ ಏಕೆ ಸೇರಿಸಬೇಕು ? ಎಂಬ ಪ್ರಶ್ನೆಗೆ - "ದುಡ್ಡಿದೆ; ಆದ್ದರಿಂದ" ಎಂಬುದೇ - ಕೆಲವು ಸಂದರ್ಭಗಳಲ್ಲಿ - ಸರಿಯುತ್ತರ. ಹೀಗೆ ದೊಡ್ಡ ಆಸ್ಪತ್ರೆಗಳಿಗೆ ಸೇರಿಸಿ ಸಂಭ್ರಮದಿಂದ ಓಡಾಡುತ್ತ, ತಮ್ಮ ಹಿರಿಯರಿಗೆ "Rich - Dignified death" ಒದಗಿಸಿದ್ದೇವೆ ಎಂಬ ಸಂಭ್ರಮದಲ್ಲಿದ್ದ ಕೆಲವರನ್ನು ನಾನೂ ನೋಡಿದ್ದೇನೆ. ಇಂತಹ hi-fi ಆಸ್ಪತ್ರೆಗಳು - ಕೆಲವರಿಗೆ ತಮ್ಮ ಮನೆಯ ಮುದಿಗೂಬೆಗಳನ್ನು ಸಾಗಹಾಕಲು ಇರುವ Safe Exit ಆಗಿಯೂ ಉಪಕರಿಸುತ್ತಿವೆ ಎಂಬುದು ಗೊತ್ತೇ ? ದುಡ್ಡು ಬಿಸಾಟರೆ - ಅಪ್ಪ ಅಮ್ಮನೂ ದೊರಕುತ್ತಿರುವಂತಹ ಕಾಲ ಇದು ! ಆದ್ದರಿಂದ ಬದಲಾಗಿದ್ದು ವೈದ್ಯರು ಮಾತ್ರವಲ್ಲ; ಎಲ್ಲರೂ. ಹಲವಾರು Star Value ಹೊಂದಿರುವ ಇಂದಿನ Multi Speciality Hospital ಗಳಲ್ಲಿ ದೋಚುವ ವ್ಯವಹಾರಗಳು ನಡೆಯುತ್ತಿದೆ ಎಂಬ ಜನರ ಕೂಗಿನಲ್ಲಿ ಸತ್ಯಾಂಶವೂ ಇದೆ. ಒಬ್ಬ ರೋಗಿಯನ್ನು I C U ಎಂಬ ಭದ್ರ ಕೋಣೆಗೆ ಒಯ್ದರೆಂದರೆ - ಅಂತಹ ರೋಗಿಯ ಕುಟುಂಬವು ಸರ್ವನಾಶವಾದಂತೆಯೇ ಎಂಬುದೂ ಸತ್ಯ. ಸಾಮಾನ್ಯ ಆದಾಯದ ಕುಟುಂಬಗಳು - ಇಂದಿನ ವೈದ್ಯರನ್ನು ದುಡ್ಡಿನಲ್ಲಿ ನಿಭಾಯಿಸುವುದು - ಭಾರತದ ದೊಡ್ಡ ಸಮಸ್ಯೆಯೇ ಆಗುತ್ತಿದೆ. ಉತ್ತಮ ಚಿಕಿತ್ಸೆಯನ್ನು ಪಡೆದುಕೊಳ್ಳುವಂತಹ ಸಂಬಳವನ್ನು ದುಡಿಯುವ ವರ್ಗಕ್ಕೆ ಕೊಡಲಾಗದ ಸರಕಾರಗಳು - ಪರೋಕ್ಷವಾಗಿ ಲಂಚಗುಳಿತನವನ್ನು ಪ್ರೋತ್ಸಾಹಿಸುತ್ತಲೇ ಬಂದಿವೆ. ತನ್ನ ಕಾಲಿನ ಕೆಳಗೆ ನೂರಾರು ಹೋರಿಗಳು ಸತ್ತು ಬಿದ್ದಿರುವಾಗ - ಇತ್ತ ನಮ್ಮ ಕಾಲಿನ ಕೆಳಗೆ ಬಿದ್ದಿರುವ ನೊಣವನ್ನು ಎತ್ತುವ ಕೆಲಸಕ್ಕಿಳಿದಿರುವ ಈ ಸರಕಾರವನ್ನು ಏನೆನ್ನಲಿ ? ಪರಿಣಾಮ ಏನೆಂದರೆ - "ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು" ಎಂಬಂತಾಗುವ ಎಲ್ಲ ಲಕ್ಷಣಗಳಿವೆ ! ಮನುಷ್ಯತ್ವವುಳ್ಳ ವೈದ್ಯರು ಮತ್ತು ಸರಕಾರಗಳು - ಆತ್ಮನಿರೀಕ್ಷಣೆ ಮಾಡಿಕೊಳ್ಳುವ ಸಂದರ್ಭವೂ ಈಗ ಬಂದಿದೆ.

ಆದರೆ ಈಗ ಇರುವ ವೈದ್ಯಕೀಯ ಕ್ಷೇತ್ರವನ್ನು ಶುದ್ಧೀಕರಣಗೊಳಿಸಲು, ಸರಕಾರವು ತರಲು ಹೊರಟಿರುವ ಈ ಕಾಯಿದೆಯಿಂದ ಸಾಧ್ಯವೇ ? ಆಗದು. ಎಂದಿಗೂ ಸಾಧ್ಯವಾಗದು. ಇದರ ಪರೋಕ್ಷ ಪರಿಣಾಮವು ರೋಗಿಗಳಿಗೇ ಆಗುವಂತಾಗಿ, ಅದರಿಂದ ರೋಗಿಗಳು ಇನ್ನಷ್ಟು ಸಂಕಟಗಳನ್ನೆದುರಿಸಬೇಕಾಗಬಹುದು. ವೈದ್ಯಕೀಯ ಸೇವೆಯು ಇನ್ನಷ್ಟು ಜಟಿಲವಾಗಬಹುದು.

ಆದ್ದರಿಂದ, ಮೊದಲಿಗೆ, ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣವನ್ನು  ಕಡಿಮೆ ವೆಚ್ಚದಲ್ಲಿ ಪೂರೈಸಿಕೊಳ್ಳಬಹುದಾದಂತಹ ನಿರ್ಮಲ ವಾತಾವರಣವನ್ನು - ಸರಕಾರಗಳು ನಿರ್ಮಿಸಲಿ. ಅನಂತರ ಅಗತ್ಯ ಕಂಡಾಗ,  ಪಡಪೋಶಿ ವಿದ್ಯೆಯನ್ನು ಪ್ರದರ್ಶಿಸಿದರೆಂದು ಸಾಬೀತಾದ ವೈದ್ಯರಿಗೆ - ಅಧಿಕಾರದಿಂದಲೇ ಸಾಮಾಜಿಕ ಕರ್ತವ್ಯದ ಪಾಠ ಮಾಡಬಯಸಿದರೆ... ಮಾಡಲಿ. ಆಗ ಪಾಠ ಮಾಡುವವರಿಗೆ ಹೆಚ್ಚು ಗೌರವವು ಸಲ್ಲುತ್ತದೆ; ಪಾಠ ಕೇಳಿಸಿಕೊಳ್ಳುವವರು - ಮರುಮಾತನಾಡದೆ, ಕೆಲವರು "ಉಪಕರಿಸಿದ ಸರಕಾರ" ಎಂಬ ಕೃತಜ್ಞತೆಯಿಂದಾದರೂ - ಸರಕಾರಗಳು ಹೇಳುವ ಮಾತಿಗೆ ಮನ್ನಣೆ ನೀಡಿಯಾರು. ಯಾವುದೇ ಸಮಾಜವನ್ನು ನಡೆಸಬೇಕಾದ, ನಡೆಸಿಕೊಳ್ಳಬೇಕಾದ ರೀತಿ ಇದು.

ಇನ್ನು, ಇವತ್ತು ಉದ್ದೇಶಿತವಾಗಿ "ಅರೆಹೊಟ್ಟೆ ಮಾತ್ರ - ತುಂಬಿಸಿ ಕಳಿಸುವ" ಪಡಪೋಶಿ M.B.B.S ಎನ್ನಿಸುವಂತಹ ವೈದ್ಯಕೀಯ ಶಿಕ್ಷಣದ ಪರಿಧಿಯಲ್ಲಿ - ವಿದ್ಯಾರ್ಥಿಗಳಿಗೆ ಏನನ್ನು ಕಲಿಸುತ್ತಿದ್ದಾರೋ ಅದನ್ನು ಅವರು - ತಮ್ಮ  ವೃತ್ತಿಬದುಕಿನ ಕಾರ್ಯಶೈಲಿಯಾಗಿ ಅಳವಡಿಸಿಕೊಳ್ಳುತ್ತಲೇ ಬಂದಿದ್ದಾರೆ - ಅಲ್ಲವೇ ? M.B.B.S ನ Syllabus ಎಂಬುದನ್ನು Dilute ಗೊಳಿಸುತ್ತ ಬಂದಿಲ್ಲವೆ ? ಹೀಗೆ.. ಬಡಕಲು ವೈದ್ಯರುಗಳನ್ನು ತಯಾರಿಸಿ, ಸಮಾಜಕ್ಕೆ ನೀಡುತ್ತಿರುವವರು ಯಾರು ? ಇತ್ತ, ಕುಟುಂಬ ವೈದ್ಯ ಪದ್ಧತಿ ಎಂಬ - ನಮ್ಮಲ್ಲಿದ್ದ ಅದ್ಭುತ ವ್ಯವಸ್ಥೆಯು ಎಂದೋ ಹಿಂದೆ ಸರಿದಾಗಿದೆ ಅಥವ ಹಿಂದೆ ಸರಿಸಲಾಗಿದೆ. ದುಡ್ಡು ಗಬರುವ ಇವತ್ತಿನ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ತಮ್ಮಂತೆಯೇ "ಧನಪಿಶಾಚಿ"ಗಳಾಗಿ ರೂಪಿಸುತ್ತ ಬಂದಿದ್ದಾರೆ ಮತ್ತು ಅದರ ದುಷ್ಪರಿಣಾಮಗಳಿಂದ ಸಮಾಜವನ್ನು ನರಳಿಸುವಂತೆಯೂ ಆಗುತ್ತಿದೆ - ಎಂಬುದು ಇಲ್ಲಿರುವ ಒಂದು ಪ್ರಮುಖ ಅಂಶ.

ಮುಖ್ಯವಾಗಿ ರೋಗಿಗಳು - ತಮಗೆ ನಂಬಿಕೆ, ವಿಶ್ವಾಸ, ಗುರುತು ಪರಿಚಯವಿಲ್ಲದ ವೈದ್ಯರಲ್ಲಿಗೆ ತಾವೇ ಹೋಗಿ... ಅನಂತರ ಅಲ್ಲಿ ಆಕಸ್ಮಿಕವಾಗಿಯೋ/ಬೇಜವಾಬ್ದಾರಿಯಿಂದಲೋ ಏನಾದರೂ ಅವಘಡಗಳಾದಾಗ - ಅಂತಹ ವೈದ್ಯರನ್ನು "ಕೊಲೆಗಾರ" ಎಂಬಂತೆ ನೋಡುತ್ತ, ವೈದ್ಯರ ಮೇಲೆ ಹಲ್ಲೆ ನಡೆಸುವ ಪ್ರವೃತ್ತಿಯು ಇತ್ತೀಚೆಗೆ ಹೆಚ್ಚುತ್ತಿದೆ. ಇದು ಅತ್ಯಂತ ಕುಸಂಸ್ಕೃತ ಸಮಾಜವೊಂದು ಮಾತ್ರ ನಡೆಸುವಂತಹ ಕ್ರಿಯೆ. ಹೀಗೆ ಕಾನೂನನ್ನು ಕೈಗೆತ್ತಿಕೊಳ್ಳುವ ವ್ಯಕ್ತಿಯು ಸಂಸದನಾಗಲೀ ಶಾಸಕನಾಗಲೀ ಸಾಮಾನ್ಯನೇ ಆಗಲಿ... ಅದು ಅಪರಾಧವೇ ಆಗುತ್ತದೆ ಅಲ್ಲವೇ ? ಕೊಂದವನನ್ನು ಕೊಲ್ಲುವುದು, ಹೊಡೆದವನಿಗೆ ಹೊಡೆಯುವುದು, ಕಚ್ಚಿದವನನ್ನು ಹಿಂದಿರುಗಿ ಕಚ್ಚುವುದು... ಇವೆಲ್ಲವೂ ಮೃಗೀಯ ವರ್ತನೆಗಳೆಂದು ಹೇಳಬೇಕಾದ ಅಗತ್ಯ ಬಂದಿರುವುದೇ ಅವಮಾನಕರ ಸಂಗತಿ ಅಲ್ಲವೇ ?



ಮನುಷ್ಯಮಾತ್ರರ ಬದುಕಿನಲ್ಲಿ "ಸಾತ್ವಿಕ ನಂಬಿಕೆ" - ಎಂಬುದೊಂದಿದೆ; ಇರಲೇಬೇಕು. ಅದು - ವೈದ್ಯಕೀಯ ವಲಯದಲ್ಲೂ ಬಲು ದೊಡ್ಡ ಸಂಪತ್ತು. ಆದರೆ... ಇವತ್ತಿನ ರಾಜನೀತಿಗಳ ವೈಫಲ್ಯಗಳಿಂದಾಗಿ, ಜನರೆಲ್ಲರೂ ಪರಸ್ಪರರಲ್ಲಿ ವಿಶ್ವಾಸ ಮಾತ್ರವಲ್ಲ - ಅವರವರ ಮೇಲಿನ ವಿಶ್ವಾಸಗಳನ್ನೂ ನಾಶ ಮಾಡಿಕೊಂಡು ಕುಳಿತಂತಿದ್ದಾರೆ. ಜನರ ಸ್ವಾಭಾವಿಕ ನಂಬಿಕೆಗಳನ್ನು ತಮ್ಮ ಮತಗಳಿಕೆಯ ಉದ್ದೇಶದಿಂದ ಬಗೆಬಗೆದು, ಮೂಢರನ್ನಾಗಿಸುತ್ತಿದ್ದಂತೆಯೂ - ಈಗ ಕಾಣುತ್ತಿದೆ. "ವಿಶ್ವಾಸ" ಎಂಬುದು - ಮನುಷ್ಯರಲ್ಲಿರಬೇಕಾದ Inbuilt ಚಿಕಿತ್ಸೆ ಎಂಬುದನ್ನು ಧಿಕ್ಕರಿಸುವಂತಹ ಮೂಢರ ಮೂಢನಂಬಿಕೆಗಳಿಂದಾಗಿ, ತಲೆಕೆದರಿದಂತಾಗಿರುವ ಕೆಲವು ಮನುಷ್ಯರು ಪ್ರಾಣಿಗಳಂತೆಯೂ ವರ್ತಿಸತೊಡಗಿದ್ದಾರೆ !

ಯಾವ ವೈದ್ಯನೂ ರೋಗಿಯನ್ನು ಮಂತ್ರಾಕ್ಷತೆ ಕೊಟ್ಟು ಕರೆಯುವುದಿಲ್ಲ ಮತ್ತು ಉದ್ದೇಶಿತವಾಗಿ ಕೊಲ್ಲುವುದೂ ಇಲ್ಲ ಎಂಬ ಸಾಮಾನ್ಯ ಜ್ಞಾನವು ಎಲ್ಲರಿಗೂ ಅವಶ್ಯಕ. ನಂಬಿಕೆ ಇಲ್ಲದ ಯಾವುದೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಲೇಬಾರದು. ಚಿಕಿತ್ಸೆಗೆಂದು ಬಂದವರಿಗೆ ವೈದ್ಯರಲ್ಲಿ ನಂಬಿಕೆ ಬೇಡವೇ ? ಇವತ್ತಿನ ವೈದ್ಯರುಗಳು ಹಲವು ಪರೀಕ್ಷೆಗಳನ್ನು ಮಾಡಿಸಿ, Laboratory ಗಳ ದಾಖಲೆಯನ್ನು ತಮ್ಮಲ್ಲಿ ಸಿದ್ಧವಾಗಿ ಇರಿಸಿಕೊಳ್ಳುತ್ತಿರುವುದರ ಹಿಂದೆ, ಈ ರೋಗಿ ಪ್ರಪಂಚದ ಅಸಂಗತ ವರ್ತನೆಗಳೂ ಕಾರಣವಿರಬಹುದೇ ? ಯೋಚಿಸಬಹುದು. ತಾವು ಉದ್ದೇಶಿತವಾಗಿ ಮಾಡದ ತಪ್ಪನ್ನು - ಯಾರೋ ಒಬ್ಬ ತಮ್ಮ ಮೇಲೆ ಹೊರಿಸುವಂತಾಗಬಾರದು ಎಂಬ "ಸ್ವರಕ್ಷಣೆಯ" ಮುಂಜಾಗ್ರತೆಯೂ ವೈದ್ಯರದಾಗಿರಬಹುದು. ಪ್ರತಿಯೊಬ್ಬ ಪ್ರಜೆಗೂ ಸ್ವರಕ್ಷಣೆಯ ಹಕ್ಕು ಇದೆಯೆಂದಾದರೆ ವೈದ್ಯರಿಗೆ ಇಲ್ಲವೇ ? ಇರುತ್ತದೆ. ಆದರೆ, ವೈದ್ಯರು ತಮ್ಮ ಸ್ವರಕ್ಷಣೆಯ ಚಿಂತೆಯಿಂದ - ಹೀಗೆ ಯರ್ರಾಬಿರ್ರಿಯಾಗಿ ಪೂರ್ವತಯಾರಿಯನ್ನು ಮಾಡಿಕೊಳ್ಳುವಂತಹ ಸನ್ನಿವೇಶವನ್ನು ನಿರ್ಮಿಸಿದವರು ಯಾರು ? ಯೋಚಿಸಿದರೆ ಅದಕ್ಕೂ ಉತ್ತರ ಸಿಗುತ್ತದೆ. ಹೌದು. ಯಾರೋ ಮಾಡಿದ ಅಧಿಕಪ್ರಸಂಗಗಳಿಗೆ ಈಗ, ಎಲ್ಲರೂ ಬೆಲೆ ತೆರಬೇಕಾಗಿರುವುದು ಸತ್ಯವಾದರೂ - ವೈದ್ಯರ ದೃಷ್ಟಿಯಿಂದ ಇದು ಅನಿವಾರ್ಯ ತಾನೆ ? ಹಕ್ಕು - ಅಧಿಕಾರದ ಬಲದಿಂದಲೇ ಎಲ್ಲವನ್ನೂ ಪಡೆಯಲಾಗುವುದಿಲ್ಲ ಎಂಬುದನ್ನು - ಅರ್ಥ ಮಾಡಿಕೊಳ್ಳಬೇಕಾದ ಕಾಲ ಎಲ್ಲರಿಗೂ ಬಂದಿದೆ.


ನಮ್ಮ ಸುತ್ತಮುತ್ತಲೂ - ತಮ್ಮ ಸ್ವಂತ ಬದುಕಿನ ರಸನಿಮಿಷಗಳನ್ನು ಕಣ್ಣಿನಲ್ಲಿಯಾದರೂ ನೋಡಿ ಅನುಭವಿಸಲಾಗದಂತೆ ರಾತ್ರಿ ಹಗಲೆನ್ನದೆ ಕಾರ್ಯತತ್ಪರರಾಗಿರುವ ಎಷ್ಟು ವೈದ್ಯರಿಲ್ಲ ? ವೈದ್ಯರ ಉಡುಗೆತೊಡುಗೆ, ನಗುಮುಖ, ವಾಹನ .. ಇತ್ಯಾದಿ ಹೊರಭಾವವನ್ನು ಮಾತ್ರ ನೋಡುತ್ತ "ವೈದ್ಯರೆಲ್ಲರೂ ಪರಮ ಸುಖದ ಸ್ವರ್ಗದಲ್ಲಿದ್ದಾರೆ" ಎಂದು ಭಾವಿಸುತ್ತ, ತಮ್ಮ ಒಳಗೊಳಗೇ ವೈದ್ಯವರ್ಗವನ್ನು ಕಂಡು ಕರುಬುತ್ತಿರುವ "ಅಧಿಕಾರದ ಹಮ್ಮಿನ ರೋಗಿಗಳು" ಇದ್ದರೆ -  ಅವರು ಪರೋಕ್ಷವಾಗಿ ತಮ್ಮ ಕಾಲಿನ ಮೇಲೆ ತಾವೇ ಚಪ್ಪಡಿ ಕಲ್ಲು ಹಾಕಿಕೊಳ್ಳುತ್ತಿದ್ದಾರೆ ಎಂದೇ ಅರ್ಥ.... ತಮ್ಮ ಬದುಕಿನ ೮-೧೦ ವರ್ಷಗಳನ್ನು ವೈದ್ಯಕೀಯ ಜ್ಞಾನ ಸಂಗ್ರಹಣೆಯ ಅಜ್ಞಾತವಾಸದಲ್ಲಿ ಕಳೆಯುವ ವೈದ್ಯರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳುವಷ್ಟು ದೊಡ್ಡ ಹುಂಬತನ ಇನ್ನೊಂದಿಲ್ಲ. ಮತ್ಸರವೂ ಗೌರವಯುತವಾಗಿರಲಿ. "ಮಿತಿಮೀರುವ ಮತ್ಸರ ರೋಗದ ಕೇಸುಗಳು" - ಒಂದಿಷ್ಟೂ ಗೊಣಗದೆ ಅದರ ಪರಿಣಾಮವನ್ನೂ ಅನುಭವಿಸಲು ಸಿದ್ಧವಾಗಿರಬೇಡವೇ ?

ರಾಜಕಾರಣಿಗಳಿಗಾದರೆ ರೋಗ ಬಂದರೆ - ವಿದೇಶಗಳಿವೆ; ಜನರ ತೆರಿಗೆ ದುಡ್ಡೂ ಇದೆ....
ನಮಗೆ ? ನಮ್ಮ ತಲೆ; ನಮ್ಮ ಕೈ. ಇಷ್ಟೆ.
ಇದನ್ನು - ಬುದ್ಧಿ ಇರುವವರು ಮರೆಯಬಾರದು.

ಆದರೆ - ಈಗ ನಡೆದಿರುವ "ಸರಕಾರೀ ಷಡ್ಯಂತ್ರದ ಕಾಯ್ದೆಯ" ಹಿನ್ನೆಲೆಯಲ್ಲಿ ಯಾವ ಬಗೆಯ ವಿಕಾಸದ ಕನಸೂ ಕಾಣುವುದಿಲ್ಲ; ಇದು - ಗಂಟು ಹುಟ್ಟುಹಾಕಲು ಇರುವ ಆಯುಧದಂತೆ ಮಾತ್ರ ಕಾಣಿಸುತ್ತದೆ. ಅಷ್ಟೆ. ಆದ್ದರಿಂದ ಈ ಕಾಯ್ದೆಯನ್ನು "ಗಂಟು ಕಳ್ಳರ ಕಾಯಿದೆ" ಎಂದೂ ಹೆಸರಿಸಬಹುದು. ಸರಕಾರವು ನಿಯೋಜಿಸಲು ಹೊರಟಿರುವ ಕಮಿಟಿಯ ಸದಸ್ಯರಿಗೆ ಎಲ್ಲ ವೈದ್ಯರೂ "ತಿಂಗಳ ಕಪ್ಪ" ಸಲ್ಲಿಸುವಂತೆ ಮಾಡಲು ಹಾಕಿರುವ ಬುನಾದಿ ಇದು ಎಂದು ಅನ್ನಿಸಿದರೆ - ಅದೂ ತಪ್ಪಾಗದು.  ಇಂತಹ ನಾಝೀಗಳು, ಝಾರ್ ದೊರೆಗಳು ಕರ್ನಾಟಕಕ್ಕೆ ಬೇಕೆ ? ತಲೆಯೊಳಗೆ ಬೈಹುಲ್ಲು ತುಂಬಿದ ಮನುಷ್ಯ ರೂಪದ ವ್ಯಾಘ್ರಗಳನ್ನು ದಂಡಿಗೆ ಏರಿಸಿದರೆ - ಆತಂಕ, ಆಪತ್ತು - ಪ್ರಜೆಗಳ ನಿತ್ಯದೂಟವಾಗುವುದು ಅನಿವಾರ್ಯ. ಕಾಡುವ ರೋಗಿಗಳು, ವೈದ್ಯರು ಮತ್ತು ಕಾಡಿಸುವ ಸರಕಾರಗಳು... ಎಂದೆಲ್ಲ ಅನ್ನಿಸುವುದು ಆಗಲೇ.

ಕೊನೆಯದಾಗಿ...

ಅನಿಲ್ ಕಪೂರ್ ನಾಯಕನಾಗಿ ಅಭಿನಯಿಸಿದ - "ನಾಯಕ್" ಎಂಬ ಹಿಂದಿ ಸಿನೆಮಾ ನೋಡಿದ್ದೀರಾ ? ಕೆಟ್ಟು ಕೆರ ಹಿಡಿದ ರಾಜಕೀಯ ವ್ಯವಸ್ಥೆಯೊಂದನ್ನು ಶುಚಿಗೊಳಿಸುವ ಕನಸು ಕಾಣುವ ಯುವಕನೊಬ್ಬನ ಕತೆ ಇದು. ಪರಿಣಾಮವಾಗಿ, ಆ ಯುವಕನು ಅನುಭವಿಸಬೇಕಾಗಿ ಬಂದ ಶೋಷಣೆಯ ನರಕವನ್ನು ಈ ಚಿತ್ರದಲ್ಲಿ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ. ಇವತ್ತಿನ ದೇಶದ ರಾಜಕಾರಣಕ್ಕೆ ಹಿಡಿದ ಕನ್ನಡಿಯಂತಿರುವ ಚಿತ್ರವಿದು. ರೋಗಿಷ್ಟ ಮತದಾರರೇ ನಿರ್ಣಾಯಕರೆಂದಾದಾಗ, ಅಸಮರ್ಥ ವೈದ್ಯರಂತಹ ನೇತಾರ ವರ್ಗದಿಂದ ಹೀಯಾಳಿಸಿಕೊಳ್ಳಿಸುತ್ತ ಆಳಿಸಿಕೊಳ್ಳಬೇಕಾದ ಸ್ಥಿತಿ ಒದಗದೇ ಹೋದೀತೇ ? ಬೆತ್ತ ಕೊಟ್ಟು ಹೊಡೆಸಿಕೊಳ್ಳುವುದೆಂದರೆ ಹೀಗೇ. ಇದು, ಇವತ್ತಿನ ಕರ್ನಾಟಕದ ಸ್ಥಿತಿ.

ನಾನು ವೈದ್ಯಳಲ್ಲ; ಯಾವುದೇ ವೈದ್ಯರ ಪ್ರತಿನಿಧಿಯೂ ಅಲ್ಲ. ಆದರೆ ಪ್ರಜ್ಞಾವಂತ ನಾಗರಿಕರಾದವರು - ಬದುಕಿನ ಯಾವುದೇ ಓಟವು ಹಳಿ ತಪ್ಪಿದ್ದರೆ, ತಪ್ಪುತ್ತಿದ್ದರೆ... ತಪ್ಪಿದ್ದಾದರೂ ಎಲ್ಲಿ ? ಯಾಕೆ ? - ಎಂದು - ಸ್ಥಿರ ಬುದ್ಧಿಯಿಂದ ಯೋಚಿಸುವ ಅಗತ್ಯವಿಲ್ಲವೇ ? ಪ್ರಾಣೋತ್ಕ್ರಮಣ ಸ್ಥಿತಿಯಂತಹ ಆಪತ್ತು ನಮಗೆ ಬಂದೊದಗಿದಾಗ ನಮ್ಮಿಂದ ಸುಖ ಸಂತೋಷ ಅನುಭವಿಸಿದ - ಸುಖ ದುಃಖಗಳನ್ನು ಪರಸ್ಪರ ಹಂಚಿಕೊಂಡ ನಮ್ಮ ಬಂಧುಗಳು, ಸ್ನೇಹಿತರು... ಎಲ್ಲರೂ ನಿಸ್ಸಹಾಯಕರಾಗುವ ಅಂಥ ಕಾಲದಲ್ಲಿ - "ನನ್ನಿಂದಾದ ಪ್ರಯತ್ನ ಮಾಡುತ್ತೇನೆ; ಮುಂದೆ ದೈವೇಚ್ಛೆ..." ಎನ್ನುತ್ತ ಭರವಸೆ ತುಂಬುವ ವೈದ್ಯರು ನಮಗೆ ಬೇಡವೆ ? ಅಪರಾಧವೊಂದು ಯಾವುದೇ ವೈದ್ಯರಿಂದ ಅಥವ ವೈದ್ಯಕೀಯ ಕ್ಷೇತ್ರದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದರೆ ಅದನ್ನು ಸೂಕ್ಷ್ಮವಾಗಿ, ಸುಸಂಸ್ಕೃತ ಶೈಲಿಯಿಂದ ನಿಭಾಯಿಸಬೇಕೇ ಹೊರತು - ಯಾವುದೇ ಬಗೆಯ ದಬ್ಬಾಳಿಕೆಯ ಮಾರ್ಗವು ಸುತರಾಂ ಸರಿಯಲ್ಲ. ಕಣ್ಣಿಗೆ ಹೊಡೆಯುವಂತೆ ಯಥೇಷ್ಟ ಕಮಾಯಿಯಿರುವ ಇತರ ಹಲವಾರು ವೃತ್ತಿಗಳಿಗಿಲ್ಲದ ನಿಯಂತ್ರಣ ಸೂತ್ರವನ್ನು ವೈದ್ಯವಲಯಕ್ಕೆ ಮಾತ್ರ ಬಿಗಿಯುತ್ತಿರುವ ಹಿಂದಿನ ಷಡ್ಯಂತ್ರವಾದರೂ ಏನಿರಬಹುದು ? ಎಂಬುದೂ ಯೋಚಿಸಬೇಕಾದ ವಿಷಯ.

ತಮ್ಮ ತಮ್ಮ ಅಧಿಕಾರ ಸಾಮ್ರಾಜ್ಯದ ಒಡ್ಡೋಲಗವನ್ನು ವಿಜೃಂಭಣೆಯಿಂದ  ನಡೆಸುವ ಸಲುವಾಗಿ - ಸಾಮಾಜಿಕ ಪರಿಸರದಲ್ಲಿ ಜಾತಿ, ಮತ, ಧರ್ಮ, ವರ್ಗ, ವೃತ್ತಿ... ಇತ್ಯಾದಿ ಬಗೆಬಗೆಯ ವಿಷಪ್ರಸಾರ ಮಾಡಿ, ಪರಸ್ಪರರನ್ನು ಎತ್ತಿಕಟ್ಟುತ್ತ ಬಂದಿರುವ ಈ ರಾಜಕಾರಣಿಗಳು - ನಮ್ಮ ಬದುಕಿಗೆ ಬಿಡಿ; ನಮ್ಮ ಹೆಣಕ್ಕೂ ಹೆಗಲು ಕೊಡಲಾರರು - ಎಂಬುದನ್ನು ನಾವು ಮರೆಯಬಾರದಲ್ಲವೇ ? ಯಾರನ್ನು ನಂಬುತ್ತೀರಿ ? ವೈದ್ಯರನ್ನೇ ? ಅಥವ - ಇಂತಹ ಕುಟಿಲ ನೀತಿ ನಿರೂಪಕರನ್ನೇ ?

ಯಾವುದೇ ಚುನಾವಣೆಗಳ ಪೂರ್ವದಲ್ಲಿ, ಯಾವುದೇ ಸರಕಾರಗಳು ಕೈಗೊಳ್ಳುವ - "ಜನಪರವೆಂಬ ಹೆಸರಿನ" ಬಹುಪಾಲು ಜನಮಾಯಕದ ನಿರ್ಧಾರಗಳು - ಒಂದೋ ಓಟಿಗಾಗಿ; ಇಲ್ಲವೇ ಆಯ್ದ ವರ್ಗದ ಕಾಟಕ್ಕಾಗಿ - ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ತತ್ಕಾಲೀನ ವ್ಯವಸ್ಥೆಗಳ ದಯನೀಯತೆಗೆ ಇಂತಹ ಬಾಲಿಶ ನಿರ್ಧಾರಗಳು ಮತ್ತು ತತ್ಪರಿಣಾಮಗಳೇ ಕಾರಣ ಎಂಬುದು - ನೀತಿ ನಿರೂಪಕರಿಂದ ಹಿಡಿದು ಎಲ್ಲರಿಗೂ ತಿಳಿದಿರುವ ಸಂಗತಿ. ಅಸಹಾಯಕ ವ್ಯಕ್ತಿತ್ವಗಳನ್ನು ತಮ್ಮ ಸಹಾಯಕರಾಗಿ ನೇಮಿಸಿಕೊಂಡಿರುವ ಪ್ರಜೆಗಳು - ತಮ್ಮ ಮತಿಹೀನ ಕೆಲಸಕ್ಕೆ  ಬಗೆಬಗೆಯ ತೆರಿಗೆ ಕಟ್ಟಬೇಕಾಗುತ್ತದೆ ಎಂಬುದಕ್ಕೆ - ಈಗ ಉದ್ದೇಶಿತವಾದ - ಕರ್ನಾಟಕದ ಕಾನೂನೂ ಒಂದು ದೃಷ್ಟಾಂತ.

ಒಮ್ಮೆ ಗೆದ್ದು ಆರಿಸಿ ಬಂದ ಮೇಲೆ - ಹೀಗೆ ಗೊಂದಲಾಪುರಗಳನ್ನೇ ನಿರ್ಮಿಸುತ್ತ, ಹುಬ್ಬು ಹಾರಿಸುತ್ತ, ಪೆದಂ ಮಾತನಾಡುತ್ತ,  ಉಂಡು ಉಟ್ಟು, ಮೆರೆದಾಡುತ್ತಿರುವ ಈ ಮಂದಿ - "ಪ್ರಜೆಗಳನ್ನು ಪ್ರಭುಗಳಾಗಲು ಎಂದಿಗೂ ಬಿಡಬಾರದು" ಎಂಬ ಪಂಥ ಕಟ್ಟಿದಂತೆಯೂ ಕಾಣುತ್ತದೆ. ಆದ್ದರಿಂದ ಪ್ರಜೆಗಳು - ಅವರವರ ಹಿತವನ್ನು ಅವರವರೇ ಕಾಪಾಡಿಕೊಳ್ಳಬೇಕಾದ ಸನ್ನಿವೇಶವಿದೆ. ಆದರೆ ಈ ಪ್ರಜಾಪ್ರಭುತ್ವದಲ್ಲಿ - ಪ್ರಜೆಗಳ ಕೈಯ್ಯಲ್ಲಿರುವ ಶಕ್ತಿ "ಮತ ಪ್ರಯೋಗ" ಮಾತ್ರ. ಆದ್ದರಿಂದ ಪ್ರತೀ ಚುನಾವಣೆಯ ಹಂತದಲ್ಲಿ - ನಾವು ಮತದಾನ ಮಾಡುವ ಮೊದಲು - ಪ್ರತೀ ವ್ಯಕ್ತಿ ಮತ್ತು ಪಕ್ಷಗಳ ಧೋರಣೆಗಳನ್ನು ತುಲನಾತ್ಮಕವಾಗಿ ಮಥಿಸಿ, ಪಕ್ಷಾತೀತರಾಗಿ ನಿರ್ಧರಿಸಬೇಕಾದ್ದು ಅತೀ ಅಗತ್ಯ.

                                             *****     *****     *****     ***** 

Thursday, September 28, 2017

ಜ್ಞಾನಪ್ರತಿಮೆಗಳು - (೧) ಯಾಮುನಾಚಾರ್ಯರು

ಒಂದು ಕುರ್ಚಿಯಲ್ಲಿ ಆಕಸ್ಮಿಕವಾಗಿ ಆಸೀನರಾಗುವ ಅಪಾತ್ರರಾದ ವ್ಯಕ್ತಿಗಳನ್ನೆಲ್ಲ - ಅವರು ಕುಳಿತ ಕುರ್ಚಿಯ ಅಳತೆ, ಎತ್ತರ, ಅಲಂಕಾರಕ್ಕೆ ತಕ್ಕಂತೆ - ಭ್ರಮಿಸಿ ಮೆರೆದಾಡಿಸುವ - ಬಹುಸಂಖ್ಯಾತ ಕುರುಡು ಹುಂಬರ ಆಡುಂಬೊಲವಾಗಿ - ಈ ಭೂಮಿಯ ಬದುಕನ್ನು ನಾವು ಪರಿವರ್ತಿಸಿಕೊಳ್ಳುತ್ತಲೇ ಬಂದಿದ್ದೇವೆ. ವ್ಯಕ್ತಿಯ ವೇಷಭೂಷಣ, ಇರಸ್ಥಿಕೆ, ಗತ್ತುಗೈರತ್ತುಗಳ ಅಬ್ಬರಗಳ ಹೊರಮುಖಗಳನ್ನು ನೋಡಿಯೇ ಮನ್ನಣೆಯ ಮಣೆ ಹಾಕುವ ಮನುಷ್ಯರ ಲೌಕಿಕ ಮಡ್ಡತನವು - ಮುಗ್ಧ ಅಥವ ದಡ್ಡ ಮನುಷ್ಯರಷ್ಟೇ ಅನಾದಿಯಾದರೂ ಕೂಡ - ಅಂತಹ ದಡ್ಡತನದ ವಿಶ್ವರೂಪ ದರ್ಶನವು ಬರಬರುತ್ತ ಪುಕ್ಕಟೆಯಾಗಿ ಲಭಿಸುವಷ್ಟು ಹುಲುಸಾಗಿ ಬೆಳೆದು ನಿಂತಂತೆಯೂ ಕಾಣುವುದಿದೆ. ಕಾಲದ ಮಾಪನದಲ್ಲಿ ನೋಡಿದರೆ - ಇವೆಲ್ಲವೂ ಅಜ್ಞಾನಪ್ರೇರಿತ, ನಿರಂತರ, ವ್ಯರ್ಥ ಅಣಕವಾಡುಗಳು. ಯಾವುದೇ ದಡ್ಡತನಕ್ಕೆ ಮನ್ನಣೆ ಅಂದರೆ - ದಡ್ಡಮೂರ್ಖರನ್ನೇ "ದೊಡ್ಡ ಶರ್ಕರ" ಆಗಿಸುವ ವ್ಯರ್ಥ ಪ್ರಯತ್ನ ಎಂದೇ ಅರ್ಥ.

ಹೀಗಿದ್ದರೂ... ಮನುಷ್ಯಜಾತಿಯ ಇತಿಹಾಸದಲ್ಲಿ ಆಗೊಮ್ಮೆ ಈಗೊಮ್ಮೆ ಜ್ಞಾನ ಕೇಂದ್ರಿತ ವಲಯಗಳು ಆವಿರ್ಭವಿಸಿ, ಜ್ಞಾನದ ಹಾದಿಯಲ್ಲಿ ಜೀವ ಸಂಚಾರವಿಲ್ಲದೆ ಸನ್ಮಾರ್ಗವನ್ನು ಮುಚ್ಚಿ ಮರೆಮಾಡಿದ ಅಜ್ಞಾನದ ಕುರುಚಲು ಪೊದೆಗಳನ್ನು ಸದ್ದುಗದ್ದಲವಿಲ್ಲದೆ ಸವರಿ, ತಮ್ಮ ಜ್ಞಾನದ ಬಲದಿಂದಲೇ ಸರಳ ಸುಲಭ ಸಂಚಾರಕ್ಕೆ ಯೋಗ್ಯಗೊಳಿಸಿ, ಜ್ಞಾನದೀಪವನ್ನು ಬೆಳಗಿಸುತ್ತ, ಬದುಕುಗಳಲ್ಲಿ ಅರ್ಥ ತುಂಬಿಕೊಳ್ಳಲು ಪ್ರೇರಣೆ ನೀಡುತ್ತ ಬಂದಿರುವ ಅನೇಕ ಪೂರ್ವ ದೃಷ್ಟಾಂತಗಳೂ ನಮ್ಮ ಮುಂದಿವೆ. ಆಗೊಮ್ಮೆ ಈಗೊಮ್ಮೆ ಸಂಭವಿಸುತ್ತಿದ್ದ ವಿದ್ಯಮಾನವಿದು. ಅದುವರೆಗೆ ಅತ್ಯಂತ ಸಾಮಾನ್ಯವೆಂದು ಕಾಣುತ್ತಿದ್ದ ಅಂತಹ ಕೆಲವು ಪೀಠಗಳು ಅದರಲ್ಲಿ ಕುಳಿತವರ ಹಿರಿಮೆಯಿಂದ ಜಗತ್ಪೀಠ ಅಥವ ಸಿಂಹಾಸನ ಎಂದೆನ್ನಿಸಿಕೊಂಡಂತಹ ಅನೇಕ ಜ್ಞಾನಪವಾಡಗಳಿಗೆ ಇತಿಹಾಸವು ಸಾಕ್ಷಿಯಾದದ್ದೂ ನಮ್ಮ ಕಣ್ಣ ಮುಂದಿವೆ. ಹಾಗೆ ಆವಿರ್ಭವಿಸಿದ್ದ ಹೊಸ ಪೀಠಗಳು, ಆಯಾ ಕಾಲಧರ್ಮಕ್ಕನುಸಾರವಾಗಿ, ತಮ್ಮ ಪರಿಷ್ಕೃತ ಸಿದ್ಧಾಂತದಿಂದಲೇ ಸಮಾಜದ ಭಕ್ತಿ ತೃಷೆ ಮತ್ತು ಜ್ಞಾನ ತೃಷೆಯನ್ನು ನೀಗಿಸುತ್ತ, ವಿಶೇಷ ಮಾನ್ಯತೆಯನ್ನು ಗಳಿಸಿಕೊಂಡು, ಇಂದಿಗೂ ಉಳಿದು ಬಂದಿರುವುದು ಆಯಾ ಮೂಲ ಸಿದ್ಧಾಂತಗಳ ಗಟ್ಟಿತನದ ದ್ಯೋತಕವಾಗಿ ಕಾಣುತ್ತವೆ. ಭಕ್ತಿಯೊಂದಿಗೆ ಜ್ಞಾನವನ್ನು ಮೇಳೈಸಿದ್ದ ಶ್ರೀ ಶಂಕರ, ಮಧ್ವ, ಯಾಮುನರು, ರಾಮಾನುಜರು, ಚೈತನ್ಯ ಮಹಾಪ್ರಭುಗಳು, ಶ್ರೀ ರಾಮಕೃಷ್ಣರು... ಮುಂತಾದ ಆಧ್ಯಾತ್ಮಿಕ ಅಧ್ವರ್ಯುಗಳು ಇಂತಹ ವಿಶಿಷ್ಟ ಸಾಲಿನಲ್ಲಿ ನಿಲ್ಲುವವರು.

ಅದೊಂದು ಕಾಲಘಟ್ಟದಲ್ಲಿ ಜನಜನಿತವಾದ - ಅದ್ವೈತದ ಪಾರಮಾರ್ಥಿಕ ಸಂದೇಶವಾದ - ಜಗತ್ತು ಮಿಥ್ಯೆ - ಎಂಬ ಕಠಿಣ ಸಿದ್ಧಾಂತದ ಹೂರಣವನ್ನು  ಯಥಾರ್ಥವಾಗಿ ಅರಗಿಸಿಕೊಳ್ಳಲಾಗದಂತಹ ಸಾಮಾನ್ಯ ಜೀವಜಗತ್ತಿಗೆ - ಜ್ಞಾನದ ಹಾದಿಯು ಸರಳವಾಗಿ ಕೈಗೆಟಕುವಂತೆ - "ಮಿಥ್ಯವೂ ಕೂಡ ವ್ಯಾವಹಾರಿಕ ಸತ್ಯವೇ ಆಗಿದೆ " ಎಂದು ಸಂತೈಸಿ, ವಿಶಿಷ್ಟವಾಗಿ ಬೋಧಿಸಿ, ಕಠಿಣವೆಂದುಕೊಂಡು ಅಧ್ಯಾತ್ಮ ಮಾರ್ಗದಿಂದಲೇ ದೂರ ಸರಿಯುತ್ತಿದ್ದ ಜನರನ್ನು ಮತ್ತೊಮ್ಮೆ - ವೇದಾಂತದ ಸೈದ್ಧಾಂತಿಕ ತತ್ತ್ವಗಳೆಡೆಗೆ ಆಕರ್ಷಿಸಿದ್ದ ಮಹಾಪುರುಷರು - ಶ್ರೀ ರಾಮಾನುಜರು.

ಶ್ರೀ ಶಂಕರರ ಅದ್ವೈತ ಮತ್ತು - ಮಧ್ವರ ದ್ವೈತ ಸಿದ್ಧಾಂತಕ್ಕೆ ಸರಿದೊರೆಯಾಗಿ ಅವತರಿಸಿದ ವಿಶಿಷ್ಟವಾದ ಸಿದ್ಧಾಂತವಿದು. ಬಹುಶಃ ಆದ್ದರಿಂದಲೇ - ವಿಶಿಷ್ಟಾದ್ವೈತ ಎಂದೇ ಗುರುತಿಸಲ್ಪಟ್ಟಿತ್ತು. ಈ ವಿಶಿಷ್ಟಾದ್ವೈತ ಪರಂಪರೆಯ ಆಚಾರ್ಯರು ತಮ್ಮ ಸಿದ್ಧಾಂತವನ್ನು ಹಲವಾರು ದೃಷ್ಟಾಂತಗಳ ಮೂಲಕ, ಎಲ್ಲರಿಗೂ ಮನವರಿಕೆಯಾಗುವಂತೆ ಪ್ರತಿಪಾದಿಸಿದ್ದರು.

ಜೀವ, ದೇವ, ಜಗತ್ತು - ಇವು ಮೂರೂ ಬೇರೆ ಬೇರೆ. ಹೇಗೆಂದರೆ - ಮಾವಿನ ಹಣ್ಣುಗಳ ಬಣ್ಣ, ರುಚಿ, ವಾಸನೆ, ತಿರುಳು, ಓಟೆ, ನಾರು - ಎಲ್ಲವೂ ಪ್ರತ್ಯೇಕವಾದರೂ ಎಲ್ಲವೂ ಸೇರಿಕೊಂಡಾಗ ಮಾತ್ರ - ಅದು ಹೇಗೆ ಮಾವಿನ ಹಣ್ಣಾಗುತ್ತದೆಯೋ ಹಾಗೇ. ಮಾವಿನ ಹಣ್ಣಿನಲ್ಲಿ ಎಲ್ಲ ವಿಭಿನ್ನತೆಗಳಿದ್ದೂ ಒಂದೊಂದೂ ಪ್ರತ್ಯೇಕವಾಗಿದ್ದರೂ - ಅವು ಯಾವುವೂ ಸ್ವತಂತ್ರವಲ್ಲ. ಹೇಗೆಂದರೆ - ರುಚಿ ಮಾತ್ರವೇ ಮಾವಿನ ಹಣ್ಣಲ್ಲ; ಸಿಪ್ಪೆ, ನಾರು ಮಾತ್ರವೇ ಹಣ್ಣಲ್ಲ... ಎಲ್ಲವೂ ಸಮನ್ವಯಗೊಂಡಾಗಲೇ ಅದು ಸಂಪೂರ್ಣ ಹಣ್ಣು.  ಹೀಗೆ...

ವಿಶಿಷ್ಟಾದ್ವೈತದ ಸಿದ್ಧಾಂತದಂತೆ - ದೇವರು, ಜೀವರು, ಪ್ರಕೃತಿ ಎಂಬ ಮೂರೂ ಪ್ರತ್ಯೇಕವಾದರೂ ಜೀವ ಮತ್ತು ಪ್ರಕೃತಿಗಳು ದೇವರಿಗೆ ಅಧೀನ. ಈಶ್ವರನು (ದೇವರು) ಶರೀರಿ; ಆಧಾರ ಮತ್ತು ಅದೇ - ಪ್ರಾಣ...  ಜೀವ (ಚಿತ್) ಮತ್ತು ಪ್ರಕೃತಿ (ಅಚಿತ್, ಜಡ) ಗಳು - ಈಶ್ವರನೆಂಬ ಶರೀರಿಯ ಶರೀರವೇ ಆಗಿದೆ. ಅಂದರೆ... ಜೀವಾತ್ಮವು ವಿಶಿಷ್ಟವಾದ - ಪರಬ್ರಹ್ಮ ವಸ್ತು ಶ್ರೀಮನ್ನಾರಾಯಣನ ಒಂದು ಅಂಶ. ಚಿತ್ (ಜೀವ) ಮತ್ತು ಅಚಿತ್ ಎಂಬ ಜಡ ಜಗತ್ತು (ಪ್ರಕೃತಿ) - ಇವು ಶರೀರಗಳು. ಆದರೆ ಈಶ್ವರನೆಂಬ ಪ್ರಾಣ ಶರೀರಿಯ ರಸವಿಲ್ಲದೆ - ಯಾವುದೇ ಶರೀರವು ಇರಲಾರದು. ಹೀಗೆ ಈಶ್ವರ, ಚಿತ್, ಅಚಿತ್ - ಎಂಬ ಮೂರು ಅಂಶಗಳು ಅವಿನಾ ಸಂಬಂಧದಿಂದ ಕೂಡಿವೆ ಎಂಬುದೇ - ವಿಶಿಷ್ಟಾದ್ವೈತದ ತತ್ವತ್ರಯಗಳಾಗಿವೆ. ಉಪಾಸನೆಯ ವಿಷಯದಲ್ಲಿ ಪೂರ್ಣ ಸ್ವಾತಂತ್ರ್ಯ ನೀಡಿರುವ ಈ ತತ್ವವು - ಶ್ರೀ ಶಂಕರರ "ಅಹಂ ಬ್ರಹ್ಮಾಸ್ಮಿ" ಎಂಬುದರ ಸರಳೀಕೃತ ರೂಪದಂತೆಯೂ ಕಾಣುತ್ತದೆ.

ನಾನು ಬೇರೆ; ನೀನು ಬೇರೆ-ನಾನು ದಾಸ; ನೀನು ಈಶ... ಎಂಬ ದೇಹ ಭಾವದಲ್ಲಿ ದ್ವೈತ ಸಿದ್ಧಾಂತವು ಸಂಚರಿಸಿದರೆ, ನಾನು ಅಂಶ; ನೀನು ಅಂಶಿ... ಎಂಬ ಜೀವ ಭಾವದಲ್ಲಿ ವಿಶಿಷ್ಟಾದ್ವೈತವು ಪ್ರತಿಪಾದಿಸಲ್ಪಟ್ಟಿದೆ. "ನಾನು ನೀನು ಎಂಬ ಭೇದವೇ ಇರುವುದಿಲ್ಲ... ನಾನೇ ನೀನು; ನೀನೇ ನಾನು..." ಎನ್ನುವ ಆತ್ಮಭಾವವೇ - ಅದ್ವೈತ. ಮನುಷ್ಯನಲ್ಲಿ ಈ ಮೂರೂ ಭಾವಗಳು ಇರುತ್ತವೆ.

