Sunday, October 18, 2015

ನಾನೊಲಿದಂತೆ (10) - ಕನ್ನಡ ರಾಜ್ಯೋತ್ಸವದ ನೆನಪುಗಳು



    ನವೆಂಬರ್ ತಿಂಗಳು ಬಂತೆಂದರೆ ಕನ್ನಡವನ್ನು “ಉಳಿಸಿ ಬೆಳೆಸುವ” ಕಲಿಗಳ ಗರ್ಜನೆಯು ಆರಂಭವಾಗುತ್ತದೆ. ವೇದಿಕೆಯಲ್ಲಿ ನಿಂತು - “ಉಲಿಸಿ ಬೆಲೆಸುವ ಕರೆಕೊಡುತ್ತ "ಖನ್ನಡಾಬಿಮಾನಿ" ಗಳೆಲ್ಲರೂ ತಮ್ಮ ಬಿಲದಿಂದ ಹೊರ ಬರುವ ಕಾಲವಿದು. ಸುಮಾರು 40 ವರ್ಷಗಳ ಹಿಂದಿನ ವರೆಗೂ ಸ್ವಲ್ಪ ಗಾಂಭೀರ್ಯದಿಂದಲೇ ಆಚರಿಸುತ್ತಿದ್ದ ರಾಷ್ಟ್ರೀಯ ಹಬ್ಬಗಳಾದ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ... ಇವುಗಳೆಲ್ಲವೂ ಮೊದಲಿನ ಗಾಂಭೀರ್ಯವನ್ನು ಈಗ ಉಳಿಸಿಕೊಂಡಿಲ್ಲ. ದಿನ ಹೋದಂತೆ ನೆಲ, ಜಲ, ನಾಡು ನುಡಿಯ ಆತ್ಮಾಭಿಮಾನವು ನಮ್ಮಲ್ಲಿ ತಗ್ಗುತ್ತಿರುವಂತೆಯೂ ಕಾಣಿಸುತ್ತದೆ. ಯಾವುದೇ ಸಕಾರಣವಿಲ್ಲದೆ ಹೋರುವ ಗೋರುವ ಅಕ್ಷರಾಸುರರು ಹಿಂಡು ಹಿಂಡಾಗಿ ಉತ್ಪನ್ನವಾಗುತ್ತಿದ್ದಾರೆ. (ಈ ಪರಿವರ್ತನೆಯಲ್ಲಿ ವಾಣಿಜ್ಯ ಸಂಗ್ರಹಕ್ಕಾಗಿಯೇ ಖಣಖಣಿಸುತ್ತಿರುವ ಮಾಧ್ಯಮಗಳ ಪಾಲು ದೊಡ್ಡದು.) 

ಈಗ ಅದ್ದೂರಿಯ ಆಚರಣೆಯ ವ್ಯಾಖ್ಯೆಯೂ ಕೊಂಚ ಬದಲಾಗಿದೆ. “ಕಿವಿಗಡಚಿಕ್ಕುವ ಧ್ವನಿಮುದ್ರಿತ ಸಂಗೀತಕ್ಕೆ ಸೊಂಟ ತಿರುಗಿಸುತ್ತ ಬೀದಿಯಲ್ಲಿ ಕುಣಿಯುವುದು...” ಎಂಬಲ್ಲಿಗೆ ಆಚರಣೆಗಳು ಬಂದು ನಿಂತಂತೆಯೂ ಕಾಣುತ್ತದೆ. ಶಾಲೆಗಳಲ್ಲಂತೂ ರಾಜ್ಯೋತ್ಸವದ ರಸಗ್ರಹಣಕ್ಕೆ ಪೂರಕವಾದ ವಾತಾವರಣವಿದೆಯೆ? ಏನೋ ಸಂಶಯ. ಒಟ್ಟಿನಲ್ಲಿ ಎಲ್ಲವೂ “ಹರಕೆ ಒಪ್ಪಿಸುವಂತೆ” ಯಾಂತ್ರಿಕವಾಗಿ ನಡೆಯುತ್ತಿದೆ. ಇಂತಹ ಕ್ಷಣಗಳಲ್ಲಿ...ಅಂದಿನ ನಮ್ಮ ಬಾಲ್ಯದ ಶಾಲಾ ದಿನಗಳಲ್ಲಿ ನಡೆಯುತ್ತಿದ್ದಂತಹ ಗಂಭೀರ ಚಟುವಟಿಕೆಗಳು - ಬೇಡವೆಂದರೂ ನೆನಪಾಗುತ್ತವೆ. 


    ಸುಮಾರು 1969 – 70 ರಲ್ಲಿ, ಕುಂದಾಪುರದ ಬೋರ್ಡ್ ಹೈಸ್ಕೂಲಿನಲ್ಲಿ (ಈಗ ಸರಕಾರೀ ಪದವಿಪೂರ್ವ ಕಾಲೇಜು) ನಾನು 9 ನೆಯ ತರಗತಿಯ ವಿದ್ಯಾರ್ಥಿನಿಯಾಗಿದ್ದೆ. ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಆ ವರ್ಷ ನಡೆದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಹೇಳಿ, ಪೂರ್ತಿಯಾಗಿ ವಿಷಯಗಳನ್ನು ಒದಗಿಸಿದ್ದ ಅಪ್ಪಯ್ಯನು (ದಿ. ಯಜ್ಞನಾರಾಯಣ ಉಡುಪ) ಆಗ ನನಗೆ ಸ್ವಲ್ಪ ತರಬೇತಿಯನ್ನೂ ನೀಡಿದ್ದರು. ಅಂದು ಅವರು ಸ್ವಹಸ್ತಾಕ್ಷರದಲ್ಲಿ ಬರೆದಿದ್ದ ತುಂಡು ಕಾಗದಗಳು ಮೊನ್ನೆ ಯಾಕೋ ಹಳೆಯ ಕಡತಗಳನ್ನು ಮೊಗಚುವಾಗ ಕಣ್ಣಿಗೆ ಬಿತ್ತು. ಅದನ್ನು ಓದುತ್ತ ಓದುತ್ತ ನಾನು ಹಿಂದೆ ಸರಿದಿದ್ದೆ. ಅಪ್ಪಯ್ಯನ ಅಕ್ಷರದಲ್ಲಿಯೇ ಇದ್ದ ಆ ಪುಟಗಳು ಅಂದಿನ ಕನ್ನಡ ರಾಜ್ಯೋತ್ಸವದ ಸಂಭ್ರಮದ ದಿನಗಳತ್ತ ನನ್ನನ್ನು ಕರೆದೊಯ್ದಿದ್ದವು; ಅಂದಿನ ದಿನಗಳನ್ನು ಮತ್ತೊಮ್ಮೆ ನೆನಪಿಸಿದ್ದವು. ನನ್ನ ತಂದೆಯವರ ಸರಳ ಭಾಷಾ ಶೈಲಿಯನ್ನು ಪರಿಚಯಿಸಲೋಸುಗ - ಅಂದು ನಾನು ಮಾಡಿದ ಆ ಭಾಷಣದ ಪುಟಗಳನ್ನು ಯಥಾವತ್ತಾಗಿ ನಿಮ್ಮ ಮುಂದೆ ಇಟ್ಟು, ಅನಂತರ ಎಂದಿನ ನನ್ನ ಪ್ರವರವನ್ನು ಬಿಚ್ಚುತ್ತೇನೆ.


                                                 
                                      ನವೆಂಬರ್ ೧ - ೧೯೭೦ 
““ಕ್ರಿಸ್ತಾಬ್ದ ೧೯೫೬ ನೆಯ ನವೆಂಬರ್ ೧ - ಕನ್ನಡಿಗರ ಬಾಳಿನಲ್ಲಿ ಚಿರಸ್ಮರಣೀಯವಾದ ದಿನ. ಅಂದು... ಶುಭವನ್ನು ಸೂಚಿಸುವ ವಿಹಂಗಮಗಳ ನುಣ್ಚರ, ತಳಿರ ನಡುವೆ ಸುಳಿದಾಡುವ ತಂಗಾಳಿಯ ಸುಯ್ದನಿ, ಮೂಡುವೆಣ್ಣಿನ ಮುಗುಳು ನಗೆಯಂತೆ ನರುಗೆಂಪನಾಂತ ಮುಂಬೆಳಗು ಮೂಡಣ ಬಾಂದಳದಲ್ಲಿ ಮಿರುಗುತ್ತಿತ್ತು. ಆಗ ಕಡಲ ಕರೆಯಲ್ಲಿ ನಿಬಿಡ ಕಲ್ಪದ್ರುಮ ವನ ಶ್ರೇಣಿಗಳ ಹರಿತ ಸೌಂದರ್ಯವು ಪ್ರಾತಃಸೂರ್ಯನ ದರಲೋಹಿತ ರಾಗದಲ್ಲಿ ನವಚೇತನ ಪಡೆದು ರಂಜಿಸುತ್ತಿತ್ತು. ಹಲವಾರು ವರ್ಷಗಳಿಂದ ಕನ್ನಡಿಗರು ಅಂತಹ ಸುಸ್ನಿಗ್ಧ ಸುಪ್ರಭಾತದ ಸರಳ ಸೌಂದರ್ಯವನ್ನು ಕಂಡೂ ಎಣಿಸಿಯೂ ಇರಲಿಲ್ಲ. ಕನ್ನಡಿಗರಿಗೇ ಒಂದು ರಾಜ್ಯವಾಗಬೇಕೆಂಬ ಹಂಬಲದಿಂದ ಪರಿತಪಿಸುತ್ತಿದ್ದ ಕನ್ನಡ ಪ್ರೇಮಿಗಳ ಹೃದಯಕ್ಕೆ ತಂಪನ್ನುಂಟು ಮಾಡುವಂತಹ ಅಮರ ದಿನವು ಅಂದು ಸ್ವರ್ಗದಿಂದ ಭೂಮಿಗಿಳಿಯಿತು. “ಕನ್ನಡಿಗರದೇ ಒಂದು ರಾಜ್ಯ ಉದಯಿಸಿದರೆ ಆ ರಾಜ್ಯದ ಅಭಿವೃದ್ಧಿಗಾಗಿ ತಮ್ಮ ತನು, ಮನ, ಧನ ಸರ್ವಸ್ವವನ್ನೂ ಅರ್ಪಿಸುತ್ತೇವೆ. ಕನ್ನಡ ತಾಯಿಯ ಮತ್ತು ಸಹೋದರರ ಉನ್ನತಿ ಧನ್ಯತೆಗಾಗಿ ದುಡಿದು ಮಡಿಯುತ್ತೇವೆ” ಎಂದು ಹಾರೈಸಿದ ಕನ್ನಡ ವೀರರ ಕನಸು ನೆನಸಾದ, ಕನ್ನಡ ಪ್ರೇಮಿಗಳ ಹೃದಯದಲ್ಲಿ ಎಂದೆಂದೂ ಅಚ್ಚೊತ್ತಿ ನಿಲ್ಲಬಹುದಾದಂತಹ ಉಜ್ವಲ ದಿನವು ಅಂದು ಉದಯಿಸಿತು.

“೧೯೫೬ ನೆಯ ನವೆಂಬರ್ ೧, ಎರಡು ಕೋಟಿ ಕನ್ನಡಿಗರ ಹೃದಯದಲ್ಲಿ ಆನಂದ ಸಾಗರವೇ ಭರದಿಂದ ಹರಿದು ಜನಮನದ ಹಿಂದಿನ ಅಶಾಂತಿಯನ್ನು ಹೋಗಲಾಡಿಸಿದ ಪವಿತ್ರ ದಿನವಾಯಿತು.

“ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಕನ್ನಡಿಗರ ಹಾಡು ಕನ್ನಡಿಗರ ಗಾಯತ್ರಿಯಾಗಿ, ಕನ್ನಡದ ನವೋದಯ ಶಕ್ತಿಯಾಗಿ, ಕನ್ನಡಮ್ಮನ ಆವಾಹನೆಯ ಗೀತೆಯಾಗಿ ನಾಡಿನ ಹಳ್ಳಿಪಳ್ಳಿಗಳಲ್ಲೂ ಹಾಸುಹೊಕ್ಕಾಗಿ ಹರಡಿ ಕನ್ನಡದ ಒಕ್ಕೂಟವನ್ನು ಸಾಧಿಸಿದ ಸಾಧನೆಗೆ ೫೦ ವರ್ಷಗಳ ಹೋರಾಟ ಬೇಕಾಯಿತು. ಕನ್ನಡಿಗರ ಈ ಪ್ರಚಂಡ ಹೋರಾಟವು ಸಾವಿರ ವರ್ಷದ ಹಿಂದಿನ ಇತಿಹಾಸವನ್ನೇ ಬದಲಿಸಿಕೊಟ್ಟಿತು; ಕನ್ನಡಿಗರಿಗೆ ಹೊಸ ಚರಿತ್ರೆಯನ್ನು ಕಟ್ಟಿಕೊಟ್ಟಿತು. ಇಂತಹ ಪುಣ್ಯ ಶ್ರೇಯಸ್ಸನ್ನು ಹೊತ್ತು ತಂದ ೧೯೫೬ ನೇ ವರ್ಷದ ದೀಪಾವಳಿಯನ್ನು ಯಾವ ಒಳ್ಳೆಯ ಹೆಸರಿನಿಂದ ಕರೆಯಬೇಕಾಗಿದೆಯೋ ನನಗೆ ತಿಳಿಯದಾಗಿದೆ. ಭಾರತೀಯರ ಹೃದಯಾಕಾಶವನ್ನೇ ಬೆಳಗುವ ದೀಪಾವಳಿಯ ಈ ಉಜ್ವಲ ಕಾಲದಲ್ಲೇ ಕನ್ನಡಿಗರು ತಮ್ಮ ರಾಜ್ಯೋತ್ಸವವನ್ನು ಆಚರಿಸುವಂತಾದುದನ್ನು - ಧಮನಿಗಳಲ್ಲಿ ಕನ್ನಡಿಗರ ರಕ್ತ ಹರಿಯುವ ಕನ್ನಡಿಗನೆಂದೂ ಮರೆಯಲಾರ. ಕರ್ನಾಟಕ ಮಾತೆಗೆ ಜಯವಾಗಲಿ! ಕನ್ನಡಿಗರ ಈ ರಾಜ್ಯೋತ್ಸವವು ಅನಂತ ಕಾಲದ ವರೆಗೆ ಕನ್ನಡಿಗರ ಹೃದಯಮಂದಿರದ ದೀಪಾವಳಿಯಾಗಿ ವಿರಾಜಿಸುತ್ತಿರಲಿ!

ನಾವೆಂತಹ ಭಾಗ್ಯವಂತರು! ವರ್ತಮಾನಯುಗದ ೨ ಕೋಟಿ ಜನ ಕನ್ನಡಿಗರೂ ತಮ್ಮ ಬದುಕಿನಲ್ಲೇ ಕನ್ನಡದ ಒಕ್ಕೂಟವನ್ನು ನೋಡಿದರಲ್ಲಾ! ರಾಜಮಹಾರಾಜರುಗಳ ಸಾಮ್ರಾಜ್ಯವಾಗಿ ಸಹಸ್ರ ಸಹಸ್ರ ವರ್ಷ ಬಾಳಿ, ಬರಬರುತ್ತ ಛಪ್ಪನ್ನ ಚೂರುಗಳಾಗಿ ಹಂಚಿ, ಈಗ ನಮ್ಮನ್ನು ನಾವೇ ಆಳಿಕೊಳ್ಳುವಂತಹ ಏಕೀಕರಣದ ಎಂಥ ಪರ್ವ ಕಾಲದಲ್ಲಿ ನಾವಿದ್ದೇವೆ! ನಮ್ಮ ಹಿಂದಿನವರಿಗೆ ತಪ್ಪಿ ಹೋದ, ನಮ್ಮ ಮುಂದಿನವರಿಗೆ ಸಿಗದಂತಹ, ಅಮೃತದ ಗಳಿಗೆ ನಮ್ಮ ಪಾಲಿಗೆ ದೊರೆತಿದೆ!
ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಶ್ರೀ ರಾಜೇಂದ್ರಪ್ರಸಾದರು ಕನ್ನಡದ ಒಕ್ಕೂಟದ ಉದ್ಘಾಟನೆಯನ್ನು ಮಾಡಿದವರು. ಮೈಸೂರಿನ ರತ್ನ ಸಿಂಹಾಸನದ ಒಡೆಯರಾದ ಶ್ರೀ ಜಯಚಾಮರಾಜೇಂದ್ರರೇ ಕನ್ನಡ ಜನತಾ ರಾಜ್ಯದ ಮೊದಲ ರಾಜ್ಯಪಾಲರಾದವರು. ಏಕೀಕರಣದ ದಂಡನಾಯಕರಾಗಿದ್ದ ಶ್ರೀ ನಿಜಲಿಂಗಪ್ಪನವರೇ ಹೊಸ ರಾಜ್ಯದ ಮೊದಲ ಮುಖ್ಯಮಂತ್ರಿಗಳಾದವರು. ಹೀಗೆ ಒಂದು ಇನ್ನೊಂದರ ಘನತೆಯನ್ನು ಹೆಚ್ಚಿಸಿಕೊಟ್ಟ ಪುಣ್ಯ ಪ್ರಸಂಗಗಳ ಪವಿತ್ರ ಉದ್ಘಾಟನೆಯ ಸ್ಮರಣೆ ಮತ್ತು ಆಚರಣೆಗಳ ವಾಹಿನಿಯೇ ಇಂದಿನ ರಾಜ್ಯೋತ್ಸವದ ದಿನ!

ಇಂತಹ ಶುಭದ ಉನ್ಮಾದದಲ್ಲಿ “ಕನ್ನಡದ ಒಕ್ಕೂಟವೆನಗದೇ ಕಿರೀಟ” ಎನ್ನುತ್ತಿದ್ದ ಏಕೀಕರಣದ ಆಚಾರ್ಯರಾದ ಶ್ರೀ ಬೆನಗಲ್ ರಾಮರಾಯರು ಇಂದು ಬದುಕಿದ್ದಿದ್ದರೆ ಪೇಟ ಹಾರಿಸಿ ಕುಣಿಯುತ್ತಿದ್ದರು. ಇಂದಿನ ಉತ್ಸವವನ್ನು ನೋಡಿ ರೋಮಾಂಚನಗೊಳ್ಳುತ್ತಿದ್ದರು. ಕನ್ನಡದ ದಾಸಯ್ಯನಾಗಿ ಹಾಡಿದ ಶಾಂತ ಕವಿಗಳೂ, ಕನ್ನಡದ ಸಿಂಹವಾಗಿ ಗರ್ಜಿಸಿದ ಮುದವೀಡು ಕೃಷ್ಣರಾಯರೂ, ಕನ್ನಡದ ಸಾತ್ವಿಕ ಶಕ್ತಿಯಾಗಿ ಸೆಡೆದು ನಿಂತ ವೆಂಕಣ್ಣಯ್ಯ, ಬಿ. ಎಂ. ಶ್ರೀ., ಬಸವನಾಳರೂ ಮತ್ತು ಕರ್ನಾಟಕದ ಏಕೀಕರಣದ ಹೊಂಗನಸನ್ನು ಕಂಡು ಹೋರಾಡಿದ ಇನ್ನೆಷ್ಟೋ ಕನ್ನಡಿಗರೂ... ಕನ್ನಡ ಆಕಾಶದಲ್ಲಿ ಕಣ್ಮರೆಯಾಗಿ ನಿಂತು ಸಮಗ್ರ ಕರ್ನಾಟಕದಲ್ಲಿ ಅಲ್ಲಲ್ಲಿ ಜರಗುವ ಈ ಅಭೂತಪೂರ್ವ ಉತ್ಸವವನ್ನು ಕಂಡು ಆನಂದ ಬಾಷ್ಪವನ್ನುದುರಿಸುತ್ತಿರುವರು! ನಮ್ಮ ಈ ಉತ್ಸವವನ್ನು ಕಂಡು ತಲೆದೂಗದ ಕನ್ನಡಿಗರಿರುವರೆ? ಕನ್ನಡದ ಕುಲ ಪುರೋಹಿತರಾದ ಆಲೂರು ವೆಂಕಟರಾಯರು ಇಂದು ಬದುಕಿದ್ದಿದ್ದರೆ...? ಇಂದು ಇವರೆಲ್ಲರೂ ಎಲ್ಲರ ಕಣ್ಣಿಗೆ ಕಾಣಿಸದಿದ್ದರೂ ಅವರ ಕಣ್ಣುಗಳಿಗೆ ನಾವು ಆಚರಿಸುವ ಉತ್ಸವಗಳು ತೋರುತ್ತಿವೆ!

ಕರ್ನಾಟಕ ಭುವನೇಶ್ವರಿಯನ್ನು ಶ್ರೀ ಬಿ. ಎಂ. ಶ್ರೀ. ಯವರು ಅಂದೇ ರಥವನ್ನೇರಿಸಿ ಹೋಗಿದ್ದಾರೆ. ಇಂದು ಕರ್ನಾಟಕ ಮಾತೆಯ ಹಲವು ಮುಖದ ಸೇವೆಯಿಂದ ಕನ್ನಡಿಗರ ಯಶೋಬಾವುಟವನ್ನು ಧವಳಗಿರಿಯ ತುತ್ತತುದಿಯಲ್ಲಿ ಹಾರಿಸಲು ಸಾಹಿತ್ಯ ರಂಗದಲ್ಲಿ ನುಗ್ಗು ನುಗ್ಗಾಗುತ್ತಿರುವ ಶ್ರೀ ಕು ವೆಂ ಪು, ಬೇಂದ್ರೆ, ಕಾರಂತರ ಅಸಮ ಸಾಹಸವು ಅಕ್ಷಯವಾಗಲಿ! ಅಮರವಾಗಲಿ! – ಎಂದು ಈ ಸುಮುಹೂರ್ತದಲ್ಲಿ ಹಾರೈಸುವುದು ಪ್ರತಿಯೊಬ್ಬ ಕನ್ನಡಿಗನ ಆದ್ಯ ಕರ್ತವ್ಯ. ಪಂಪ, ರನ್ನ, ಜನ್ನ, ಲಕ್ಷ್ಮೀಶ, ಕುಮಾರವ್ಯಾಸ, ರುದ್ರಭಟ್ಟರಂತಹ ಮಹಾ ಕವಿಗಳನ್ನು ಸ್ಮರಿಸುವುದು ಪ್ರತಿಯೊಬ್ಬ ಕನ್ನಡಿಗನ ಪ್ರಥಮ ಕರ್ತವ್ಯ. ರಾಷ್ಟ್ರಕೂಟ ರಾಜ ನೃಪತುಂಗ, ಕೃಷ್ಣ, ಚಾಲುಕ್ಯರ ಪುಲಿಕೇಶಿ, ವಿಕ್ರಮ, ವಿಜಯನಗರದ ಕೃಷ್ಣದೇವರಾಯ... ಮೊದಲಾದ ರಾಜಮಹಾರಾಜರು ಕರ್ನಾಟಕಕ್ಕಾಗಿ ಏನು ಮಾಡಿದ್ದಾರೆಂಬುದನ್ನು ಈ ರಸ ಗಳಿಗೆಯಲ್ಲಿ ನೆನೆಯುವುದು ಕನ್ನಡಿಗರ ಇಂದಿನ ಕರ್ತವ್ಯ. ಶ್ರೀ ವಿದ್ಯಾರಣ್ಯರು, ಪುರಂದರದಾಸರು, ಕನಕದಾಸರು ಕರ್ನಾಟಕವನ್ನು ಹೇಗೆ ರೂಪಿಸಬೇಕೆಂದು ನಿರ್ಧರಿಸಿ ಅದಕ್ಕೆ ಪಟ್ಟ ಬವಣೆಯನ್ನು ಈ ಸುಂದರ ವೇಳೆಯಲ್ಲಿ ಪ್ರತಿಯೊಬ್ಬ ಕನ್ನಡಿಗನೂ ಸ್ಮರಣೆಗೆ ತಂದುಕೊಳ್ಳುವುದುತ್ತಮ. ಸಮಗ್ರ ಭಾರತದ ಆರಾಧ್ಯ ದೇವನಾದ ಆಂಜನೇಯನು ಶುದ್ಧ ಕನ್ನಡಿಗನೆಂಬುದನ್ನು ಪ್ರತಿಯೊಬ್ಬ ಕನ್ನಡಿಗನೂ ಈ ಶುಭದ ವೇಳೆಯಲ್ಲಿ ಸ್ಮರಿಸಬೇಕು.

ಈ ರಾಜ್ಯೋತ್ಸವದ ವೇಳೆಯಲ್ಲೇ ಕರ್ನಾಟಕ ಚಳವಳಿಯ ಸಿಂಹಾವಲೋಕನ ಮತ್ತು ಇದರ ವೈಶಿಷ್ಟ್ಯದ ಕುರಿತು ನಾಲ್ಕು ಮಾತನಾಡುವುದುತ್ತಮ. ಕರ್ನಾಟಕ ಪ್ರಾಂತ ರಚನೆಯ ಚಳವಳಿಯು ೨೦ – ೭ – ೧೮೯೦ ರಲ್ಲಿ ಧಾರವಾಡದಲ್ಲಿ ಜನ್ಮವೆತ್ತಿತು. ಕರ್ನಾಟಕ ಏಕೀಕರಣದ ಮೊತ್ತಮೊದಲಿನ ಗೊತ್ತುವಳಿಯು ೭ – ೧೦ – ೧೯೧೭ ರಂದು ಸ್ವೀಕೃತವಾಯಿತು. ೧೯೨೪ ರಲ್ಲಿ ಬೆಳಗಾವಿಯಲ್ಲಿ ಕರ್ನಾಟಕ ಏಕೀಕರಣದ ಸಂಘವು ಸ್ಥಾಪಿಸಲ್ಪಟ್ಟಿತು. ಅಂದಿನಿಂದ ಕನ್ನಡಿಗರ ಚಳವಳಿಯು ಭರದಿಂದ ನಡೆಯುತ್ತ ಬಂತು. ೧೯೨೭ ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸು ಮುಂಬಯಿ ಅಧಿವೇಶನದಲ್ಲಿ ಮೊತ್ತಮೊದಲು - ಆಂಧ್ರ ಮತ್ತು ಸಿಂಧ್ ಗಳಂತೆ ಕರ್ನಾಟಕ ಪ್ರಾಂತ ರಚನೆಯನ್ನು ಮಾಡಬೇಕೆಂದು ನಿರ್ಧರಿಸಿತು. ಈ ಸಮಿತಿಗೆ ಕರ್ನಾಟಕದ ಪರವಾಗಿ ಕರ್ನಾಟಕ ಪ್ರಾಂತಿಕ ಕಾಂಗ್ರೆಸ್ಸು ಶ್ರೀ ರಂಗನಾಥ ರಾಮಚಂದ್ರ ದಿವಾಕರರನ್ನು ಕಳುಹಿಸಿತು. ಕನ್ನಡಿಗರ ಸಾಹಸದ ಫಲವಾಗಿ, ಈ ಸಮಿತಿಯು ಕರ್ನಾಟಕ ಪ್ರಾಂತ ರಚನೆಗೆ ತನ್ನ ಒಪ್ಪಿಗೆಯನ್ನು ಕೊಟ್ಟಿತು. ಮಹಾತ್ಮಾ ಗಾಂಧಿಯವರೂ ಕರ್ನಾಟಕ ಪ್ರಾಂತ ರಚನೆಗೆ ತನ್ನ ಬೆಂಬಲವುಂಟೆಂದು ಸಾರಿದ್ದರು. ೧೯ – ೧ - ೧೯೪೬ ರಲ್ಲಿ ನಡೆದ ಕರ್ನಾಟಕ ಏಕೀಕರಣ ಪರಿಷತ್ತಿನ ೧೦ ನೆಯ ಅಧಿವೇಶನವು ಮುಂಬಯಿಯಲ್ಲಿ ಶ್ರೀ ಬಿ. ಜಿ. ಖೇರರ ಅಧ್ಯಕ್ಷತೆಯಲ್ಲಿ ಜರುಗಿದಾಗ ಶ್ರೀ ವಲ್ಲಭಭಾಯಿ ಪಟೇಲರು ಈ ಪರಿಷತ್ತನ್ನು ಉದ್ಘಾಟಿಸುತ್ತಾ ಕರ್ನಾಟಕ ಪ್ರಾಂತ ರಚನೆ ಆಗಲೇಬೇಕೆಂದು ಒತ್ತಿ ಹೇಳಿದ್ದರು. ಈ ಎಲ್ಲಾ ಪ್ರಾತಃಸ್ಮರಣೀಯರ ನಾಮವನ್ನು ಇಂದಿನ ಈ ಶುಭ ಸನ್ನಿವೇಶದಲ್ಲಿ ನಾವೆಲ್ಲಾ ಸ್ಮರಿಸಬೇಕಾದುದು ನಮ್ಮ ಆದ್ಯ ಕರ್ತವ್ಯ. ಇನ್ನು ದರ್ ಸಮಿತಿ, ತ್ರಿಮೂರ್ತಿ ಸಮಿತಿ, ೨೭ – ೫ – ೧೯೫೩ ರಲ್ಲಿ ಶ್ರೀ ಕೆ. ಆರ್. ಕಾರಂತರ ಅಧ್ಯಕ್ಷತೆಯಲ್ಲಿ ದಾವಣಗೆರೆಯಲ್ಲಿ ಜರುಗಿದ ಅಖಿಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತನ್ನೂ ಈಗ ಇಲ್ಲಿ ಸ್ಮರಿಸಬೇಕಾಗಿದೆ. ಈ ಎಲ್ಲಾ ಪರಿಷತ್ತು ಸಂಘಗಳ ಸಾಹಸದ ಫಲವಾಗಿ ಕರ್ನಾಟಕ ಪ್ರಾಂತ ರಚನೆಗೆ ೩೧ – ೮ – ೧೯೫೬ ರಲ್ಲಿ ರಾಷ್ಟ್ರಪತಿಗಳ ಒಪ್ಪಿಗೆ ದೊರೆತು ವಿಶಾಲ ಕರ್ನಾಟಕದ ನಿರ್ಮಾಣವು ಮಹಾ ಮೈಸೂರು ಎಂಬ ಹೆಸರಿನಿಂದ ಉದಯಿಸಿತು. 

ಕರ್ನಾಟಕ ಏಕೀಕರಣದ ಮುಖ್ಯವಾದ ಒಂದು ಗುರಿ – ಕನ್ನಡ ನುಡಿಯ ಅಭಿವೃದ್ಧಿ ಮತ್ತು ಕನ್ನಡಿಗರ ಉದ್ಧಾರ. ಈಗ ನವೋದಯವಾದ ಕರ್ನಾಟಕವು ಕನ್ನಡ ಭಾಷಾ ಪ್ರೇಮಿಗಳ ನರ ನಾಡಿಗಳಲ್ಲಿ ನುಡಿಯೆಂಬ ಪೀಯೂಷವಾಹಿನಿಯನ್ನು ಇತೋಪ್ಯಧಿಕವಾಗಿ ಪ್ರವಹಿಸುತ್ತ “ಸ್ವಾತಂತ್ರ್ಯಾ ನಂತರ – ಏಕೀಕರಣವಾದ ಮೇಲೆ – ಕರ್ನಾಟಕವು ಏನನ್ನು ಸಾಧಿಸಿಲ್ಲ?” ಎಂದು ವೀರ ಕನ್ನಡಿಗರ ಬಾಯಿಯಿಂದ ಕೇಳುವಂತೆ, ಸರ್ವತೋಮುಖ ಅಭಿವೃದ್ಧಿಯನ್ನು ಹೊಂದಲಿ ಎಂಬುದೇ ನಮ್ಮೆಲ್ಲರ ಆಶಯ ಮತ್ತು ಪ್ರಯತ್ನವಾಗಲಿ...”” 

    ಇದು ಸುಮಾರು 45 ವರ್ಷಗಳ ಹಿಂದೆ ನಾನು ಮುಂದಿಟ್ಟ - ಅಂದು ಪ್ರಥಮ ಬಹುಮಾನವನ್ನು ಪಡೆದ ಭಾಷಣ. ಆಗ ನಾನು ಯಂತ್ರವಾಗಿದ್ದೆ; ಅಪ್ಪಯ್ಯನು ಯಂತ್ರವಾಹಕರಾಗಿದ್ದರು. ಬಹುಶಃ ಭಾಷೆಯ ಭಾವ, ಅಕ್ಷರದ ಆತ್ಮವನ್ನು ಓಲೈಸುವಂತೆ....... ಅಂದು ಪ್ರಖರವಾಗಿ ಮಾತನಾಡುತ್ತಿದ್ದ ನನ್ನನ್ನು - ತಮ್ಮ ಕಣ್ಣಿನಲ್ಲಿಯೇ ಮುದ್ದಾಡುತ್ತ - ತಮ್ಮೊಳಗಿನ ಭಾವ ಪ್ರಕಟಣೆಯ ಮಾಧ್ಯಮವಾಗಿಯೂ ಅಪ್ಪಯ್ಯನು ನನ್ನನ್ನು ಆಗ ಬಳಸುತ್ತಿದ್ದರು ಎಂದೂ - ಒಮ್ಮೊಮ್ಮೆ ಅನ್ನಿಸುವುದಿದೆ. [ಅವರೇ ನೀಡಿದ ಸಾಹಿತ್ಯವನ್ನು ನನ್ನ ಬಾಯಿಂದ ಕೇಳಿಸಿಕೊಂಡು ಅಪ್ಪಯ್ಯ ಭಾವುಕರಾಗುತ್ತಿದ್ದುದೂ ಇತ್ತು.] ಯಾವ ವಿಷಯವನ್ನು ಒದಗಿಸಿದರೂ ಅದನ್ನು ಪೂರ್ತಿಯಾಗಿ ನನ್ನದಾಗಿಸಿಕೊಂಡು, ಸಮರ್ಥವಾಗಿ ಪ್ರಸ್ತುತಪಡಿಸುವ ಶಕ್ತಿಯು ಬಹುಶಃ ನನಗೆ ಜನ್ಮಜಾತವಾಗಿಯೇ ಬಂದಿತ್ತು. [ಅಮ್ಮನ ಬಳುವಳಿಯದು!!] ಅದನ್ನು ಗುರುತಿಸಿದ್ದ ಅಪ್ಪಯ್ಯನು ಆ ಶಕ್ತಿಯನ್ನು ವಿಧ ವಿಧದಿಂದ ಪಳಗಿಸಿ, ನುಣುಪುಗೊಳಿಸಿ, ಕ್ಲಿಷ್ಟ ಶಬ್ದಗಳನ್ನೆಲ್ಲ ನನ್ನ ನಾಲಗೆಯಲ್ಲಿ ಉರುಳಾಡಿಸಿ ಖುಷಿಯಿಂದ ಬೀಗುತ್ತಿದ್ದರು! ಅಪ್ಪಯ್ಯನು ಸಾಂದರ್ಭಿಕವಾಗಿ ನನ್ನನ್ನು ದಾಳವಾಗಿ ಉರುಳಿಸುತ್ತಿದ್ದ ಕಾಲವದು. ಬೇಸರವಿಲ್ಲದೆ ನನ್ನನ್ನು ಒಪ್ಪಗೊಳಿಸುತ್ತಿದ್ದ ಅವರ ನಿರ್ದೇಶನವನ್ನು ಪಾಲಿಸುವುದಷ್ಟೇ ನನ್ನ ಅಂದಿನ ಕೆಲಸವಾಗಿತ್ತು.