ದೇಹಬುದ್ಧಿಯಲ್ಲಿ ಸಖ್ಯಭಾವ, ಜೀವಬುದ್ಧಿಯಲ್ಲಿ ದಾಸ್ಯಭಾವ, ಆತ್ಮ ಬುದ್ಧಿಯಲ್ಲಿ ಪರಿಪೂರ್ಣ ಏಕತೆಯ ಸಾಮರಸ್ಯದ ಪರಿಮಳವಿರುವುದು - ಕೇವಲ ಅನುಭವಗ್ರಾಹ್ಯ. ಸಾಧಕನಲ್ಲಿ ಅನುಕ್ರಮವಾಗಿ ಕರ್ಮ, ಭಕ್ತಿ ಮತ್ತು ಜ್ಞಾನ ಸಾಧನೆಯನ್ನು ಅಪೇಕ್ಷಿಸುವ ಮಾರ್ಗಗಳಿವು. ಆಯಾ ಜೀವವು ತನಗೆ ಹಿತವಾದ ಯಾವುದೇ ಮಾರ್ಗದಲ್ಲಿ ತೊಡಗಿಕೊಂಡರೂ ಮೂಲತಃ ಪ್ರತಿಯೊಂದು ಸಾಧನೆಯ ಹಾದಿಯಲ್ಲೂ ಈ ಮೂರೂ ಹಂತಗಳು ಎದುರಾಗುತ್ತವೆ; ಸಾಧಕನ ಅನುಭವಕ್ಕೆ ಬರುತ್ತವೆ. ಆದ್ದರಿಂದ ಎಲ್ಲ ಮತಗಳೂ ಒಂದೇ ಗಮ್ಯಕ್ಕೆ ಕರೆದೊಯ್ಯುವ ವಿಭಿನ್ನ ಹಾದಿಗಳಷ್ಟೇ.

ವಿಶಿಷ್ಟಾದ್ವೈತ ಎಂದಾಗ - ಆ ವಿಶಿಷ್ಟ ಸಿದ್ಧಾಂತಕ್ಕೊಂದು ಮುದ್ರೆಯೊತ್ತಿ ದಡ ಮುಟ್ಟಿಸಿದ ಶ್ರೀ ರಾಮಾನುಜರನ್ನು ಸ್ಮರಿಸಿಕೊಳ್ಳುವುದು ಯುಕ್ತ ಮತ್ತು ಸಹಜವಾಗಿದ್ದರೂ ಈ ಸಿದ್ಧಾಂತಕ್ಕೆ ಸುದೀರ್ಘ - ಹಿರಿಯ ಪರಂಪರೆಯೂ ಇದೆ. ಸುಮಾರು ಕ್ರಿ. ಶ. 6 ರಿಂದ 9 ನೇ ಶತಮಾನದ ವರೆಗೆ ಭಕ್ತಿಯ ಆವೇಶವನ್ನು ಪ್ರಚೋದಿಸುತ್ತ ಶ್ರೀವೈಷ್ಣವ ಮತವನ್ನು ಪ್ರಚುರ ಪಡಿಸಿದ್ದ ಆಳ್ವಾರುಗಳು - ವಿಶಿಷ್ಟಾದ್ವೈತದ ಪೂರ್ವಾಚಾರ್ಯರೆಂದು ಗೌರವಿಸಲ್ಪಟ್ಟಿದ್ದಾರೆ. ಅನಂತರ ಸುಮಾರು 10 ನೇ ಶತಮಾನದ ನಂತರ ನಾಥಮುನಿ, ಯಾಮುನಾಚಾರ್ಯರು ಬೆಳೆಸುತ್ತ ಬಂದ ಈ ಪಂಥವು ಶ್ರೀ ರಾಮಾನುಜರ ಕಾಲದಲ್ಲಿ, ತಾತ್ವಿಕ ಸ್ಪಷ್ಟತೆಯೊಂದಿಗೆ ಸಂವಹನಶಕ್ತಿಯಾಗಿ, ಜನಾನುರಾಗಿಯಾಯಿತು. ಜನರನ್ನು ಬಲವಾಗಿ ಮುಟ್ಟಿತು. ವೇದ ಉಪನಿಷತ್ತುಗಳ ಸಾರವನ್ನೇ ಭಕ್ತಿಯಿಂದ ಅವಲಂಬಿಸಿದ್ದ ಆಳ್ವಾರರುಗಳು, ನಾಥಮುನಿ, ಯಾಮುನಾಚಾರ್ಯ ಮುಂತಾದವರು ವಿಸ್ತೃತವಾಗಿ ಬೆಳೆಸಿದ್ದ ಈ ಹೊಸ ಸಿದ್ಧಾಂತವನ್ನು ಕ್ರೋಡೀಕರಿಸಿ, ಇನ್ನಷ್ಟು ಪರಿಷ್ಕರಿಸಿ, ಸಮಯದ ಅಪೇಕ್ಷೆಗೆ ತಕ್ಕಂತೆ ಸಾಮಾನ್ಯ ಜನರೂ ಅನುಸರಿಸಬಹುದಾದ - ಅಧ್ಯಾತ್ಮದ ನವೀನ ಜ್ಞಾನ ವ್ಯವಸ್ಥೆಯಾಗಿ ರೂಪಿಸಿದವರು - ವಿಶಿಷ್ಟಾದ್ವೈತಿ ಶ್ರೀ ರಾಮಾನುಜರು.

ಹೀಗೆ ಸೈದ್ಧಾಂತಿಕ ಸಮಗ್ರತೆಯನ್ನು ಪ್ರತಿಷ್ಠಾಪಿಸಿದುದರಿಂದಲೇ ಉಪನಿಷದ್ಭಾವದೊಂದಿಗೆ - ಅದ್ವೈತದ ಕಲ್ಪನೆಗೆ ಕೂಡ ಎಲ್ಲೂ - ಹೋರುವ ವಿರೋಧವಾಗದ ರೀತಿಯಲ್ಲಿ "ದೇವ ಜೀವ ಸಂಬಂಧವನ್ನು ಸಂಯಮದಿಂದ ವ್ಯಾಖ್ಯಾನಿಸುವ ಸಾಧನೆ"ಯನ್ನು ಮಾಡಿದವರು ಎಂಬ ನೆಲೆಯಲ್ಲಿ - ಶ್ರೀ ರಾಮಾನುಜರು ಸ್ಮರಣೀಯರೆನ್ನಿಸುತ್ತಾರೆ. ತನ್ಮೂಲಕ - ಅಭೇದ, ಭೇದ ಪ್ರತಿಪಾದನೆಯ ಯಾವ ಪೂರ್ವಸೂರಿಗಳನ್ನೂ ತಮ್ಮ ಮತ ಪ್ರತಿಪಾದನೆಯ ಹಂತದಲ್ಲಿ ನಿರ್ದಯವಾಗಿ ಖಂಡಿಸದೆ, ಆಧ್ಯಾತ್ಮಿಕ ಜ್ಞಾನಸಾರದ ಸಮನ್ವಯತೆಯನ್ನು ಸಾಧಿಸುವಲ್ಲಿ ಯಶಸ್ಸು ಕಂಡ ವಿಶಿಷ್ಟ ಸಿದ್ಧಾಂತವೇ - ವಿಶಿಷ್ಟಾದ್ವೈತ. ಏಕಂ ಸದ್ವಿಪ್ರಾ ಬಹುಧಾ ವದಂತಿ ಎಂಬ ವೇದಸಾರವೇ ಇದು. "ಒಂದೇ ಸತ್ಯದ ಅನೇಕ ಬಗೆಯ ವ್ಯಾಖ್ಯಾನ !"

"ಭಗವಂತನು ಒಬ್ಬನೇ . ಜಗತ್ತೆಲ್ಲವೂ ಆತನದೇ ಮಹಿಮೆ; ಸೃಷ್ಟಿ ಎಂಬುದೊಂದು ನಿರಂತರ ವ್ಯಾಪಾರ. ಚೇತನಾಚೇತನ ಮೂಲದ್ರವ್ಯಗಳಿಗೆ ಸ್ವರೂಪ, ಪರಿಣಾಮಗಳೂ ಉಂಟು. ಅಸತ್ತಿನಿಂದ ಸತ್ಯದ ಕಡೆಗೆ ಬರುವುದೇ ಸೃಷ್ಟಿ; ಸತ್ಯದಿಂದ ಅಸತ್ಯದ ಕಡೆಗೆ ಸಾಗುವುದೇ ಲಯ. ಯಾವುದೇ ಮೂಲ ವಸ್ತುವಿನ ಅಪೇಕ್ಷೆಯಿಲ್ಲದೆ ಸಂಭವಿಸಿದ ಸೃಷ್ಟಿಯ ನಿಯಾಮಕನೊಬ್ಬನೇ ಸರ್ವತಂತ್ರ ಸ್ವತಂತ್ರ . ಆತನೇ ನಿಮಿತ್ತ . ಅಪೇಕ್ಷೆಗಳಿಂದ ಸುತ್ತುವರಿದಿರುವ ಜೀವ ಜಗತ್ತುಗಳು - ಈಶ್ವರನ ಅಧೀನ ವಸ್ತುಗಳು . ಆದ್ದರಿಂದ ಜೀವ, ಜಗತ್ತು, ಪ್ರಕೃತಿ - ಇವು ಮೂರು ಸ್ಥಿತಿಗಳಲ್ಲಿಯೂ ವ್ಯತ್ಯಾಸವಿದೆ." ಎನ್ನುವ ಶ್ರೀ ರಾಮಾನುಜರು - ಇತರ ಮತಾಚಾರ್ಯ ಪೂರ್ವಸೂರಿಗಳಿಗಿಂತ ಭಿನ್ನವಾಗಿ ಕಾಣುವುದು ಇಲ್ಲಿಯೇ. ಶ್ರೀ ರಾಮಾನುಜರು ಈ ಭಿನ್ನತೆಗೇ ಪ್ರಾಮುಖ್ಯ ನೀಡಿ , ತಮ್ಮ ಹೊಸ ಸಿದ್ಧಾಂತವನ್ನು ವಿಶಿಷ್ಟಗೊಳಿಸಿದ ಮತಾಚಾರ್ಯರು.

ನಾವು ನಮ್ಮ ನಿತ್ಯ ಬದುಕಿನಲ್ಲಿ ಕಾಣುವ ಕೇಳುವ ಮತ್ತು ಅನುಭವಕ್ಕೆ ಬರುವ - ಇಂದ್ರಿಯಜನ್ಯವಾದ - ಇಂದ್ರಿಯಗ್ರಾಹ್ಯವಾದ ಎಲ್ಲವೂ ಸತ್ಯವೇ ಆಗಿದೆ ಎನ್ನುವುದು - ಶ್ರೀ ರಾಮಾನುಜ ಮತ. ಈ ಸಿದ್ಧಾಂತದ ದೃಷ್ಟಿಯಲ್ಲಿ - "ಸ್ವಪ್ನವೂ ಸತ್ಯವೇ ಆಗಿದೆ. ಆದರೆ ಸ್ವಪ್ನಕ್ಕೂ - ನಿತ್ಯದಲ್ಲಿ ಕಾಣುವ ವಸ್ತುವಿಗೂ ಸ್ವಲ್ಪ ವ್ಯತ್ಯಾಸವಿದೆ. ಹೇಗೆಂದರೆ - ಪದಾರ್ಥವು ಎಲ್ಲರಿಗೂ ಕಾಣಿಸುವುದು; ಆದರೆ ಸ್ವಪ್ನವು ಅದನ್ನು ಅನುಭವಿಸುವವರಿಗೆ ಮಾತ್ರ ಕಾಣಿಸುವುದು. ಅವರವರ ಪಾಪಪುಣ್ಯಾನುಸಾರವಾಗಿ ಅವರವರು ಮಾತ್ರ ಫಲವನ್ನು ಅನುಭವಿಸುವಂತೆ ಅನುಭವಕ್ಕೆ ಮಾತ್ರ ಬರುವಂಥದ್ದು - ಸ್ವಪ್ನ. ಜೀವದ ಅಂತರ್ ವ್ಯವಸ್ಥೆಯಿದು. ಆದ್ದರಿಂದ ಸ್ವಪ್ನವನ್ನೂ - ಮಿಥ್ಯೆ ಎನ್ನಲಾಗುವುದಿಲ್ಲ. ಮಾಯೆ ಎಂಬುದು ಇಲ್ಲವೇ ಇಲ್ಲ. ಪ್ರತಿಯೊಂದು ಅರಿವಿಗೂ ಅದಕ್ಕೆ ಸಂಬಂಧಿಸಿದ ವಸ್ತುವೊಂದು ಇರಲೇ ಬೇಕು. ವಸ್ತು ಮೂಲದಿಂದಲ್ಲದೆ - ಬ್ರಹ್ಮ ಅಥವ ಈಶ್ವರನನ್ನು ಪ್ರತ್ಯಕ್ಷವಾಗಿಯಾಗಲೀ ಅನುಮಾನದಿಂದಾಗಲೀ ಅರಿಯುವುದು ಸಾಧ್ಯವಿಲ್ಲ. ವೇದಶಾಸ್ತ್ರ ಪ್ರಮಾಣ - ಅಂದರೆ - ಶಬ್ದ ಪ್ರಮಾಣದಿಂದಲೇ ಆತನನ್ನು ಅರಿಯಬೇಕು. ವೇದ ಶಾಸ್ತ್ರಗಳು - ಬ್ರಹ್ಮನು ನಿರ್ಗುಣ ಎಂದು ಹೇಳುವುದಿಲ್ಲ...." ಎಂದು ಶ್ರೀ ರಾಮಾನುಜರು ಪ್ರತಿಪಾದಿಸುತ್ತಾರೆ.

ಹೀಗೆ, ಸಗುಣ ಸಾಕಾರವನ್ನೂ ಪ್ರೋತ್ಸಾಹಿಸಿ ಬೆಂಬಲಿಸಿದ್ದ ಸಿದ್ಧಾಂತವಿದು. ಈ ದೃಷ್ಟಿಯಿಂದ ನೋಡಿದರೆ - "ಭೇದ ಎಂಬುದು ಮಾಯೆ" - ಎಂಬ ಶಂಕರಾಚಾರ್ಯರ ಸಿದ್ಧಾಂತವನ್ನು ರಾಮಾನುಜರು ಪೂರ್ತಿಯಾಗಿ ಸ್ವೀಕರಿಸಿದಂತೆ ಆಗುವುದಿಲ್ಲ. "ಎಲ್ಲವೂ ಒಂದೇ; ನಾನೇ ಅದು; ಅದೇ ನಾನು" ಎಂಬ ಶಂಕರರ ಕಠಿಣ ಸೂತ್ರವನ್ನು - "ಭಿನ್ನತೆಗಳೆಲ್ಲವೂ ಏಕಸೂತ್ರದಿಂದ ನಿಯಂತ್ರಿಸಲ್ಪಡುತ್ತದೆ.." ಎಂದು ರಾಮಾನುಜರು ಸರಳವಾಗಿ ವ್ಯಾಖ್ಯಾನಿಸಿದ್ದರು. ಹೀಗೆ ಗ್ರಹಿಕೆಗೆ ಸುಲಭವಾಗುವಂತೆ ಸಾಮಾನ್ಯರಿಗೂ ಮನದಟ್ಟು ಮಾಡುತ್ತಿದ್ದ ರೀತಿಯಿಂದ - ಭಕ್ತಿಪ್ರೇರಿತ ಜ್ಞಾನದ ಹಾದಿಗೆ ಜನಸಾಮಾನ್ಯರನ್ನೂ ಕರೆತಂದ ದೊಡ್ಡ ಚಳುವಳಿಯಾಗಿ ವಿಶಿಷ್ಟಾದ್ವೈತವು ಅಂದು ಪ್ರಕಟಗೊಳ್ಳಲು - ಇದೂ ಒಂದು ಕಾರಣ. ಇದು - ವಿಶಿಷ್ಟಾದ್ವೈತ ಸಿದ್ಧಾಂತದ ವೈಶಿಷ್ಟ್ಯವೂ ಹೌದು. ಆದ್ದರಿಂದ - "ಭೌತಿಕ ದೃಷ್ಟಿಗೆ ಗೋಚರಿಸುವುದರಲ್ಲಿಯೂ ಸತ್ಯವಿದೆ; ದೃಗ್ಗೋಚರವಾಗುವ ಭಿನ್ನತೆಗಳೆಲ್ಲವೂ ಸತ್ಯದ ಪ್ರತಿಬಿಂಬಗಳೇ ಆಗಿವೆ... " ಎಂದು ವ್ಯಾಖ್ಯಾನಿಸುತ್ತ, ಸಾಕಾರ - ಸಗುಣ ಮಾರ್ಗದ ಆಧ್ಯಾತ್ಮಿಕ ನಡೆಗಳನ್ನು ಸಂಪೂರ್ಣವಾಗಿ ಅನುಮೋದಿಸಿದ್ದ ಸಿದ್ಧಾಂತವಿದು - ಎಂದೂ ಹೇಳಬಹುದು.

ಭಕ್ತಿ - ಜ್ಞಾನದ ಮಾರ್ಗದಲ್ಲಿ ಪಾಮರರನ್ನು ಕೈಹಿಡಿದು ಮುನ್ನಡೆಸಬಲ್ಲ ಸಮರ್ಥ ಮಾರ್ಗದರ್ಶಕರಿಲ್ಲದ ಅಂದಿನ ಸಂಕ್ರಮಣ ಕಾಲವನ್ನೂ ಗಮನಿಸಬೇಕಾಗುತ್ತದೆ. ಬಿಡಿಬಿಡಿಯಾಗಿ ಅಲ್ಲಲ್ಲಿ ಚಿಂತನೆ ಜಿಜ್ಞಾಸೆಗಳು ಆಗ ನಡೆಯುತ್ತಿದ್ದರೂ ಅಧಿಕಾರವಾಣಿಯಿಂದ ಮಾರ್ಗ ತೋರಿಸಬಲ್ಲ ಸಮರ್ಥ ಗುರುಗಳ ಕೊರತೆಯು ಅಂದಿನ ಸಮಾಜದಲ್ಲಿ ನಿರ್ವಾತವನ್ನು ಸೃಷ್ಟಿಸಿತ್ತು. ಆಚಾರ ವಿಚಾರಗಳ ಸಾಮಾಜಿಕ ಅನಿಷ್ಟಗಳೂ ಮಿತಿಮೀರಿ, ಸ್ಥಾನ ಮಾನ ಭಾವುಕ ಬದುಕಿನ ನೆಲೆಯಲ್ಲಿಯೂ ಸಾಮಾಜಿಕ ಅಂತರವನ್ನು ಸೃಷ್ಟಿಸಿದ್ದವು. ಸುಮಾರು 850 ವರ್ಷಗಳ ಹಿಂದೆ, ಶ್ರೀ ರಾಮಾನುಜಾಚಾರ್ಯರು ಅವತರಿಸಿದ ಅವಧಿಯಲ್ಲಿ, ಅದ್ವೈತದ ಉಚ್ಛ್ರಾಯದ ದಿನಗಳೂ ಕಳೆದುಹೋಗಿದ್ದವು; ಅಂದಿನ ಶಂಕರರ ಅನುಯಾಯಿಗಳೂ ಕೂಡ ವಿದ್ವತ್ತು ಮತ್ತು ಆಚರಣೆಗಳಲ್ಲಿ - "ಮಡಿವಂತಿಕೆ ಜಾಸ್ತಿ; ಪ್ರತಿಭೆ ಕಡಿಮೆ" ಎಂಬ ಸ್ಥಿತಿಯಲ್ಲಿದ್ದರು; ಆದ್ದರಿಂದ ಸಾರ್ವಜನಿಕವಾಗಿ ಪ್ರಭಾವಿಗಳೂ ಆಗಿರಲಿಲ್ಲ. ಅದ್ವೈತದ ಸೈದ್ಧಾಂತಿಕ ವಲಯದಲ್ಲಿ, ಆರಂಭದಲ್ಲಿ ಕಾಣುತ್ತಿದ್ದ ನಿಷ್ಠೆ, ಅನುಷ್ಠಾನ, ಅನುಭವ, ಬೌದ್ಧಿಕ ಸತ್ವಗಳು ಹಿನ್ನೆಲೆಗೆ ಸರಿಯುತ್ತ ಅದ್ವೈತದ ಪ್ರಖರತೆಯು ಕ್ಷೀಣಗೊಂಡಿದ್ದ ಕಾಲವದು. ಶಂಕರರ ಕಾಲದಲ್ಲಿ ಸಹಜವಾಗಿ ಸಂವಹನಗೊಳ್ಳುತ್ತಿದ್ದ ಅದ್ವೈತವು, ಬರಬರುತ್ತ ಕುಗ್ಗಿ ಹೋಗಿದ್ದ ಸಾಮಾಜಿಕ ಬುದ್ಧಿನೆಲೆ ಮತ್ತು ಇನ್ನಿತರ ಕಾರಣಗಳಿಂದಾಗಿ, ಸಹಜವಾಗಿಯೇ ಕಬ್ಬಿಣದ ಕಡಲೆಯಂತೆಯೂ ಭಾಸವಾಗುತ್ತಿತ್ತು.  ಅಕಸ್ಮಾತ್, ಅದ್ವೈತವು ಕೆಲವರ ಬುದ್ಧಿಗೆ ನಿಲುಕಿದ್ದರೂ ಕೂಡ - ಸಮರ್ಥ ನೇತೃತ್ವವಿಲ್ಲದಂತಾಗಿ, ಸಾಮಾನ್ಯ ಭಾವಜಗತ್ತನ್ನು ಸಂಪರ್ಕಿಸುವ ವ್ಯವಸ್ಥಿತ ಕೊಂಡಿಯು ತಪ್ಪಿದಂತಾಗಿತ್ತು. ಸಮರ್ಥ ಪ್ರತಿಪಾದಕರಿಲ್ಲದಂತಾದ ಆ ಕಾಲಘಟ್ಟದಲ್ಲಿ - ಅದ್ವೈತವನ್ನು ತಮ್ಮ ಅನುಭವಕ್ಕೆ ದಕ್ಕಿಸಿಕೊಳ್ಳುವುದು - ಸಾಮಾನ್ಯರಿಗೆ ಅತ್ಯಂತ ಕಠಿಣವಾಗಿದ್ದ ಸನ್ನಿವೇಶವಿದ್ದ ಕಾಲವದು.

ಅಂದೂ ಕೂಡ - ಸಂಖ್ಯೆಯ ದೃಷ್ಟಿಯಿಂದ ಸಾಕಷ್ಟು ಪಂಡಿತರು ಇದ್ದರೂ - ಸ್ವಯಂ ಪ್ರತಿಷ್ಠೆ, ಮಡಿವಂತಿಕೆ, ಕುರುಡು ಅನುಕರಣೆಯ ತಾರ್ಕಿಕ ಕಸರತ್ತಿನಲ್ಲಿಯೇ ಮುಳುಗಿ ಹೋಗಿದ್ದರು. ಹೀಗೆ, ಅದ್ವೈತದ ಸತ್ವವನ್ನು ಮನದಟ್ಟು ಮಾಡಿಸುವ ಸಮರ್ಥ ಮಾರ್ಗದರ್ಶಕರಿಲ್ಲದ ಅಂದಿನ ಸಮಾಜದಲ್ಲಿ, "ಬ್ರಹ್ಮ ಸತ್ಯ, ಜಗನ್ಮಿಥ್ಯ.." ಎಂಬ - ಪಾರಮಾರ್ಥಿಕ ನೆಲೆಗೇ ಹೆಚ್ಚು ಒತ್ತು ಕೊಟ್ಟಿದ್ದ ಶಂಕರರ ವಾದವು ಸಾಮಾನ್ಯ ಜನರ ಗಂಟಲಿನಲ್ಲಿ ಇಳಿಯದಂತಾಗಿತ್ತು. "ಮನೆ, ಹೆಂಡತಿ, ಮಕ್ಕಳು ಮತ್ತು ತಾವು ದಿನಬೆಳಗಾದರೆ ಕಾಣುವ ಕೇಳುವ ಎಲ್ಲವೂ ಮಿಥ್ಯೆ" ಎಂಬಂತೆ ಪ್ರತಿಪಾದಿತವಾಗುತ್ತಿದ್ದ - ಅದ್ವೈತದ "ಮಿಥ್ಯಾ ವಾದದ" ಹೂರಣವನ್ನು ಅರ್ಥೈಸಿಕೊಂಡು, ಅದನ್ನು ಒಪ್ಪಲು ಮತ್ತು ಅನುಸರಿಸಲು - ಪ್ರಾಯೋಗಿಕವಾಗಿ - ಜನರಿಗೆ ಕಷ್ಟವಾಗಿತ್ತು. ಅಂದಿನ ಪಾಮರರ ಸಾಮಾಜಿಕ ಬದುಕಿನಲ್ಲಿ ಮಡಿವಂತ ಮನಸ್ಸುಗಳ ಮೂಲಕ ಪ್ರವಹಿಸುತ್ತಿದ್ದ ಅದ್ವೈತ ವಿಚಾರಧಾರೆಯನ್ನು ಅರ್ಥೈಸಿಕೊಳ್ಳಲಾಗದ ಹಲವಾರು ಗೊಂದಲಗಳಿಗೆ - ಪರ್ಯಾಯವಾದ "ಸುಲಭ ಸರಳ" ಸಿದ್ಧಾಂತದ ರೂಪದಲ್ಲಿ - ಆಗ ಬೆಳಕಿಗೆ ಬಂದದ್ದು - ವಿಶಿಷ್ಟಾದ್ವೈತ.

ಹೀಗಿದ್ದೂ... ಎಲ್ಲ ಸಿದ್ಧಾಂತಗಳ ಅಂತಿಮ ಗುರಿಯು ಆತ್ಮ ಸಾಕ್ಷಾತ್ಕಾರವೇ ಆಗಿದ್ದರೂ ಕೂಡ - ಸನಾತನ ತತ್ವಗಳನ್ನು ಆಯಾ ಕಾಲದ ಪಾತ್ರೆಗಳ ಸ್ವರೂಪ ಗಾತ್ರ ಸಾಮರ್ಥ್ಯಕ್ಕೆ ತಕ್ಕಂತೆ, ಎಲ್ಲರೂ ಒಳಗೊಳ್ಳುವಂತೆ, ವಿಂಗಡಿಸಿ ಹಂಚಿದವರು - ಆಯಾ ಕಾಲದಲ್ಲಿ ಅವತರಿಸಿದ್ದ ಮತಾಚಾರ್ಯರು. ಮೂಲತಃ ಶ್ರೀ ರಾಮಾನುಜರೂ ಕೂಡ ಇದೇ ಸಂಕಲ್ಪದಿಂದಲೇ ಸಂಸಾರವನ್ನು ತೊರೆದು ಸನ್ಯಾಸ ಪಡೆದು ಕಾರ್ಯರಂಗಕ್ಕಿಳಿದವರು. ಆದ್ದರಿಂದಲೇ ಸಾಂಸಾರಿಕ ಇತಿಮಿತಿಗಳನ್ನು ಬಲ್ಲವರಾಗಿದ್ದ ರಾಮಾನುಜರು ಅದೇ ವರ್ಗವನ್ನು ಮುಖ್ಯ ಗುರಿಯಾಗಿಸಿ, ಯಶಸ್ವಿಯಾಗಿ ತಲುಪಿದಂತೆಯೂ ಕಾಣುತ್ತದೆ. ಅಧ್ಯಾತ್ಮದ ಗೊಡವೆಯಿಂದ ದೂರಸರಿದು ತೊಳಲಾಡುತ್ತಿದ್ದ ಅಂದಿನ ಜನಮಂದೆಯನ್ನು ಮತ್ತೊಮ್ಮೆ ಅಧ್ಯಾತ್ಮದ ಹಾದಿಯತ್ತ ಕರೆತಂದ ಯಶಸ್ಸು - ಶ್ರೀ ರಾಮಾನುಜರಿಗೆ ಸಲ್ಲುತ್ತದೆ.

ಮಾಯಾವಾದ ಎಂಬುದು ನಿತ್ಯದ ಬದುಕಿನಲ್ಲಿ ಹಲವು ಪ್ರಾಯೋಗಿಕ ತೊಡಕುಗಳನ್ನೂ ಮುಂದಿಡುತ್ತದೆ. ಈ "ಮಾಯಾವಾದ" ಎಂಬ ಪರಮ ಸತ್ಯವನ್ನು - ಅದರ ಆಳ ಅಗಲ ವಿಸ್ತಾರವನ್ನು ಎಲ್ಲರೂ ಅರಿಯುವುದೂ ಅಸಂಭವ. ಅಕಸ್ಮಾತ್ ಅರಿತವರೂ ಕೂಡ - ಅನವರತವೂ ಅದೇ ಯಥಾರ್ಥ ಅರಿವಿನ ಸ್ಥಿತಿಯಲ್ಲಿಯೇ ಸ್ಥಿರವಾಗಿ ಇರುವುದು ಬಹಳ ಕಠಿಣ. "ಉಪದೇಶಗಳಿರುವುದೇ ಪರೋಪದೇಶಕ್ಕಾಗಿ" ಎಂದು ಜನರು ಭಾವಿಸುವಂತೆ ಆಗಲು ಇಂತಹುದೇ - "ಅಪ್ರಾಯೋಗಿಕ ತೊಡಕು ಮತ್ತು ಸಂವಹನ ಹೀನತೆ"ಯೂ ಕಾರಣವಾದದ್ದಿದೆ. ಅಂತಹ ಮಾಯಾವಾದವನ್ನು ಬದಿಗೆ ಸರಿಸಿದ್ದು - ವಿಶಿಷ್ಟಾದ್ವೈತ ಮತದ ವೈಶಿಷ್ಟ್ಯ.

ಜಗತ್ತು ಎಂಬ ವರ್ಣರಂಜಿತ ವಸ್ತುವು ಮನುಷ್ಯರ ಕಣ್ಣೆದುರಿನಲ್ಲಿಯೇ ಇರುವಾಗ - ಅದನ್ನು ಮಿಥ್ಯೆ ಅನ್ನುವುದಾದರೂ ಹೇಗೆ ? ಅನ್ನಿಸುವುದು ಪಾಮರ ಸಹಜವೇ ಆಗಿದೆ. ಅಂದಮಾತ್ರಕ್ಕೆ - ಶಂಕರಾಚಾರ್ಯರೂ ಕೂಡ ತಮ್ಮ ಅದ್ವೈತ ಸಿದ್ಧಾಂತದಲ್ಲಿ ಜಗತ್ತನ್ನು ಸಾರಾಸಗಟಾಗಿ ಎಲ್ಲೂ ಅಲ್ಲಗಳೆದಿಲ್ಲ. ಆದರೆ "ಶಂಕರರ ಅದ್ವೈತದ" ಉನ್ನತ ಭಾವ ನೆಲೆಯಲ್ಲಿ ಸಂಚರಿಸಲಾಗದ ಪಾಮರ ವರ್ಗದ - "ಸ್ವೀಕರಿಸುವ ಪಾತ್ರೆಯೇ ಕಿರಿದಾಗಿ ಹೋದ ಕಾರಣದಿಂದ" - ಜತೆಯಾಗಿ ಹೆಜ್ಜೆ ಇಡಲಾಗದಂತಾಗಿ, ಆಚರಣೆಯು ಮುಗ್ಗರಿಸುತ್ತಿತ್ತು. ಸಂಶಯದ ಸರಪಳಿಯು ಹಿಗ್ಗುತ್ತಿತ್ತು. ಬ್ರಹ್ಮ ಸತ್ಯ; ಜಗತ್ತು ಮಿಥ್ಯ ಎಂದ ಶಂಕರಾಚಾರ್ಯರು, "ಈ ಮಿಥ್ಯವೂ ವ್ಯಾವಹಾರಿಕ ಸತ್ಯವೇ ಆಗಿದೆ " ಎಂದೂ ಹೇಳಿದ್ದರು. ಆದರೆ "ವ್ಯಾವಹಾರಿಕ ಸತ್ಯ" ಎಂಬ ಪಕ್ಕಾ ವ್ಯಾವಹಾರಿಕತೆಗೆ ಶಂಕರರು ಹೆಚ್ಚಿನ ಪ್ರಾಮುಖ್ಯ ಕೊಟ್ಟಿರಲಿಲ್ಲ; ಆ ಕುರಿತ ವಿವರಣೆಗೂ ಹೆಚ್ಚಿನ ಪ್ರಾಮುಖ್ಯ ಕೊಟ್ಟಂತೆ ಕಾಣುವುದಿಲ್ಲ. ಅಷ್ಟೆ. ಆದ್ದರಿಂದಲೇ ಜಿಡುಕು ಪರಿಹಾರವಾಗಲಿಲ್ಲ. ಸಾಮಾನ್ಯ ಬುದ್ಧಿಗಳು ಅದ್ವೈತ ಸಿದ್ಧಾಂತವನ್ನು ಯಥಾರ್ಥವಾಗಿ ಜೀರ್ಣಿಸಿಕೊಳ್ಳಲಾಗಲಿಲ್ಲ. ಮುಂದೆ, ಶ್ರೀ ರಾಮಾನುಜಾಚಾರ್ಯರು ಪ್ರಚುರಪಡಿಸಿದ ವಿಶಿಷ್ಟಾದ್ವೈತ ಸಿದ್ಧಾಂತವು - ಪಾಮರ ವರ್ಗದ ಅಂತಹ  ಸಂದೇಹ, ತೊಡಕುಗಳನ್ನು ನಿರ್ವಿವಾದವಾಗಿ ನಿವಾರಿಸಲು ಪ್ರಯತ್ನಿಸಿದೆ.

ವಿಶಿಷ್ಟಾದ್ವೈತದ ಪ್ರವೇಶಿಗರಿಗೆ - ಮೊತ್ತಮೊದಲಿಗೆ ಆಳ್ವಾರರಿಂದ ತೊಡಗಿ, ಯಾಮುನಾಚಾರ್ಯರನ್ನು ಪರಿಚಯಿಸಿಕೊಂಡು, ಅರಿತುಕೊಳ್ಳದೆ - ಮುನ್ನಡೆಯುವುದು ಅಸಾಧ್ಯ.

ಆಳ್ವಾರರುಗಳ ದಿವ್ಯ ಪರಂಪರೆಯ ಆಧಾರದಲ್ಲಿಯೇ ಬೆಳೆದು ಬಂದ ಈ ವಿಶಿಷ್ಟಾದ್ವೈತ ತತ್ವ ಸಿದ್ಧಾಂತದ - ನಾಥಮುನಿ (ಶ್ರೀರಂಗನಾಥಮುನಿ), ಉಯ್ಯಕ್ಕೊಂಡಾರ್ (ಪುಂಡರೀಕಾಕ್ಷ), ಯಾಮುನಾಚಾರ್ಯರೇ ಮುಂತಾದ ಆಚಾರ್ಯ ಪರಂಪರೆಯಲ್ಲಿ ಒಬ್ಬೊಬ್ಬರೂ ಗುರುವನ್ನು ಮೀರಿಸುವ ಶಿಷ್ಯರು. ಯಾವುದನ್ನೂ ವಿಮರ್ಶೆಯ ಒರೆಗಲ್ಲಿಗೆ ತಿಕ್ಕಿ ನೋಡಿ, ವಾದಿಸದೆ ನಂಬದ, ನಂಬಿದ್ದನ್ನು ಸಾಧಿಸದೆ ಬಿಡದ ಸ್ವಭಾವವು ಈ ಪರಂಪರೆಯ ಮುಖ್ಯ ಲಕ್ಷಣ. ವಾವೆಯಲ್ಲಿ ರಾಮಾನುಜರ  ಪ್ರೀತಿಯ ತಮ್ಮನೇ ಆಗಿದ್ದರೂ ಅಣ್ಣನ ಸಿದ್ಧಾಂತವನ್ನು ಅವರು ಸುಲಭದಲ್ಲಿ ಒಪ್ಪಿರಲಿಲ್ಲ. ತಮ್ಮಲ್ಲಿದ್ದ ಜ್ಞಾನನಿಧಿಯನ್ನು ಸಪಾತ್ರರಿಗೆ ನಿಷ್ಠೆಯಿಂದ ವರ್ಗಾಯಿಸುತ್ತಿದ್ದ ಅಂದಿನ "ಗುರು ಶೈಲಿ"ಯೇ ಅದ್ಭುತವಾದುದು. ಇವರಲ್ಲಿ, ನಾಥಮುನಿಗಳ ಮೊಮ್ಮಗನಾದ ಯಾಮುನಾಚಾರ್ಯರು - ಈ ಪರಂಪರೆಯ ಬಹು ದೊಡ್ಡ ಹೆಸರು. ವಿದ್ವಜ್ಜನರ ನೀತಿ ನಡಾವಳಿಗಳು ಅಂದಿನಿಂದಲೂ ವಿಶಿಷ್ಟವೇ ಆಗಿರುವುದು ಆಶ್ಚರ್ಯದ ಸಂಗತಿಯೇನಲ್ಲ.

"ವಿದ್ವಜ್ಜನ ಕೋಲಾಹಲ" ಎಂಬುದು ಇಂದು ನಿನ್ನೆಯ ಗದ್ದಲವಲ್ಲ. ಬುದ್ಧಿಮೂಲದ ವಿಚಾರಗಳ ತಾಕಲಾಟಗಳು - ಮನುಷ್ಯರೆಂಬ ಸಿದ್ಧ ವ್ಯವಸ್ಥೆಯ ಅವಿಭಾಜ್ಯ ಅಂಗ. ಬುದ್ಧಿ ಹೇಳಿದವರ ಸಂಗಡ ಗುದ್ದಾಟಕ್ಕೆ ಹೋಗುವುದು - "ಬುದ್ಧಿಯ ಸಮಸ್ಯೆ" ಆಗುವುದೂ ಇದೆ; ಅದರಿಂದ ಘರ್ಷಣೆ, ಅನಾಹುತಗಳಾದದ್ದೂ ಇದೆ; ಮಥನ ಮಂಥನದಿಂದ "ನವನೀತ" ಹೊಮ್ಮುವುದೂ ಇದೆ; ವಿಷ ಮಾತ್ರವೇ - ಫಲವಾಗಿ ಕಾಣಿಸುವುದೂ ಇದೆ. ನಮ್ಮ ಹಿಂದಿನ ಎಲ್ಲ ಮತಾಚಾರ್ಯರೂ ಈ "ಮಂಥನದ" ಘಟ್ಟವನ್ನು ಯಶಸ್ವಿಯಾಗಿ ದಾಟಿ ಬಂದವರೇ ಆಗಿದ್ದಾರೆ.

ಅಂದೂ - ವಕ್ರ ಚಿಂತಕರಿದ್ದರು. ತಾವು ನಂಬಿಕೊಂಡು ಬಂದಿದ್ದ ಆಯಾ ಪರಂಪರೆಗಳನ್ನೇ ಕಠೋರವಾಗಿ  ಪ್ರತಿಪಾದಿಸುವವರೂ ಇದ್ದರು; ವಿರೋಧಿಸುವವರೂ ಇದ್ದರು; ಕೇವಲ ಅಹಂ ತೃಪ್ತಿಗಾಗಿ ಬಡಿದಾಡುವವರೂ ಇದ್ದರು. ತಂತಮ್ಮ ವಿಶ್ವಾಸದ ಏಕಮೇವ ರಕ್ಷಕರಂತೆ ಹಿಂಸಾ ಮಾರ್ಗದಲ್ಲಿ ತೊಡಗಿಕೊಂಡ ದೃಷ್ಟಾಂತಗಳು ಅಂದೂ ಇದ್ದವು. ಆದರೆ - ಇಂತಹ ಪರೀಕ್ಷಾ ಕಾಲದ ಮೂಸೆಯಲ್ಲಿ ಹಾದು, ಸ್ಥಿರವಾಗಿ ಸಿದ್ಧಗೊಂಡ ಸಿದ್ಧಾಂತಗಳು ಮಾತ್ರವೇ ಗಟ್ಟಿಯಾಗಿ ಉಳಿದುಕೊಂಡು ಬಂದಿರುವುದು - ನಮ್ಮ ದೃಗ್ಗೋಚರವಾಗಿರುವ ಸಂಗತಿ. ಇಂದಿನಂತಲ್ಲದೆ... ಮಾತು ಮಾತಿನ ಮಥನದಿಂದ ನವನೀತ ಹುಟ್ಟುತ್ತಿದ್ದ ಪರಿ ಅದು; ಭಾರತೀಯ - ಹಿಂದೂ ಪರಂಪರೆಯ ವೈಶಿಷ್ಟ್ಯವೂ ಹೌದು.

ಗುರುವನ್ನು ಮೀರಿಸುವ ಶಿಷ್ಯ ಪರಂಪರೆ

ನಾಥಮುನಿಯಿಂದ ಉಯ್ಯಕ್ಕೊಂಡಾರ್, ಉಯ್ಯಕ್ಕೊಂಡಾರ್ ಅವರಿಂದ ರಾಮ ಮಿಶ್ರ, ರಾಮ ಮಿಶ್ರರಿಂದ ಯಾಮುನಾಚಾರ್ಯರನ್ನು ತಲುಪಿದ್ದ ಪರಂಪರೆ ಇದು. ಒಬ್ಬೊಬ್ಬರೂ - ಗುರುವನ್ನು ಮೀರಿಸಿದ ಶಿಷ್ಯರು !

ಈ ಮಾತಿಗೆ ಪೂರಕವಾದ ಒಂದು ಕತೆಯಿದೆ....

ನಾಥಮುನಿಯ ಶಿಷ್ಯರಾಗಿದ್ದ ಪುಂಡರೀಕಾಕ್ಷರಿಗೆ "ಉಯ್ಯಕ್ಕೊಂಡಾರ್" ಎಂಬ ಹೆಸರು ನೀಡಿ, ಗುರುವೇ ಅನುಗ್ರಹಿಸಿದ್ದ ಕತೆಯಿದು.

ಉಯ್ಯಕ್ಕೊಂಡಾರ್ ಎಂದರೆ - ಕೊಂಡಾಡಲ್ಪಟ್ಟವನು ಎಂಬ ಅರ್ಥವಿದೆ. ಒಮ್ಮೆ, ಗುರು ನಾಥಮುನಿಯು ತಮ್ಮ ಶಿಷ್ಯನಾದ ಪುಂಡರೀಕಾಕ್ಷನ ಜೊತೆಯಲ್ಲಿ ತಮ್ಮ ಪತ್ನಿಯನ್ನು ಆಕೆಯ ತವರುಮನೆಗೆ ಕಳಿಸಿಕೊಟ್ಟರಂತೆ. ತಮ್ಮ ಅಳಿಯನ ಶಿಷ್ಯರಾಗಿದ್ದರೂ ಉಯ್ಯಕ್ಕೊಂಡಾರ್ ಅವರು ಬ್ರಾಹ್ಮಣರೇ ಆಗಿದ್ದರೂ - ಮಗಳ ಜೊತೆಯಲ್ಲಿ ಬಂದಿದ್ದ ಉಯ್ಯಕ್ಕೊಂಡಾರ್ ಅವರು (ಪುಂಡರೀಕಾಕ್ಷರು), "ತಮಗಿಂತ ಸ್ವಲ್ಪ ಕಡಿಮೆ" ಎಂಬ ಭಾವನೆಯು - ನಾಥಮುನಿಯ ಮಾವನ ಮನೆಯವರಲ್ಲಿತ್ತು; ಜುಟ್ಟನ್ನು ನಡುನೆತ್ತಿಯ ಮೇಲೆ ಇಟ್ಟುಕೊಳ್ಳುತ್ತಿದ್ದ ಪೂರ್ವಶಿಖಿ ಎಂಬ "ಕೀಳು" ಸಂಪ್ರದಾಯದವರು - ಉಯ್ಯಕ್ಕೊಂಡಾರ್ - ಎಂಬ ಭೇದಭಾವವದು ! ಇದರಿಂದಾಗಿ, ಅವರು ಈ ಪುಂಡರೀಕಾಕ್ಷನಿಗೆ ದಿನವೂ ತಂಗುಳನ್ನವನ್ನು ಇಕ್ಕುತ್ತಿದ್ದರು; ಪುಂಡರೀಕಾಕ್ಷನು ಅದನ್ನೇ ತಲೆತಗ್ಗಿಸಿ ಉಂಡು ಏಳುತ್ತಿದ್ದನು.

ಕೆಲವು ದಿನಗಳಾದ ಮೇಲೆ ಅಲ್ಲಿಂದ ಹಿಂದಿರುಗಿದ ಮೇಲೆ, ಗುರು ನಾಥಮುನಿಗೆ ತಮ್ಮ ಮಾವನ ಮನೆಯಲ್ಲಿ ನಡೆದ ಸಂಗತಿಗಳು ಪರೋಕ್ಷವಾಗಿ ಬಂದು ಮುಟ್ಟಿಯೋ ಏನೋ, ಅಂತೂ... "ಮಾವನ ಮನೆಯಲ್ಲಿ ನಡೆದುದೆಲ್ಲವನ್ನೂ ನನಗೆ ಸಾದ್ಯಂತವಾಗಿ ಹೇಳಲೇಬೇಕು" ಎಂದು ತಮ್ಮ ಶಿಷ್ಯನನ್ನು ಒತ್ತಾಯಿಸಿದ್ದರು. ಆಗ "ತಂಗಳು ಪ್ರಸಂಗವು" ಬಯಲಾಗಿತ್ತು. ಅಂದಿನ ಘಟನೆಯಿಂದ ತಮಗೆ ಯಾವುದೇ ಬೇಸರವಾಗಿಲ್ಲ ಎಂಬುದನ್ನೂ ಪುಂಡರೀಕಾಕ್ಷರು - ಗುರುಗಳಿಗೆ ವಿವರಿಸಿದ್ದರು. "ಗುರುಗಳೇ, ತೊಂಡರಡಿಪ್ಪೊಡಿ ಆಳ್ವಾರರು ಹಿಂದೆ ಹಾಡಲಿಲ್ಲವೆ ? ಸಂತ ಶ್ರೇಷ್ಠರು ತಾವು ತಿಂದು ಉಳಿಸಿದ ರೊಟ್ಟಿಯ ತುಂಡನ್ನು ನೀಡಿದರೂ ಅದರಿಂದ ನನ್ನ ಜನ್ಮವು ಪುನೀತವಾಗುವುದು..." ಎಂದುಬಿಟ್ಟರು.

ಶಿಷ್ಯನ ಭಾವಪ್ರಭುತ್ವವನ್ನು ಕಂಡು ಕೇಳಿದ ನಾಥಮುನಿಯು - "ನೀನು ನಿಜವಾಗಿಯೂ ಮಹಾತ್ಮ. ನನ್ನನ್ನು ಉದ್ಧರಿಸುವವನು ನೀನು." ಎನ್ನುತ್ತ - ಶಿಷ್ಯ ಪುಂಡರೀಕನನ್ನು ಕೊಂಡಾಡಿದರು. ಅಂದಿನಿಂದ "ಉಯ್ಯಕ್ಕೊಂಡಾರ್" ಎಂಬ ಹೆಸರಿನಿಂದಲೇ - ಪುಂಡರೀಕಾಕ್ಷರು ಪ್ರಸಿದ್ಧರಾದರು. ಶಿಷ್ಯನೊಬ್ಬ ತನ್ನ ಗುರುವನ್ನು ಪ್ರೀತಿಯಿಂದ ಗೆದ್ದ ಕತೆಯಿದು.

ಈ ಉಯ್ಯಕ್ಕೊಂಡಾರರಿಗೂ ಹಲವಾರು ಶಿಷ್ಯರಿದ್ದರು. ಅವರ ಪೈಕಿ - ಮಣಕ್ಕಾಲ್ ನಂಬಿ ಅಥವ ರಾಮ ಮಿಶ್ರರು - ಅವರ ಪಟ್ಟಶಿಷ್ಯರಾಗಿದ್ದರು. ಗುರುಶಿಷ್ಯ ಪರಂಪರೆಯಲ್ಲಿ ಆಚಾರ್ಯ ಸೇವೆಗೆ ಬಲು ದೊಡ್ಡ ಸ್ಥಾನವಿದೆ. ಗುರು ಉಯ್ಯಕ್ಕೊಂಡಾರರ ಮಕ್ಕಳನ್ನು ಮನೆಗೆ ಕರೆತರುವಾಗ ಹಾದಿಯಲ್ಲಿ ಎದುರಾದ ಕೊಚ್ಚೆ ತುಂಬಿದ ಹೊಂಡದಿಂದ ಗುರುಪುತ್ರರನ್ನು ರಕ್ಷಿಸಲೋಸುಗ, ತಾನೇ ಆ ಹೊಂಡದ ಮೇಲೆ ಅಡ್ಡಲಾಗಿ ಮಲಗಿ ಗುರುಗಳ ಮಕ್ಕಳ ಕಾಲುಗಳಿಗೆ ಕೊಳೆ ತಾಗದಂತೆ ರಕ್ಷಿಸಿದ "ಗುರುಸೇವೆಯ ಉತ್ತುಂಗ "ಕ್ಕೆ - ರಾಮ ಮಿಶ್ರರು ಉದಾಹರಣೆ ಆದವರು. ವಿನಮ್ರ ಸೇವೆಯಿಂದಲೇ ವಿದ್ಯೆಯನ್ನು ಸಂಪಾದಿಸುತ್ತಿದ್ದ - ಅನನ್ಯ ಭಾರತೀಯ ಶೈಲಿಯಿದು.

ಗುರು ಉಯ್ಯಕ್ಕೊಂಡಾರರು ತಮ್ಮ ಜೀವಿತದ ಕೊನೆಗಾಲದಲ್ಲಿ - ತಮ್ಮ ಶಿಷ್ಯ ರಾಮ ಮಿಶ್ರರಿಗೆ ಕೆಲವು ಜವಾಬ್ದಾರಿಯನ್ನು ವಹಿಸುತ್ತಾರೆ. ತಮ್ಮ ಪರಂಪರೆಯನ್ನು ಕಾಯ್ದುಕೊಂಡು ಬೆಳೆಸುವುದು ಶಿಷ್ಯನ ಕರ್ತವ್ಯ ಎಂಬುದನ್ನು ನೆನಪಿಸುತ್ತಾರೆ. ಈ ಪರಂಪರೆಯ ಸತ್ವವನ್ನು ವಿಸ್ತಾರವಾಗಿ ಪ್ರಚುರಪಡಿಸುವ ಯೋಗ್ಯತೆಯುಳ್ಳವರಾದ - ತಮ್ಮ ಗುರುವಾದ ನಾಥಮುನಿಗಳ ಮೊಮ್ಮಗನೇ ಆಗಿರುವ ಯಾಮುನಾಚಾರ್ಯರು ಪ್ರಾಪ್ತ ವಯಸ್ಕರಾದ ಮೇಲೆ - ಅವರಿಗೆ ಈ ಸಂಪ್ರದಾಯವನ್ನು ಬೋಧಿಸಬೇಕು ಎಂದೂ - ಅವರು ರಾಮ ಮಿಶ್ರರಿಗೆ ಸೂಚಿಸಿದ್ದರು.