    ಪ್ರತೀ ವರ್ಷವೂ ರಾಜ್ಯೋತ್ಸವದ ದಿನದಂದು ನಮ್ಮ ಕುಂದಾಪುರದ ಶಾಲೆಯಲ್ಲಿ ಆಗ - ಭಾಷಣ ಸ್ಪರ್ಧೆ, ಕನ್ನಡ ಭಾವಗೀತೆಗಳ ಸ್ಪರ್ಧೆ, ಪ್ರಬಂಧ ಸ್ಪರ್ಧೆಗಳೆಲ್ಲವೂ ನಡೆಯುತ್ತಿದ್ದವು. ಅವುಗಳಲ್ಲಿ ಒಂದೆರಡಾದರೂ ಬಹುಮಾನ ಹೊಡೆಯುವ ಸ್ಪರ್ಧೆಯು ನಮ್ಮ ಮನೆಯ ಸದಸ್ಯರಲ್ಲೇ ಇತ್ತು. ಭಾವಗೀತೆಗಳಲ್ಲಿ ನನಗೆ ಬಹುಮಾನವು ಖಾತ್ರಿಯಾಗಿದ್ದರೆ ಪ್ರಬಂಧದಲ್ಲಿ ನನ್ನ ಅರುಣಕ್ಕನು ಮುಂದಿರುತ್ತಿದ್ದಳು. ಪ್ರೌಢ ಶಾಲೆಗೆ ಬಂದ ಹೊಸತರಲ್ಲಿ, ನಾನು 8 ನೇ ತರಗತಿಯಲ್ಲಿದ್ದಾಗ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಆದರೆ ಆ ಸ್ಪರ್ಧೆಯನ್ನು ನೋಡಲು ಹೋಗಿದ್ದೆ. ಅಂದು 10 ನೇ ತರಗತಿಯ ಒಬ್ಬಳು ವಿದ್ಯಾರ್ಥಿನಿಯು ಭಾಷಣದಲ್ಲಿ ಪ್ರಥಮ ಬಹುಮಾನ ಪಡೆದಿದ್ದಳು. ಅವಳ ಭಾಷಣವನ್ನು ಕೇಳಿದ್ದ ನಾನು ಮತ್ತು ನನ್ನ ಸಹೋದರಿಯು, ಮನೆಗೆ ಬಂದ ನಂತರವೂ ಆಕೆಯ ಭಾಷಣದ ಕುರಿತು ಮೆಚ್ಚುಗೆಯ ಮಾತನಾಡಿದ್ದೆವು. ಆಗ ನಮ್ಮ ಮಾತನ್ನು ಕೇಳಿಸಿಕೊಂಡ ಅಪ್ಪಯ್ಯನು “ಬರುವ ವರ್ಷದ ಸ್ಪರ್ಧೆಯಲ್ಲಿ ನೀವೂ ಭಾಗವಹಿಸಿ... ಅದೇ ನೆವನದಲ್ಲಿ ಒಂದಷ್ಟು ವಿಷಯಗಳನ್ನೂ ತಿಳಿದುಕೊಂಡಂತಾದೀತು...” ಅಂದಿದ್ದರು. ಮುಂದೆ... ಶಾಲೆಯಿಂದ ದಿನಕ್ಕೊಂದು ಸೊಟ್ಟ ಸುದ್ದಿಯನ್ನು ಸಂಪಾದಿಸುತ್ತ ಅನ್ಯ ಪ್ರಸಂಗಗಳಲ್ಲಿಯೇ ಮುಳುಗಿಹೋಗುತ್ತಿದ್ದ ನಮಗೆ ಅಪ್ಪಯ್ಯನ ಆ ಸೂಚನೆಯು ಮರೆತೇ ಹೋಗಿತ್ತು. ಮತ್ತೊಮ್ಮೆ ಅಕ್ಟೋಬರ್ ತಿಂಗಳು ಬರುವ ವರೆಗೂ ನಮಗೆ ಅಪ್ಪಯ್ಯ ಕೊಟ್ಟ "ಗುರಿಯ ಗಾಂಭೀರ್ಯ" ಇರಲಿಲ್ಲ. ಮುಂದಿನ ವರ್ಷದ ಅಕ್ಟೋಬರದಲ್ಲಿ ಒಂದು ದಿನ, “ರಾಜ್ಯೋತ್ಸವದ ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸುವವರು ತಮ್ಮ ಹೆಸರನ್ನು ಕೊಡಬೇಕು...” ಎಂಬ ಸೂಚನೆಯು ತರಗತಿಗೆ ಬಂದಾಗ, ಅಪ್ಪಯ್ಯನ ಅನುಮತಿ ಪಡೆದು ನಾನೂ ಹೆಸರು ಕೊಟ್ಟೆ. ಅದೇ ದಿನ, ನಾನು 5 ನಿಮಿಷ ಮಾತನಾಡುವಷ್ಟು ವಿಷಯವನ್ನು ಅಪ್ಪಯ್ಯ ಒದಗಿಸಿದರು. ಅಕ್ಟೋಬರ್ ಅಂತ್ಯದಲ್ಲಿ ನನ್ನ ಬಾಯಿಂದ ಭಾಷಣವನ್ನು ಹೇಳಿಸಿಯೂ ಕೇಳಿದ್ದರು. ಆಮೇಲೆ, “ಈ ಬಾರಿಯ ಕಂಬಳದಲ್ಲಿ ಯಾವ ಕೋಣ ಗೆಲ್ಲುತ್ತದೆ – ನೋಡುವ...” ಎಂದೂ - ಮುಗುಮ್ಮಾಗಿ ಮುಗುಳ್ನಕ್ಕಿದ್ದರು.
 

    ಅಂದೂ... ಹಿಂದಿನ ವರ್ಷದ ಬಹುಮಾನ ವಿಜೇತೆಯು ಭಾಷಣ ಮಾಡುವವಳಿದ್ದಳು. ಸ್ಪರ್ಧಾಳುಗಳ ಪಟ್ಟಿಯಲ್ಲಿ, ಅವಳು ನನಗಿಂತ ಮೊದಲೇ ಮಾತನಾಡಬೇಕಿತ್ತು. ಆದರೆ ಅದಾಗಲೇ ಶಾಲೆಯಲ್ಲಿ ಸಾಕಷ್ಟು ಅಧಿಕಪ್ರಸಂಗ ಮಾಡಿ ಜೀರ್ಣಿಸಿಕೊಂಡಿದ್ದ ನಾನು - ಅಂದು ಸ್ಪರ್ಧಾಳುವಾಗಿ ನಿಂತದ್ದನ್ನು ಕಂಡ ಅವಳು, “ಸರ್, ನಾನು ಕೊನೆಯಲ್ಲಿ ಮಾತನಾಡುತ್ತೇನೆ..” ಎಂದು ಅಧ್ಯಾಪಕರಿಗೆ ಹೇಳಿ ತನ್ನ ಹೆಸರನ್ನು ಪಟ್ಟಿಯ ಕೊನೆಯಲ್ಲಿ ಹಾಕಿಸಿಕೊಂಡಿದ್ದಳು. ಯಾವುದೇ ಚೌಕಾಸಿಗೆ ಹೋಗದ ನನ್ನ ಸರದಿಯು ಬಂದಾಗ, ವೇದಿಕೆ ಹತ್ತಿದ್ದ ನಾನು, ಆ ತರಗತಿಯ Platform ನ್ನು ಪೂರ್ತಿಯಾಗಿ ಆವರಿಸಿಕೊಂಡು ಅಸ್ಖಲಿತವಾಗಿ 5 ನಿಮಿಷ ಪೂರ್ತಿ ಹಾವಭಾವದೊಂದಿಗೆ ಹಿಂದು ಮುಂದಿಲ್ಲದ ಒಡ್ಡು ಧೈರ್ಯದಿಂದ ಮಾತನಾಡಿ  ಕೆಳಗಿಳಿಯುವಾಗ - “ಆಕೆಯು” ಕಿಟಕಿಯಲ್ಲಿ ಇಣುಕುತ್ತಿದ್ದಳು. ಅನಂತರ ಅವಳ ಹೆಸರನ್ನು ಕರೆದಾಗ, “ನಾನು ಹೆಸರನ್ನು ಹಿಂದೆಗೆದುಕೊಳ್ಳುತ್ತೇನೆ...” ಎಂದು ಹೇಳಿ ಅವಳು ಹೊರಟೇ ಹೋಗಿದ್ದಳು! 
ಬಲು ಜಾಣೆ. 

  ಅಂದು ಪ್ರಥಮ ಬಹುಮಾನವು ನನಗೇ (ಅಪ್ಪಯ್ಯನಿಗೆ!) ಬಂತು. ಇದರಿಂದ ಆದ ಪರಿಣಾಮ ಏನೆಂದರೆ ಆ ಭಾಷಣಗಾರ್ತಿ ” ಯು ಮುಂದೆಂದೂ ನನ್ನ ಜೊತೆಗೆ ಸಹಜವಾಗಿರಲಿಲ್ಲ! ಅವಳೂ ಉತ್ತಮ ಮಾತುಗಾರಳೇ ಆಗಿದ್ದಳು. ಆದರೆ ಅಂದಿನ ನನ್ನ ಮಾತಿನ ಓಘವನ್ನು ಅವಳಲ್ಲ - ಯಾರೇ ಬಂದರೂ ತಡೆದುಕೊಳ್ಳಲು ಕಷ್ಟವಿತ್ತು. (ಪೂರ್ತಿ ಇಂಧನ ತುಂಬಿದ ಸುಸ್ಥಿತಿಯಲ್ಲಿದ್ದ ಅಂದಿನ ಗಾಡಿ ನನ್ನದು!) ಅವಳು... "ಒಂದು ವಿಧದ ಬುದ್ಧಿವಂತೆಯೂ ಆಗಿದ್ದಳು" - ಎಂದು ನನಗಾಗ ಅನ್ನಿಸಿತ್ತು. ಆದ್ದರಿಂದಲೇ ಸೋಲುವ ಆಟದಿಂದ ನಯವಾಗಿ ಹಿಂದೆ ಸರಿದಿದ್ದಳು. ಹೀಗೆ ಮನುಷ್ಯ ವರ್ತನೆಗಳೆಲ್ಲವೂ ಸಾಂದರ್ಭಿಕವಾಗಿ ಅನುಭವಕ್ಕೆ ಬರುವುದೂ ಕೂಡ ಬದುಕಿನ ಸಂಪಾದನೆಗಳೇ ಅಲ್ಲವೇ?

    ಅಂದು ನಾನು ಬಹುಮಾನ ವಿಜೇತೆಯಾಗಿ ಬಂದಾಗ - ಅಪ್ಪಯ್ಯನಿಗೆ (ಬಹುಶಃ) ನನಗಿಂತಲೂ ಹೆಚ್ಚು ಆನಂದವಾಗಿತ್ತು. ಅನಂತರ ಅಪ್ಪಯ್ಯನು... ನನ್ನ ಕನ್ನಡದ ಓದನ್ನು - ಗುಣಮಟ್ಟದ ಓದನ್ನಾಗಿ ಪರಿವರ್ತಿಸಲು ವಿಶೇಷ ಗಮನ ಹರಿಸಿದರು. ಜತೆಗೆ... ”ಗೆಲ್ಲುವುದಕ್ಕಾಗಿಯೇ ಬಾಲ್ಯದಲ್ಲಿ ಸ್ಪರ್ಧಿಸುವುದಲ್ಲ; ಪ್ರತಿಯೊಂದು ಸ್ಪರ್ಧೆಯಿಂದಲೂ ವಿಷಯ ಸಂಗ್ರಹದ ವ್ಯಾಪ್ತಿಯು ಹೆಚ್ಚಬೇಕು; ಅದಕ್ಕೆ ಯಾವುದೇ ಸ್ಪರ್ಧೆಯೆನ್ನುವುದು ಒಂದು ಕಾರಣವಾಗಬೇಕು; ಸ್ಪರ್ಧೆಯನ್ನು ವಿಷಯಾಂತರಗೊಳಿಸಿ ಅದನ್ನು ವೈಯ್ಯಕ್ತಿಕ ನೆಲೆಗೆ ತರಬಾರದು... ಒಮ್ಮೊಮ್ಮೆ ಸೋತರೂ ಕುಸಿಯಬಾರದು; ಸ್ಪರ್ಧೆಯು ಪ್ರಬುದ್ಧತೆಯನ್ನು ತರಬೇಕು...” ಎಂದಿದ್ದರು.

  ಅಪ್ಪಯ್ಯನು ನಡೆಸುತ್ತಿದ್ದ ಇಂತಹ ತಾಲೀಮಿನಿಂದಾಗಿ ವೈಯ್ಯಕ್ತಿಕವಾಗಿ ನನಗೆ ದೊರೆತ ಲಾಭವು ಅಪಾರ. ಉದಾಹರಣೆಗೆ “ದರಹಸಿತ” ಎಂಬಂತಹ ಶಬ್ದಗಳು ನನ್ನನ್ನು ಸಂಧಿಸಿದಾಗ, ಆರಂಭದಲ್ಲಿ, ಅಪ್ಪಯ್ಯನಲ್ಲೇ ಕೇಳಿ ಶಬ್ದಾರ್ಥವನ್ನು ಸುಲಭವಾಗಿ  ತಿಳಿದುಕೊಳ್ಳುತ್ತಿದ್ದೆ. ಕೆಲವೊಮ್ಮೆ ಅಪ್ಪಯ್ಯನು ನಮ್ಮೆದುರಿಗೆ ಶಬ್ದಕೋಶವನ್ನಿಟ್ಟು ಹುಡುಕುವಂತೆ ಹೇಳುತ್ತಿದ್ದರು. “ನಿಘಂಟನ್ನು ನೋಡಿ ಅರ್ಥವನ್ನು ತಿಳಿದುಕೊಳ್ಳುವ ಶಕ್ತಿ ಬೆಳೆಸಿಕೋ.. ನೀನೇ ಹುಡುಕಾಡು..” ಎನ್ನುತ್ತ ಪುಸ್ತಕಗಳನ್ನು ಒದಗಿಸುತ್ತಿದ್ದರು. ಆಗ ನಾನು ನಿಘಂಟನ್ನು ಆಶ್ರಯಿಸುತ್ತಿದ್ದೆ. 

  ನಿಘಂಟನ್ನು ಅವಲಂಬಿಸಿದಾಗ ಕೆಲವು ಉಚಿತ ಲಾಭಗಳೂ ಆಗುತ್ತಿದ್ದವು. ವಿಶೇಷಣವಾಗಿ ಉಪಯೋಗವಾದಾಗ...ದರ = ಸ್ವಲ್ಪ, ಕೊಂಚ, ಈಷತ್ ಎಂದು ಅರ್ಥ, ಬೇರೆ ಸಂದರ್ಭಗಳಲ್ಲಿ ಬೇರೆ ಅರ್ಥಗಳೂ ಇವೆ; ಹಸಿತ = ವಿಶೇಷಣವಾಗಿ ಬಂದಾಗ... ಅರಳಿದ, ನಕ್ಕ, ಬಿರಿದ...ಇತ್ಯಾದಿ. ದರ ಹಸಿತ = ನಸುನಕ್ಕ, ಅರೆಬಿರಿದ... ಎಂದು ಅರ್ಥವಾಗುತ್ತದೆ – ಎಂದು ಅರಿತುಕೊಳ್ಳತೊಡಗಿದೆ. ದರಲೋಹಿತ = ಸ್ವಲ್ಪ ಕೆಂಪಾದ – (ಮುಂಜಾನೆಯ) ಅರುಣ ಕಿರಣ ಎಂದು ಅರ್ಥವಾಯಿತು. ರಾಗ = ಸಾಂದರ್ಭಿಕವಾಗಿ ಬಣ್ಣ ಎಂದುಕೊಳ್ಳಬೇಕು; ಎಲ್ಲ ಸಂದರ್ಭಗಳಲ್ಲೂ ಅದು ಸ್ವರಾಲಾಪವಲ್ಲ ಎಂಬುದೂ ತಿಳಿಯಿತು. ಹರಿತ = ಸಂಸ್ಕೃತದಲ್ಲಿ ಹಸಿರು ಎಂದರ್ಥ – ಎಂದು.....ಹೀಗೇ...ನನಗೆ ಎದುರಾದ ಶಬ್ದಗಳಿಗೆ ಮತ್ತೆ ಮತ್ತೆ ಸುತ್ತು ಬರತೊಡಗಿದೆ. ಈ ಹುಡುಕಾಟದಲ್ಲಿ ಮುಳುಗಿದಾಗ, ದರಮೀಲಿತ, ದರಹಾಸ, ದರದರ ದುರುದುರು... ಇತ್ಯಾದಿಗಳೆಲ್ಲವೂ ನನ್ನ ತಂಟೆ ಕಣ್ಣಿಗೆ ಬಿದ್ದು ತಲೆ ಸೇರಿದವು. ನಿಘಂಟು ನನಗೆ ಪ್ರಿಯವೆನಿಸತೊಡಗಿತು. ಬರಬರುತ್ತ ಮನುಷ್ಯರಿಗಿಂತ ಅಕ್ಷರ, ಶಬ್ದಗಳೇ ಹೆಚ್ಚು ಪ್ರಿಯವೆನ್ನಿಸತೊಡಗಿದವು! (ಅದಕ್ಕೇ ನನ್ನ ಬದುಕಿನ 60 ವರ್ಷಗಳನ್ನು ನನಗೆ ಪ್ರಿಯವಾದ ಶಬ್ದ ವಾರಿಧಿಯಲ್ಲಿಯೇ ತೇಲಿಸಿದೆ! ಅದು ವರವಲ್ಲದೆ ಇನ್ನೇನು?)

    ತಮ್ಮ ಸ್ವಂತ ಮಕ್ಕಳನ್ನು ತರಬೇತುಗೊಳಿಸುವ ಹೊತ್ತಿನಲ್ಲಿ - "ಪಂಡಿತ ಪರಂಪರೆ" ಯ ಅಧ್ಯಾಪಕರಾಗಿದ್ದ ನನ್ನ ಅಪ್ಪಯ್ಯನು ನಿವೃತ್ತರಾಗುವ ಹಂತದಲ್ಲಿದ್ದರು. ಆರೋಗ್ಯದೊಂದಿಗೆ ಉತ್ಸಾಹವೂ ಕುಗ್ಗಿತ್ತು. ಆದರೆ ಅವರ ಅಧ್ಯಾಪಕ ವೃತ್ತಿಯ ಸೇವಾವಧಿಯಲ್ಲಿ ಅನೇಕ ವಿದ್ಯಾರ್ಥಿಗಳನ್ನು ಕಡೆದು ಶಿಲ್ಪವಾಗಿಸಲು ಅವರು ಪ್ರಯತ್ನಿಸಿದ್ದರು. ನನ್ನ ಅಮ್ಮನೂ ಅವರ ಶಿಷ್ಯಳೇ. ಅವಳನ್ನು ತರಬೇತುಗೊಳಿಸುವ ಹಂತದಲ್ಲಿ 32 ರ ಹರೆಯದಲ್ಲಿದ್ದ ಅಪ್ಪಯ್ಯನು, ಆಂಜನೇಯನ ಅನುಯಾಯಿಯಾಗಿ ಗೃಹಸ್ಥಾಶ್ರಮಕ್ಕೆ ಬೆನ್ನು ಹಾಕಿ ದೂರವುಳಿದಿದ್ದರು. ಆದರೆ 14 ರ ಹರೆಯದ ಅಮ್ಮನ ಸಂಗೀತ ಪ್ರತಿಭೆಗೆ ಒಲಿದು ತಮ್ಮ ವ್ರತಭಂಗಕ್ಕೆ ಮನಸ್ಸು ಮಾಡಿದ ಅಪ್ಪಯ್ಯ ಅವರು! ಅವರು ಅಕ್ಷರವನ್ನು ಪ್ರೀತಿಸಿದ್ದು ಮಾತ್ರವಲ್ಲ; ಅಕ್ಷರ ಹೊಮ್ಮಿಸುವ ಜೀವಂತ ಯಂತ್ರಗಳೆಲ್ಲವನ್ನೂ ಪ್ರೀತಿಸುತ್ತಿದ್ದರು. ಅವರ ಅನೇಕ ವಿದ್ಯಾರ್ಥಿಗಳ ಪ್ರಬಂಧಗಳನ್ನು ತಿದ್ದುವಾಗ, ಉತ್ಕೃಷ್ಟ ಅನ್ನಿಸಿದರೆ, ಮನೆಮಂದಿಗೆಲ್ಲ ಓದುವಂತೆ ಹೇಳುತ್ತಿದ್ದರು. 

  ತಮ್ಮ ವಿದ್ಯಾರ್ಥಿಗಳನ್ನು ಅಂತರ್ಶಾಲಾ ಸ್ಪರ್ಧೆಗಳಿಗೆ ಅಪ್ಪಯ್ಯನು ಸಿದ್ಧಗೊಳಿಸಿದ ಅನೇಕ ಉದಾಹರಣೆಗಳಿವೆ. ಅವೆಲ್ಲವೂ ಕೋಟೇಶ್ವರದಲ್ಲಿ ನಡೆದ ಅಪ್ಪಯ್ಯನ ಪಠ್ಯೇತರ ವ್ಯಾಯಾಮಗಳು. ಅವರ ಮಕ್ಕಳಾದ ನಾವು, ಆಗ ಕಿರಿಯ ವಯಸ್ಸಿನ ಬೇಜವಾಬ್ದಾರಿಯವರಾಗಿದ್ದು ಹುಡಿತಂಟೆಯಲ್ಲದೆ ಇನ್ನೊಂದರಲ್ಲಿ ಆಸಕ್ತಿಯಿಲ್ಲದವರಾದುದರಿಂದ ಅಂದಿನ ಆಗುಹೋಗುಗಳೆಲ್ಲವೂ ನಮ್ಮ ತಲೆಯಲ್ಲಿ ಗಟ್ಟಿಯಾಗಿ ದಾಖಲಾಗಿಲ್ಲ. ಆದರೆ ಅಮ್ಮನ ಬಾಯಿಂದ ಕೇಳಿದಂತೆ, ಅವರ ಒಬ್ಬ ವಿದ್ಯಾರ್ಥಿಯು ತನ್ನ ಸುಂದರ ಅಕ್ಷರ, ಪ್ರಬುದ್ಧ ಬರಹದಿಂದ ಅಪ್ಪಯ್ಯನನ್ನು ಮರುಳುಗೊಳಿಸಿದ್ದನಂತೆ. ಆದರೆ ಪರೀಕ್ಷೆಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸದೆ, ಕೇವಲ ಪಾಸಾಗುವಷ್ಟು ಮಾತ್ರ ಬರೆದು ಎದ್ದುಹೋಗುವ ಅಭ್ಯಾಸದವನಂತೆ. ಅವನನ್ನು ಮನೆಗೆ ಕರೆದುಕೊಂಡು ಬಂದು ಉಪಚರಿಸಿ, “ಪರೀಕ್ಷೆಯನ್ನು ಹಗುರವಾಗಿ ಭಾವಿಸಬಾರದು” – ಎಂದು ಅಪ್ಪಯ್ಯನು ಕಿವಿ ಮಾತನ್ನೂ ಹೇಳಿದ್ದರಂತೆ. ಅವನ ಉತ್ತರ ಪತ್ರಿಕೆಯನ್ನು ಅಮ್ಮನಿಗೆ ತೋರಿಸಿ, “ಎಷ್ಟು ಪ್ರೌಢ ಪ್ರಬಂಧವನ್ನು ಬರೆದಿದ್ದಾನೆ ನೋಡು... ಆದರೆ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿಲ್ಲ. ಇವನಿಗೆ ತುಂಬ ಅಂಕಗಳನ್ನು ಕೊಡಬೇಕು ಅನ್ನಿಸಿದರೂ ಕೊಡುವುದಾದರೂ ಹೇಗೆ?” ಎಂದು ಅಲವತ್ತುಕೊಳ್ಳುತ್ತಿದ್ದರಂತೆ. ಅನಂತರ ಆ ಹುಡುಗನು ತನ್ನ ಓದನ್ನು ಮುಂದುವರಿಸದೆ ಭಾರತೀಯ ಸೇನೆಯನ್ನು ಸೇರಿಕೊಂಡನೆಂದೂ ಅಮ್ಮನಿಗೆ ಅಪ್ಪಯ್ಯ ಹೇಳಿದ್ದರಂತೆ.

                                   

    ತಮ್ಮ ಶಾಲಾ ದಿನಚರಿಗೂ ವೇಳಾ ಪಟ್ಟಿ, ವಿಷಯ ಪಟ್ಟಿಯನ್ನು ತಾವೇ ನಿಗದಿ ಪಡಿಸಿಕೊಂಡು ಶಿಸ್ತಿನಿಂದ ಪಾಠಕ್ರಮವನ್ನು ರೂಢಿಸಿ ಆಚರಿಸುತ್ತಿದ್ದ - ನಮ್ಮ ಅಪ್ಪಯ್ಯ ಅವರು. ಪಾಠವನ್ನು ಗ್ರಹಿಸುವಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಅವರೆಂದೂ ಶಿಕ್ಷಿಸಿದ್ದನ್ನು ನಾವು ಕಂಡಿಲ್ಲ; ಕೇಳಿಲ್ಲ. ಪಾಠದಲ್ಲಿ ಹಿಂದೆ ಬೀಳುವ - ಅಂತಹ ಮಕ್ಕಳನ್ನು ಪ್ರತ್ಯೇಕವಾಗಿ ಕರೆದು ಮತ್ತೊಮ್ಮೆ, ಮಗದೊಮ್ಮೆ ವಿವರಿಸುತ್ತಿದ್ದರು. ಆದರೆ ಶಾಲೆಯ ಶಿಸ್ತನ್ನು ಮತ್ತು ವಿದ್ಯಾರ್ಥಿಯ ಇತಿಮಿತಿಯನ್ನು ಮೀರುವ ವಿದ್ಯಾರ್ಥಿಗಳಿಗೆ ಮಾತ್ರ ಕಪಾಳಮೋಕ್ಷವಾಗುತ್ತಿತ್ತು. 

  ಶಾಲೆಯ ಅವಧಿಯು ಮುಗಿದ ನಂತರ ಪ್ರತೀ ದಿನವೂ ಅಪ್ಪಯ್ಯನು ದಪ್ಪದಪ್ಪದ ಪುಸ್ತಕಗಳನ್ನು ಓದುತ್ತಿದ್ದರು. ಓದಿ ಓದಿ ಕಣ್ಣಿಗೆ ಬಳಲಿಕೆಯಾದರೆ ಅದೇ ಸಪೂರದ ಮಂಚದ ಮೇಲೆ ಮಗ್ಗುಲಾಗಿ ಒರಗಿಕೊಂಡು ಕುಟುಕು ನಿದ್ದೆ ಮಾಡಿಬಿಡುತ್ತಿದ್ದರು. ಹತ್ತು ಹದಿನೈದು ನಿಮಿಷದಲ್ಲೇ - ಏನೋ ಅಪರಾಧ ಮಾಡಿದಂತೆ ದಡಬಡಿಸಿ ಏಳುತ್ತಿದ್ದುದೂ ನನಗೆ ನೆನಪಿದೆ. ರವಿವಾರದ ಬಹುಪಾಲು ಸಮಯವನ್ನು ಅವರು ಅಧ್ಯಯನದಲ್ಲಿಯೇ ಕಳೆಯುತ್ತಿದ್ದರು. ಯಾವುದೋ ಅಂಗಡಿಯ ಜಗಲಿಯಲ್ಲಿ ಕೂತು ಗೆಳೆಯರೊಂದಿಗೆ ಪಟ್ಟಾಂಗ ಹೊಡೆಯುತ್ತಿದ್ದ ಅಪ್ಪಯ್ಯನನ್ನು - ನಾವು ಕಂಡಿಲ್ಲ. ಯಾರ್ಯಾರದೋ ಮನೆಗೆ ಹೋಗಿ - "ಮತ್ತೆ ಹೇಗಿದ್ದೀರಿ? ಮಕ್ಕಳು, ಹಸು ಕರು... ಇತ್ಯಾದಿ ಚರ್ಚೆಗಳನ್ನು ನಡೆಸಿದ್ದಂತೂ ಇಲ್ಲವೇ ಇಲ್ಲ. 

  ಅಪ್ಪಯ್ಯನು ಗಂಭೀರವಾದ ಬರವಣಿಗೆಯಲ್ಲಿ ತೊಡಗಿಕೊಂಡಾಗ ನಾವು ಮಕ್ಕಳು ಮನೆಯಲ್ಲಿ ತರಲೆ ಎಬ್ಬಿಸಿದರೆ ಎರಡೇಟು ಬಿಗಿಯುತ್ತಿದ್ದುದೂ ಇತ್ತು. ಎಷ್ಟೇ ಕಾಡುಹರಟೆಗಳಿಂದ ದೂರವಾಗಿದ್ದರೂ ತಮ್ಮ ಮನೆಗೆ ಬಂದವರಲ್ಲಿ ಮಾತ್ರ ಅವರು ಸರಳವಾಗಿ ಬೆರೆಯುತ್ತಿದ್ದರು. ತಮಗೆ ಹೊಂದದ ವ್ಯಕ್ತಿ ಅನ್ನಿಸಿದರೆ, ಹೆಚ್ಚು ಮಾತಾಡುವ ಹೊಣೆಯನ್ನು ನಯವಾಗಿ ಅಮ್ಮನಿಗೆ ಒಪ್ಪಿಸಿ ಅಲ್ಲಿಂದ ಮಾಯವಾಗುತ್ತಿದ್ದರು. ಒಮ್ಮೊಮ್ಮೆ... ರಸವತ್ತಾಗಿ ಮಾತನಾಡುತ್ತ ತಮ್ಮ ವಿಚಾರಗಳತ್ತ ಅತಿಥಿಗಳನ್ನು ಸೆಳೆದು, ಅವರ ಹೋಕುಬಾರದ ಮಾತುಗಳ ದಾರಿತಪ್ಪಿಸುತ್ತಿದ್ದುದೂ ಇತ್ತು. ಯಾವುದೋ ಕಾರ್ಯಕ್ಕಾಗಿ ಮನೆಗೆ ಆಗಮಿಸಿದ್ದ ಅತಿಥಿಗಳು ತಾವು ಬಂದ ಕಾರ್ಯವನ್ನೇ ಮರೆತು ಅಪ್ಪಯ್ಯನ ಪ್ರವಚನವನ್ನು ಕೇಳಿಸಿಕೊಂಡು ಕೆಲವೊಮ್ಮೆ ಹಿಂದಿರುಗಿದ್ದೂ ಇದೆ; ಅದಕ್ಕಾಗಿ ಮತ್ತೊಮ್ಮೆ ಬರುವಂತಾದುದೂ ಇದೆ. “ಮೊನ್ನೆ ಬಂದಾಗ ನಾನು ಬಂದ ವಿಷಯವೊಂದನ್ನು ಬಿಟ್ಟು ಬೇರೆ ಎಲ್ಲವನ್ನೂ ಮಾತಾಡಿದ ಹಾಗಾಯ್ತು. ಮೊನ್ನೆ ಬಂದದ್ದು ಏಕೆಂದು ಈಗ ಹೇಳಿ ಹೋಗುತ್ತೇನೆ...” ಎನ್ನುತ್ತಿದ್ದ ಊರವರಿದ್ದರು. ಅತಿಥಿಗಳು ಹೋದ ನಂತರ ಅಮ್ಮನು ಅಪ್ಪಯ್ಯನನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಳು. “ಮನೆಗೆ ಬಂದವರು ಏನನ್ನೂ ಹೇಳಲು ಬಿಡದೆ ನಿಮ್ಮ ತತ್ವ ಸಿದ್ಧಾಂತವನ್ನೆಲ್ಲ ಅವರಿಗೆ ಯಾಕೆ ಹೇಳುತ್ತಿರಬೇಕು? ಅವರಿಗೆ ನಿಮ್ಮ ವಿಚಾರಗಳೆಲ್ಲ ಬೇಕಾ? ಅವರು ಬಂದ ಕೆಲಸವನ್ನು ಮಾಡಿಕೊಂಡು ಹೋಗಲು ಬಿಡಬೇಕಪ್ಪ...” ಎಂದು ಗೊಣಗುತ್ತಿದ್ದಳು. ಆಗ ಅಪ್ಪಯ್ಯ ನೀಡುತ್ತಿದ್ದ ಉತ್ತರ – “ನೋಡು, ಅವರಿಗೇ ಮಾತನಾಡಲು ಬಿಟ್ಟರೆ ನನ್ನ ದನ ಕರು ಹಾಕಿದೆ; ಮಗಳ ಹೆರಿಗೆ ಆಗಿದೆ; ಊಟಕ್ಕೆ ಸೌತೇ ಕಾಯಿಯ ಹುಳಿ ಮಾಡಿದ್ದೆ... ಎಂದೆಲ್ಲ ಶುರುಮಾಡುತ್ತಾರೆ. ಆಗ ನನ್ನ ಸಮಯ ವ್ಯರ್ಥವಾಗುತ್ತದೆ. ಅದಕ್ಕೇ ಒಂದಷ್ಟು ಉತ್ತಮ ವಿಷಯಗಳನ್ನು ಅವರಿಗೆ ಹೇಳಿದೆ. ಅವರೂ ಕೂತುಕೊಂಡು ಕೇಳಿದರಲ್ಲಾ? ಮಾತ್ರವಲ್ಲ, ಬೇಗ ಹೊರಟೂ ಹೋದರು... ಊರಿನ ಕೆಲವರು – ಹಟ್ಟಿ ಹಣೆ ಹೋರಿ ತಲೆ - ಎನ್ನುವಷ್ಟೇ ತಿಳಿದಿರಬೇಕೆಂದಿಲ್ಲ. ಎಲ್ಲರಿಗೂ ವಿಷಯಜ್ಞಾನ ಇರಲಿ ಬಿಡು. ಅಷ್ಟಾಗಿಯೂ ಅವರಿಗೆ ಆಸಕ್ತಿ ಹುಟ್ಟದಿದ್ದರೆ ಅದು ಅವರ ಕರ್ಮ... ಈಗ ನನಗೆ ನೀನು ಪಿರಿಪಿರಿ ಮಾಡಬೇಡ. ನಾನಿರುವುದು ಹೀಗೇ... ಏನು? ಸತ್ಯನಾರಾಯಣ ಪೂಜೆಗೆ ಆಹ್ವಾನ ಕೊಟ್ಟಿದ್ದಾರಲ್ವಾ? ನೀನು ಹೋಗಿ ಬಾ. ಅರಿವು ಎಂಬುದೇ ಪೂಜೆ. ಅದಿಲ್ಲದೆ ಎಂತಹ ಪೂಜೆ ಮಾಡಿದರೂ ಫಲವಿಲ್ಲ...” ಎನ್ನುತ್ತಿದ್ದರು. ಆದರೂ ಸಡಿಲವಾಗದ ಅಮ್ಮನ ಮುಖವನ್ನು ನೋಡುತ್ತ “ಹೋಗು, ನಿನ್ನ ಕೆಲಸ ಮಾಡು... ಊರಿನವರ ಚಿಂತೆಯಲ್ಲಿ ನೀನ್ಯಾಕೆ ಸೊರಗುವುದು?” ಎನ್ನುತ್ತ ಮುಗುಳ್ನಗುತ್ತಿದ್ದರು. ತಮಗೆ ಹಿತವೆನಿಸಿದ ಸಾಹಿತ್ಯಿಕ, ಧಾರ್ಮಿಕ ವಿಚಾರಗಳ ಮಾತು - ಚಿಂತನೆಯಲ್ಲಿ ಆಸಕ್ತಿಯಿಂದ ಮುಳುಗಿಹೋಗುತ್ತಿದ್ದ ಅಪ್ಪಯ್ಯನು ತೌಡು ಕುಟ್ಟುವ ನಿತ್ಯ ದುಃಖದ ಹರಟೆಯಿಂದ ಪ್ರಜ್ಞಾಪೂರ್ವಕವಾಗಿ ದೂರವಿರುತ್ತಿದ್ದರು. ತನ್ನ ಶಾಲೆಯ – ಮನೆಯ ಕೆಲಸಗಳು ಮತ್ತು ಸ್ವಂತ ಅಧ್ಯಯನದಲ್ಲಿಯೇ ಬದುಕನ್ನು ಸುಖಿಸಿದ ವ್ಯಕ್ತಿತ್ವವದು.