ಪ್ರಸಿದ್ಧ ನಾಥಮುನಿಗಳ ಮೊಮ್ಮಕ್ಕಳಾದರೂ ಯಾಮುನಾಚಾರ್ಯರು ಬಾಲ್ಯದಲ್ಲಿ ಬವಣೆಗಳನ್ನೇ ಉಂಡವರು. ಚಿಕ್ಕಂದಿನಲ್ಲೇ ತಂದೆ ಈಶ್ವರಮುನಿ ತೀರಿಕೊಂಡರು. ಅಜ್ಜ ನಾಥಮುನಿ (ರಂಗನಾಥ) - ಸನ್ಯಾಸ ಪಡೆದರು. ಯಾಮುನರು ತಮ್ಮ ತಾಯಿ, ಅಜ್ಜಿಯ ಆಶ್ರಯದಲ್ಲಿಯೇ - ಬಡತನದ ಕಷ್ಟದಲ್ಲಿಯೇ ಬೆಳೆದರು.

ಇತ್ತ, ತಮ್ಮ ಗುರು ಉಯ್ಯಕ್ಕೊಂಡಾರರಿಗೆ ಮಾತು ಕೊಟ್ಟಂತೆ - ಮೊತ್ತಮೊದಲು, ರಾಮ ಮಿಶ್ರರು ಬಾಲಕ ಯಾಮುನರನ್ನು ಪತ್ತೆಹಚ್ಚಿದರು. ಅವರಿಗೆ ವಿದ್ಯೆಯ ಬುನಾದಿ ಹಾಕಬಲ್ಲ ಒಳ್ಳೆಯ ಗುರುವನ್ನು ದೊರಕಿಸಿ ಕೊಡಲು ನಿಶ್ಚೈಸಿದರು. ಪ್ರಾಪ್ತ ವಯಸ್ಕರಾದ ಮೇಲೆ, ತಮ್ಮ ಗುರುವಿನಿಂದ ತಾವು ಪಡೆದ ವೇದಾಂತ ರಹಸ್ಯವನ್ನು ಯಾಮುನರಿಗೆ ಬೋಧಿಸಿ, ವಿದ್ಯಾನಿಧಿಯನ್ನು ವರ್ಗಾಯಿಸಿ, ಅಧ್ಯಯನದಿಂದ ಊರ್ಜಿತಗೊಳಿಸಿಕೊಂಡು ಹೋಗುವಂತೆ ಹೇಳಲು ಸಂಕಲ್ಪಿಸಿಕೊಂಡರು. ಆದರೆ ಅದಕ್ಕಿನ್ನೂ ಕಾಲಕೂಡಿ ಬಂದಿರಲಿಲ್ಲ.

(೧) ಶ್ರೀ ಯಾಮುನಾಚಾರ್ಯರು

ಯಾಮುನರು ಆಗ - ಮಹಾಭಾಷ್ಯ ಭಟ್ಟರೆಂಬ ಗುರುಗಳ ಸನ್ನಿಧಿಯಲ್ಲಿ ವಿದ್ಯಾರ್ಜನೆ ಮಾಡುತ್ತಿದ್ದರು.

ಶಿಷ್ಯ ಯಾಮುನಾಚಾರ್ಯರಿಗೆ ಎದುರಾಗಿದ್ದ ಅಗ್ನಿಪರೀಕ್ಷೆ

ಮಹಾಭಾಷ್ಯ ಭಟ್ಟರು ಅಂದಿನ ದೊಡ್ಡ ವಿದ್ವಾಂಸರಾಗಿದ್ದರು. ಅವರ ನೆಚ್ಚಿನ ಶಿಷ್ಯರಾಗಿದ್ದವರು - ಯಾಮುನರು.

ಮಹಾಭಾಷ್ಯ ಭಟ್ಟರೆಂಬ ದೊಡ್ಡ ವಿದ್ವಾಂಸರಲ್ಲಿ ಯಾಮುನಾಚಾರ್ಯರು ಶಿಷ್ಯವೃತ್ತಿಯನ್ನು ನಡೆಸುತ್ತಿದ್ದಾಗ, ಅವರಿಗೆ ಮೊದಲ ಬಾರಿ "ವಿದ್ವಜ್ಜನ ಕೋಲಾಹಲದ " ದರ್ಶನವಾಗಿತ್ತು.

ಆಗ ಪಾಂಡ್ಯರು ಆ ನಾಡನ್ನು ಆಳುತ್ತಿದ್ದರು. ತಾವು ಒಪ್ಪಿ ಅನುಸರಿಸುವ ವಿಚಾರ ಚಿಂತನೆಗಳನ್ನು ರಾಜಾಸ್ಥಾನಗಳಲ್ಲಿ ಬಹಿರಂಗ ವಾದಗಳಿಗೆ ಒಡ್ಡಿ ಅವನ್ನು ನಿರ್ವಿರೋಧವಾಗಿ ಪ್ರತಿಷ್ಠಾಪಿಸಿ ಮೆರೆಯುವ ಕೋಲಾಹಲವು ಅಂದಿನ ಆಸ್ಥಾನಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಎಷ್ಟೋ ಬಾರಿ ಒಣ ತರ್ಕವೇ ಗೆದ್ದು ಸತ್ವವು ನರಳುತ್ತಿದ್ದುದೂ ಇತ್ತು ! ಅಂದಿನ ಪಾಂಡ್ಯರ ಆಸ್ಥಾನದಲ್ಲೂ - ವಿದ್ವಾಂಸ ಎನ್ನಿಸಿಕೊಂಡು ಆಗಾಗ ಬೀಗುವ ಹವ್ಯಾಸವಿದ್ದ ಒಬ್ಬ ಪಂಡಿತರಿದ್ದರು. ಅಂದಿನ ಸಮಾಜದಲ್ಲಿ ವಿದ್ವಾಂಸರೆನ್ನಿಸಿಕೊಂಡು ಬದುಕುತ್ತಿದ್ದ ಅನೇಕರನ್ನು ವಾದಕ್ಕೆ ಕರೆದು, ಅವರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿ, ಅವರನ್ನು ಸೋಲಿಸಿ ಕಳಿಸುವ ಹವ್ಯಾಸವನ್ನು ರೂಢಿಸಿಕೊಂಡಿದ್ದ ಆತನು, ಅಹಂಕಾರದಿಂದ ಬೀಗಿ ತೊನೆದಾಡುತ್ತಿದ್ದ. ಆದ್ದರಿಂದಲೇ ಆತನಿಗೆ - "ವಿದ್ವಜ್ಜನ ಕೋಲಾಹಲ" ಎಂಬ ಬಿರುದೂ ಬಂದಿತ್ತು ! ಇಷ್ಟೇ ಅಲ್ಲದೆ, ತನ್ನ ಪ್ರತಿಷ್ಠೆಯನ್ನು ಸ್ಥಾಪಿಸಿ ಮೆರೆಸುವ ದುಷ್ಟಬುದ್ಧಿಯಿಂದಾಗಿ, ಸುತ್ತುಮುತ್ತಿನ ಎಲ್ಲ ಪಂಡಿತರಿಂದ ಆತನು ಕಪ್ಪವನ್ನೂ ವಸೂಲು ಮಾಡುತ್ತಿದ್ದನಂತೆ ! ವಿದ್ಯಾ ತೆರಿಗೆ ! ಯಾಮುನರ ಗುರುವಾದ ಭಾಷ್ಯ ಭಟ್ಟರೂ ಈ ತೆರಿಗೆಯನ್ನು ಸಲ್ಲಿಸಬೇಕಾಗಿತ್ತು. ಆದರೆ ಭಾಷ್ಯ ಭಟ್ಟರ ಆದಾಯವೇ ಕಡಿಮೆ ಇದ್ದುದರಿಂದ ಅವರಿಗೆ ಕೆಲವು ವರ್ಷಗಳಿಂದ ಈ "ಪಂಡಿತ ಕಪ್ಪ" ಸಲ್ಲಿಸುವುದು ಸಾಧ್ಯವಾಗಿರಲಿಲ್ಲ. ಬಾಕಿ ಉಳಿದಿತ್ತು.

ಅದೊಂದು ದಿನ, ಭಾಷ್ಯ ಭಟ್ಟರು ಊರಿನಲ್ಲಿರಲಿಲ್ಲ. ಇತರ ಶಿಷ್ಯರೂ ಪ್ರವಚನ ಮುಗಿಸಿಕೊಂಡು ತೆರಳಿದ್ದರು. ಯಾವುದೋ ಕೆಲಸದಲ್ಲಿ ತೊಡಗಿದ್ದ ಯಾಮುನರೊಬ್ಬರೇ ಆಗ ಗುರುಗಳ ಮನೆಯಲ್ಲಿದ್ದರು. ಅದೇ ಹೊತ್ತಿಗೆ - ವಿದ್ವಜ್ಜನ ಕೋಲಾಹಲನ ಶಿಷ್ಯನೊಬ್ಬ ಬಾಕಿ ವಸೂಲಿಗಾಗಿ ಭಾಷ್ಯ ಭಟ್ಟರ ಮನೆಗೆ ಬಂದ. ಗುರುಗಳ ಅನುಪಸ್ಥಿತಿಯಲ್ಲಿ, ಯಾಮುನರೇ ಬಂದವನನ್ನು ವಿಚಾರಿಸಿದರು. ಆಗ, ಬಂದ ವ್ಯಕ್ತಿಯು ಹೇಳಿದ :

"ನೋಡಯ್ಯಾ, ನಾನು ವಿದ್ವಜ್ಜನ ಕೋಲಾಹಲರ ಶಿಷ್ಯ. ಪಾಂಡ್ಯರಾಜನೇ ನಮ್ಮ ಗುರುಗಳ ಅಡಿಯಾಳು. ಈ ಸರಹದ್ದಿನ ಎಲ್ಲ ವಿದ್ವಾಂಸರೂ ನಮ್ಮ ಗುರುವಿಗೆ ತೆರಿಗೆ ಸಲ್ಲಿಸಬೇಕು; ನಿಮ್ಮ ಗುರುವೂ ಸಲ್ಲಿಸಬೇಕಾಗಿದೆ. ತಪ್ಪದೆ ಕೊಡಬೇಕಾದ ತೆರಿಗೆಯನ್ನು ನಿಮ್ಮ ಗುರುವು ಬಹುಕಾಲದಿಂದ ಬಾಕಿ ಉಳಿಸಿಕೊಂಡಿದ್ದಾರೆ. ನಿಮ್ಮ ಗುರುವಿಗೆ ಬುದ್ಧಿ ಉಂಟೇ ? ಬಾಕಿ ತೀರಿಸದಿದ್ದರೆ ಅವನಿಗೆ ಏನು ಗತಿಯಾದೀತು ಗೊತ್ತೆ ? ಒಂದೋ ಅವರು ನಮ್ಮ ಗುರುವನ್ನು ವಾದದಲ್ಲಿ ಸೋಲಿಸಿ ಗೆಲ್ಲಬೇಕು; ಇಲ್ಲವೇ ತೆರಿಗೆ ಸಲ್ಲಿಸಬೇಕು. ಅರ್ಥವಾಯಿತೆ ? ಹ್ಹ.. ನಿಮ್ಮ ಗುರುವಿಗೆ ವಾದಿಸಿ ಗೆಲ್ಲುವ ಶಕ್ತಿ ಎಲ್ಲಿದೆ ? ಆದ್ದರಿಂದ ತಕ್ಷಣ ತೆರಿಗೆ ಸಲ್ಲಿಸಿಬಿಡಿ.."

ವಿದ್ಯಾ ತೆರಿಗೆಯನ್ನು ಅನಧಿಕೃತವಾಗಿ ಸಂಗ್ರಹಿಸುತ್ತಿದ್ದ ರೌಡಿ ಪಂಡಿತನೊಬ್ಬನ ರೌಡಿ ಶಿಷ್ಯನಂತೆ ಮಾತನಾಡುತ್ತಿದ್ದ ಆ ವ್ಯಕ್ತಿಯ ವಾಕ್ ಪ್ರಲಾಪವನ್ನು ಕೇಳಿದ ಯಾಮುನರು ಕಿವಿ ಮುಚ್ಚಿಕೊಂಡರು. ಆಗ ಅವರಲ್ಲಿದ್ದ ವಿದ್ಯಾಭಿಮಾನವು ಹೆಡೆ ಎತ್ತಿತು.  ಆತನ ವಾಗ್ವಿಲಾಸದಲ್ಲಿದ್ದ ದೌರ್ಜನ್ಯದ ಭಾವವನ್ನು ಸರಿಯಾಗಿಯೇ ಗ್ರಹಿಸಿದ ಯಾಮುನರು ಆ ಅಂಚೆಕಾರ ಶಿಷ್ಯೋತ್ತಮನಿಗೆ ಸೌಜನ್ಯದಿಂದಲೇ ಉತ್ತರಿಸಿದರು.

"ಅಯ್ಯಾ, ನನ್ನ ಗುರುವಿನ ಮಹಿಮೆ ನಿಮಗೇನು ಗೊತ್ತು ? ಈಗ ನೀನು ಹೋಗಿ, ನಿನ್ನ ಶುಷ್ಕ ಪಂಡಿತ ಗುರುವಿಗೆ ಹೇಳು. ನಿನ್ನ ಗುರುವಿನೊಡನೆ ವಾದಕ್ಕೆ ನನ್ನ ಗುರು ಬರಬೇಕಾಗಿಲ್ಲ; ನನ್ನಂತಹ ಒಬ್ಬ ಕಿರಿಯ ಶಿಷ್ಯನೇ ಸಾಕು. ನಿನ್ನ ಗುರುವು ನನಗೆ ಆಮಂತ್ರಣ ಕೊಡಲಿ; ನಾನು ಬುದ್ಧಿ ಕಲಿಸುತ್ತೇನೆ..."

ಯಾಮುನರ ಮಾತಿನಿಂದ ಕಕ್ಕಾಬಿಕ್ಕಿಯಾದ "ಕೋಲಾಹಲ ಶಿಷ್ಯನು" ಕೋಪದಿಂದಲೇ ಅಲ್ಲಿಂದ ಹೊರಟು ನೆಟ್ಟಗೆ ಗುರುಗಳ ಬಳಿಗೆ ಹೋಗಿ ನಡೆದುದನ್ನೆಲ್ಲ ನಡುಗುತ್ತಲೇ ಹೇಳಿದ. ಆದರೆ ವಿದ್ವಜ್ಜನ ಕೋಲಾಹಲನು ಮಾತ್ರ ಗಹಗಹಿಸಿ ನಕ್ಕ. ಈ ಸಮಾಚಾರವು ಪಾಂಡ್ಯದೊರೆಯ ಕಿವಿಗೂ ಬಿತ್ತು. ಆದರೆ ತನ್ನ ಆಸ್ಥಾನ ಪಂಡಿತನ ಕಿವಿ ಹಿಂಡಲಾಗದ ಆ ಮೂರ್ಖ ದೊರೆಯು ವಿದ್ವಜ್ಜನ ಕೋಲಾಹಲನಿಗೆ ಎದುರು ಬಿದ್ದ ಹುಡುಗನನ್ನೇ "ಮೂರ್ಖ" ಎಂದು ಪರಿಗಣಿಸಿ, "ವಾದದಲ್ಲಿ ತೊಡಗುವ ಇಚ್ಛೆಯಿದ್ದರೆ ಆ ಹುಡುಗನು ಬರಲಿ" ಎಂದು ಸೂಚಿಸಿ, ಹುಡುಗನಿಗೆ ಆಮಂತ್ರಣವನ್ನೂ ಕಳಿಸಿದ.

ಯಾಮುನರು ಜಗ್ಗಲಿಲ್ಲ. "ಸುಮ್ಮನೆ ಹೇಳಿ ಕಳಿಸಿದರೆ ಹೇಗೆ ಬರಲಾದೀತು ? ಪಂಡಿತಯೋಗ್ಯವಾದ ಪಲ್ಲಕ್ಕಿಯೇ ಮುಂತಾದ ಸಕಲ ಮರ್ಯಾದೆಗಳೊಂದಿಗೆ ಬನ್ನಿ" ಎಂದು - ಪ್ರತಿಯಾಗಿ ಹೇಳಿ ಕಳಿಸಿದರು.

ಹುಡುಗನ ದಿಟ್ಟತನದಿಂದ ಆಶ್ಚರ್ಯಗೊಂಡರೂ ಆ ರಾಜನು, "ವಿನೋದ ಪ್ರಸಂಗವೊಂದನ್ನು ನಿಭಾಯಿಸುವಂತೆ" ತಮಾಷೆಯ ರೀತಿಯಲ್ಲಿ ಸಕಲ ಮರ್ಯಾದೆಗಳನ್ನೂ ಕಳಿಸಿಕೊಟ್ಟು - ಮುಂದಿನ ಹಾಸ್ಯದ ಕ್ಷಣಗಳಿಗಾಗಿ ಕಾಯತೊಡಗಿದ.

ಅದೇ ಹೊತ್ತಿನಲ್ಲಿ, ಪರಊರಿಗೆ ತೆರಳಿದ್ದ ಯಾಮುನರ ಗುರು ಭಾಷ್ಯ ಭಟ್ಟರು ಊರಿಗೆ ಮರಳಿದರು. ಅವರಿಗೆ ವಿಷಯವು ತಿಳಿದಾಗ ಅವರು ಗಾಬರಿಯಾಗಿ, "ವಿದ್ವಜ್ಜನ ಕೋಲಾಹಲನೆಂದರೆ ಸಾಮಾನ್ಯನೆ ? ರಾಜನ ಬೆಂಬಲ ಬೇರೆ ಇದೆ. ಈ ಹುಡುಗ ಆತನನ್ನು ವಾದದಲ್ಲಿ ಗೆಲ್ಲುವುದು ಸಾಧ್ಯವೆ ? ಈತನ ಉದ್ಧಟತನಕ್ಕೆ ಗಲ್ಲು ಶಿಕ್ಷೆಯೂ ಆಗಬಹುದು... ಅಯ್ಯೋ.. ಏನಾಗಿ ಹೋಯಿತು ?" ಎನ್ನುತ್ತ ಭಾಷ್ಯ ಭಟ್ಟರು ಪರಿತಪಿಸಿದರು.

ಆಗ ಯಾಮುನರೇ ಗುರುಗಳನ್ನು ಶಾಂತಗೊಳಿಸಿದರು. ಅದಾಗಲೇ ಶಾಸ್ತ್ರವಿದ್ಯೆಯ ಸಾರವನ್ನು ಹೀರಿಕೊಂಡಿದ್ದ ಯಾಮುನರು - "ಗುರುಗಳೇ, ನಿಮ್ಮ ಆಶೀರ್ವಾದ ಇದ್ದರೆ ಸಾಕು. ಆ ಪಂಡಿತನನ್ನು ನುರಿಯುವುದು ಏನು ಕಷ್ಟ ?" ಎಂದವರೇ ಗುರುಗಳ ಅಪ್ಪಣೆ ಪಡೆದು ಅರಮನೆಯ ಕಡೆಗೆ ಹೊರಟರು. ರಾಜ ಕಳಿಸಿದ್ದ ಪಲ್ಲಕ್ಕಿ ಏರಿದರು.

ಇತ್ತ ಅರಮನೆಯಲ್ಲಿ, ಇದೇ ಪ್ರಸಂಗದ ಕುರಿತು ರಾಜ-ರಾಣಿಯರಲ್ಲಿ ವಾಗ್ವಾದ ಆರಂಭವಾಗಿತ್ತು.

ರಾಜ - ಬೆಕ್ಕು ಇಲಿಯನ್ನು ಕೊಲ್ಲುವಂತೆ ನಮ್ಮ ಕೋಲಾಹಲ ಪಂಡಿತನು ಈ ಹುಡುಗನನ್ನು ವಾದದಲ್ಲಿ ಹೊಸಕಿ ಹಾಕುತ್ತಾನೆ; ನೋಡುತ್ತಿರು..

ಕೋಲಾಹಲನ ವಿದ್ಯಾಮದದಿಂದ ಬೇಸತ್ತಿದ್ದ ರಾಣಿಯು ರಾಜನ ಹೇಳಿಕೆಯನ್ನು ಒಪ್ಪಲಿಲ್ಲ.

ರಾಣಿ - ನನಗೇಕೋ ನಂಬಿಕೆ ಹುಟ್ಟುತ್ತಿಲ್ಲ. ಹತ್ತಿಯ ರಾಶಿಯನ್ನು ಸುಡಲು ಒಂದೇ ಒಂದು ಕಿಡಿ ಸಾಕಾಗುತ್ತದೆಯಲ್ಲವೆ ? ಈ ಹುಡುಗನ ವರ್ತನೆ ನೋಡಿದರೆ ಇವನು ಕೋಲಾಹಲನ ಕೀರ್ತಿಸೌಧವನ್ನು ಸುಟ್ಟು ಉರುಬಬಹುದು..

ಹೀಗೇ ರಾಜ ರಾಣಿಯರ ವಾದವು ಬೆಳೆದು ಪರಸ್ಪರರಲ್ಲಿ ಪ್ರತಿಷ್ಠೆಯ ಪಂಥದವರೆಗೆ ಬಂದು ನಿಂತಿತು.

ರಾಜ - ನಿನ್ನ ಹುಡುಗ ಸೋತರೆ...ಆಗ  ?

ರಾಣಿ - ಅಕಸ್ಮಾತ್ ನಿಮ್ಮ ಪಂಡಿತ ಸೋತರೆ ?

ರಾಜ - ಪಂಡಿತ ಸೋತರೆ, ಅರ್ಧ ರಾಜ್ಯವನ್ನೇ ಹುಡುಗನಿಗೆ ಕೊಡುತ್ತೇನೆ.

ರಾಣಿ - ಅಕಸ್ಮಾತ್, ಹುಡುಗನೇ ಸೋತರೆ, ನಾನು ನಿಮ್ಮ ರಾಣಿಯಲ್ಲ; ದಾಸಿಯಾಗುತ್ತೇನೆ.

ಅಷ್ಟು ಹೊತ್ತಿಗೆ, ಯಾಮುನರು ರಾಜನ ಆಸ್ಥಾನಕ್ಕೆ ಬಂದರು. ರಾಜರಾಣಿಯರು ಆಸೀನರಾಗಿದ್ದರು. ವಿದ್ವಜ್ಜನ ಕೋಲಾಹಲನೂ ಮಂಡಿಸಿದ್ದ. ಅವನ ಎದುರಿನಲ್ಲಿಯೇ ಯಾಮುನರ ಆಸನವು ಸಿದ್ಧವಾಗಿತ್ತು.

ಯಾಮುನರ ಒಣಗಿದ ಎಳೆಯ ದೇಹವನ್ನು ನೋಡಿದ ಆಸ್ಥಾನ ಪಂಡಿತನು ವ್ಯಂಗ್ಯವಾಗಿ ಕೇಳಿದ. "ಏನು ? ಆಳಲು ಬಂದವನೆ ? ನನ್ನನ್ನು ಗೆಲ್ಲಲು ಬಂದವನು ಈ ಹುಡುಗನೆ ?"

ಆಗ ರಾಣಿಯು "ಹೌದು. ಆಳಲು ಬಂದರು. ಈ ಹುಡುಗನು ಗೆಲ್ಲಲು ಬಂದವನು.." ಎಂದುಬಿಟ್ಟಳು.
ಯಾಮುನರಿಗೆ "ಆಳವಂದಾರ್" ಎಂಬ ಹೆಸರು ಬಂದದ್ದು ಹೀಗಂತೆ. ಎಲ್ಲರ ಮನಸ್ಸನ್ನು "ಆಳಲು ಬಂದವರಾದರು" ಎಂಬ ಭಾವ.

ರಾಣಿಯು ನಿಷ್ಠುರವಾಗಿ ಹೇಳಿದರೂ ಅದನ್ನು ಗಮನಿಸದಷ್ಟು ಉದಾಸೀನವು ಕೋಲಾಹಲನ ವರ್ತನೆಯಲ್ಲಿತ್ತು. "ಏನೋ ಹುಡುಗು ಬುದ್ಧಿ... ಅಯ್ಯೋ ಪಾಪ" ಅಂದುಕೊಂಡು, ಪ್ರಾಥಮಿಕ ವ್ಯಾಕರಣ, ಅಮರ ಕೋಶದ ಮೇಲೆ ಸಣ್ಣ ಪುಟ್ಟ ಪ್ರಶ್ನೆಗಳನ್ನು ಹಾಕಿದ. ಯಾಮುನರು ಪಟಪಟನೆ ಉತ್ತರಿಸಿ, ಕೋಲಾಹಲನ ಕಡೆಗೆ ನೋಡುತ್ತ "ನಾನು ಹುಡುಗನೆಂದುಕೊಳ್ಳಬೇಡಿ ಪಂಡಿತರೇ. ಜನಕನ ಆಸ್ಥಾನದಲ್ಲಿ ಬಂಡಿಯನ್ನು ಜಯಿಸಿದ ಅಷ್ಟಾವಕ್ರ ಮುನಿಯು ಕೇವಲ ಹುಡುಗನಾಗಿದ್ದನೋ ಅಥವ ನಿಮ್ಮ ಹಾಗೆ ಮುದುಕನಾಗಿದ್ದನೋ..ಹೇಳಿ. ತೂಕ ಆಕಾರ ನೋಡಿ ಪಾಂಡಿತ್ಯ ಅಳೆಯುತ್ತಾರೆಯೆ ? ಹಾಗಿದ್ದರೆ, ದೊಡ್ಡ ಗೂಳಿಯು ನಿಮಗಿಂತ ದೊಡ್ಡ ಪಂಡಿತ ಎನ್ನಬಹುದು - ಅಲ್ಲವೆ ?"

ಯಾಮುನರ ಚುಚ್ಚುಮಾತಿನಿಂದ ಮುಖಭಂಗವಾದರೂ ಕೋಲಾಹಲನು ತೋರಗೊಡಲಿಲ್ಲ. ಆತನ ಅಹಂಕಾರವು ಮತ್ತಷ್ಟು ಹೆಡೆ ಬಿಚ್ಚಿತ್ತು. "ಭಲೇ ಭಲೇ.. ನೀನು ಹುಡುಗನಾದರೂ ಪಂಡಿತವರೇಣ್ಯನೇ ಆಗಿದ್ದೀ ಎಂದು ಒಪ್ಪಿಕೊಳ್ಳೋಣ. ಈಗ, ನೀನೇ ಪ್ರಶ್ನೆ ಕೇಳು. ಅವುಗಳಿಗೆ ಉತ್ತರಿಸಲು ನನಗೆ ಆದೀತೋ ಇಲ್ಲವೋ ನೋಡೋಣ.." ಎನ್ನುತ್ತ ಮುಸಿಮುಸಿ ನಕ್ಕುಬಿಟ್ಟ - ಕೋಲಾಹಲ. ಅಹಂಕಾರವು ಎಡವಿ ಬೀಳಿಸುವಾಗ ಹೀಗಾಗುತ್ತದೆ !

ಯಾಮುನರು ಕ್ಷಣಕಾಲ ಮೌನವಾಗಿದ್ದರು.

"ತಡವೇಕೆ ? ಕೇಳಯ್ಯಾ ಹುಡುಗಾ.." ಎಂದ ಕೋಲಾಹಲನ ಮಾತು ಮುಗಿಯುವ ಮೊದಲೇ ಯಾಮುನರು ಪ್ರಶ್ನೆ ಎಸೆದರು...

ಯಾಮುನ - ಮೊದಲನೆಯದಾಗಿ, ನಿಮ್ಮ ತಾಯಿಯು ಬಂಜೆಯಲ್ಲ - ಎನ್ನುತ್ತೇನೆ ನಾನು. ಇದು ಸುಳ್ಳೆಂದು, ನಿಮ್ಮ ತಾಯಿಯು ಬಂಜೆ ಎಂದು ಸ್ಥಾಪಿಸಿ ನೋಡೋಣ.."

ಕೋಲಾಹಲನ ಮುಖ ಸಪ್ಪಗಾಯಿತು. "ನನ್ನ ತಾಯಿಯು ಬಂಜೆಯಾಗಿದ್ದರೆ ನಾನು ಹುಟ್ಟುತ್ತಲೇ ಇರಲಿಲ್ಲ. ಈ ವಾದವನ್ನು ಹೇಗೆ ಖಂಡಿಸಲಿ ?" ಎಂದು ಯೋಚಿಸುತ್ತ ಮೌನವಾದ.

ಕೋಲಾಹಲನ ತೊಳಲಾಟವನ್ನು ನೋಡಿದ ಯಾಮುನರು - "ಏಕೆ ? ನಿಮ್ಮ ಪ್ರಚಂಡ ಬುದ್ಧಿಗೆ ಏನೂ ಹೊಳೆಯಲಿಲ್ಲವೆ ? ಹೋಗಲಿ ಬಿಡಿ. ಎರಡನೆಯ ಪ್ರಶ್ನೆ ಕೇಳುತ್ತೇನೆ. ನಮ್ಮ ಪಾಂಡ್ಯರಾಜನು ಅತ್ಯಂತ ಧರ್ಮಿಷ್ಟ ದೊರೆ - ಎನ್ನುತ್ತೇನೆ ನಾನು. ಇದನ್ನಾದರೂ ಖಂಡಿಸಿ...ನೋಡೋಣ."

ರಾಜನಿಗೆ ಬಹುಪರಾಕನ್ನು ಹೇಳುತ್ತ ದಿನ ದೂಡುತ್ತಿದ್ದ ಕೋಲಾಹಲನು - ಕೇವಲ ವಾದಕ್ಕೆಂದೇ ಆದರೂ - ಈ ಮಾತನ್ನು ಹೇಗೆ ಖಂಡಿಸಿಯಾನು ? "ತನ್ನ ದೊರೆಯು ಅಧರ್ಮಿಯೇ ಆಗಿದ್ದರೂ ಆತನ ಎದುರಲ್ಲೇ ಅದನ್ನು ಸ್ಥಾಪಿಸುವುದು ಹೇಗೆ ? ತನ್ನ ಬಗ್ಗೆ ಇಷ್ಟೊಂದು ಮೃದುವಾಗಿರುವ ದೊರೆಯನ್ನು ಅಧರ್ಮಿಯೆಂದು ಸ್ಥಾಪಿಸುವುದಾದರೂ ಹೇಗೆ ? ಹಾಗೆ ಸ್ಥಾಪಿಸಿದರೆ ನನ್ನ ಗತಿಯೇನು ?" ಎಂಬ ಯೋಚನೆಯಲ್ಲಿ ಬಿದ್ದ ಕೋಲಾಹಲನ ಮುಖವು ಪೇಲವವಾಯಿತು.

ಆಗ ಯಾಮುನರೇ ಮತ್ತೆ ಕೇಳಿದರು.

"ಓ ಪಂಡಿತೋತ್ತಮಾ, ಇದನ್ನೂ ಖಂಡಿಸಲು ಆಗಲಿಲ್ಲವೆ ? ಹೋಗಲಿ ಬಿಡು. ವಾದಕ್ಕಾಗಿ ನಾನು ಮಂಡಿಸುವ ಮೂರನೆಯ ವಿಷಯ ಇದು. ನಾನು ಹೇಳುತ್ತೇನೆ. ನಮ್ಮ ಮಹಾರಾಣಿಯವರು ಸಾಧ್ವೀ ಶಿರೋಮಣಿ ಎಂದು. ಇದನ್ನಾದರೂ ಅಲ್ಲಗಳೆಯುವಿರಾ ? ಹೇಳಿ."

ಆಗ ಮುಜುಗರಕ್ಕೆ ಒಳಗಾಗಿ, ಅಸ್ಥಿರ ಬುದ್ಧಿಗೆ ವಶನಾದ ಕೋಲಾಹಲನು ಅವಮಾನದ ಭಾವದಿಂದ ಕೋಪೋದ್ರಿಕ್ತನಾಗಿ  ಯಾಮುನರನ್ನು ವಾದದ ವಿಷಯದಿಂದ ಹೊರಗೆಳೆದು, ಭಯಪಡಿಸುವಂತೆ, ಗಳಹತೊಡಗಿದ.

"ಹುಚ್ಚು ಹುಡುಗನೇ, ನಮ್ಮ ದೊರೆಯು ಅಧರ್ಮಿಯೆಂದು, ರಾಣಿಯು ಪತಿವ್ರತೆಯಲ್ಲವೆಂದು ಸಾಧಿಸಬೇಕೆ ? ನಿನ್ನ ವಿಪರೀತ ಬುದ್ಧಿಯನ್ನು ಪ್ರದರ್ಶಿಸುತ್ತಿದ್ದೀಯಲ್ಲ ? ಇಂತಹ ಜಂಜಾಟದಲ್ಲಿ ಸಿಲುಕಲು ನನಗೇನು ಹುಚ್ಚೇ ? ಈಗ ನೀನೇ ಅಪಾಯದಲ್ಲಿ ಸಿಲುಕಿದ್ದೀ. ನೀನೇ ಹೇಳು. ನಿನ್ನ ಮಾತುಗಳನ್ನು ನೀನೇ ಖಂಡಿಸು. ನಾವು ಕೇಳುತ್ತೇವೆ. ಹೇಗೂ... ನಮ್ಮ ದೊರೆಯನ್ನೂ ರಾಣಿಯನ್ನೂ ಅಪಹಾಸ್ಯಕ್ಕೆ ಗುರಿಮಾಡಿದುದಕ್ಕಾಗಿ ನಿನಗೆ ಘೋರ ಶಿಕ್ಷೆಯು ಕಾದಿದೆ..."

ಕೋಲಾಹಲನ ಬೆದರಿಸುವ ಮಾತಿನಿಂದ ಸ್ಫೂರ್ತಿಗೊಂಡ ಆತನ ಹಿಂಬಾಲಕರು ಯಾಮುನರನ್ನು ಅವಹೇಳನಗೈಯ್ಯುವಂತೆ "ಹೋ ಹೋ " ಎಂದು ಕೂಗತೊಡಗಿದರು. ಆಸ್ಥಾನದಲ್ಲಿ ಗದ್ದಲವು ತುಂಬಿಕೊಂಡಿತು.

ಆಗ ಯಾಮುನಾಚಾರ್ಯರು ನಗುತ್ತ ಎದ್ದು ನಿಂತರು. "ಸಭಾಸದರೇ, ಎಲ್ಲರೂ ಶಾಂತರಾಗಿ. ನಾನು ಪ್ರತಿಪಾದಿಸಿದ ಒಂದೊಂದು ಮಾತೂ ಸುಳ್ಳು ಎಂಬುದನ್ನು ಈಗ ನಾನೇ ಸ್ಥಾಪಿಸುತ್ತೇನೆ. ದಯವಿಟ್ಟು ಕೇಳಿ" ಎಂದಾಗ, ಆಸ್ಥಾನದಲ್ಲಿ ಗಾಢ ಮೌನವು ವ್ಯಾಪಿಸಿತು. ಯಾಮುನರು ನಿರರ್ಗಳವಾಗಿ ಮಾತನಾಡತೊಡಗಿದರು.

ಮೊದಲನೆಯದು ... "ನಮ್ಮ ಪಂಡಿತವರ್ಯರ ತಾಯಿಯು ಬಂಜೆ" ಎಂಬ ವಿಚಾರ. ಒಂದೇ ಮಗುವನ್ನು ಹಡೆದ ತಾಯಿಯೂ ಬಂಜೆಯೆಂದೇ ಪರಿಗಣಿಸಲ್ಪಡುವಳು ಎಂಬುದು - ನಮ್ಮ ಶಾಸ್ತ್ರದಲ್ಲಿ ಹೇಳಿರುವ ವಿಷಯ. ಮನು ಸಂಹಿತೆಯ ಮೇಧ ತಿಥಿ ಭಾಷ್ಯದಲ್ಲಿ ಹೀಗೆ ಹೇಳಿದೆ. ಆದ್ದರಿಂದ ನಮ್ಮ ಪಂಡಿತರೊಬ್ಬರನ್ನೇ ಹಡೆದ ಅವರ ತಾಯಿಯು ಬಂಜೆ...ಈ ದೃಷ್ಟಿಯಲ್ಲಿ."

ಎರಡನೆಯ ಸಮಸ್ಯೆಗೆ ಬಂದರೆ - ನಮ್ಮ ಪಾಂಡ್ಯರಾಜರು ಅತ್ಯಂತ ಧರ್ಮಿಷ್ಟರಾದ ದೊರೆ ಎಂಬುದನ್ನು ಖಂಡಿಸಬೇಕಾಗಿದೆ. ನೋಡಿ, ಇದು ಕಲಿಯುಗ. ಕಲಿಯುಗದಲ್ಲಿ ಧರ್ಮಕ್ಕೆ ಒಂದೇ ಕಾಲು. ಅಧರ್ಮಕ್ಕೆ ಮೂರು ಕಾಲು. ದೊರೆ ಎಂಬವರು ಎಷ್ಟೇ ಧರ್ಮದಿಂದ ರಾಜ್ಯವನ್ನು ಪರಿಪಾಲಿಸಿದರೂ ತನ್ನ ಪ್ರಜೆಗಳ ಅಧರ್ಮದಲ್ಲಿ ಆರನೆಯ ಭಾಗವು ದೊರೆಗೆ ಸಲ್ಲುತ್ತದೆ ಎಂಬುದೂ ಮನು ಸಂಹಿತೆಯ ಮಾತು. ಆದ್ದರಿಂದ ಈ ದೃಷ್ಟಿಯಲ್ಲಿ, ನಮ್ಮ ಧರ್ಮಿಷ್ಟ ದೊರೆಯೂ ಅಧರ್ಮಿಯೇ ಆಗಬೇಕಾಗುತ್ತದೆ."

ಇನ್ನು ಮೂರನೆಯದಾಗಿ, ನಮ್ಮ ರಾಣಿಯವರ ಪಾತಿವ್ರತ್ಯದ ವಿಚಾರ. ನಾಡನ್ನಾಳುವ ದೊರೆಯು ಅಗ್ನಿ, ವಾಯು, ಸೂರ್ಯ, ಚಂದ್ರ, ಯಮ, ಕುಬೇರ, ವರುಣ ಮತ್ತು ಇಂದ್ರ - ಇವರ ಅವತಾರ ಸ್ವರೂಪಿ ಎಂದು ಮನು ಸಂಹಿತೆಯು ಹೇಳುತ್ತದೆ. ಆದ್ದರಿಂದ ಈ ದೊರೆಯ ಹೆಂಡತಿಯಾಗಿರುವ ರಾಣಿಯು ಈ ಎಂಟೂ ಮಂದಿಗೂ ಹೆಂಡತಿಯಲ್ಲವೆ ? ಆದ್ದರಿಂದ ಈ ದೃಷ್ಟಿಯಲ್ಲಿ - ನಮ್ಮ ರಾಣಿಯು ಪತಿವ್ರತೆಯಲ್ಲ."

ಇಷ್ಟು ಹೇಳಿದ ಯಾಮುನರು ಸಭೆಗೆ ನಮಸ್ಕರಿಸಿ ತಮ್ಮ ಆಸನದಲ್ಲಿ ಕುಳಿತರು. ಆಸ್ಥಾನಿಕರ ಹರ್ಷೋದ್ಗಾರಗಳು ಮುಗಿಲು ಮುಟ್ಟಿದವು. ತಮಗೇ ಅರಿವಿಲ್ಲದಂತೆ ಕೋಲಾಹಲನ ಅನುಯಾಯಿಗಳೂ ಹುಡುಗನ ಜಾಣ್ಮೆಯನ್ನು ಮೆಚ್ಚಿಕೊಂಡು ಹರ್ಷೋದ್ಗಾರಗೈಯ್ಯುತ್ತಿದ್ದರು. ತಾನು ಪಂಥವನ್ನು ಗೆದ್ದುದಕ್ಕಾಗಿ ರಾಣಿಯ ಕಣ್ಣಿನಿಂದ ಹರ್ಷ ಬಿಂದುಗಳು ಉದುರುತ್ತಿದ್ದವು.

ಯಾಮುನಾಚಾರ್ಯರು ಮತ್ತೊಮ್ಮೆ ಎದ್ದು ನಿಂತರು. ಈಗ ಗೌರವದಿಂದಲೇ ಸಭೆಯು ಮೌನವಾಯಿತು. ಇಡೀ ಸಭೆಯನ್ನು ವೀಕ್ಷಿಸುತ್ತ ಯಾಮುನರು ಗಂಭೀರವಾಗಿ ವಿನಂತಿಸಿದರು. "ಓ ಪಂಡಿತ ಶ್ರೇಷ್ಠರೇ, ನೀವು ಅನುಸರಿಸುತ್ತಿದ್ದ "ತೇಜೋವಧೆಯ ಆಳ್ತನದ ಬಿಂಕವು" - ಇಲ್ಲಿಗೆ ಸಂಪೂರ್ಣವಾಗಿದೆ. ನಿಮ್ಮ ವಯಸ್ಸು ಮತ್ತು ಆಸ್ಥಾನ ಪಂಡಿತರೆಂಬ ವಿಶೇಷ ಸ್ಥಾನದ ದೃಷ್ಟಿಯಿಂದ ನಿಮಗೆ ಅವಮಾನ ಮಾಡಲು ನನಗೆ ಇಷ್ಟವಿಲ್ಲ. ನನ್ನ ವಿನಂತಿ ಇಷ್ಟೇ. ಇನ್ನು ನಿಮಗೆ ಉಳಿದಿರುವ ಆಯುಷ್ಯಮಾನದಲ್ಲಿ - ಜ್ಞಾನದ ಬಲದಿಂದ ಇದುವರೆಗೆ ನಡೆಸುತ್ತಿದ್ದ ಪುಂಡುಪೋಕರಿತನಗಳನ್ನು ಬಿಟ್ಟು, ನಿಜವಾದ ಜ್ಞಾನದ ಅನ್ವೇಷಣೆಯಲ್ಲಿ ತೊಡಗಿ, ನಿಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳಿ. ನಿಮ್ಮವರೇ ಆದ ಪಂಡಿತರ ವರ್ಗವನ್ನು ಹೀಯಾಳಿಸುವ ಮತ್ತು ಅವರಿಂದ ಕಪ್ಪಕಾಣಿಕೆಗಳನ್ನು ವಸೂಲು ಮಾಡುತ್ತಿರುವ ಅನರ್ಥಕಾರೀ - ನಿರ್ದಯ ಹವ್ಯಾಸಗಳನ್ನು ಬಿಟ್ಟುಬಿಡಿ... ಜನೋಪಕಾರೀ ಕೆಲಸಗಳಲ್ಲಿ ತೊಡಗಿಕೊಳ್ಳಿ..."

ಪಂಥದಲ್ಲಿ ಭಾಗಿಯಾಗಿದ್ದ ಯಾಮುನರು ಕೋಲಾಹಲನನ್ನು ಕ್ಷಮಿಸಿದರು. ಯಾಮುನರ ಈ ಹೃದಯ ವೈಶಾಲ್ಯವನ್ನು ಕಣ್ಣಾರೆ ಕಂಡ ಸಭಾಸದರು ಮೆಚ್ಚಿ ಕರತಾಡನಗೈದರು. ಪಂಥ ಕಟ್ಟಿದ ರಾಣಿಯು ಹುಡುಗ ಯಾಮುನರನ್ನು ಗೌರವದಿಂದ ಅಪ್ಪಿದಳು. ಪಾಂಡ್ಯರಾಜನು ತಾನು ರಾಣಿಗೆ ಕೊಟ್ಟ ಮಾತಿನಂತೆ, ಅರ್ಧರಾಜ್ಯವನ್ನು ಯಾಮುನರಿಗೆ ಕೊಡುತ್ತೇನೆಂದು ಹೇಳಿದಾಗ, ಯಾಮುನರು ಒಪ್ಪಲಿಲ್ಲ. "ಇದು ನನ್ನ ಚಿತ್ತ ವೃತ್ತಿಗೆ ವಿರೋಧವಾದ ಕೊಡುಗೆ" ಎಂದು ಹೇಳಿದ ಯಾಮುನರು, ರಾಜನ ಕೊಡುಗೆಯನ್ನು ಸ್ವೀಕರಿಸಲು ಒಪ್ಪಲಿಲ್ಲ. ಹೀಗಿದ್ದರೂ... ರಾಜನು ಸುಮ್ಮನಾಗಲಿಲ್ಲ. ಯಾಮುನರನ್ನು ಬಗೆಬಗೆಯಿಂದ ಗೌರವಿಸಿದ. ಸಮೃದ್ಧ ಮಾಸಾಶನವನ್ನು ಕೊಡಮಾಡಿದ.

ಹೀಗೆ, ಸಜ್ಜನಿಕೆಯ ಬೀಜ ಬಿತ್ತಿದರೆ ಸಾಕು, ಅದು ತಾನೇ ತಾನಾಗಿ ಬೆಳೆದು ಹೆಮ್ಮರವಾಗಬಲ್ಲದು ಎಂಬುದಕ್ಕೆ - ಅಂದಿನ ನಡೆನುಡಿಗಳು ಸಾಕ್ಷಿಯಾದ ಅನೇಕ ದೃಷ್ಟಾಂತಗಳಿವೆ.

ಯಶಸ್ವೀ ಸಂಸಾರಿಯಾಗಿದ್ದ ಯಾಮುನರು - ವಿರಾಗಿಯಾದರು  !

ಮುಂದೆ ಯಾಮುನರು ಗೃಹಸ್ಥಾಶ್ರಮವನ್ನು ಸ್ವೀಕರಿಸಿ ಐಹಿಕ ಬದುಕಿನಲ್ಲಿ ತೊಡಗಿಕೊಂಡರು. ಅವರಿಗೆ ನಾಲ್ವರು ಮಕ್ಕಳೂ ಹುಟ್ಟಿದರು. ಅವರಲ್ಲಿ ದೈವಭಕ್ತಿಯು ಸುಪ್ತವಾಗಿದ್ದರೂ "ಆಳವಂದಾರ್" ಯಾಮುನರು ಮುಂದೆ ಬಹು ಕಾಲ ಸಂಸಾರದಲ್ಲಿಯೇ ಮುಳುಗಿ ಹೋಗಿದ್ದರು. ನಾಥಮುನಿಗಳ ಮೊಮ್ಮಗನಾಗಿದ್ದ ಯಾಮುನರು - ಮುಂದೆ ತಮ್ಮ ಅಧ್ಯಾತ್ಮದ ಆಸ್ತಿಯನ್ನು ಸ್ವೀಕರಿಸುವ ಕಾಲವೂ ಬಂತು. ಇತ್ತ ನಾಥಮುನಿಯ ಶಿಷ್ಯರಾದ ಉಯ್ಯಕ್ಕೊಂಡಾರ್ ಅವರ ಪ್ರಮ ಶಿಷ್ಯ - ರಾಮ ಮಿಶ್ರರು, ತಮ್ಮ ಗುರುವಿಗೆ ಕೊಟ್ಟ ವಚನವನ್ನು ಪೂರೈಸಲು ಸಮಯ ಕಾಯುತ್ತಿದ್ದರು. ತಮ್ಮಲ್ಲಿರುವ ಅಧ್ಯಾತ್ಮ ನಿಧಿಯನ್ನು ಎಂದು ಯಾಮುನರಿಗೆ ತಲುಪಿಸಿಯೇನೋ ಎಂದು ರಾಮ ಮಿಶ್ರರೂ ಹಂಬಲಿಸುತ್ತಿದ್ದರು. ಜೀವನದ ಪರಮಗುರಿ ಏನು ಎಂಬುದನ್ನು ಯಾಮುನರಿಗೆ ನೆನಪಿಸಿ, ಶ್ರೀ ವೈಷ್ಣವ ಪರಂಪರೆಯನ್ನು ಬೆಳೆಸುವ ಕಾರ್ಯವನ್ನು ಯಾಮುನರ ಉಡಿಯಲ್ಲಿ ಹಾಕಿ ಕಣ್ಣುಮುಚ್ಚಬೇಕೆಂದು ರಾಮ ಮಿಶ್ರರು ತವಕಿಸುತ್ತಿದ್ದರು.

ಆದರೆ ಆಗ ವೈಭವದ ಲೌಕಿಕ ಬದುಕನ್ನು ಸಾಗಿಸುತ್ತಿದ್ದ ಯಾಮುನರನ್ನು ಸಂಪರ್ಕಿಸುವುದೇ - ರಾಮ ಮಿಶ್ರರ ಎದುರಿಗಿದ್ದ ಸವಾಲಾಗಿತ್ತು. ಆರು ತಿಂಗಳ ಕಾಲ ಕಾದು, ಕೊನೆಗೂ ಅವರ ಭೇಟಿಯನ್ನು ಪಡೆದರಂತೆ. ಉಭಯ ಕುಶಲೋಪರಿಯಾದ ನಂತರ, ರಾಮ ಮಿಶ್ರರ ಭೇಟಿಯ ಕಾರಣವನ್ನು ಅವರು ಕೇಳಿ ತಿಳಿದುಕೊಂಡರು. "ನಾಥಮುನಿಯು ತಮಗೆ ತಲುಪಿಸುವಂತೆ ಒಂದು ನಿಧಿಯನ್ನು ಇಟ್ಟಿದ್ದಾರೆ. ಅವರ ಮೊಮ್ಮಗನಾದ ನಿಮಗೆ ಅದನ್ನು ತಲುಪಿಸಲು ನಾನು ಬಂದಿದ್ದೇನೆ" ಎಂದಾಗ, ಯಾಮುನರು - "ಯಾವ ನಿಧಿ ? ಅದೆಲ್ಲಿದೆ ? " ಎಂದು ಕುತೂಹಲ ತೋರಿದರು.

"ಆ ನಿಧಿ ಬೇಕಾದರೆ ನೀವು ನನ್ನೊಡನೆ ಬರಬೇಕು. ಎರಡು ನದಿಗಳ ಮಧ್ಯದಲ್ಲಿ ಏಳು ಗೋಡೆಗಳ ನಡುವೆ - ಆ ನಿಧಿ ಇದೆ. ಒಂದು ಘಟಸರ್ಪವು ಆ ನಿಧಿಯನ್ನು ಕಾಯುತ್ತಿದೆ. ಹನ್ನೆರಡು ವರ್ಷಕ್ಕೊಮ್ಮೆ ಒಬ್ಬ ರಾಕ್ಷಸನು ಬಂದು ಈ ನಿಧಿಯನ್ನು ಸಂದರ್ಶಿಸಿ ಹೋಗುತ್ತಾನೆ. ಮಂತ್ರಪೂರ್ವಕವಾಗಿ ಆರಾಧನೆಯನ್ನು ಮಾಡಿದಾಗ ಮಾತ್ರವೇ ಈ ನಿಧಿಯು ಲಭ್ಯವಾಗುತ್ತದೆ..." ಎಂದು ಒಗಟಿನಂತೆ, ಪೌರಾಣಿಕ ಧಾಟಿಯಲ್ಲಿ ರಾಮ ಮಿಶ್ರರು ಹೇಳಿದಾಗ, ಯಾಮುನರು ಸಹಭಾವವನ್ನು ವ್ಯಕ್ತಪಡಿಸಿ, ರಾಮ ಮಿಶ್ರರನ್ನು ಹಿಂಬಾಲಿಸಲು ಒಪ್ಪಿ, "ನನ್ನ ಸೇವಕರನ್ನು ನಮ್ಮ ಸಹಾಯಕ್ಕಾಗಿ ಕರೆತರುತ್ತೇನೆ.." ಎಂದಾಗ, ರಾಮ ಮಿಶ್ರರು ನಕ್ಕರು. "ಯಾವ ಸೇವಕರ ಸಹಾಯದ ಅಗತ್ಯವೇ ಇಲ್ಲದಂತಹ ನಿಧಿಯಿದು. ನೀವು ಒಬ್ಬರೇ ಬರಬೇಕು" ಎಂದು ಹೇಳಿ ಯಾಮುನರನ್ನು ಒಪ್ಪಿಸಿದರು.

ಹಾಗೆ ಯಾಮುನರ ಜೊತೆಯಾಗಿ ಹೋಗುತ್ತಿದ್ದ ರಾಮ ಮಿಶ್ರರು ಆಧ್ಯಾತ್ಮಿಕ ಸಂಭಾಷಣೆಗಳಲ್ಲಿ ತೊಡಗಿಕೊಂಡರು. ಭಗವದ್ಗೀತೆಯನ್ನು ತನ್ಮಯತೆಯಿಂದ ಹಾಡತೊಡಗಿದರು. ಗೀತೆಯ ಶ್ಲೋಕಗಳು ಯಾಮುನರ ಅಂತರಂಗವನ್ನು ಆಗ  ಪ್ರಚೋದಿಸತೊಡಗಿದವು. ಅಧ್ಯಾತ್ಮದ ಹಾದಿಯಿಂದ ಬಹುಕಾಲ ವಿಮುಖರಾಗಿದ್ದ ಯಾಮುನರಿಗೆ ಸತ್ಸಂಗವು ಒದಗಿದಂತಾದಾಗ ಪೂರ್ವ ಸ್ಮರಣೆಯು ಮರುಕಳಿಸತೊಡಗಿತು. ಹಳೆಯ ನೆನಪುಗಳಿಂದ ಭಾವುಕರಾಗಿ, ಕಣ್ಣೀರು ಹರಿಯತೊಡಗಿತು. "ಗುರುಗಳೇ, ಇಂದಿನಿಂದ ನಾನು ನಿಮ್ಮ ಶಿಷ್ಯ. ಗೀತೆಯನ್ನು ಸಾದ್ಯಂತವಾಗಿ, ನಾನು ಮತ್ತೊಮ್ಮೆ ಅಧ್ಯಯನ ಮಾಡಬೇಕು.." ಎಂದರು.

"ಮಗೂ, ಗೀತೆಯ ಅಧ್ಯಯನಕ್ಕೆ ಸುದೀರ್ಘ ಕಾಲ ಬೇಕಾಗುತ್ತದೆ. ಇಲ್ಲೇ ನಾವು ತಂಗಬೇಕಾಗುತ್ತದೆ. ಅದಕ್ಕಾಗಿ ನಿನ್ನ ಕೌಟುಂಬಿಕ ವ್ಯವಸ್ಥೆಯ ನಿರ್ವಹಣೆಗೆ ಬೇಕಾದ ಪರ್ಯಾಯ ವ್ಯವಸ್ಥೆಯನ್ನು ಮಾಡಿದರೆ - ಆಗ ನಿಶ್ಚಿಂತೆಯಿಂದ ಅಧ್ಯಯನ ಮಾಡಬಹುದು.." ಎಂದರು ರಾಮ ಮಿಶ್ರರು. ಒಪ್ಪಿದ ಯಾಮುನರು ತನ್ನ ಸಾಂಸಾರಿಕ ಜವಾಬ್ದಾರಿಗಳನ್ನು ಮಕ್ಕಳಿಗೆ ವಹಿಸಿ ಕೊಟ್ಟರು. ಏಕಾಗ್ರ ಅಧ್ಯಯನಕ್ಕೆ ಸಿದ್ಧರಾದರು.

 ಗೀತಾ ಪ್ರವಚನವು ಮುಂದೆ ಸಾಗಿದಂತೆ ಯಾಮುನರನ್ನು ಆವರಿಸಿದ್ದ ಲೌಕಿಕ ಪರದೆಯು ಕಳಚಿಹೋಯಿತು. "ಇಷ್ಟು ವರ್ಷ ಇಂಥ ಅಲೌಕಿಕ ಅನುಭವವನ್ನು ನಾನು ಕಳೆದುಕೊಂಡೆನಲ್ಲ ? ಇಷ್ಟು ಕಾಲ ನಾನು ಎಲ್ಲರನ್ನೂ ಆಳಿದೆ; ವಿನಮ್ರಭಾವವು ನನಗೆ ಬರಲೇ ಇಲ್ಲ. ದೇವರ ಸೇವಕನಾಗುವ ಆನಂದದ ಮುಂದೆ ಇತರರ ಮೇಲಣ ಒಡೆತನವು ಎಷ್ಟರದು ? ಇನ್ನು ಮೇಲೆ ದೇವರ ಸೇವೆಗೇ ನನ್ನ ಜೀವನವು ಮುಡಿಪು. ತಾತನಾದ ನಾಥಮುನಿಯು ಇಟ್ಟಿರುವ "ಧನರಾಶಿ"ಯನ್ನು ಕಟ್ಟಿಕೊಂಡು ನಾನೇನು ಮಾಡಬೇಕು ?" ಎಂದುಕೊಳ್ಳತೊಡಗಿದರು - ಯಾಮುನರು.

ಯಾಮುನರಲ್ಲಿ ಆಗುತ್ತಿದ್ದ ಪರಿವರ್ತನೆಯನ್ನು ಗಮನಿಸುತ್ತಿದ್ದ ರಾಮ ಮಿಶ್ರರು ಗೀತೆಯ ಹದಿನೆಂಟನೆಯ ಅಧ್ಯಾಯದ ಶ್ಲೋಕವನ್ನು ಹೇಳಿದರು.

ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ /
ಅಹಂ ತ್ವಾ ಸರ್ವ ಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ //

ಎಲ್ಲ ಧರ್ಮಗಳನ್ನೂ ಪರಿತ್ಯಜಿಸಿ ನನ್ನಲ್ಲೇ ಶರಣಾಗತಿ ಹೊಂದು. ಅಂಜಿಕೆ ಬೇಡ. ನಾನು ನಿನ್ನನ್ನು ಸರ್ವ ಪಾಪಗಳಿಂದಲೂ ವಿಮೋಚನೆಗೊಳಿಸುವೆನು.

ಗೀತಾ ಪ್ರವಚನವು ಮುಗಿದ ಮೇಲೆ ರಾಮ ಮಿಶ್ರರು ಯಾಮುನರೊಂದಿಗೆ ಪ್ರಯಾಣವನ್ನು ಮುಂದುವರಿಸಿದರು. ನಾಥಮುನಿಗಳು ಇಟ್ಟಿರುವ ನಿಧಿಯು ಇನ್ನೇಕೆ ? ಎಂಬ ಭಾವನೆಯೊಂದಿಗೇ ಯಾಮುನರೂ ಗುರುಗಳೊಂದಿಗೆ ಹೆಜ್ಜೆ ಹಾಕುತ್ತಿದ್ದಾರೆ. ಯಾಮುನರ ಮನಸ್ಸನ್ನು ಓದಿದ್ದರೂ ರಾಮ ಮಿಶ್ರರು ಮಾತ್ರ ಏನೂ ತಿಳಿಯದಂತೆ ಗಂಭೀರವಾಗಿ ನಡೆದಿದ್ದಾರೆ. ಗುರುಗಳಿಗೆ ಏನನ್ನೂ ಪ್ರತಿಹೇಳುವ ಧೈರ್ಯ ಯಾಮುನರಿಗಿಲ್ಲ. ಅಂತೂ ಕೊನೆಗೆ - ಆ ನಿಧಿ ಇರುವ ಸ್ಥಳವನ್ನು  ಇಬ್ಬರೂ ತಲುಪಿದರು. ಹೊಳೆಯನ್ನು ದಾಟಿ, ಶ್ರೀ ರಂಗನಾಥನ ದೇವಾಲಯದ ಪ್ರಾಕಾರಗಳನ್ನು ದಾಟಿ ಬಂದರು. ದೇವರ ಸಮ್ಮುಖದಲ್ಲಿ ನಿಂತರು.

ಶೇಷಸರ್ಪದ ಮೇಲೆ ಪವಡಿಸಿದ್ದಾನೆ - ಶ್ರೀಮನ್ನಾರಾಯಣ. ಅವನ ಪಾದದ ಬಳಿಯಲ್ಲಿ ಶ್ರೀ ಲಕ್ಷ್ಮಿ. ಈ ದಿವ್ಯ ದೃಶ್ಯವನ್ನು ಯಾಮುನರಿಗೆ ತೋರಿಸುತ್ತ, ರಾಮ ಮಿಶ್ರರು ಹೇಳಿದರು -

"ಇಗೋ ಇಲ್ಲಿದೆ ! ನಿಮ್ಮ ತಾತ ಇಟ್ಟುಹೋದ ನಿಧಿ. ಇಲ್ಲಿಗೆ ನನ್ನ ಕರ್ತವ್ಯ ಮುಗಿಯಿತು.."

ಶ್ರೀ ರಂಗನಾಥನಿಗೆ ಪೊಡಮಟ್ಟ ಯಾಮುನರಿಗೆ ಅನೂಹ್ಯ ಅನುಭವವಾಯಿತು. ಅಂದಿನಿಂದ ಅವರು ರಂಗನಾಥನ ದಾಸ್ಯವೃತ್ತಿ ಕೈಗೊಂಡರು. ಅಜ್ಜ ನಾಥಮುನಿಗಳು ರೂಢಿಸಿ ಪ್ರಚಾರಕ್ಕೆ ತಂದಿದ್ದ ಶ್ರೀ ಸಂಪ್ರದಾಯವನ್ನು ಪುನಃ ಪ್ರತಿಷ್ಠಾಪಿಸುವ ಮಹತ್ಕಾರ್ಯದಲ್ಲಿ ಯಾಮುನರು ನಿರತರಾದರು.

ಯಾಮುನರಿಗೆ ರಾಮ ಮಿಶ್ರರು ತೋರಿಸಿದ್ದ ನಿಧಿಯೇ ಶ್ರೀರಂಗ ಕ್ಷೇತ್ರದ ಒಡೆಯ ಶ್ರೀ ರಂಗನಾಥ. ಪೌರಾಣಿಕ ಹಿನ್ನೆಲೆಯಂತೆ - ಶ್ರೀ ರಂಗನಾಥನು ಇಕ್ಷ್ವಾಕು ವಂಶದ ಅರಸರ ಮನೆದೇವರು. ಶ್ರೀ ರಾಮನು ತನ್ನ ಪಟ್ಟಾಭಿಷೇಕದ ನಂತರ ಶ್ರೀ ರಾಮನಿರುವ ಅಯೋಧ್ಯೆಯನ್ನು ಬಿಟ್ಟು ಲಂಕೆಗೆ ಹಿಂದಿರುಗಲು ಹಿಂಜರಿಯುತ್ತಿದ್ದ ವಿಭೀಷಣನಿಗೆ ತನ್ನ ಮನೆದೇವರಾದ ರಂಗನಾಥನ ಮೂರ್ತಿಯನ್ನೇ ಕೊಟ್ಟು, ಸಂತೈಸಿ, ಲಂಕೆಗೆ ಕಳಿಸಿದ್ದನು ಎಂಬ ಕತೆಯಿದೆ. ಈ ವಿಗ್ರಹವನ್ನು ಲಂಕೆಯಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಂಕಲ್ಪದಿಂದ ವಿಭೀಷಣನು ಕೊಂಡೊಯ್ಯುತ್ತಿದ್ದಾಗ ದಾರಿಯಲ್ಲಿ, ಶ್ರೀರಂಗ ಕ್ಷೇತ್ರದಲ್ಲಿ ನೆಲೆಸಬೇಕೆಂಬುದು ದೈವೇಚ್ಛೆಯೆಂದು ವಿಭೀಷಣನಿಗೆ ತೋರಿತಂತೆ. ಆದ್ದರಿಂದ ವಿಭೀಷಣನು ಶ್ರೀರಂಗದಲ್ಲಿಯೇ ರಂಗನಾಥನನ್ನು ಪ್ರತಿಷ್ಠಾಪಿಸಿದನಂತೆ. ಚಿರಂಜೀವಿಯಾದ ವಿಭೀಷಣನು ಈಗಲೂ ಹನ್ನೆರಡು ವರ್ಷಕ್ಕೊಮ್ಮೆ ಶ್ರೀರಂಗಕ್ಕೆ ಬಂದು, ರಂಗನಾಥನ ದರ್ಶನ ಪಡೆಯುವನು ಎಂಬುದು ನಂಬಿಕೆ ಮತ್ತು ಸ್ಥಳ ಪುರಾಣ.

ಯಾಮುನಾಚಾರ್ಯರು ಗುರು ಉಯ್ಯಕ್ಕೊಂಡಾರ್ (ರಾಮ ಮಿಶ್ರ) ಅವರಿಂದ ಆಧ್ಯಾತ್ಮಿಕ ದೀಕ್ಷೆಯನ್ನು ಪಡೆದ ನಂತರ, "ಸಿದ್ಧಿ ತ್ರಯ" ಮುಂತಾದ ಹಲವಾರು ಗ್ರಂಥಗಳನ್ನು ರಚಿಸಿದರು. ಉಪನಿಷದ್ವಾಕ್ಯಗಳನ್ನು ಇವರು ವಿಶಿಷ್ಟಾದ್ವೈತ ದರ್ಶನಕ್ಕೆ ಅನ್ವಯಗೊಳಿಸಿಕೊಂಡ ರೀತಿಯು ವಿದ್ವಜ್ಜನರ ಪ್ರಶಂಸೆಗೆ ಪಾತ್ರವಾಗಿದೆ. "ಬ್ರಹ್ಮ ಒಂದೇ; ಅದಕ್ಕೆ ಎರಡನೆಯದಿಲ್ಲ" ಎಂಬುದನ್ನು ತಾರ್ಕಿಕವಾಗಿ ಸಾಧಿಸುತ್ತ, ತಮ್ಮ ಸಿದ್ಧಾಂತವಾದ ವಿಶಿಷ್ಟಾದ್ವೈತವು ಇದನ್ನೇ ಸಾರುತ್ತದೆ ಎಂದು ಸಾಧಿಸಿ ಸ್ಥಾಪಿಸಿದವರು - ಯಾಮುನಾಚಾರ್ಯರು. ಶ್ರೀ ರಾಮಾನುಜರು ಮುಂದೆ ರಚಿಸಿದ ಶ್ರೀಭಾಷ್ಯದಲ್ಲಿ ಅವರು - ಯಾಮುನರ "ಸಿದ್ಧಿ ತ್ರಯ" ಗ್ರಂಥದ ತಿರುಳನ್ನು ಧಾರಾಳವಾಗಿ ಉದಾಹರಿಸಿದ್ದಾರೆ. ಇನ್ನೂ ಅನೇಕ ಗ್ರಂಥಗಳನ್ನು ರಚಿಸಿದ್ದರೂ ಯಾಮುನರು ಅಂದುಕೊಂಡ ಅವರ ಸಂಕಲ್ಪಗಳೆಲ್ಲವೂ ಸಾಕಾರವಾಗಲಿಲ್ಲ. ಯಾಮುನರ ದೇಹವನ್ನು ಮುಪ್ಪು ಆವರಿಸಿಕೊಂಡಿತ್ತು. ತಮ್ಮ ಕೊನೆಯ ದಿನಗಳಲ್ಲಿ, ಯಾಮುನರು "ಸ್ತೋತ್ರ ರತ್ನ" ಎಂಬ ಶ್ರೇಷ್ಠ ಕೃತಿಯನ್ನು ರಚಿಸಿ, ಅದನ್ನು ಶ್ರೀ ರಂಗನಾಥನ ಮುಂದೆ ಹಾಡಿಕೊಂಡರು. ಹೀಗೆ ಯಾಮುನರು ಉಳಿಸಿಹೋದ ಸಂಕಲ್ಪಿತ ಕಾರ್ಯಗಳನ್ನು, ಅವರೇ ತಮ್ಮ ಕೊನೆಗಾಲದಲ್ಲಿ ಇಚ್ಛಿಸಿದಂತೆ, ಅವರ ಮಾನಸ ಶಿಷ್ಯರಾದ ಶ್ರೀ ರಾಮಾನುಜರು - ಮುಂದೆ ಸಮರ್ಪಕವಾಗಿ ಪೂರೈಸಿದರು. ಈ ಸಾಂಸ್ಕೃತಿಕ ಪರಂಪರೆಯು ಬೆಳೆಯಿತು.

ಶ್ರೀ ಯಾಮುನಾಚಾರ್ಯರು ಅಂತಿಮ ದಿನಗಳಲ್ಲಿ ತಮ್ಮೊಡನಿದ್ದ ಪೆರಿಯ ನಂಬಿ, ಮಹಾಪೂರ್ಣ ಮುಂತಾದ ಹಿರಿಯ ಶಿಷ್ಯರಿಗೆ ಉಪದೇಶಾಮೃತವನ್ನು ನೀಡುತ್ತಿದ್ದರು. "ಎಂದಿಗೂ ರಂಗನಾಥನ ಪೂಜೆಯನ್ನು ತಪ್ಪಿಸಬೇಡಿ. ತಿರುಪ್ಪಾಣಾಳ್ವಾರರ ಆರಾಧನೆಯನ್ನು ತಪ್ಪಿಸಬೇಡಿ. ಅಂತೂ ಕೊನೆಗೆ ನನಗೆ ಬಿಡುಗಡೆಯು ಸಿಗುತ್ತಿದೆ. ಯಾರೂ ಆತಂಕಗೊಳ್ಳಬಾರದು. ಪ್ರಪನ್ನನಾದವನು (ಆತ್ಮ ಸಮರ್ಪಣೆ ಮಾಡಿಕೊಂಡವನು) ಯಾವತ್ತೂ ತನ್ನ ಭವಿಷ್ಯದ ಚಿಂತೆ ಮಾಡುವುದಿಲ್ಲ. ಎಲ್ಲವೂ ಭಗವದಿಚ್ಛೆ. ಕರ್ಮದ ಫಲವೇ ಈ ಜೀವನ. ಕರ್ಮ ತೀರಿತೆಂದರೆ ಈ ಜೀವನವೂ ಕೊನೆಗೊಳ್ಳಬೇಕು. ನೀವೆಲ್ಲರೂ ನನ್ನ ಇಚ್ಛೆ ಇದ್ದಷ್ಟು ಕಾಲ ಬದುಕಿರಬೇಕು. ನನ್ನ ನಂತರ ಪೆರಿಯಾರರನ್ನು ನಿಮ್ಮ ಮಾರ್ಗದರ್ಶಕರಾಗಿ ಅನುಸರಿಸತಕ್ಕದು. ಇನ್ನು ಹೆಚ್ಚು ಕಾಲ ನನಗೆ ಉಳಿದಿಲ್ಲ. ಈಗಲೇ ಮಹಾಪೂರ್ಣನು ಕಾಂಚಿಗೆ ಹೋಗಿ ರಾಮಾನುಜರನ್ನು ಕರೆತನ್ನಿ. ನನ್ನ ತಾತ ನಾಥಮುನಿಯು ಇಟ್ಟ ನಿಧಿಯನ್ನು ನಾನು ಕಣ್ಣು ಮುಚ್ಚುವ ಮುನ್ನ ರಾಮಾನುಜನಿಗೆ ತಲುಪಿಸಬೇಕು..."

ಆದರೆ ಅದಾಗಲೇ ಹಣ್ಣು ಹಣ್ಣು ಮುದುಕರಾಗಿದ್ದ ಯಾಮುನರು ರಾಮಾನುಜರನ್ನು ಕರೆತರುವ ವರೆಗೆ ಬದುಕಿ ಉಳಿಯಲಿಲ್ಲ. ವೃಷಭ ಮಾಸದಲ್ಲಿ ನಡೆಯುವ ಶ್ರೀರಂಗನ ವಿಶೇಷೋತ್ಸವದಲ್ಲಿಯೂ ಭಾಗಿಯಾದರು. ಅಂದು ಶ್ರೀರಂಗನನ್ನು ಕಣ್ದಣಿಯೆ ಮನದಣಿಯೆ ಪ್ರಾರ್ಥಿಸಿ, ಅಲ್ಲಿ ನೆರೆದಿದ್ದ ಭಕ್ತಗಡಣ ಮತ್ತು ಶಿಷ್ಯಗಡಣಕ್ಕೆ ನಮಸ್ಕರಿಸಿದರು. "ನಾನು ತಿಳಿದೋ ತಿಳಿಯದೆಯೋ ಮಾಡಿರಬಹುದಾದ ಅಪಚಾರಗಳನ್ನೆಲ್ಲ ಮರೆತು ನನ್ನನ್ನು ಕ್ಷಮಿಸಿ. ಕರ್ತವ್ಯವನ್ನು ಮರೆಯಬೇಡಿ..." ಎಂದರು.

ಯಾಮುನರು ಪದ್ಮಾಸನದಲ್ಲಿ ಕುಳಿತರು. ಪ್ರಾರ್ಥನಾ ಶ್ಲೋಕಗಳನ್ನು ಪಠಿಸುವಂತೆ ಶಿಷ್ಯರಿಗೆ ಹೇಳಿದರು. ಶ್ವಾಸವನ್ನು ಬಂಧಿಸಿದರು. ತಮ್ಮ ಆಚಾರ್ಯರನ್ನು ನೆನಸಿಕೊಂಡರು. ಉತ್ಸವದ ಆರನೆಯ ದಿನದಂದು ಮಧ್ಯಾಹ್ನ ಯಾಮುನರು ದೇಹ ತ್ಯಜಿಸಿದರು.

ಆದರೆ ಯಾಮುನರ ಕೊನೆಯ ಆಸೆಯು ಫಲಿಸಲಿಲ್ಲ. ರಾಮಾನುಜರು ಬಂದು ತಲುಪಲಿಲ್ಲ. ಯಾಮುನರ ಪೂರ್ವಾಶ್ರಮದ ಪುತ್ರರಾದ ಪೂರ್ಣರನ್ನು ಮುಂದಿಟ್ಟುಕೊಂಡು ಅಂತ್ಯ ಸಂಸ್ಕಾರದ ಸಿದ್ಧತೆ ನಡೆಸಲಾಯಿತು. ಕಾವೇರಿಯ ತೀರದಲ್ಲಿ ತೋಡಿದ್ದ ಹೊಂಡದಲ್ಲಿ ಪಾರ್ಥಿವ ಶರೀರವನ್ನು ಇರಿಸಿದರು. ಆಗಲಾದರೂ ರಾಮಾನುಜರು ಬರಬಹುದು ಎಂದುಕೊಂಡು ಸುತ್ತಲೂ ವೀಕ್ಷಿಸುತ್ತಿದ್ದರು. ರಾಮಾನುಜರನ್ನು ಕರೆತರಲ್ಲು ಹೋಗಿದ್ದ ಶಿಷ್ಯ ಮಹಾಪೂರ್ಣರಿಗೆ ಗುರುಗಳ ಅಂತ್ಯ ಕಾಲದಲ್ಲಿ ಜೊತೆಗಿರುವ ಭಾಗ್ಯವಿರಲಿಲ್ಲ. ಅವರು ಅವಸರದಿಂದ ರಾಮಾನುಜರನ್ನು ಕರೆತಂದಾಗ, ಶ್ರೀರಂಗದ ಹೊರವಲಯದಲ್ಲಿಯೇ "ಆಳವಂದಾರರು ಇನ್ನಿಲ್ಲ" ಎಂದು ತಿಳಿದಾಗ ಅವರಿಬ್ಬರೂ ಹತಾಶೆಯಿಂದ ಕುಸಿದರು. "ಬದುಕಿದ್ದಾಗ ಯಾಮುನರನ್ನು ನೋಡಿ ಮಾತನಾಡುವ ಪುಣ್ಯವು ನನಗೆ ಇಲ್ಲವಾಯಿತೆ ?" ಎಂದು ರಾಮಾನುಜರೂ ಶೋಕಿಸಿದರು. ಸಮಾಧಿಯಾಗುವ ಮುನ್ನ ಅವರ ಶರೀರದ ದರ್ಶನವನ್ನಾದರೂ ಮಾಡುತ್ತೇನೆ" ಎಂದುಕೊಂಡ ರಾಮಾನುಜರು - ಸಮಾಧಿಯ ಸ್ಥಳಕ್ಕೆ ಧಾವಿಸಿದರು.

ಇನ್ನೂ ತೇಜಸ್ಸನ್ನು ಹೊರಸೂಸುತ್ತಿದ್ದ ಯಾಮುನರ ಕಳೇಬರವನ್ನು - ರಾಮಾನುಜರು ದೃಷ್ಟಿಯಿಂದಲೇ ಹೀರಿಕೊಂಡರು. "ನನ್ನ ಸರ್ವಸ್ವವೂ ಇನ್ನು ನಿನ್ನದೇ. ಇದನ್ನು ಧರಿಸಿ ಧರ್ಮದ ನಾವೆಯನ್ನು ಮುನ್ನಡೆಸು.." ಎಂಬಂತೆ ಮಲಗಿದ್ದ ಯಾಮುನಾಚಾರ್ಯರ ತಪಸ್ಸಿನ ಶಕ್ತಿಯನ್ನೆಲ್ಲ ಹೀರುವಂತೆ ರಾಮಾನುಜರು ಪ್ರಕಟವಾದರು; ಪಾದವನ್ನು ಮುಟ್ಟಿ ನಮಸ್ಕರಿಸಿದರು.

"ಓ ಮುನಿಶ್ರೇಷ್ಠರೇ, ತಮ್ಮ ಸಂಕಲ್ಪದಂತೆ - ಪರಾಶರರಿಗೆ ಸಲ್ಲಿಸುವ ಕೃತಜ್ಞತೆಯ ರೂಪದಲ್ಲಿ ಶ್ರೀ ವೈಷ್ಣವ ಧರ್ಮ ಪ್ರಸಾರ ನಡೆಯುತ್ತದೆ. ನಮ್ಮಾಳ್ವಾರರ ಕೃತಿಯಾದ "ತಿರುವಾಯ್ ಮೊಳಿ"ಗೆ ವಾಕ್ಯಾರ್ಥವನ್ನು ಬರೆದು ಆಳ್ವಾರರಿಗೆ ಪ್ರೀತಿಯಿಂದ ಸಮರ್ಪಿಸುತ್ತೇನೆ. ವ್ಯಾಸಮಹರ್ಷಿಯ ವೇದಾಂತ ಸೂತ್ರಗಳಿಗೆ ವಿಶಿಷ್ಟಾದ್ವೈತದ ದೃಷ್ಟಿಯಲ್ಲಿ ಭಾಷ್ಯವನ್ನೂ ಬರೆಯುತ್ತೇನೆ. ತಮ್ಮ ಕೊನೆಗಾಲದ ಈ ಮೂರೂ ಆಸೆಗಳನ್ನು ನೆರವೇರಿಸುತ್ತೇನೆ. ಹಾಗೆ ಪ್ರತಿಜ್ಞೆ ಮಾಡುತ್ತೇನೆ..." ಎಂದು ರಾಮಾನುಜರು ಸಂಕಲ್ಪಿಸಿಕೊಂಡರು. ಮುಂದೆ, ಈ ಪರಂಪರೆಯ ಉತ್ತರಾಧಿಕಾರಿಯೂ ಆದರು.

                                         ******  ******  ******  ******  ******

ಉದ್ದೇಶಿತ ಎಲ್ಲ ಆಸೆಗಳೂ ಒಂದೇ ಬದುಕಿನಲ್ಲಿ ಪೂರ್ಣವಾಗಲಾರವು. ಲೋಕವ್ಯಾಪಾರಗಳನ್ನು ಹೆಚ್ಚಿನ ಹೊಣೆಗಾರಿಕೆಯಿಂದ ನಿರ್ವಹಿಸಬಲ್ಲ ಜೀವನ ಪಾತ್ರಗಳು ಅಲ್ಲೊಮ್ಮೆ ಇಲ್ಲೊಮ್ಮೆ ಮಾತ್ರವೇ ಜನ್ಮ ತಾಳುತ್ತವೆ. ತಮ್ಮ ನಿಗದಿತ ಜೀವಿತಾವಧಿಯಲ್ಲಿ ಅಸಾಮಾನ್ಯ ಎನ್ನಿಸಿಕೊಳ್ಳುವ ಸಾಧನೆಗಳನ್ನು ಅನಾಯಾಸವಾಗಿ ನಿರ್ವಹಿಸಿಬಿಡುತ್ತವೆ. ದೈವಕ ಉಪಕರಣಗಳಂತೆ ಭಾಸವಾಗುವ ಅಂತಹ ಬದುಕುಗಳಲ್ಲಿ ತರ್ಕಾತೀತವಾದ ತಿರುವುಗಳೂ ಸಂಭವಿಸುತ್ತವೆ ! ಬದುಕಿನ ಓಟವನ್ನು ಗಮನಿಸಿದರೆ - ಶ್ರೀ ಯಾಮುನಾಚಾರ್ಯರೂ ಅಂತಹ ಒಂದು ದೈವಕ ಉಪಕರಣ ಅನ್ನಿಸುತ್ತದೆ.

                                          ******  ******  ******  ******  ****** 

ಯಾಮುನರ ಬದುಕು ಸಾಧನೆಗಳಿಗೆ ಹೋಲಿಸಿದರೆ ಇಲ್ಲಿ ನಿರೂಪಿಸಲ್ಪಟ್ಟ ಭಾಗವು ತುಂಬ ಕಿರಿದೆನ್ನಿಸುವಂಥದ್ದೇ ಹೌದು. ಆದರೆ ಪ್ರಸ್ತುತದ ಸಾಮಾಜಿಕ ಕೋಲಾಹಲಗಳನ್ನು ಗಮನಿಸುವವರಿಗೆ - ಈ ಕಥಾನಕದ ಮಹತ್ವವು ಅರಿವಿಗೆ ಬರುತ್ತದೆ. ನಿಜವಾದ ಪಾಂಡಿತ್ಯವು - ಯಾವತ್ತೂ ಅಡ್ಡದಾರಿಯ ಮುಸುಕಿನ ಗುದ್ದಾಟ ಅಥವ ಮೂರ್ಖ ವ್ಯಾಖ್ಯಾನಗಳಿಗೆ ತೊಡಗುವುದಿಲ್ಲ ಅಥವ ಹಾಗೆ ತೊಡಗಿಕೊಳ್ಳಬಾರದು ಎಂಬುದು ಈ ಕಥೆಯ ಹೂರಣ.

ಯಾವುದೇ ಪಂಡಿತ ಎಂದೆನ್ನಿಸಿಕೊಂಡವರು ತಮ್ಮತಮ್ಮ ಪಾಂಡಿತ್ಯಕ್ಕೆ ಶೋಭೆ ತರುವಂತೆ ಬದುಕನ್ನು ಸಾಗಿಸಬೇಕಾಗುತ್ತದೆ. ವ್ಯತಿರಿಕ್ತವಾದದ್ದೇ ಆದರೆ... ಯಾವುದೇ ಅತ್ಯುನ್ನತ ಹುದ್ದೆ ಅಥವ ಸ್ಥಾನವು ಅಂತಹ ಪಂಡಿತರ ಮಾನವನ್ನು ತಾನೇತಾನಾಗಿ  ರಕ್ಷಿಸಲಾಗುವುದಿಲ್ಲ. ತತ್ವ ವಿಚಾರಗಳು, ಅಧ್ಯಾತ್ಮದ ನಡೆಯಲ್ಲಿ ಎದುರಾಗುವ ಜಟಿಲ ಸಮಸ್ಯೆಗಳು, ಸಾಹಿತ್ಯಾತ್ಮಕ ಒಗಟು ರಹಸ್ಯಗಳು ಮುಂತಾದ ವಿಷಯಗಳ ಜಿಜ್ಞಾಸೆ, ಪಂಡಿತ ಪರಿಧಿಯಲ್ಲಿ ಜ್ಞಾನವಿಸ್ತಾರದ ದೃಷ್ಟಿಯಿಂದ ನಡೆಸಲಾಗುವ ಯಾವುದೇ ವಾದ ತಾರ್ಕಿಕತೆಗಳಿಗೆ ಅರ್ಥವಿದೆ; ಅದರಿಂದ ಉಭಯತ್ರರಿಗೂ ಪ್ರಯೋಜನವಿದೆ; ಇರಬೇಕು. ಆದರೆ ಸ್ವಾರ್ಥಲೇಪಿತ ಅಥವ ಅಹಂಕಾರವನ್ನು ಸ್ಥಾಪಿಸಲೋಸುಗ "ಹಫ಼್ತಾ" ಧಂದೆಯನ್ನು ನಡೆಸುವ ಶೈಲಿಯ ಕೀಳುಮಟ್ಟಕ್ಕೆ "ಪಂಡಿತ ತರ್ಕಗಳು" ಇಳಿದಾಗ - ಪಂಡಿತ ಮಾತ್ರ ಸೋಲುವುದಲ್ಲ; ಪಾಂಡಿತ್ಯವೂ ಸೋತುಹೋಗುತ್ತದೆ. ಸಾಮಾಜಿಕ ತಿರಸ್ಕಾರಕ್ಕೆ ಪಾತ್ರವಾಗುತ್ತದೆ. ಇದಕ್ಕೆ ಅಂದಿನ ಪಂಡಿತ - "ವಿದ್ವಜ್ಜನ ಕೋಲಾಹಲನೇ" ಸಾಕ್ಷಿ.

ಸುಮಾರು ೯ ಶತಮಾನಗಳಷ್ಟು ಹಿಂದಿನ ಕತೆಯಿದು. ಮನು ಸ್ಮೃತಿಯೇ ಸಂವಿಧಾನವಾಗಿದ್ದ ಕಾಲವದು. ಇವತ್ತಿನ "ಭಾರತೀಯ ಹಿಂದೂ Code - ಹಿಂದೂ ಕಾನೂನು" ಎಂಬ ಸಂವಿಧಾನ ಭಾಗದಲ್ಲಿ - ಇಂದಿಗೂ ಮನುಸ್ಮೃತಿಯ ಪ್ರಭಾವವಿರುವುದನ್ನು ಗಮನಿಸಬಹುದು.

ಅಂದಿನ ಕಾಲದಲ್ಲಿ ರಾಜಾಶ್ರಯದಲ್ಲಿ, ವಿದ್ವಜ್ಜನರ ಸಮಕ್ಷಮದಲ್ಲಿ ಆಗಾಗ ನಡೆಯುತ್ತಿದ್ದ ಮನೋಮಂಥನಗಳು, ಇಂತಹ ತರ್ಕ ಸಂವಾದಗಳೆಲ್ಲವೂ ಬುದ್ಧಿಯ ಕಸರತ್ತುಗಳು. ಅಂದಿನ ಪಂಡಿತರು ತಾವು ಪಡೆದುಕೊಂಡ ಜ್ಞಾನವನ್ನು - ತಮಗೆ ತಾವೇ ಒರೆಗೆ ಹಚ್ಚಿ ನೋಡುತ್ತಿದ್ದ ಸಂದರ್ಭಗಳೂ ಹೌದು. ತಾವು ಕಲಿತ ವಿದ್ಯೆಯನ್ನು, ತನ್ಮೂಲಕ ತಮ್ಮನ್ನು ತಾವೇ ಪ್ರಯೋಗಕ್ಕೆ ಒಡ್ಡಿಕೊಳ್ಳುತ್ತಿದ್ದ ಪ್ರಾಯೋಗಿಕ ಅವಕಾಶಗಳೂ ಆಗಿ, ಅಂತಹ ಪಂಡಿತ ಘರ್ಷಣೆಗಳು ಜನಾಕರ್ಷಕ ಆಮೋದ ಕೂಟಗಳಾಗಿರುತ್ತಿದ್ದುದೂ ಇತ್ತು. ಜ್ಞಾನವನ್ನು ತಿಕ್ಕಿ ತೇದು ಸುಗಂಧ ಹೊಮ್ಮುತ್ತಿದ್ದುದೂ ಇತ್ತು; ಕೆಲವೊಮ್ಮೆ ವಾದ ಎಂಬುದು ವೈಯ್ಯಕ್ತಿಕ ನೆಲೆಗೆ ಇಳಿದು, ವಕ್ರ ಅಹಂಭಾವದಲ್ಲಿ ಸ್ವಕೇಂದ್ರಿತವಾಗಿ, ದುರ್ಗಂಧದಲ್ಲಿ ಪರ್ಯವಸಾನವಾಗುತ್ತಿದ್ದುದೂ ಇತ್ತು. ಕೋಲಾಹಲನಂತಹ ದುರಭಿಮಾನೀ ಪಂಡಿತರ ಸೊಕ್ಕು ಮುರಿಯುವ ಚಮತ್ಕಾರಿಕ ಭಾಗವಾಗಿಯೂ ಒಮ್ಮೊಮ್ಮೆ ಪ್ರದರ್ಶನಗೊಳ್ಳುತ್ತಿದ್ದರೂ... ಅಲ್ಲಿಯೂ ವ್ಯರ್ಥ ಕಡೆತವೆಂದಾಗದೆ, "ನವನೀತದ" ಸಾಕ್ಷಾತ್ಕಾರವಾಗುತ್ತಿತ್ತು. ಜ್ಞಾನಕ್ಕೆ ಸರ್ವೋಪರಿಯಾದ ಮನ್ನಣೆ ಇದ್ದ ಆ ಪೂರ್ವಕಾಲದಲ್ಲಿ, ಇಂತಹ ಜ್ಞಾನಸಂಧಿ, ಸಂಧಾನ, ಸಂಘರ್ಷಗಳು ಆಗಾಗ ನಡೆಯುತ್ತಲೇ ಇದ್ದುದರಿಂದ ಈ ನೆಲದ ಜ್ಞಾನ ಭಂಡಾರವು ಸಮೃದ್ಧವಾಗುತ್ತಲೇ ಬಂತು. ತನ್ಮೂಲಕ ಸಂದು ಕಡಿಯದಂತೆ ಜ್ಞಾನಪ್ರಸಾರವು ಸಾಗುತ್ತಲೇ ಬಂತು. 

ಖಂಡತುಂಡಗೊಳಿಸಿ ವಿಜಯಪತಾಕೆ ಹಾರಿಸುವುದನ್ನೇ "ವಾದ" ಎಂದುಕೊಂಡಿದ್ದ "ಕೋಲಾಹಲ ಪಂಡಿತರಿಗೆ" ಇಂದಿನಂತೆ - ಅದೊಂದು ಕಾಲದಲ್ಲಿ - ಗ್ರಹಗತಿ ಚೆನ್ನಾಗಿರಲಿಲ್ಲ. ಗುಡ್ಡಕ್ಕೆ ಗುಡ್ಡ ಅಡ್ಡ ಇರುತ್ತದೆ ಎಂಬ ಪೂರ್ವಸ್ಮರಣೆ ಇಲ್ಲದ ಕೆಲವು ಪಂಡಿತರು - ಇಂದೂ ಇದೇ ಬಗೆಯ "ಸ್ವರತಿಯ ಕೋಲಾಹಲ" ಮಾರ್ಗವನ್ನು ಹಿಡಿದಿರುವುದು ಮಾತ್ರ - ಶೋಚನೀಯ. ಮೂರ್ಖ ವಿದ್ಯೆಗಿಂತ - ದಡ್ಡತನವೇ ಶ್ರೇಷ್ಠ. ಸ್ವಸ್ಥ ಬುದ್ಧಿಯು ಸರ್ವ ಶ್ರೇಷ್ಠ.

"ಪಠಕಾಃ ಪಾಠಕಾಶ್ಚೈವ ಯೇ ಚಾನ್ಯೇ ಶಾಸ್ತ್ರಚಿಂತಕಾಃ /ಸರ್ವೇ ವ್ಯಸನಿನೋ ಮೂರ್ಖಾಃ ಯಃ ಕ್ರಿಯಾವಾನ್ ಸ ಪಂಡಿತಃ //" 
(ಶ್ರೀ ಮಹಾಭಾರತ, ವನಪರ್ವ)

"ನಿಜವಾದ ಪಂಡಿತ ಯಾರು ?" ಎಂಬ ಯಕ್ಷನ ಪ್ರಶ್ನೆಗೆ ಯುಧಿಷ್ಠಿರನು ನೀಡಿದ ಉತ್ತರ - "ಧರ್ಮವನ್ನು ಆಚರಣೆಗೆ ತರುವವನೇ - ಪಂಡಿತ". ಅಂದರೆ, ತತ್ವ ಜ್ಞಾನ - ಪಾಂಡಿತ್ಯವನ್ನು ಕ್ರಿಯೆಗೆ ಅಳವಡಿಸಿಕೊಳ್ಳಬಲ್ಲವನೇ ನಿಜವಾದ ಪಂಡಿತ. ಉಪದೇಶಗಳಿಂದ ತನ್ನ ಮತ್ತು ಇತರರ ಬದುಕನ್ನು ಬೆಳಗಿಸುತ್ತ ಬೆಳಗಿಸಿಕೊಳ್ಳುವವನೇ ನಿಜವಾದ ಪಂಡಿತ. ಮಹಾಭಾರತದಲ್ಲಿ ಧರ್ಮದ ಪ್ರತಿನಿಧಿಯಾಗಿ ಚಿತ್ರಣಗೊಂಡ ಧರ್ಮರಾಯನ ಮಾತಿದು.

ಹರಿಯುವ ನೀರಿನಂತೆ ಓಡುವ ಈ ಜೀವನದ ಓಟದಲ್ಲಿ ನಿರಂತರವಾಗಿ ನುಗ್ಗುತ್ತಿರುವ "ಹೊಸ ನೀರಿಗೆ", ಕೆಲವೊಮ್ಮೆ - ಕೆಸರು ನೀರಿಗೂ - ಬದುಕುಗಳು ಮೈಯ್ಯೊಡ್ಡಲೇಬೇಕಾಗುತ್ತದೆ. ಆದರೆ ಗತಕಾಲವನ್ನು "ಹೊಡೆದು ಸಾಯಿಸದೆ" ವಾಸ್ತವದಲ್ಲಿ ಬದುಕಿದರೆ - ಅದೂ ಸಜ್ಜನಿಕೆಯಾಗಿ, ಪಂಡಿತಮಾನ್ಯವಾಗುತ್ತದೆ. ಪಂಡಿತರು ಭಯೋತ್ಪಾದಕರಲ್ಲ. ಆದ್ದರಿಂದ ವಿಕಾರ ಖಂಡನೆಯ ದಂಡನೆಯನ್ನೇ ಜೀವನೋಪಾಯ ಮಾಡಿಕೊಳ್ಳದೆ ಬದುಕನ್ನು ಮಂಡಿಸಬೇಕಾಗುತ್ತದೆ. ಎಲ್ಲರೂ ಬದುಕುವ ಮತ್ತು ಎಲ್ಲರನ್ನೂ ಬದುಕಿಸುವ ಪಂಡಿತ ಹಾದಿಯಿದು. ರೀತಿ ಬೇರೆಯಾದರೂ ಪರಸ್ಪರ ಗೌರವದ ನೀತಿಯು ಬೇರೆಯಾಗದಂತೆ ಸೂಕ್ಷ್ಮವಾಗಿ ಮುನ್ನಡೆಸಬಲ್ಲವನೇ ಪಂಡಿತ. ಯಾಮುನಾಚಾರ್ಯರು - ಅಂತಹ ಉತ್ಕೃಷ್ಟ ಪಂಡಿತರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ.

ಶ್ರೇಷ್ಠತೆ ಎಂಬುದು ಪ್ರಯತ್ನಶೀಲತೆಯ ಫಲ; ಪುಸ್ತಕದ ಪಾಂಡಿತ್ಯದಿಂದಲೇ ಶ್ರೇಷ್ಠತೆ ಸಂಭವಿಸುವುದಿಲ್ಲ. ಯಾವುದೇ ಔನ್ನತ್ಯದ ಸಾಕಾರವು - ಶಿಸ್ತು, ಸರಳತೆ, ಸಜ್ಜನಿಕೆ, ಅಧ್ಯಯನ ಮತ್ತು ಅನಂತ ಸತ್ಯದ ಅನುಷ್ಠಾನದಿಂದ ಪ್ರಾಪ್ತವಾಗುವಂಥದ್ದು. ಪ್ರಕೃತಿ ಭಾವದ ಸೃಷ್ಟಿ ಸಹಜತೆಯಲ್ಲಿ ಮನುಷ್ಯ ಜೀವಿಗಳ ಸ್ವಾಭಾವಿಕ ಬುದ್ಧಿ- ಭಾವಗಳ ಆರೋಗ್ಯಕರ ಸಂವಹನದಿಂದ, ಸೃಷ್ಟಿಯ ಸ್ವಾಭಾವಿಕ ನಡೆಯೊಂದಿಗೇ ಹೆಜ್ಜೆಯಿಟ್ಟು ಪಯಣಿಸಬಲ್ಲವರಿಗೆ ಮಾತ್ರ - ಯಾವುದೇ ನಿಗೂಢ ಶ್ರೇಷ್ಠತ್ವದ ಅನುಭವವಾಗುತ್ತದೆ; ಭೂಮ ದರ್ಶನವಾಗುತ್ತದೆ. ಯಾಮುನರ ಬದುಕು - ಅಂತಹ ವಿರಾಟ್ ದರ್ಶನಕ್ಕೆ ಒಂದು ದೃಷ್ಟಾಂತ.

ಲೋಕದಲ್ಲಿ ಎರಡು ಬಗೆಯ ಜನರಿದ್ದಾರೆ. ಕೆಲವರು, ತಾವೇ ಸಕ್ಕರೆ ಆಗಬೇಕೆಂದು ಹಂಬಲಿಸುವ ತಪಸ್ವಿಗಳು. ಬಹುಪಾಲಿನ ಇನ್ನೊಂದು ವರ್ಗ - ಸಕ್ಕರೆಯನ್ನು ಸವಿದು ಆನಂದಿಸುವ ಭಕ್ತಬಳಗದವರು. ಶಂಕರ, ಮಧ್ವ, ಯಾಮುನರು, ರಾಮಾನುಜರು... ಇಂತಹ ಆಚಾರ್ಯರುಗಳೆಲ್ಲರೂ ತಾವೇ ಸಕ್ಕರೆಯಾಗಿ ಹೋದ ತಪಸ್ವಿಗಳು; ಅಸಂಖ್ಯಾತ ಅಧ್ಯಾತ್ಮಿಕ ಜಿಜ್ಞಾಸುಗಳಿಗೆ ಇಂದಿಗೂ ಸಕ್ಕರೆಯ ಸವಿಯನ್ನು ಉಣ್ಣಿಸುತ್ತಿರುವವರು.

                                           ******  ******  ******  ******  ******


(ಶ್ರೀ ರಾಮಾನುಜರ ಜೀವನ, ದರ್ಶನ, ಪರಂಪರೆ - ಎಂಬ ಶ್ರೀ ಎಚೆಸ್ಕೆ ಅವರ ಸುಂದರ ಕೃತಿಯನ್ನು ಓದಿದ ನನಗೆ - ಆಸಕ್ತರು ಓದಬಹುದಾದ ಅನೇಕ ವಿಷಯಗಳಿವೆ ಅನ್ನಿಸಿದಾಗ, ಈ ಬರಹ ಸಿದ್ಧವಾಗಿದೆ. ವಿಶಿಷ್ಟಾದ್ವೈತದ ಸಾರವನ್ನು ಸಂಕ್ಷೇಪವಾಗಿ ಅರಿಯುವ ಆಸಕ್ತರಿಗೆ - ಈ ಪುಸ್ತಕವು ದಾರಿದೀಪದಂತಿದೆ.

ನನ್ನಲ್ಲಿರುವ "ಶ್ರೀ ರಾಮಾನುಜ" ಎಂಬ ಈ ಪುಸ್ತಕದ ಪ್ರತಿಯು ೧೯೬೩ ರಲ್ಲಿ ಪ್ರಥಮ ಮುದ್ರಣಗೊಂಡದ್ದು; ಬೆಲೆ - ೪ ರೂಪಾಯಿ. ಆಧ್ಯಾತ್ಮಿಕ ವಲಯದ ವ್ಯಕ್ತಿಯೊಬ್ಬರನ್ನು ಕುರಿತು ಇಷ್ಟೊಂದು ಸಮಸ್ಥಿತಿಯಿಂದ ಬರೆಯಬಹುದು ಎಂಬುದಕ್ಕೆ ಮಾದರಿ ಆಗಬಲ್ಲಂತಹ ಕೃತಿಯಿದು. ಭಾಷೆ ಮತ್ತು ಶೈಲಿಯು ಕನ್ನಡದ ಸತ್ವವನ್ನು ಸಾರುವಂತಿದೆ. ಹಿರಿಯ ಸಾಹಿತಿಗಳಾಗಿದ್ದ ಶ್ರೀ ಎಚ್ಚೆಸ್ಕೆ ಅವರಿಗೆ ಪ್ರಣಾಮಗಳು.

ಈಗ ಈ ಪುಸ್ತಕವು ಮಾರುಕಟ್ಟೆಯಲ್ಲಿ ಲಭ್ಯವಿದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಅಕಸ್ಮಾತ್ ಈ ಪುಸ್ತಕವು ಸಿಗುವಂತಿದ್ದರೆ, ಓದಿನ ಸಂಪೂರ್ಣ ಸುಖಲಾಭಕ್ಕಾಗಿ - ನಿಶ್ಚಯವಾಗಿ, ಕೊಂಡು ಓದಲೇಬೇಕಾದ ಪುಸ್ತಕವಿದು.

ನಮ್ಮ ತಂದೆ ದಿ. ಯಜ್ಞನಾರಾಯಣ ಉಡುಪರು ತಮ್ಮ ಮಕ್ಕಳಿಗೆ ಬಿಟ್ಟುಹೋದ ಪುಸ್ತಕ ಆಸ್ತಿಯ ಭಾಗವಾಗಿ, ಈಗ ನನ್ನ ಮನೆಯಲ್ಲಿರುವ ಪುಸ್ತಕ ಭಂಡಾರದಲ್ಲಿ, ಇದುವರೆಗೆ ಅಡಗಿಕೊಂಡಂತಿದ್ದ ಈ ಪುಸ್ತಕವನ್ನು, ಎತ್ತಿಕೊಂಡು ಓದಲು ನನಗೆ ಇಷ್ಟು ವರ್ಷ ಬೇಕಾಯಿತು ! ಬಹುಶಃ ಕಾಲ ಕೂಡಿ ಬರುವುದು ಅಂದರೆ ಹೀಗೇ ಇರಬಹುದು.. ನನ್ನ ನಿವೃತ್ತಿಯ ನಂತರ ನನಗೆ ಲಭಿಸಿರುವ ನಿಶ್ಚಿಂತ ಸ್ಥಿತಿಯಲ್ಲಿ - ಈಗ ಮತ್ತೊಮ್ಮೆ, ಅಪ್ಪಯ್ಯನ (ಪುಸ್ತಕಗಳ) ಹಿಂದೆ ಸುತ್ತುತ್ತಿದ್ದೇನೆ ! ಅನನ್ಯ ಪುಸ್ತಕ ಸುಖ !....