  ಶಾಲಾ ವಾರ್ಷಿಕೋತ್ಸವಗಳಿಗಾಗಿ ಅಪ್ಪಯ್ಯನು ಪ್ರತೀ ವರ್ಷವೂ ಪೌರಾಣಿಕ, ಚಾರಿತ್ರಿಕ, ಸಾಮಾಜಿಕ ನಾಟಕಗಳನ್ನು ಬರೆಯುತ್ತಿದ್ದುದನ್ನು ನಾನು ಕಂಡಿದ್ದೇನೆ. ಅದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ತಾನು ಕನ್ನಡ ಅಧ್ಯಾಪಕನಾಗಿದ್ದ ಶಾಲೆಯ ಎಲ್ಲ ಸಾಹಿತ್ಯಿಕ ಅಗತ್ಯಗಳನ್ನೂ ಪೂರೈಸುವುದು ತನ್ನ ಕರ್ತವ್ಯವೆಂಬಂತೆ ಅವರು ಬದುಕಿದ್ದರು. ನಾನೂ ಕೂಡ ಅಪ್ಪಯ್ಯನು ಬರೆದ ಕೆಲವು ನಾಟಕಗಳಲ್ಲಿ ಅಭಿನಯಿಸಿದ್ದಿದೆ. (ಒಂದೆರಡು ಹಸ್ತಪ್ರತಿಗಳು ಈಗಲೂ ನನ್ನಲ್ಲಿವೆ. ಶೌರ್ಯ ಸಂಜೀವನ (ರಜಪೂತ ರಾಣಾ ಶಕ್ತಸಿಂಹ – ಮೊಗಲ್ ದೊರೆ ಅಕ್ಬರ್ ನ ನಡುವಿನ ಹೋರಾಟದ ಒಂದು ಕತೆ), ರಜಪೂತ ರಾಣಿ ಅಥವ ಭಕ್ತೆ ಮೀರೆ, ಮೋಹನಚಂದನ ಬಾಲ್ಯ... ಇತ್ಯಾದಿ.) ಅಂತೂ ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕಾಗಿ ತಮ್ಮ ಸೇವಾವಧಿಯ ಉದ್ದಕ್ಕೂ ಅಪ್ಪಯ್ಯ ತಮ್ಮಿಂದಾದಷ್ಟು ಶ್ರಮಿಸಿದ್ದರು. ಗುರಿತಪ್ಪದ ಬದುಕದು.


 

  ಅಪ್ಪಯ್ಯನು ಬರೆಯುತ್ತಿದ್ದ ನಾಟಕಗಳಲ್ಲಿ ಕೆಲವು ಪದ್ಯಗಳನ್ನೂ ಸೇರಿಸುತ್ತಿದ್ದರು. "ಶೌರ್ಯ ಸಂಜೀವನ" ಎಂಬ ನಾಟಕದಲ್ಲಿದ್ದ ಒಂದು ಪದ್ಯವು ನನಗಿನ್ನೂ ನೆನಪಿದೆ...ಸೂತ್ರಧಾರಳು ಹಾಡುವ ಹಾಡದು.

                        ಜೀವನದೊಳ್ ಪ್ರೇಮಮಿಲನ ಸದಾ ಮಹದಾನಂದಂ
                        ವಿಯೋಗ ದುಃಖ ಸ್ರೋತಂ ಮರ್ಮಾಹತ ನರಕ ಸದೃಶಂ
                        ಮೆಹರೆಯ ಜೀವನದಿ ಕಾಳರಾತ್ರಿಯ ದೃಶ್ಯಂ...//

  ಇದನ್ನು ಸಿಂಧು ಭೈರವಿ ರಾಗದಲ್ಲಿ ನಾನು ಹಾಡಿದ್ದೆ.

  ತಾವಿದ್ದ ಶಾಲೆಯಲ್ಲಿ ಯಾವುದೇ ವಿಶೇಷ ಸಂದರ್ಭಗಳ ಆಚರಣೆ ನಡೆದರೂ ಅಂತಹ ಸಂದರ್ಭಗಳ ಔಚಿತ್ಯ ಮತ್ತು ಮಹತ್ವವನ್ನು ತಮ್ಮ ವಿದ್ಯಾರ್ಥಿಗಳಿಗೆ ಅವರು ತಿಳಿಸುತ್ತಿದ್ದರು. ಉದಾಹರಣೆಗೆ : ದೀಪಾವಳಿ, ಯುಗಾದಿ, ಸ್ವಾತಂತ್ರ್ಯ ದಿನಾಚರಣೆ, ರಾಜ್ಯೋತ್ಸವ, ಕ್ರಿಸ್ ಮಸ್... ಇತ್ಯಾದಿ. ತರಗತಿಯ ಪಾಠದ ಅವಧಿಯಲ್ಲೇ ಸಂಕ್ಷೇಪವಾಗಿ ಹೇಳಿ ಭಾರತೀಯ ಸಂಸ್ಕೃತಿಯ ಪರಿಚಯವೂ ಇರುವಂತೆ ತಮ್ಮ ವಿದ್ಯಾರ್ಥಿಗಳನ್ನು ಪೋಷಿಸುತ್ತಿದ್ದರು. ವಾರ್ಷಿಕ ಪಠ್ಯ ಭಾಗದ ಜೊತೆಗೆ ಇತರ ಜ್ಞಾನಶಾಖೆಗಳತ್ತಲೂ ಮಕ್ಕಳು ಆಕರ್ಷಿತರಾಗುವಂತೆ ಮಾಡುತ್ತಿದ್ದ ನನ್ನ ಅಪ್ಪಯ್ಯನಿಂದ ನನಗಂತೂ ಮಹದುಪಕಾರವಾಗಿದೆ. ಕನ್ನಡ ರಾಜ್ಯೋತ್ಸವದ ದಿನದಂದು ನಮ್ಮ ಮನೆಯಲ್ಲಿ - ಕಡ್ಡಾಯವಾಗಿ,  ಪಾಯಸದೂಟವಿರುತ್ತಿತ್ತು!


                         ಊರಿನ ರಾಜ್ಯೋತ್ಸವದ ಹಬ್ಬದಲ್ಲೂ ನಮ್ಮ ಸಕ್ರಿಯ ಪಾತ್ರವಿರುತ್ತಿತ್ತು.




(ಕುಂದಾಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ.
ಅತಿಥಿಗಳು : ಸರ್ವಶ್ರೀ ಎಂ.ಎಂ.ಹೆಗ್ಡೆ, ವೀರರಾಜೇಂದ್ರ ಹೆಗ್ಡೆ ಬಸ್ರೂರು, ಬನ್ನಂಜೆ ಗೋವಿಂದಾಚಾರ್ಯ.
ಕನ್ನಡ ಗೀತ ಗಾಯನ ; ಕುಮಾರಿ ಕಾತ್ಯಾಯನಿ, ನಾರಾಯಣಿ, ಪ್ರೇಮಲತ.
ಪಕ್ಕದಲ್ಲಿ ನಿಂತವರು ಆಯೋಜಕರಾದ ಶ್ರೀ A.S.N. ಹೆಬ್ಬಾರ್.)

    ಯಾವ ರಾಜಕೀಯಕ್ಕೂ ತಲೆ ಹಾಕದೆ - ಕನ್ನಡ ಕನ್ನಡ ಎನ್ನುತ್ತ ಕನ್ನಡವನ್ನು ಹೊತ್ತು ಮೆರೆಸಿದ, ಇನ್ನೆಷ್ಟೋ ಶಾಲಾ ವಿದ್ಯಾರ್ಥಿಗಳಿಗೂ ಕನ್ನಡದ ರುಚಿ ಹತ್ತಿಸಿ, ಬದುಕಿನುದ್ದಕ್ಕೂ ಕನ್ನಡವನ್ನು ಹೊತ್ತು ಕುಣಿದಾಡಿದವರು - ನನ್ನ ಅಪ್ಪಯ್ಯ. ಕನ್ನಡ ಭಾಷೆ, ಮಾತು, ನೆಲ-ಜಲದ ಸದಭಿಮಾನಿಗಳಾಗಿದ್ದ ಅಂದಿನ ಅನೇಕ ಕನ್ನಡೋಪಾಸಕರು ಮತ್ತು ಈಗಲೂ ಕನ್ನಡವನ್ನೇ ಆಶ್ರಯಿಸಿರುವ ಇಂತಹ ಎಲೆಮರೆಯ ಕೆಲವು ಕನ್ನಡ ಭಕ್ತರಿಂದಲೇ - ಕನ್ನಡವು ಉತ್ಕೃಷ್ಟ ಸುಭಗ ಭಾಷೆಯಾಗಿ ಇನ್ನೂ ಉಳಿದಿದೆ ಎಂದರೆ ಅದು ಅತಿಶಯೋಕ್ತಿಯಾಗದು. 
                                                    ***************

  “ಮೇಡಂ, ನಿವೃತ್ತರಾದ ಮೇಲೆ ಹೇಗೆ ಸಮಯ ಕಳೆಯುತ್ತೀರಿ?” ಎಂದು ಈಗ ನನ್ನನ್ನು ಎಷ್ಟೋ ಜನರು ಕೇಳುವುದಿದೆ. ಅವರ ಮಾತಿನಲ್ಲಿ - ಅದ್ಭುತವಾದ ಅಂತಹ (!) ಆಕಾಶವಾಣಿಯಿಂದ ಹೊರ ಬಂದರೆ ನೀರಿಂದ ಎತ್ತಿದ ಮೀನಿನಂತೆ ಚಡಪಡಿಸುವುದು ಸಹಜ – ಎಂಬ ಧ್ವನಿಯಿರುವುದನ್ನೂ ನಾನು ಗಮನಿಸಿದ್ದೇನೆ. ಇವರನ್ನೆಲ್ಲ - “ನಿವೃತ್ತಿಯು ನೌಕರಿಯ ಒಂದು ಭಾಗವೆಂದು ಯೋಚಿಸಲಾಗದ ಮುಗ್ಧರು” - ಎಂದು ತಿಳಿದುಕೊಳ್ಳುವ ಮುಗ್ಧತೆಯನ್ನು ನಾನು ಉಳಿಸಿಕೊಂಡಿದ್ದೇನೆ. ಅಂತಹ ಕುತೂಹಲಿಗಳಿಗೆ – “ನಾನು ನನ್ನದಲ್ಲದುದನ್ನು ಕೊಡವಿ ಬಿಸಾಡುವುದರಲ್ಲಿ ವಿಶೇಷ ಪರಿಣತಿ ಪಡೆದವಳು” - ಎಂದು ಹೇಳಿಕೊಳ್ಳಲು ಹೋಗುವುದಿಲ್ಲ. ಇದು ಹೆಮ್ಮೆಯಲ್ಲ; ನನ್ನ ಸ್ವಭಾವ. ಏಕೆಂದರೆ... ಎಂದಿಗೂ ವರ್ತಮಾನವು “ಭೂತ”ದ ಮೇಲೆ ಸವಾರಿ ಮಾಡಬೇಕೇ ಹೊರತು ಯಾವುದೇ “ಭೂತ”ವು ವರ್ತಮಾನದ ಹೆಗಲೇರಬಾರದು – ಎಂಬುದು ನನ್ನ ಮತ. ಆದ್ದರಿಂದ, ನನ್ನ ಕುರಿತು ಕುತೂಹಲದಿಂದ ಪ್ರಶ್ನೆ ಕೇಳಿದವರಿಗೆ ಹೇಗೆ ಅಂದುಕೊಂಡರೆ ತಮ್ಮಷ್ಟಕ್ಕೇ ಸುಖ ಸಿಗುತ್ತದೋ ಹಾಗೆ ಅಂದುಕೊಳ್ಳಲು ನಾನು ಬಿಟ್ಟುಬಿಡುತ್ತೇನೆ. ಆದರೆ ಅಪ್ಪಯ್ಯನು ರುಚಿ ಹತ್ತಿಸಿದ ಓದು-ಬರಹವು ನನ್ನ ಬೆನ್ನು ಬಿಡದೆ ಈಗಲೂ ನನ್ನೊಂದಿಗಿದೆ. ನಿಜವಾಗಿ ಹೇಳುವುದಾದರೆ ನಾನೀಗ ಮೊದಲಿಗಿಂತ Busy ಆಗಿದ್ದೇನೆ. ಉದ್ಯೋಗದ ಒತ್ತಡಗಳಿಲ್ಲದೆ ನಿರುಮ್ಮಳವಾಗಿ “ನಾನು, ನನ್ನ ಸಂಸಾರ ಮತ್ತು ನನ್ನ ಅಕ್ಷರ” ಎಂಬಂತಿದ್ದೇನೆ. ನನಗೆ ಅಕ್ಷರದ ರುಚಿ ಹತ್ತಿಸಿದ ಅಪ್ಪಯ್ಯನು ನನ್ನ ಜೊತೆಯಲ್ಲೇ ಇದ್ದು ಒಮ್ಮೊಮ್ಮೆ ಹೀಗೆಲ್ಲ ಪ್ರಕಟವಾಗಿ ಬಿಡುವುದೂ ಇದೆ. ತನ್ನ ಮಕ್ಕಳನ್ನು, ವಿದ್ಯಾರ್ಥಿಗಳನ್ನು - ಇಂತಹ ಸ್ವಸ್ಥ ಬದುಕಿಗೆ ಸಜ್ಜುಗೊಳಿಸುವ ಯಾವುದೇ ಅಧ್ಯಾಪಕರು ಆಪ್ತರಾಗುತ್ತಾರೆ. ಚಿರಸ್ಮರಣೀಯರಾಗುತ್ತಾರೆ.
                

  2014 ರಲ್ಲಿ ಕಾಂತಾವರ ಕನ್ನಡ ಸಂಘದವರು “ನಾಡಿಗೆ ನಮಸ್ಕಾರ” ಎಂಬ ಸಾಹಿತ್ಯ ಸಂಸ್ಕೃತಿ ಚಿಂತನ ಗ್ರಂಥ ಮಾಲೆಯ ೯೭ ನೆಯ ಕುಸುಮವಾಗಿ ನನ್ನ ಅಪ್ಪಯ್ಯನನ್ನು ಕುರಿತು ಬರೆಯುವಂತೆ ಕೇಳಿದಾಗ ನಾನು “ಕೋಶ ಸಾಮ್ರಾಜ್ಯದ ಈಶ – ಯಜ್ಞನಾರಾಯಣ ಉಡುಪ” ಎಂಬ ಬರಹವನ್ನು ಅವರಿಗೆ ಒದಗಿಸಿದ್ದೆ. ಆ ಪುಸ್ತಕವು ಪ್ರಕಟವಾಗಿದೆ. ಕೇವಲ 40 ಪುಟಗಳ ಮಿತಿಯಿದ್ದುದರಿಂದ ಆ ಬರಹದಲ್ಲಿ ಅಪ್ಪಯ್ಯನ ಬದುಕಿನ ಹಲವು ಆಯಾಮಗಳನ್ನು ಸ್ಪರ್ಶಿಸುವುದಕ್ಕೆ ನನಗೆ ಸಾಧ್ಯವಾಗಿರಲಿಲ್ಲ. ಆ ಕೊರತೆಯನ್ನು ನೀಗಿಸಲು ಮತ್ತು ಮಗಳಾಗಿ, ಇದು ನನ್ನ ಕರ್ತವ್ಯದ ಭಾಗವೆಂದುಕೊಂಡು, ನನ್ನ ನೆನಪಿನಾಳದಲ್ಲಿ... ಹೇಳದೆ ಇನ್ನೂ ಉಳಿದುಕೊಂಡಿರುವ ಕೆಲವು ಸಂಗತಿಗಳನ್ನು ಈಗ ಬರೆಯುತ್ತಿದ್ದೇನೆ. ಆಸಕ್ತರು ಓದಲಿ ಎಂಬ ಉದ್ದೇಶದಿಂದ ಬರಹವನ್ನು ಆಗಿಂದಾಗ ನಿಮ್ಮ ಮುಂದಿಡುತ್ತಿದ್ದೇನೆ. 
                                              *****     *****     *****

Sunday, October 11, 2015

ನಾನೊಲಿದಂತೆ (9) - ಹಿಂದ ನೋಡದ... !



ಪ್ರತಿಯೊಂದು ಬದುಕಿಗೂ ಒಂದು ಬಾಲ್ಯ ಇರುತ್ತದೆ. ಅದು ಬಹು ವೇಗದಲ್ಲಿ ಜಾರಿ ಹೋಗುವ ಅಥವ ಮುಂದೊಂದು ದಿನ ಹಾಗೆ ಅನ್ನಿಸುವ ಕಾಲ. ಯಾವುದೇ ಗಂಭೀರ ಹೊಣೆಗಾರಿಕೆಯಿಲ್ಲದೆ ಬದುಕನ್ನು ಸವಿಯಬಹುದಾದ ಸಮಯವದು. ತಮ್ಮ ಹೆತ್ತವರು ಬಿಗಿದ ಗೂಟಕ್ಕೆ ಸುತ್ತುಬರುತ್ತ ಅವರು ನಿಗದಿ ಪಡಿಸಿದಷ್ಟು ದೂರ ಸಂಚರಿಸುತ್ತ ಶುಭ್ರವಾಗಿ ಮೇಯುವ ಕಾಲವದು. ತಮ್ಮ ಹೆತ್ತವರ ಬಳಿಯಲ್ಲೇ ಇದ್ದು ಬದುಕಿನ ಕಷ್ಟ ಸುಖಗಳನ್ನು ನೋಡುತ್ತ ಕೇಳುತ್ತ ಒಮ್ಮೊಮ್ಮೆ ಭಾವನಾತ್ಮಕವಾಗಿ ಭಾಗಿಯಾಗುತ್ತ ಸರಿದು ಹೋಗುವ ಈ ಬಾಲ್ಯ ಕಾಲವು ಪ್ರತೀ ಬದುಕಿನ ಮಿತಿ - ಗತಿಯನ್ನು ಭದ್ರವಾಗಿ ರೂಪಿಸುವ ಕಾಲವೂ ಹೌದು. ಮಕ್ಕಳಿಗೆ ಸ್ಥೂಲವಾಗಿ ಸಮಾಜ ದರ್ಶನವಾಗುವ ಅವಧಿಯೂ ಬಾಲ್ಯ ಕಾಲವೇ. ಬಾಲ್ಯವು ಸುಂದರವಾಗಿದ್ದರೆ ಭವಿಷ್ಯವು ಸ್ಥಿರವಾಗಿರುವುದು. ಭವಿಷ್ಯದಲ್ಲಿ ಎದುರಾಗುವ ಬದುಕಿನ ಎಲ್ಲ ಎಡರು ತೊಡರುಗಳನ್ನು ಸ್ವೀಕರಿಸಿ ಜೀರ್ಣಿಸಿಕೊಳ್ಳುವ ಶಕ್ತಿವರ್ಧನೆ ಮತ್ತು ಭವರೋಗ ನಿರೋಧಕ ಶಕ್ತಿ ಸಂಚಯವಾಗುವುದೂ ನಮ್ಮ ಬಾಲ್ಯ ಕಾಲದಲ್ಲಿಯೇ. ಆದ್ದರಿಂದ ಮನುಷ್ಯನ ಆರಂಭದ 15 ವರ್ಷಗಳು ನಿಜವಾಗಿಯೂ ವ್ಯಕ್ತಿತ್ವ ನಿರ್ಮಾಣದ ಕಾಲ. ಸುಂದರ ಯೌವ್ವನ ಮತ್ತು ನಿಶ್ಚಿಂತ ವೃದ್ಧಾಪ್ಯಕ್ಕೆ ಸಮೃದ್ಧ ಬಾಲ್ಯವೇ ನೆಲೆಗಟ್ಟು.



ನನ್ನ ಬಾಲ್ಯದ ಬಹುಪಾಲು ಕೋಟೇಶ್ವರದಲ್ಲಿಯೇ ಸರಿದುಹೋಯಿತು. ಸುಮಾರು 1959 - 1967 ರ ಅವಧಿಯಲ್ಲಿ ನಮ್ಮ ಕುಟುಂಬವು ಕೋಟೇಶ್ವರದಲ್ಲಿ ನೆಲೆಸಿತ್ತು. ಕೋಟೇಶ್ವರದ ಬೋರ್ಡ್ ಹೈಸ್ಕೂಲಿನಲ್ಲಿ ಆಗ ನನ್ನ ತಂದೆ ಯಜ್ಞನಾರಾಯಣ ಉಡುಪರು ಕನ್ನಡ ಭಾಷೆಯ ಅಧ್ಯಾಪಕರಾಗಿದ್ದರು. ಸುಮಾರು 4 ರಿಂದ 13 ರ ವಯಸ್ಸಿನ ವರೆಗೆ ಕೋಟೇಶ್ವರದಲ್ಲಿಯೇ ನನ್ನ ಬಾಲ್ಯವು ನಡೆದಾಡಿತ್ತು. ಆಗ ಅಪ್ಪ ಅಮ್ಮನು ಕಟ್ಟಿದ ಗೂಟಕ್ಕೆ ಸುತ್ತುತ್ತಿದ್ದ ನಾನು ನೆಗೆದಾಡುವ ಕರುವಾಗಿದ್ದೆ. ಮನೆಯಲ್ಲಿ ಇಬ್ಬರು ಅಕ್ಕಂದಿರು, ಒಬ್ಬಳು ತಂಗಿಯ ಜೊತೆಗೆ ನಾನೂ ಬೆಳೆಯುತ್ತಿದ್ದೆ. ಆಗ ನಾನು ನಿತ್ಯವೂ ಕಾಣುತ್ತಿದ್ದ ದೃಶ್ಯವೆಂದರೆ - ಸೂರ್ಯನ ಚಲನೆಯೊಂದಿಗೇ ಹೆಜ್ಜೆ ಹಾಕುತ್ತ ನಿತ್ಯಕರ್ಮಗಳಲ್ಲಿಯೇ ಮುಳುಗಿರುತ್ತಿದ್ದ ನನ್ನ ಅಪ್ಪಯ್ಯ ಮತ್ತು ಅಮ್ಮನನ್ನು. ಸೂರ್ಯೋದಯಕ್ಕೂ ಮೊದಲೇ ಆರಂಭವಾಗುತ್ತಿದ್ದ ಅವರ ಚಟುವಟಿಕೆಗಳು ರಾತ್ರಿ ಏಳೆಂಟು ಗಂಟೆಯವರೆಗೂ ಎಡೆಬಿಡದೆ ಪ್ರತಿನಿತ್ಯವೂ ಸಾಗುತ್ತಿತ್ತು. ಇಂದಿನ ವಿರಾಮದ ಸಂಸಾರಗಳನ್ನು ನೋಡಿದಾಗಲೆಲ್ಲ ನನಗೆ ಅಂದಿನ "ಕಾರ್ಮಿಕ" ಹಿರಿಯರು ನೆನಪಾಗುತ್ತಾರೆ.

ಇಂದಿನವರ ಬಾಯಿಂದ ಹೊರಬೀಳುವ SPACE ಎನ್ನುವ ಶಬ್ದವು ಆಗ ಪ್ರಚಾರದಲ್ಲಿ ಇರಲೇ ಇಲ್ಲ. ಆದರೆ ಎಲ್ಲರೂ ತಮ್ಮ ನಿತ್ಯ ಕರ್ಮಗಳನ್ನು ಮುಗಿಸಿ, ದಿನದ ಒಂದಷ್ಟು ಹೊತ್ತು ಹಾಯಾಗಿ ಕೂತು ನಗುತ್ತ ಹರಟೆ ಹೊಡೆಯುತ್ತಿದ್ದುದನ್ನು ನಾನು ನೋಡಿದ್ದೇನೆ. ಒಬ್ಬರೇ ಮೂಲೆಮೂಲೆಯಲ್ಲಿ ನಿಂತು ಗುಸುಗುಸು ನಡೆಸುತ್ತಿದ್ದ ಕೆಲವು ಜನರು ಹಿಂದೆಯೂ ಇದ್ದರು. ಅವರನ್ನು ಆಗ "ಮಾನಸಿಕ ಸಮಸ್ಯೆ" ಎಂದು ಗುರುತಿಸಿ ಆಡಿಕೊಳ್ಳುವುದನ್ನು ನಾನು ಕೇಳಿದ್ದೆ. ಸುಖ ದುಃಖಗಳನ್ನು ಹಂಚಿಕೊಳ್ಳುತ್ತ ಪರಸ್ಪರ ಸಮಭಾಗಿಗಳಾಗುತ್ತ ಹಾಗೆ ಹಗುರಾಗುವ "ವಿರಾಮದ ಸ್ವಸ್ಥ SPACE" ನ್ನು ಹೊಂದಿದವರು ನಾನು ಕಂಡ ಅಂದಿನ ಪರಿಸರದಲ್ಲಿ ಇದ್ದರು.

ಇಂದು ಪರಿಸ್ಥಿತಿ ಬದಲಾಗಿದೆ. ಸ್ವಂತ ಹೆತ್ತವರನ್ನೂ ದೂರವಿಡುವಷ್ಟು ಪ್ರಬಲವಾಗಿ SPACE ಎಂಬ ಮಂತ್ರವು ಬಾಯಿ ಬಿಟ್ಟಿದೆ. ಅಂತಹ (ಹಳ್ಳಕ್ಕೆ ಬೀಳಿಸುವ) ಕೃತಕ SPACE ಎಂಬ - ಇಂದಿನ ಮಕ್ಕಳ Fashion ಗೆ ತುತ್ತಾಗಿ ಸ್ವಂತ ಅಪ್ಪ ಅಮ್ಮನೂ ಬಳಲುತ್ತಿರುವುದನ್ನು ನೋಡುತ್ತಿದ್ದೇವೆ! ಈ SPACE ಎಂಬ ಗಂಡಾಂತರದಿಂದಾಗಿ ತಮ್ಮ ಮಕ್ಕಳ ಚಲನವಲನದ ಜ್ಞಾನವು ಇಂದಿನ ಹೆತ್ತವರಿಗೆ ಇರುವುದಿಲ್ಲ. Friends ಜತೆಗೆ ಎಲ್ಲಿಗೋ ಹೋಗಿದ್ದಾರೆ...ಎಂಬುದಷ್ಟೇ ತಿಳಿದಿರುವ ಹೆತ್ತವರು ಮಕ್ಕಳು ಯಾವಾಗ ಹಿಂದಿರುಗಿದರೂ ಪ್ರಶ್ನಿಸುವಂತೆಯೂ ಇಲ್ಲ. ಹಾಗೆ ಪ್ರಶ್ನಿಸಿದರೆ ಸ್ವಂತ Space ನ ಅತಿಕ್ರಮಣವೆನಿಸುತ್ತಿದೆ !!!



ಹೀಗೆ Space ಎಂಬುದು ಮಿತಿಮೀರಿ, ಕೆಲವೊಮ್ಮೆ ಜೀವಂತ ಹೊರಗೆ ಹೋದ ಮಕ್ಕಳು ಶವವಾಗಿ ಬಂದ ದುರ್ಘಟನೆಯೂ ಸಂಭವಿಸಿದೆ. "ಹೆತ್ತವರು ಇರುವುದೇ ತಮ್ಮ ಅವಶ್ಯಕತೆಗಳನ್ನು ಪೂರೈಸಲು" (ATM) ಎಂದು ಭಾವಿಸುವ ಕೆಲವು ಮಕ್ಕಳ ತಿಕ್ಕಲುತನದಿಂದಾಗಿ ಮಕ್ಕಳ ಬಾಲ್ಯವು ಹಾಳಾಗಿ - ವರ್ತಮಾನದ ಮಾನಹೋಗಿ - ಭವಿಷ್ಯವು ಮಾಯವಾಗಿ ಬಿಡುತ್ತಿದೆ. SPACE ಎನ್ನುವ ತಿರುಪೆ ಏಕಾಂತದಲ್ಲಿ ಕುಳಿತು, ಅನಂತ ಧ್ಯಾನಸ್ಥ ಸ್ಥಿತಿಯಲ್ಲಿ ಈ ಮಕ್ಕಳು ಯಾವ ಮಹಾಜ್ಞಾನವನ್ನು ಸಿದ್ಧಿಸಿಕೊಂಡಿರುವರೋ? ಅವರನ್ನೇ ಕೇಳಬೇಕು.

ಹಿಂದೆ ನಮ್ಮ ಮನೆ ಮಾತ್ರವಲ್ಲದೆ ನಾನು ನೋಡುತ್ತಿದ್ದ ಇತರ ಬಂಧುಗಳ ಮನೆಗಳಲ್ಲೂ ಕೆಲಸ ಕಾರ್ಯಗಳಲ್ಲೇ ಮುಳುಗಿರುತ್ತಿದ್ದ ಹಿರಿಯರನ್ನು ಗಮನಿಸಿದ್ದೇನೆ. ಎಲ್ಲರೂ ಜೊತೆಗೂಡಿ ಮಾಡುವ ಕೆಲಸದ ಹೊತ್ತಿನಲ್ಲೇ ಅವರು ತಮ್ಮ ಆಂತರ್ಯದ ತುಮುಲಗಳನ್ನೆಲ್ಲ ಪರಸ್ಪರ ಹೇಳಿಕೊಳ್ಳುತ್ತ ಹಗುರವಾಗುತ್ತಿದ್ದುದನ್ನೂ ನಾನು ನೋಡಿದ್ದೇನೆ. ಸಹಯೋಗದ ಸಹಬಾಳ್ವೆಯ ಅಂತಹ ಕಾಯಕನಿಷ್ಠೆಯನ್ನೂ - "ಮಮ" ಎಂಬ ಆಸಕ್ತಿಯನ್ನು ಹೊರತು ಪಡಿಸಿದರೆ ಸಾಂಸಾರಿಕ ಕರ್ಮಯೋಗವೆಂದೇ ಹೇಳಬಹುದು.


ಅಂದಿನ ಸ್ತ್ರೀಯರನ್ನು ನೆನಸಿಕೊಳ್ಳುತ್ತ ಇಂದಿನವರು "ಅಯ್ಯೋ...ಶೋಷಣೆ" ಎನ್ನುತ್ತ ಶಾಬ್ದಿಕ ಸಂತಾಪ ತೋರುವುದನ್ನು ನಾವು ಆಗಾಗ ನೋಡುತ್ತೇವೆ. ಆದರೆ ಇಂದಿನ ಅಸ್ಥಿರ ಮತ್ತು ಕೀಟಲೆಯ ಕರ್ಮತ್ಯಾಗಿಗಳಿಗಿಂತ ಅಂದಿನ ಸ್ತ್ರೀಯರು ಸಹಜ ಸಜ್ಜನರಾಗಿದ್ದರು. ಇಂದಿನ ಕೃತಕ ಬೊಜ್ಜುಗಳಿಗಿಂತ ಅವರೆಲ್ಲರೂ ಎಷ್ಟು ಲವಲವಿಕೆಯಿಂದ ಇದ್ದರು, ಜೀವನೋತ್ಸಾಹವನ್ನು ಹೊಂದಿದ್ದರು ಎನ್ನುವ ಅರಿವೇ ಇಲ್ಲದೆ ಯಾವುದೇ ಹರಕು ಅಭಿಪ್ರಾಯಗಳನ್ನು ಸಿಕ್ಕಸಿಕ್ಕಲ್ಲಿ ಉದುರಿಸಬಾರದು. ಹಿಂದಿನ ಅಜ್ಜಿಯಂದಿರು ಯಾರಾದರೂ ಇಂದಿನವರಲ್ಲಿ ಆರೋಪ ಮಾಡಿದ್ದುಂಟೆ? ತಮ್ಮ ಬದುಕನ್ನು ಸೌಂದರ್ಯ ಸ್ಪರ್ಧೆಯಾಗಿಸದೆ, ಅದನ್ನು ಗಂಭೀರವಾಗಿ ಈಸಿ ಜಯಿಸಿ ಹೋದ ಹಿರಿಯರವರು. ಸಂಸಾರವೆಂದರೆ ಅದರಲ್ಲಿ  ಹುಳಿ - ಸಿಹಿ, ಖಾರ - ಕಹಿ...ಎಲ್ಲವೂ ಇದ್ದೇ ಇರುತ್ತದೆ ಎಂಬ ಕಿಂಚಿತ್ತಾದರೂ ಪ್ರೌಢತೆಯಿಲ್ಲದವರು - ಅವರ ಕಲ್ಪನೆಯ "ಶೋಷಣೆ "ಯ ಸಂಸಾರದಿಂದ ದೂರವುಳಿಯುವುದೇ ಕ್ಷೇಮ. ಆಗ "ಶೋಷಣೆ ಬ್ಯಾಕ್ಟೀರಿಯ" ದ ಸೋಂಕಿನಿಂದ ಇತರ ಸ್ವಸ್ಥ ಸಂಸಾರಗಳಿಗೆ Infection ಆಗುವುದು ತಪ್ಪುತ್ತದೆ.  