ಸಾಧ್ಯವಾದಾಗ ಮತ್ತೊಮ್ಮೆ ಆಮೂಲಾಗ್ರವಾಗಿ ಓದಿ, ಇದೇ ಪುಸ್ತಕವನ್ನು ಆಧರಿಸಿ, ಶ್ರೀ ರಾಮಾನುಜರ ಕುರಿತೂ ಬರೆಯಬೇಕೆಂದಿದೆ. "ಸಾಧ್ಯವಾದಾಗ".. ಎಂದದ್ದು ಏಕೆಂದರೆ - ಎಲ್ಲ ದಿನವೂ ನನಗೆ ಓದುವ ದಿನವಾದರೂ - ಬರೆಯುವ ದಿನ ಆಗುತ್ತಿಲ್ಲ ! ಬಹುಶಃ ಬರೆಯುವುದು ನನ್ನ ಸಹಜ ವೃತ್ತಿ ಅಲ್ಲ; ಪ್ರವೃತ್ತಿ ಮಾತ್ರ....)

                                             *****     *****     *****     *****



Friday, July 14, 2017

ಮನ ಏವ ಮನುಷ್ಯಾಣಾಂ...

ಆಯಾ ಜೈವಿಕ ಅಗತ್ಯಗಳನ್ನು ಶಿಷ್ಟವಾಗಿ ನಿಯಂತ್ರಿಸಬಲ್ಲ ತೃಪ್ತಿ, ಕರುಣೆ, ಸ್ನೇಹ, ಪ್ರೇಮ, ಸಹನೆ ಮುಂತಾದ ಮನೋಮೂಲದ ಭಾವಸಂಪತ್ತಿನಿಂದಲೇ ಮನುಷ್ಯರು ಇತರ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಅಂತರ್ಮಥನದ ಮೂಲಕ ಮನಸ್ಸಿಗೆ ಕಡಿವಾಣ ಬಿಗಿದು, ತಮ್ಮ ಮೌಲ್ಯವನ್ನು ತಾವೇ ಹಿಗ್ಗಿಸುವ ಅಥವ ಕುಗ್ಗಿಸುವ ಸಾಮರ್ಥ್ಯವನ್ನೂ - ಮನುಷ್ಯರು ಹೊಂದಿರುತ್ತಾರೆ. ಹೀಗಿದ್ದೂ ತನ್ನನ್ನು ಮಾತ್ರ ಹೊರಗಿರಿಸಿಕೊಂಡು ಇತರ ವಸ್ತು ವಿಷಯಗಳನ್ನು ಉತ್ಸಾಹದಿಂದ ತೂಗಿ ನೋಡುವುದರಲ್ಲಿಯೇ ಮನುಷ್ಯರಿಗೆ ಹೆಚ್ಚಿನ ಆಸಕ್ತಿಯಿರುವುದು - ಅನುಭವ ಮೂಲದ ಸತ್ಯ. ಅನುಕೂಲ ಸಿಂಧು ತತ್ವ ಎಂಬ ದೌರ್ಬಲ್ಯದ ಅನುಯಾಯಿಗಳೆಲ್ಲರ ಪಾಡೂ ಇದೇ ಆಗಿದೆ.

ಈ ಜೀವಜಗತ್ತಿನಲ್ಲಿ ಮನುಷ್ಯ ಪ್ರಾಣಿಯು ಮಾತ್ರ ತನ್ನನ್ನು ತಾನೇ ಮೌಲ್ಯಮಾಪನಕ್ಕೆ ಒಡ್ದಿಕೊಳ್ಳಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆದರೆ ತಮ್ಮ ಮೌಲ್ಯಮಾಪನವನ್ನು ಸಾಂದರ್ಭಿಕವಾಗಿ - ಒಂದೋ "Under estimate ಅಥವ Over Estimate" ಮಾಡಿಕೊಳ್ಳುತ್ತಲೇ ಬಂದಿರುವ ಮನುಷ್ಯರು - ವಾಸ್ತವಕ್ಕೆ ಹಿಂಜರಿಯುತ್ತಿರುವ ಉದಾಹರಣೆಗಳೇ ಅನೇಕ. ಮನೋಮೂಲದ ಚಮತ್ಕಾರಗಳನ್ನು ಪ್ರದರ್ಶಿಸುತ್ತ ತನಗೆ ತಾನೇ "ದಯಾ ಅಂಕವನ್ನು (Grace Mark)" ನೀಡಿಕೊಳ್ಳುತ್ತ ಬಂದ ವರ್ಗವೂ ಇದೊಂದೇ.

ಅರ್ಥಾತ್ -  ತನ್ನನ್ನು ತಾನೇ ಮೋಸಗೊಳಿಸಿಕೊಳ್ಳಬಲ್ಲ ಏಕೈಕ ಪ್ರಾಣಿಯಾದ ಮನುಷ್ಯ ವರ್ಗದ ಪ್ರಕ್ಷಿಪ್ತ ವರ್ತನೆಗಳೆಲ್ಲವೂ - ಬುದ್ಧಿಯನ್ನು ಬಡಿದು ಮಲಗಿಸಲ್ಪಟ್ಟ - ಚಾಂಚಲ್ಯದಿಂದ ವಿಕೃತಗೊಂಡ ಮನೋವಲಯದ ಕಾರ್ಯತಂತ್ರವೇ ಆಗಿದೆ. ತನ್ನೊಳಗಿನ ಕಲ್ಮಷಗಳನ್ನು ಮರೆಮಾಚುವ ಮತ್ತು ಅಂತಃ ನಿರ್ವಹಣೆಯ ಚಿಂತನೆಯನ್ನು ಮಾತ್ರ - ತನ್ನ ಕೊನೆಯ ಆಯ್ಕೆಯನ್ನಾಗಿ ಮಾಡಿಕೊಂಡಿರುವ ಮತ್ತು ಸ್ವಚ್ಛಂದ ಮನೋತಂತ್ರಗಳಿಗೆ ಸ್ವ-ಇಚ್ಛೆಯಿಂದಲೇ ವಶವಾಗಿ, ರಾಜಮಾರ್ಗವನ್ನು ತದುದ್ದೇಶಿತವಾಗಿ ಅಲಕ್ಷಿಸಿ, ಸಾಮಾಜಿಕ ಕಾನೂನುಗಳಿಗೂ ಹೊಸ ವ್ಯಾಖ್ಯೆಯನ್ನು ನೀಡಬಲ್ಲ - "ಮನ ಏವ ಮನುಷ್ಯ"ನಾದುದೇ - ಇವುಗಳಿಗೆಲ್ಲ ಮೂಲ ಕಾರಣ. "ಮನಸ್ಸು ಓಡಿಸಿದತ್ತ ಓಡುವ" - ಇಂತಹ ಅರೆಪಾಕದ - ಅನಿಯಂತ್ರಿತ ಮನುಷ್ಯ ಮನಸ್ಸುಗಳನ್ನು ಮಾತ್ರ - ಮಾತಿನ ಪಟಾಕಿಗಳಿಂದ ಮರುಳುಗೊಳಿಸಲು ಸಾಧ್ಯ ಮತ್ತು ಸ್ಥಿರವಾಗಿ ಬೇಲಿಯೊಳಗೆ ಹಿಡಿದಿಟ್ಟುಕೊಳ್ಳುವುದು ನಿರಂತರದ ಸವಾಲು.

"ಮನುಷ್ಯನ ಮನಸ್ಸು" ಎಂಬ ವಸ್ತುವು ಇತರೆಲ್ಲ ಪ್ರಾಣಿಗಳಿಗಿಂತ ಭಿನ್ನವಾಗಿ ವರ್ತಿಸುವುದರಿಂದಲೇ ಇತರ ಜೀವಿಗಳಿಗಿಂತ ಮನುಷ್ಯನನ್ನು ಭಿನ್ನವಾಗಿ ಕಡೆದಿಟ್ಟಿದೆ. ಆದ್ದರಿಂದಲೇ ಇತರ ಜೀವಿಗಳನ್ನು ಹೆಚ್ಚಾಗಿ ಬಾಧಿಸದ - ಮುಖಮೌಲ್ಯದ ಸಾಮಾಜಿಕ ಬಂಧನ ಮತ್ತು ಬಿಡುಗಡೆಯ ತೊಳಲಾಟಗಳು ಮನುಷ್ಯರಲ್ಲಿ ಸ್ಪಷ್ಟವಾಗಿ ಕಾಣುತ್ತವೆ ಮತ್ತು ಅವುಗಳು ಕಗ್ಗಂಟುಗಳನ್ನೂ ಸೃಷ್ಟಿಸುತ್ತ ಬಂದಿವೆ. ಆದರೆ ಎಲ್ಲ ಬಗೆಯ ರೋಗಮೂಲವೂ ಆಯಾ ಮನಸ್ಸುಗಳಲ್ಲೇ ಇವೆ ಮತ್ತು ಮನೋಮೂಲದ ಎಲ್ಲ ಬಗೆಯ ಜಿಡುಕುಗಳಿಗೆ ಪರಿಹಾರದ ಎಳೆಗಳೂ ಆಯಾ ಮನಸ್ಸುಗಳಲ್ಲೇ ಹುದುಗಿರುತ್ತವೆ ! ಮನೋಕೋಶದಲ್ಲಿ ಪ್ರವೇಶಿಸಿ, ಮನಸ್ಸಿನಾಚೆ ಮತ್ತು ಈಚೆಗೂ ಹುಡುಕಬಲ್ಲವರಿಗೆ ಮತ್ತು ಮನಸ್ಸಿನ ಅತಿವೇಗದ ಕುಣಿತವನ್ನು ಕಾಲಕಾಲದಲ್ಲಿ ಅರಿತು - ಆಯಾ ವಾಸ್ತವದಲ್ಲಿ ನಿಂತು, ಆಯಾ ಬದುಕಿನ ಯೋಗವನ್ನು ವಿನಮ್ರವಾಗಿ ನಿರ್ವಹಿಸುತ್ತ ನಿಯಂತ್ರಿಸಬಲ್ಲ ಯೋಗನಿರತರಿಗೆ ಮಾತ್ರ - ಬಹು ಪ್ರಯಾಸದಿಂದ ಅದರ ಕಿಂಚಿತ್ ದರ್ಶನವಾದದ್ದೂ ಇದೆ.

ಆದಿಯಿಂದಲೂ ಸಾಮಾಜಿಕ ಬದುಕಿನ ಸಂಘಟಿತ ಸಂಬಂಧಗಳಿಗೆ ಪ್ರಾಮುಖ್ಯತೆ ನೀಡುತ್ತ ಬಂದ ಸಂತತಿಯೇ ಮನುಷ್ಯ ಸಂತತಿ. ಇದಕ್ಕೆ ಮೂಲ ಕಾರಣವೇ - ದೈಹಿಕ ದುರ್ಬಲತೆ ಮತ್ತು ಭಾವನೆಗಳ ಪಾರುಪತ್ಯ. ಬುದ್ಧಿಯನ್ನು ನೇರವಾಗಿ ಪ್ರಭಾವಿಸಲಾಗದ ಕ್ರೋಧ, ಮೋಹ, ಪ್ರೇಮ ಮುಂತಾದ ಭಾವನೆಗಳು - ಮೊದಲು ಮಿದುವಾದ ಮನಸ್ಸಿನ ಆಶ್ರಯ ಪಡೆದು, ಅನಂತರ ಬುದ್ಧಿಯನ್ನೂ ಪ್ರಚೋದಿಸುವಷ್ಟು ಶಕ್ತಿ ಪಡೆಯುವುದುಂಟು. ಇಂತಹ ದುರ್ಬಲ ಮನುಷ್ಯರಲ್ಲಿ ಹುದುಗಿರುವ ಪ್ರಚಂಡ ಶಕ್ತಿಯ ಮನಸ್ಸು ಮತ್ತು ಅದರ ಉಬ್ಬರ ಇಳಿತಗಳು - ಸಣ್ಣ ವಾಹನಕ್ಕೆ ದೊಡ್ಡ ಎಂಜಿನ್ ಜೋಡಿಸಿದಂತಹ ಸ್ಥಿತಿಯಲ್ಲಿದೆ ! ಆದ್ದರಿಂದಲೇ ದೇಹವಾಹನದ ಚಾಲಕರು - ಚಾಲನೆಯ ಪ್ರಾವೀಣ್ಯತೆ ಮತ್ತು ಎಚ್ಚರವನ್ನು ತಪ್ಪುವಂತೆಯೇ ಇಲ್ಲ. ಯಂತ್ರ ಚಾಲನೆಯ ಪ್ರಾವೀಣ್ಯತೆ ಮತ್ತು ಅನುಕ್ಷಣದ ಎಚ್ಚರವನ್ನು ರೂಢಿಸಿಕೊಳ್ಳಲು ತಡವರಿಸುವ ದೇಹ ಕೇಂದ್ರಗಳಲ್ಲಿ - ಆದ್ದರಿಂದಲೇ - ಭಯದ ಭಾವವು ನಿರಂತರವಾಗಿ ಸಂಚರಿಸುತ್ತಿರುತ್ತದೆ. ಆದ್ದರಿಂದಲೇ ದೃಷ್ಟಕ್ಕಿಂತ ಹೆಚ್ಚು - ಅದೃಷ್ಟವೇ ಕಾಣುವಂತಾಗುತ್ತದೆ. ಹೀಗೆ ಅಪಘಾತದ ಸಂವೇದನೆಯನ್ನು ಅನುಕ್ಷಣವೂ ಹುಟ್ಟಿಸುತ್ತಲೇ ಇರುವ ಮನಸ್ಸಿನ ವೇಗವನ್ನು ನಿಯಂತ್ರಿಸಲಾಗದ - ಜೀವ ಭಯವದು.

ಮನುಷ್ಯರ ಬಾಡಿಗೆ ದೇಹಯಂತ್ರದಲ್ಲಿ ಯಾವತ್ತೂ ವಾಸಿಸುವ ಅಮೂರ್ತ ಭಯಭಾವದ ಸ್ವಂತ ಮನೆಯೇ - ಮನಸ್ಸು! ಜೀವಿಗಳಲ್ಲಿ ಅಂತರ್ಗತವಾಗಿರುವ ಸಾವಿನ ಭಯ - ಜೀವಿಗಳ ಹುಟ್ಟಿನೊಂದಿಗೇ ಅಂತರ್ಗತವಾಗಿರುವ "ಕ್ಷಣಿಕ ಭಾವ" - ಜೀವನಾಶದ ಅಸ್ಥಿರತೆಯ ಭಯವೇ - ಮನುಷ್ಯರಿಂದ ಪ್ರಾಕಟ್ಯಗೊಳ್ಳುವ ಎಲ್ಲ ಬಗೆಯ ದೌರ್ಬಲ್ಯಗಳಿಗೂ ಮೂಲ ಕಾರಣ. ಹಿನ್ನೆಲೆಯು ಇದಾಗಿದ್ದರೂ... ದೈನಂದಿನ ಹೊಟ್ಟೆಪಾಡಿನ ಹೊಡಚಾಟಗಳಲ್ಲಿ ಎದುರಾಗುವ ಅಸ್ಥಿರತೆ, ದುರ್ಬಲ ಶರೀರವನ್ನು ಬಾಧಿಸುವ ಅಗೋಚರ ವೈರಿಗಳಿಂದಾಗಿ ಉಂಟಾಗುವ ಅಸ್ಥಿರ ಭಾವ, ಬದುಕಿನ ಭಾವನೆಲೆಯ ಸಂಬಂಧಗಳ ನಿರ್ವಹಣೆಯಲ್ಲಿ ಆಗಾಗ ಎದುರಾಗುವ ಅಸ್ಥಿರತೆ, ತನ್ನ ಸ್ವಂತ ಅಸ್ತಿತ್ವದ ಅನನ್ಯತೆಯ ಅಸ್ಥಿರತೆ... ಮುಂತಾದ ಅನೇಕ ಅಸ್ಥಿರತೆಗಳು - ಮನುಷ್ಯನನ್ನು "ದುರ್ಬಲ ಭಾವಜೀವಿ" ಯನ್ನಾಗಿಯೂ ರೂಪಿಸುವಂತಾಗಿ, ಭಯಭಾವಗಳಿಗೆ ಉಸಿರು ನೀಡುತ್ತ ಬಂದಿವೆ. ಹಿತವಾದ ಭಾವಗಳಿಂದ ಪದೇಪದೇ ಮನಸ್ಸುಗಳನ್ನು ಪೋಷಿಸದಿರುವ ಶರೀರಗಳಲ್ಲಿ ಸಂಭವಿಸುವ ಇಂತಹ ಅಂತರ್ವೈರುದ್ಧ್ಯಗಳೇ - ಭಯದ ಜನನಿ ಜನಕರು.

ಉಕ್ಕುವ ತಳಮಳದ ಯಾವುದೇ ಭಾವ ಘರ್ಷಣೆಗಳಿಲ್ಲದ ಮನಸ್ಸುಗಳಲ್ಲಿ - ಯಾವ ಭಯವೂ ಸಂಚರಿಸಲಾರದು. ಆದರೆ ಅಂತಹ ಒಂದು ಸಾಮಾನ್ಯ ಸ್ಥಿತಿಯು ಯಾವುದೇ ಮನಸ್ಸಿನಲ್ಲಿ ತಾನಾಗಿಯೇ ಸಂಭವಿಸಲಾರದು. ಇಚ್ಛಾಶಕ್ತಿಯಿಂದ ಶುದ್ಧ ಭಾವಗಳನ್ನು ಪೋಷಿಸುವ ಮೂಲಕವೇ ಭಯ ಭಾವವನ್ನು ಆಗಿಂದಾಗ ನಿವಾರಿಸಿಕೊಳ್ಳಲು ಸಾಧ್ಯ. ಪರಿಶುದ್ಧವಾದ ಭಾವ ಸಂಚಲನವು ಸಹಜವಾಗಿ ಸಂಭವಿಸಿದಾಗ - ಮನಸ್ಸುಗಳು ಭಯಮುಕ್ತವಾಗಬಹುದು. ಆಯಾ ಮನೋಶರೀರದ ಕ್ರಮಬದ್ಧ ಅಂತಃನಿರ್ವಹಣೆ ಮತ್ತು ವಾಸ್ತವವನ್ನು ಒಪ್ಪಿಕೊಳ್ಳುವ ಮಾನಸಿಕ ತರಬೇತಿಯೊಂದೇ ಇದಕ್ಕೆ ಪರಿಹಾರ. ತನಗೆ ತಾನೇ ಸಹಕರಿಸುವ ಕ್ರಿಯೆ ಇದು.

ಬದುಕಿನ ನಡಿಗೆಯಲ್ಲಿ ನಿರತವಾಗಿದ್ದು - ಭಯಾಕ್ರಾಂತ ಮನೋಮೂಲದಲ್ಲಿ ಸುಳಿದಾಡುವ ಹಲವಾರು ಬಗೆಯ ಲೌಕಿಕ ಹಂಬಲಗಳು - "ಭಯದ ಬೀಜವು" ಮೊಳೆತು ಹೆಮ್ಮರವಾಗಲು ಅವಶ್ಯವಾದ ಪೋಷಣೆಯನ್ನು ನೀಡುವಂಥವು. ತನ್ನದಲ್ಲದ ವಸ್ತು-ವಿಷಯಗಳ ಮಿತಿಮೀರಿದ ಆಸೆ, ಹಂಬಲ, ಬಯಕೆಗಳು - ಯಾವುದೇ ಮನುಷ್ಯನ ನಡಿಗೆಯ ದಿಕ್ಕು ತಪ್ಪಿಸುತ್ತ ಅಸ್ಥಿರ ಭಾವ ಪ್ರಚೋದಕ ದ್ರವ್ಯವಾಗಿ ದುಡಿಯುತ್ತಲೇ ಬಂದಿವೆ. ಚಿನ್ನದಂತೆ ಹೊಳೆಯುತ್ತಿದ್ದ ರೂಪವನ್ನು ಚಿನ್ನದ ಜಿಂಕೆ ಎಂದುಕೊಂಡ - ರಾಮಾಯಣದ ದೃಷ್ಟಾಂತವು - ಭ್ರಮೆಗಳೇ ಭಯಕಾರಕಗಳು ಎಂಬುದಕ್ಕೆ ಒಂದು ಪೂರ್ವೋದಹಾರಣೆ. ಆಯಾ ಮನಸ್ಸುಗಳ ಪರಿಧಿಯಲ್ಲಿ ಆಕ್ರಮಿಸಿಕೊಳ್ಳುವ - ಅಂತಹ "ದಿಕ್ಕೆಡಿಸುವ ಅತೀವ ಹಂಬಲ ಮತ್ತು ತತ್ಪ್ರಚೋದಕ ಭಾವ ವಿಶೇಷಗಳು" - ಮನುಷ್ಯನನ್ನು ಅತ್ತಿತ್ತ ಎಳೆದಾಡುತ್ತ ಹೆದರಿಸುತ್ತ ಒಮ್ಮೊಮ್ಮೆ ಅಪಾಯವನ್ನೂ ತಂದೊಡ್ಡುವುದಿದೆ. ಆದ್ದರಿಂದಲೇ ಅಸಂಗತ ಆಸೆ ನಿರೀಕ್ಷೆಗಳು ಮತ್ತು ಅವುಗಳು ಕಾಲಕಾಲಕ್ಕೆ ಹುಟ್ಟುಹಾಕುವ ಭಯಬಂಧನದಿಂದ ಸುತರಾಂ ಹೊರಬರಲೂ ಆಗದೆ - ಜೊತೆಜೊತೆಗೇ ಜಿಡುಕುಗಳಿಂದ ಬಿಡುಗಡೆಗಾಗಿಯೂ ತಳಮಳಿಸುವಂತಹ ವಿರೋಧಾಭಾಸದ ವಿಚಿತ್ರ ಮನೋಭೂಮಿಕೆಯು - ಮನುಷ್ಯರದಾಗಿದೆ. ಇದನ್ನೇ "ಅಂತರಂಗದ ಮಹಾಯುದ್ಧ" ಎನ್ನುವುದು.

ಇಂದು ಒಪ್ಪವಾಗಿದ್ದಂತೆ ಕಾಣಿಸುತ್ತಿರುವ ಬಾಹ್ಯ ಲಕ್ಷಣಗಳು - ತುಪ್ಪ ತಿನ್ನಲು ಹೊಂಚುಹಾಕುವ ಚೌಕಟ್ಟಿನ ಇಂದಿನ ಸಾಮಾಜಿಕ ಜೀವನವು - ಮನಸ್ಸುಗಳನ್ನು ಬಗ್ಗಡಗೊಳಿಸಬಲ್ಲ ಹುಲುಸಾದ ಕ್ಷೇತ್ರ. ಯಾವುದೇ ಸಾಮಾಜಿಕ ಪರಿಸರದಲ್ಲಿ ವ್ಯಸ್ತರಾಗಿರುವುದು ಎಂದರೆ - ಅಸಂಸ್ಕರಿತ ಮನಸ್ಸುಗಳ ಜೊತೆಯಲ್ಲಿಯೂ ಒಡನಾಟ - ಎಂದೇ ಅರ್ಥ. ಮಾತ್ಸರ್ಯ, ಕೋಪ, ತಂತ್ರಗಾರಿಕೆ, ಸ್ಪರ್ಧೆ, ಮೇಲಾಟಗಳು ಮುಂತಾದ ಭಾವನಾತ್ಮಕ ಸಂವೇದನೆಗಳ ಅಮಲುಕೋರತನವನ್ನು ಪ್ರೀತಿಯಿಂದಲೇ ಪೋಷಿಸುವ ಸಾರ್ವಜನಿಕ ಪರಿಸರದ ಮನಸ್ಸುಗಳನ್ನು ಪುನರಪಿ ಸಂಧಿಸುವುದರಿಂದ ಮನಸ್ಸಿನ ತಲ್ಲಣಗಳು ಹೆಚ್ಚುತ್ತವೆ. ಸತ್ಸಂಗದ ವ್ಯಾಖ್ಯೆಯನ್ನೂ ಆಯಾ ಬಾಧಿತ ಮನಸ್ಸುಗಳೇ ನಿರ್ಧರಿಸುವುದರಿಂದ - ಹೊರಗಿನಂತೆಯೇ ತನ್ನೊಳಗೂ - ಸ್ಥಿರತೆಯು ಸಿಗುತ್ತದೆ ಎಂಬ ಭರವಸೆಯೇನೂ ಸಿಗಲಾರದು. ಆದ್ದರಿಂದ ಮನಸ್ಸನ್ನು ಆಗಾಗ ಏಕಾಂತದಲ್ಲಿ ಸಂಧಿಸುತ್ತ ಆಯಾ ಒಳದನಿಗೆ ಕಿವಿಗೊಡುವುದು ಅನಿವಾರ್ಯ; ಮನಸ್ಸನ್ನು ಕಲುಷಿತಗೊಳಿಸಿಕೊಳ್ಳದಂತಹ ಉದ್ದೇಶಿತ ಎಚ್ಚರವನ್ನು ತಪ್ಪಲು ಸಾಧ್ಯವೇ ಇಲ್ಲ. ಅಂದಮಾತ್ರಕ್ಕೇ - ಭಯ ಎಂಬ ವಸ್ತುವು ಮನುಷ್ಯನ ಹಾದಿತಪ್ಪಿಸುವ ಭಾವಪ್ರಚೋದಕ ಎಂದು ಏಕಪಕ್ಷೀಯವಾಗಿ ನಿಶ್ಚಯಿಸಲೂ ಆಗದು. ಭಯದಲ್ಲೂ ಎರಡು ಬಗೆಯಿದೆ. ಒಂದು, ಜೀವಪರ ಭಯ; ಇನ್ನೊಂದು, ಜೀವಪೀಡಕ ಭಯ. ಮನುಷ್ಯರನ್ನು ಸತ್ಕಾರ್ಯಗಳಿಗೆ ಪ್ರೇರೇಪಿಸುವ ಸಾತ್ವಿಕ ಭಯವು ಜೀವಪರವಾಗಿ ವರ್ತಿಸಿದರೆ, "ಸಾಲ ಮಾಡಿಯಾದರೂ ತುಪ್ಪ ತಿನ್ನುವ" ತಾಮಸ ಭಯಮೂಲವು ಜೀವ ಪೀಡಕವಾಗಿ, ಅನೇಕ ಅನರ್ಥಗಳಿಗೂ ಕಾರಣವಾಗುತ್ತಿರುವುದನ್ನು ನಾವು ನೋಡುತ್ತ ಬಂದಿದ್ದೇವೆ.

I asked GOD that "I WANT PEACE !"
GOD replied,
Remove the "I", that is EGO;
Remove the "WANT", that is Desire;
And then "PEACE" will come automatically...

ಆದರೆ... ಉಪದೇಶದಷ್ಟು ಸುಲಭದ ಸಾಧನೆ - ಇದಲ್ಲ. ದೇಹ ಇರುವಷ್ಟು ದಿನವೂ "I" ಎಂಬುದು ಇದ್ದೇ ಇರುತ್ತದೆ. ನಾನು ಎಂಬ ಭಾವಕ್ಕೆ "WANTS" ಎಂಬುದು - ಯಾವತ್ತೂ ಅಂಟಿಕೊಂಡೇ ಇರುತ್ತದೆ. ಆದ್ದರಿಂದ, ನಾಯಿಯ ಬಾಲವನ್ನು ನೆಟ್ಟಗಿರಿಸಲು ಕೊಳವೆ ಹಾಕುವಂತಹ ವ್ಯಾಯಾಮವಿದು ! ಅನುಕ್ಷಣವೂ ಮನಸ್ಸನ್ನು ಬಂಧಿಸಿಟ್ಟು, ತಮತಮಗೆ ಬೇಕಾದಂತೆ ಅದನ್ನು ದುಡಿಸಿಕೊಂಡರೆ - ಅಂತಹ ದೇಹ ಮಾಧ್ಯಮಗಳು - ಸಾಕ್ಷಾತ್ ಋಷಿಗಳು. ಆದರೆ ಎಲ್ಲರೂ ಋಷಿಗಳಾಗುವುದು ಅಸಾಧ್ಯ. ಸಂಸಾರಿಗಳಾದವರು - ತಮ್ಮ ತಮ್ಮ ಇಚ್ಛಾಶಕ್ತಿಯಿಂದ ಮನಸ್ಸಿನತ್ತ ಪೂರ್ಣ ಗಮನವೀಯುವ ಅಥವ ಅಂತಹ ಪ್ರಯತ್ನದ ಹಾದಿಯನ್ನು ಅನುಸರಿಸಬಹುದು. ಅಷ್ಟೆ. ಈ ಸಂಸಾರವೆಂಬ ಸಂತೆಯಲ್ಲಿ ಅಡ್ಡಾದಿಡ್ಡಿ ಓಡಾಡುವ ಮನಸ್ಸನ್ನು ಹಿಡಿದು ನಿಲ್ಲಿಸುವುದು ಸುಲಭವಲ್ಲದಿದ್ದರೂ - ಜಾಗ್ರತ ಪ್ರಯತ್ನಗಳು ಮಾತ್ರ ನಿಲ್ಲಲೇಬಾರದು. ಆಯಾ ದಿನದ "ಮುಸುರೆ"ಯನ್ನು ಆಯಾ ದಿನವೇ ತೊಳೆದುಕೊಳ್ಳುವ ಸರಳ ಸೂತ್ರವಿದು.

ಈ ಭೂಮಿಯಲ್ಲಿ ದುರ್ಮಾರ್ಗದಲ್ಲಿ ಬೀಳಲು ಯಾರಿಗೂ ಯಾವ ಗುರುವೂ ಬೇಕಾಗುವುದಿಲ್ಲ. ಸಾರ್ವಜನಿಕ ಬದುಕು ಎಂದರೆ - ಹೆಂಡದ ವ್ಯಾಪಾರ ನಡೆಸಿದಂತೆ; ಸಾಂದರ್ಭಿಕವಾಗಿ ದುರ್ಮಾರ್ಗದಲ್ಲಿಯೂ ಎಳೆದೊಯ್ಯಬಲ್ಲ ಹಾದಿಯಿದು. ಹೆಂಡದ ವ್ಯಾಪಾರಿಯು ಹೆಂಡದ ದಾಸನಾಗಿರದಿದ್ದರೂ ರುಚಿ ನೋಡದೆ ಇರಲು ಅಥವ ಗಂಧವನ್ನು ಆಘ್ರಾಣಿಸದೆ ಇರಲು ಸಾಧ್ಯವೆ ? ಕೃತಕ ಅಮಲಿನ ನೆರಳಿನಲ್ಲಿರುವಾಗ, ಸಾಧು ಆಗಿರಲು ಸಾಧ್ಯವೆ ? ಮನಸ್ಸು ಎಂಬ ವೇದಿಕೆಗೆ ಕಲಿಯ ಪ್ರವೇಶವಾಗಲು - ಮನಸ್ಸು ನಿರಂಕುಶವಾಗಲು - ವಾಸ್ತವ ಮತ್ತು ಭ್ರಮೆಯ ನೆರಳೂ ಸಾಕಾಗುತ್ತದೆ. ಆದ್ದರಿಂದ ನಮ್ಮ ನಿತ್ಯ ಬದುಕಿನ ಸಂವಹನ, ಸಂಪರ್ಕ, ಸಂಭಾಷಿಸುವ ಪಾತ್ರಾಪಾತ್ರ ವಿವೇಚನೆಯು - ಯಾವುದೇ ಮನಸ್ಸಿನ ಸ್ವಾಸ್ಥ್ಯಕ್ಕೆ ತೀರ ಅನಿವಾರ್ಯ.

ಭಾವ ಘರ್ಷಣೆಗೆ ಎಡೆ ನೀಡುವಂತಹ ಬದುಕಿನ ಸಂದರ್ಭಗಳಲ್ಲಿಯೇ ಯಾವುದೇ ಮನಸ್ಸಿನ ಹದ ತಪ್ಪುವುದು. ಇದು ಕಠಿಣ ಮತ್ತು ನಾಜೂಕಿನ ವ್ಯವಹಾರವಾದುದರಿಂದಲೇ - ಮನಸ್ಸು ನಿಲ್ಲಿಸುವ ಕಷ್ಟಕರವಾದ ಕ್ರೀಡೆಯು - ಯಾವತ್ತೂ ಜನಪ್ರಿಯವಾಗಲಿಲ್ಲ. ಈ ಸಂಕೀರ್ಣ ಸಂಗ್ರಾಮದಲ್ಲಿ ಮುಳುಗಿಕೊಳ್ಳುವ ಧೀರ ಸಾಧಕರೆಲ್ಲರೂ - ಆದ್ದರಿಂದಲೇ ಏಕಾಂತವಾಸಿಗಳು; ಅನುಭವಕ್ಕೆ ಸಿಗದ - ಕಣ್ಣಿಗೆ ಕಾಣದುದೆಲ್ಲವನ್ನೂ "ಅದಿಲ್ಲ" ಎಂದುಕೊಳ್ಳುವುದೂ ಪಲಾಯನವಾದವೇ ಆಗುತ್ತದೆ.

ಯಾವತ್ತೂ ಹೊರಗಿನ ವೈರಿಗಳಿಗಿಂತಲೂ ಒಳಗಿನ ವೈರಿಗಳೇ ಹೆಚ್ಚು ಅಪಾಯಕಾರಿ. "ಭಯ" ಎಂಬುದು - ಹಲವಾರು ವಿಷಯ ವ್ಯಂಜನಗಳಿಂದ ಕೂಡಿ, ಮಿತ್ರನಂತೆಯೂ ಒಡನಾಡುವ ನಮ್ಮೊಳಗಿನ ವೈರಿ. ಹೀಗಿರುವಾಗ, ಪೂರ್ಣ ಎಚ್ಚರದಿಂದ ತನಗೆ ತಾನೇ ಮಿತ್ರನಾಗಿರುತ್ತ ತನ್ನ ಒಳಗಿನ ವೈರಿಪಡೆಯನ್ನು ನಿವಾರಿಸಿಕೊಂಡಲ್ಲದೆ - ಸ್ನೇಹಪೂರ್ಣ ಆಂತರಂಗಿಕ ಪರಿಸರವನ್ನು ಏರ್ಪಡಿಸುವುದು ಅಸಾಧ್ಯ.

ಒಬ್ಬ ರಾವಣನ ಸಂಹಾರವಾದರೆ ನೂರಾರು ರಾವಣರು ಉದ್ಭವಿಸಬಲ್ಲ ಮನೋ ವೇದಿಕೆಯಿದು. ಆದ್ದರಿಂದಲೇ - ಮನಸ್ಸಿನ ಚಂಚಲ ಭಾವವಲಯದ ದುಷ್ಟನಿಗ್ರಹ ಕಾರ್ಯಕ್ಕೆ ಕೊನೆ ಎಂಬುದಿಲ್ಲ. ಬದುಕುಗಳನ್ನು ದಿಙ್ಮೂಢಗೊಳಿಸುತ್ತ ಬಂದ, ಇಂತಹ ಅಮೂರ್ತ ಚಮತ್ಕಾರಗಳನ್ನೇ ಭ್ರಮಾಧೀನಗೊಳಿಸುವ - ಮಾಯೆಯ ಮುಸುಕು ಎನ್ನುವುದು. ಇದು ಅಧ್ಯಾತ್ಮದ ಭಾಷೆ. ಅಧ್ಯಾತ್ಮದಲ್ಲಿ ಬಣ್ಣಿಸಲಾದ "ಮಾಯೆ" ಎಂಬುದರ ಕಾರ್ಯಕ್ಷೇತ್ರವೇ ಮನಸ್ಸು. ವಿನಮ್ರ ಶರಣಾಗತ ಭಾವದಿಂದ ಬದುಕನ್ನು ತಪಸ್ಸನ್ನಾಗಿಸದೆ - ದ್ವಂದ್ವಕ್ಕೆ ತಳ್ಳುವ ಮಾಯೆಯನ್ನು ನಿಭಾಯಿಸಲಾಗುವುದಿಲ್ಲ; ತಳಮಳದ ಭಯವೂ ಪರಿಹಾರ ಆಗುವುದಿಲ್ಲ. ಅಶುಚಿಗೊಳಿಸಿಕೊಂಡಿರುವ ಮನಸ್ಸಿನಲ್ಲಿ ತಳವೂರಿಕೊಂಡಿರುವ ಭಯದ ಭಾವವು ಪರಿಹಾರವಾಗದೇ ಶರೀರಯಂತ್ರದ ಸುಗಮ ಚಾಲನೆಯೂ ಅಸಾಧ್ಯ. ಮಾಯಾಭಯ ಎಂಬುದನ್ನು ದಾಟಲು - ಮನಸ್ಸಿನ ಸ್ವಚ್ಛತೆಗಾಗಿ ನಡೆಸುವ ಮನೋನಿಯಂತ್ರಣದ ಸಾಧನೆಯೇ - ತಪಸ್ಸು. "ಅಸತೋ ಮಾ ಸದ್ಗಮಯ"ದ ಹಾದಿಯಿದು.


ಜೀವಜಗತ್ತಿನಲ್ಲಿ ಸಂಭವಿಸುವ ಬಹುಪಾಲು ದುರಂತಗಳಿಗೆ - ಕತ್ತಲಿನಲ್ಲಿ ತಡವರಿಸುತ್ತಿರುವಂತಿರುವ ಮನಸ್ಸುಗಳ - "ಬೆಳಕು ಕಾಣಿಸದ" ಭಯವೇ ಕಾರಣ. ಮಾಯೆ ಎಂಬ ಶಬ್ದ ಪ್ರಯೋಗದ ಕುರಿತು ಹೇಸಿಗೆ (Allergy) ಉಳ್ಳವರೂ ಕೂಡ - ತಮ್ಮ ಬದುಕುಗಳನ್ನು ಕಾಡುವ ಮಾಯೆಯ ಅನುಭವ ಮತ್ತು ಪರಿಣಾಮಗಳಿಂದ ತಪ್ಪಿಸಿಕೊಳ್ಳಲಾಗುವುದಿಲ್ಲ.

ದೇಹ ರಕ್ಷಣೆಯ ಏಕೋದ್ದೇಶವನ್ನು ಹೊಂದಿದ ನವಜಾತ ಶಿಶುವಿನ ಅವಸ್ಥೆಯಲ್ಲಿ ಮಗುವು ದೇಹದ ಅಗತ್ಯಗಳಿಗಾಗಿ ಮಾತ್ರವೇ ಚಡಪಡಿಸುವ ಹಂತದಲ್ಲಿ ಇರುತ್ತದೆ. ಆದ್ದರಿಂದಲೇ ಹಸಿವು, ನಿದ್ರೆ, ಅನಾರೋಗ್ಯದ ಕ್ಷಣಗಳಲ್ಲಿ ಮಾತ್ರವೇ - ಮಗುವು "ರೋದನಾಸ್ತ್ರ"ವನ್ನು ಪ್ರಯೋಗಿಸುತ್ತದೆ. ಶರೀರ ರಥದ ಪರಿಧಿಯಲ್ಲಿ ಮಾತ್ರ ಸಂಚರಿಸುವ ಶಿಶು ಅವಸ್ಥೆ ಇದು. ಇಂತಹ ಶಿಶು ಮುಗ್ಧತೆಯು - ಕನಿಷ್ಠ ಬಯಕೆಗಳಿರುವ ಹಸುಳೆಗಳಲ್ಲಿ ಮಾತ್ರ ಸಾಧ್ಯವಾಗುತ್ತದೆ. ಮುಂದೆ ಸಮಾಜಜೀವಿಯಾಗುತ್ತ ಬಂದಾಗ, ಸುತ್ತಲಿನ ಭೇದಭಾವಗಳನ್ನು ನೋಡಿ, ಅಸಂಗತಗಳನ್ನು ತಾನೇ ಸ್ವತಃ ಅನುಭವಿಸುತ್ತ, ಭಾವವ್ಯಾಪಾರದ ಪರಿಯನ್ನು ಮತ್ತು "ವರಿ"ಯನ್ನೂ ಅರ್ಥೈಸಿಕೊಳ್ಳತೊಡಗುತ್ತದೆ. "ಜೀವ ರಕ್ಷಣೆ" ಎಂಬ ಭಯದ ಆಧಾರದಲ್ಲಿ, ಯಾವುದೇ ಭಾವನಾಸ್ತ್ರಗಳ ದುರುಪಯೋಗದ ಶೈಲಿಯನ್ನೂ ಅರಿಯತೊಡಗುತ್ತದೆ; ಅನುಸರಿಸತೊಡಗುತ್ತದೆ. ಕ್ರಮೇಣ, ಇತರ ಜೀವಿಗಳ "ಗಮನ ಸೆಳೆಯುವ ಆಯುಧ"ದಂತೆ ರೋದನಾಸ್ತ್ರವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲೂ - ಮಗುವು ಶಕ್ತವಾಗುತ್ತದೆ. ಭಾವವ್ಯಾಪಾರದ ಬಿಡುಬೀಸುತನವನ್ನು ಮನಸ್ಸುಗಳು ಅವಲಂಬಿಸುವ ಪರಿ ಇದು. ದೇಹಪೋಷಣೆಯಿಂದ ಮನಸ್ಸೂ ಬಲಿತಾಗ "ಭಾವ ಮನಸ್ಸುಗಳು" - ತಮ್ಮ ಸುತ್ತಲಿನ ಹದ್ದುಮೀರಿದ ಮಿಥ್ಯೆಯೊಂದಿಗೆ ಬಹಿರಂಗ ವ್ಯಾಪಾರಗಳಲ್ಲಿ ಸರಸವಾಡುತ್ತ, ಅಸ್ಥಿರಗ್ರಸ್ತ ಮಿಥ್ಯೆಯನ್ನೇ ಸುಪುಷ್ಟವಾಗಿ ಪೋಷಿಸಲು ತೊಡಗಿದಾಗ, ಕೊಬ್ಬಿ ಹದತಪ್ಪುವ ಮನಸ್ಸುಗಳು ಅಡ್ಡಾದಿಡ್ಡಿಯಾಗಿ ಸಂಚರಿಸತೊಡಗುತ್ತವೆ; ಪರಿಣಾಮವಾಗಿ, ಅಪಘಾತದ ಮುನ್ಸೂಚನೆಯಂತೆ ಮನಸ್ಸನ್ನು ಆಕ್ರಮಿಸುವ ಭಯಾಸುರನಲ್ಲಿ - ಜೀವಸಂಚಾರವಾಗುತ್ತದೆ. ಹಗ್ಗವೂ ಹಾವಾಗಿ ಕಾಣತೊಡಗುತ್ತದೆ. ಇದೇ - ಭಯ ಬಂಧನ. ತ್ರಿಗುಣಗಳ (ಸತ್ವ, ರಜಸ್ಸು, ತಮಸ್ಸು) ನಿರಂತರ ಮೇಲಾಟ ನಡೆಸುವಂತಹ ಮನಸ್ಸು ಎಂಬ ಸ್ಥಾನವನ್ನು ಹದಗೊಳಿಸಿಕೊಳ್ಳದೆ ಹೋದರೆ - ಯಾವುದೇ ಬದುಕಿಗೆ - ಭಯಮುಕ್ತ ನೆಮ್ಮದಿಯ ಅನುಭವವಾಗದು.

ಆದರೆ... ಭಯ ಎಂಬ ಪದವೇ ನಮ್ಮನ್ನು ಭಯಗೊಳಿಸುವಂತಾಗಬಾರದು ಅಥವ ಭಯ ಎಂಬ ಭಾವಗಳೆಲ್ಲವೂ ಅಸ್ಪೃಶ್ಯವೂ ಅಲ್ಲ. ಭಯ ಎಂಬುದು ವಿನಮ್ರತೆಯ, ಸಜ್ಜನಿಕೆಯ, ಎಚ್ಚರದ ಲಕ್ಷಣವೂ ಆಗಿರುವುದರಿಂದ ಸ್ಥಳ ಸನ್ನಿವೇಶಗಳಿಗೆ ಹೊಂದಿಕೊಂಡು ಭಯದ ಭಾವವು ಉಪಕರಿಸುವುದೂ ಇದೆ. ಉತ್ತಮ ಕೌಟುಂಬಿಕ ವಲಯವನ್ನು ನಿರ್ಮಿಸಿಕೊಳ್ಳಬಯಸುವ ಹೆತ್ತವರ ಶಿಕ್ಷೆಯ ಭಯ, ಏಕಮನಸ್ಸಿನಿಂದ ಜ್ಞಾನವನ್ನು ಊಡಿಸುವ ಗುರುಗಳು ವಿದ್ಯಾರ್ಥಿಯಿಂದ ಅಪೇಕ್ಷಿಸುವ ಭಯ, ಶಿಷ್ಟತೆಯನ್ನು ಮರೆಯದಂತಹ ಬದುಕುಗಳನ್ನು ಅಪೇಕ್ಷಿಸುವ ಸಮಾಜದ ಕುರಿತ ಭಯ... ಇವುಗಳೆಲ್ಲವೂ ಉದ್ಧರಿಸುವ ಭಯಗಳು; ವಕ್ರಬಾಲವನ್ನು ನಳಿಗೆಯಲ್ಲಿ ಬಂಧಿಸಿ ನೆಟ್ಟಗಾಗಿಸುವ ಉಪಕಾರೀ ಭಯಗಳು; ಜಾಗ್ರತಿಯನ್ನು ಮೂಡಿಸುವ ಭಯಗಳು. ನಿಶಾಚರ ಅಪ್ರಬುದ್ಧ ಮಕ್ಕಳಿಗೆ ತಿಳಿಹೇಳಿ ಭಯ ಹುಟ್ಟಿಸುವ ಭಯದಂಡ, ಉದ್ಧಟರನ್ನು ಸದೆಬಡಿಯುವ ಭಯದ್ರವ್ಯ, ಸಮಾಜಘಾತಕರನ್ನು ನಿರ್ಮೂಲಗೊಳಿಸುವ ಇಚ್ಛಾದಂಡ, ವಿಕೃತ ಬುದ್ಧಿಯಿಂದ ಮಾನವ ಸಮೂಹವನ್ನೇ ಹಾದಿತಪ್ಪಿಸುವಂತೆ ಮಲೆಯುತ್ತಿರುವ - ತಲೆಕೆಳಗಾದಂತಿರುವ ಧೂರ್ತ ಮನಸ್ಸು, ವಿಚಾರಗಳಿಗೆ ಅಂಕುಶದ ಭಯ - ಇವೆಲ್ಲ ಬೇಡವೇ ?

ನನ್ನ ತಂದೆ ದಿ. ಐರೋಡಿ ಯಜ್ಞ್ನನಾರಾಯಣ ಉಡುಪರು - ಪುರಾಣ ಭಾರತ ಕೋಶ ಎಂಬ ಗ್ರಂಥವನ್ನು ಸಿದ್ಧಪಡಿಸುತ್ತಿದ್ದ ಕಾಲದಲ್ಲಿ - ಅವರ ಮಕ್ಕಳೆಲ್ಲರೂ ಶೈಕ್ಷಣಿಕವಾಗಿ, ಪ್ರಾಥಮಿಕ ಹಂತದಲ್ಲಿದ್ದವರು. ಪ್ರಕಟಣೆಗಾಗಿ ಆ ಗ್ರಂಥವನ್ನು ನೀಡಬೇಕಾದ ಹಂತದಲ್ಲಿ ಮಕ್ಕಳಲ್ಲಿ ಕೆಲವರು ಪ್ರೌಢಶಾಲೆಯಲ್ಲಿ ಓದುತ್ತಿದ್ದೆವು. ಆಗ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ಅಪ್ಪಯ್ಯನಿಗೆ ಲೆಕ್ಕಣಿಕೆಯನ್ನು ಹಿಡಿದು ಬರೆಯುವಾಗ ಕೈ ಬಳಲುತ್ತಿತ್ತು. ಇದರಿಂದಾಗಿ, ತಮ್ಮ ಮೂರು ಜನ ಹೆಣ್ಣುಮಕ್ಕಳನ್ನು - ಗ್ರಂಥದ ಶುದ್ಧಪ್ರತಿಯನ್ನು ಸಿದ್ಧಪಡಿಸಲು ನೇಮಿಸಿಕೊಂಡಿದ್ದರು. ಇಂದಿನಂತೆ, Xerox ಪ್ರತಿ ತೆಗೆಯುವ ಸೌಲಭ್ಯವೂ ಆಗ ಇರಲಿಲ್ಲ; ಎಲ್ಲಾದರೂ ಇದ್ದಿದ್ದರೂ... ಅಷ್ಟು ಹಣ ವಿನಿಯೋಗಿಸುವ ಶಕ್ತಿಯೂ ಆಗ ನಮಗಿರಲಿಲ್ಲ. ಇತ್ತ, ಮೂಲಪ್ರತಿಯನ್ನೇ ಪ್ರಕಟಣೆಗಾಗಿ ಕೊಟ್ಟುಬಿಡುವ ನಿರ್ಧಾರವೂ ಒಪ್ಪಿತವಾಗಿರಲಿಲ್ಲ. ಆದ್ದರಿಂದ, ಸಾವಿರ ಪುಟಗಳಷ್ಟು ದೀರ್ಘವಾದ ಬರಹವನ್ನು ಮತ್ತೊಮ್ಮೆ ಬರೆಯುವುದು ಅನಿವಾರ್ಯವಾಗಿತ್ತು.