ಅಂತಿಕ್ಕು ಇಂತಿಕ್ಕು ಎಂತಿಕ್ಕು ಎನಬೇಡ; ಚಿಂತಿಸಿ ದೇಹ ಬಡವಕ್ಕು...ಅಷ್ಟೆ. ಕರ್ಮದಲ್ಲಿ ಗಂಭೀರವಾಗಿ ತೊಡಗದೆ ವ್ಯರ್ಥವಾದ ಪ್ರಚೋದನೆಯ ಮಾತುಗಳನ್ನಾಡಿ - ಕೇಳಿಸಿಕೊಂಡು ಆಗುವುದೇನು? ಬದುಕೇ ಬಡವಾಗಬಹುದು. CHAT ಮಾಡುವುದರಲ್ಲೇ ತನ್ಮಯರಾದವರಿಗೆ ಬದುಕಿನ ಗಾಂಭೀರ್ಯದ ಅರಿವು ಇರುವುದಿಲ್ಲ. ಅಂತಹ ಚಟ್ಟು (CHAT) ತಟ್ಟುವ SPACE ಧಾರೀ ಸೈನ್ಯದ ಸದಸ್ಯರು ಗೆಲ್ಲುವ ಕುದುರೆಗಳನ್ನು ಬೆಳೆಸಲಾರರು; ಓಡಿಸಲಾರರು; ಗೆಲ್ಲುವ ಕುದುರೆ ಆಗಲೂ ಆರರು. ಕಷ್ಟಗಳನ್ನು ಮೆಟ್ಟಿ ನಿಯಂತ್ರಿಸಿ ಗೆಲ್ಲಲಾರದವರೆಲ್ಲರೂ ಸೋಲುವ - ಸೋಲಿಸುವ ಕುದುರೆಗಳೇ ಆಗಿರುತ್ತಾರೆ.

ಹೌದು. ನಮ್ಮ ಹಿರಿಯರು ಬೆವರು ಸುರಿಸಿ ದುಡಿಯುತ್ತಿದ್ದರು; ಅಂದು ಬಹುಪಾಲು ಬಡತನವೂ ಇತ್ತು. ಆದರೆ ಮನಸ್ಸು ಮಾತ್ರ  ಆರೋಗ್ಯದಿಂದ ಇರುತ್ತಿತ್ತು. ತನ್ನ ಮನೆಮಂದಿ, ನೆರೆಯವರು, ಊರವರು...ಎನ್ನುವಷ್ಟು ವಿಶಾಲ ವ್ಯಾಪ್ತಿಯಲ್ಲಿ ಹಂಚಿ ಉಣ್ಣುತ್ತ - ಯಾವ ಅಪೇಕ್ಷೆಯೂ ಇಲ್ಲದೆ ಉಪಕರಿಸುವ ಹೃದಯ ವೈಶಾಲ್ಯವೂ ಇತ್ತು. "ಹೋಗಲಿ ಬಿಡು; ಅವರ ಸ್ವಭಾವವೇ ಹಾಗೆ..", "ಹುಟ್ಟು ಗುಣ ಘಟ್ಟ ಹತ್ತಿದರೂ ಬಿಡದು...", ಮೂಢೋ ಮೂರ್ಖೋ ಗಾರ್ದಭೋ..." ಎನ್ನುತ್ತ ಎಲ್ಲ ಬಗೆಯ ಸಂದರ್ಭಗಳನ್ನೂ ನಿಭಾಯಿಸುವ ಶಕ್ತಿಯನ್ನು - ಕಷ್ಟ ಸಹಿಷ್ಣುತೆಯನ್ನು ಅವರ ಬದುಕಿನ ಶೈಲಿಯೇ ಅವರಿಗೆ ನೀಡಿದಂತೆ ಕಾಣುತ್ತದೆ. ನಮ್ಮ ಹಿರಿಯರು ಇಂದಿನವರಂತೆ ಪರರನ್ನು ಆರೋಪಿಸುತ್ತ ತಮ್ಮ ಬದುಕನ್ನು ಕಟ್ಟಿದವರಲ್ಲ. ಬೀದಿಗಿಳಿದು ಯಾವುದೇ ಪ್ರತಿಭಟನೆಯನ್ನು ನಡೆಸದೆ ಇದ್ದುದರಿಂದ ನಮ್ಮ ಹಿರಿಯರು ಕಳೆದುಕೊಂಡದ್ದು ಏನೂ ಇಲ್ಲ; ಬದಲಾಗಿ ಪಡೆದುಕೊಂಡದ್ದೇ ಹೆಚ್ಚು. ತಾನು ದುಡಿದು ತನ್ನಲ್ಲಿ ಇದ್ದುದರಲ್ಲಿಯೇ ನಾಲ್ಕು ಜನರಿಗೆ ಆಶ್ರಯ ಕೊಡುತ್ತಿದ್ದ ಪರೋಪಕಾರೀ ಬದುಕುಗಳವು. ಯಾವುದೋ ಕಠಿಣ ಸಂದರ್ಭವು ಎದುರಾದರೆ ಸುತ್ತುಮುತ್ತಿನವರೆಲ್ಲರೂ ಪರಸ್ಪರ ಸಹಕರಿಸುತ್ತಿದ್ದ ಪರಿಸರವು ಅಂದಿನ ಸಮಾಜದಲ್ಲಿತ್ತು. ಅದರಿಂದ ಅವರು ಪಡೆಯುತ್ತಿದ್ದುದು ಕೇವಲ ತೃಪ್ತಿ. ತೃಪ್ತಿಯೇ ದೊಡ್ಡ ಐಶ್ವರ್ಯ. ಚಾಡಿ ಹೇಳಿ ಪರಸ್ಪರ ಹಿಡಿಸಿಹಾಕುವ, ಜಗಳದ ಬೆಂಕಿಗೆ ಗಾಳಿ ಹಾಕುವ ಕೆಲವರು ಅಂದೂ ಇದ್ದರೂ ಅವರು ಅಲ್ಪಸಂಖ್ಯಾಕರಾಗಿದ್ದರು. ಆಗ ಅವರಿಗೆ ಬೆಲೆಯೂ ಇರಲಿಲ್ಲ. ಮುಖ್ಯವಾಗಿ...ಜನರಿಗೆ ದೇವರ ಭಯವಿತ್ತು. ತಪ್ಪು ಮಾಡಲು ಹೆದರುತ್ತಿದ್ದರು. ಲಕ್ಷ್ಮೀಪುತ್ರರೂ ಶಾರದೋಪಾಸಕರಿಗೆ ಬಹಿರಂಗದಲ್ಲಿಯಂತೂ ಕೈ ಮುಗಿಯುತ್ತಿದ್ದರು.

ಇಂತಹ ಸಮಾಜದಲ್ಲಿ ನಾನು ಬಾಲ್ಯ ಕಾಲವನ್ನು ಸವಿದೆ. ಅಂದಿನ ನಮ್ಮ ಕೋಟೇಶ್ವರದ ಮನೆಯು ಆಗ ನಿಜಾರ್ಥದಲ್ಲಿ ಋಷ್ಯಾಶ್ರಮದಂತಿತ್ತು. ತಮ್ಮದಲ್ಲದ ಆ ಬಾಡಿಗೆ ಮನೆಯನ್ನು ದೇವಸ್ಥಾನದಂತೆ ರೂಪಿಸಿದ ಶ್ರೇಯಸ್ಸು ನನ್ನ ಹೆತ್ತವರದು. ಕಾಲು ನೀಡಿ ಕೂತರೆ ಅರ್ಧ ಕಾಲು ಹೊರಗೆ ಬೀಳುವಷ್ಟು ಅಗಲದ ಒಂದು ಸಪೂರದ ಜಗಲಿ, ಅದಕ್ಕೆ ಹೊಂದಿಕೊಂಡು ನೆಟ್ಟಗೆ 6 ಜನರು  ಮಲಗಬಹುದಾದಷ್ಟು ದೊಡ್ಡ ಒಂದು ಚಾವಡಿ ಮತ್ತು ಅದೇ ಉದ್ದದ ಜಗಲಿಯಿಂದಲೇ ಪ್ರವೇಶವಿರುವ ಒಂದು ಅಡುಗೆಯ ಕೋಣೆ, ಚಾವಡಿಯಿಂದ ಪ್ರವೇಶವಿರುವಂತಹ ಇಬ್ಬರು ಮಲಗಬಹುದಾದಂತಹ ಮೂರು ಕೋಣೆಗಳು. ಹುಲ್ಲಿನ ಮಾಡಿನ ಆ ಪುಟ್ಟ ಕುಟೀರದ ನೆಲಕ್ಕೆ ಕೆಂಪುಕಾವಿ ಹಾಕಿದ ಮಣ್ಣಿನ ನೆಲವಿತ್ತು. ಮನೆಯ ಎಡಭಾಗದಲ್ಲಿ ಹಸುಗಳಿಗಾಗಿ ಕೊಟ್ಟಿಗೆ, ಅದಕ್ಕೆ ಹೊಂದಿಕೊಂಡಂತೆ ಸ್ನಾನದ ಮನೆ, ಕೊಟ್ಟಿಗೆಯ ಹಿಂಭಾಗದಲ್ಲಿ ನಮ್ಮ ಶೌಚಾಲಯವಾಗಿದ್ದ ದೊಡ್ಡ ಹಾಡಿ ಇತ್ತು. ಮನೆಯ ಎದುರಿನಲ್ಲಿ 200 ಗಜ ದೂರದಲ್ಲಿ ಒಂದು ಬಾವಿ. ಬಾವಿಯ ಬಲ ಭಾಗದಲ್ಲಿ ಮನೆಯಂಗಳಕ್ಕೆ ಪ್ರವೇಶ ದ್ವಾರವಿತ್ತು.  ವರ್ಷದ ಋತು ಬದಲಾವಣೆಗಳನ್ನು - ಋತು ಸಂಭ್ರಮ, ಪ್ರಕೃತಿಯ ಸೌಮ್ಯ ರೌದ್ರ ರೂಪಗಳಿಗೆಲ್ಲ ನಾನು ಅದೇ ಮನೆಯಲ್ಲಿ ಮುಖಾಮುಖಿಯಾಗಿದ್ದೆ...ಸವಿದಿದ್ದೆ. ಮನೆಯ ಹುಲ್ಲಿನ ಮಾಡಿನ ಸಂದಿಯಲ್ಲಿ ಹಾವು, ಎರಣೆ..ಮುಂತಾದ ಉಪಜೀವಿಗಳೂ  ಅಂದು ನಮ್ಮ ಜತೆಗಿರುತ್ತಿದ್ದವು. ಅವನ್ನು ನೋಡಿದ ನಾವು ಮಕ್ಕಳು - ಕುಮಟಿ ಬಿದ್ದು ಅಪ್ಪಯ್ಯನನ್ನು ಕರೆಯುತ್ತಿದ್ದೆವು. ಆ ಹಾವನ್ನು ಮಾಡಿನಿಂದ ಕೆಳಕ್ಕೆ ಬೀಳಿಸಿ ಅಪ್ಪಯ್ಯನು ಒಂದು ಕೋಲಿನಲ್ಲಿ ಅದನ್ನು ಎತ್ತಿಕೊಂಡು ಹೋಗುತ್ತಿದ್ದರು. ಆಗ "ಅಯ್ಯೋ, ಅದನ್ನು ಕೊಲ್ಲಬೇಡಿ..." ಎನ್ನುತ್ತ ಅಮ್ಮನು ಕೂಗಿ ಹೇಳುತ್ತಿದ್ದಳು. ಆ ಹೊತ್ತಿನಲ್ಲಿ ಗಂಡು ಸಂತಾನವಿಲ್ಲದೆ ದುಃಖಿತರಾಗಿದ್ದ ಅವರಿಬ್ಬರೂ "ಸರ್ಪ ದೋಷ"ಕ್ಕೆ ಹೆದರುತ್ತಿದ್ದಿರಬೇಕು. "ನಿನ್ನ ಬಿಲದಲ್ಲಿ ಇರುವುದನ್ನು ಬಿಟ್ಟು ಇನ್ನೊಂದು ಸಾರಿ ನನ್ನ ಬಿಲಕ್ಕೆ ಬಂದರೆ ನಾನು ನಿನ್ನನ್ನು ಕೊಲ್ಲುತ್ತೇನೆ...ನಿನ್ನ ಬಿಲಕ್ಕೆ ನಾನು ಎಂದಾದರೂ ಬಂದು ಪೀಡಿಸಿದ್ದೇನೆಯೆ? ನನ್ನ ಸಂಸಾರವನ್ನು ನೀನು ಯಾಕೆ ಪೀಡಿಸುತ್ತೀ? ನಿನಗೆ ಏನು ಬೇಕಾಗಿದೆ?..." ಎಂದು ಆ ಹಾವಿನಲ್ಲಿ ಮಾತನಾಡುತ್ತ ಅದನ್ನು ದೂರದ ಹಾಡಿಯಲ್ಲಿ ಬಿಡುತ್ತಿದ್ದ ಅಪ್ಪಯ್ಯನೇ ಸಂಕಟಮೋಚಕ ಹನುಮನಂತೆ ನಮಗೆ ಆಗ ಕಾಣಿಸುತ್ತಿದ್ದರು.

ಆ ಕೋಟೇಶ್ವರದಲ್ಲಿದ್ದ ಮನೆಯನ್ನು ಅಮ್ಮನು ಉಪಚರಿಸಿದ ಬಗೆಯನ್ನು ನಾನೆಂದೂ ಮರೆಯಲಾರೆ. ಮನೆ, ನೆಲ, ಗೋಡೆ, ಮಾಡು, ಅಂಗಳ, ಬಾವಿ ಕಟ್ಟೆ, ಕೊಟ್ಟಿಗೆ...ಎನ್ನುತ್ತ ಇಡೀ ದಿನವನ್ನು ಕಳೆದುಬಿಡುತ್ತಿದ್ದ ಅಮ್ಮ ಅವಳು. ಅಡುಗೆಯ, ಮಕ್ಕಳ ಜವಾಬ್ದಾರಿಯ ಜೊತೆಗೆ ಗುಡಿಸುವುದು, ಒರೆಸುವುದು, ಅಂಗಳಕ್ಕೆ ಸೆಗಣಿ ಸಾರಿಸುವುದು, ಹಟ್ಟಿಯನ್ನು ಶುಚಿಗೊಳಿಸುವುದು, ಬಾವಿಯಿಂದ ನೀರೆತ್ತಿ ಬಚ್ಚಲು-ತೋಡುಗಳನ್ನು ಸ್ವಚ್ಛಗೊಳಿಸುವುದು...ಒಂದೇ ಎರಡೆ? ಕೆಲಸದ ನಡುವೆ ಮಕ್ಕಳು ಪಿರಿಪಿರಿ ಮಾಡಿದರೆ ಕೆಲಸವನ್ನು ಅಲ್ಲೇ ಬಿಟ್ಟು ಓಡೋಡಿ ಬಂದು "ಉಂಡಾಯ್ತ್..ತಿಂದಾಯ್ತ್..ಸ್ನಾನ ಆಯ್ತ್..ಆಡ್ತ ಇಪ್ಕಾತ್ತಿಲ್ಯಾ? ನಂಗಿಲ್ಲಿ ಕುಂಡೆ ಊರುಕ್ ಪುರಸತ್ತಿಲ್ಲೆ..ನಿಂದೆಂತ ರಗಳೆ ಹೆಣೆ..?" ಎನ್ನುತ್ತ ಮಕ್ಕಳನ್ನೂ ಪ್ರೀತಿಯಿಂದ ನಿಭಾಯಿಸುವುದು...ನನಗೆ ಆ ಅಮ್ಮ ಈಗಲೂ ನೆನಪಾಗುತ್ತಾಳೆ. ಆದರೂ ಅಮ್ಮನ ಬದುಕಿನ ಸಂತೃಪ್ತ ದಿನಗಳವು ಎಂದೂ ನನಗೆ ಅನ್ನಿಸುತ್ತದೆ. ಏಕೆಂದರೆ ತಾನು ಮಾಡುತ್ತಿದ್ದ ಕರ್ಮಗಳನ್ನು ಅವಳು ಅಷ್ಟೊಂದು ತನ್ಮಯತೆಯಿಂದ - ಪ್ರೀತಿಯಿಂದ ಆಗ ಮಾಡುತ್ತಿದ್ದಳು. ಅಪ್ಪಯ್ಯ ಮತ್ತು ಅಮ್ಮನು ಪರಸ್ಪರ ಅನನ್ಯವಾಗಿ ಪ್ರೀತಿಸುತ್ತಿದ್ದು ತಮ್ಮ  ಮಕ್ಕಳಿಗೂ ಪ್ರೀತಿಯ ಸ್ನಾನ ಮಾಡಿಸುತ್ತಿದ್ದುದರಿಂದಲೇ ನನ್ನ ಬಾಲ್ಯವು ಇಂದಿಗೂ ಚಪ್ಪರಿಸುವಂತಿದೆ ಎಂದೂ ಅನ್ನಿಸುವುದಿದೆ. "ಪ್ರೀತಿ ಇದ್ದಲ್ಲಿ ತೃಪ್ತಿಯೂ ಇರುತ್ತದೆ" ಎಂಬ ನನ್ನ ಮಾತಿಗೆ - ಅಂದಿನ ನನ್ನ ಅಪ್ಪಯ್ಯ ಮತ್ತು ಅಮ್ಮನ ಬದುಕು - "ಹೌದು" ಎಂದು ತಲೆಯಾಡಿಸಿದಂತೆ ನನಗೆ ಕಾಣುತ್ತದೆ. ಅದು ಎಂತಹ ಪ್ರೀತಿ? ಹೇಳಲಾಗದ ಅದೃಶ್ಯ ಅನುಭವ...ಅಷ್ಟೆ.

ತನ್ನ ಮನೆ, ಹಿತ್ತಲು, ಹಟ್ಟಿಯ ಕೆಲಸಗಳನ್ನೆಲ್ಲ ಏಕಾಂಗಿಯಾಗಿ ಅಮ್ಮನು ಹೇಗೆ ನಿಭಾಯಿಸುತ್ತಿದ್ದಳೆಂದು ನನಗೆ ಆಶ್ಚರ್ಯವಾಗುತ್ತದೆ. ಅಪ್ಪಯ್ಯನು ಗಂಡಾಳಿನ ಕೆಲಸವನ್ನು, ಅಮ್ಮನು ಹೆಣ್ಣಾಳಿನ ಕೆಲಸವನ್ನು - ಮುಚ್ಚಟೆಯಿಂದ, ಉತ್ಸಾಹದಿಂದ ಮಾಡುತ್ತಿದ್ದ ದಿನಗಳವು. ಸಹಾಯಕ್ಕೆಂದು ಆಳನ್ನು ನೇಮಿಸಿಕೊಳ್ಳುವ ಆರ್ಥಿಕ ಚೈತನ್ಯವೂ ಆಗ ಇರಲಿಲ್ಲ. ಅಪ್ಪಯ್ಯನ ಅಧ್ಯಾಪಕ ವೃತ್ತಿಯ ಸಣ್ಣ ಸಂಬಳದ ಗಳಿಕೆಯನ್ನು ಪುಷ್ಟಿಗೊಳಿಸಲು ಮನೆಯ ಹಿತ್ತಲಿನಲ್ಲಿ ಸೊಪ್ಪು, ತರಕಾರಿಯನ್ನೂ ಬೆಳೆಸಿಕೊಳ್ಳುತ್ತಿದ್ದರು. ದಿನವೂ ಬೆಳಿಗ್ಗೆ ತೆಂಗು, ತರಕಾರಿ ಮತ್ತು ಹೂವಿನ ಗಿಡಗಳಿಗೆ ಬಾವಿಯಿಂದ ನೀರು ಸೇದಿ, ಹೊತ್ತು ಗಿಡಗಳಿಗೆ ಉಣ್ಣಿಸುತ್ತಿದ್ದರು. ತಮ್ಮ ಎರಡು ಕೈಯ್ಯಲ್ಲಿ ಕೊಡಪಾನಗಳನ್ನಿಟ್ಟುಕೊಂಡು ಓಡುತ್ತ ಅಪ್ಪಯ್ಯ ನೀರುಣಿಸುವುದು ನನಗಿನ್ನೂ ನೆನಪಿದೆ. ಅದು ಅವರ ನಿತ್ಯ ಕರ್ಮಗಳಲ್ಲಿ ಒಂದಾಗಿತ್ತು. ಕೊನೆಯಲ್ಲಿ ನೀರುಂಡ ಎಲ್ಲ ಗಿಡ ಮರಗಳನ್ನೂ ಒಮ್ಮೆ ನಿಂತು ನೋಡುತ್ತ ಖುಶಿ ಪಡುವ ಭಾವುಕ ಮನಸ್ಸು ಅಪ್ಪಯ್ಯನದಾಗಿತ್ತು. ಇಷ್ಟಾದ ಮೇಲೆ ಅಪ್ಪಯ್ಯನ ಸ್ನಾನ, ಪೂಜೆ, ಊಟ, ಶಾಲೆಗೆ ಓಟ. ಅಪ್ಪಯ್ಯನ ಮನೆಕೆಲಸಗಳು ಹೀಗೆ ಚದುರಿದಂತೆ ಕಂಡರೂ ಒಂದಲ್ಲ ಒಂದು ಕರ್ಮದಲ್ಲಿ ವ್ಯಸ್ತಳಾಗಿರುತ್ತಿದ್ದ ಅಮ್ಮನ ಕೆಲಸಗಳು ಮಾತ್ರ ಮುಗಿಯದ್ದು ಅನ್ನಿಸುತ್ತಿತ್ತು. ಆದರೆ ಅಮ್ಮನು ಕೆಲಸಕ್ಕೆ ಹಿಂಜರಿದದ್ದನ್ನು ಅಥವ ಕೆಲಸದ ಹೊರೆಯಿಂದ ಬಳಲಿಕೆಯಾದಾಗ ತನ್ನ ಬಡತನಕ್ಕಾಗಿ ಅಪ್ಪಯ್ಯನನ್ನು ಮೂದಲಿಸಿದ್ದನ್ನು ನಾನು ನೋಡಿಲ್ಲ. ಅದು ರೇಶನ್ ಅಕ್ಕಿ - ಬೇಳೆಯ ಕಾಲ. ಪ್ರತೀ ಬಾರಿಯೂ ಆ ಗಲೀಜು ಅಕ್ಕಿಯನ್ನು ಗೆರಸಿಯಲ್ಲಿ ಒಮ್ಮೆ ಗೇರಿ ಅವಳು ನಮ್ಮೆದುರಿಗೆ ಸುರಿಯುತ್ತಿದ್ದಳು. ಅನಂತರ ಅದನ್ನು ಹೆಕ್ಕಿ ಶುಚಿಗೊಳಿಸುವ ಕೆಲಸದಲ್ಲಿ ಕೆಲವೊಮ್ಮೆ ದೊಡ್ಡ ಮಕ್ಕಳ ಸಹಾಯವನ್ನೂ ಪಡೆಯುತ್ತಿದ್ದಳು. ಆ ಕಾಲದಲ್ಲಿ ಅಂಗಡಿಯಿಂದ ತರುತ್ತಿದ್ದ ಅಡುಗೆಯ ವಸ್ತುಗಳೆಲ್ಲವೂ ಕಲಬೆರಕೆಯ, ಕಡಿಮೆ ಗುಣಮಟ್ಟದವುಗಳೇ ಆಗಿರುತ್ತಿದ್ದವು. ಸ್ವಚ್ಚಗೊಳಿಸಿದ ವಸ್ತುಗಳು ಸಿಗುತ್ತಿರಲೇ ಇಲ್ಲ. "ಈ ಅಕ್ಕಿ, ಕೊತ್ತುಂಬರಿ, ಹುರುಳಿಯ ಕಸ ಕಲ್ಲುಗಳನ್ನು ಹೆಕ್ಕಿ ಹೆಕ್ಕಿ ಶುಚಿಗೊಳಿಸುವುದರಲ್ಲಿಯೇ ನನ್ನ ಕಣ್ಣಿನ ಅರ್ಧ ಶಕ್ತಿ ಹಾಳಾಯಿತು..." ಎಂದು ಅನಂತರದ ದಿನಗಳಲ್ಲಿ ಅಮ್ಮ ನೆನಪಿಸಿಕೊಳ್ಳುತ್ತಿದ್ದುದೂ ಇತ್ತು.

ಮಳೆಗಾಲಕ್ಕೆ ಬೇಕಾಗುವ ಸೌದೆಯನ್ನು ಆಗ ಬಿರು ಬೇಸಿಗೆಯ ಮೇ ತಿಂಗಳಿನಲ್ಲಿಯೇ ಸಂಗ್ರಹ ಮಾಡುತ್ತಿದ್ದರು. ಎತ್ತಿನ ಗಾಡಿಯಲ್ಲಿ ದೊಡ್ಡ ದಿಮ್ಮಿಗಳಂತಹ ಮರದ ತುಂಡುಗಳನ್ನು ತರಿಸುತ್ತಿದ್ದರು. ಆ ಮರದ ಇಡಿಯಾದ ಭಾಗವನ್ನು ತಮ್ಮ ಶಾಲೆ ಮುಗಿಸಿ ಬಂದ ಮೇಲೆ ಅಪ್ಪಯ್ಯನೇ ಕೊಡಲಿಯಿಂದ ಒಡೆಯುತ್ತಿದ್ದರು. ಒಲೆಗೆ ಹಾಕುವಷ್ಟು ದೊಡ್ಡ ತುಂಡುಗಳನ್ನು ಮಾಡುವ ಈ ಕೆಲಸವು ಏಳೆಂಟು ದಿನಗಳ ಕಾಲ - ಅಪ್ಪಯ್ಯನ ಬಿಡುವಿನ ಹೊತ್ತಿನಲ್ಲಿ ನಡೆಯುತ್ತಿತ್ತು. ಅಪ್ಪಯ್ಯನು ಒಡೆದು ರಾಶಿ ಹಾಕಿದ ಸೌದೆಯ ತುಂಡನ್ನು ನಾವು ಮಕ್ಕಳೆಲ್ಲರೂ ಅಟ್ಟದಲ್ಲಿ ಕೂಡಿಡಲು ಸಹಾಯ ಮಾಡುತ್ತಿದ್ದೆವು. ಅಮ್ಮನು ಅಟ್ಟದಲ್ಲಿ ಕೂತು ಆ ತುಂಡುಗಳನ್ನು ಶಿಸ್ತಿನಿಂದ ಕೂಡಿಸುತ್ತಿದ್ದಳು. ನಮ್ಮ ಕೈಯ ಅಳತೆಗೆ ಮತ್ತು ವಯಸ್ಸಿನ ಯೋಗ್ಯತೆಗೆ ತಕ್ಕಂತೆ ಅಪ್ಪಯ್ಯನು ಎರಡೋ ಮೂರೋ ಸೌದೆ ತುಂಡನ್ನು ನಾವು ಚಾಚಿದ ಎರಡೂ ಕೈಗಳ ಮೇಲೆ ಇಡುತ್ತಿದ್ದರು. ಅವನ್ನು ಅಮ್ಮನಿಗೆ ಕೊಡುವ ಕೆಲಸ ನಮ್ಮದಾಗಿತ್ತು. "ಸೌದೆಯ ಚೂರನ್ನು ಕೊಡುವಾಗ ಕೈಮೇಲಿಂದ ಜಾರಿಸಿ ತೆಗೆಯಬಾರದು. ಸಿಬಿರು (ಕೊಡಲಿಯಿಂದ ಒಡೆದ ಸೌದೆಯ ಮೈಯ್ಯಲ್ಲಿರುವ ಚೂಪಾದ ಬಿರುಸಾದ ಭಾಗ) ಚುಚ್ಚಬಹುದು. ಜಾಗ್ರತೆಯಿಂದ ಕೈಯಿಂದ ಎತ್ತಿ ಅಮ್ಮನಿಗೆ ಕೊಡಬೇಕು..." ಅಂತ ನಮಗೆ ಅಪ್ಪಯ್ಯನು ಎಚ್ಚರಿಕೆಯನ್ನೂ ಹೇಳುತ್ತಿದ್ದರು. (ಹಸುವಿಗಾಗಿ ಒಣಹುಲ್ಲನ್ನು ಅಟ್ಟದಲ್ಲಿ ಪೇರಿಸಿ ಇಡುವಾಗಲೂ ಹೀಗೆ ನಾವೆಲ್ಲರೂ ಸಾಂಘಿಕವಾಗಿ ದುಡಿಯುತ್ತಿದ್ದೆವು.)


ಹೀಗೆ ಸಂಜೆಯ ಹೊತ್ತಿನಲ್ಲಿ ದೇಹಶ್ರಮದ ಕೆಲಸವನ್ನು ನಡೆಸಿದಾಗ, ಕೆಲಸವು ಮುಗಿದ ಮೇಲೆ ಎಲ್ಲರೂ ಸ್ನಾನ ಮಾಡಿ ಅನಂತರ ನಿತ್ಯದ ಭಜನೆ, ಊಟ. ಅಂತಹ ದಿನಗಳಲ್ಲಿ ರಾತ್ರಿ ಮಲಗುವ ಮುನ್ನ ಅಪ್ಪಯ್ಯನು ಮಕ್ಕಳ ಕೈಯ್ಯನ್ನು ನೋಡುತ್ತಿದ್ದರು. "ಅಯ್ಯೋ, ಕೆಂಪಾಗಿದೆಯಲ್ಲ? ಭಾರ ಹೊತ್ತು, ಸೌದೆ ಹೊತ್ತು ನನ್ನ ಮಗಳ ಕೈಗೆ ನೋವಾಯಿತಲ್ಲ? ನೋವಿದೆಯಾ ಮಗಳೇ?.." ಎನ್ನುತ್ತಿದ್ದರು. ಆಗ ಸರಕ್ಕಂತ ಬಾಯಿ ಹಾಕುತ್ತಿದ್ದ ಅಮ್ಮನು - "ನಿಮ್ಮ ಮಗಳಿಗೆ ಏನೂ ಆಗುವುದಿಲ್ಲ. ನಾಳೆ ಎಲ್ಲವೂ ಸರಿಯಾಗಿರುತ್ತದೆ. ನೀವು ಸುಮ್ಮನೆ ಮಲಗಿ...ಅತಿ ಪ್ರೀತಿ ಮಾಡಿ ಮಕ್ಕಳನ್ನು ಬೆಳೆಸಬಾರದು. ಮಕ್ಕಳು ಕೆಲಸ ಮಾಡಿ ಮಾಡಿಯೇ ಗಟ್ಟಿಯಾಗಬೇಕು..." ಎಂದು ಹೇಳುತ್ತಲೇ ನಮ್ಮ ಮೈಕೈ ಸವರುತ್ತ ಅಮ್ಮನೇ ನಿದ್ದೆ ಮಾಡಿಸುತ್ತಿದ್ದಳು!

ಮನೆಗೆಲಸ ಮಾಡಿದಾಗ ಅಪ್ಪಯ್ಯನು ಅನುಕಂಪ ತೋರಿಸಿದಾಗೆಲ್ಲ ಅಮ್ಮನು ಸಿಡುಕುತ್ತಿದ್ದುದು ನನಗೆ ನೆನಪಾಗುತ್ತದೆ. ಅಂದು "ಅಪ್ಪಯ್ಯ ಒಳ್ಳೆಯವರು; ಅಮ್ಮ ಜೋರು..." ಅನ್ನಿಸಿದ್ದರೂ ಅಮ್ಮನ ಆ ಸಿಡುಕಿನ ಹಿಂದೆ ಮಹಾ "ಭಾವಯುದ್ಧ"ವೇ ನಡೆದಿರಬಹುದು ಎಂದು ಈಗ ನನಗನ್ನಿಸುತ್ತದೆ. "ಯಾರೇ ಆದರೂ ತಮ್ಮ ಮನೆಗೆಲಸವನ್ನು ಮಾಡಿದಾಗ ಅದು ಅವರ ಕರ್ತವ್ಯವೇ ಹೊರತು ಉಪಕಾರವಲ್ಲ. ಕುಟುಂಬದಲ್ಲಿ ಪ್ರತಿಯೊಬ್ಬರೂ ತಮಗೆ ಸಾಧ್ಯವಿರುವ ಕೆಲಸವನ್ನು ಮಾಡಲೇಬೇಕು. ಅವರವರ ವಯಸ್ಸಿಗೆ ತಕ್ಕಂತೆ ಕುಟುಂಬದ ಪಾಲುದಾರರಾಗಬೇಕು. ಹಾಗೆ ಕೆಲಸವನ್ನು ನಿರ್ವಹಿಸುವವರಿಗೆ ತಾವು ಕರ್ತವ್ಯವನ್ನು ನಿಭಾಯಿಸುತ್ತಿದ್ದೇವೆ ಎಂಬ ಭಾವನೆ ಇರಬೇಕು. ಮನೆಯ ಹಿರಿಯರು ತಮ್ಮ ಸಂತಾನ - ಕುಟುಂಬದ ಸದಸ್ಯರು  ಮಾಡುವ ನಿತ್ಯದ ಗೃಹಕೃತ್ಯಗಳಿಗೆಲ್ಲ ಮೆಚ್ಚುಗೆಯ ಅನುಮೋದನೆ ನೀಡುತ್ತ ಅಥವ ಕರುಣೆ ತೋರುತ್ತ - ದಿನವೂ ಉಪಚಾರಕ್ಕೆ ತೊಡಗಿದರೆ - ಅದು ಪರೋಕ್ಷವಾಗಿ ಕ್ಷಮಾಪಣೆ ಕೇಳಿದಂತೆಯೂ ಧ್ವನಿಸುತ್ತದೆ. ಹಾಗೆ ಉಪಚಾರ ಮಾಡಿದಾಗ ಕರ್ತವ್ಯದ ಭಾವವು ಹಿಂದೆ ಸರಿದು ಉಪಕಾರ ಮಾಡಿದ್ದೇವೆನ್ನುವ ಭಾವವು ಎಳೆಯ ಮನಸ್ಸಿನಲ್ಲಿ ಗಟ್ಟಿಯಾಗುತ್ತದೆ. ಮುಂದೆ ಅಂಥ ಮಕ್ಕಳು ತಾವು ಮಾಡುವ ಕೆಲಸಗಳಿಗೆಲ್ಲ ಇತರ ಎಲ್ಲರಿಂದಲೂ ಹೊಗಳಿಕೆ - ಉಪಕಾರ ಸ್ಮರಣೆಯೆಂಬ ಪ್ರತಿಫಲವನ್ನು ನಿರೀಕ್ಷಿಸುತ್ತಾರೆ. ಅಂತಹ ಮಕ್ಕಳಿಗೆ "ಇದು ನನ್ನ ಮನೆ" ಎಂಬ ಭಾವವು ಬಲಿಯುವುದೇ ಇಲ್ಲ. ಹೆತ್ತ ಅಪ್ಪ ಅಮ್ಮಂದಿರು ತಮ್ಮ ಮಕ್ಕಳನ್ನು ಹಾಗೆ ನೆಂಟರಂತೆ ನಡೆಸಿಕೊಂಡು ಕೊಬ್ಬಿಸಿ ಬೆಳೆಸಿದರೆ ಮುಂದೆ ಇನ್ನೊಬ್ಬರ ಮನೆಗೆ ಹೋಗುವ ಹೆಣ್ಣು ಮಕ್ಕಳು ಅಲ್ಲಿ ಬಾಳ್ವೆ ನಡೆಸುವುದು ಸಾಧ್ಯವೆ? ನಮ್ಮ ಮಕ್ಕಳು ಮಾಡಿದ್ದನ್ನೆಲ್ಲ ಹೊಗಳಿ ಎತ್ತರಿಸುವವರೇ ಸಂಗಾತಿಯಾಗಿ ಒದಗುವ ಭರವಸೆ ಯಾರಿಗಾದರೂ ಇದೆಯೆ? ನಾವಿಬ್ಬರೂ ಒಬ್ಬರಿಗೊಬ್ಬರು ದಿನವೂ ಉಪಕಾರಸ್ಮರಣೆ ಮಾಡುತ್ತಿದ್ದೇವೇನು? ನಾನು ನಿಮ್ಮಿಂದ ಅದನ್ನು ನಿರೀಕ್ಷಿಸಿದರೆ ದಿನವೂ ಅಂತಹ ನಾಟಕ ಮಾಡಲು ನಿಮಗೆ ಸಾಧ್ಯವಿದೆಯೆ? ಆದ್ದರಿಂದ ಹೊಗಳಿಕೆಯನ್ನು ನಿರೀಕ್ಷಿಸುವಂತೆ ಮಕ್ಕಳನ್ನು ರೂಪಿಸಬಾರದು. ಪ್ರೀತಿ ತೋರಿಸುವ ರೀತಿಯು ಅದಲ್ಲ. ಮನೆಯ ಮಕ್ಕಳಿಗೆ ತಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ಮಾತ್ರ ಕಲಿಸಬೇಕು..." ಎಂಬ ದೂರದೃಷ್ಟಿಯು ಅಮ್ಮನಲ್ಲಿತ್ತು. "ನಮ್ಮ ನಮ್ಮ ಮನೆಯ ಕೆಲಸವನ್ನು ಶ್ರದ್ಧೆಯಿಂದ ಮಾಡುವುದು; ಎದ್ದು ಹೋಗುವುದು" ಎಂಬ ನಿರ್ಲಿಪ್ತ ಶೈಲಿಯು ಅಮ್ಮನು ಒಪ್ಪಿ ಆಚರಿಸಿದ ಗೃಹಕೃತ್ಯದ ವಿಧಾನವಾಗಿತ್ತು.


ಆದರೆ ತನ್ನ ಮಕ್ಕಳ ಶೈಕ್ಷಣಿಕ ಏಳ್ಗೆ, ಕಲಾ ಕ್ಷೇತ್ರದ ಯಶಸ್ಸುಗಳನ್ನು ಕಂಡಾಗ - ಪ್ರೋತ್ಸಾಹದ ಭಾವದಲ್ಲಿ ಅಮ್ಮನೂ ನಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡದ್ದಿದೆ. ಅದು ಮೌನ ಸಂವಹನ - ಅಷ್ಟೆ. ಮನೆಯ ಮಕ್ಕಳನ್ನು ಹೊಗಳಲು ಅವಳು ಎಂದೂ ಅಷ್ಟಾಗಿ ಮಾತನ್ನು ಬಳಸಿದವಳಲ್ಲ. ತನ್ನ ಮಕ್ಕಳ ಕುರಿತ ಅಭಿಮಾನವನ್ನು ಮಕ್ಕಳ ಎದುರಿನಲ್ಲಂತೂ ಅಮ್ಮನು ಎಂದೂ ಬಯಲುಗೊಳಿಸುತ್ತಿರಲಿಲ್ಲ. ಅಪ್ಪಯ್ಯನ ಕಾಲಾನಂತರ ಎಲ್ಲ ಮಕ್ಕಳಲ್ಲೂ ಪರಸ್ಪರ ಸೌಹಾರ್ದವಿರುವಂತೆ ಮಾಡಲು ತನ್ನ ಶೈಲಿಯನ್ನು ಸ್ವಲ್ಪ ಸುಧಾರಿಸಿಕೊಂಡಿದ್ದಳು. ತನ್ನ ಇನ್ನೊಬ್ಬಳು ಮಗಳನ್ನು ನನ್ನೆದುರು ಮೆಚ್ಚಿಕೊಳ್ಳುತ್ತಿದ್ದಳು; ನನ್ನನ್ನು ಕುರಿತು  ಇನ್ನೊಬ್ಬಳೆದುರು ಹೇಳುತ್ತಿದ್ದಳು. "ನೀನೊಬ್ಬಳೇ ಜಾಣೆಯಲ್ಲ; ಬೇರೆ ಮಕ್ಕಳೂ ವಿಭಿನ್ನ ವಿಷಯಗಳಲ್ಲಿ ಬುದ್ಧಿವಂತರಿದ್ದಾರೆ. ನಿನ್ನಲ್ಲಿ ಒಂದು ವಿಶೇಷತೆಯಿದೆ; ಅವರಲ್ಲಿ ಇನ್ನೊಂದಿದೆ..." ಎನ್ನುತ್ತಲೇ - ಅವಳು ಎಲ್ಲ ಮಕ್ಕಳ ತಲೆಯನ್ನು ಮೊಟಕುತ್ತ ಸವರುತ್ತ ತನ್ಮೂಲಕ ಎಲ್ಲ ಮಕ್ಕಳೂ ಸೌಹಾರ್ದದ ಬಳಕೆಯನ್ನು ಉಳಿಸಿಕೊಳ್ಳುವಂತೆಯೂ ಮಾಡಿ, ತನ್ನ ವಿಸ್ತೃತ ಸಂಸಾರವನ್ನು ಅಲುಗದಂತೆ ಕಟ್ಟಿದ್ದಳು. ಅಪ್ಪಯ್ಯನಿಗೆ ವಯಸ್ಸಾದ ನಂತರ - ಕೆಲವೊಮ್ಮೆ - ಭಾರೀ ತೂಕದ ಶಬ್ದಗಳನ್ನು ಉಪಯೋಗಿಸುತ್ತ "ನಮ್ಮ ನಾರಾಯಣಿ.." ಎನ್ನುತ್ತ ಹೊಗಳುವಾಗಲೂ ಅಮ್ಮನು ಅವರನ್ನು ಆಗ ತಡೆಯುತ್ತಿದ್ದುದು ನನಗೆ ನೆನಪಿದೆ. "ನಮ್ಮ ಮಕ್ಕಳನ್ನು ನಾವೇ ಹೊಗಳಬಾರದು" ಎಂಬ ಸೂತ್ರವನ್ನು ಅಮ್ಮನು ಕೊನೆಯವರೆಗೂ ಪಾಲಿಸಿದ್ದಳು. ಮುಖಸ್ತುತಿಯು ಅಧಃಪತನದತ್ತ ಕೊಂಡೊಯ್ಯುವ ಸಾಧನ ಎಂಬುದು ಅಮ್ಮನ ಸಿದ್ಧಾಂತವಾಗಿತ್ತು. ಹಾಗೆಂದು ಅಮ್ಮನ ಪ್ರೀತಿಯಲ್ಲಿ ಮಾತ್ರ ನಮಗೆ ಯಾವ ಕೊರತೆಯೂ ಆದಂತೆ ಅನ್ನಿಸಿರಲಿಲ್ಲ. ತನ್ನ ಪೂರ್ಣತೆಯ ಸ್ಪರ್ಶದಲ್ಲೋ ಮಕ್ಕಳ ದೈಹಿಕ ಸೇವೆ ಮಾಡುವುದರಲ್ಲೋ ನಮಗೆ ಪ್ರಿಯವಾದ ಅಡುಗೆ ಮಾಡಿ ಉಣ್ಣಿಸುವುದರಲ್ಲೋ ಮಕ್ಕಳ ಭವಿಷ್ಯದ ಚಿಂತೆಯಲ್ಲೋ...ಅಂತೂ - ಅದು ಹೇಗೋ ಅಮ್ಮನು ನಮ್ಮ ಪ್ರೀತಿಯ ಆಧಾರವಾಗಿಯೇ ಇದ್ದಳು. ಅಮ್ಮನ ನಿಖರ ಲೆಕ್ಕಾಚಾರದ ಬದುಕಿನ ಶೈಲಿಯನ್ನು ನೋಡುತ್ತಿದ್ದ ಅಪ್ಪಯ್ಯನು ಒಮ್ಮೊಮ್ಮೆ ಮೆಚ್ಚುಗೆಯ ಮುಗುಳ್ನಗೆ ಸೂಸುತ್ತಿದ್ದುದೂ ಇತ್ತು.   ಅಂತೂ ಹೇಗೋ ತನ್ನ ಲೆಕ್ಕದ ಅಳತೆಯಲ್ಲಿಯೇ ಸಂಸಾರವನ್ನು ಗಟ್ಟಿಗೊಳಿಸಿದ ಅಮ್ಮ ಅವಳು. ಹೀಗೆ ಪ್ರತ್ಯಕ್ಷ ಪ್ರೀತಿ ತೋರುತ್ತಿದ್ದ ಭಾವುಕ ಅಪ್ಪಯ್ಯ, ಪರೋಕ್ಷ ಪ್ರೀತಿ ತೋರುತ್ತಿದ್ದ ವ್ಯಾವಹಾರಿಕ ಅಮ್ಮನ ಆಶ್ರಯದಲ್ಲಿ ನಮ್ಮ ಬಾಲ್ಯವು ಬೆಳದಿಂಗಳಾಗಿತ್ತು.

ಅಮ್ಮನು ರಾತ್ರಿ ನಿದ್ರಿಸುವಾಗ ತನ್ನ ಅತೀ ಸಣ್ಣ ಮಗುವನ್ನು ತನ್ನ ಹತ್ತಿರವೇ ಮಲಗಿಸಿಕೊಳ್ಳುತ್ತಿದ್ದಳು. ಅದಕ್ಕಿಂತ ದೊಡ್ಡ ಮಗುವು ಅಪ್ಪಯ್ಯನ ಹತ್ತಿರ, ಉಳಿದವರೆಲ್ಲರೂ ಅನಂತರ - ಸಾಲಾಗಿ ಚಾವಡಿಯಲ್ಲಿ ಮಲಗಿ ನಿದ್ರಿಸುತ್ತಿದ್ದೆವು. ಅಪ್ಪಯ್ಯನನ್ನು ಬಿಟ್ಟರೆ ನಾವೆಲ್ಲರೂ ಹೆಂಗಸರು. ಬಾಗಿಲೇ ಇಲ್ಲದ ಆ ಚಾವಡಿಯಲ್ಲಿ ಅಷ್ಟು ನಿಶ್ಚಿಂತೆಯಿಂದ ನಾವು ನಿದ್ರಿಸುತ್ತಿದ್ದುದಾದರೂ ಹೇಗೆ? ಎಂದು ಈಗಲೂ ಆಶ್ಚರ್ಯವಾಗುತ್ತದೆ; ಯೋಚಿಸಿದರೆ ಒಮ್ಮೊಮ್ಮೆ ಭಯವೂ ಆಗುತ್ತದೆ. ಆ ಚಾವಡಿಯಲ್ಲಿ ಮಲಗಿಕೊಂಡೇ ನಾವು ರಾಜಬೀದಿಯನ್ನು ನೋಡಬಹುದಾಗಿತ್ತು! ಹಾಗಿತ್ತು ಆ ಮನೆ. ಆದ್ದರಿಂದಲೇ ಉಡುಪ ದಂಪತಿಗಳ ಮುಚ್ಚು ಮರೆಯಿಲ್ಲದ ಮನಸ್ಸಿನ ಪ್ರತೀಕದಂತೆ - ಜೇನುಗೂಡಿನಂತಿದ್ದ ಆ ಮನೆಯು ಈಗಲೂ ನನ್ನೊಳಗೆ ಭದ್ರವಾಗಿ ಕೂತಿದೆ. ಮನುಷ್ಯರ ಭಯವಿಲ್ಲದೆ ಬದುಕಬಹುದಾದ ಯಾವುದೇ ಪರಿಸರವಿದೆಯೆಂದಾದರೆ ಅದಕ್ಕಿಂತ ಹೆಚ್ಚಿನ ಸ್ವಾತಂತ್ರ್ಯ ಸುಖವು ಬೇಕೆ? ಬಹುಶಃ ಅಂದು ದುರಾಸೆಗೂ ಅಂಕೆಯಿದ್ದ ಸಮಾಜವಿತ್ತು. ಯಾರೂ ಭಯಂಕರ SMART ಆಗಿರಲಿಲ್ಲ. ಆದ್ದರಿಂದ ಅಂದಿನ ಜನರು ಬದುಕಿಕೊಂಡರು. ಅಂಕೆಯುಳ್ಳ ಸಭ್ಯ ಸಮಾಜದಲ್ಲಿ ಮಾತ್ರ ಸ್ವಚ್ಛ ಸ್ವಾತಂತ್ರ್ಯದ ರುಚಿಯು ಅನುಭವಕ್ಕೆ ಬರುತ್ತದೆ! ಅಲ್ಲವೆ?

ನನ್ನ ಬಾಲ್ಯಕಾಲದಲ್ಲಿ, ಭಾನುವಾರ ಎಂದರೆ ಎಲ್ಲರೂ ನಿರಾಳವಾಗಿ ಮನೆಯಲ್ಲಿಯೇ ಇರುತ್ತಿದ್ದ ದಿನ. ಆದರೆ ಅಮ್ಮನ ಪಾಲಿಗೆ ಮಾತ್ರ ಹೆಚ್ಚು ಕೆಲಸವಿರುತ್ತಿದ್ದ ದಿನವೇ ಭಾನುವಾರ. ಆಟದ ಸಮಯವೆಲ್ಲವೂ ವ್ಯರ್ಥವಾಗುತ್ತಿದೆ...ಎಂದು ಭಾವಿಸುತ್ತಿದ್ದ -  ತಂಟೆಮಂಡೆಯಾಗಿದ್ದ ನನಗಂತೂ ಅಂದಿನ ದಿನಗಳಲ್ಲಿ, ಭಾನುವಾರವು ಬಂತೆಂದರೆ ಅದು ಶಿಕ್ಷೆಯ ದಿನ - ಎಂದೂ ಅನ್ನಿಸುತ್ತಿತ್ತು. ಭಾನುವಾರದಂದು ಒಳ್ಳೆಯ Ring master ರಂತೆ ಅಮ್ಮನು ವರ್ತಿಸುತ್ತಿದ್ದಳು. ತಿಂಗಳಲ್ಲಿ ಎರಡು ಭಾನುವಾರಗಳಂದು ಬೆಳಿಗ್ಗೆ ಎದ್ದ ಕೂಡಲೇ ಒಂದಷ್ಟು ಕಹಿ ಬೇವಿನ ಕಷಾಯವನ್ನು ಕುಡಿಸುತ್ತಿದ್ದಳು. ನಮ್ಮ ಮನೆಯಲ್ಲಿ ಅಮ್ಮನನ್ನು ಬಿಟ್ಟು ಉಳಿದ ಎಲ್ಲರೂ ವಿಪರೀತವೆನ್ನುವಷ್ಟು ಬೆಲ್ಲದೋಪಾಸಕರಾಗಿದ್ದರು. ಆದ್ದರಿಂದ ಆಗಾಗ ಕಹಿ ಕುಡಿಯಬೇಕು - ಎಂಬುದು ಅಮ್ಮನ ವೈದ್ಯಶಾಸ್ತ್ರವಾಗಿತ್ತು. ಕಹಿ ಕುಡಿಯುವಾಗ ಅಪ್ಪಯ್ಯನೇ ನಮ್ಮ ಪ್ರತಿಭಟನೆಯ ನೇತೃತ್ವ ವಹಿಸುತ್ತಿದ್ದರು. ಆದರೆ ಯಾರ ಆಟವೂ ನಡೆಯುತ್ತಿರಲಿಲ್ಲ. ಮೊದಲು ಅಪ್ಪಯ್ಯನೇ ಕಹಿಯನ್ನು ಕುಡಿಯಬೇಕಿತ್ತು. ಪಾಪ. ಗಟಗಟ ಕುಡಿದು ತಾವು ಉಡುತ್ತಿದ್ದ ಪಾಣಿಪಂಚೆಯಲ್ಲಿಯೇ ಅಪ್ಪಯ್ಯನು ಮನೆಯಿಂದ ದೂರ ಹೋಗಿ ಸ್ವಲ್ಪ ಹೊತ್ತು ನಿಂತು ಸುಧಾರಿಸಿಕೊಂಡು ಬರುತ್ತಿದ್ದರು. ಅಷ್ಟರೊಳಗೆ ದೊಡ್ಡ ಮಕ್ಕಳಿಗೆ ಹೆದರಿಸಿ, ಸಣ್ಣ ಮಕ್ಕಳನ್ನು ರಮಿಸಿ ಅಂತೂ ಅಮ್ಮನ ಕಷಾಯದ ಸಮಾರಾಧನೆ ಮುಗಿಯುತ್ತಿತ್ತು. ಕೊನೆಯಲ್ಲಿ ತಾನೂ ಕುಡಿಯುತ್ತಿದ್ದಳು. ಆಮೇಲೆ ಕಹಿ ಕುಡಿದು ಸುಸ್ತಾಗಿ ಅಳುತ್ತಿದ್ದ ಸಣ್ಣ ಮಕ್ಕಳನ್ನು ಎತ್ತಿಕೊಂಡು ಸಮಾಧಾನವನ್ನೂ ಮಾಡುತ್ತಿದ್ದಳು. ಎತ್ತಿಕೊಂಡು ತೋಟದಲ್ಲೆಲ್ಲ ತಿರುಗಾಡಿಸಿ ಅಳುವನ್ನು ಮರೆಸುತ್ತಿದ್ದಳು. ಇಷ್ಟಾದರೂ ತೋಟದ ಮೂಲೆ ಸೇರಿದ್ದ ಅಪ್ಪಯ್ಯನು ಮನೆಗೆ ಹಿಂದಿರುಗದಿದ್ದರೆ ತಾನೇ ಹೋಗಿ ಕರೆತರುತ್ತಿದ್ದಳು. ಆಗ ಮುಖ ಊದಿಸಿಕೊಂಡು ಬರುವ ಅಪ್ಪಯ್ಯನ ಮುಖ ಈಗಲೂ ನೆನಪಾಗುತ್ತದೆ. (ಕೆಲವೇ ವರ್ಷಗಳಲ್ಲಿ ಅಪ್ಪಯ್ಯನಿಗೆ ಮಧುಮೇಹವು ಪೀಡಿಸತೊಡಗಿದಾಗ ತಮಗಾಗಿ ಅಪ್ಪಯ್ಯನೇ ಕೊಂಡು ತರುತ್ತಿದ್ದ ಹಾಗಲಕಾಯಿಯಿಂದ - ಅಮ್ಮನು ರಸವನ್ನು ತೆಗೆದು  ಕೊಡುತ್ತಿದ್ದಾಗ ಯಾವ ಪ್ರತಿಕ್ರಿಯೆಯನ್ನೂ ತೋರಿಸದೆ ಅಪ್ಪಯ್ಯ ಕುಡಿಯುತ್ತಿದ್ದರು; ಆಗ ಮರೆಯಲ್ಲಿ ನಿಂತು ಅಮ್ಮ ಅಳುತ್ತಿದ್ದಳು. ಸಿಹಿಯನ್ನು ತುಂಬ ಇಷ್ಟ ಪಡುತ್ತಿದ್ದ ಅಪ್ಪಯ್ಯನು ಮುಂದೆಂದೂ ಸಿಹಿಗಾಗಿ ಬಯಸಲಿಲ್ಲ. ಕೊನೆಯ ಭಾಗದಲ್ಲಿ ಬರೇ ಕಹಿಯನ್ನೇ ಉಂಡು ಉಂಡು ಅವರು ಹೊರಟು ಹೋದರು.)

ಮುಂದೆ...ಅಮ್ಮನು ಕಾಲಮೇಘ, ಕುಟಜಾರಿಷ್ಟ...ಇತ್ಯಾದಿ ಆಯುರ್ವೇದದ ಕಷಾಯಗಳನ್ನು ತರಿಸಿಕೊಂಡು ಬೇವಿನ ಕಷಾಯದ ಬದಲು ಒಮ್ಮೊಮ್ಮೆ ಅದನ್ನೂ ಕೊಡುತ್ತಿದ್ದಳು. ಒಂದು ಎರಡು ಚಮಚದಷ್ಟು ಮಾತ್ರ ಕೊಡುತ್ತಿದ್ದ ಆ ಸಿದ್ಧ ಔಷಧಗಳನ್ನು ಹೆಚ್ಚು ನರಳದೆ ನಾವು ಕುಡಿಯುತ್ತಿದ್ದೆವು. ಹೇಗಿದ್ದರೂ ಕಷ್ಟವು ತಪ್ಪಿದ್ದಲ್ಲ ಎಂದ ಮೇಲೆ ಅದನ್ನು ಅನುಭವಿಸಿ ಜೀರ್ಣಿಸಿಕೊಳ್ಳುವುದೇ ಜಾಣತನ ಎಂಬ ನಿರ್ಧಾರಕ್ಕೆ ಆಗ ನಾವೆಲ್ಲರೂ ಬಂದಿದ್ದೆವು.   

ಇನ್ನು ವಾರಕ್ಕೊಮ್ಮೆ ಮಕ್ಕಳಿಗೆ ಎಣ್ಣೆಸ್ನಾನ ಮಾಡಿಸುವುದು ಅಮ್ಮ ಕೈಗೊಂಡ ವ್ರತದಂತೆ ನನಗೆ ಕಂಡಿದೆ. ಅದಿತ್ಯವಾರದಂದು ಅಭ್ಯಂಜನ ಸ್ನಾನವು ನಮಗೆ ತಪ್ಪುತ್ತಿರಲಿಲ್ಲ. ನಮ್ಮ 5 - 6 ನೇ ತರಗತಿಯ ವರೆಗೂ ನಮ್ಮ ಮನೆಯಲ್ಲಿ ಪ್ರತೀ ಭಾನುವಾರ ಎಣ್ಣೆ ಸ್ನಾನದ ಪದ್ಧತಿ ಇತ್ತು. ಅದು ಅಮ್ಮನೇ ಮಾಡಿಸುವ ಎಣ್ಣೆ ಸ್ನಾನ. ಅಪ್ಪಯ್ಯನಿಂದ ಹಿಡಿದು ಎಲ್ಲ ಮಕ್ಕಳಿಗೂ ಅದು ಕಡ್ಡಾಯವಾಗಿತ್ತು. ಅಮ್ಮನು ಎಲ್ಲರ ಮೈ - ತಲೆಗೂ ಎಣ್ಣೆ ಬಳಿದ ಮೇಲೆ ಅರ್ಧ ಗಂಟೆ ಕಾಲ ಸುಮ್ಮನೆ ಕುಳಿತಿರಬೇಕಿತ್ತು. ಆಮೇಲೆ ಎಣ್ಣೆ ಹಾಕಿದ Seniority ಯಂತೆ ಒಬ್ಬೊಬ್ಬರಿಗೇ ಸ್ನಾನ ಮಾಡಿಸುತ್ತಿದ್ದಳು. ಬಚ್ಚಲಿನ ಒಲೆಯಲ್ಲಿ  ಸೌದೆಯ ಬೆಂಕಿಯಲ್ಲಿ ನೀರು ಕಾಯಿಸಿ, ಒಬ್ಬೊಬ್ಬರನ್ನೇ ಸ್ನಾನ ಮಾಡಿಸಿ ಅಮ್ಮನು ಹೊರಗೆ ಕಳಿಸುತ್ತಿದ್ದಳು. ಆ ಸೌದೆಯ ಬೆಂಕಿಯ ಪರಿಮಳ, ಹಸಿ ಸೌದೆಯಾದರೆ ಅದರ ಹೊಗೆ ಮಿಶ್ರಿತ ಘಾಟು...ಎಲ್ಲವೂ ಈಗಲೂ ಹಸಿಯಾಗಿವೆ. ಈ ಭೂಮಿಯನ್ನು ನಾವು ಪ್ರೀತಿಸುವಂತೆ ಮಾಡುತ್ತಿದ್ದ ಕ್ಷಣಗಳವು. ತನಗೆ ದೈಹಿಕವಾಗಿ ಸುಸ್ತು ಅನ್ನಿಸಿದರೂ ಅಮ್ಮನು ಯಾವತ್ತೂ ಈ ಎಣ್ಣೆ ಸ್ನಾನವನ್ನು ನಿಲ್ಲಿಸಿದವಳಲ್ಲ. ಆದರೆ ಅಂತಹ ದಿನಗಳಲ್ಲಿ ಮಕ್ಕಳಿಗೆ ಎಣ್ಣೆ ಹಾಕುವಾಗ, ಸ್ನಾನ ಮಾಡಿಸುವಾಗ ಅವಳಿಗೆ ಸಹಕರಿಸದೆ ಮಕ್ಕಳು ಅತ್ತಿತ್ತ ಸರಿದಾಡಿದರೆ ಒಮ್ಮೊಮ್ಮೆ ಗದರಿಸುವುದು, ಬೆನ್ನಿಗೆ ಗುದ್ದುವುದೂ ಇತ್ತು. ಮಕ್ಕಳ ಪ್ರಾಯಕ್ಕೆ ಹೊಂದಿಕೊಂಡು ಅಪ್ರಚೋದಿತವಾಗಿ ಅಮ್ಮನ ಶಿಕ್ಷೆಯ ಶೈಲಿಯು ಬದಲಾಗುತ್ತಿತ್ತು!

ನಾವು ದೊಡ್ಡವರಾದ ನಂತರವೂ ಎಣ್ಣೆಸ್ನಾನ ಮಾಡುವಂತೆ ಒಂದೆರಡು ಬಾರಿ ನೆನಪಿಸಿ - ಅವಳ ಮಾತನ್ನು ಅನಂತರವೂ  ಕಾರ್ಯಗತಗೊಳಿಸದೆ ದಿನದೂಡುತ್ತಿರುವ ಸಂಶಯ ಬಂದಾಗ, ಕೊನೆಗೊಮ್ಮೆ ನಮಗೆ ಗದರಿಸುತ್ತಿದ್ದುದೂ ಇತ್ತು. ಅಪ್ಪಯ್ಯನು ಪಕ್ಷವಾತಕ್ಕೆ ತುತ್ತಾಗಿ ಸುಮಾರು ಐದು ವರ್ಷಗಳ ಕಾಲ ಪರಾವಲಂಬಿಯಾಗಿದ್ದಾಗ, ಅವರಿಗೆ ಪ್ರತೀ ದಿನವೂ ಎಣ್ಣೆ ಸ್ನಾನವನ್ನು ಮಾಡಿಸುತ್ತಿದ್ದ ಅಮ್ಮನು ಎಂದೂ ಅದನ್ನು ತಪ್ಪಿಸಿದವಳಲ್ಲ. ಹಿರಿಯರನ್ನು ಸ್ನಾನ ಮಾಡಿಸುವುದು ಎಂತಹ ಆಯಾಸದ ಕೆಲಸ - ಎಂಬುದನ್ನು ಹಾಗೆ ದುಡಿದವರು ಮಾತ್ರ ಬಲ್ಲರು.

ಮಿತಿ ಮೀರಿದ ಸಂಬಳವನ್ನು ಎಣಿಸುತ್ತಿರುವ ಇಂದಿನ ಕೆಲವು ಉದ್ಯೋಗಿಗಳು ತಮ್ಮ ಮನೆಯಲ್ಲೇ Nurse ಇರಿಸಿ ಅಥವ ಯಾವುದೋ ಆಸ್ಪತ್ರೆಯಲ್ಲಿ ಖಾಯಂ ಕೊಠಡಿಯನ್ನು ಏರ್ಪಡಿಸಿ - ತಮ್ಮ ಹೆತ್ತವರನ್ನು ವೈಭವದಿಂದ ಇರಿಸಿದ್ದೇನೆ - ಎಂದುಕೊಳ್ಳುತ್ತಿರುವ ಕಲಿಗಾಲ ಇದು. ಎಷ್ಟು ದುಡ್ಡಿದ್ದರೂ "ಸಾಕು" ಅನ್ನಿಸದ ಈ ದಿನಗಳಲ್ಲಿ ಮನೆಯ ಎಲ್ಲರೂ ದುಡಿಮೆಗೆ ಇಳಿಯುತ್ತಿರುವುದರಿಂದ ಮುದುಕರ ಸೇವೆಗೆ ಆಳನ್ನು ನೇಮಿಸಿಕೊಳ್ಳುವುದೂ ಸಹಜವಾಗುತ್ತಿದೆ! ತಮ್ಮ ಹೆತ್ತವರನ್ನು ವೃದ್ಧಾಶ್ರಮಕ್ಕೆ ಸೇರಿಸದೆ "ಅಷ್ಟಾದರೂ" ನೋಡಿಕೊಳ್ಳುತ್ತಿರುವ ಅಂತಹ ಮಕ್ಕಳು - ಅವರ ಬೆನ್ನನ್ನು ಅವರೇ ತಟ್ಟಿಕೊಳ್ಳುತ್ತ ಉಪಕಾರ ಮಾಡಿದಂತೆ ಬೀಗುವ ದೃಶ್ಯವೂ ಅಲ್ಲಲ್ಲಿ ಕಾಣಿಸುತ್ತಿರುತ್ತದೆ. ಅದೊಂದು ಕಾಲದಲ್ಲಿ ಬೆನ್ನುಬಿಡದೆ ತಮ್ಮನ್ನು ರಕ್ಷಿಸಿದ್ದ ಹೆತ್ತವರ ವೃದ್ಧಾವಸ್ಥೆಯು ಹೊರೆಯಾದಂತೆ ಭಾವಿಸಿ, ಕೇವಲ ಪ್ರತಿಷ್ಠೆ ಮೆರೆಸುವ ಸಾಧನದಂತೆ - ಪ್ರೀತಿಯಿಲ್ಲದೆ ನಡೆಸುವ ಅಂತಹ ಯಾವುದೇ ವೈಭವದ ಸೇವೆಯು - ಹೊರ ಕಣ್ಣುಗಳಿಗೆ ಉಪಕಾರ ಸ್ಮರಣೆಗೆ ಯೋಗ್ಯವೆಂದು ಅನ್ನಿಸಿದರೂ ಅಂತಹ ಸ್ಥಳದಲ್ಲಿ ಸೇವೆಯನ್ನು ಪಡೆಯುವ ಹಿರಿಯರು ಕ್ಷಣಕ್ಷಣವೂ ನೋಯುತ್ತಿರುತ್ತಾರೆ. ದೈಹಿಕವಾಗಿ, ಮಾನಸಿಕವಾಗಿ ದುರ್ಬಲವಾಗುವ ವೃದ್ಧಾಪ್ಯದ ಹೊತ್ತಿನಲ್ಲಿ ಅವರ ಮಕ್ಕಳೇ ತಮ್ಮ ಕೈಯ್ಯಿಂದ ಆ ಹಿರಿಯ ಜೀವಿಗಳ ಆರೈಕೆ ಮಾಡಿದರೆ ಸಿಗುವ ಸುಖವು "ಪಂಚತಾರಾ ವೈಭವ"ದಲ್ಲಿ ಎಂದೂ ಸಿಗಲಾರದು. ಪ್ರತೀದಿನವೂ ಸ್ವಲ್ಪ ಹೊತ್ತು ವೃದ್ಧ ಹೆತ್ತವರ ಜೊತೆಯಲ್ಲಿ ಕೂತು ಮೈಕೈ ನೇವರಿಸುತ್ತ ಪ್ರಿಯವಾದ ಮಾತನಾಡುವುದೂ "ಸಾತ್ವಿಕ ಭರವಸೆಯ ಸೇವೆ" ಅನ್ನಿಸಿಕೊಳ್ಳುತ್ತದೆ. ಮಕ್ಕಳಲ್ಲಿರುವ ಸಂಸ್ಕಾರ - ಸಂಸ್ಕೃತಿಯ ಸತ್ತ್ವಪರೀಕ್ಷೆಯ ಕಾಲವದು. ಮಕ್ಕಳು ತಮ್ಮ ದಿನಚರಿಯನ್ನು ಆಮೂಲಾಗ್ರವಾಗಿ ಪುನಃ  ರೂಪಿಸಿಕೊಳ್ಳಬೇಕಾದ ಸಮಯವದು. ದೈಹಿಕ ಬವಣೆಗೆ ಒಳಗಾದವರಲ್ಲಿ ಅವರ ಮಕ್ಕಳು ಮೂಡಿಸುವ ಭದ್ರ, ಸಾರ್ಥಕ ಭಾವವು - ಹಿಂದಿರುಗಿಸಲಾಗದ ಸೇವಾ ಪ್ರಶಸ್ತಿ.

ಅಂದು ನನ್ನ ಅಪ್ಪಯ್ಯನು ಅನಾರೋಗ್ಯದಲ್ಲಿದ್ದಾಗ ಪ್ರೀತಿಯಿಂದ ಸೇವೆ ಮಾಡುತ್ತಿದ್ದ ಅಮ್ಮನ ರೂಪದಲ್ಲಿ - ಅಂತಹ ಅದೃಷ್ಟವನ್ನು ಪಡೆದಿದ್ದರು. ಹಾಗೆ ದುರ್ಬಲರಾಗಿ ಮಲಗಿದವರನ್ನು ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಸ್ನಾನ ಮಾಡಿಸುತ್ತಿದ್ದುದನ್ನು - ಕ್ಷೌರ ಮಾಡುತ್ತಿದ್ದುದನ್ನು ನಾನು ನನ್ನ ಬಾಲ್ಯ ಕಾಲದಲ್ಲಿ ನೋಡಿದ್ದೇನೆ; ಅವರನ್ನು "ಸಾಯುವುದಕ್ಕೆ ಬಿಟ್ಟಂತೆ" ನನಗೆ ಆಗ ಕಾಣಿಸಿದ್ದಿದೆ. ಅಪ್ಪಯ್ಯನು ಪರಾವಲಂಬಿಯಾಗಿದ್ದಾಗ ತನ್ನ ಮಕ್ಕಳನ್ನೂ ಜತೆಗಿರಿಸಿಕೊಂಡು ತನ್ನ ದೇಹವು ಹುಡಿಯಾಗುವಷ್ಟು ದುಡಿದ ಅಮ್ಮ - ಎಂದೂ "ಕಷ್ಟ" ಎಂಬ ಶಬ್ದವನ್ನೂ ಉಸುರಿದವಳಲ್ಲ. ಅಮ್ಮನು ಪ್ರೀತಿಯಿಂದಲೇ ತನ್ನ ಕರ್ತವ್ಯವನ್ನು ನಿಭಾಯಿಸಿದ ಪರಿಯನ್ನು ಈಗ ನೆನಪಿಸಿಕೊಂಡಾಗಲೆಲ್ಲ ಅಮ್ಮನ ಕರ್ಮಯೋಗಕ್ಕೆ ನನ್ನ ತಲೆಬಾಗುತ್ತದೆ. ತನ್ನ ಆಸೆಗಳನ್ನು ಹೂತು ಹಾಕಿ ಕುಟುಂಬದ ಪ್ರೀತಿಯ ನೆಲೆಗಟ್ಟು ಕುಸಿಯದಂತೆ ಹೊಣೆಯರಿತು ನಡೆಯಲೇಬೇಕಾದ - ಅಂದಿನ ತನ್ನ ಕುಟುಂಬದ ವಾಸ್ತವವನ್ನು ಸರಿಯಾಗಿ ಅರ್ಥೈಸಿಕೊಂಡು ಬದುಕಿದ ಅಮ್ಮ ಅವಳು; ಅದು ಬದುಕಿನ ನಿಷ್ಠೆ. ವೃದ್ಧಾಪ್ಯದಲ್ಲಿ ನನ್ನ ಅಮ್ಮನಿಗೂ ಅಂತಹ ಪ್ರೀತಿಯ ಆರೈಕೆಯು ಸಿಕ್ಕಿತ್ತು. (ಅಥವ ನಾವು ಹಾಗೆ ಅಂದುಕೊಂಡಿದ್ದೇವೆ ! ಏಕೆಂದರೆ ಈ ಅಮ್ಮನು ಏನನ್ನೂ ಹೇಳುವವಳಲ್ಲ; ಹೇಳಿಯೂ ಇಲ್ಲ...)