ಆದರೆ... ಆ ಹದಿಹರೆಯದಲ್ಲಿ ಗಂಟೆಗಟ್ಟಲೆ ಒಂದೆಡೆಯಲ್ಲಿ ಕೂತು ಬರೆಯುವುದು - ಮಕ್ಕಳ ಮನಸ್ಸಿಗೆ ರುಚಿಸುತ್ತಿದ್ದ ಕೆಲಸ ಆಗಿರಲಿಲ್ಲ. ಹೊರಜಗತ್ತು ಹೆಚ್ಚು ಆಕರ್ಷಕವಾಗಿ ತಮ್ಮನ್ನು ಬಲವಾಗಿ ಆಕರ್ಷಿಸುತ್ತಿದ್ದ ಎಳೆಯ ಮನಸ್ಸುಗಳಿಗೆ ಒಂದೆಡೆ ಕೂತು ಏಕಾಗ್ರತೆಯಿಂದ ಗಂಟೆಗಟ್ಟಲೆ ಬರೆಯುತ್ತಿರುವುದು ಶಿಕ್ಷೆಯಾಗಿಯೇ ಕಾಣುತ್ತಿತ್ತು ! ಇದರಿಂದಾಗಿ, ಮಕ್ಕಳಲ್ಲೇ "ನೀನು ಬರಿ, ನೀನು ಬರೆ.." ಎನ್ನುತ್ತ ಕೆಲಸ ವರ್ಗಾಯಿಸುವ ಮೇಲಾಟವೂ ನಡೆಯುತ್ತಿತ್ತು. ಆದರೆ... ಅಪ್ಪಯ್ಯನ ಮುಂದೆ ನಿಂತು ಗಟ್ಟಿಯಾಗಿ ಹೇಳಲಾಗದ ಭಯವೂ ಇತ್ತು. "ಯಾರೋ ಒಬ್ಬರು ಹೋಗಿ; ತೆಪ್ಪಗೆ ಕೂತು ಬರೆಯಿರಿ..." ಎಂದು - ಆಗಾಗ ಅಮ್ಮನು ಗದರಿಸುತ್ತಿದ್ದುದೂ ಇತ್ತು. ಕೊನೆಗೆ ಮನಸ್ಸಿಲ್ಲದ ಮನಸ್ಸಿನಿಂದ - ಸರದಿಯಲ್ಲಿ ಕೂತು - ಗ್ರಂಥದ ಪ್ರತಿ ತೆಗೆಯುವ ಕೆಲಸವನ್ನು ನಾವು ಪೂರೈಸಿದ್ದಿದ್ದರೆ - ಅದಕ್ಕೆ ನಮ್ಮೊಳಗಿನ ಸಾತ್ವಿಕ ಭಯವೇ ಕಾರಣ. ಅಮ್ಮನ ಬೆಂಬಲವೂ ಇಲ್ಲದ ಅಪ್ಪಯ್ಯನ ಭಯ ! ಅಪ್ಪಯ್ಯನ ತಪರಾಕಿಯ ಭಯ ! ತಪರಾಕಿಗಳಿಗೆ ಹಿಂಜರಿಯುತ್ತಿದ್ದ "ಜೀವಪರ" ನಾಚಿಕೆ !

ಭಯವು - ಬದುಕಿಗೆ ಉಪಕರಿಸಿದ ಪ್ರಸಂಗವಿದು. ಗ್ರಂಥದ ಪ್ರತಿ ತೆಗೆಯುವ - ಅಂದಿನ ಬರವಣಿಗೆಯ ಕರ್ಮದಿಂದಾಗಿ, ಪುರಾಣ ಸಂಬಂಧಿತ ಅನೇಕ ವಿಷಯಗಳು - ಅನಾಯಾಸವಾಗಿ ನಮಗೂ ತಿಳಿಯುವಂತಾಗಿತ್ತು. ಅದರಿಂದಾಗಿ ಭವಿಷ್ಯದಲ್ಲಿ ನಮಗೆ ಮಹದುಪಕಾರವೇ ಆಗಿದೆ. ಆದ್ದರಿಂದ ಭಯವು ಯಾವಾಗಲೂ ಅನರ್ಥಕಾರಿಯಲ್ಲ; ಯಾರು ಯಾರಿಗೆ ಯಾವಾಗ ಹೇಗೆ ಎಂಬುದನ್ನೆಲ್ಲ ಭಯದ ಹಿನ್ನೆಲೆಯಲ್ಲಿ ಪರಿಶೀಲಿಸದೆ - ಸಾರಾಸಗಟಾಗಿ ಭಯನಿಂದನೆಯು ಸೂಕ್ತವಲ್ಲ.

"ಉದ್ಧರೇದಾತ್ಮನಾತ್ಮಾನಂ" ಎಂಬ ಮಾತಿನಲ್ಲಿ... ಉದ್ಧಾರಕ್ಕಾಗಿ ಹಂಬಲಿಸುತ್ತ ಉದ್ಧಾರದ ಹಾದಿಯನ್ನು ಕ್ರಮಿಸುವವನಾಗು... ಎಂಬ ಸೂಚನೆಯೂ ಇದೆ. ಮನಸ್ಸಿದ್ದಲ್ಲಿ ಮಾತ್ರವೇ ಮಾರ್ಗವು ತೆರೆದುಕೊಳ್ಳುತ್ತದೆ ಎಂಬ ಪರೋಕ್ಷ ಸೂಚನೆಯೂ ಇದೆ. ಮನಸ್ಸನ್ನು ಸಿದ್ಧಗೊಳಿಸಿಕೋ... ಶುದ್ಧಗೊಳಿಸಿಕೋ...ನಿನಗೆ ನೀನೇ ಸ್ನೇಹಿತ... ನಿನಗೆ ನೀನು ಉಪಕರಿಸು... ಎಂಬ ಸಾಂಕೇತಿಕ ಸಂದೇಶವೂ ಇದೆ. ಯಾವುದೇ ಸತ್ಕಾರ್ಯಗಳಲ್ಲಿ ತೊಡಗುವ ಮನಸ್ಸಿಲ್ಲದಿದ್ದಲ್ಲಿ ಅಂತಹ ಮನಸ್ಸನ್ನು ಸಾತ್ವಿಕ ಭಯದ ಮೂಲಕವಾದರೂ ಪ್ರಯತ್ನಪೂರ್ವಕ ಪಳಗಿಸಿಕೊಂಡು ಉದ್ಧಾರದ ಹಾದಿಯನ್ನು ಹಿಡಿ - ಎಂಬ ಸಂಜ್ಞೆಯೂ ಇದೆ. ಉದ್ಧರಿಸುವ ಉಪಾಯಗಳಾಗಿ ಸಮರ್ಥವಾಗಿ ಬಳಸಿಕೊಂಡಾಗ, ಸಾಮ ದಾನ ಭೇದ ದಂಡ - ಎಲ್ಲವೂ ಮನಸ್ಸಿನ ಸಂಸ್ಕರಣೆಗೆ ಉಪಯುಕ್ತವೇ ಆಗುತ್ತದೆ; ಬಳಸಿಕೊಳ್ಳುವ ಸ್ಥಾನವು ಸಮರ್ಥವಾಗಿದ್ದರೆ!


"Fill the brain with high thoughts, highest ideals, Place them day and night before you... and out of that will come great work..." - Swami Vivekananda.

ಮನೋನಿಗ್ರಹ ದ ಮತ್ತು ಮನೋವಿಗ್ರಹ ದ ದಿಕ್ಕಿನಲ್ಲಿ ಉಪಯುಕ್ತವಾದ ಬೋಧನೆಯಿದು. ಗುರಿಯತ್ತ ದೃಷ್ಟಿ ನೆಟ್ಟ ಧನುರ್ಧಾರಿಯ ಏಕಾಗ್ರತೆಯದು. ಆದರೆ... ಮುಖ್ಯ ಚಿತ್ರವನ್ನು ಲಕ್ಷಿಸದೆ, ಕೇವಲ ಚೌಕಟ್ಟಿನಲ್ಲಿಯೇ ವ್ಯಸ್ತರಾದಂತೆ - ಶರೀರದ ಅಂದಂದಿನ ಸುಖ ದುಃಖಗಳಲ್ಲಿ ಮಾತ್ರವೇ ಸಂಪೂರ್ಣ ಮಗ್ನವಾಗಿರುವ ಹಲವಾರು ಆಧುನಿಕ ಚಿಂತನೆಗಳು ನಮ್ಮನ್ನು ವಿಸ್ಮಯಗೊಳಿಸುವಂತಿವೆ.

ಕೂದಲು ಬೆಳೆಸುವುದು ಹೇಗೆ ? ಚರ್ಮದ ಕಾಂತಿಗೆ ಏನು ಮಾಡಬೇಕು ? ಉಗುರಿನ ಸೌಂದರ್ಯ ರಕ್ಷಣೆಯ ಸೂತ್ರಗಳು... ಇತ್ಯಾದಿ ಬರಹಗಳು ಇಂದು ಬಹುಬೇಡಿಕೆಯ ಸಾಹಿತ್ಯಗಳೆನ್ನಿಸುತ್ತಿವೆ ! ನಿಷ್ಫಲ ಮಾರಿಗಳನ್ನೇ ಮಾರುತ್ತ, ದ್ರವ್ಯ ಸಂಪಾದನೆಗೆ ಇಳಿದಿರುವ ಟೊಳ್ಳುಗಳನ್ನು ಯುವಶಕ್ತಿಗಳು ಅನುಸರಿಸುತ್ತ, ಅದರಿಂದ ಶೀಘ್ರ ಫಲವನ್ನೂ ನಿರೀಕ್ಷಿಸುವಂತಹ ಅವಿವೇಕಿಗಳನ್ನು ಇಂದಿನ ಬರಹಗಳು ರೂಪಿಸುತ್ತಿವೆ. ಶಕ್ತಿವರ್ಧಕಗಳೆಂಬ ಮಾಯೆಯ ಹೆಸರಿನಲ್ಲಿ ದೊಡ್ಡ ದೊಡ್ಡ ವಹಿವಾಟುಗಳೂ ನಡೆಯುತ್ತಿವೆ. ಮನುಷ್ಯರಿಗೆ ತಮ್ಮ ಶರೀರದ ಆರೋಗ್ಯದ ಚಿಂತೆ ಹೇಗಿರಬೇಕು ? ಎಷ್ಟಿರಬೇಕು ? ನಿಜವಾಗಿಯೂ ಆರೋಗ್ಯ ಎಂದರೇನು ? ಎಂಬ ವಿವೇಕವನ್ನು ಮೂಡಿಸುವವರ ಪ್ರಮಾಣವು ಮಾತ್ರ ಇಳಿಮುಖವಾಗುತ್ತಿದೆ. ನೈಜ ಗುರುಗಳನ್ನು - "ಏನ್ಮಹಾ ?" ಎನ್ನುತ್ತ ತಮಗೆ ತಾವೇ ಗುರು ಎಂದುಕೊಳ್ಳುತ್ತಿರುವ ದಿಕ್ಕೆಟ್ಟ ಸ್ಥಿತಿಯಿದು !

ಇವತ್ತಿನ ಮನೆಮನೆಗಳ ಅಶಿಸ್ತು ಮತ್ತು ಅಶ್ಲೀಲತೆಗಳಿಗೆ - ಅಂಕೆ ತಪ್ಪಿದ ಮನಸ್ಸುಗಳೇ ಕಾರಣ. ಮನಸ್ಸನ್ನು ಸಂಸ್ಕರಿಸುವ ಶಿಕ್ಷಣಕ್ಕೆ ನಾವು ತಿಲಾಂಜಲಿ ಇಟ್ಟಂತಿದೆ. ಕೇವಲ ಕರ್ಮದ ದಕ್ಷತೆಯೊಂದರಿಂದಲೇ ಮನಸ್ಸನ್ನು ಸಂಸ್ಕರಿಸಲಾಗುವುದಿಲ್ಲ; ಮರ್ಮದ ಭಾವಘನತೆಯನ್ನೂ ಊಡಿಸಬೇಕಾಗುತ್ತದೆ - ಅಲ್ಲವೆ ? ನಾಗರಿಕರ ಆದರ್ಶ, ಜವಾಬ್ದಾರಿ, ಮಾನವೀಯ ಭಾವಪುಷ್ಟಿ, ಕೃತಜ್ಞತೆ ಮುಂತಾದ ಜೀವಪರ ಭಾವವನ್ನು ಮೂಡಿಸಲಾಗದ ಆಧುನಿಕ ವಿದ್ಯೆಯಿಂದ ಕೆಡುಕಿನ ಮನೋಸಮೂಹವನ್ನು ಸೃಷ್ಟಿಸಿದಂತಾಗಿ ಜೀವನಾಶಕಗಳನ್ನೇ ಉತ್ಪಾದಿಸಿದಂತಾಗದೆ ?

ಎಲ್ಲೂ ಉಪಯೋಗಕ್ಕೆ ಬಾರದ - ಭಾವಹಂತಕ ಬೌದ್ಧಿಕ ಕಸರತ್ತುಗಳನ್ನೆಲ್ಲ ವಿದ್ಯೆ ಎನ್ನಲಾದೀತೆ ? ತಮ್ಮ ನೆಲದ ಸಂಸ್ಕೃತಿಯನ್ನೇ ಅಪಹಾಸ್ಯ ಮಾಡುವ, ಅಹಂಕಾರ ಒಂದನ್ನಲ್ಲದೆ ಆತ್ಮಗೌರವವನ್ನು ಕಿಂಚಿತ್ತೂ ಬೆಳೆಸಲಾಗದ ವಿದ್ಯೆ ಎಂಬ ಅಲಂಕಾರವನ್ನು ನೀಡುವುದಕ್ಕಿಂತ - ನೀಡದಿರುವುದೇ ಉತ್ತಮವಲ್ಲವೆ ? ಆಯಾ ಅಂತಃಸತ್ವವನ್ನು ಪ್ರಚೋದಿಸಿ ಉದ್ದೀಪನಗೊಳಿಸಲಾಗದ - "ಗುಂಪಿನ ಗೋವಿಂದ" ದಂತಹ ಶಿಕ್ಷಣವಾದರೂ ಏಕೆ ಬೇಕು ? ಇಂದಿನ ವಿದ್ಯಾವಂತರಿಗಿಂತ ಅವಿದ್ಯಾವಂತರೆಂದು ಕರೆಸಿಕೊಳ್ಳುವ ಮಂದಿಯೇ ಮಾನಸಿಕವಾಗಿ ಹೆಚ್ಚು ಸ್ವಸ್ಥರಾಗಿಲ್ಲವೆ ? ಸದ್ಭಾವ ಪುಷ್ಟಿಯ ಕೊರತೆಯೇ ಇಂದಿನ ಸಾಮಾಜಿಕ ಅಸ್ವಸ್ಥತೆಯ ಮೂಲ ಕಾರಣ.

ಸ್ವಸ್ಥ ಮನಸ್ಸು, ಬುದ್ಧಿಬಲ, ಅಧ್ಯಾತ್ಮ ಬಲವಿಲ್ಲದೆ - ಕೇವಲ ಶರೀರ ಬಲವೊಂದನ್ನೇ ಹೊಂದಿದ್ದರೆ - ಅದು ಪೂರ್ಣ ಸುಖಾನುಭವ ಆದೀತೆ ? ಹೌದು. ಮನಸ್ಸು ಎಂಬ ಒಂದು ಕೋಣೆಯನ್ನು ಮೊದಲು ಸ್ವಚ್ಛಗೊಳಿಸಿಕೊಂಡರೂ ಇತರ ಕೋಣೆಗಳ ಉಸ್ತುವಾರಿಯನ್ನೂ ಮರೆಯಲಾಗುವುದಿಲ್ಲ. ಆದರೆ... ಅಂಗಳ ಗುಡಿಸಿದರೆ ಮನೆಯನ್ನು ಗುಡಿಸಿದಂತೆ ಆಗುವುದಿಲ್ಲ ಅಲ್ಲವೆ ? ನಿನ್ನೆ ಗುಡಿಸಿದ್ದರೂ ಇಂದು ಮತ್ತು ಪ್ರತೀದಿನವೂ ಗುಡಿಸುವುದನ್ನು ನಿಲ್ಲಿಸಲಾಗುವುದೂ ಇಲ್ಲ. ಶರೀರ ಎಂಬ ಮನೆಯನ್ನು ವಾಸಯೋಗ್ಯಗೊಳಿಸಿಕೊಳ್ಳಲು ಅಂತಃ ಬುದ್ಧಿ ಶುದ್ಧಿಗಳ ಕಡೆಗೂ ಗಮನ ಹರಿಸಬೇಕಾಗುತ್ತದೆ. ಸ್ವಚ್ಛ ಹಾಳೆಯಲ್ಲಿ ದಾಖಲಿಸುವ ವಿಚಾರಗಳು ಮರು ಓದಿಗೂ ಹೇಗೆ ಸುಲಭವಾಗಿರುತ್ತದೋ ಹಾಗೆ.

ಯಾವುದೇ ಧೀರ ಧೀಮಂತ ಬದುಕುಗಳಲ್ಲಿ - ಶರೀರವನ್ನು ಸದುಪಯೋಗಕ್ಕೆ ಮಾತ್ರ ದುಡಿಸಿಕೊಂಡ ಮನೋಪಾತಳಿ ಇರುವುದನ್ನು ಗಮನಿಸಬಹುದು. ಚೈತನ್ಯ, ಲಾವಣ್ಯ, ತೇಜಸ್ಸು, ದಿವ್ಯತೆ - ಮುಂತಾದ ಅನನ್ಯಗಳೆಲ್ಲವೂ ಸಾಧ್ಯವಾಗುವುದು - ಮನಸ್ಸು ದೇಹಗಳ ಸ್ವಚ್ಛತೆಯನ್ನು ಸಾಧಿಸುವುದರಿಂದಲೇ ಆಗಿದೆ. ಮುಖ್ಯವಾಗಿ, ಬದುಕಿನ ಸ್ವಚ್ಛತೆಯು - ಮನಸ್ಸಿನ ಸ್ವಚ್ಛತೆಯದೇ ಪ್ರತಿಬಿಂಬ. ಆದ್ದರಿಂದ - ಅಂಗಳವನ್ನು ಗುಡಿಸಿ, ನಿತ್ಯ ವಾಸಿಸುವ ಮನಸ್ಸಿನ ಮನೆಯನ್ನು ನಗಣ್ಯಗೊಳಿಸುತ್ತಿರುವ ಆಧುನಿಕ ಶರೀರನಿಷ್ಠ ಚಿಂತನೆಗಳು ನಿಜವಾಗಿಯೂ "ಜೀವಪರವೆ ?".. ಯೋಚಿಸಬೇಕು.

ಎಲ್ಲರೂ ವಿದ್ಯಾರ್ಥಿಗಳೇ ಆಗಿರುತ್ತಾರೆ. ವಿದ್ಯಾರ್ಥಿದೆಸೆ ಎಂಬುದು ಮುಗಿದು ಹೋಗುವ ಅವಸ್ಥೆ ಅಲ್ಲವೇ ಅಲ್ಲ. ಆದ್ದರಿಂದ ಮನೋವ್ಯಾಪಾರಕ್ಕೆ ವಿಶ್ರಾಂತಿ ಇರುವುದಿಲ್ಲ. ವಿಶ್ರಾಂತಿ ನೀಡಿದರೆ - ಮನೋಭೂಮಿಯಲ್ಲಿ ಕಳೆ ಬೆಳೆದು, ಬೆಳೆ ಕಾಣದೆ ಹಡಿಲು ಬೀಳುತ್ತದೆ. ಆದ್ದರಿಂದ ಶರೀರ ಎಂಬ ವಿದ್ಯಾಲಯದ, ಮನಸ್ಸು ಎಂಬ ಪ್ರಯೋಗಶಾಲೆಯಲ್ಲಿ ಸದ್ವಿಚಾರದ ಅನ್ವೇಷಣೆಗಳು ನಡೆಯುತ್ತಲೇ ಇರಬೇಕು. ತನ್ನನ್ನು ತಾನು ಅರಿಯುವ ಅನ್ವೇಷಣೆ ಅದು. ಗುರಿ ತಲುಪಿಸುವ ತಲ್ಲೀನತೆಯನ್ನು ಸಾಧಿಸುವ ಇಚ್ಛೆಯಿಂದ ಎಚ್ಚರದ ಮನಃಸ್ಥಿತಿಯುಳ್ಳ ಯಾವುದೇ ವಿದ್ಯಾರ್ಥಿಗಳಲ್ಲಿ - ಅಂತರ್ಮುಖಿಯಾದ ನಿಶ್ಚಲ ಮನಸ್ಸು ಅವಶ್ಯಕ. ಆದ್ದರಿಂದ ಅಧ್ಯಯನ ಮತ್ತು ಸಾಧನೆಯ - ಈ ಬದುಕಿನ ಹಾದಿಯಲ್ಲಿ - ಎಲ್ಲರೂ ಯಾವಾಗಲೂ ವಿದ್ಯಾರ್ಥಿಗಳೇ.

ಗಾಂಭೀರ್ಯವಿಲ್ಲದ ಬದುಕಿನ ಶೈಲಿಯನ್ನೇ - ಇಂದು - ಆಧುನಿಕತೆ ಎನ್ನುವಂತೆ ಕಾಣುತ್ತಿದೆ. ಆದ್ದರಿಂದಲೇ - ಹೂಂ ಅಂತೀಯಾ ? ಊಹೂಂ ಅಂತೀಯಾ ? ಎಂಬ ಪ್ರಾಥಮಿಕ - ಅಗ್ಗದ ಪ್ರೀತಿಯ ಶಾರೀರಿಕ ಮಾರ್ಗದಲ್ಲಿ - ಈಗ ವಿಪರೀತ ನೂಕು ನುಗ್ಗಲು. ಅಶಾಂತಿಗೆ ಕಾರಣವಾಗುವ ಇಂತಹ ಅಲೆಮಾರೀ ಕಲ್ಪನೆಗಳು ಪ್ರಬುದ್ಧ ಮನಸ್ಸುಗಳಿಗೆ ಅರ್ಥಹೀನ ಮಮಕಾರ ಎನ್ನಿಸುವಂತಿದ್ದರೂ - ಸ್ವಯಂ ಪೋಷಕರಿಗೆ ಹಾಗನ್ನಿಸದಿರುವುದು ಸ್ವಾಭಾವಿಕ. ಅದೇ ಮನಸ್ಸಿನ ಚಮತ್ಕಾರ. ಇಂತಹ ಮನಸ್ಸುಗಳು - ಬಂಧನದ ಗಂಟನ್ನು ಬಿಗಿಸಿಕೊಳ್ಳುತ್ತಲೇ ಸಾಗುತ್ತವೆ; ದುಃಖವನ್ನು ಆಹ್ವಾನಿಸುತ್ತಲೇ ಇರುತ್ತವೆ.

ಬಂಧನದ ಮೊದಲ ಸ್ವಾದವೇ - ಬರಿಗಣ್ಣಿಗೆ ಕಾಣಿಸುವ ಸಂಚಾರೀ ಪ್ರೀತಿ ಅಥವ ಲೌಕಿಕರ ಸ್ವಾರ್ಥಪ್ರೇರಿತ ಪ್ರೀತಿ. ಇದು - ಸಂಸಾರವಂದಿಗರ ಅಲೆಮಾರೀ ಪ್ರೀತಿ ! ಪ್ರೀತಿ ಎಂಬುದು - ಕೇವಲ ತನ್ನ ಸಾಂಸಾರಿಕ ಸೆಳೆತದಲ್ಲಿಯೇ ಹೊರಳಾಡುತ್ತಿದ್ದರೆ - ಅದು ತನ್ನ ಗೂಡನ್ನೇ ಕಚ್ಚಿ ತಿನ್ನತೊಡಗುವ ಪೀಡೆಯೂ ಆಗಬಲ್ಲದು. ಎಚ್ಚರ ಎಂಬ ಸಾತ್ವಿಕ ಭಯವು ಮಾತ್ರ ಮೂಡಿಸಬಲ್ಲ ಭಾವವಿದು.

ಮನುಷ್ಯರಲ್ಲಿ ಹರಿದಾಡುತ್ತಿರುವ "ಅನುಕೂಲಕ್ಕೆ ತಕ್ಕಂತೆ ಒದಗುವ" ಸ್ವಾರ್ಥಪೂರಿತ ಪ್ರೀತಿಭಾವವು ಕೇವಲ ತರಬೇತಿರಹಿತವಾದ ಮನೋಜನ್ಯವಾಗಿದ್ದು, ಇದನ್ನೇ ಬಂಧನ ಎನ್ನುವುದು. ದುಃಖ, ನಿರಾಶೆಯನ್ನು ಮಾತ್ರ ಪ್ರಸಾದಿಸಬಲ್ಲ ಬಂಧನವಿದು. ಬದುಕಿನ ನವರಸಗಳಲ್ಲಿ ಅತ್ಯಂತ ಸುಲಭ ಮತ್ತು ಆಕರ್ಷಕ ಎನ್ನಿಸಿದರೂ - ನಿಷ್ಕಾಮವಾಗಲಾಗದ ಕಾರಣದಿಂದಲೇ, "ಪ್ರೇಮರಸ" ಎಂಬುದು ಮನುಷ್ಯರಿಗೆ ಪ್ರಾಯೋಗಿಕವಾಗಿ ಅತ್ಯಂತ ಕಠಿಣಸಾಧ್ಯವಾಗಿ, ಯಶಸ್ಸೆಂಬುದು ದುರ್ಭರವಾಗುತ್ತಿದೆ. ಏಕೆಂದರೆ... ನಮ್ಮ ನಿತ್ಯ ಬದುಕಿನಲ್ಲಿ ಸುಳಿದಾಡುವ ವ್ಯಾವಹಾರಿಕ ದೃಷ್ಟಿಯ ಬಗೆಬಗೆಯ ಪ್ರೇಮಭಾವಗಳು - ವಾಸ್ತವವಾಗಿ - ಶುದ್ಧ ಪ್ರೇಮವಾಗಿ ಇರುವುದಿಲ್ಲ. ಅದು - ಕೊಡುಕೊಳ್ಳುವ ಮನೋನೆಲೆಯ ಸ್ವಾರ್ಥ ವ್ಯವಹಾರಗಳಷ್ಟೇ ಆಗಿ ಉಳಿದುಬಿಡುತ್ತಿವೆ. ಆದ್ದರಿಂದಲೇ ಎಷ್ಟು ಗೋಳಾಡಿದರೂ - ಯಾರಿಗೂ - ನಿಜ ಪ್ರೇಮದ ಸವಿಯ ಅನುಭವವು ದಕ್ಕುವುದಿಲ್ಲ; ಮನಸ್ಸಿನ ತಳಮಳವೂ ತಗ್ಗುವುದಿಲ್ಲ.

"ಪ್ರೀತಿಸುವುದು ಅತ್ಯಂತ ಸುಲಭ ಕಾರ್ಯ ಎಂದು - ಜನರೇನೋ ನಂಬಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರೀತಿಸುವ ಸಾಮರ್ಥ್ಯ ಇದ್ದರೂ - ನಿಜವಾಗಿ ಪ್ರೀತಿಸುವುದು ಮಾತ್ರ - ಒಂದು ಅಸಾಮಾನ್ಯ ಸಿದ್ಧಿಯೇ ಸರಿ.." ಎಂದಿರುವ ಜರ್ಮನಿಯ ಪ್ರಖ್ಯಾತ ಮನಃಶಾಸ್ತ್ರಜ್ಞ ಎರಿಕ್ ಫ಼್ರಾಂ ಎಂಬಾತ ಅಸಂಖ್ಯಾತ ಮನಸ್ಸುಗಳೊಂದಿಗೆ ಒಡನಾಡಿ, ತಾನು ಕಂಡುಕೊಂಡ ಸತ್ಯವನ್ನು ಜಗತ್ತಿನ ಮುಂದೆ ಇಟ್ಟುಹೋಗಿದ್ದಾರೆ. ಅವರು, ಪ್ರೇಮಭಾವದ ಸರಳತೆಯೊಳಗಿನ ನಿಗೂಢತೆಯನ್ನು ಸೂಕ್ಷ್ಮವಾಗಿ ನಮ್ಮ ಮುಂದೆ ತೆರೆದಿರಿಸಿದ್ದಾರೆ. ಸ್ವಚ್ಛ ಮನಸ್ಸನ್ನು ಸ್ಥಾಪಿಸಿಕೊಳ್ಳದೆ ಸ್ವಚ್ಛ ಪ್ರೀತಿಯು ದಕ್ಕುವುದಿಲ್ಲ ಎಂಬುದೇ ಗೂಢಾರ್ಥ. ಕೇವಲ ಮನಸ್ಸಿನಲ್ಲಿ ಹಂಬಲಿಸಿದ ಮಾತ್ರಕ್ಕೇ - ಅಶುದ್ಧಗೊಂಡಿರುವ ಮನೋಕ್ಷೇತ್ರದಲ್ಲಿ, ಯಾವುದೇ ರಸಭಾವದ ನೈಜ ಅನುಭೂತಿಯ ಸಂವಹನವು ಅಸಾಧ್ಯ.

ಇಂತಹ ಯಾವುದೇ ಸಾಧನೆಗಳು ಅವಸರದಲ್ಲಿ ಸಂಭವಿಸುವುದಿಲ್ಲ. ಯಾವುದೇ Crash Course ಗಳಿಂದ ಪರಿಣಾಮ ಮೂಡುವುದೂ ಇಲ್ಲ. ಸ್ವಭಾವ ಶುದ್ಧಿಯ ಹಾದಿಯಲ್ಲಿ ಹಂತಹಂತವಾಗಿ ಕ್ರಮಿಸಿದಾಗ ಮಾತ್ರವೇ ಶ್ರೇಯಸ್ಸಿನ ಅನುಭವ ಆಗಬಲ್ಲದು. ಏಕಾಂತದ ಧ್ಯಾನ, ಶುದ್ಧ ಸಂಗೀತ, ಅರಳಿಸಬಲ್ಲ ಸಾಹಿತ್ಯ, ಪ್ರಕೃತಿಯ ಸಾಮೀಪ್ಯ... ಇವುಗಳೆಲ್ಲವೂ ಪ್ರಸನ್ನ ಚಿತ್ತರನ್ನಾಗಿಸುತ್ತ ರಥ ಸಾರಥಿಯ ಚಿತ್ತ ಶುದ್ಧಿಗೆ ನೆರವಾಗಬಲ್ಲ ಸರಕುಗಳು.

ಶ್ರದ್ಧೆ ಮತ್ತು ಶ್ರಮದಿಂದ ಮಾತ್ರವೇ ಮನಸ್ಸನ್ನು ನಿಗ್ರಹಿಸಲು ಸಾಧ್ಯ. ಭಾರತೀಯ ವೈದಿಕ ಮಾರ್ಗದಲ್ಲಿ ಸಹಸ್ರಾರು ವರ್ಷಗಳ ಹಿಂದೇ - "ಚಿತ್ತವೃತ್ತಿ ನಿರೋಧ" ಎಂಬ ಸೂಚನೆಯು ಪುನರಾವರ್ತನೆಗೊಳ್ಳುತ್ತ ಬಂದಿದ್ದು, ಶಾಂತ ಬದುಕನ್ನು ಸಾಧಿಸುವ ಮಾರ್ಗದರ್ಶನವು ನಮ್ಮ ಮುಂದಿದೆ. ಮನಸ್ಸಿನಲ್ಲಿ ಮೂಡುವ ಎಲ್ಲ ಬಗೆಯ ಯೋಚನೆ ಮತ್ತು ಹಂಬಲಗಳನ್ನು ಸರ್ವಥಾ ವಿರೋಧಿಸಿ, ಮನಸ್ಸನ್ನು ಸ್ವಚ್ಛಗೊಳಿಸಿ, ಚಿತ್ತದ ಏಕಾಗ್ರತೆಯನ್ನು ಸಾಧಿಸುವ ಮಾರ್ಗವಿದು; ಮನಸ್ಸನ್ನು ಹದ್ದುಬಸ್ತಿನಲ್ಲಿಡುವ ಯೋಗವ್ಯಾಯಾಮ.


ನಮ್ಮ ಹೊರಗಣ್ಣಿಗೆ ಕಾಣಿಸಿಕೊಳ್ಳದ ಮನಸ್ಸೇ - ಮನುಷ್ಯನನ್ನು ಆಡಿಸುತ್ತಿರುತ್ತದೆ. ಮನಸ್ಸು ಎಂಬುದು - ಭೂಮಿಯಂತೆ. ಆಯಾ ನೆಲೆಯಲ್ಲಿ ಬಿತ್ತುವ ಬೀಜದ ಶಕ್ತಿ ಮತ್ತು ಅದರ ಹೋರಾಟದ ಫಲವಾಗಿ - ಭೂಮಿಯು ತನ್ನ ನೆಲದಲ್ಲಿ ಬೇರುಬಿಡಲು ಬೀಜಕ್ಕೆ ಆಶ್ರಯವನ್ನು ನೀಡುವಂತೆ - ಮನಸ್ಸೂ ಕೂಡ ವರ್ತಿಸುತ್ತದೆ. ಮನಸ್ಸನ್ನು ನಿಯಂತ್ರಿಸುವ ಹೋರಾಟದಲ್ಲಿ ತೊಡಗಿಕೊಂಡ ಅವಸ್ಥೆಗಳಲ್ಲಿ ಮಾತ್ರ - ಫಲಾನುಭವದ ಅನುಭೂತಿಯು ಸಾಧ್ಯ. ಈ ಹೋರಾಟದ ಹಾದಿಯಲ್ಲಿಯೂ, ಬಿತ್ತಿದ ಬೀಜಗಳೆಲ್ಲವೂ ಮೊಳೆಯಲಾರವು. ಒಂದೊಮ್ಮೆ ಮೊಳೆತರೂ ಪೂರ್ಣತೆ ಕಾಣದೆ ಕಮರಿಹೋಗಬಹುದು. ಮಳೆಯಂತೆ - ಭಗವಂತನ ಕೃಪಾವರ್ಷವಾದಾಗ ಮಾತ್ರವೇ ಅನುಗ್ರಹರೂಪದಲ್ಲಿ - ಆಂತರಂಗಿಕ ಚೈತನ್ಯಶಕ್ತಿಯು ಅರಳಬಲ್ಲದು. ಇಂತಹ ಯೌಗಿಕ ಸಂಕಲ್ಪ ಶಕ್ತಿಗೆ ಮಾತ್ರ ಮನಸ್ಸು ಮಣಿಯುತ್ತದೆ ಮತ್ತು ತನ್ನಿಂದಾಚೆಗಿನ ಮಹಾ ಚೈತನ್ಯವನ್ನು ಸಂಧಿಸಿ ಸಂಚರಿಸಲು ದಾರಿ ಬಿಡುತ್ತದೆ. ಮಣ್ಣಿನಲ್ಲಿ ತಪಸ್ಸುಗೈಯ್ಯುವ ಬೀಜದ ವಿರಾಗವು ಮನಸ್ಸಿನ ಸ್ವಾಭಾವಿಕವಾದ ಸ್ಥಿತಿಯಾದಾಗ ಮಾತ್ರ - ಮನಸ್ಸಿನ ಕದವು ತೆರೆಯುತ್ತದೆ; ಬೆಳಕು ಕಾಣುತ್ತದೆ. ಬಿತ್ತಿದ ಬೀಜವು ಮೊಳೆತು ಸಸಿಯಾಗಿ ಮರವಾಗಿ ಫಲವನ್ನೂ ನೀಡುತ್ತದೆ; ಕಾಲಕ್ರಮದಲ್ಲಿ, ಪ್ರಕೃತಿವೃತ್ತದ ನಿಯಮಾನುಸಾರ - ಮರಳಿ ಮಣ್ಣನ್ನೇ ಸೇರುತ್ತದೆ. ಇದೇ ಬೀಜಾಂಕುರ ನ್ಯಾಯ ! ಬೀಜದಿಂದ ವೃಕ್ಷ, ವೃಕ್ಷದಿಂದ ಬೀಜ... ಹೀಗೆ ಕಾರ್ಯ ಕಾರಣಗಳ ಪರಸ್ಪರ ಅನಿವಾರ್ಯ ಅವಲಂಬನೆಯನ್ನು ಹೇಳುವ ನ್ಯಾಯವಿದು. ಮನಸ್ಸಿನ ಪಾತಳಿಯ ಶುಚಿತ್ವದಂತೆಯೇ ಮನುಷ್ಯನ ಬದುಕು ವರ್ತಿಸುತ್ತಿರುತ್ತದೆ. ಅದಕ್ಕಾಗಿ, ಅಂತರ್ಮುಖೀ ಚಿಕಿತ್ಸೆಗೆ ಒಡ್ಡಿಕೊಳ್ಳಬೇಕಾಗುತ್ತದೆ.

ಮನಸ್ಸಿನ ಸ್ವಾಭಾವಿಕ ಗುಣವೇ ಅಡ್ಡಿಪಡಿಸುವುದು; ಚಾಂಚಲ್ಯ ಮೂಡಿಸುವುದು ! ಅದು - ಮನಸ್ಸಿನ ಸ್ವಭಾವ. ಇಂತಹ ಚಂಚಲ ಸ್ವಭಾವದ ಮನಸ್ಸನ್ನು ನಿಗ್ರಹಿಸಲು ಹೆಚ್ಚು ಸಹಕರಿಸುವ ಕ್ರಿಯೆಯೇ ಪ್ರಾಣಾಯಾಮ. ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣಾ ಮುಂತಾದ ಯೋಗ ಸಾಧನೆಗಳು ಮನೋನಿಗ್ರಹಕ್ಕಾಗಿಯೇ ಹುಟ್ಟಿಕೊಂಡವುಗಳು. ಯೋಗದಿಂದ ಪರಮಾತ್ಮನ ಅನುಭವ ಆಗದಿದ್ದರೂ ಬದುಕಿನ ನೆಮ್ಮದಿಯ ಹಾದಿಯು ಪ್ರಶಸ್ತಗೊಳ್ಳುತ್ತದೆ. ಸಾಧನೆಯ ಚರಮ ಹಂತದ - ಸಮಾಧಿ ಎಂಬ "ಪರಮಾನಂದ ಸ್ಥಿತಿಯನ್ನು" ತಲುಪುವ ಪೂರ್ವಸಿದ್ಧತೆಯಂತೆಯೂ ಯೋಗಾಭ್ಯಾಸಗಳು ಬಳಕೆಯಾಗುತ್ತವೆ. ಪೂರ್ಣಕಾಲಿಕ ತನ್ಮಯತೆಯಿದ್ದಾಗ ಮಾತ್ರ - ಭೋಗದ ಬದುಕುಗಳನ್ನು ಸುಯೋಗದತ್ತ ಕರೆದೊಯ್ಯುವ ಶಕ್ತಿಯೂ ಯೋಗ ಕ್ರಿಯೆಗಳಿಗಿದೆ. ತನ್ಮೂಲಕ ತಾಳ್ಮೆ, ಸದಿಚ್ಛೆಯ ಸಚ್ಚಿಂತನೆಗಳನ್ನು ರೂಢಿಸಿಕೊಳ್ಳುತ್ತ ಮನಸ್ಸನ್ನು ತೊಳೆಯುವ ಇಚ್ಛಾಪೂರ್ವಕ ಕ್ರಿಯೆಗಳು ಸಂಭವಿಸತೊಡಗುತ್ತವೆ. ಉತ್ತಮಿಕೆಯನ್ನು ಸ್ಥಾಪಿಸಿಕೊಳ್ಳುವ ಸಾಧನೆಯಲ್ಲಿ ನಿರತವಾಗುವ ಮನಸ್ಸುಗಳು ನಿರಂತರ ಸಾಧನೆಯನ್ನು ಅವಲಂಬಿಸಬೇಕಾಗುತ್ತದೆ. ಪ್ರತಿಯೊಂದು ಶರೀರದಲ್ಲಿಯೇ ಹುಟ್ಟಿ ಬೆಳೆದು ಸಂಘಟಿತವಾಗುವ ಕಾಮ ಕ್ರೋಧ ಮುಂತಾದ ವಿಕಾರಗಳು ಮತ್ತು ಜಡಶಕ್ತಿಗಳ - ಮುಕ್ತ ಸಂಚಾರೀವಲಯವಾದ ಮನಸ್ಸುಗಳನ್ನು ಹತೋಟಿಯಲ್ಲಿಡುವ ಸತತ ಯತ್ನಗಳು - ಉನ್ನತಿಗಾಗಿ ಹಂಬಲಿಸುವ ಶರೀರ ಮಾಧ್ಯಮದಿಂದ ನಡೆಯುತ್ತಲೇ ಇದ್ದಾಗ, ಮನಸ್ಸು ಸಂಸ್ಕರಿಸಲ್ಪಟ್ಟು - ದೇಹ ಮನಸ್ಸುಗಳು ಇಚ್ಛೆ ಮತ್ತು ಕ್ರಿಯೆಯ ಏಕಸೂತ್ರಕ್ಕೆ ಅಳವಡುವುದು ಸಾಧ್ಯವಾಗುತ್ತದೆ.

ಮನಸ್ಸಿನ ತುಂಟಾಟಗಳು ಸ್ಥಗಿತಗೊಳ್ಳದೆ - ಬುದ್ಧಿಯ ಸ್ವರೂಪದರ್ಶನವು ಆಗಲಾರದು; ಬುದ್ಧಿಯು ಸಕ್ರಿಯವಾಗಲಾರದು. ವಿವೇಕಪೂರ್ಣ ಬುದ್ಧಿಯು ರಂಗಕ್ಕಿಳಿಯದೆ ಇಚ್ಛಿತ ಕರ್ಮಗಳು ಅಪೇಕ್ಷೆಯಂತೆ ನಡೆಯಲಾರವು; ಬದುಕು ಸುಗಮವಾಗದು. ಆದ್ದರಿಂದ - ಪ್ರಶಾಂತ ಮನೋಪರಿಸರವನ್ನು ರೂಪಿಸಿಕೊಳ್ಳುವುದರಲ್ಲಿಯೇ ಬದುಕಿನ ಯಶಸ್ಸು ಅಡಗಿದೆ. ಆದ್ದರಿಂದ, ದಿನಬೆಳಗಾದರೆ ದುಃಖ ಕಷ್ಟಗಳ ಮಾಯಕದ ಸುದ್ದಿಯನ್ನೇ ಮುಂದಿಡುತ್ತ ಮನುಷ್ಯರನ್ನು ತಲ್ಲಣಿಸುವಂತೆ ಮಾಡುವ ಆಯಾ ಮನೋವಲಯವನ್ನು ಸ್ವನಿಯಂತ್ರಣಕ್ಕೆ ತಂದುಕೊಳ್ಳುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಾಗುತ್ತದೆ.

ಮನುಷ್ಯನನ್ನು ಒಡ್ಡನನ್ನಾಗಿಸಿ ಖೆಡ್ಡಕ್ಕೆ ಕೆಡಹುವ - ತುಂಟ ಸ್ಥಾನವೇ ಮನಸ್ಸು. ಮನುಷ್ಯರ ಸುಖ ದುಃಖಗಳೆಲ್ಲವೂ ಮನೋಜನ್ಯವಾದ ಸಂಚಾರೀ ಭಾವಗಳು ಮತ್ತು ಅನಿತ್ಯವಾದವುಗಳು. ಅನಿತ್ಯವಾದುದೆಲ್ಲವನ್ನೂ ಪರಮಸತ್ಯ ಎಂದೇ ಬಿಂಬಿಸುವ ತರಬೇತುಗೊಳ್ಳದ ಮನಸ್ಸುಗಳು, ಮನುಷ್ಯರನ್ನು ದಿಕ್ಕೆಡಿಸುತ್ತಲೇ ಇರುತ್ತವೆ. ಆದ್ದರಿಂದ ಲೋಲುಪತೆಯತ್ತಲೇ ಸ್ವಾಭಾವಿಕವಾಗಿ ವಾಲುವ ಅಂಕೆತಪ್ಪಿದ ಮನಸ್ಸಿನ ಸ್ವಚ್ಛಂದ ಹರಿದಾಟವನ್ನೇ ಹಿಂಬಾಲಿಸಿದರೆ - ನಿರಾಶೆ ನೋವು ಕಟ್ಟಿಟ್ಟ ಬುತ್ತಿ. ಆದ್ದರಿಂದಲೇ ಭಾರತೀಯ ವೈದಿಕ ಶಾಸ್ತ್ರದಲ್ಲಿ ಮನೋನಿಗ್ರಹಕ್ಕೆ ವಿಶೇಷ ಒತ್ತನ್ನು ನೀಡಲಾಗಿದೆ. Dating, Live in Relation, ಮಾತು ಮಾತಿಗೆ ಉದುರುವ SO WHAT ? ವರ್ತನೆಗಳಂತಹ - ಇಂದಿನ ಆಧುನಿಕರ ನಿತ್ಯೋತ್ಸವಗಳೆಲ್ಲವೂ ಅಂಕೆಯಿಲ್ಲದ ಮನಸ್ಸಿನ ಪ್ರತಿಬಿಂಬಗಳು; ಅಸಹನೀಯ ಸ್ಥಿತಿಗಳನ್ನು ಆಹ್ವಾನಿಸುವ ಅಸ್ವಸ್ಥ ಮನಸ್ಸಿನ ಕುಣಿತದ ದ್ಯೋತಕಗಳು.

"ಸ್ವಸ್ಥ ಮನಸ್ಸಿನಿಂದ ಸ್ವಸ್ಥ ಬದುಕು" ಎಂಬ ಭಾರತೀಯ ಯೌಗಿಕ ಸೂತ್ರವನ್ನು ಸುಯೋಗ್ಯ ಸಮಾಜ ನಿರ್ಮಾಣದ ದೃಷ್ಟಿಯಿಂದಲೇ ಸ್ಥಾಪಿಸಲಾಗಿದೆ. ಸರ್ವೇ ಭವಂತು ಸುಖಿನಃ ಎಂಬ ಸದಾಶಯದ ಸೂತ್ರವಿದು. ಕೆರಳದೆ ಅರಳುವ ವಿದ್ಯೆ ಇದು. ಋಷಿ ದ್ರಷ್ಟಾರರ ಅರಿವಿಗೆ ಬಂದು - ಮಾನವ ಕಲ್ಯಾಣಕ್ಕಾಗಿ ಬೋಧಿಸಿದ ತಾತ್ವಿಕ ವಿಷಯಗಳನ್ನು ಕಿಂಚಿತ್ತಾದರೂ ಅರಿತು ಆಚರಿಸದೆ ಹೋದರೆ - ಯಾವುದೇ ಆನಂದದಾಯಕ ಅನುಭವವು ಒದಗಲಾರದು.

ಇತ್ತೀಚೆಗೆ ನನ್ನನ್ನು ಭೇಟಿಯಾಗಿದ್ದ ಒಬ್ಬ ಮಹಿಳೆಯು ತನ್ನ ಅಲೌಕಿಕ ಅನುಭವಗಳನ್ನು (!) ಹೇಳಿಕೊಂಡಿದ್ದರು. ನಾನೂ ಕುತೂಹಲದಿಂದ ಕೇಳಿಸಿಕೊಂಡಿದ್ದೆ. ಆಕೆಯ ಮಾತಿನ ಸಾರಾಂಶ ಇದು.

"ನಿತ್ಯವೂ ಬೆಳಿಗ್ಗೆ ಸೂರ್ಯೋದಯದ ಹೊತ್ತಿನಲ್ಲಿ ಮತ್ತು ಸಂಜೆ ಸೂರ್ಯಾಸ್ತದ ಹೊತ್ತಿನಲ್ಲಿ ಕಡಿಮೆಪಕ್ಷ 15 ನಿಮಿಷವಾದರೂ ಪ್ರಾಣಾಯಾಮ ಮಾಡುತ್ತೇನೆ. ಆ ಹೊತ್ತಿನಲ್ಲಿ ಸರ್ವಾಪರಾಧಗಳನ್ನೂ ಕ್ಷಮಿಸುವಂತೆ ಸರ್ವಶಕ್ತ ಶಕ್ತಿಯನ್ನು ಧ್ಯಾನಿಸುತ್ತೇನೆ. ಇದರಿಂದ ದಿನವಿಡೀ ಉತ್ಸಾಹದಿಂದ ಇರುವಷ್ಟು ಧನಾತ್ಮಕ ಶಕ್ತಿ ಒದಗುತ್ತದೆ. ಆದ್ದರಿಂದ ದಿನವೂ ಆಯಾಸವಿಲ್ಲದೆ 18 - 20 ಗಂಟೆಗಳ ಕಾಲ ನಾನು ದುಡಿಯುತ್ತಿದ್ದೇನೆ. ಇದರಿಂದ ನನ್ನ ಮಾತುಗಳು ಮತ್ತು ಕೃತಿಗಳು ಪ್ರಭಾವಪೂರ್ಣವಾಗಿವೆ. ಇಚ್ಛಾಶಕ್ತಿಯು ಬೆಳೆದಿದೆ. ನಾನು ಯೋಚಿಸಿದ್ದೆಲ್ಲವೂ ಸಂಭವಿಸುತ್ತಿದೆ. ಇದು ನನ್ನ ಸ್ವಂತ ಅನುಭವ..." ಇತ್ಯಾದಿಯಾಗಿ ಹೇಳುತ್ತ ಕೆಲವು ಪವಾಡಸದೃಶ ಘಟನೆಗಳನ್ನೂ ವಿವರಿಸಿದ್ದರು !

ಆಕೆಯ ನಿಷ್ಠೆ ಮತ್ತು ಶಿಸ್ತಿನ ಜೀವನಕ್ರಮವನ್ನು ಮೆಚ್ಚಿಕೊಂಡು ಅಂದು ಶ್ಲಾಘಿಸಿದ್ದ ನಾನು, ಆಕೆಯ ಮಾತುಗಳನ್ನು ಸುಮ್ಮನೆ ಕೇಳಿಸಿಕೊಳ್ಳುವ ಮೂಲಕ ಪ್ರೋತ್ಸಾಹಿಸಿದ್ದೆ. ಅಕೆಯ ವಿವರಣೆಯು - ವಾಸ್ತವವನ್ನು ತಪ್ಪಾಗಿ ಅರ್ಥೈಸಿದ್ದ ಅನ್ನಿಸಿಕೆ ಆಗಿದ್ದರೂ ಆಕೆಯನ್ನು ನಿರುತ್ಸಾಹಗೊಳಿಸಿದಂತೆ ಆಗಬಾರದೆನ್ನುವ ಉದ್ದೇಶದಿಂದ - ಅವಸರದ ಪ್ರತಿಕ್ರಿಯೆಗೆ ಅಂದು ನಾನು ಮುಂದಾಗಿರಲಿಲ್ಲ. ಆಕೆಯಂತೆಯೇ ಯೋಚಿಸುವ ಅನೇಕ ಮನಸ್ಸುಗಳಿವೆ. ಯಾರಾದರೂ ದಿನಕ್ಕೆ 15 - 30 ನಿಮಿಷ ನಿರ್ವಹಿಸುವ ಪ್ರಾಣಾಯಾಮ ಅಥವ ಮನೋವ್ಯಾಯಾಮದಿಂದ - ಅಂದುಕೊಂಡಂತಹ ಯಾವುದೇ ಬಾಹ್ಯ / ಆಂತರಂಗಿಕ ಅದ್ಭುತಗಳು ಸಿದ್ಧಿಸಲು ಸಾಧ್ಯವೆ ? ಶಾರೀರಿಕವಾಗಿ ತಾತ್ಕಾಲಿಕ ಹೊಸತನದ ಅನುಭವ ಆಗಬಹುದಷ್ಟೆ.

ಯೋಗ ಎಂಬುದು ಆತ್ಮಶುದ್ಧಿಗಾಗಿ ನಡೆಸುವ ಕ್ರಿಯೆ. ಆದರೆ ಅರೆಕಾಲಿಕವಾಗಿ ತೊಡಗಿಕೊಳ್ಳುವ ಇಂತಹ ಯಾವುದೇ ಕ್ರಿಯೆಯಿಂದ ಅಸಾಮಾನ್ಯ ಎಂಬುದು ಸಂಭವಿಸಲಾರದು; ಅಸಾಮಾನ್ಯವಾದ ಶಕ್ತಿಯುಳ್ಳ - ಮನಸ್ಸು ಎಂಬ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆ ಸುರಿದರೆ ಅದು ಹೇಗೆ ಅನುಭವಕ್ಕೆ ಬಾರದೋ - ಹಾಗೆ ಆದೀತು; ಪರಿಣಾಮ - ಮೆಟ್ಟಿಲನ್ನೇ ಉಪ್ಪರಿಗೆ ಅಂದುಕೊಂಡಂತೆ - ಅಷ್ಟೆ; ಹತ್ತರೊಡನೆ ಇನ್ನೊಂದು ಭ್ರಾಂತಿ !

ಹೀಗಿದ್ದರೂ... ಯಾವುದೂ ಪೂರ್ತಿಯಾಗಿ ವ್ಯರ್ಥ ಆಗದು; ಎರಡು ಊಟದ ನಡುವೆ ಸಿಗುವ ನೆಮ್ಮದಿಯಂತಹ ಕಿಂಚಿತ್ ಅನುಭವ ಅಥವ ಅರೆಬರೆ ಸ್ನಾನದ ಸುಖಪ್ರಾಪ್ತಿಯಾದಂತೆ - ಅಂದುಕೊಳ್ಳಲೂ ಬಹುದು. ಮನಸ್ಸಿನಲ್ಲಿ ರಾಶಿ ರಾಶಿ ಅಪೇಕ್ಷೆಗಳನ್ನು ತುಂಬಿಕೊಂಡು ಸಂಕಲ್ಪಗಳ ಮೂಟೆಯನ್ನು ಹೊತ್ತುಕೊಂಡು - ಯಾರಿಗೂ ಯೋಗಿಯಾಗಲು ಆಗುವುದಿಲ್ಲ; ನಿರರ್ಥಕ ಮೂಟೆಗಳನ್ನು ಮನಸ್ಸಿನಿಂದ ದೂರ ಇಡುವುದೇ ಯೋಗ. ಇಡೀ ಬದುಕನ್ನೇ ಅಪೇಕ್ಷಿಸುವ ಸಾಧನೆಯಿದು.

ಆದರೆ... ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸಿ ಚೆಂದ ನೋಡುವ ಮನಸ್ಸಿದು. ಹೀಗೆ ಶ್ರಮರಹಿತ ಕನಸುಗಳನ್ನು ಮಾತ್ರ ಉಣ್ಣುತ್ತಿದ್ದರೆ ತೃಪ್ತಿ ಸಿಕ್ಕೀತೆ ? ಊಟ, ನಿದ್ರೆ ಮುಂತಾದ ನಿತ್ಯ ಕರ್ಮಗಳ ಕಟ್ಟುಪಾಡಿನಂತೆಯೇ - ಮನಸ್ಸಿನಲ್ಲಿ ದೃಢವಾಗಿ ನಿಂತು ಅಂತಃನಿರೀಕ್ಷೆಯ ಭೋಜನವನ್ನು ನಡೆಸುವುದರಿಂದಲೂ ತತ್ಕಾಲೀನ ಉಪಚಾರವನ್ನು ಒದಗಿಸಿದಂತಾಗಿ ಕ್ಷಣಿಕ ನೆಮ್ಮದಿಯ ಅನುಭವ ಆಗುವುದು ಸಾಧ್ಯವಿದೆ. ಆದರೆ... ಅದೂ ಕೂಡ - ತಾನು ನಿಲ್ಲುವ ಪದತಲದ ನೆಲವನ್ನಷ್ಟೇ ಶುಚಿಗೊಳಿಸಿಕೊಂಡಂತೆ; ಇಡೀ ಮನೆಯನ್ನಲ್ಲ. ಯೌಗಿಕ ಮುಕ್ತ ಫಲಗಳಾದ ಇಚ್ಛಾ ಶಕ್ತಿ, ಜ್ಞಾನ ಶಕ್ತಿ ಮತ್ತು ಕ್ರಿಯಾಶಕ್ತಿಗಳು ಕೂಡ - ಮನುಷ್ಯರ ತಾತ್ಕಾಲಿಕ ಸುಖಯಾದಿಯ ಪಟ್ಟಿಯನ್ನು ಯಥಾವತ್ ಪುಷ್ಟಿಗೊಳಿಸಲಾರವು.. ಇವು - ಮನಸ್ಸನ್ನು ಸಮಗ್ರವಾಗಿ ಶುದ್ಧೀಕರಿಸಿಕೊಂಡ ಮನೋಮನೆಯ ಆರೋಗ್ಯದ ಪ್ರೇರಕಗಳು; ಯೋಗನೆಲೆಯಲ್ಲಿ ಅವಲೋಕಿಸಿದರೆ - ಮನಸ್ಸಿನ ಅಂತಃಸ್ರೋತವೇ ದೃಷ್ಟಿ. ದೃಷ್ಟಿ ಮತ್ತು ಸೃಷ್ಟಿಯ ಸಮನ್ವಯದ ಫಲಿತಾಂಶವನ್ನು ವಿವೇಚನೆಯಿಂದ ಬಳಸಿಕೊಂಡಾಗಲೇ ರಥಿಕನಿಗೆ ಸುಖಾನುಭವ. ಆದ್ದರಿಂದ ಸ್ವಚ್ಛ ದೃಷ್ಟಿಗಾಗಿ ಕನ್ನಡಕವನ್ನು ಆಗಾಗ ಸ್ವಚ್ಛಗೊಳಿಸಿಕೊಳ್ಳುವಂತೆಯೇ ಮನಸ್ಸನ್ನೂ ನಿಭಾಯಿಸಬೇಕಾಗುತ್ತದೆ.

ಮನಸ್ಸು ಎಂಬುದು ಅಷ್ಟೊಂದು ಸುಲಭದ ವಿಷಯವೇನಲ್ಲ. ಆದರೆ.. ಮೊದಲ ಹೆಜ್ಜೆಯನ್ನಿಟ್ಟೇ ಮುಂದಿನ ಹೆಜ್ಜೆ ಇರಿಸಬೇಕಾದುದರಿಂದ ಯಾವುದೇ ಆರಂಭವನ್ನು ತಿರಸ್ಕರಿಸಲಾಗದು ಮತ್ತು ತಕ್ಷಣದ ಫಲವನ್ನೂ ನಿರೀಕ್ಷಿಸಲಾಗದು. ಆದ್ದರಿಂದಲೇ - ಅಂದು ನನ್ನ ಗೆಳತಿಯನ್ನು ನಾನು ಪ್ರೋತ್ಸಾಹಿಸಿದ್ದೆ. ಯಾವುದೇ ಮನಸ್ಸಿನ ದಾಂಪತ್ಯವನ್ನು ಬಹಿರಂಗವಾಗಿ ಅಥವ ಸಾಮೂಹಿಕವಾಗಿ ನಿರ್ವಹಿಸಲು ಆಗುವುದೂ ಇಲ್ಲ. ಮನಸ್ಸೆಂಬ ಹುಚ್ಚು ಕುದುರೆಯನ್ನು ಎಲ್ಲೋ ಒಮ್ಮೊಮ್ಮೆ - ದಿನಕ್ಕೆ ಎರಡು ಬಾರಿ ಅಥವ ವರ್ಷಕ್ಕೊಮ್ಮೆ ಕಟ್ಟಿದ ಮಾತ್ರಕ್ಕೇ ಯಾವುದೇ ಸಿದ್ಧಿಯೂ ಆಗದು; ಇದೊಂದು ನಿರಂತರ ಹೋರಾಟವೇ ಸರಿ. ಚಾಂಚಲ್ಯವನ್ನು ಕಳೆದುಕೊಂಡು ಸ್ಥಿರತೆಯನ್ನು ಕಂಡುಕೊಳ್ಳುವ ಮನೋ ನಿಗ್ರಹ ಎಂಬುದು - ಮರಣದವರೆಗೂ ನಿರಂತರವಾಗಿ ನಡೆಸಬೇಕಾದ ಮನೋವ್ಯಾಯಾಮ. ಎಂತಹ ಸಶಕ್ತ ಬೀಜವೇ ಆದರೂ ಭಗವಂತನ ಕೃಪಾವರ್ಷವಾಗದೇ ಹೋದರೆ ಹೇಗೆ ಮೊಳಕೆಯೊಡೆಯಲಾರದೋ ಹಾಗೇ - ಯಾವುದೇ ಕಠಿಣ ಸಾಧನೆಯೂ "ಕೃಪಾವರ್ಷಕ್ಕಾಗಿ" ಕಾಯಬೇಕಾಗುತ್ತದೆ. ಆದರೆ ಶಿಸ್ತಿನ ಯೌಗಿಕ ಕ್ರಿಯೆಗಳಿಂದ - ಸತ್ಯ, ಕರುಣೆ, ನಿಸ್ವಾರ್ಥಭಾವ ಮುಂತಾದ ಧ್ಯೇಯನೀತಿಗಳನ್ನು ಪ್ರಚೋದಿಸಿಕೊಳ್ಳುತ್ತ ಶುಚಿತ್ವವನ್ನಂತೂ ಸಾಧಿಸಿಕೊಳ್ಳಲು ಸಾಧ್ಯವಿದೆ. ತನ್ಮೂಲಕ ಆರೋಗ್ಯವಂತ ಸಮಾಜವನ್ನು ಕಟ್ಟಿ ನಿಲ್ಲಿಸಲೂ ಸಾಧ್ಯವಿದೆ. ಸಾಧಕರ ದೇಹ ಮತ್ತು ಮನಸ್ಸುಗಳ ಪತರಗುಟ್ಟುವಿಕೆಯು ನಿಂತು, ಏಕ ಸೂತ್ರದಲ್ಲಿ ಸ್ಥಿರವಾದಾಗ - ಅದನ್ನೇ - ಸಂಪೂರ್ಣ ಸ್ವಾಸ್ಥ್ಯ ಎನ್ನುವುದು.

ಶರೀರಸ್ವಾಸ್ಥ್ಯದ ಹಂತದಿಂದಲೇ ಆರಂಭವಾಗುವ ಯೋಗಾಸನಗಳು ಮುಂದೆ, ತಲ್ಲೀನತೆಯಿಂದ ತೊಡಗಿಕೊಂಡರೆ - ಮನಸ್ಸು ಬುದ್ಧಿಯ ಶುದ್ಧಿಯವರೆಗೂ ದಾರಿ ತೋರಿಸಬಲ್ಲ ವಿಜ್ಞಾನ.

                                                              *****************

ಈ ಬದುಕೆಂಬುದು "ಪ್ರವಾಹದ ವಿರುದ್ಧದ ಈಜು" ಎಂಬ ಪೂರ್ವಸೂರಿಗಳ ನಿರ್ದೇಶನವು - ಎತ್ತೆತ್ತಲೋ ಸೆಳೆಯುವ ಮನೋಚಾಂಚಲ್ಯದ ಭಾವವನ್ನು ಪುಷ್ಟಿಗೊಳಿಸುತ್ತದೆ. ಬದುಕಿನ ಪ್ರವಾಹ ಎಂಬ ಪದಪುಂಜವು - ಮನಸ್ಸಿನ ನೆರೆಯುಬ್ಬರ ವನ್ನೇ ಪ್ರತಿನಿಧಿಸುತ್ತದೆ; ಅಡ್ಡಾದಿಡ್ಡಿಯಾದ ಭಾವ ಪ್ರವಾಹವನ್ನು ಉಕ್ಕಿಸುವ ಮೂಲಸ್ಥಾನವೇ ಚಂಚಲ ಮನಸ್ಸು. ಎಂತಹ ಪ್ರಚಂಡ ಈಜುಗಾರರನ್ನೂ ಸುತ್ತಿಕೊಳ್ಳುವ ಅಥವ ಮನಃಪೂರ್ವಕವಾಗಿ ಅವರು ತಮ್ಮನ್ನು ತಾವೇ ಸುತ್ತಿಸಿಕೊಳ್ಳುವ ಪ್ರವಾಹರೂಪೀ ಸೆಳೆತದ ಜೀವ ಬಂಧನಗಳು ಒಂದೆರಡಲ್ಲ. ಅಮಿತ ಆಮಿಷಗಳಿರುವ ಈ ಬದುಕಿನ ಪ್ರವಾಹದಲ್ಲಿ ಅಸಂಖ್ಯ ರುಚಿ ಸ್ವಾದಗಳನ್ನು ತೆರೆದು ತೋರಿಸಿ, ಮನಸ್ಸುಗಳು ಆಮಿಷಕ್ಕೆ ಒಳಗಾಗುವ ಹಂತದಲ್ಲಿ - ಅವುಗಳನ್ನೆಲ್ಲ ಮುಂದಾಗಿ ನಿಂತು ಸ್ವಾಗತಿಸುವುದು - ಮನಸ್ಸೇ ಆಗಿದೆ; ಅನುದಿನವೂ ವಿಭಿನ್ನ ರುಚಿಗಳ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟು ಆಕರ್ಷಿಸುತ್ತ, ಬುದ್ಧಿಯನ್ನು ಜಡವಾಗಿಸಿ ಚಡಪಡಿಸುವಂತೆ ಮಾಡಿ ಕುಣಿಸಿ ಚೆಂದ ನೋಡುವುದೂ - ನಮ್ಮ ಮನಸ್ಸೇ ಆಗಿದೆ. ಆದ್ದರಿಂದಲೇ ಶಾಂತ ಬದುಕನ್ನು ಅಪೇಕ್ಷಿಸುವವರು ಸಂಕುಚಿತ ಭಾವದ ಚಿತ್ತಚೋರರಾಗದೆ - ಚಿತ್ತವೀರರಾಗಲು ಶ್ರಮಿಸುವ ಸಾತ್ವಿಕ ಹಾದಿಯನ್ನು ಹಿಡಿಯಬೇಕಾಗುತ್ತದೆ.

ತನ್ನ ಹಾಗೂ ಸುತ್ತಿನ ಸಮಾಜದ ಕುರಿತ ಪ್ರೀತಿಯಿಲ್ಲದೆ - ಯಾವುದೇ ಬದುಕು ಸಾಗಲಾರದು. ಬಹಳ ಸಂಕೀರ್ಣವಾದ "ಪರಸ್ಪರ ಪ್ರೀತಿ" ಎಂಬುದು - "ಅವಲಂಬನೆ" ಎಂಬ ಬಂಧನಕ್ಕೂ ಸಿಕ್ಕಿಸಿಬಿಡುತ್ತದೆ. ಯಾವುದೇ ಲೌಕಿಕ ಪ್ರೀತಿಯ ನೈಜ ಪೋಷಣೆ ನಡೆಯುವುದು - ಕೇವಲ ಮನಸ್ಸಿನ ಹಂತದಲ್ಲಿ. ಅವಲಂಬನೆ ಎಂಬ ಭಾವಪುಷ್ಟಿಯ ಹಂತದಲ್ಲಿಯೇ - ಪ್ರೀತಿಯು ತನ್ನ ಕ್ಷೇತ್ರ ವಿಸ್ತಾರಕ್ಕೂ ತೊಡಗಿಕೊಳ್ಳುತ್ತದೆ. ಬೇಕುಬೇಡದ ಅನೇಕ ಪ್ರೀತಿ ಸಾಧ್ಯತೆಗಳನ್ನೂ ಪ್ರಾಯೋಗಿಕವಾಗಿ ಅನುಭವಿಸತೊಡಗುತ್ತದೆ.

ಆರಂಭದಲ್ಲಿ ತನ್ನನ್ನು ಹೊತ್ತು ಹೆತ್ತು ಪೋಷಿಸುವ ತಾಯಿಯ ಮೂಲಕವೇ ಮಗುವು "ಅವಲಂಬನೆಯ ಪ್ರೀತಿಯ ಭಾವ"ವನ್ನು ಅರಿಯತೊಡಗುತ್ತದೆ. ಮಗುವಿನ ಭಾವಕೋಶವು ಕ್ರಿಯಾಶೀಲವಾಗುವ "ಹಸಿಮಣ್ಣಿನ" ಹಂತವದು. ಕ್ರಮೇಣ ಹಂತಹಂತವಾಗಿ ಪ್ರೀತಿಭಾವದ ಮಿಥ್ಯಾಪರಿಧಿಯಲ್ಲಿ ಹೊರಳಾಡುವ ಮಗುವಿನ ಮನಸ್ಸು - ಸುಗುಣ ದುರ್ಗುಣ, ರೋಷ ತಿರಸ್ಕಾರ, ಭೇದಭಾವಗಳನ್ನೆಲ್ಲ ಗ್ರಹಿಸುವಷ್ಟು ಸಬಲವಾಗುತ್ತದೆ. ಮುಂದೆ... ಪ್ರೀತಿಯಿಂದ ತೊಡಗಿ ಎಲ್ಲ ಬಗೆಯ "ಭಾವ-ಅಭಾವ ಸಂಪತ್ತನ್ನು" ಗ್ರಹಿಸಿ ಸಮರ್ಥವಾಗಿ ರೂಢಿಸಿಕೊಳ್ಳುವ ಹಂತವನ್ನೂ ತಲುಪಿ ಬಿಡುತ್ತದೆ. ಮನಸ್ಸು ಸುತ್ತುವುದು ಮತ್ತು ಮನೋರಾಧಕರನ್ನು ಸುತ್ತಿಸುವುದು ಆಯಾ ಇಂದ್ರಿಯಗಳ ವಲಯದಲ್ಲೇ. ಆದ್ದರಿಂದ ಮನುಷ್ಯ ಸಮಾಜವೂ - ಮನಸ್ಸುಗಳ ತರಬೇತಿದಾರ ವಲಯದಲ್ಲಿಯೇ ಬರುತ್ತದೆ. "ಭಾವನೆಗಳ ದುರುಪಯೋಗದ ಕಲೆ"ಯಲ್ಲೂ ಸಮಯಕ್ಕೆ ತಕ್ಕಂತೆ ಪಳಗುವಷ್ಟು ತರಬೇತಿಯನ್ನು ಪಡೆದುಕೊಳ್ಳುವ ಬದುಕಿನ ಹಂತದಲ್ಲಿ... ಮಗುವು ತನ್ನ ಶಕ್ತ್ಯಾನುಸಾರ ಬೇಕುಬೇಡಗಳೆಲ್ಲವನ್ನೂ ಗ್ರಹಿಸಿ ತನ್ನ ಲಾಭಕ್ಕೆ ತಕ್ಕಂತೆ ಬಳಸಲೂ ಶಕ್ತವಾಗುತ್ತದೆ; ಮನಸ್ಸು ನರಳುತ್ತದೆ.

ತಮ್ಮ ಮಗುವಿನ ದೇಹವನ್ನು ಗಟ್ಟಿಗೊಳಿಸಿ ಸಶಕ್ತವನ್ನಾಗಿ ಮಾಡುವ ಹಂತದಲ್ಲಿಯೇ ತನಗೆ ಒದಗುವ ಬಾಹ್ಯ ಮತ್ತು ಆಂತರಿಕ ಆಹಾರಕ್ಕೆ ತಕ್ಕಂತೆ - ಅಗೋಚರವಾದ ಮನಸ್ಸೂ ತನ್ನ ಭಾವ ವೇದಿಕೆಯನ್ನು ಸಿಂಗರಿಸುತ್ತಿರುತ್ತದೆ; ಬಗೆಬಗೆಯ ಅಳತೆಯ ಬಣ್ಣದ ಕಡ್ಡಿಗಳಿಂದ ಹಕ್ಕಿಯು ತನ್ನ ದುರ್ಬಲ ಮತ್ತು ತಾತ್ಕಾಲಿಕ ಗೂಡು ಕಟ್ಟುವಂತಹುದೇ ಕ್ರಿಯೆ ಇದು. ಆದರೆ ಅಂತಹ "ಮನೋ ಮಾಟಗಳು" ಬರಿಗಣ್ಣಿಗೆ ಕಾಣುವುದಿಲ್ಲ. ಆದರೆ ಮನುಷ್ಯರು ತಮಗೆ ತಾವೇ ಕೃತಕವಾಗಿ ಆರೋಪಿಸಿಕೊಂಡ "ಸಾಂಘಿಕ ಜೀವನದ" ಹಂತದಲ್ಲಿ - ಆಯಾ ಇಂದ್ರಿಯಗಳನ್ನು ಆಯಾ ಸಂಸ್ಕಾರದ ಮನಸ್ಸುಗಳು ನಿರ್ದೇಶಿಸುವಂತಹ ಸಾಮಾಜಿಕ ಅನುಭವವು ಆಗತೊಡಗುತ್ತದೆ. ಮನುಷ್ಯರ ವರ್ತನೆ ಮತ್ತು ಕ್ರಿಯೆಗಳು, ಮನೋ ಆಕಾರ ವಿಕಾರಗಳು - ಪೂರ್ವ ಸಂಸ್ಕಾರ ಮತ್ತು ಜನ್ಮಾರಭ್ಯ ಆಯಾ ಮನಸ್ಸುಗಳು ಪಡೆಯುತ್ತ ಬಂದ "ಗುಣಾವಗುಣ" ಆಹಾರದಂತೆಯೇ - ಆಯಾ ಮನಸ್ಸುಗಳು ವಿಭಿನ್ನವಾಗಿ ಪರಿವರ್ತಿಸುತ್ತಿರುತ್ತವೆ.

ಆದ್ದರಿಂದ ಮೂಲತಃ ಯಾವ ಮನುಷ್ಯನನ್ನೂ ಶಿಷ್ಟ / ದುಷ್ಟ ಎಂದು ಸರಳವಾಗಿ ವರ್ಗೀಕರಿಸಿ ವ್ಯಕ್ತಿನಾಮ ಬಳಿಯಲು ಆಗುವುದಿಲ್ಲ. ಹೌದು. ಪರ ಪೀಡೆಗೆಳಸದೆ ಬದುಕುವುದನ್ನೇ ಶಿಷ್ಟತೆ ಎನ್ನುವುದು. ಆದರೆ ಅಂತಹ ಶಿಷ್ಟತೆಯು ಎಲ್ಲರಲ್ಲಿಯೂ ಒಂದೇ ಪ್ರಮಾಣದಲ್ಲಿ ಇರಲಾರದು. ಕಿಂಚಿತ್ ಎಚ್ಚರ ತಪ್ಪಿದರೂ ಶಿಷ್ಟತೆಗಳ ನಡುನಡುವೆ, ಒಮ್ಮೊಮ್ಮೆ ಅಶಿಷ್ಟತೆ, ದುಷ್ಟತನಗಳು ಪ್ರಕಟವಾಗುವುದೂ ಉಂಟು. ನಿಂತಲ್ಲಿ ನಿಲ್ಲದ, ಸಂಚಾರೀ ತೆವಲಿನ ಸ್ವಭಾವದ ಮನಸ್ಸುಗಳನ್ನು ಶಿಷ್ಟತೆಗೆ ಒಳಪಡಿಸುವುದು ಅತ್ಯಂತ ಕಠಿಣವಾದ ಸಾಧನೆ. ಆಯಾ ಮನಸ್ಸು ದೇಹಗಳ ಜನ್ಮಸ್ಥಾನ, ಬೆಳೆದ ಪರಿಸರ, ಅದುವರೆಗೆ ಪಡೆದ ಜ್ಞಾನಸಂಪತ್ತು ಮತ್ತು ಅವನ್ನು ಬದುಕಿಗೆ ಅಳವಡಿಸಿಕೊಂಡ ಪ್ರಮಾಣ, ತನ್ಮೂಲಕ ಬೆಳೆಸಿಕೊಂಡಿರುವ ವಿವೇಚನೆ, ಅನುಕ್ಷಣದ ಎಚ್ಚರ... ಮುಂತಾದ ಅನೇಕ ದ್ರವ್ಯಗಳು ಒಟ್ಟಾಗಿ "ಶಿಷ್ಟತೆ"ಯು ಪ್ರಕಟವಾಗಬಹುದು. ಸ್ಥೂಲವಾಗಿ ಹೇಳುವುದಾದರೆ... ದೈನಂದಿನ ವರ್ತನೆಗಳೇ ಶಿಷ್ಟತೆಯ ಬಾಹ್ಯ ಪ್ರಮಾಣಗಳು. ಎಚ್ಚರವೇ ಶಿಷ್ಟತೆಯ ಆತ್ಮ. ಅಂದಂದಿನ ಸಾಮಾಜಿಕ ಸನ್ನಿವೇಶಗಳು ಶಿಷ್ಟರನ್ನು ದುಷ್ಟರಾಗಿ - ದುಷ್ಟರನ್ನು ಶಿಷ್ಟರನ್ನಾಗಿ ಪರಿವರ್ತಿಸುತ್ತಿರುವುದರ ಹಿಂದೆಯೂ "ಮನಸ್ಸುಗಳ" ಮಹತ್ತರ ಪಾತ್ರವಿದೆ. ಆದ್ದರಿಂದಲೇ - ಮನೋವ್ಯಾಪಾರ ಎಂಬುದು ಸರಳ ವ್ಯಾಖ್ಯೆಗೆ ನಿಲುಕದ ಒಂದು ಅಮೂರ್ತ ಮತ್ತು ಸಾಧಕರಿಗೆ ಮಾತ್ರ ಒಲಿಯುವ ಕ್ಷೇತ್ರ. ಆದ್ದರಿಂದಲೇ - ಮನಸ್ಸಿನ ಉತ್ತಮಿಕೆಯ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಹೊಂದಿರುವವರು ಇಲ್ಲವೇ ಇಲ್ಲ ಎಂಬಷ್ಟು ವಿರಳವಾಗಿದೆ. ವರ್ಗೀಕರಣ ಮಾಡುವುದೇ ಇದ್ದರೆ - ಅತ್ಯಂತ ದುಷ್ಟರು ಮತ್ತು ಹಿತಮಿತವಾದ ದುಷ್ಟರು ಎಂದಷ್ಟೇ ಗುರುತಿಸುವ ಸಮಾಜದಲ್ಲಿ - ಈಗ ನಾವಿದ್ದೇವೆ.

ಮನೋಕ್ಷೇತ್ರದ ಭಾವುಕ ನೆಲೆಯು ಪ್ರಕ್ಷುಬ್ಧವಾಗಿರುವ ಆಧುನಿಕ ಸಮಾಜದ ಸನ್ನಿವೇಶಗಳೆಲ್ಲವೂ ಈ ಮಾತಿಗೆ ಜ್ವಲಂತ ಉದಾಹರಣೆ.

ಆತ್ಮನಿರೀಕ್ಷಣೆಗೆ ಒಡ್ಡಿಕೊಳ್ಳಲು ಅನಾಸಕ್ತರಾದವರಿಂದಲೇ ತುಂಬಿಕೊಂಡಿರುವ ಸಮಾಜದಲ್ಲಿ - ಈಗ ನಾವಿದ್ದೇವೆ. ಆದ್ದರಿಂದಲೇ ಪ್ರಸ್ತುತದ ಕಾಲಮಾನವೂ - ಅತ್ಯಂತ ದುಷ್ಟರು ಮತ್ತು ಸಾಧಾರಣ ದುಷ್ಟರ ಸಹಬಾಳ್ವೆಗೆ ಸಾಕ್ಷಿಯಾಗಿದೆ; ಉತ್ತಮ ಎಂಬ ವರ್ಗವು ಥಟ್ಟೆಂದು ಕಣ್ಣಿಗೆ ಕಾಣಿಸುತ್ತಿಲ್ಲ.

ಜೈ ಜವಾನ್ ಜೈ ಕಿಸಾನ್ ಎಂದು ಪೂರ್ಣ ನಿಷ್ಠೆಯಿಂದ ಜಪಿಸುತ್ತಿದ್ದ ಭಾರತದ ನೆಲದಲ್ಲಿ ಜವಾನರೂ ಕಿಸಾನರೂ ಈಗ ವಿವಾದಗ್ರಸ್ತರಾಗುತ್ತಿಲ್ಲವೆ ? ಕೃತಘ್ನತೆಯನ್ನು ಹೊತ್ತು ಮೆರೆಸುತ್ತಿರುವ, ಸಹಾನುಭೂತಿಯ ಕಪಟ ನಾಟಕವಾಡುತ್ತಿರುವ ಇಂದಿನ ಕಾಲಘಟ್ಟದಲ್ಲಿ - ಉತ್ತಮಿಕೆಯನ್ನು ಎಡಕಾಲಿನಿಂದ ಒದೆಯುವಂತಹ ಧಾರ್ಷ್ಟ್ಯ ಲಕ್ಷಣಗಳನ್ನು ಕಾಣುತ್ತಿರುವಾಗ - ಅವನ್ನೆಲ್ಲ ಶಿಷ್ಟತೆ ಎನ್ನಲಾದೀತೆ ? ಸ್ವದೇಶಾಭಿಮಾನವನ್ನು ಕುಂದಿಸುವ ಪುಡಿ ನೇತಾರರ ಮಾತು ನಡತೆಗಳನ್ನು "ಶಿಷ್ಟತೆ" ಎನ್ನಲಾದೀತೆ ?  ಹಿರಿಯ ಸ್ಥಾನಗಳಿಂದ ದಿನಕ್ಕೊಂದು ವೈರುದ್ಧ್ಯದ ಹೇಳಿಕೆ - ವರ್ತನೆಗಳನ್ನು ನೋಡುವಾಗ ಭಾವಶಿಷ್ಟತೆಯ ಪ್ರಶ್ನೆ ಕಾಡುವುದಿಲ್ಲವೆ ? ಮನುಷ್ಯರ ಮೂಲ ಸಂಕೇತವಾದ ಗಂಡು ಹೆಣ್ಣನ್ನು ಪ್ರತ್ಯೇಕಿಸಿ ನೋಡುವ ಮತ್ತು ಕೃತಕವಾಗಿ ಉಪಚರಿಸುವ ರಾಜಕೀಯದ ವಿಕಟ ದೃಶ್ಯಗಳನ್ನು ಚಾತುರ್ಯದಿಂದ ಅಭಿನಯಿಸಿ ಮೆಚ್ಚುಗೆಯನ್ನೂ ಅಪೇಕ್ಷಿಸುವ ರಾಜಕೀಯ ದುಷ್ಟತೆಗಳು ಈಗ ನಿತ್ಯದೂಟವಾಗಿಲ್ಲವೆ ? ಸೌಹಾರ್ದತೆ ಕೃತಜ್ಞತೆ ಉತ್ತಮಿಕೆಗಳೆಲ್ಲವನ್ನೂ ಚೆಂಡಾಡುತ್ತಿರುವ ಸನ್ನಿವೇಶದಲ್ಲಿಯೇ ಹೊರಳಾಡುತ್ತಿದ್ದರೂ - ಅಲ್ಲೇ - ಅದೇ ಪರಿಸರದಲ್ಲಿಯೇ ಶಿಷ್ಟತೆಯನ್ನು ಹುಡುಕುವ ತೋರಿಕೆಯು ಮಾತ್ರ - ಈಗ ಶಿಷ್ಟತೆ ಎನ್ನಿಸಿಕೊಳ್ಳುತ್ತಿದೆಯಲ್ಲವೆ ?

ಆಡಳಿತದ ಅಮಲಿನ ರಾಜಕೀಯದಲ್ಲಿ ತೊಡಗಿಕೊಂಡು ಸಂಚರಿಸುತ್ತಿರುವ ಇಂದಿನ "ಸುಭಗ ಮುಖ ಮೂತಿಗಳಿಂದ" ಜನರಿಗೆ ದುಷ್ಟ ಸಂಸ್ಕೃತಿಯ ಕೆಟ್ಟ ಮಾದರಿಗಳು ಸಿಗುತ್ತಿಲ್ಲವೆ ? ಅಧಿಕಾರ ಗ್ರಹಣ ಮತ್ತು ತನ್ಮೂಲಕವೇ ಮಾನಧನರಾಗುವ ಹೊಂಚಿನಲ್ಲಿ ತನ್ಮಯವಾಗಿರುವ ಯಾವುದೇ ಪಕ್ಷಗಳು - ಯಾ - ವ್ಯಕ್ತಿಗಳು, ಸಮಾಜಮುಖೀ ಚಿಂತನೆ ನಡೆಸುವಂತೆ ಕಾಣುತ್ತಿದೆಯೆ ? ಸ್ವಂತ ಲಾಭಕ್ಕಾಗಿ ಜೀವನ ಮೌಲ್ಯಗಳನ್ನೂ ದಾಳವಾಗಿ ಬಳಸಿಕೊಳ್ಳುತ್ತಿರುವ ಯಾವುದೇ ರಾಜಕೀಯ ಪಕ್ಷಗಳು ನಿಜಾರ್ಥದ ಶಿಷ್ಟತೆಯನ್ನು ಉಳಿಸಿಕೊಂಡಿವೆಯೆ ? ರಾಜಕೀಯದಲ್ಲಂತೂ - ಕಿಂಚಿತ್ತಾದರೂ ಕೊಳಕನ್ನು ಉಳಿಸಿಕೊಳ್ಳುವುದೇ ದೊಡ್ಡ ಅರ್ಹತೆ - ಎಂದು ಭಾವಿಸಿಕೊಳ್ಳುವಂತಾಗಿದೆಯೆ ? ಆದ್ದರಿಂದಲೇ ಅತಿ ದುಷ್ಟರು ಮತ್ತು ಮಿತ ದುಷ್ಟರ ನಡುವೆ  - ಸಹಿತ ದುಷ್ಟರೂ ಸನ್ನಿಹಿತರಾಗಿ ಭ್ರಷ್ಟ ಬದುಕನ್ನು ಒಪ್ಪಿಕೊಳ್ಳಬೇಕಾದ ಮನಸ್ಸುಗಳನ್ನು ಹೊಂದಲೇಬೇಕಾದ ಸಾಮಾಜಿಕ ಸನ್ನಿವೇಶವು ಏರ್ಪಟ್ಟಿಲ್ಲವೆ ? ಪ್ರತಿಯೊಂದು ಮನಸ್ಸಿನ ಸ್ವನಿಯಂತ್ರಣದಿಂದಲ್ಲದೆ - ಕೇವಲ ನೀತಿಕತೆಗಳಿಂದ ಈ ಸನ್ನಿವೇಶವು ಬದಲಾಗಲಾರದು.

ಬಹುಪಾಲು - ಶಿಷ್ಟತೆಯೇ ಇಲ್ಲದ ಸಮಾಜದಲ್ಲಿಯೇ ಈಗ ನಾವಿದ್ದೇವೆ; ಈಗ ಕಾಣುವುದನ್ನು - ಸೋಗಿನ ಶಿಷ್ಟತೆ ಎನ್ನಲೂಬಹುದು; ಇದನ್ನು ಪ್ರಸ್ತುತದ ವಿಶಿಷ್ಟತೆ ಎಂದೂ ಅನ್ನಬಹುದು. ಅಷ್ಟೇ. ಇಂತಹ ನಾಜೂಕಿನ ಶಾಬ್ದಿಕ ಪಡಪೋಶಿತನಗಳನ್ನು - ಅಂಕೆಯಿಲ್ಲದ ಮನಸ್ಸುಗಳ ಸೋಗಲಾಡಿತನದ ವಿಕ್ಷಿಪ್ತತೆ - ಅಂದುಕೊಂಡು, ಸೂಕ್ತ ಚಿಕಿತ್ಸೆಗೆ ಅನುವಾಗಬೇಕಾದ ಅನಿವಾರ್ಯತೆಯು ಈಗ ಮನುಷ್ಯರ ಮುಂದಿದೆ. ಆದರೆ... ಕಳ್ಳ ಸುಳ್ಳ ವಲಯದಲ್ಲಿಯೇ ಸತತ ಸುತ್ತುತ್ತಿರುವ ಸ್ವಾರ್ಥ ರಾಜಕಾರಣಗ್ರಸ್ತ ರಾಜಕೀಯದ ಮನಸ್ಸುಗಳಿಂದ ಮತ್ತು "ಬೈಗುಳದ ಸಾಲಿನಲ್ಲಿ ಮಾತ್ರ ಸರಿಯಾಗಿ ಹೊಂದುವ" ಪ್ರಸ್ತುತದ - ಪ್ರಗತಿಪರ ಎಂಬ ಬೂಟಾಟಿಕೆ ಯ ಮನುಷ್ಯರ ಮನಸ್ಸುಗಳನ್ನು ಪುಷ್ಟಿಗೊಳಿಸಿ ಎತ್ತರಿಸುವ ಕೆಲಸವು ಎಂದಿಗಾದರೂ ಸಾಧ್ಯವೆ ? ವಿಶ್ವಾಸ ಹುಟ್ಟಿಸುವ ಪೂರ್ವ ನಿದರ್ಶನಗಳಿಲ್ಲ. ಏಕೆಂದರೆ... ಇದು ಬುದ್ಧಿಪೂರ್ವಕವಾಗಿ ನಡೆಸುತ್ತಿರುವ ಮನಸ್ಸಿನ ವೇಶ್ಯಾವೃತ್ತಿ ! ಸ್ವ - ಇಚ್ಛೆಯಿಂದ ದುರುದ್ದೇಶಪೂರಿತವಾಗಿ ನಡೆಸುವ ಬಗ್ಗಡಗೊಂಡ ಮನಸ್ಸುಗಳ ಯಾವುದೇ ಕರ್ಮಗಳನ್ನು - ಹೊರ ಒತ್ತಡಗಳಿಂದ ನಿಯಂತ್ರಿಸುವುದು ಕಠಿಣ. ಆದರೆ... ದುರದೃಷ್ಟವೆಂದರೆ... "ಉದ್ಧರಿಸುವ CONTRACT ನ್ನು (ಗುತ್ತಿಗೆ)" ದೇವಮಾನವರೆಂಬ ಅಪಾತ್ರರಿಗೇ ಒಪ್ಪಿಸಿ, ನಾವು ನಿಶ್ಚಿಂತರಾಗುತ್ತಿದ್ದೇವೆ !

ಕೇವಲ 50 ವರ್ಷಗಳಷ್ಟು ಹಿಂದೆ ಸರಿದು ನೋಡಿದರೆ... ಅದೂ ಕಲಬೆರಕೆಯ ಪ್ರಾರಂಭದ ಸ್ಥಿತಿಯಾಗಿದ್ದರೂ... ಅಂದಿನ ಸಮಾಜದಲ್ಲಿ ಪ್ರತಿನಿತ್ಯವೂ ಕೆಲವು ಶಿಷ್ಟತೆಯನ್ನು ಸಜೀವವಾಗಿ ಸಂಧಿಸುವ ಅವಕಾಶವಿತ್ತು; ಸಜ್ಜನಿಕೆ ಸೌಮ್ಯತೆ, ವಿನಮ್ರತೆಗಳ ಜೀವಸಂಚಾರವು ಕಣ್ಣಿಗೆ ಕಾಣುತ್ತಿತ್ತು. ಇಂದಿನ "So What?" ಸಂಸ್ಕೃತಿಗೆ - ಆಗ ಬೆಲೆ ಇರಲಿಲ್ಲ ಮಾತ್ರವಲ್ಲ; ತಿರಸ್ಕಾರಪ್ರಾಯವಾಗಿಯೂ ಇತ್ತು. ಮನಸ್ಸುಗಳ ಅಸಭ್ಯ ತಿಪ್ಪರಲಾಗವನ್ನು ಕಂಡು ಬಹಿರಂಗದಲ್ಲಿ ಆನಂದಿಸುವವರು ಆಗ ಇರಲಿಲ್ಲ. ಆದ್ದರಿಂದಲೇ - ಸಹಜೀವನ ಎಂಬುದು ಹೆಚ್ಚು ಗೊಂದಲವಿಲ್ಲದೆ, ಸಹಜ ಕ್ರಿಯೆಯಂತೆ ನಡೆದು ಹೋಗುತ್ತಿತ್ತು. ಅಂದಿನ ಜನರಿಗೆ ನಾಚಿಕೆಯೂ ಆಗುತ್ತಿತ್ತು ! ಹೆಣ್ಣು ಮತ್ತು ನಾಚಿಕೆ ಎಂಬುದು ಜೋಡಿಪದಗಳಾಗಿದ್ದ ಅಂದಿನ ದಿನಗಳಲ್ಲಿ, ನಾಚಿಕೆ ಎಂಬುದು ಅನರ್ಹತೆಯ ಗುರುತಾಗಿರದೆ - ಅದೊಂದು ಸುಂದರ ಮೌಲ್ಯವಾಗಿದ್ದ ಕಾಲಘಟ್ಟವದು.

ನಾಚಿಕೆಯ ಮೂಲಸ್ಥಾನವೇ Humbleness, ನಮ್ರತೆ, ವಿನಯ. ಕೇವಲ 50 ವರ್ಷಗಳಷ್ಟು ಹಿಂದಿನ ಭಾರತೀಯ ಸಮಾಜದಲ್ಲಿ - "ಇದೆಂಥ ಕೆಲಸ ಮಾಡಿದೆ ?  ನಿನಗೆ ನಾಚಿಕೆ ಆಗುವುದಿಲ್ಲವಾ ?" ಎಂಬಂತಹ ಮಾತಿಗೆ ತಮ್ಮನ್ನು ಒಡ್ಡಿಕೊಂಡು, ನಾಚಿಕೆಗೆ ಸಿಲುಕದಂತೆ ತಮ್ಮ ಬದುಕು ಸಾಗಿಸುತ್ತಿದ್ದ ಅನೇಕ ಕೌಟುಂಬಿಕ ಹೊಡಚಾಟಗಳನ್ನು ನೋಡಬಹುದಿತ್ತು. ಶಿಷ್ಟತೆಯ ಪರಿಧಿಯ ಮನೋನಿಯಂತ್ರಣದ - ಪ್ರಯಾಸದ ಬದುಕಿನ ಗುದುಮುದಿ ಅದು. ಮೃಗೀಯತೆಯನ್ನು ಮೀರಿ ಬೆಳೆಯುವ ಮನುಷ್ಯಭಾವದ ಪ್ರಯತ್ನವದು. ಆದರೆ... ನಾಚಿಕೆಯ ಬದಲಾದ ಮಾನದಂಡದ ಇವತ್ತಿನ ಸಾಮಾಜಿಕ ಸಂದರ್ಭದಲ್ಲಿ - "ನಾಚಿಕೆ" ಎಂಬ ಭಾವಕ್ಕೇ ಪೂರ್ಣ ಬಹಿಷ್ಕಾರ ಹಾಕಿದಂತಹ ನಿತ್ಯ ಪ್ರಹಸನಗಳನ್ನು ನೋಡುವಂತಾಗಿದೆ ! ಅಹಂಕಾರಗ್ರಸ್ತ "So What ?" ಶೈಲಿಯ ವರ್ತನೆಗಳು ಹೆಚ್ಚುತ್ತ ಹೋದಂತೆ - ನಾಚಿಕೆಯೇ ಈಗ ನಾಚಿಕೊಳ್ಳುವಂತಾಗಿಬಿಟ್ಟಿದೆ ! ನಾಚಿಕೊಳ್ಳುವವರನ್ನೇ "ನಾಲಾಯಕ್" ಎಂದುಕೊಳ್ಳುವ ಇಂದಿನ ಸನ್ನಿವೇಶಗಳೇ - ಇದಕ್ಕೆ ಸಾಕ್ಷಿ.

ಈ - "ಮನಸ್ಸಿನ ನಾಚಿಕೆ" ಎಂಬ ಭಾವವಲಯಕ್ಕೂ ಹಲವು ರೂಪಗಳಿವೆ ! ಉದಾಹರಣೆಗೆ - ಬಡತನದ ನಾಚಿಕೆಯ ವ್ಯಾಖ್ಯೆಗೂ ಸಿರಿತನದ ವ್ಯಾಖ್ಯೆಗೂ ಅಜಗಜಾಂತರವಿದೆ. ಇಂದು ದೊಡ್ಡ ಮನುಷ್ಯ ಎಂದು ಕರೆಸಿಕೊಳ್ಳುವ ಅನೇಕ ಪಂಗನಾಮ ಪರಿಣತ ಸಿರಿವಂತ ರ ಭಿಕ್ಷುಕ ವರ್ತನೆಗಳು ಈ ಮಾತಿಗೆ ಪುಷ್ಟಿ ನೀಡುವ ನವೀನ ಸಾಕ್ಷಿಗಳು. ನಾಚಿಕೆಗೆ ಹೊಸಹೊಸ ಭಾಷ್ಯ ಬರೆಯುತ್ತಿರುವ "ದರೋಡೆಕೋರ ಸಿರಿವಂತರು" - ತಮ್ಮ "ನಾಚಿಕೆ ಜೀರ್ಣೋಭವ" ಸಾಮರ್ಥ್ಯದಿಂದಾಗಿ, ಸಮಾಜದ ಕಾನೂನುಗಳೇ ನಾಚಿ ತಮ್ಮನ್ನು ಹಿಂಬಾಲಿಸುವಂತೆ ಮಾಡುತ್ತಿರುವುದು ಇಂದಿನ ವಾಸ್ತವ. ಸಿರಿವಂತರಾಗುವ ಹಾದಿಯಲ್ಲಿ ಸಾತ್ವಿಕ (PIOUS) ನಾಚಿಕೆಯು ಕಳೆದುಹೋಗುವುದು ಹೊಸದೇನೂ ಅಲ್ಲ. ನಾಚಿಕೆಯಿಲ್ಲದ ಮನಸ್ಸುಗಳು - ಕಮಲಗಳು ಅರಳದ ವಿಷಪೂರಿತ ಕೆಸರಿನ ಹೊಂಡದಂತೆ.

ಇತ್ತ ದೇಹಪೋಷಣೆಯಲ್ಲಿಯೇ ಸಂಪೂರ್ಣ ಕೇಂದ್ರಿತವಾದ ಬಡತನ ಎಂಬ ಪರಿವೃತ್ತದಲ್ಲಿ ಯಾವುದೇ ಭಾವಪೋಷಣೆಗೆ ಅವಕಾಶವಿರುವುದಿಲ್ಲ. ಜೀವಪೋಷಣೆಗಾಗಿ - ನಾಚಿಕೆಯಿಂದಲೇ ನಾಚಿಕೆಯನ್ನು ಪರಿತ್ಯಜಿಸಬೇಕಾದ ಸ್ಥಿತಿ ಅದು. ಒಂದೊಮ್ಮೆ ಶಿಷ್ಟತೆಯನ್ನು ಅರಿತಿದ್ದರೂ ಪ್ರತಿಸ್ಪಂದಿಸಲಾರದಷ್ಟು ಅಸಹಾಯಕವಾಗುವ ಒತ್ತಡದ ಬದುಕುಗಳ ಸಂಘರ್ಷಮಯ ವೃತ್ತವದು. ಆದ್ದರಿಂದ ಬಡತನ ಎಂಬುದು ನಾಚಿಕೆಯನ್ನು ಲಕ್ಷಿಸುವುದೇ ಇಲ್ಲ. ಕೇವಲ ದೇಹಪೋಷಣೆಯ ಜಂಜಾಟದಲ್ಲಿಯೇ ಜೀವಸವೆಸುವ ಯಾವುದೇ ಸ್ಥಳದಲ್ಲಿ ನಾಚಿಕೆ ಎಂಬುದು ವಿಲಾಸೀ ವಸ್ತುವಾಗಿ (LUXURY) ಪರಿಣಮಿಸುತ್ತದೆ. ಆದ್ದರಿಂದ ಆರ್ಥಿಕ ಬಿಕ್ಕಟ್ಟಿನ ಎಡೆಗಳಲ್ಲಿ ನಾಚಿಕೆಗೆ ಪ್ರವೇಶವಿಲ್ಲದಂತಹ ಸನ್ನಿವೇಶ ಇದ್ದರೂ... ಹಲವು ಸಂದರ್ಭಗಳಲ್ಲಿ, ಶಿಷ್ಟತೆಗಾಗಿ ಹಂಬಲಿಸುವ ಮಿಡಿತವಿರುತ್ತದೆ.

ಆದರೆ... ಸಿರಿತನ ಬಡತನಗಳ ನಡುವಿನ ತ್ರಿಶಂಕು ಬದುಕು ಗಳಲ್ಲಿ ಮಾತ್ರ - ನಾಚಿಕೆ ಎಂಬುದು - "ನಿಷ್ಕರುಣೆಯಿಂದ" ಹೊಕ್ಕು ಹೊರಡುತ್ತ ಇರುತ್ತದೆ. ತಮ್ಮ ಬಡತನವನ್ನು ಮುಚ್ಚಿಡುತ್ತ ಸಿರಿತನದ ಸೋಗುಹಾಕುವ ಇಂತಹ ತ್ರಿಶಂಕು ಮನಸ್ಸುಗಳು - ಒಮ್ಮೊಮ್ಮೆ ಅಂತರ್ಮಥನ ನಡೆಸುತ್ತ, ತಮ್ಮ ಅನುಕೂಲಕ್ಕೆ ತಕ್ಕಂತೆ ನಾಚಿಕೆಯನ್ನು ಕರೆದು ಕಳುಹಿಸುತ್ತ - ದ್ವಂದ್ವದ ದಿಬ್ಬಣ ನಡೆಸುತ್ತಿರುವುದು ಸಾಮಾನ್ಯ. ಮನಸ್ಸು ಬಳಲುವ ನಿಜವಾದ ಸಂದರ್ಭಗಳಿವು. ಅರಿತೂ ಅರಿಯದಂತೆ - ಅರಿಯದೆಯೂ ಅರಿತಂತೆ ವರ್ತಿಸುತ್ತ - ಬಸವಳಿಯುವ ತ್ರಿಶಂಕು ವರ್ಗವಿದು !

ಹೆಣ್ಣಿಗೆ ಮಾತ್ರವೇ ನಾಚಿಕೆಯು ಸೀಮಿತವಲ್ಲ. ಅಲ್ಲಸಲ್ಲದ ಕೆಲಸಗಳಲ್ಲೇ ತೊಡಗಿಕೊಂಡು ಬದುಕಿನ ಲಕ್ಷ್ಮಣರೇಖೆಯನ್ನು ದಾಟುವಂತಹ ಎಲ್ಲರಿಗೂ ನಾಚಿಕೆಯ ಅನುಭವ ಆಗಲೇಬೇಕಾಗುತ್ತದೆ. ತಾವಾಗಿಯೇ ಅದನ್ನು ತೋರಿಸಿಕೊಳ್ಳದಂತಹ   ಸಂದರ್ಭಗಳಲ್ಲೂ ಮನಸ್ಸಿನಲ್ಲಿ ನಾಚಿಕೆಯು ಸುಪ್ತವಾಗಿ ಸುಳಿದಾಡುತ್ತಲೇ ಇರುತ್ತದೆ. ಸೂಕ್ಷ್ಮ ಸ್ವಭಾವದ ಹೆಣ್ಣಿನಲ್ಲಿ ನಾಚಿಕೆಯು ಹೆಚ್ಚು ವ್ಯಕ್ತವಾಗುವುದರಿಂದ - ನಾಚಿಕೆಯ ಅಂಗಪ್ರದರ್ಶನವು ಬಹಿರ್ನೋಟಕ್ಕೆ ಸಿಗುತ್ತದೆ - ಅಷ್ಟೆ. ನಾಚಿಕೆ ಎಂದರೆ - ಅಲ್ಲಸಲ್ಲದ ಕ್ರಿಯೆಗೆ ಒಗ್ಗದೆ ಮನಸ್ಸು ಮುದುಡುವ ಅಥವ ಮನಸ್ಸನ್ನು ನಿಗ್ರಹಿಸಿಕೊಳ್ಳುವ ಸಾಧನ. ಇದು - ಸ್ವರಕ್ಷಣೆಯ ಅಸ್ತ್ರದಂತೆಯೇ ದುಡಿಯುತ್ತಿರುತ್ತದೆ. ಆದ್ದರಿಂದ - ನಾಚಿಕೆಯನ್ನು ಮುನ್ನೆಚ್ಚರಿಕೆಯ ಸೂಚನೆ ಎಂದೂ ಅರ್ಥೈಸಬಹುದು.