ಮತ್ತೆ ಬಾಲ್ಯಕ್ಕೆ - ಬಾಲ್ಯದ ಭಾನುವಾರದ ಸಡಗರಕ್ಕೆ ಬಂದರೆ,  ಸ್ನಾನದ ನಂತರ ಅಮ್ಮನು ಮಕ್ಕಳ ಕಣ್ಣಿಗೆ ಕಾಡಿಗೆ ಹಾಕುವ ಒಂದು ಕ್ರಮವಿತ್ತು. ಅದು ಅಂಗಡಿಯ ಕಾಡಿಗೆಯಲ್ಲ. ಯಾವುದೋ ಎಣ್ಣೆಯಲ್ಲಿ ಅದ್ಯಾವುದೋ (ಬಹುಶಃ ಹೊನ್ನೆ? ಮಾಡುವ ಕ್ರಮವು ನನಗೆ ನೆನಪಿಲ್ಲ.) ಫಲ..ಇತ್ಯಾದಿ ಬಳಸಿ ಅಮ್ಮನೇ ತಯಾರಿಸುತ್ತಿದ್ದ ಕಾಡಿಗೆ ಅದು. (ಅಮ್ಮನ ಅಪ್ಪಯ್ಯನು - ಅಂದರೆ ನನ್ನ ಅಜ್ಜ - ಆಯುರ್ವೇದ ವೈದ್ಯಶಾಸ್ತ್ರದಲ್ಲಿ ಅನುಭವಿಗಳಾಗಿದ್ದರು. ಅವರ ಜೊತೆಗಿದ್ದ ನನ್ನ ಅಜ್ಜಿಯೂ ಅವನ್ನೆಲ್ಲ ಕಲಿತು ತಮ್ಮ ಮಕ್ಕಳಿಗೆ ಕಹಿ ಔಷಧ ಕೊಡುವುದರಲ್ಲಿ, ಮನೆಮದ್ದಿನಲ್ಲಿ ಅಗ್ರಗಣ್ಯರಾಗಿದ್ದರು. ಅವರಿಂದ ನನ್ನ ಅಮ್ಮನೂ ಕಹಿ ಪ್ರಯೋಗವನ್ನೆಲ್ಲ ಕಲಿತು ನಮ್ಮ ಮೇಲೆ ನಿರ್ದಯವಾಗಿ ಪ್ರಯೋಗಿಸುತ್ತಿದ್ದಳು.) ಭಾನುವಾರದ ಬಿಸಿ ಬಿಸಿಯಾದ ಸ್ನಾನವನ್ನು ಮುಗಿಸಿಯೇ ಅರ್ಧ ಜೀವವಾಗಿರುತ್ತಿದ್ದ ನಮ್ಮನ್ನು ಒಬ್ಬೊಬ್ಬರನ್ನೇ ಕರೆದು ಒತ್ತಿ ಹಿಡಿದುಕೊಂಡು - (ಏಕೆಂದರೆ ಆ ಕಾಡಿಗೆಯ ರುಚಿ ಅರಿತಿದ್ದ ನಾವು ತಪ್ಪಿಸಿಕೊಂಡು ಓಡಲು ಯತ್ನಿಸುತ್ತಿದ್ದೆವು.) ಆ ಕಾಡಿಗೆಯನ್ನು ಕಣ್ಣುಗಳಿಗೆ ತುಂಬುತ್ತಿದ್ದಳು. ತಾನೂ ಹಚ್ಚಿಕೊಳ್ಳುತ್ತಿದ್ದಳು. ಆ ಕಾಡಿಗೆಯಿಂದ ಕಣ್ಣು ಸ್ವಚ್ಛವಾಗುತ್ತದೆ - ಅನ್ನುತ್ತಿದ್ದಳು. ಆದರೆ ಆ ಬಾಲ್ಯದಲ್ಲಿ, ನಮ್ಮ ಕಣ್ಣುಗಳು ಸ್ವಚ್ಛವೇ ಇದ್ದವು. ಏನೂ ತಾಪತ್ರಯವಿರಲಿಲ್ಲ. ಆದರೂ ಕಾಡಿಗೆಗೆ ಕಣ್ಕೊಡಲೇ ಬೇಕಿತ್ತು! "ಅಯ್ಯೋ ಮಕ್ಕಳನ್ನು ಕಾಡಿಗೆ ಹಾಕಿ ಸಿಂಗರಿಸಿದರೆ ಏನು ಕಷ್ಟ?"  ಎಂದುಕೊಳ್ಳುವಂತಿಲ್ಲ. ಏಕೆಂದರೆ, ಅದು ಅಂತಿಂಥ ಕಾಡಿಗೆಯಲ್ಲ. ಕೆಟ್ಟ ಉರಿ! ಅದನ್ನು ಹಚ್ಚಿದ ನಂತರ 10 - 15 ನಿಮಿಷಗಳಷ್ಟು ಹೊತ್ತು ಕಣ್ಣಿನಿಂದ ಧಾರಾಕಾರವಾಗಿ ನೀರು ಸುರಿಯುತ್ತಿತ್ತು. ಹೀಗೆ ವಾರಕ್ಕೊಮ್ಮೆ ಕಣ್ಣೀರು ಸುರಿಸುವ ಅಂಕವು ನಮಗೆ ತಪ್ಪುತ್ತಿರಲಿಲ್ಲ. ತನ್ನ ಮಕ್ಕಳು ಯಾರ ಮೈಮೇಲೂ ಬೆಳ್ಳಿಯಾಗಲೀ ಚಿನ್ನವಾಗಲೀ ಇಲ್ಲದ ಆ ಕಾಲದಲ್ಲಿ ಆ ದುಷ್ಟ ಕಾಡಿಗೆಯನ್ನು ತುಂಬಿಡಲು ಮಾತ್ರ - ಅಮ್ಮನಲ್ಲಿ ಬೆಳ್ಳಿಯ ಕರಡಿಗೆ ಇತ್ತು! ಏಕೆಂದರೆ...ಅಮ್ಮನ ಪಾಲಿಗೆ ಆ ಕಾಡಿಗೆಯು ಅಷ್ಟು ಅಮೂಲ್ಯ!

ಅಲ್ಲಿಗೆ ಅಮ್ಮನ ಭಾನುವಾರದ ಒಂದು ಹಂತದ ಕೆಲಸ ಮುಗಿಯುತ್ತದೆ. ನಮ್ಮ ಇಷ್ಟು ಕೆಲಸಗಳು ಮುಗಿಯುವಾಗ, ಅದಾಗಲೇ ಒಲೆಯಲ್ಲಿ ಬೇಯಲು ಇಟ್ಟ ಅಕ್ಕಿಯು ಅನ್ನವಾಗಿ ತನ್ನ ಪರಿಮಳದಿಂದಲೇ ನಮ್ಮನ್ನು ಕರೆಯುತ್ತಿತ್ತು. ಗಂಟೆಯು ಬೆಳಗಿನ 8 ದಾಟಿರುತ್ತಿತ್ತು. ಸೋತು ಹೈರಾಣಾದ ಎಲ್ಲರಿಗೂ ಆಮೇಲೆ ಗಂಜಿ ಸಮಾರಾಧನೆ. ಕೊಚ್ಚಿಗೆ ಅಕ್ಕಿಯ ಗಂಜಿ, ಒಂದು ಚಮಚ ತುಪ್ಪ, ಅಮ್ಮನೇ ಮಾಡಿದ ಮಿಡಿ ಉಪ್ಪಿನ ಕಾಯಿ. ನೆನಪಾದರೆ ಈಗಲೂ ಬಾಯಲ್ಲಿ ನೀರೂರುತ್ತದೆ. ಅಂದಿನ ಊಟಕ್ಕೆ ಅದೆಂತಹ ರುಚಿ! ಅಥವ ನಮ್ಮ ಬಾಲ್ಯದ ಹಸಿವು ಹಾಗೆ ಅನ್ನಿಸುವಂತೆ ಮಾಡುತ್ತಿತ್ತೆ? ಗೊತ್ತಿಲ್ಲ. ಸೌದೆಯ ಒಲೆಯಲ್ಲಿ, ಮಡಕೆಯಲ್ಲಿ ಗಂಜಿಯು ಬೇಯುವಾಗಲೇ ಬಾಯಲ್ಲಿ ಲಾಲಾರಸವು ಸ್ರವಿಸಲು ಆರಂಭವಾಗುತ್ತಿತ್ತು. ಕಮಕ್ ಕಿಮಕ್ ಅನ್ನದೆ ಹೊಟ್ಟೆ ತುಂಬ ಉಂಡು ಏಳುತ್ತಿದ್ದೆವು. ಕೆಲವೊಮ್ಮೆ ಅಲ್ಲೂ ಅಮ್ಮನ ದಾದಾಗಿರಿ ನಡೆಯುತ್ತಿತ್ತು. ನಮ್ಮ ಮನೆಯಲ್ಲಿ ಎಲ್ಲ ಹೆಣ್ಣು ಮಕ್ಕಳೂ ಊಟದ ಪ್ರಮಾಣದಲ್ಲಿ ಸ್ವಲ್ಪ ಹಿಂದೆ. ಆದರೆ 10 - 11 ವಯಸ್ಸಾದವರು ಉಂಡದ್ದು ಕಡಿಮೆಯಾಯಿತೆಂದು ಅಮ್ಮನಿಗೆ ಅನ್ನಿಸಿದರೆ ಅವಳು ಒತ್ತಾಯದಿಂದ ಅವರಿಗೆ ಬಡಿಸುತ್ತಿದ್ದಳು. "ನಿನ್ ಪ್ರಾಯ ಎಷ್ಟ್ ? ಹಾಕಿದ್ದಷ್ಟ್ ಉಂಡ್ ಏಳ್ .." ಅನ್ನುವ ಜಬರ್ದಸ್ತೂ ಅಮ್ಮನಲ್ಲಿ ಇತ್ತು.

ವರ್ಷಕ್ಕೊಮ್ಮೆ - ಕಡು ಬೇಸಿಗೆಯ ಯಾವುದಾದರೂ ಭಾನುವಾರದಂದು ಅಮ್ಮನು ನಮ್ಮನ್ನೆಲ್ಲ ಗೋಳೋ ಎಂದು ಅಳುವಂತೆ ಮಾಡುತ್ತಿದ್ದಳು. ಅದಕ್ಕೆ ಕಾರಣ - ಹರಳೆಣ್ಣೆಯ ಪ್ರಯೋಗ! ನಮ್ಮ ಮನೆಯಲ್ಲಿ ರಾತ್ರಿಯ ಊಟದ ನಂತರ ಹಾಲು ಕುಡಿಯುವುದು ಕಡ್ಡಾಯವಾಗಿದ್ದರೂ - ಬೆಳಿಗ್ಗೆ ಎದ್ದ ಕೂಡಲೇ ಚಹಾ, ಕಾಫಿ, ಹಾಲು... ಇತ್ಯಾದಿಗಳೆಲ್ಲ ಇರಲಿಲ್ಲ. ನೇರವಾಗಿ ಗಂಜಿ ಊಟ - ಅಷ್ಟೆ. ಆದರೆ ಹರಳೆಣ್ಣೆಯ ಪ್ರಯೋಗದ ದಿನದಂದು ಮಾತ್ರ ದಿನಚರಿಯು ಬದಲಾಗುತ್ತಿತ್ತು. ಮಕ್ಕಳು ಏಳುವಾಗಲೇ ಹಸುವಿನ ಹಾಲು ಕರೆದು ಕಾಯಿಸಿರುತ್ತಿದ್ದ ಅಮ್ಮನು ನಾವು ಹಲ್ಲುಜ್ಜಿ ಬರುವಾಗಲೇ ಬಿಸಿ ಹಾಲಿನ ಪಾತ್ರೆಯನ್ನು ಚಾವಡಿಯಲ್ಲಿ ಇಟ್ಟುಕೊಂಡು ಕೂತಿರುತ್ತಿದ್ದಳು. ಅದರ ಪಕ್ಕದಲ್ಲಿ ದೊಡ್ಡದೊಂದು ಹರಳೆಣ್ಣೆಯ ಸೀಸೆ. ಆ ದೃಶ್ಯವನ್ನು ನೋಡಿದ ಕೂಡಲೇ ಸಂಭವಿಸಬಹುದಾದ ಸಂಕಟವನ್ನು ಗ್ರಹಿಸುತ್ತಿದ್ದ ನಾನು ಅಲ್ಲಿಂದ ಪರಾರಿಯಾಗುತ್ತಿದ್ದೆ. ಮನೆಯ ಹಿಂದಿನ ಹಾಡಿಯ ಯಾವುದೋ ಮರದ ಹಿಂದೆ ಹೋಗಿ ಅಡಗಿಕೊಳ್ಳುತ್ತಿದ್ದೆ. ಆಗ ಅಮ್ಮನು "ಅಯ್ಯೋ ದೇವರೇ, ಆ ಹೆಣ್ಣನ್ ಎಳ್ ಕಂಡ್ ಬಾ; ಓಡ್.." ಅಂತ ನನ್ನ ಅಕ್ಕನನ್ನು ಕಳಿಸುತ್ತಿದ್ದಳು. ಅವಳು ನನ್ನನ್ನು ಹುಡುಕಿ ದರದರ ಎಳೆದುಕೊಂಡು ಬರುತ್ತಿದ್ದಳು. ಅಷ್ಟರಲ್ಲಿ ಬಿಸಿ ಮಾಡಿದ ಹಾಲು ಸ್ವಲ್ಪ ತಣಿದಿರುತ್ತಿತ್ತು. "ಓಡಿದ್ ಎಲ್ಲಿಗ್ ಹೆಣೆ? ಸಮಾ ಗುದ್ದತೆ ಕಾಣ್; ಇದೇನ್ ವಿಷವಾ?...ಸುಮ್ನೆ ಕೂತ್ಕೋ.." ಅಂತ ನನ್ನನ್ನು ಗದರಿಸುತ್ತ, ಆ ಹಾಲನ್ನು ಮತ್ತೊಮ್ಮೆ ಬಿಸಿ ಮಾಡಿಕೊಂಡು ಬರುತ್ತಿದ್ದ ಅಮ್ಮನು - ಅರ್ಧ ಲೋಟ ಬಿಸಿ ಹಾಲಿಗೆ ಒಂದು ದೊಡ್ಡ ಚಮಚ ಹರಳೆಣ್ಣೆ ಸುರಿದು ಪ್ರತಿಯೊಬ್ಬರಿಗೂ ಕುಡಿಯಲು ಕೊಡುತ್ತಿದ್ದಳು. ನಾವು ಒಬ್ಬರ ನಂತರ ಒಬ್ಬರು ಅದನ್ನು  ಕುಡಿಯುವಂತಿರಲಿಲ್ಲ. ಎಲ್ಲರೂ ಒಟ್ಟಿಗೇ ಗಟಗಟ ಕುಡಿಯಬೇಕಿತ್ತು. ಯಾಕೆಂದರೆ ಒಬ್ಬರು ಕುಡಿಯುವಾಗ ಇನ್ನೊಬ್ಬರು ನೋಡಿದರೆ - ಮೊದಲು ಕುಡಿದವರ ಹರಳೆಣ್ಣೆ ಮುಖಭಾವವನ್ನು ನೋಡಿ ತಾವು ಕುಡಿಯಲು ಹಿಂದೇಟು ಹೊಡೆಯಬಹುದು; ಅದರಿಂದ ಅಮ್ಮನ ಕೆಲಸವು ಉದ್ದವಾಗುತ್ತದೆ ಅನ್ನುವ Plan ಅದು. ಅಯ್ಯೋ...ಆ ಹಿಂಸೆಯನ್ನು ಏನೆಂದು ಹೇಳಲಿ? ಆ ದಿನವಿಡೀ ಎಲ್ಲರಿಗೂ ಹಾಡಿಗೆ ಹೋಗುವ Extra ಕೆಲಸ; ಕೆಲವು ಪೆದ್ದು ಮೊದ್ದು ಹೊಟ್ಟೆ ಹುಳಗಳಿಗೂ ಅಂದು ಹರಳೆಣ್ಣೆಯ ಮೋಕ್ಷ ಸಿಗುತ್ತಿತ್ತು. ಆದರೆ ಆ ದಿನ, ಯಾರಿಗೂ ಊಟ ತಿಂಡಿ ಏನೂ ಸೇರುತ್ತಿರಲಿಲ್ಲ; ಏನೋ ಮೈಯೆಲ್ಲ ಅಸಹ್ಯದ...ಅನ್ನಿಸಿಕೆ. ಪ್ರತೀ ವರ್ಷದ ಆ ಹರಳೆಣ್ಣೆಯ ದಿನ ಮಾತ್ರ - ಅದು ಭಾನುವಾರವಾದರೂ ನಮ್ಮ ಮನೆಯು ಯಾವುದೇ ಸದ್ದು ಗದ್ದಲವಿಲ್ಲದೆ ತಣ್ಣಗಿರುತ್ತಿತ್ತು. ನನ್ನ ತಂಗಿಯ ಗಂಟಿಕ್ಕಿದ ಮುಖದ ಹುಬ್ಬುಗಳು - ಕ್ಲಿಪ್ ಹಾಕಿ ಎತ್ತರಿಸಿದಂತೆ ತಲೆಭಾರವನ್ನು ದಿನವಿಡೀ ಆ ಹುಬ್ಬುಗಳೇ ಹೊತ್ತಂತೆ ಇರುತ್ತಿದ್ದವು. ಎಲ್ಲರಿಗೂ ದೈಹಿಕ ಬಳಲಿಕೆಗಿಂತ ಬಹುಶಃ ಅಮ್ಮನ ಮೇಲೆ ವಿಪರೀತ ಸಿಟ್ಟು ಬಂದಿರುತ್ತಿತ್ತು. ನಮ್ಮನ್ನು ಬಲಿಪಶು ಮಾಡಿದಳಲ್ಲಾ...ಎಂಬ ಅಸಹಾಯಕ ಭಾವವದು.

ಆದರೆ ಮರುದಿನ ನಮ್ಮ ದೇಹ, ಮನಸ್ಸು ಎಷ್ಟು ಲವಲವಿಕೆಯಿಂದ ಕೂಡಿರುತ್ತಿತ್ತೆಂದರೆ ಹೊಸ ಉತ್ಸಾಹದ ಅಧ್ಯಾಯವೇ ಆರಂಭವಾದಂತೆ ಅನ್ನಿಸುತ್ತಿತ್ತು. ತನ್ನ ಗಂಡ - ಮಕ್ಕಳ ಆರೋಗ್ಯ, ಹೊಟ್ಟೆಯ ವ್ಯವಸ್ಥೆ ಮುಗಿದ ಕೂಡಲೇ ಅಮ್ಮನು ಎಂದಿನಂತೆ ತನ್ನ ದೈನಂದಿನ ಮನೆವಾರ್ತೆಗೆ ಹೊರಳುತ್ತಿದ್ದಳು. ಅಪ್ಪಯ್ಯನ ಮಿತವಾದ ಗಳಿಕೆ, ಅದಕ್ಕೆ ಪೂರಕವಾಗಿ - ಅಮ್ಮನ ಕಠಿಣ ದೈಹಿಕ ದುಡಿಮೆಯಿಂದಲೇ ಒಂದಷ್ಟು ಉಳಿಕೆ - ಪರಸ್ಪರ ಹೊಂದಾಣಿಕೆ, ಪ್ರೀತಿಯಿಂದಲೇ ನೆಮ್ಮದಿಯ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿದೆ ಎಂಬುದಕ್ಕೆ ಜ್ವಲಂತ ದೃಷ್ಟಾಂತವಾಗಿ ನಿಂತವರು ನನ್ನ ಹೆತ್ತವರು. ಹಿತ್ತಲು, ಅಂಗಳ, ಹಟ್ಟಿ, ದನಕರು...ಹೀಗೆ ವರ್ಷಗಟ್ಟಲೆ ನಿಯಮಿತವಾಗಿ ತನ್ನ ಸಂಸಾರದ - ಪರೋಕ್ಷವಾಗಿ ಸೃಷ್ಟಿಯ ಯೋಗಕ್ಷೇಮವನ್ನು ಅಚ್ಚುಕಟ್ಟಾಗಿ ನೋಡಿಕೊಳ್ಳುವುದು ಈ ಬ್ರಹ್ಮಾಂಡದ ಯಾವ ದೇವ ಗಣಕ್ಕಾದರೂ ಸಾಧ್ಯವೆ? ತಮ್ಮ ನಿರುಪದ್ರವಿ ನಿಷ್ಠಾಪೂರ್ಣ ಬದುಕಿನಿಂದ, ಸ್ಥಿತಿಕಾರಕನೆಂಬವನಿಗೆ ಸಹಕರಿಸಿ ಉಪಕರಿಸುವ ಇಂತಹ ವಿಶಿಷ್ಟ ಬದುಕುಗಳಿಂದ - ಪರೋಕ್ಷವಾಗಿ ದೈವ ಕಾರ್ಯವೇ ನಡೆಯುತ್ತಿರುತ್ತದೆ. ದೇವರ ಕೈ ಬಲಪಡಿಸಲೆಂದೇ ಪ್ರೀತಿಸುವ ಅಮ್ಮ ಮತ್ತು ಅಪ್ಪ - ನಮಗೆ ಸಿಕ್ಕಿದ್ದು; ನಾವೆಲ್ಲರೂ "ಮೋಹ ಮಮತಾ ಪ್ರಿಯ"ರಾದದ್ದು! ಭೂಮಿಯಲ್ಲಿ ಸಂಸಾರಗಳು ಉಳಿದದ್ದು.

ಅಂದು ಅಪ್ಪಯ್ಯ ಅಮ್ಮನ ಮುಷ್ಟಿಯಲ್ಲಿ ತಿಣುಕಾಡುತ್ತಿದ್ದ ನಮಗೂ ಅಂದು ಕ್ಷಣಿಕವಾಗಿ "ಒತ್ತಾಯ, ಜುಲುಮೆ"ಗಳು ಕಷ್ಟವೆನ್ನಿಸಿರಬಹುದು. ಆದರೆ ಒಂದು ಹಂತದವರೆಗೆ ಮುಷ್ಟಿಯಲ್ಲಿ ಇದ್ದುದರಿಂದಲೇ ನಮ್ಮ ಇಂದಿನ ಬದುಕು ತಕ್ಕಮಟ್ಟಿಗೆ ನೆಟ್ಟಗಿದೆ. SPACE ಎನ್ನುವ Fashion ಗಾಗಿ ಆಕಾಶ ಭೂಮಿಯನ್ನು ಒಂದು ಮಾಡುವ ಇಂದಿನ ನವಜನಾಂಗದ ಎಷ್ಟು ಜನರು ಅವರ Space ನಲ್ಲಿ ಕೂತು ತಪಸ್ಸು ಮಾಡಿ - ಐನ್ ಸ್ಟೈನ್ ಆಗಿದ್ದಾರೆ? ಪೋಕುಬಾರದ CHAT ಗಳಿಗಾಗಿ Space ಜಪ ಮಾಡುವುದು ವ್ಯರ್ಥ ವ್ಯಾಯಾಮ. ಇಂದಿನ SPACE ಜನಾಂಗಕ್ಕೆ ಇವೆಲ್ಲ ಅರ್ಥವಾಗುವುದಿಲ್ಲ. ಅವರಿಗೆ ಎಷ್ಟು Space ಇದ್ದರೂ ಸಾಕಾಗುವುದಿಲ್ಲ. ತಾವು ಇರುವ Space ಒಂದನ್ನು ಬಿಟ್ಟು ಅವರೆಲ್ಲರೂ ಇನ್ನೆಲ್ಲೆಲ್ಲೋ Space ನ್ನು ಹುಡುಕುತ್ತಿರುತ್ತಾರೆ. ಅಸ್ತಿತ್ವದಲ್ಲಿಯೇ ಇಲ್ಲದ ಆ ಗುಂಡಾಂತರದ Space ಸಿಗುವುದಾದರೂ ಹೇಗೆ? ಹುಡುಕಾಟದಲ್ಲಿಯೇ ಅರ್ಧ ಆಯುಷ್ಯವನ್ನು ಕಳೆದುಕೊಂಡ ಮೇಲೆ ಕೊರಗುತ್ತಾರೆ; ಅನಂತರ ನರಳುತ್ತಾರೆ. ಈಗಂತೂ ಪ್ರತಿಫಲಾಪೇಕ್ಷೆಯಿಲ್ಲದೆ ಒಂದು ಕಡ್ಡಿಯನ್ನೂ ಎತ್ತಿಡಲು ಒಲ್ಲದೆ "Selfish Space" ಗಾಗಿ ಹಲುಬುವವರ ಆಲಾಪವು ತಾರಸ್ಥಾಯಿಯಲ್ಲಿದೆ. ಬುದ್ಧಿಯನ್ನು ಕಲುಷಿತಗೊಳಿಸುವ ಈ Space ನ ಚಟವು ಬದುಕನ್ನು ನಷ್ಟಗೊಳಿಸುತ್ತಿರುವ ವ್ಯಾಧಿ. ಬರೇ ಕೂತು ಹೊರಳಾಡುವ, ದೇಹಶ್ರಮಕ್ಕೆ ಹಿಂಜರಿಯುವ ಜನರಿಗೆ ಬದುಕು ಒಲಿಯುವುದಿಲ್ಲ. ಇಂದ್ರಿಯಗಳನ್ನು ಪಳಗಿಸಿ ಸತ್ಕರ್ಮದಲ್ಲಿ ಬಂಧಿಸಲಾಗದವರು - ಸೋಲುವ ಮತ್ತು ಸೋಲಿಸುವ ಬದುಕಿಗೂ ಉದಾಹರಣೆಗಳಾಗಿ ನಿಲ್ಲುತ್ತಾರೆ. ಬದುಕನ್ನು ಶ್ರದ್ಧೆಯಿಂದಲೂ ಕಟ್ಟಬಹುದು ಎಂಬುದಕ್ಕೆ ತನ್ನ 86 ಸಂವತ್ಸರಗಳನ್ನು ಸಾತ್ವಿಕ ಲೆಕ್ಕಾಚಾರದಲ್ಲಿಯೇ ನಿರ್ವಹಿಸಿದ ಅಮ್ಮ ಮತ್ತು ತಮ್ಮ 68 ವರ್ಷಗಳನ್ನು ಮುಗ್ಧ - ವಿನಮ್ರವಾಗಿ ತೂಗಿಸಿದ ಅಪ್ಪಯ್ಯನೇ ಸಾಕ್ಷಿ. ಭೂಮಿಯ ಬದುಕಿನಿಂದ ನಿರ್ಗಮಿಸುವುದರಲ್ಲೂ ಅವರಿಬ್ಬರಲ್ಲಿ ಎಂತಹ ತಾಳಮೇಳವಿತ್ತಲ್ಲ?.....68 - 86 ! ಏರಿಳಿತದಲ್ಲೂ ಹೊಂದಿಕೆಯ ಜೋಕಾಲಿಯಾಟ...ಅಲ್ಲೂ ಲೆಕ್ಕ ಹೊಂದಿಸಿ ಸರಿದೂಗಿಸಿ ನಕ್ಕದ್ದು - ಕೊನೆಗೆ ಹೊರಟ ನನ್ನ ಅಮ್ಮನೇ.




Tuesday, October 6, 2015

ನಾನೊಲಿದಂತೆ (8) - ಇಳಿಯುವ ಸ್ಪರ್ಧೆ !

                                                        

"ನನ್ನ ಗಂಡನು ಅತಿ ಚತುರನು; ಅವನು ಬರೆದದ್ದನ್ನು ಬೇರೆಯವರಾರೂ ಓದಲಾರರು" ಎಂದು ಒಬ್ಬಳು ಜಂಭ ಕೊಚ್ಚಿಕೊಂಡಳು. ಅದನ್ನು ಕೇಳಿದ ಗೆಳತಿಯು "ನನ್ನ ಗಂಡನು ಅದಕ್ಕಿಂತಲೂ ಚತುರನು; ಅವನು ತಾನು ಬರೆದುದನ್ನು ತಾನೇ ಓದಲಾರ.." ಎಂದಳಂತೆ. ಇದಕ್ಕೆ "ಚಟ್ಟು ಕಾಳುಗಳ ಪೊಟ್ಟು ಸ್ಪರ್ಧೆ" ಎನ್ನುತ್ತಾರೆ.  ಇಂತಹ "ಇಳಿಯುವ ಸ್ಪರ್ಧೆ"ಯಲ್ಲಿ ಗಂಭೀರವಾಗಿ ಮುಳುಗಿರುವ ಇಂದಿನ ಕಾಲಘಟ್ಟದಲ್ಲಿ ಭಾರತೀಯ ಸಂಸ್ಕೃತಿಯ ಆಧಾರಗಳಾದ ಬ್ರಹ್ಮ, ಬ್ರಾಹ್ಮಣ, ವೇದ, ಉಪನಿಷತ್ತು...ಇತ್ಯಾದಿ ವಿಚಾರಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲು "ಸ್ವಯಂಘೋಷಿತ ವಿಚಾರವ್ಯಾಧಿ ಗುಂಪಸುರರು" - (ಅಣಬೆಗಳಂತೆ)  ಹುಟ್ಟಿಕೊಳ್ಳುತ್ತಿರುವುದರಲ್ಲಿ ಆಶ್ಚರ್ಯವಿಲ್ಲ.

                                   ಅಸ್ಮಿನ್ ಕಲೌ ಖಲೋತ್ ಸೃಷ್ಟ ದುಷ್ಟ ವಾಗ್ಬಾಣದಾರುಣೇ/
                                   ಕಥಂ ಜೀವೇತ್ ಜಗನ್ನಸ್ಯುಃ  ಸನ್ನಾಹಾಃ ಸಜ್ಜನಾ ಯದಿ//

"ಈ ಕಲಿಯುಗದಲ್ಲಿ ದುಷ್ಟರು ತಮ್ಮ ಮಾತಿನ ಭಯಂಕರವಾದ ಬಾಣಗಳನ್ನು ಬಿಡುತ್ತಿರುತ್ತಾರೆ. ಹೀಗಿರುವಾಗ - ಸಜ್ಜನರು ಇಲ್ಲದಿದ್ದರೆ ಈ ಜಗತ್ತು ಹೇಗೆ ಬಾಳುತ್ತಿತ್ತು?"...ಆದ್ದರಿಂದ ಈ ಜಗತ್ತು ಕೆಲವು ಸಜ್ಜನರನ್ನಾದರೂ ಉಳಿಸಿಕೊಳ್ಳುತ್ತದೆ. ಆದರೆ ದುರ್ಜನರ ನಡುವೆ ಬದುಕುವ ಸಜ್ಜನರು ಹೋಗುತ್ತ ಬರುತ್ತ ಕೊಯ್ಯಿಸಿಕೊಳ್ಳುತ್ತಲೇ ಇರುವುದು ಅನಿವಾರ್ಯ. ಸಜ್ಜನರ ತಲೆಗೆ ದಿನವೂ ಜಪ್ಪುತ್ತ ಮಿಥ್ಯಾ ವಿಲಾಸದಲ್ಲಿ ತೊಡಗಿಕೊಂಡಿರುವ - ಮಂಗನ ಕಾಯಿಲೆಗೆ ತುತ್ತಾದಂತಿರುವ, ಲಂಗುಲಗಾಮಿಲ್ಲದ ಕೆಲವು ಕುತರ್ಕ ಥೂಕಾರಯೋಗ್ಯರಿಂದ ಇಂದಿಗೂ ನಮ್ಮನ್ನು ರಕ್ಷಿಸುತ್ತಿರುವುದು - ಸದ್ವೃತ್ತಿ ನಿರತರ ಸದಾಚಾರ - ಸದ್ವಿಚಾರ ಮತ್ತು ಸಜ್ಜನಿಕೆ. 

ಅನುಭವದ ಅಸ್ತಿವಾರವುಳ್ಳ ಜೀವನಾನುಭವದಿಂದ ಮೂಡಿ ಬಂದಿರುವ, ಪೂರ್ವದ ಸುಭಾಷಿತಗಳ ತತ್ವಾರ್ಥವು ಹೊಳೆದಾಗ ಯಾವುದೇ ಜೀವಕ್ಕೆ ತಾಳುವಿಕೆಯ ಶಕ್ತಿಯೊದಗಿ, ಜೀವಚೈತನ್ಯ ಸಂಚರಿಸಿ, ಮನಸ್ಸು ಸ್ವಚ್ಛ ಬೆಳದಿಂಗಳಾಗುತ್ತದೆ. ಪೂರ್ವದ ಅನೇಕ ಅಮೂಲ್ಯ ಚಿಂತನೆಗಳು ಇಂದಿಗೂ ಉಳಿದು ಬಂದಿರುವುದು - ಇಂತಹ ಚೈತನ್ಯವಂತ ಸ್ವಚ್ಛ ಸಜ್ಜನರ ಸ್ವಂತ ಬಲದಿಂದಲೇ ಹೊರತು ಯಾವುದೇ ಬಾಹ್ಯ "ಪ್ರಾಯೋಜಕ ಪಿತೂರಿ"ಯಿಂದಲ್ಲ.