ಮನಸ್ಸಿನ ಪ್ರಥಮ ಎಚ್ಚರಿಕೆಯಂತೆ ಮೂಡುವ ನಾಚಿಕೆ ಎಂಬ ಭಾವವು - ಅಂತಃನಿರೀಕ್ಷೆಯ ಪ್ರತಿಫಲ. ಅಂತಃನಿರೀಕ್ಷೆಯ ಗೊಡವೆಯೇ ಇಲ್ಲದಲ್ಲಿ ಮತ್ತು ಅದಕ್ಕೆ ಎಡೆಯೇ ಇಲ್ಲದಲ್ಲಿ ಶಿಷ್ಟತೆ ಅಥವ ನಾಚಿಕೆಯ ಭಾವಗಳು ಒಂದೋ ತಿರಸ್ಕರಿಸಲ್ಪಡುತ್ತವೆ; ಇಲ್ಲವೇ ನೆಂಟಸ್ತನ ನಡೆಸಲಾಗದೆ ಸೋತು ಮುದುಡಿಕೊಳ್ಳುತ್ತವೆ. ಸಾಮಾನ್ಯವಾಗಿ, ಐಶ್ವರ್ಯವನ್ನು ಬಾಚಿ ಗುಡ್ಡೆಹಾಕುವುದರಲ್ಲಿಯೇ ಮಗ್ನರಾದವರಿಗೆ - ಅಂತಃನಿರೀಕ್ಷೆಯ ವ್ಯವಧಾನವಿರುವುದಿಲ್ಲ; ಅದರ ಅಗತ್ಯವೂ ಅವರಿಗೆ ಕಾಣುವುದಿಲ್ಲ. ಇತ್ತ ಊಟಬಟ್ಟೆಗೆ ಪರದಾಡುತ್ತ ಬಡತನವನ್ನೇ ಹಾಸಿ ಹೊದೆಯುವವರಿಗೆ ನಾಚಿಕೆ ಎಂಬುದು Foreign Body ಅನ್ನಿಸಿ, ಅವರು ಅದನ್ನು ಗಮನಿಸುವ ಗೊಡವೆಗೇ ಹೋಗುವುದಿಲ್ಲ. ಆದರೆ... ಊಟ, ಬಟ್ಟೆ, ವಾಸಕ್ಕೊಂದು ಗುಡಿಸಲನ್ನು ಹೊಂದಿದ ತಕ್ಕಮಟ್ಟಿನ ಮನುಷ್ಯರು ಮಾತ್ರ ಮನಸ್ಸಿನ ಹಿಂದೂ ಮುಂದೂ ಹೊಕ್ಕು ಹೊರಡುತ್ತ ಅಂತಃನಿರೀಕ್ಷೆಗೆ ತೊಡಗಿ - ಶಿಷ್ಟತೆಯೊಂದಿಗೆ ನುರಿದುಕೊಳ್ಳುತ್ತ, ನಾಚಿಕೆಯಿಂದ ಬಳಲುತ್ತ - ಅನುಕೂಲಕ್ಕೆ ತಕ್ಕಂತೆ ಕೊಡವಿಕೊಳ್ಳುತ್ತಲೂ ಬಂದಿದ್ದಾರೆ.

ಆದ್ದರಿಂದ ಇಂದಿಗೂ - ನಾಚಿಕೆ ಎಂಬುದು ಕಿಂಚಿತ್ತಾದರೂ ಉಳಿದಿದ್ದರೆ - ಅದು ಈ "ತಕ್ಕಮಟ್ಟಿನ" ತ್ರಿಶಂಕು ವರ್ಗದಲ್ಲಿಯೇ. ಏಕೆಂದರೆ, ತಮ್ಮ ತಮ್ಮ ಮನಸ್ಸುಗಳನ್ನು ಒಮ್ಮೊಮ್ಮೆಯಾದರೂ ಉಪಚರಿಸುವ ವರ್ಗವಿದು. ಜೀವನೋಪಯೋಗೀ ಮೌಲ್ಯಗಳನ್ನು ಕುರಿತು ಚಿಂತಿಸಬಲ್ಲ ಯಾವುದೇ ಚಿತ್ತಸಾರಥಿಗಳಲ್ಲಿ ಮಾತ್ರವೇ "ನಾಚಿಕೆ ಮಾನ ಅವಮಾನ" ಮುಂತಾದ ಸಂವೇದನೆಗಳು ಹೆಚ್ಚು ಕ್ರಿಯಾಶೀಲವಾಗಿರುತ್ತವೆ. ಇಂತಹ ವಲಯದಲ್ಲಿ ಮಾತ್ರವೇ "ಮಾರಾಟಕ್ಕೆ ಸಿಲುಕದ ಸಂಸ್ಕೃತಿ ಸಚ್ಚಿಂತನೆಗಳು" ಹರಿದಾಡುತ್ತಿರುತ್ತವೆ ಮತ್ತು ಮುಂದಿನ ಪೀಳಿಗೆಗೆ ಹರಿದು ಹೋಗುತ್ತಲೂ ಇರುತ್ತದೆ. ಇಂತಹ ಮನೋ ಮಾರ್ಗದರ್ಶಕ ಸಂವೇದನೆಗಳು ಬಲಗೊಳ್ಳಲು ಅಥವ ದುರ್ಬಲವಾಗಲು - ಆಯಾ ಬದುಕಿನ ಚೌಕಟ್ಟು, ಶ್ರದ್ಧೆ ಮತ್ತು ಶೈಲಿಯೂ ಮುಖ್ಯ ಕಾರಣ.

ಬರಬರುತ್ತ "ಆಧುನಿಕ ವಿದ್ಯೆ" ಎಂಬುದು ದೈತ್ಯಾಕಾರದಲ್ಲಿ ಪ್ರವೇಶಿಸಿ, ತನ್ನ ಕಾಲಗಲಿಸಿ ನಿಂತ ಮೇಲೆ - ಭಾರತೀಯ ಸಂಸ್ಕೃತಿಯ ವ್ಯಾಖ್ಯೆಯೇ ಬದಲಾಗತೊಡಗಿತು. ಪುಟ್ಟ ಮಕ್ಕಳ ಮನಸ್ಸಿನಲ್ಲಿ ವಕ್ರ ಚಿಂತನೆಗಳನ್ನು ಬಿತ್ತುವ "ಮನೋ ತೆಗಲಿನ ಪಠ್ಯಕ್ರಮಗಳು" - ಇವತ್ತಿನ ಮನಸ್ಸುಗಳ ವಿಕ್ಷಿಪ್ತತೆಗೆ ಸಿಗುತ್ತಿರುವ ಇತ್ತೀಚಿನ ಉದಾಹರಣೆಗಳು.

"ಸುಳ್ಳೇ ನಮ್ಮನೆ ದೇವರು" ಎಂದುಕೊಂಡ ಮಂದಿಯೇ ಸಮಾಜದ ಮಾರ್ಗದರ್ಶಕರಾದಾಗ ಇಂತಹ "ಪಿತ್ಥ ಪವಾಡಗಳು" ಸಂಭವಿಸುತ್ತಲೇ ಇರುತ್ತವೆ. ಉದ್ದೇಶಿತ ಪೀಕಲಾಟ, ಸ್ವಾರ್ಥ ಮತ್ತು ವಿತ್ತ ಪಿತ್ಥದ ಅಮಲೇರಿಸಿರುವ ಆಮದಿತ ವಿದ್ಯೆ ಎಂಬ - ಇವತ್ತಿನ ಬೇಗಡೆಯ ಅಲಂಕಾರವು - ಯುವ ಪೀಳಿಗೆಗೆ ಯಾವುದೇ ಮನೋಸಂಸ್ಕಾರ ನೀಡಲಾಗದೆ ಸೋತು, ಭಾರತೀಯರನ್ನು "ಎಲ್ಲೂ ಸಲ್ಲದವರನ್ನಾಗಿ" ಮಾಡಲು ಶತಪ್ರಯತ್ನ ನಡೆಸುತ್ತಿರುವಂತೆಯೂ ಕಾಣುತ್ತಿದೆ !

ಬಾಡಿಗೆ ಅಮ್ಮ, ಬಾಡಿಗೆ ಅಪ್ಪ, ಬಾಡಿಗೆ ಸಂಸಾರ, ಬಾಡಿಗೆ ಉದ್ಯೋಗ... ಮುಂತಾದ - ಯಾವುದೂ ಸ್ವಂತವಲ್ಲದ ಮತ್ತು - ಆದ್ದರಿಂದಲೇ ಯಾವ ಭಾವ ಸಂಬಂಧವೂ ಇಲ್ಲದ ಅನಿಷ್ಟಕಾರೀ ಹೊಸ ವ್ಯವಸ್ಥೆ ಮತ್ತು ಹಾದಿಯ ಕೌಟುಂಬಿಕ ಮತ್ತು ಸಾಮಾಜಿಕ ನೀತಿಯನ್ನು ಪ್ರೋತ್ಸಾಹಿಸುತ್ತ - ಸ್ವಾರ್ಥೀ ಆಲಸಿಗಳ ಬೇಜವಾಬ್ದಾರಿಯ ಸಮಾಜವನ್ನು ಬೆಂಬಲಿಸಲು ಟೊಂಕ ಕಟ್ಟಿ ನಿಂತಂತೆಯೂ - ವರ್ತಮಾನವು ಗೋಚರಿಸುತ್ತಿದೆ !

ವಸ್ತು ಸ್ಥಿತಿಗಳಿಗೆ (ಉದಾ: ಅಂಗವಿಕಲ = ದಿವ್ಯಾಂಗ ? ನಪುಂಸಕ = ಕಿನ್ನರ ?... ಇತ್ಯಾದಿ) ಹೊಸಹೊಸ ನಾಮಕರಣ ಮಾಡುವುದರಲ್ಲಿಯೇ ತೊಡಗಿಕೊಂಡು, ರಾಜಕೀಯ ತುಷ್ಟೀಕರಣದಲ್ಲಿಯೇ ಇಂದಿನ ವ್ಯವಸ್ಥೆಯು ಪ್ರವೃತ್ತವಾಗಿಲ್ಲವೆ? "ಕಿಂ ನರಃ = ಮನುಷ್ಯನೋ ಎಂಬ ಭ್ರಾಂತಿ ಬರುವಂತಿರುವವ" ಎಂದರ್ಥ. ಕಿನ್ನರ ಎಂಬುದರ ಅರ್ಥ ಏನು ಎಂಬುದನ್ನೂ ಅರಿಯಲಾಗದ ಮಂದಿಯನ್ನು "ಮಾತಿನಲ್ಲೇ ಸ್ವರ್ಗಕ್ಕೇರಿಸುವ ತುಷ್ಟೀಕರಣದ" ವಿಡಂಬನೆಗೆ ಒಡ್ಡಿದರೆ - ಆಯಾ ಪಾಲಿನ ವಾಸ್ತವವು ಬದಲಾದೀತೆ ? ಅಂಗವಿಕಲರನ್ನು "ದಿವ್ಯಾಂಗ" ಎಂದು ಸಂಬೋಧಿಸಿದಾಗ - ಅದು ಅವರನ್ನು ವ್ಯಂಗ್ಯವಾಗಿ ಅವಹೇಳನ ಮಾಡಿದಂತಾಗದೆ ? ಇಂತಹ ರಾಜಕೀಯ ವ್ಯಾಯಾಮಗಳಿಂದ ಪ್ರಯೋಜನವಾದರೂ ಏನು ? ಯೋಚಿಸಬೇಕು. ಇದನ್ನೇ - "ಮನಸ್ಸುಗಳಿಗೆ ಮಾಡುವ ಮಾಯಕ" ಅನ್ನುವುದು.

ವಾಸ್ತವವನ್ನು ಒಪ್ಪಿ ಸ್ವೀಕರಿಸಲು ಮನಸ್ಸುಗಳನ್ನು ಸಜ್ಜುಗೊಳಿಸುವ ವಿದ್ಯೆಯು ಮಾತ್ರ - ಯಾವುದೇ "ಮನಸ್ಸಿನ ಅಸ್ತವ್ಯಸ್ಥ ಕುಣಿತವನ್ನು" ನಿಯಂತ್ರಿಸಬಲ್ಲದು. ಬೇರೆ ಮಾರ್ಗವೇ ಇಲ್ಲ. ಬದಲಾಗಿ, ವ್ಯವಸ್ಥೆಗಳೇ ಭ್ರಮೆಯನ್ನು ಪಸರಿಸುವುದರಲ್ಲಿ ತೊಡಗಿಕೊಳ್ಳಬಾರದು. ಅಷ್ಟಾವಕ್ರನನ್ನು ಸುಂದರಾಂಗ ಎಂದ ಮಾತ್ರಕ್ಕೆ ಆತನ ಊನಗಳೆಲ್ಲವೂ ಮಾಯವಾದಾವೆ ? ಅಂದಿನ ಅಷ್ಟಾವಕ್ರನು ವಕ್ರ ಶರೀರವನ್ನು ಹೊಂದಿದ್ದರೂ ತನ್ನ ಜ್ಞಾನಬಲದಿಂದಲೇ - ತನ್ನ ಸಾಮಾಜಿಕ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದ ಎಂಬುದನ್ನು ಮರೆಯಬಾರದು. ಇಂದು "ದಿವ್ಯಾಂಗ" ಎಂದು ಕರೆಸಿಕೊಂಡವರೆಲ್ಲರನ್ನೂ ಮಹಾಜ್ಞಾನಿಗಳಾಗಿಸುವ ವ್ಯವಸ್ಥೆಯೇನಾದರೂ ಇದೆಯೆ ? ಒಂದು ದಿನ ಸಭೆ ಸೇರಿಸಿ ಮಾಲೆ ಹಾಕಿ, ನಾಶವಾಗುವ ವಸ್ತುಗಳನ್ನು ಕೊಟ್ಟರೆ ಉದ್ಧಾರವಾದಂತಾಯಿತೆ ? ಉಪಕರಿಸುವ, ಸಹಾನುಭೂತಿಯ ಮನೋವಲಯವನ್ನು ನಿರ್ಮಿಸುವುದರಲ್ಲಿ ತೊಡಗಿಕೊಳ್ಳದೆ, ಕೇವಲ ಮಾತಿನ ಅರಮನೆಯನ್ನು ಕಟ್ಟುವುದು ಯಾವ ಪುರುಷಾರ್ಥಕ್ಕಾಗಿ ? ಮನಸ್ಸು, ಬುದ್ಧಿಯನ್ನು ತರಬೇತಿಗೆ ಒಡ್ಡಿಕೊಳ್ಳುವುದರಿಂದ ಮಾತ್ರವೇ ಯಾವುದೇ ದೈಹಿಕ ಕೊರತೆಗಳನ್ನು ನೀಗಿಸಿಕೊಳ್ಳಲು ಸಾಧ್ಯವಿದೆ - ಎಂಬ ಸಂದೇಶವನ್ನು ನೀಡುವವರು ಮತ್ತು ನಿಯಮಗಳ ಬೇಲಿಯನ್ನು ಹಾರದೆ ಅವನ್ನು ಅನುಸರಿಸುವವರು - ಇಂದಿನ ಅಗತ್ಯ..

ಮೊದಲು, ವಾಸ್ತವವನ್ನು ಒಪ್ಪುವ ವಿನಮ್ರತೆಯನ್ನು ನಮ್ಮ ಶಿಕ್ಷಣದಲ್ಲಿ ಊಡಬೇಕಾಗಿದೆ. ಒಪ್ಪಿದ ವಾಸ್ತವವನ್ನು ಮನೋದಾರ್ಢ್ಯದಿಂದ ನಿಭಾಯಿಸುವ ಕಲೆಯನ್ನೂ ಕಲಿಸಬೇಕಾಗಿದೆ. ಇತಿಮಿತಿಯ ಅರಿವನ್ನು ಮೂಡಿಸಬೇಕಾಗಿದೆ.   ಮನಸ್ಸುಗಳ ಅನಿಯಮಿತ ಸಂಚಾರವನ್ನು ನಿಯಂತ್ರಿಸುವ ವಿದ್ಯೆಯನ್ನು ಸರ್ವತ್ರ ಪ್ರಿಯವಾಗಿಸಬೇಕಾಗಿದೆ. ಅದಕ್ಕಾಗಿ, ಸಾತ್ವಿಕ ಭಯವನ್ನು ಉಳಿಸಿಕೊಂಡು, ಉತ್ತೇಜಿಸಬೇಕಾಗಿದೆ. ಆಗ, ಸಮಸ್ತ ವರ್ಗಗಳು ಪರಸ್ಪರರನ್ನು ಆಧರಿಸುವ ಮತ್ತು ಆದರಿಸುವ ಸಾಮಾಜಿಕ ವಾತಾವರಣವು ತಾನಾಗಿಯೇ ಸೃಷ್ಟಿಯಾಗುತ್ತದೆ. ಇದಕ್ಕೆ ಹೊರತಾದ ಮಾತು - ಕ್ರಿಯೆಗಳೆಲ್ಲವೂ ಓಟಿನ ರಾಜಕೀಯದ ತಿಪ್ಪರಲಾಗ ಅಥವ ತಿರುಕನ ಕನಸುಗಳೇ ಹೊರತು ಇನ್ನೇನೂ ಅಲ್ಲ. ರಾಜನ ವೇಷ ತೊಟ್ಟವರೆಲ್ಲರೂ ರಾಜರಾದಾರೆ ? ಚಪ್ಪಾಳೆ ಗಿಟ್ಟಿಸಲು ಕ್ರೂರ ಮನಸ್ಸುಗಳು ಹೂಡುವ ತಂತ್ರ, ಮಾಡುವ ಹಗಲು ವೇಷಗಳೆಲ್ಲವೂ ಬೂಸಾಗಳೇ ಆಗಿರುತ್ತವೆ.

ಅಡ್ಡ ಒಡ್ಡ ದಾರಿಯನ್ನೇ ರಾಜಮಾರ್ಗ ಎಂದು ಬಿಂಬಿಸುವ ರಾಜಕೀಯ ಕುಯುಕ್ತಿಗಳನ್ನು - ಮೆಟ್ಟಿಲನ್ನೇ ಉಪ್ಪರಿಗೆ ಎನ್ನುವ ಭ್ರಾಂತಿಗಳನ್ನು ನಾವೀಗ ನಿತ್ಯವೂ ಹಾಯಬೇಕಾಗಿ ಬಂದಿದೆ. ತತ್ಪರಿಣಾಮವಾಗಿ, ಅಂಕೆಯಿಲ್ಲದ ಮನಸ್ಸುಗಳ ಮಹಾ ಪ್ರವಾಹವೇ - ಈಗ ಸೃಷ್ಟಿಯಾಗಿಬಿಟ್ಟಿದೆ. ಇಂದು - ಭಾರತೀಯ ಮೌಲ್ಯಗಳನ್ನೆಲ್ಲವನ್ನೂ "ರಾಜಕೀಯ ಲಾಭ - ನಷ್ಟದ" ಹಿನ್ನೆಲೆಯಿಂದಲೇ ತೂಗಿ ನೋಡುವಂತಹ ವಿಕ್ಷಿಪ್ತ ಸನ್ನಿವೇಶಗಳನ್ನು ಹುಟ್ಟು ಹಾಕಲಾಗಿದೆ. "ಆಮದು ರಫ್ತಿನ ಪಟ್ಟಿಯಲ್ಲಿ" ಭಾರತೀಯ ಮೌಲ್ಯಗಳೂ ಬಂದು ಕೂತಿವೆ ! ಮಾನವೀಯ ಸಂಬಂಧ, ಮಾನವೀಯತೆ, ಸಂಯಮ, ವಿನಯ ಮುಂತಾದ - ಮನೋವಿಕಾಸಕ್ಕೆ ಪೂರಕವಾದ ಮೌಲ್ಯಗಳನ್ನೆಲ್ಲ ಬದಿಗೆ ಸರಿಸಿರುವ ವರ್ತಮಾನದಲ್ಲಿ - ಸಾಮಾಜಿಕ ತೋರಿಕೆಯ ಅಟ್ಟಹಾಸಗಳಲ್ಲೇ ತೊಡಗಿಕೊಂಡಿರುವ ಮಾನವ ಮನಸ್ಸುಗಳು - ನಮ್ಮ ಆಧುನಿಕ ಶಿಕ್ಷಣದ ವಿಷವೃಕ್ಷಗಳಂತಿವೆ !

ಪ್ರಕ್ಷುಬ್ಢ ಮನಸ್ಸುಗಳಿಂದ ಯಾವುದೇ ಉತ್ತಮ ನಿರ್ಧಾರಗಳು ಹೊಮ್ಮುವುದಿಲ್ಲ. ಉತ್ತಮ ಸಂಕಲ್ಪಗಳು ಮತ್ತು ತತ್ಸಂಬಂಧೀ ಕರ್ಮಗಳು - ಆರೋಗ್ಯವಂತ ಮನೋಸ್ಥಿತಿಯಿಂದ ಮಾತ್ರ ಸಾಧಿಸುವಂಥವು. ಆದ್ದರಿಂದ - ಶಾಂತಿ ನೆಮ್ಮದಿಯನ್ನು ಅಪೇಕ್ಷಿಸುವ ಬಾಳ ಪಯಣಿಗರಲ್ಲಿ - ಮನಸ್ಸಿನ ವೈಕಾರವನ್ನು ಉಜ್ಜಿ ನಿವಾರಿಸಿಕೊಳ್ಳುವ ಸತತ ಯತ್ನವು ಅನಿವಾರ್ಯವಾಗುತ್ತದೆ.

ಶಿಕ್ಷಣ ಮತ್ತು ಸಂಸ್ಕೃತಿಗಳು ಒಂದೇ ನಾಣ್ಯದ ಎರಡು ಮುಖಗಳು. ಯಾವುದೇ ಪೂರ್ವಸಂಸ್ಕಾರವುಳ್ಳ ಮಗುವಾಗಿದ್ದರೂ - ಜನಿಸಿದ ನಂತರ ಅದಕ್ಕೆ ಸಿಗುವ ಒಟ್ಟಾರೆ ಶಿಕ್ಷಣವು ಕೂಡ - ಆಯಾ ಮಗುವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಇದು - ವೈಜ್ಞಾನಿಕವಾಗಿಯೂ ಕಂಡುಕೊಂಡ ವಿಷಯ.

"ದೃಢವಾದ ನೆಲೆ ಇಲ್ಲವಾದರೆ ಜ್ಞಾನವು ಹಾಳಾಗುತ್ತದೆ. ಎಚ್ಚರ ತಪ್ಪಿದರೆ ಕೇಳಿಸಿಕೊಂಡ ಜ್ಞಾನವೂ ಹಾಳಾಗುತ್ತದೆ. ಸಂದೇಹ ಪಟ್ಟರೆ ಮಂತ್ರವೂ ವ್ಯರ್ಥವಾಗುತ್ತದೆ. ಏಕಾಗ್ರತೆ ಇಲ್ಲದೆ ಹೋದರೆ ಜಪವೂ ನಿಷ್ಫಲ. ಭಕ್ತಿ ಭಕ್ತರಿಲ್ಲದ ಸ್ಥಳವು ನಾಶ ಹೊಂದುತ್ತದೆ. ಶ್ರದ್ಧೆಯಿಲ್ಲದೆ ಮಾಡುವ ಶ್ರಾದ್ಧವೂ ವ್ಯರ್ಥ. ಶ್ರೋತ್ರಿಯನಲ್ಲದವರಿಗೆ ಕೊಟ್ಟ ದಾನವೂ ವ್ಯರ್ಥ. ಆಚಾರವನ್ನು ಬಿಟ್ಟರೆ ಸಂತತಿಯೇ ಹಾಳು."

ಇದು - ಆರ್ಯೋಕ್ತಿ. ಮನಸ್ಸನ್ನು ನಿಗ್ರಹಿಸಿ ಸನ್ಮಾರ್ಗದಲ್ಲಿ ನಡೆಯಲು ನಮ್ಮ ಹಿರಿಯರು ಹಾಕಿಕೊಟ್ಟ ಇಂತಹ ಅನೇಕ ಮಾರ್ಗಸೂಚಿಗಳಿವೆ. ಹಾಳು, ವ್ಯರ್ಥ, ನಿಷ್ಫಲ, ನಾಶ - ಮುಂತಾದ ಯಾವುದೇ ಸಂಭವನೀಯತೆಗಳಿಗೆಲ್ಲ - ಕಡಿವಾಣ ತಪ್ಪಿದ ಮನಸ್ಸೇ ಕಾರಣ.

ತಾತ್ಪರ್ಯವೇನೆಂದರೆ... ಪ್ರಾಂಜಲವಾದ ಮನಸ್ಸು, ಬುದ್ಧಿಯ ಬಲಿಷ್ಠ ತಳಹದಿಯ ಮೇಲೆ - ಜ್ಞಾನವನ್ನು ಬೆಳೆಸಿಕೊಳ್ಳಿ; ಎಚ್ಚರ ತಪ್ಪಿದ ಅಪಾತ್ರ ನಂಬಿಕೆ ಬೇಡ; ನಿಷ್ಠೆಯಿಂದ ಶುದ್ಧ ವಾತಾವರಣವನ್ನು ನಿರ್ಮಿಸಿಕೊಳ್ಳಿ; ಪರಿಶುದ್ಧ ಬದುಕನ್ನು ನಡೆಸುತ್ತಿರುವ ಜ್ಞಾನಿಯನ್ನು ಗೌರವಿಸಿ; ಪರಂಪರೆಯಿಂದ ಬಂದ ಉತ್ತಮ ಮೌಲ್ಯಗಳನ್ನು ಪರಿಪಾಲಿಸಿ... ಮುಂತಾದ ಸಂದೇಶಗಳು ಮನುಷ್ಯ ಜನಾಂಗದ ಉತ್ತಮಿಕೆಗಾಗಿಯೇ ಮೂಡಿಬಂದವುಗಳು. ಪ್ರಸ್ತುತದ ಬಹುಪಾಲು ಅಶಾಂತಿಗೆ ಕಾರಣವಾಗಿರುವ - ಅನಿಯಂತ್ರಿತ ಮನಸ್ಸುಗಳೆಂಬ ದೈತ್ಯ ಶಕ್ತಿಯನ್ನು ಪಳಗಿಸಿಕೊಳ್ಳಲು ಸಹಕರಿಸುವ ನೀತಿಗಳಿವು.

ಸಹಸ್ರಾರು ವರ್ಷಗಳ ಹಿಂದೆಯೇ ವ್ಯಾಸರು ರಚಿಸಿದ್ದ ಶ್ರೀಮದ್ ಭಾಗವತದಲ್ಲಿ - ಭಕ್ತಿಪೂರಿತ ಕತೆಗಳು ಮಾತ್ರವಲ್ಲದೆ ದೂರದರ್ಶಿತ್ವದ ಹೂರಣವೂ ಇದೆ. ದ್ವಾಪರದ ಕೊನೆಯ ದೊರೆಯಾದ ಪರೀಕ್ಷಿತ ರಾಜನು ಅದಾಗಲೇ ಹೊಂಚು ಹಾಕುತ್ತಿದ್ದ ಕಲಿಯ ಪ್ರವೇಶವನ್ನು - ತನ್ನ ರಾಜ್ಯದಲ್ಲಿ ತಡೆದಿದ್ದ ! ಕಲಿಭಾವದ ಯಾವುದೇ ಕುಕೃತ್ಯಗಳು ನಡೆಯದಂತೆ ಹದ್ದಿನ ಕಣ್ಣಿರಿಸಿದ್ದ. ಹೀಗಿದ್ದೂ... ಕಲಿಯನ್ನು ಬಂಧಿಸಿ ನಿಗ್ರಹಿಸಲು ಯತ್ನಿಸಿದ್ದರೂ... ಕಾಲಧರ್ಮಕ್ಕೆ ತಲೆಬಾಗಿದ್ದ ಆತನಿಗೆ ಕಲಿಯನ್ನು ಶಾಶ್ವತವಾಗಿ ನಿವಾರಿಸಲು ಸಾಧ್ಯವಾಗಲಿಲ್ಲ. ಅಂದು ಪರೀಕ್ಷಿತನ ಬಂಧಿಯಾಗಿದ್ದ ಕಲಿಪುರುಷನು ಧೂರ್ತನಂತೆ, ಶಿಷ್ಟತೆಯ ಗಂಧಗಾಳಿಯೂ ಇಲ್ಲದವನಂತೆ, ನಾಚಿಕೆಯ ಹಂಗಿಲ್ಲದವನಂತೆ ಪರೀಕ್ಷಿತನೊಂದಿಗೆ ಆಡುವ ಮಾತುಗಳು - ಇಂದಿನ ಆಧುನಿಕರ ಬದುಕನ್ನು ಯಥಾವತ್ತಾಗಿ ಪ್ರತಿಬಿಂಬಿಸುವಂತಿವೆ ! ಕಲಿಯು ಸಂಕಲ್ಪಿಸಿದ್ದ ಕಲಿಸಂತಾನದ ಲಕ್ಷಣಗಳು - ಈ ಮಾತಿಗೆ ಪುಷ್ಟಿ ನೀಡುತ್ತದೆ.

"ಕಾಮವೇ ಪರಮ ಪುರುಷಾರ್ಥ ಎಂಬ ಭ್ರಮೆಯನ್ನು ಹರಡುವುದು ನನ್ನ ತಂತ್ರ. ಸುಳ್ಳು, ಜೂಜು, ಹಾದರ, ಹಿಂಸೆ, ಲೋಭ, ಮಾತ್ಸರ್ಯಗಳನ್ನು ಇಂದಿನ ಮತ್ತು ನಿನ್ನ ಮುಂದಿನ ವೃಷಲಪ್ರಾಯರಾದ ದೊರೆಗಳಲ್ಲಿ ಹರಡುತ್ತೇನೆ. ಯುದ್ಧಗಳನ್ನೇರ್ಪಡಿಸುತ್ತೇನೆ. ಅದಕ್ಕೆ ಎಲ್ಲರೂ ಸುಲಭವಾಗಿ ಬಲಿಬೀಳುತ್ತಾರೆ. ಧರ್ಮದ ಶಿಸ್ತು, ವಿಶ್ವಜ್ಞಾನ, ದರ್ಶನವಿಲ್ಲದವರನ್ನು ದಾರಿ ತಪ್ಪಿಸುವುದು ಸುಲಭ. ಇದು ನನ್ನ ಪರಮೋಚ್ಚ ಕಾಲ. ಇಷ್ಟು ದಿನ ಶ್ರೀ ಕೃಷ್ಣನೇ ನೇರವಾಗಿ ಇದ್ದುದರಿಂದ ನನ್ನ ಕೈಚಳಕವನ್ನು ತೋರಿಸಲಾಗಲಿಲ್ಲ. ಆದರೂ... ನಿನ್ನ ಪೂರ್ವಜನಾದ ಧರ್ಮರಾಯನು ನನ್ನ ಬಲೆಗೆ ಬಿದ್ದು ಜೂಜಾಡಿದ. ಹೆಂಡತಿಯ ಮಾನವನ್ನೇ ಪಣವಾಗಿಟ್ಟ. ಅಷ್ಟು ಪ್ರವೇಶವು ನನಗೆ ಸಾಕಾಗುತ್ತದೆ. ದ್ವಾಪರ ಯುಗವನ್ನೇ ಮುಗಿಸಿಬಿಡಲು - ನನ್ನ ಅನುಯಾಯಿಯಾಗಿದ್ದ ದುರ್ಯೋಧನನ ಮೂಲಕ ಒಂದು ಘೋರವಾದ ಯುದ್ಧಕ್ಕೆ ನಾಂದಿ ಹಾಡಿಸಿದೆ. ಆ ಬ್ರಾಹ್ಮಣ ಅಶ್ವತ್ಥಾಮ ಎಂಬವನು ನಿನ್ನನ್ನೂ ನಿನ್ನ ವಂಶವನ್ನೂ ಅಳಿಸಿ ಹಾಕಲು ಯತ್ನಿಸಿದ. ಆ ಶ್ರೀ ಕೃಷ್ಣನ ಕೃಪೆಯಿಂದ ನೀನೇನೋ ಬದುಕಿಕೊಂಡೆ. ಅದಕ್ಕಾಗಿಯೇ ನಿನಗೆ ನಾನು ವಂದಿಸುತ್ತೇನೆ. ಒಹೋ... ಪರೀಕ್ಷಿತ ಮಹಾರಾಜಾ, ನೀನು ಕೊಂದರೂ ನಾನು ಸಾಯಲಾರೆ!"

ಕಲಿಪುರುಷನು - ಪರೀಕ್ಷಿತನೆಂಬ ಸಮರ್ಥ, ಧರ್ಮಿಷ್ಟ ರಾಜನ ಮುಂದೆ ನಿಂತು ಆಡಿದ್ದ ಮಾತುಗಳಿವು ! ಕಲಿಯ ಉದ್ದೇಶ ಮತ್ತು ಗುರಿಯು ಸಾರ್ಥಕ್ಯಗೊಳ್ಳುತ್ತಿರುವಂತೆ - ಇಂದು ಅನ್ನಿಸುತ್ತಿಲ್ಲವೆ ? ಮನುಷ್ಯನ ಮನಸ್ಸು ದುರ್ಬಲವಾದಾಗ, ಕಲುಷಿತಗೊಂಡಾಗ, ಕೋಪಕ್ಕೆ ವಶವಾಗಿ ದುಡುಕಿದಾಗ - ಕಲಿಯನ್ನು ಆಹ್ವಾನಿಸಿದಂತೆ ! ಕೆಟ್ಟ ಆಸಕ್ತಿ, ಅಭಿರುಚಿ ಮುಂತಾದ ಎಲ್ಲ ಬಗೆಯ ಜೀವವಿರೋಧೀ ಚಿಂತನೆಗಳ ಮೂಲಕವೇ ಕೆಡುಕು ಸಂಭವಿಸಲು ಸಾಧ್ಯ. ಆದ್ದರಿಂದಲೇ ಪ್ರಶಾಂತ ಬದುಕನ್ನು ಹೊಂದಲು - ಮನಸ್ಸು ಬುದ್ಧಿಗಳ ನಿಯಂತ್ರಣವಲ್ಲದೆ ಬೇರೆ ಮಾರ್ಗವಿಲ್ಲ.

ಮನೋಕಲ್ಮಷವನ್ನು ಊಡಿ, ಮನುಷ್ಯರ ಸ್ಥಿತಿಗತಿಮತಿಗಳನ್ನು ಬದಲಿಸುವ ಕಾರ್ಯಗಳೆಲ್ಲವೂ - ಅಂದಿನಿಂದಲೂ ಕಲಿಯ ಅನುಯಾಯಿಗಳ ಮೂಲಕವೇ ನಡೆಯುತ್ತ ಬಂದಿದೆ. ಈ ಜಗತ್ತು ಸೃಷ್ಟಿಯಾದಾಗಲೇ ಸತ್ಯ ಅಸತ್ಯ, ಜ್ಞಾನ ಅಜ್ಞಾನ, ಹಿಂಸೆ ಅಹಿಂಸೆ... ಇತ್ಯಾದಿ ವೈರುದ್ಧ್ಯಗಳೆಲ್ಲವೂ ಸೃಷ್ಟಿಯಾಗಿಬಿಟ್ಟಿವೆ. ವಿಶ್ವ ಎಂಬ ಹಸರದ ಅಂಗಡಿಯಲ್ಲಿ - ಎಲ್ಲ ಬಗೆಯ ಸರಕುಗಳೂ ಇವೆ; ಆದರೆ... ನಮ್ಮ ಆಯ್ಕೆ ಮತ್ತು ಸ್ವಂತ ಆಯ್ಕೆಯನ್ನು ಎಚ್ಚರದಿಂದ ನಿಭಾಯಿಸುವ ಪಾತ್ರ ಮಾತ್ರ - ನಮ್ಮದೇ ಆಗಿದೆ !

ಪ್ರತಿಯೊಂದು ಸಂಗತಿಯ ಆರಂಭದಲ್ಲಿಯೇ - ಅದರ ಅಂತ್ಯದ ಮುನ್ನುಡಿಯು ಇದ್ದೇ ಇರುತ್ತದೆ. ಸೃಷ್ಟಿಯೂ ಇದಕ್ಕೆ ಹೊರತಲ್ಲ. ಬುದ್ಧಿಶಕ್ತಿಯುಳ್ಳ ಮನುಷ್ಯ ಸಂತತಿಯು ತನ್ನ ಆತ್ಮನಿರೀಕ್ಷಣೆಯ ಮೂಲಕ ಉತ್ತಮ ಆಯ್ಕೆಗೆ ಮಾತ್ರ ಮುಂದಾಗುವಂತಾದರೆ - ಆರಂಭ ಮತ್ತು ಅಂತ್ಯಗಳ ನಡುವಣ - ಬದುಕು ಎಂಬುದು - ಸಹನೀಯವಾಗುತ್ತದೆ.

ಎಲ್ಲರೂ ಸುಭಗರಾಗುವುದು, ಸುಖಿಗಳಾಗುವುದು, ಅನ್ಯೋನ್ಯತೆಯಿಂದಿರುವುದು... ಇವೆಲ್ಲವೂ ಕೇವಲ ಆದರ್ಶಗಳಲ್ಲ; ಜೀವಪೋಷಕಗಳು. ಯಾವುದೇ ಆದರ್ಶಗಳು ಸದ್ಭಾವಗಳು ಇಂದಿಗೂ ಉಳಿದುಕೊಂಡಿದ್ದರೆ - ಅದಕ್ಕೆ ಕಾರಣವೇ - ಮನುಷ್ಯರ ಅಂತರಂಗದಲ್ಲಿ ಸದಾ ತುಡಿಯುತ್ತಿರುವ "ಉದ್ಧಾರದ" ಬಯಕೆ. ಇದು - Inbuilt, Inborn ಸಹಜ ವ್ಯವಸ್ಥೆ. ಆದ್ದರಿಂದ - ಈಗ ತಪ್ಪಿರುವುದು ಮನಸ್ಸಿನ ಹಂತದಲ್ಲೇ. ಅಂಕೆತಪ್ಪಿದ ಮನುಷ್ಯರ ಮಿತಿಮೀರಿದ ಸ್ವಾರ್ಥ ಮತ್ತು ಅವರವರ ಉದ್ಧಾರಕ್ಕೆ ಬಳಸಿಕೊಳ್ಳುತ್ತಿರುವ ಮನೋವಿಕೃತ ವಾಮಮಾರ್ಗಗಳು - ಆಧುನಿಕರ ಬವಣೆಗಳಿಗೆ ಮೂಲ ಕಾರಣ. ಸದ್ಭಾವಗಳ ಮೇಲೆ ದುರ್ಭಾವಗಳು ಸವಾರಿ ಮಾಡುತ್ತಿರುವ ಕಲಿ ಸನ್ನಿವೇಶವಿದು. ಮನಸ್ಸಿದ್ದರೆ - ಪರಿಹಾರಕ್ಕೆ ಮಾರ್ಗವೂ ಇದೆ. ಪರೀಕ್ಷಿತರಾಗುವ ಹಾದಿ ಹಿಡಿಯಬೇಕಷ್ಟೆ. ಮನಸ್ಸಿನಂತೇ ಮಹದೇವ ! ಅದಾಗಲೇ ನಾವೇ ಕರೆದು ಕೂಡಿಸಿಕೊಂಡ ಕಲಿ ಎಂಬ ದುರ್ಭಾವದ ಅತಿಥಿಯನ್ನು ಹೊರದಬ್ಬಿ ಸ್ವಚ್ಛವಾಗಲು ಇರುವ ಏಕೈಕ ಮಾರ್ಗವು - ಮನೋನಿಗ್ರಹವೊಂದೇ ಆಗಿದೆ. ಸ್ವಚ್ಛ ಮನಸ್ಸಿನ ಪಾತಳಿಯಲ್ಲಿ ಮಾತ್ರವೇ ಬುದ್ಧಿಯು ಪ್ರಚೋದನೆಗೊಂಡು ಸ್ವಚ್ಛ ಕೆಲಸಗಳನ್ನು ನಿರ್ವಹಿಸುವುದು ಸಾಧ್ಯ. ಇದೇ ಜೀವನ ಯೋಗ.

ಆದ್ದರಿಂದ - ಅಹಿತಕಾರಿಯಾದ ಮತ್ತು ತಮ್ಮ ಸಾಮರ್ಥ್ಯಕ್ಕೆ ಮೀರಿದ ಮಹತ್ವಾಕಾಂಕ್ಷೆಗಳನ್ನು ಪೋಷಿಸುತ್ತ ಬಳಲುತ್ತಿರುವ ನಮ್ಮ ಮನಸ್ಸುಗಳಿಗೆ ಶುದ್ಧತೆಯ ಸಾಂಗತ್ಯವನ್ನು ಒದಗಿಸಬೇಕಾಗಿದೆ. ಸ್ವಚ್ಛ ಮನಸ್ಸಿನ ಹಾಳೆಯಲ್ಲಿ ನಮ್ಮ ವಾಸ್ತವವನ್ನು ನಾವೇ ಬರೆಯಬೇಕಾಗಿದೆ. ವ್ಯರ್ಥ ತಿಣುಕಾಟಗಳಲ್ಲಿ ಮುಳುಗುತ್ತಿರುವ ಮನಸ್ಸುಗಳನ್ನು ಶಾಂತಗೊಳಿಸಬೇಕಾಗಿದೆ. ವ್ಯಕ್ತಿಕೇಂದ್ರಿತವಾಗದೆ ತತ್ವಕೇಂದ್ರಿತವಾದ ಅಧ್ಯಾತ್ಮದ ಆಧಾರವನ್ನು ಒದಗಿಸಬೇಕಾಗಿದೆ. ವೇದವೇದಾಂತಗಳನ್ನು ದೂರುವ ಮೊದಲು ಯಾವುದೇ ಪೂರ್ವಾಗ್ರಹವಿಲ್ಲದೆ ಅವನ್ನು ಅಧ್ಯಯನ ಮಾಡಬೇಕಾಗಿದೆ. ಸಂಶಯಗ್ರಸ್ತ ಮನಸ್ಸುಗಳನ್ನು ಸಾಧಾರವಾಗಿ ಸಂತೈಸಬೇಕಿದೆ. ಅನರ್ಥಕಾರೀ ಭಯದ ಭಾವವನ್ನು ನಿವಾರಿಸಿಕೊಳ್ಳಲು ಸಚ್ಚಿಂತನೆಗಳ ಮೊರೆ ಹೋಗಬೇಕಾಗಿದೆ. ಭಯ ಎಂಬ ಅಸ್ಥಿರ ಭಾವವನ್ನು ಹೊಡೆದೋಡಿಸದೆ - ಯಾವುದೇ ನೆಮ್ಮದಿಯು ಸಂಭವಿಸದು. ಅದಕ್ಕಾಗಿ - ಆತ್ಮವು ಪರಮಾತ್ಮವಾಗುವ ಹಾದಿಯನ್ನು ಹಿಡಿಯಬೇಕಾಗಿದೆ. ಯಾವುದೇ ಬದುಕಿನ ಶಾಂತಿಯ ಸೂತ್ರವಿದು.

ದಿನನಿತ್ಯದ ತಾಪತ್ರಯಗಳ ಹಳಸಲು ಯೋಚನೆಗಳನ್ನು ಹಿಂದೆ ಮುಂದೆ ಓಡಿಸುತ್ತಲೇ ಇರುವುದರಿಂದ ಅದೊಂದು ಮಾನಸಿಕ ಚಟವಾಗಿ, ವಿಚಾರ ಕಲ್ಮಷವಾಗಿ ಪರಿಣಮಿಸಿ, ಮನಸ್ಸು ದುರ್ಬಲವಾಗುತ್ತದೆ. ಆದ್ದರಿಂದ ಪ್ರಜ್ಞಾಪೂರ್ವಕವಾಗಿ, ಒಳ್ಳೆಯ ವಿಷಯಗಳನ್ನಷ್ಟೇ ಯೋಚಿಸುತ್ತ, ಹೊಸಹೊಸ ಗುರಿ - ಯೋಜನೆಗಳನ್ನು ಆರೋಪಿಸಿಕೊಳ್ಳುವ ಮೂಲಕ ಮತ್ತು ಆಗಾಗ ಪೃಕೃತಿಯ ಮಡಿಲಲ್ಲಿ ನಿರಾಳವಾಗಿದ್ದು ಹುಚ್ಚುಗಟ್ಟಿ ಓಡುವ ಮನಸ್ಸನ್ನು ಪ್ರಫುಲ್ಲಗೊಳಿಸುವ ಮೂಲಕವೂ - ಒಂದೇ ರಾಗದಿಂದ ಬೇಸತ್ತು ಹೋದಂತಹ ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಯೋಚನೆಯಿಂದಲೇ ಜಗತ್ತು. ಶ್ರೇಷ್ಠ ಯೋಚನೆಗಳಿಂದ ಶ್ರೇಷ್ಠ ಜಗತ್ತು. ಶ್ರೇಷ್ಠತೆಯ ಸಾಧನೆಯು ಸಾಧಕನಿಂದ ಪ್ರತಿಯಾಗಿ ಅಪೇಕ್ಷಿಸುವುದು - ನಿಯಂತ್ರಣವನ್ನು. ಹೀಗೆ ಸ್ವ -  ಇಚ್ಛೆಯಿಂದ ನಡೆಸಲಾಗುವ ಏಕಾಗ್ರತೆಯ ಸಾಧನೆಯಿಂದ ಮಾತ್ರವೇ ಮನಸ್ಸು ಹಗುರಾಗಲು ಸಾಧ್ಯ. ನಿಗ್ರಹದಿಂದ ವಿಗ್ರಹವಾಗುವ ಪರಿ ಇದು.

ಅದೃಷ್ಟ ಎಂದರೆ ಅವಕಾಶ ಮತ್ತು ಪೂರ್ವ ತಯಾರಿಗಳ ಒಂದಾಗುವಿಕೆ ಎಂದೂ ಅರ್ಥೈಸಬಹುದು. ಅದೃಷ್ಟ  ದೈವಕೃಪೆಯೊಂದನ್ನು ಹೊರತಾಗಿ ಇತರ ಯಾವುದೇ ದೃಷ್ಟ ಬಗೆಯಲ್ಲಿ, ಅವಕಾಶಗಳನ್ನು ಯಾರೋ ತಟ್ಟೆಯಲ್ಲಿಟ್ಟು ಕೊಡುವುದಿಲ್ಲ. ಅವಕಾಶಗಳನ್ನು ನಮ್ಮೆದುರು ತೆರೆದಿಡುವುದೂ ಮನಸ್ಸೇ. ಆದ್ದರಿಂದ ನಮ್ಮ ಮನಸ್ಸನ್ನು ಸಮರ್ಥವಾಗಿ ನಿರ್ವಹಿಸಬಲ್ಲೆವು ಎಂದಾದರೆ - ಅವಕಾಶಗಳನ್ನೂ ನಾವೇ ನಿರ್ಮಿಸಿಕೊಳ್ಳಬಲ್ಲೆವು. ಮನಸ್ಸಿನ ಸಮರ್ಥ ನಿರ್ವಹಣೆಯೇ ಯಶಸ್ಸಿನ ಸೂತ್ರ. ಸೃಜನಶೀಲ ಆರೋಗ್ಯಕರ ಮನಸ್ಸುಗಳಿಗೆ - ಯಶಸ್ಸು ಶತಃಸಿದ್ಧ. ಜೀವನದ ಯಶಸ್ವೀ ನಿರ್ವಹಣೆ ಎಂದರೆ ಮನಸ್ಸಿನ ಯಶಸ್ವೀ ನಿರ್ವಹಣೆ ಎಂದೇ ಅರ್ಥ.

ಒತ್ತಡಮುಕ್ತ ನೆಮ್ಮದಿಯ ಭಾವ ಪರಿವೇಷ್ಟಿತ ವಲಯದಲ್ಲಿ - ಶಿಷ್ಟತೆಯು ತಾನಾಗಿಯೇ ಬಂದು ನೆಲೆಸುತ್ತದೆ. ಮನಸ್ಸಿನ ಆಳಕ್ಕೆ ಇಳಿಯುವಂತಹ - ಇಂತಹ ಮೌಲ್ಯಯುತ ಶಿಕ್ಷಣವು - ಭಾರತದ ಸ್ವಾತಂತ್ರ್ಯಾನಂತರ ಏಕೆ ಕಣ್ಮರೆಯಾಯಿತು ? ನಾಚಿಕೆಗೆಟ್ಟ ಹೊಸ ಜನಾಂಗವನ್ನು ಸೃಷ್ಟಿಸಿದ ಸೋಗಲಾಡಿ ಬುದ್ಧಿಗೇಡಿ ಜೀವಿಗಳು - ಪ್ರಗತಿಪರರೆ ? ಅಥವ...?

ಮನಸ್ಸು ಕೆಡಿಸಲು ತುದಿಗಾಲಿನಲ್ಲಿ ನಿಂತಿರುವ ಇಂತಹ ವಿಕೃತ ಚಿಂತಕರ ವಿಕಾರಗ್ರಸ್ತ ಪುಸ್ತಕಗಳು ಎಷ್ಟು ಬಂದರೂ ಏನು ಉಪಯೋಗ ? ಇವರೆಲ್ಲರೂ ಬಯಸುವುದಾದರೂ ಏನು ? ಎಲ್ಲರೂ ಕಲಿಯ ಅನುಯಾಯಿಗಳಾಗಬೇಕೆಂದೆ ? ಸುಳ್ಳಕಳ್ಳರನ್ನು ಬೆಂಬಲಿಸುವ ಇಂದಿನ ತಥಾಕಥಿತ "ದೊಡ್ಡ ಮನುಷ್ಯ" ಹಣೆಪಟ್ಟಿಯ ಸೈಂಧವರು ಅನುಕರಣೀಯರೆ ? ಮನೋನಿಯಂತ್ರಣವಿದ್ದವರು - ಯೋಚಿಸಬಹುದು. ಮನ ಏವ ಮನುಷ್ಯಾಣಾಂ  ಕಾರಣಂ ಬಂಧ ಮೋಕ್ಷಯೋ...


                                                     ********************