ಕಾಲದೊಂದಿಗೆ ನಮ್ಮ ಅಭಿರುಚಿ, ಆಸಕ್ತಿಗಳೂ ಇಂದು ಬದಲಾಗುತ್ತಿವೆ. ಹಿತ್ತಲ "ತುಲಸೀ ಗಿಡವು ಮದ್ದಲ್ಲ - ತುರಿಕೆಯ ಗಿಡವೇ ಮದ್ದು" ಎನ್ನುವವರ ಪುಟ್ಟ ಸಂತೆಯೇ ಈಗ ನಮ್ಮ ಸುತ್ತಲೂ ನೆರೆದಿದೆ. "ಶಂಖದಿಂದ ಬಂದರೆ ವಿಷ - ಶಂಖಪಾಲವೇ ಅಮೃತ" ಎನ್ನುತ್ತ ಹೊಸ ವ್ಯಾಖ್ಯೆ ಬರೆಯಲು ಹೊರಟಿರುವ ಹಾಳು ಕಮಂಗಿಗಳು ಈಗೀಗ ಹೆಚ್ಚುತ್ತಿದ್ದಾರೆ. ಒಟ್ಟಿನಲ್ಲಿ, ಸದ್ದು ಮಾಡಿ ಗಮನ ಸೆಳೆಯುವ ಪೊಟ್ಟು ಸ್ಪರ್ಧೆಯ ಇಂತಹ ಚಟ್ಟು ಸೈನ್ಯಕ್ಕೆ ಅಲ್ಲಲ್ಲಿ ರಾಜಾಶ್ರಯವೂ ದೊರೆತಂತೆ ಕಾಣುತ್ತದೆ. ಇಂತಿಪ್ಪ ಹುಡಿ ಸ್ಪರ್ಧೆಯ ಹೊತ್ತಿನಲ್ಲಿ ವಾಗ್ - ಭೀಷಣರ ಪಟಾಪಟಿಯ ಪರಾಕ್ರಮದ ಧೂಳು - ಕೂಳು ನಮಗೆ ನಿತ್ಯದ ತುತ್ತಾಗುತ್ತಿದೆ. ಮಾನವ ಹಕ್ಕುಗಳ ವೇಷದಲ್ಲಿ ಅಶಿಸ್ತಿಗೆ ವಿಶೇಷ ಪರವಾನಿಗೆ ದೊರೆಯುತ್ತಿರುವುದರಿಂದ ವಿದ್ಯಾರ್ಥಿಗಳೂ ವಿದ್ಯಾರ್ಥಿಗಳಾಗಿ ಉಳಿಯುತ್ತಿಲ್ಲ. ಕೆಡುತ್ತಿರುವ ಬಾಲ್ಯ ಕಾಲದ ಮಕ್ಕಳ ಶಿಕ್ಷಣವು ನಮ್ಮನ್ನು ಇಲ್ಲಿಯ ವರೆಗೆ ತಂದು ನಿಲ್ಲಿಸಿದೆ. ಕಾನೂನನ್ನು ತಿರುಚುವ ಶಿಕ್ಷಣವೂ - ಎಲ್ಲ ಕಡೆಯಿಂದಲೂ ನಮ್ಮ ಮಕ್ಕಳಿಗೆ ದೊರೆಯುತ್ತಿದೆ. ಹೀಗೆ ಅಶಿಸ್ತಿನ ನೀರುಂಡ ಗಿಡವು ಈಗ ಬಲಿತು ಹೆಮ್ಮರವಾಗುತ್ತಿದೆ.

1966 ರ ಒಂದು ಘಟನೆ. ಕಲ್ಕತ್ತದ ಹುಗ್ಲಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರೊಬ್ಬರು ಶಾಲೆಯ ಆರಂಭವನ್ನು ಸೂಚಿಸುವ ಗಂಟೆಯನ್ನು (Bell) ಕೇಳಿಸಿಕೊಳ್ಳದೆ ಸಮಯಕ್ಕೆ ಸರಿಯಾಗಿ ತರಗತಿಗೆ ಹೋಗಲಿಲ್ಲ. ಅದನ್ನು ಗಮನಿಸಿದ ಆ ಶಾಲೆಯ ಮುಖ್ಯೋಪಾಧ್ಯಾಯರು ತರಗತಿಯ ಒಬ್ಬ ವಿದ್ಯಾರ್ಥಿಯಿಂದಲೇ ಆ ತಪ್ಪಿತಸ್ಥ ಅಧ್ಯಾಪಕರ ಕಿವಿ ಹಿಂಡಿಸಿದರಂತೆ. ಅಂದಿನ ಪತ್ರಿಕೆಗಳಲ್ಲಿ ಈ ಸುದ್ದಿಯು ಮಹತ್ವವನ್ನು ಪಡೆದಿತ್ತು. ಜೊತೆಗೆ - "ಗುರುವೇನ್ ಮಹಾ?" ಎಂಬ ಇಂದಿನ ಕಲಿ ಚಿಂತನೆಗೂ ಆಗಲೇ ಬೀಜಾಂಕುರವಾದಂತಾಗಿತ್ತು.

ಗುರುಗಳ ಸ್ಥಾನವು ಅದಾಗಲೇ ಅಲುಗಾಡತೊಡಗಿತ್ತು. ಇತರರಿಗೆ ಬೋಧಿಸುವ ಗುರು ಸ್ಥಾನದಲ್ಲಿ ಕುಳಿತವನಿಗೆ ಅದೊಂದು ಎಚ್ಚರಿಕೆಯ ಗಂಟೆಯೂ ಆಗಿತ್ತು. ತಪ್ಪು ಮಾಡಿದವನು ಸ್ವತಹ "ಗುರು"ವೇ ಆಗಿದ್ದರೂ ಪ್ರಾಯಶ್ಚಿತ್ತವು ಅನಿವಾರ್ಯವಾಗಿತ್ತು. ಆದರೆ ಉಪಾಧ್ಯಾಯರಿಗೆ ಅಂದು ಶಿಕ್ಷೆ ನೀಡಿದ ಸ್ಥಳ ಮತ್ತು ವಿಧಾನವು ಮಾತ್ರ ಇಂದಿಗೂ ಪ್ರಶ್ನಾರ್ಹವಾಗಿದೆ.

ಇಂದಿನ ವ್ಯವಸ್ಥೆಯಲ್ಲಂತೂ ಯಾವುದೇ "ಮಹಾ ಗುರು"ಗಳು ಕಾಣಿಸುವುದಿಲ್ಲ. ಎಲ್ಲರೂ ಪಗಾರ ಪಡೆಯುವ ನೌಕರರೇ ಇದ್ದಾರೆ. ಇಂದು ಓಡಾಡುತ್ತಿರುವ ಅಂತಹ ವೃತ್ತಿ ನಿರತರನ್ನೆಲ್ಲ "ಗುರು" ಎನ್ನಲಾಗುವುದಿಲ್ಲ. ತಾವು ಎಂದೋ ಕಲಿತದ್ದನ್ನು ತರಗತಿಗೆ ಬಂದು ಕಾರಿಕೊಳ್ಳುವ ಅಧ್ಯಾಪಕ ಮಾತ್ರರಾದವರು ಎಂದಿಗೂ ಗುರು ಸ್ಥಾನವನ್ನು ತುಂಬಲಾರರು. ಹಾಗೆ ನೋಡಿದರೆ, ವಿದ್ಯಾರ್ಥಿಗಳ ಸರ್ವತೋಮುಖ ವಿಕಸನಕ್ಕೆ ಪೂರಕವಾದ ಶಿಕ್ಷಣವು ಮಾಯವಾಗಿ ಬಹಳ ವರ್ಷಗಳಾದವು. ಶಿಷ್ಯರ ಹೆಗಲ ಮೇಲೆ ಕೈಹಾಕಿಕೊಂಡು ಹೋಗಿ ಸಿಗರೇಟು ಸೇದುತ್ತಿದ್ದ ಅಧ್ಯಾಪಕರನ್ನು ಹಿಂದೆ ನಾನೇ ನೋಡಿದ್ದೇನೆ. ಅಂತಹ ಅಧ್ಯಾಪಕರನ್ನು "ಒಳ್ಳೆಯವರು" ಎಂದು ಹಾಡಿ ಹೊಗಳುತ್ತಿದ್ದ ಅಂದಿನ ಕೆಲವು ವಿದ್ಯಾರ್ಥಿಗಳನ್ನೂ ಕಂಡಿದ್ದೇನೆ. ಅಂದರೆ ಸುಮಾರು 45 ವರ್ಷಗಳ ಹಿಂದಿನಿಂದಲೇ - ಅಂದರೆ.....ಅರ್ಧ ರಾತ್ರಿಯ ಸ್ವಾತಂತ್ರ್ಯವು ನಮಗೆ ಲಭಿಸಿದ ನಂತರ ನಮ್ಮ "ಗುರು - ಶಿಷ್ಯ" ಮೌಲ್ಯವು ನಿಧಾನವಾಗಿ ಕುಸಿಯುತ್ತ ಬಂದಿದೆ ಎನ್ನಬಹುದು. ಯಾವುದೋ ಯಾರದೋ ಟೋಪಿಯನ್ನು ಅಳತೆ ಹೊಂದದ ಇನ್ನ್ಯಾರಿಗೋ ಇಟ್ಟು ಚೆಂದ ನೋಡುವ ಹುಸಿ ಸಮಾಜವಾದದ ಹೊಡೆತಕ್ಕೆ ಸಿಲುಕಿ, ಭಾರತೀಯ ಮೂಲ ಶಿಕ್ಷಣದ ಸ್ವರೂಪವೇ ಬಣ್ಣ ಕಳೆದುಕೊಂಡು, ರಸಹೀನವಾಗಿ, ಈಗ  ಜೊಗಟಿಯಾಗಿ ಬಿಟ್ಟಿದೆ. ಇಂದು ಕೇವಲ ದುಡ್ಡಿನ ಸಂಪಾದನೆಗಾಗಿ, ತಮ್ಮ ಆಸೆಗಳ ಪೂರ್ತಿಗಾಗಿ, ಸ್ಥಾನ ಗಿಟ್ಟಿಸಿಕೊಳ್ಳುವುದಕ್ಕಾಗಿ, ಪದವಿ - ಪ್ರಶಸ್ತಿ ಪತ್ರದ ನೆರಳಿನಲ್ಲಿ ಅಧ್ಯಾಪಕರು ಹೊರಳಾಡುವಂತಹ ಸನ್ನಿವೇಶವಿದೆ. ಇಂತಹ ಅನರ್ಹ ಸ್ವಾರ್ಥೀ ಶಿಕ್ಷಕ ವರ್ಗದವರು - ತಮ್ಮಂತಹ ಊಸರವಳ್ಳಿಗಳನ್ನೇ ಉತ್ಪಾದಿಸುತ್ತ ಭಾರತದ ಭವಿಷ್ಯವನ್ನು ಭೀಕರವಾಗಿ ರೂಪಿಸಲು ಹೆಣಗಾಡುತ್ತಿದ್ದಾರೆ! ಆದ್ದರಿಂದಲೇ ಪೂರ್ವಾಗ್ರಹಪೀಡಿತ ಮರ್ಕಟ ನ್ಯಾಯವು ಎಲ್ಲೆಂದರಲ್ಲಿ ರಾರಾಜಿಸುತ್ತಿದೆ.

                                            ಮಾರ್ಗಭೇದೀ ಸ್ವಾರ್ಥಪಾಕೀ ಯತಿ
                                                                              ಬ್ರಾಹ್ಮಣದೂಷಕಃ
                                            ಅತ್ಯಾಶೀ ವೇದ ವಿಕ್ರೇತಾ ಪಂಚೈತೇ
                                                                                ಬ್ರಹ್ಮಘಾತಕಾಃ //

"ಬೀದಿಗಳನ್ನು ಹಾಳು ಮಾಡುವವ, ಕೇವಲ ತನ್ನ ಹೊಟ್ಟೆಗಾಗಿಯೇ ಅಡುಗೆ ಮಾಡಿ ಉಣ್ಣುವವ, ಸನ್ಯಾಸಿಗಳನ್ನೂ ಬ್ರಾಹ್ಮಣರನ್ನೂ ನಿಂದಿಸುವವ, ಮಿತಿ ಮೀರಿದ ಆಶೆಯುಳ್ಳವ ಮತ್ತು ವೇದಗಳನ್ನು ಮಾರುವವ... - ಈ ಐವರು ಬ್ರಹ್ಮಹತ್ಯೆ ಮಾಡಿದ ಪಾತಕಿಗಳಿಗೆ ಸಮಾನರು" ಎಂಬುದು ಅಧ್ಯಾತ್ಮದೊಂದಿಗೆ ಸಾಮಾಜಿಕ ಚಿಂತನೆಯನ್ನೂ ಹೊಂದಿದ್ದ - "ಅಂದಿನ" ವಿದ್ವದ್ ಋಷಿಗಳ ಉವಾಚ. ಈ ಋಷಿ ವಾಕ್ಯದ ಪರಿಧಿಯಲ್ಲೇ ಅದರ ಅಂತರ್ಭಾವವನ್ನು ಗಮನಿಸುತ್ತ, ಇದು ಇಂದಿಗೆ ಎಷ್ಟು ಮತ್ತು ಹೇಗೆ ಪ್ರಸ್ತುತ? ಎಂದೂ ಚಿಂತಿಸಬಹುದು. 

"ಬೀದಿಗಳಲ್ಲಿ ಕಸ ಚೆಲ್ಲುವವರು ಮಾತ್ರ ಬೀದಿಗಳನ್ನು ಹಾಳು ಮಾಡುವವರು" ಎಂದುಕೊಂಡು ಸೀಮಿತ ಅರ್ಥದ ನೀತಿಗೇ ಅಂಟಿಕೊಂಡು ನಾವಿಂದು ತೃಪ್ತರಾದರೆ ಅದು "ಬಾಲ ಬದುಕು" ಅನ್ನಿಸಿಕೊಳ್ಳುವುದಿಲ್ಲವೆ? ಕೈಯ್ಯಿಂದ ಎಸೆಯುವ ಕಸದೊಂದಿಗೆ ಕುಟಿಲ ವೈಚಾರಿಕ ಕಸದಿಂದಲೂ ಬೀದಿಯನ್ನು ದಿನವೂ ರದ್ದಿಗೊಳಿಸುತ್ತಿರುವ ಮನುಷ್ಯರಿಂದ ಮುಕ್ತರಾಗಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಈಗ ನಾವಿದ್ದೇವೆ. ಸಾಮಾಜಿಕ ವರ್ಜ್ಯದ ತ್ಯಾಜ್ಯ ರೂಪದಂತಿರುವ ಇಂದಿನ ಬೆರಳೆಣಿಕೆಯ "ಬುದ್ಧಿ ವ್ಯಾಧಿಗ್ರಸ್ತರು" - ತಮ್ಮ ಉಗ್ರಾಣದಲ್ಲಿ ಕೂಡಿಟ್ಟ ಬುಗುಟು ಬಂದ ಸರಕನ್ನು ವಿಕೃತ ವಿಚಾರದ ರೂಪದಲ್ಲಿ ದಿನವೂ ಬೀದಿವ್ಯಾಪಾರಕ್ಕಿಟ್ಟು ಸಭ್ಯ ಬುದ್ಧಿಗಳನ್ನು ಕಲುಕಲು ಪ್ರಯತ್ನಿಸುವುದೂ "ಬೀದಿಗಳನ್ನು ಹಾಳು ಮಾಡುವ ಕೃತ್ಯ"ವೆಂದೇ - ವಿಶಾಲಾರ್ಥದಲ್ಲಿ ಪರಿಗಣಿಸಬಹುದು.

ಯಾವುದೇ ಸದಾಚಾರ, ಸದ್ವಿಚಾರ, ಸಜ್ಜನಿಕೆಗಳಿಲ್ಲದೆ "ವೃತ್ತಿಭಾರ"ವನ್ನು ಹೊತ್ತುಕೊಂಡ ಗುರು ವೇಷದಿಂದ ಯಾವುದೇ ವಸ್ತು - ವಿಷಯಗಳು ಧನಾತ್ಮಕವಾಗಿ ಪ್ರಕಟವಾಗುವುದು ಕಷ್ಟ. ತಮ್ಮ ಗ್ರಹಿಕೆಯಲ್ಲಿಯೇ ಎಡವಿರುವ ಅಂತಹ ಉಪಾಧ್ಯಾಯರಿಂದ ಶಿಷ್ಯರಿಗೆ ಸುಜ್ಞಾನಸತ್ರ ನಡೆಸುವುದೂ ಅಸಾಧ್ಯ. "ಹೊರಗೆ ಥಳುಕು; ಒಳಗೆ ಹುಳುಕು" ಎಂಬಂತಹ ಬೋಧಕ ಸ್ಥಾನಗಳಿಂದ ಯಾವುದೇ ಸತ್ಕಾರ್ಯವು ಸಾಧ್ಯವಾಗದು. ಅಂತಹ ಸ್ಥಾನಗಳೆಲ್ಲವೂ ಲಾಭದ ಆಸೆಯಿಂದಲೇ ವರ್ತಿಸುವುದು ಸಹಜ. ಜ್ಞಾನದ ಗ್ರಹಿಕೆ ಮತ್ತು ಕಲಿಸುವಿಕೆಯಲ್ಲಿಯೂ ಭೇದಭಾವವನ್ನು ತೋರುವ - ಹೆಸರು ಉಳಿಸುವ ಸಭ್ಯ ಸಜ್ಜನನಾದ ಒಬ್ಬನೇ ಒಬ್ಬ ವಿದ್ಯಾರ್ಥಿಯನ್ನೂ ರೂಪಿಸಲಾಗದ ಅಧ್ಯಾಪಕನು ಎಂದಿಗೂ ಗುರುವೆನ್ನಿಸಿಕೊಳ್ಳಲಾರ. ತನ್ನ ಸ್ಥಾನದ ಬಲದಿಂದ ಸ್ವಂತದ "ಗುಪ್ತ ಕಾರ್ಯಸೂಚಿ"ಯನ್ನು ತನ್ನ ವಿದ್ಯಾರ್ಥಿಗಳ ಮೂಲಕ ಜಾರಿಗೆ ತರಲು ಶಿಕ್ಷಣ ಕ್ಷೇತ್ರದ ಉಪಯೋಗವಾಗಬಾರದು. ಹಾಗೆ ಗುಂಪುಗಾರಿಕೆಯ ತರಬೇತಿ ನೀಡುತ್ತ ಮುಂದಿನ ಪೀಳಿಗೆಯ ದಾರಿ ತಪ್ಪಿಸುವ ಹುನ್ನಾರ ನಡೆಸುವವರು ಅಧ್ಯಾಪಕ ಅನ್ನಿಸಿಕೊಳ್ಳಲೂ ಅರ್ಹರಲ್ಲ. ಇವರೆಲ್ಲರೂ ಮಿತಿಮೀರಿದ ಆಸೆಯುಳ್ಳ ಹೊಸ ಕಾಲದ ಬಂದಳಿಕೆಗಳು. ಬಲವಾದ ಮರದ ಸಾರವನ್ನೇ ಹೀರಿ ಬೆಳೆದು ಅದೇ ಮರವನ್ನು ನಿರ್ನಾಮ ಮಾಡುವ ಬಂದಳಿಕೆಗಳನ್ನು ಮೊಳಕೆಯಲ್ಲಿಯೇ ಗುರುತಿಸಿ ಚಿವುಟದಿದ್ದರೆ ಅನಾಹುತವಾದೀತು. ಅಂದಿನ ಕಾಲದ ಗುರುಸ್ಥಾನವು - ಅನಂತರ ಉಪಾಧ್ಯಾಯನಾಗಿ, ಅಧ್ಯಾಪಕನಾಗಿ, ಈಗ ಶಿಕ್ಷಕ ಎಂಬಲ್ಲಿಗೆ ಬಂದು ನಿಂತಿದೆ. ಜ್ಞಾನದ ಮಾರ್ಗದಲ್ಲಿ ಎಡವದಂತೆ ಕೈ ಹಿಡಿದು ನಡೆಸುತ್ತ ತನ್ನ ವಿದ್ಯಾರ್ಥಿಗಳಿಗೆ ಸನ್ಮಾರ್ಗದ ಪಾಠ ಹೇಳುವವನು - ಎಂಬ ಅರ್ಥದಲ್ಲಿ "ಅಂದಿನ ಗುರು" ವು ಕಾಣಿಸಿಕೊಂಡರೆ ಇಂದು ಅದು ಶಿಕ್ಷಕನೆಂಬ ಸಂಕುಚಿತ ವ್ಯಾಪ್ತಿಯ ಕಂಠಶೋಷಣೆಯ ವೃತ್ತಿಯಾಗಿದೆ. ಅಂತಹ ಸಾಮಾನ್ಯ ಶಿಕ್ಷಕ ಸ್ಥಾನದಲ್ಲಿರುವ ಇಂದಿನ ಕೆಲವು ಉದ್ದಾಮ ಶಿಕ್ಷಕರನ್ನು ನೋಡಿದರೆ "ವಿದ್ಯಾರ್ಥಿಗಳಿಗೆ, ಸಮಾಜಕ್ಕೆ ಇವರು ಶಿಕ್ಷೆಯ ರೂಪದಲ್ಲಿ ಅವತರಿಸಿರಬಹುದೇ?" ಎಂದೂ ಅನ್ನಿಸುವುದಿದೆ. ಅನೇಕ ಅಧ್ಯಯನ ನಿರತ ಸಜ್ಜನ ಅಧ್ಯಾಪಕರುಗಳು ಈಗಲೂ "ಕಲಿಕಾಟ"ಗಳಿಂದ ತಳಮಟ್ಟದಲ್ಲಿ ನರಳುತ್ತ ಉಳಿದುಕೊಂಡಿದ್ದರೂ ಆಸ್ಥಾನ ವಿದ್ವಾಂಸರೆಂದುಕೊಂಡಿರುವ ಬೆರಳೆಣಿಕೆಯ ಋಣಸಂತಾನವು ಸಭ್ಯರನ್ನೆಲ್ಲ ದಾರಿ ತಪ್ಪಿಸಬಲ್ಲ "ಮಾದರಿ"ಗಳಂತೆ ಭೋರ್ಗರೆಯುತ್ತಲೇ ಇದೆ.

ನನ್ನ 9 ಮತ್ತು 10ನೇ ತರಗತಿಯಲ್ಲಿ ನನ್ನ ತಂದೆ ದಿ. ಐರೋಡಿ ಯಜ್ಞನಾರಾಯಣ ಉಡುಪ ರು ನನಗೆ ಕನ್ನಡದ ಅಧ್ಯಾಪಕರಾಗಿದ್ದರು. ಅವರ ಸಮಯ ಪಾಲನೆಯ ಶೈಲಿಯು ಅನುಕರಣೀಯವಾಗಿತ್ತು. ತರಗತಿಯ ಆರಂಭವನ್ನು ಸೂಚಿಸುವ  ಗಂಟೆಯು ಹೊಡೆಯುವ ಮೊದಲೇ ಅವರು ನಮ್ಮ ತರಗತಿಯ ಹೊರಗೆ ನಿಂತಿರುತ್ತಿದ್ದರು. ಗಂಟೆಯು ಹೊಡೆದ ತಕ್ಷಣ ತರಗತಿಯ ಒಳಗೆ ಕಾಲಿಡುತ್ತಿದ್ದರು. "ಗಂಟೆಯು ಹೊಡೆದ ನಂತರ Staff Room ನಿಂದ ಹೊರಟರೆ 3 - 4 ನಿಮಿಷ ತಡವಾಗಬಹುದು; ಹಾಗಾಗಬಾರದು" ಎಂಬ ದೃಷ್ಟಿಯಿಂದ ತರಗತಿಯ ಹೊರಗೇ ನಿಂತು ಕಾಯುವುದು ಅವರ ಶೈಲಿಯಾಗಿತ್ತು. ಒಂದು ತರಗತಿಯು ಮುಗಿದ ನಂತರ ಇನ್ನೊಂದು ತರಗತಿಗೆ ಹೋಗುವ ಮೊದಲು ಹೆಚ್ಚಿನ ಅಧ್ಯಾಪಕರು Staff Room ಗೆ ಹೋಗಿ ತರಗತಿಗೆ ಬರುತ್ತಿದ್ದರೆ ದಿ. ಉಡುಪರು ಒಂದು ತರಗತಿಯಿಂದ ಇನ್ನೊಂದು ತರಗತಿಗೆ ನೇರವಾಗಿ ಹೋಗುತ್ತಿದ್ದರು. ಸಮಯಪಾಲನೆಗೆ ತುಂಬ ಮಹತ್ವವನ್ನು ಕೊಡುತ್ತಿದ್ದ ಕೆಲವೇ ಅಧ್ಯಾಪಕರುಗಳಿದ್ದ ಕಾಲವದು. ಅವರಲ್ಲಿ ಉಡುಪರು ಅತಿ  ವಿಶಿಷ್ಟವೆನಿಸಿದ್ದರು. ಆದರೆ ಎರಡು ತರಗತಿಯ ನಡುವಿನ ಕಿರು ಅವಧಿಯಲ್ಲಿ ಪುರಕ್ಕೆಂದು ಹೊರಗೆ ಓಡಿ ಹೋಗಿ ಬರುವುದನ್ನು ಅಭ್ಯಾಸ ಮಾಡಿಕೊಂಡಿದ್ದ ಕೆಲವು ಚಂಚಲ ಸ್ವಭಾವದ ವಿದ್ಯಾರ್ಥಿಗಳಿಗೆ ಇದೇ ಕಾರಣಕ್ಕೆ ಉಡುಪ್ರ್ ಮಾಷ್ಟ್ರ ಮೇಲೆ ಅಸಮಾಧಾನವೂ ಇತ್ತು. "ಈ ಕನ್ನಡ ಪಂಡಿತರಿಗೆ ಅಷ್ಟ್ ಅಮಸರ ಎಂತಕ್ಕಾ? ಎರಡ್ ನಿಮ್ಶ ತಡ ಆಯ್ ಕ್ಲಾಸಿಗ್ ಹೊಗ್ಗಿರೆ ಎಂತ ಆತ್ ? ಅವ್ರ್ ಬರ್ಲಿಲ್ಲೆ ಅಂತ್ ಇಲ್ಲ್ ಯಾರಾರು ಮರ್ಕತ್ರಾ ?" ಎಂದು ತಮಾಷೆ ಮಾಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ನನ್ನ ತರಗತಿಯಲ್ಲಿ ಇದ್ದರು. ಅದನ್ನು ಕೇಳಿಸಿಕೊಂಡ ನಾನು ಅವರ ಮಾತುಗಳನ್ನು ಅಪ್ಪಯ್ಯನಿಗೂ ಹೇಳಿದ್ದೆ. ಆಗ ಅವರು ನಕ್ಕಿದ್ದರು. "ಹುಡುಗಾಟ..." ಎಂದಷ್ಟೇ ಉತ್ತರಿಸಿದ್ದರು. ಅನಂತರವೂ ಅವರ ದಿನಚರಿಯಲ್ಲೇನೂ ಬದಲಾವಣೆಯಾಗಿರಲಿಲ್ಲ.

ದಿ. ಉಡುಪರು ತಮ್ಮ ತರಗತಿಯಲ್ಲಿ ಒಂದು ಕ್ಷಣವನ್ನೂ ವ್ಯರ್ಥ ಮಾಡದೆ ಕನ್ನಡ ಪಾಠದ ಜೊತೆಗೆ ಪೂರಕ ವಿಷಯಗಳನ್ನೂ ಹೇಳುತ್ತಿದ್ದರು. ವಿಭಿನ್ನ ವಿಷಯಗಳನ್ನು ಕೊಟ್ಟು ಒಂದು ವರ್ಷದಲ್ಲಿ ಕನಿಷ್ಠ 20 ಪ್ರಬಂಧಗಳನ್ನು ವಿದ್ಯಾರ್ಥಿಗಳಿಂದ ಬರೆಸುತ್ತಿದ್ದರು; ಅದನ್ನು ತಾವೇ ತಿದ್ದಿ, ಅನಂತರ ತರಗತಿಯಲ್ಲಿ ಪ್ರತಿಯೊಬ್ಬರನ್ನೂ ವೈಯ್ಯಕ್ತಿಕವಾಗಿ ಕರೆದು ಸಲಹೆ ಸೂಚನೆಗಳನ್ನೂ ಕೊಡುತ್ತಿದ್ದರು; ವಿದ್ಯಾರ್ಥಿಗಳನ್ನು ಮಾತನಾಡಿಸಿಯೂ ಅವರ ಭಾಷೆಯನ್ನು ತಿದ್ದುತ್ತಿದ್ದರು. ಕನ್ನಡ ಭಾಷೆಯ ಸೊಗಸು, ಸಾಹಿತ್ಯದ ರುಚಿಯನ್ನು ಸವಿಯುವ ಬಗೆ, ನೆಲ, ಜಲ, ಸದಭಿರುಚಿ, ದೇಶಭಕ್ತಿ...ಇಂತಹ ಹಲವಾರು ವಿಷಯಗಳನ್ನು ರಸವತ್ತಾಗಿ, ಸೋದಾಹರಣ ದೃಷ್ಟಾಂತಗಳೊಂದಿಗೆ ಹೇಳಿ, ಮಕ್ಕಳ ಹಸಿ ಮನಸ್ಸಿನಲ್ಲಿ ಚೈತನ್ಯವನ್ನು ತುಂಬುತ್ತಿದ್ದರು; ಭಾಷೆಯ ನೆಲೆಯಿಂದಲೇ ತನ್ನ  ವಿದ್ಯಾರ್ಥಿಗಳ ಬೌದ್ಧಿಕ ಸ್ತರವನ್ನು ಎತ್ತಲು ಸತತವಾಗಿ ಪ್ರಯತ್ನಿಸುತ್ತಿದ್ದರು. ತಮ್ಮ ತರಗತಿಯು ಮುಗಿದ ಗಂಟೆಯು ಕೇಳಿಸಿದ ತಕ್ಷಣ ಅಂದಿನ ಪಾಠವನ್ನು ಮುಗಿಸಿ, ಕರಿಹಲಗೆಯನ್ನು ಒರೆಸಿ ಸ್ವಚ್ಛಗೊಳಿಸಿ, ಮುಂದಿನ ತರಗತಿಗೆ ವೇದಿಕೆಯನ್ನು ಸಿದ್ಧಪಡಿಸಿ ಹೊರಟು ಬಿಡುತ್ತಿದ್ದರು.

ಮನೆ ಪಾಠ, Insurance Agency ... ಇತ್ಯಾದಿ ವ್ಯವಹಾರ ನಡೆಸಿ ತಮ್ಮ ಕುಟುಂಬವನ್ನು ತೃಪ್ತಿಪಡಿಸುತ್ತಿದ್ದ ಅಧ್ಯಾಪಕರು ಅಂದೂ ಇದ್ದರು. ಆದರೆ ನಮ್ಮ ಕನ್ನಡ ಪಂಡಿತರು ಉಪ ಉದ್ಯೋಗ ನಡೆಸಿ ತಮ್ಮ ವೃತ್ತಿನಿಯಮವನ್ನು ಎಂದೂ ಮೀರಿದವರಲ್ಲ. ಭಾಷೆ, ಸಾಹಿತ್ಯದ ವಿಷಯ ವಿಚಾರಗಳನ್ನು ತಿಳಿದುಕೊಳ್ಳಲು ಮನೆಗೂ ಬರುತ್ತಿದ್ದ ವಿದ್ಯಾರ್ಥಿಗಳಿಗೆ ತಮಗೆ ತಿಳಿದದ್ದನ್ನು ಮುಕ್ತವಾಗಿ ಹಂಚಿದವರಿವರು. ಅದಕ್ಕೆ ಪ್ರತಿಯಾಗಿ ತಮ್ಮಲ್ಲಿ ಬೆಳೆದ ಅಕ್ಕಿ, ತರಕಾರಿ, ಬೆಲ್ಲ...ಎಂದು ಹೇಳಿಕೊಂಡು ಮನೆಗೆ ಹೊತ್ತು ತಂದವರನ್ನು ನಯವಾಗಿ ಗದರಿಸಿ ಹಿಂದಿರುಗಿಸುತ್ತಿದ್ದ "ಅಧ್ಯಾಪಕ ಆದರ್ಶ" ಅವರಲ್ಲಿತ್ತು. ಅವರಿಗೆ ಅನುರೂಪಳಾದ ಪತ್ನಿಯೂ ಜೊತೆಗೂಡಿದ್ದು ಅವರ ಅದೃಷ್ಟ. ತಮ್ಮ ಬದುಕಿನುದ್ದಕ್ಕೂ ಯಾವುದೇ "ಇಳಿಸುವ ಸ್ಪರ್ಧೆ"ಗಳಲ್ಲಿ ತೊಡಗದೆ ತಮ್ಮ ಕರ್ತವ್ಯವನ್ನು ಹೃತ್ಪೂರ್ವಕವಾಗಿ ಮಾಡುವುದರಲ್ಲಿಯೇ ಇಡೀ ಆಯುಷ್ಯವನ್ನು ಮುಗಿಸಿ  ಮೇಲೇರಿದವರವರು. ತಮ್ಮ ಅತ್ಯಂತ ಬಡತನದ ದಿನಗಳಲ್ಲೂ ಯಾವುದೇ ಕ್ಷುಲ್ಲಕ ಆಮಿಷಗಳಿಗೆ ಬಲಿಯಾಗದ ಉಡುಪರಂತಹ ಕೆಲವು ಅಧ್ಯಾಪಕರುಗಳು ಆಗಿನ ಸಮಾಜದಲ್ಲಿ ಅಲ್ಲೊಂದು ಇಲ್ಲೊಂದು ಕಾಣಿಸುತ್ತಿದ್ದವು. ಅಂದೂ ಅಂಥವರು ಯಾವುದೇ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗುತ್ತಿರಲಿಲ್ಲ. ಕರ್ನಾಟಕದ ಕರಾವಳಿಯ ಭಾಗದ ವಿದ್ವಾಂಸರನ್ನು ಮಲತಾಯಿಯ ಧೋರಣೆಯಿಂದ ನಡೆಸಿಕೊಳ್ಳುವ ಸಾರಸ್ವತ ಲೋಕವು ಆಗಲೇ ಅಸ್ತಿತ್ವದಲ್ಲಿತ್ತು. ಶ್ರೀ ಕೋಟ ಶಿವರಾಮ ಕಾರಂತರು ನನ್ನ ತಂದೆಯವರಲ್ಲಿ ಮಾತನಾಡುತ್ತಿದ್ದಾಗ ಈ ವಿಚಾರವು ಒಮ್ಮೊಮ್ಮೆ ನುಸುಳಿ ಹೋಗುವುದಿತ್ತು. ಆದರೆ ಯಾವುದೇ ವಿದ್ವತ್ತುಂಬಿಲರು ಮಾನ್ಯತೆಗಾಗಿ ಹಂಬಲಿಸುವುದೂ ಇಲ್ಲ; ಚಿಂತಿಸಿ ನೋಯುವುದೂ ಇಲ್ಲ. ಅದೇ ಕರಾವಳಿಯ ಶೈಲಿ ! ಆದರೆ ಉತ್ತಮಿಕೆಯನ್ನು ಗೌರವಿಸುವ, ವಿದ್ವತ್ತಿಗೆ ತಲೆಬಾಗುವ ಸಜ್ಜನಿಕೆಯು ಅಂದಿನ ಕರಾವಳಿಯ ಸಾಮಾಜಿಕ ಪರಿಸರದಲ್ಲಿತ್ತು; ಬೌದ್ಧಿಕ ಭಯೋತ್ಪಾದನೆ - ಗುಂಪುಗಾರಿಕೆಯು ಇನ್ನೂ ಬಲ ಪಡೆದುಕೊಂಡಿರಲಿಲ್ಲ; ಕಾಲುಕೆರೆದು ಜಗಳವಾಡುವವರಿರಲಿಲ್ಲ. ಆದ್ದರಿಂದ ವಿದ್ವಜ್ಜನರು ತಮ್ಮಷ್ಟಕ್ಕೆ ಸುಖವಾಗಿಯೇ ಇದ್ದರು.

ಈಗಲೂ ಸಮರ್ಪಣಾಭಾವದ ಮತ್ತು - "ರಾಜಕೀಯ ಕಡಿಮೆ; ಕೆಲಸ ಜಾಸ್ತಿ" ಎನ್ನುವ ಕೆಲವು ಅಧ್ಯಾಪಕರು ಇದ್ದಾರೆ. ಅಂಥವರಿಂದಲೇ ನಮ್ಮ ಬೀದಿಯು ಈಗಲೂ ಕಿಂಚಿತ್ತಾದರೂ ಸ್ವಚ್ಛವಾಗಿದೆ - ಅಂದುಕೊಳ್ಳಬಹುದು. ಆದರೆ ಎಂತಹ ದುರ್ಭಿಕ್ಷ ಕಾಲದಲ್ಲಿ ನಾವಿದ್ದೇವೆಂದರೆ, ಇಂದು ಸದ್ವಿದ್ಯೆಗೆ ಸುತರಾಂ ರಾಜಾಶ್ರಯವಿಲ್ಲ. ಆದ್ದರಿಂದ ರಾಜಾಶ್ರಯ ಪಡೆಯುತ್ತಿರುವ ಬೂಟಾಟಿಕೆಗಳು ಮಾತ್ರ ಏರುಗತಿಯಲ್ಲಿದೆ. ಇತ್ತ, ಸ್ಥಿರ ಸತ್ಯವಲ್ಲದ ನಿರಂತರ ಬದಲಾಗುತ್ತಿರುವ ಮಾಹಿತಿ ಶಾಸ್ತ್ರದ ಸುತ್ತಲೂ ಅಟಕಾಯಿಸುತ್ತ ಜ್ಞಾನದ ಪರಿಧಿಯನ್ನೇ ಮಿತ ಮತ್ತು ಏಕಮುಖಗೊಳಿಸಿಕೊಂಡಿದ್ದೇವೆ. ತನ್ಮೂಲಕ, ಅಂತಃಶೋಧನೆಗೆ ಒಳಗಾಗದ ಕಚ್ಚಾ ಅರಿವಿನಿಂದಾಗಿ ಆಂತರ್ಯದ ಕೊಳಕು - ಹುಳುಕು ಅಧೋಮುಖವಾಗಿ ಭರದಿಂದ ಇಳಿಯುತ್ತಿದೆ.   

ನಮ್ಮೊಳಗಿನ ವಿದ್ಯೆಯು ನಮ್ಮ ಮುಖದಲ್ಲಿ ನೆಲೆಸಿರುತ್ತದೆ; ವರ್ತನೆ ಮತ್ತು ಮಾತಿನಲ್ಲಿ ಪ್ರತಿಫಲಿಸುತ್ತದೆ. ಬೀಸುಮಾತಿನ ಹೊಣೆಗೇಡಿ ಚಾಟಿಯನ್ನು ಬೀಸುವುದು ನಿಜವಾದ ಶಾರದೋಪಾಸಕರಿಗೆ ಎಂದಿಗೂ ಸಾಧ್ಯವಾಗದ ಕಾರ್ಯ. ಯಾವುದೇ ಸಕಾರಣವಿಲ್ಲದೆ ಕಟುವಾಗಿ ವರ್ತಿಸುವುದೂ ವಿದ್ವಾಂಸರಿಂದ ಸಾಧ್ಯವಾಗದು. ಆದರೆ ಕೆಲವು ಸಡಿಲು ಮುಚ್ಚಳದ "ತುಳುಕಣ್ಣ"ಗಳು ತಮ್ಮೊಳಗನ್ನೆಲ್ಲ ತುಳುಕಿಸುತ್ತ ತಮ್ಮ ಬುದ್ಧಿ ಬೋಗುಣಿಯನ್ನು ಖಾಲಿ ಮಾಡಿಕೊಳ್ಳುವ ಅವಸರಕ್ಕೆ ಬಲಿಯಾಗುವುದಿದೆ. "ಎಲ್ಲರೂ ಕಾಲಿನಿಂದ ನಡೆದಾಡಿದರೆ ನಾನು ಕೈಯಿಂದ ನಡೆಯುತ್ತೇನೆ" ಎನ್ನುವ ಇಂಥವರನ್ನು "ಸಿದ್ಧ ಪುರುಷರು" ಅನ್ನದೆ - "ಮರುಳು" ಎಂದೇ ಗುರುತಿಸುತ್ತಾರೆ.

ಉತ್ತಮ ವಿಚಾರ - ಚಿಂತನೆಗಳು ಎಲ್ಲಿಂದ ಬಂದರೂ ಸ್ವೀಕರಿಸಿದ ಹಿರಿಮೆಯು ಭಾರತೀಯರದು. ನಮ್ಮ ಪೂರ್ವ ಸಾಹಿತ್ಯಗಳಿಗೆ ಹೊಸ ಭಾಷ್ಯವನ್ನು ವ್ಯಾಖ್ಯಾನವನ್ನು ಅನೇಕರು ಮಾಡಿದ್ದಿದೆ. ಯಾವುದೇ ಸಿಂಗಾರಕ್ಕೂ ತನ್ನನ್ನು ಒಡ್ಡಿಕೊಂಡ ಪ್ರಯೋಗಶೀಲ  ಸಂಸ್ಕೃತಿಯ ಹಿನ್ನೆಲೆಯು ಈ ನೆಲಕ್ಕಿದೆ. ಹೃದಯ ವೈಶಾಲ್ಯಕ್ಕೆ ಭಾರತೀಯ ಚಿಂತಕ - ಜ್ಞಾನಿಗಳು ಅನುಪಮ ಉದಾಹರಣೆಯಾಗಬಲ್ಲರು. ಚಾರ್ವಾಕನನ್ನೂ ಗೌರವಿಸಿದ ಭಾರತೀಯರು ನಾವು. ಅಭಿಪ್ರಾಯ ಸ್ವಾತಂತ್ರ್ಯಕ್ಕೆ ಹಿಂದುಸ್ತಾನದಲ್ಲಿ ದೊರೆತಷ್ಟು ಬಲವು ಜಗತ್ತಿನ ಯಾವುದೇ ಇತರ ದೇಶಗಳಲ್ಲಿ ಸಿಗಲಾರದು. ಆದ್ದರಿಂದ ಬರೆಯುವುದು ತಪ್ಪಲ್ಲ. ಆದರೆ ರಾಮನನ್ನು ಧೂಮ ಮಾಡಲು ಹೊರಟರೆ ತುಂಬು ನಾಮವಲ್ಲದೆ ಬೇರೇನೂ ಸಿಗಲಾರದು. ಯಾರೇ ಆಗಲಿ, ಬೇಲಿ ಹಾರಲು ಹೊರಟರೆ ಎಚ್ಚರಿಸುವುದು ಅನಿವಾರ್ಯವಾಗುತ್ತದೆ. ಇಂತಹ ವಿಕೃತ ಶಿಕ್ಷಣ ಸ್ಥಾನಗಳ, ಅಧ್ಯಾಪಕರ "ಕಪಿ" ಮುಷ್ಟಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳೂ "ಪಿಕ" ವಾಗಲು ಸಾಧ್ಯವಿಲ್ಲ. ಮನಸ್ವಾಸ್ಥ್ಯವಿಲ್ಲದ ಅಧ್ಯಾಪಕರಿದ್ದರೆ - ಸಮಾಜವನ್ನು ಕೆಡಿಸಲು ಬೇರೆ ಆಯುಧಗಳೇ ಬೇಕಿಲ್ಲ. ತನ್ನ ಹೊಟ್ಟೆಪಾಡಿಗಾಗಿ ನಿರ್ವಹಿಸುವ ವೃತ್ತಿಯಿಂದ ಇನ್ನೊಂದು ಜೀವಿಗೆ ತೃಣಮಾತ್ರವೂ ಉಪಕಾರಿಯಾಗಿರದ ವ್ಯಕ್ತಿಗಳು ಒಂದು ಬಗೆಯ ಸಾಮಾಜಿಕ ಪಾತಕಿಗಳು. ರಣ ಹದ್ದು ಬಹಳ ಎತ್ತರವೇನೋ ಹೋಗುತ್ತದೆ; ಆದರೆ ಅದರ ದೃಷ್ಟಿ ಮಾತ್ರ ಕೆಳಗೆ; ಸತ್ತ ಪ್ರಾಣಿಗಳ ಕಡೆಗೆ. ಇದನ್ನೇ ಕೆಟ್ಟ ಅಭಿರುಚಿಯ ಅವಿದ್ಯಾ ಸಂಸಾರ -  ಎನ್ನುವುದು. ಇಂಥವರು ಪರೋಕ್ಷವಾಗಿ ಬೀದಿಗಳನ್ನು ಹಾಳು ಮಾಡುವುದರಲ್ಲಿ ಸಂದೇಹ ಬೇಡ.

ಇನ್ನು ಸನ್ಯಾಸದ ವಿಚಾರಕ್ಕೆ ಬಂದರೆ, ಸನ್ಯಾಸಿಗಳು ಎಂದರೆ ಸರ್ವ ಸಂಗ ಪರಿತ್ಯಾಗಿಗಳು. ಇಂದಿನ ಲಿಂಬೆ, ಮಿಡಿ, ಬೆಂಡೆ, ಮೆಣಸು, ಕೊತ್ತುಂಬರಿಗಳೆಲ್ಲವೂ ಸನ್ಯಾಸಿಗಳೆ?

"ದುಃಖಗಳಲ್ಲಿ ಉದ್ವೇಗವಿಲ್ಲದ ಮನಸ್ಸುಳ್ಳವನೂ ಸುಖದಲ್ಲಿ ಆಸೆಯಿಲ್ಲದವನೂ ಆಸಕ್ತಿ - ಭಯ - ಕ್ರೋಧಗಳಿಲ್ಲದವನೂ ಆದವನು ಸನ್ಯಾಸಿ." (ಭಗವದ್ಗೀತೆ)

"ಅಜ್ಞಾನಿಗಳು ಕರ್ಮದಲ್ಲಿ ಆಸಕ್ತರಾಗಿ ಹೇಗೆ ಕರ್ಮವನ್ನು ಮಾಡುವರೋ ಹಾಗೆಯೇ ಜ್ಞಾನಿಯು ಅನಾಸಕ್ತನಾಗಿ ಲೋಕಸಂಗ್ರಹದ ದೃಷ್ಟಿಯಿಂದ ಕರ್ಮವನ್ನು ಮಾಡಬೇಕು" (ಸಕ್ತಾಃ ಕರ್ಮಣ್ಯವಿದ್ವಾಂಸೋ ಯಥಾ ಕುರ್ವಂತಿ ಭಾರತ / ಕುರ್ಯಾದ್ವಿದ್ವಾನ್ ತಥಾಸಕ್ತಃ ಚಿಕೀರ್ಷುಃ ಲೋಕಸಂಗ್ರಹಮ್ - ಭಗವದ್ಗೀತೆ 3- 25)

ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ, ಸನ್ಯಾಸ - ಎಂಬ ನಾಲ್ಕು ಆಶ್ರಮಗಳಿವೆ. ಸನ್ಯಾಸವನ್ನು ಬಿಟ್ಟು ಉಳಿದ ಮೂರು ಆಶ್ರಮಗಳಲ್ಲೂ ಕರ್ಮವನ್ನು ಮಾಡುತ್ತಲೇ ಇರಬೇಕಾಗುತ್ತದೆ. ಆದರೆ ಸನ್ಯಾಸಿಯು ಮಾತ್ರ ದಂಡಕಮಂಡಲುಧಾರಿಯಾಗಿ ಭಿಕ್ಷಾಪಾತ್ರೆಯನ್ನು ಹಿಡಿಯಬೇಕಾಗುತ್ತದೆ. ಸನ್ಯಾಸಿಯು ಕೆಲವು ನಿತ್ಯ ಕರ್ಮಗಳನ್ನು ಮಾಡಿದರೂ ಆತನ ಮನಸ್ಸು ಕರ್ಮಾಸಕ್ತವಾಗಿರುವುದಿಲ್ಲ. ತಾನು ಕರ್ಮಗಳನ್ನು ನಡೆಸುತ್ತಿದ್ದೇನೆ ಎನ್ನುವ ಭಾವನೆಯಾಗಲೀ ತನ್ಮಯತೆಯಾಗಲೀ ಸನ್ಯಾಸಿಗಿರುವುದಿಲ್ಲ. ಕೆಲವೊಮ್ಮೆ ಲೋಕ ಶಿಕ್ಷಣಕ್ಕಾಗಿ ಸನ್ಯಾಸಿಗಳು ನಿತ್ಯ ಕರ್ಮಗಳನ್ನು ಮಾಡುತ್ತಾರೆ. ಒಂದೊಂದು ಜೀವಿಯ ಪ್ರಕೃತಿಗೆ ಹೊಂದುವಂತಹ ವಿಭಿನ್ನ ಸತ್ಕರ್ಮಗಳಲ್ಲಿ ತೊಡಗುವ ಪ್ರೇರಣೆಯನ್ನು ಮತ್ತು ದಾರಿಯನ್ನು - ಗುರುವಾಗಿ  ತೋರಬಲ್ಲವನು ಸನ್ಯಾಸಿ. ಯಾವುದೇ ನಿಂದೆಯು ಸನ್ಯಾಸಿಯನ್ನು ವಿಚಲಿತಗೊಳಿಸುವುದಿಲ್ಲ. ತೀರ ಅನಿವಾರ್ಯವಾಗದೆ ಯಾವುದೇ ಸನ್ಯಾಸಿಯು ಸಾಮಾಜಿಕ ಗೊಂದಲಗಳಲ್ಲಿ ಪ್ರತ್ಯಕ್ಷವಾಗಿ ತೊಡಗಿಕೊಳ್ಳಬಾರದು. ರಾಜಧರ್ಮವನ್ನು ನಿಭಾಯಿಸುವವರ ಚರ್ಯೆಯು ದ್ರೋಹ ಚಿಂತನೆಯೆಂದು ದೃಢಪಟ್ಟಾಗಲೂ ಅದನ್ನು ತಿದ್ದಲು ನೇರವಾಗಿ ಆಜ್ಞಾಪಿಸುವ ಸಾಮರ್ಥ್ಯವಿಲ್ಲದೆ ಯಾವುದೇ ಸನ್ಯಾಸಿ ಎಂದುಕೊಳ್ಳುವವರು ಸಾಮಾಜಿಕ ತಳಮಳಗಳ ಭಾಗವಾಗಬಾರದು. ಸನ್ಯಾಸವು ನಿತ್ಯದ ಪ್ರತಿಭಟನೆಗಳ ಭಾಗವಾಗಲೇಬಾರದು. ಯಾವುದೇ ಸನ್ಯಾಸವನ್ನು ಗೌರವಿಸುವ ಆಯಾ ಸಮಾಜ ಬಂಧುಗಳು ತಮ್ಮ ಆರಾಧ್ಯ ಗುರುಗಳ ಚಿಂತನೆಯನ್ನು ಕಾರ್ಯರೂಪಕ್ಕೆ ತರುವ ಶಕ್ತಿಯನ್ನು ಹೊಂದಿರುವಂತೆ ಅವರನ್ನು ರೂಪಿಸಿದರೆ ಅಷ್ಟೇ ಸಾಕಾಗುತ್ತದೆ. ಆಗ ರಾಜಪೀಠವೇ ಸನ್ಯಾಸೀ ಗುರುವನ್ನು ಹುಡುಕಿಕೊಂಡು ಬರುತ್ತದೆ. ಆಗ ಸನ್ಯಾಸದ ಗೌರವವೂ ಉಳಿಯುತ್ತದೆ; ಹೆಚ್ಚುತ್ತದೆ. ಸಾಮಾಜಿಕ ಬದುಕಿನಿಂದ ಮತ್ತು ದೇಹಭಾವದಿಂದ ದೂರವಿದ್ದು ಸದಾಕಾಲವೂ ಸದನುಷ್ಠಾನ, ಅಧ್ಯಯನ, ಆಧ್ಯಾತ್ಮಿಕ ಚಿಂತನೆ, ಧ್ಯಾನ, ಏಕಾಂತದಲ್ಲಿರುವವನು - ಸನ್ಯಾಸಿ. ಸನ್ಯಾಸಿಯ ಅನುಪಮ ತ್ಯಾಗದ ಪರಿಯನ್ನು ನೋಡಿದ ಇತರ ಕೆಲವರಲ್ಲಾದರೂ ವೈರಾಗ್ಯ, ತ್ಯಾಗದ ಭಾವವು - ಕ್ಷಣಿಕವಾಗಿಯಾದರೂ ಮೂಡುವಂತಾದರೆ ಯಾವುದೇ ಸನ್ಯಾಸವು ಸಾರ್ಥಕವಾಗುತ್ತದೆ. ಕಾಮ ಕಾಂಚನವನ್ನು ತೃಣವಾಗಿ ಭಾವಿಸಿ, ಆಚರಿಸುವ ಸನ್ಯಾಸಿಯ ಶ್ರೇಷ್ಠ ಆಚರಣೆ ಮತ್ತು ಆದರ್ಶವು ಸಾಮಾನ್ಯ ಜೀವಿಗಳನ್ನು ಪ್ರೇರೇಪಿಸುವಂತಿದ್ದರೆ ಮಾತ್ರ ಸನ್ಯಾಸವು ಅರ್ಥಪೂರ್ಣವಾಗುತ್ತದೆ. ಹಾಗಿಲ್ಲದಾಗ, ಇಡೀ ಸನ್ಯಾಸಾಶ್ರಮ ವ್ಯವಸ್ಥೆಯೇ ಪ್ರಶ್ನಾರ್ಥಕವಾಗುತ್ತದೆ.
 
ನಮ್ಮ ದುರದೃಷ್ಟಕ್ಕೆ ಇಂದಿನ ಸನ್ನಿವೇಶದಲ್ಲಿ, ನಮ್ಮ ನಿರೀಕ್ಷೆಯ ಪರಿಪೂರ್ಣ ಸನ್ಯಾಸಿಯನ್ನು ಕಾಣುವುದು ದುರ್ಲಭವೆನ್ನಿಸಿದೆ. ಹೀಗಿರುವಾಗ ಧರ್ಮಾತೀತ ವಾಗಿ - ಸಮಗ್ರವಾಗಿ ನೋಡಿದರೆ, ಗೃಹಸ್ಥರಿಗಿಂತ ತೀವ್ರವಾಗಿ ಲೌಕಿಕದಲ್ಲಿ - ಸಂಸಾರದಲ್ಲಿ ಮುಳುಗಿರುವ ಸನ್ಯಾಸೀ ವೇಷದವರನ್ನು ನಾವು ನಿತ್ಯವೂ ನೋಡುತ್ತಿಲ್ಲವೆ?

ಇನ್ನು ಬ್ರಾಹ್ಮಣ್ಯದ ವಿಚಾರಕ್ಕೆ ಬಂದರೆ, ಬ್ರಾಹ್ಮಣನೆಂದರೆ ಬ್ರಹ್ಮ ಚಿಂತನೆ, ಕರ್ಮಾನುಷ್ಠಾನ, ದಾನ ಧರ್ಮ, ಆತ್ಮೋನ್ನತಿಯ ಚಿಂತನೆಯಲ್ಲಿ ತೊಡಗಿಕೊಂಡು ದುರಾಸೆಯನ್ನು ಮೀರಿದವನಾಗಿರಬೇಕು; ನಿರಪೇಕ್ಷವಾಗಿ ಜ್ಞಾನಪ್ರಸಾರದಲ್ಲಿ ತನ್ಮಯನಾಗಿರಬೇಕು. ದೇಹಬುದ್ಧಿಯು ನಿಯಂತ್ರಣದಲ್ಲಿರಬೇಕು. ನಿಜವಾದ ಬ್ರಾಹ್ಮಣನು ಮಿತ ಅಪೇಕ್ಷೆಗಳೊಂದಿಗೆ ದಾನಧರ್ಮಗಳನ್ನು ಪಾಲಿಸುತ್ತ ಸರಳ ಬದುಕಿನಲ್ಲಿಯೇ ತೃಪ್ತನಾಗಿರಬೇಕು.




ಸುಮಾರು 50 ವರ್ಷಗಳ ಹಿಂದೆ ನಡೆದ ಘಟನೆಯಿದು. ನನ್ನ ತಂದೆ ದಿ. ಯಜ್ಞನಾರಾಯಣ ಉಡುರು ಮತ್ತು ದಿ. ರುಕ್ಮಿಣೀ ಉಡುಪರು ಯಾವುದೋ ಕಾರ್ಯಕ್ಕಾಗಿ ವಢಭಾಂಡೇಶ್ವರಕ್ಕೆ ಹೋಗಿದ್ದರು. (ಉಡುಪಿಯ ಹತ್ತಿರದ ಸಮುದ್ರ ತಟದಲ್ಲಿರುವ ಶಿವ ಕ್ಷೇತ್ರ) ಅಂದಿನ ಸ್ಥಿತಿಗತಿಯಂತೆ - ನಡೆದಾಡಿಕೊಂಡೇ ಓಡಾಡುವ ಜನರು ಆಗ ಹೆಚ್ಚಾಗಿದ್ದರು. ನನ್ನ ಅಪ್ಪಯ್ಯ ಅಮ್ಮನೂ ಅಲ್ಲಿನ ತಮ್ಮ ಕೆಲಸವನ್ನು ಮುಗಿಸಿಕೊಂಡು ಮಧ್ಯಾಹ್ನದ ಹೊತ್ತಿಗೆ ಉಡುಪಿಯತ್ತ ಕಾಲ್ನಡಿಗೆಯಲ್ಲಿ ಬರುತ್ತಿದ್ದರು. ಆ ಮಟಮಟ ಮಧ್ಯಾಹ್ನದ ಬಿಸಿಲಿನಲ್ಲಿ ಅವರು ಬರುತ್ತಿರುವಾಗ ಊರಿನ ಅಂಚಿನಲ್ಲಿದ್ದ ಒಂದು ಮನೆಯ ಜಗಲಿಯಲ್ಲಿ ಮುದಿ ದಂಪತಿಗಳು ಕುಳಿತದ್ದನ್ನು ಕಂಡರು. ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದ ಇವರನ್ನು ಕಂಡ ಕೂಡಲೇ ಆ ದಂಪತಿಗಳು ಜಗಲಿಯಿಂದ ಇಳಿದು ಬಂದು ದಾರಿಹೋಕ ದಂಪತಿಗಳ ಏನು ಎತ್ತಗಳನ್ನು ವಿಚಾರಿಸಿದರು. ಅನಂತರ ತಮ್ಮ ಮನೆಗೆ ಆಗಮಿಸಿ ಊಟಮಾಡಿ ಹೋಗಬೇಕು - ಎಂದು ವಿಧ್ಯುಕ್ತವಾಗಿ ಆಮಂತ್ರಿಸಿದರು. ಅಪ್ಪಯ್ಯ ಅಮ್ಮನನ್ನು ತಮ್ಮ ಮನೆಯ ಒಳಗೆ ಕರೆದುಕೊಂಡು ಹೋಗಿ ಕಾಲು ತೊಳೆದು, ಮಣೆ ಇಟ್ಟು ಕುಳ್ಳಿರಿಸಿ ಅವರ  ಬಾಯಾರಿಕೆಯನ್ನು ಪರಿಹರಿಸಿ, ಊಟಕ್ಕೆ ಇಕ್ಕಿದರು. ದಂಪತಿಗಳಿಬ್ಬರೂ ಎದುರಲ್ಲಿ ಕುಳಿತು ಉಪಚರಿಸುತ್ತ ಅಭ್ಯಾಗತರಿಗೆ ಬಡಿಸಿದರು. ಭೋಜನವು ಮುಗಿದ ಮೇಲೆ ತಾವೇ ಅವರ ಕೈ ತೊಳೆಸಿದರು. ಅನಂತರ ದಕ್ಷಿಣೆಯನ್ನು ನೀಡಿ ಸಾಷ್ಟಾಂಗ ನಮಸ್ಕರಿಸಿದರು. "ಇಂದು ನೀವು ದಂಪತಿಗಳು ಬಂದು ಭೋಜನವನ್ನು ಸ್ವೀಕರಿಸಿ ನಮ್ಮನ್ನು ಕೃತಾರ್ಥರನ್ನಾಗಿ ಮಾಡಿದಿರಿ...ಕೃಷ್ಣಾರ್ಪಣ..." ಎಂದು ಹೇಳುತ್ತ ಕಣ್ಣೀರು ಸುರಿಸಿದರು. ಆಗ ನನ್ನ ಅಪ್ಪಯ್ಯನು "ತಮ್ಮ ಊಟ ಮುಗಿಯಿತೆ?" ಎಂದು ಪ್ರಶ್ನಿಸಿದಾಗ - "ಸ್ವಾಮೀ, ಪ್ರತೀದಿನವೂ ನಡೆಸುವ ನಮ್ಮ ನಿತ್ಯಾನುಷ್ಠಾನ, ಅಡುಗೆ, ನೈವೇದ್ಯವನ್ನು ಮುಗಿಸಿದ ನಂತರ ಬ್ರಾಹ್ಮಣರಿಗಾಗಿ ಕಾಯುತ್ತ ನಾವು ಜಗಲಿಯಲ್ಲಿ ಕುಳಿತಿರುತ್ತೇವೆ; ಯಾರಾದರೊಬ್ಬರು ಸಿಗುತ್ತಾರೆ. ಅವರಿಗೆ ಭೋಜನವನ್ನು ಸಮರ್ಪಿಸಿ ಅನಂತರವೇ ನಾವು ಉಣ್ಣುತ್ತೇವೆ. ಇದು ನಮ್ಮ ಬದುಕಿನ ವ್ರತ...ನಮ್ಮ ಊಟವು ಇನ್ನು ಆಗಬೇಕು..." ಅಂದರು. ಆಗ ಅಪ್ಪಯ್ಯನು "ಮಹಾಶಯರೇ, ಈ ಕಾಲದಲ್ಲಿ ದಿನವೂ ಅತಿಥಿ ಅಭ್ಯಾಗತರು ಸಿಗುವುದು ಕಷ್ಟ. ಅಕಸ್ಮಾತ್ ಯಾರೂ ಸಿಗದಿದ್ದರೆ ಏನು ಗತಿ?" ಅಂದಾಗ - "ಅಯ್ಯಾ, ಹಾಗೆ ಆದದ್ದೂ ಇದೆ. ಅಂತಹ ದಿನಗಳಲ್ಲಿ ನಮಗೂ ಊಟವಿಲ್ಲ; ಅಷ್ಟೆ..." ಎಂದರು. ಅನಂತರ ಜಗಲಿಯ ತುದಿಯವರೆಗೆ ವಿನಮ್ರರಾಗಿ ಬಂದು ಅತಿಥಿಗಳನ್ನು ಬೀಳ್ಕೊಟ್ಟರು.

ಕೋಟೇಶ್ವರದಲ್ಲಿ ನಮ್ಮ ಬಿಡಾರವಿದ್ದಾಗ (ಸುಮಾರು 1960 - 65 ರ ಅವಧಿ) ಇಂತಹುದೇ ಪರಿಸರವು ನಮ್ಮ ಮನೆಯಲ್ಲೂ ಇತ್ತು. ಬೀದಿಯ ಬದಿಯಲ್ಲೇ ಇದ್ದ ನಮ್ಮ ಬಿಡಾರಕ್ಕೆ - ಒಂದು ರಾತ್ರಿ ಕಳೆದು ಹೋಗುವ ಇಚ್ಛೆಯಿಂದ - ಅರ್ಧ ರಾತ್ರಿಯಲ್ಲೂ ಕಾಲ್ನಡಿಗೆಯ ಅಭ್ಯಾಗತರು ಬರುತ್ತಿದ್ದರು. ನನ್ನ ಅಮ್ಮನು ಅಂತಹ ಅವೇಳೆಯಲ್ಲಿಯೂ ಕಟ್ಟಿಗೆ ಒಲೆ ಹಚ್ಚಿ ಅವರಿಗೆ ಅಡುಗೆ ಮಾಡಿ ಬಡಿಸುತ್ತಿದ್ದುದು ನನಗಿನ್ನೂ ನೆನಪಿದೆ; ಪಾಯಸದೂಟವನ್ನು ಬಡಿಸಿದ್ದೂ ನೆನಪಿದೆ. ಪಾಯಸ ಪ್ರೇಮಿಯಾದ ನಾನು ಮರುದಿನ ಅಮ್ಮ ಕೊಟ್ಟ ಆ ಹೆಸರು ಬೇಳೆಯ ಪಾಯಸವನ್ನು ಅನೇಕ ಬಾರಿ ಸವಿದ ನೆನಪೂ ಇದೆ. "ರಾತ್ರಿಯ ಹೊತ್ತಿನಲ್ಲಿ ಯಾರಾದರೂ ಅತಿಥಿಗಳು ಬಂದರೆ ಅಗತ್ಯಕ್ಕೆ ಇರಲಿ" -  ಎನ್ನುತ್ತ ಪ್ರತೀದಿನವೂ ಒಂದಷ್ಟು ಮಜ್ಜಿಗೆ ಮತ್ತು ಹಾಲನ್ನು ನನ್ನ ಅಮ್ಮನು ತಪ್ಪದೆ  ಉಳಿಸುತ್ತಿದ್ದುದೂ ನೆನಪಿದೆ. ಆಕೆಯ ದೇಹಾಂತದ ವರೆಗೂ ಇದೇ ಸದ್ಭಾವವನ್ನು, ಕರ್ತವ್ಯ ನಿಷ್ಠೆಯನ್ನು  ಆಕೆಯು ಉಳಿಸಿಕೊಂಡಿದ್ದಳು. ಮನೆಗೆ ಬಂದ ಯಾರೂ ತಮ್ಮ ಹಸಿವನ್ನು ತಣಿಸಿಕೊಳ್ಳದೆ ಹೋಗಬಾರದು ಎಂಬ ವಿಶ್ವ ಕುಟುಂಬದ ಭಾವವು ಅಂದಿನ ಬಹುತೇಕ ಬ್ರಾಹ್ಮಣ ಕುಟುಂಬಗಳಲ್ಲಿಯೂ ನೆಲೆಸಿತ್ತು. ನಮ್ಮ ಮನೆಯಲ್ಲಿ ಸ್ವಲ್ಪ ಹೆಚ್ಚೇ ಇತ್ತು ಎನ್ನಬಹುದು. ಏನನ್ನಾದರೂ ಕೈಯೆತ್ತಿ ಕೊಡುವುದಕ್ಕೆ ಬಡತನವು ಎಂದೂ ಅಡ್ಡಿಯಲ್ಲ; ಮನಸ್ಸು-ಪ್ರೀತಿಯ ಭಾವವು ಮಾತ್ರ ಬೇಕಾಗುತ್ತದೆ. ಆಗ ಪಡೆದವರಿಗೆ ಸಂತೃಪ್ತ ಭಾವ; ಕೊಟ್ಟವರಿಗೆ ಧನ್ಯತಾ ಭಾವ.

ಇಂತಹ ಬ್ರಾಹ್ಮಣ ಆಕಾರಗಳು ಈಗ ಎಲ್ಲಾದರೂ ಕಾಣುತ್ತವೆಯೆ? ಇನ್ನೂ SMART ಆಗದ ಎಲ್ಲೋ ಹಳ್ಳಿಯಲ್ಲಿ ಅಂತಹ ಸಜ್ಜನರು ಇದ್ದರೂ - ಅದು ಬೆರಳೆಣಿಕೆಯಷ್ಟು. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಒಂದಾದರೂ ಕರ್ಮವು ಇಂದಿನ ಸಮಾಜದಲ್ಲಿ ಕಾಣಿಸುತ್ತದೆಯೆ? ಅನ್ನವನ್ನು ಮಾರುವ ವೃತ್ತಿಯನ್ನು ಹಿಡಿದಿರುವವರಿಂದ ತೊಡಗಿ ಎಲ್ಲರೂ - ಇನ್ನೊಬ್ಬರಿಗೆ ಒಂದು ಕಾಳನ್ನೂ ಕೈಯೆತ್ತಿ ಕೊಡಲಾಗದ ಹಂತದಲ್ಲಿ ಬಹುಪಾಲು ಬ್ರಾಹ್ಮಣರು ಸಿಲುಕಿಕೊಂಡಿದ್ದಾರೆ. ನೇಮನಿಷ್ಠೆಗಳೂ ದೂರಾಗಿವೆ. ಯಾರೂ ಯಾರಾಗಿಯೂ ಉಳಿದುಕೊಂಡಿಲ್ಲ. ಇದರಿಂದಾಗಿ, ಕೆಟ್ಟ ಕಲಬೆರಕೆಯ ಕುರೂಪೀ ಸಂಸ್ಕೃತಿಯು ಹರಡುತ್ತಿದೆ. ಈಗ ನಿಜವಾದ ಬ್ರಾಹ್ಮಣರಾಗಲೀ ಸನ್ಯಾಸಿಗಳಾಗಲೀ ನಮ್ಮ ಸುತ್ತಮುತ್ತ ಕಾಣಿಸುವುದಿಲ್ಲ. ಕೆಲವರು ತಾತ್ಕಾಲಿಕ ಲಾಭ ಪಡೆಯಲು - ಇನ್ನು ಕೆಲವರು, ಅನಿವಾರ್ಯವಾಗಿ ನಷ್ಟವನ್ನೇ ಹೊಂದಲು - ಕೆಲಕೆಲವು ಹಣೆಪಟ್ಟಿಯಿಂದ ಗುರುತಿಸಿಕೊಳ್ಳಬೇಕಾದಂತಹ ಸಾಮಾಜಿಕ ವ್ಯವಸ್ಥೆಯಲ್ಲಿ ಈಗ ನಾವಿದ್ದೇವೆ.

ಇನ್ನು...ವೇದಗಳನ್ನು ಮಾರುವವನು ಬ್ರಹ್ಮ ಹತ್ಯೆ ಮಾಡಿದ ಪಾತಕಿಗೆ ಸಮಾನನು ಎನ್ನುವುದಾದರೆ ಈ ಸಾಲಿನಲ್ಲಿ ಸದ್ಯದ ಸಮಾಜದಲ್ಲಿಯಂತೂ ಯಾರೂ ಸಿಗಲಾರರು. ವೇದವನ್ನು ಓದಿದ ಬೆರಳೆಣಿಕೆಯ ಮಂದಿ ಮಾತ್ರವೇ ಇಂದಿನ ಸಮಾಜದಲ್ಲಿ ಕಾಣಸಿಗುತ್ತಾರೆ. ವೇದದ ಮೋಡಿಗೆ ನಿಜವಾಗಿಯೂ ಒಳಗಾದವರು ನಿತ್ಯದ ಜಂಜಾಟಗಳಿಂದ ಸಹಜವಾಗಿಯೇ ದೂರವಿರುತ್ತಾರೆ. ವಕ್ರ ಶುಕ್ರರ ವಾದ ವಿವಾದಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ. ಅಂತಹ ನಿಷ್ಠೆ ನೈಮಿತ್ತಿಕಗಳಿಲ್ಲದೆ ಯಾವ ವೇದವೂ ಒಲಿಯದು. ವೇದ ಪಾರಂಗತರು ಸಾಮಾನ್ಯವಾಗಿ ಹೆಚ್ಚು ಸದ್ದನ್ನು ಮಾಡುವುದಿಲ್ಲ. ತುಳುಕದಿರುವುದು ಜ್ಞಾನ (ವೇದ) ದ ಸಹಜ ಗುಣ. ಅಕಸ್ಮಾತ್ ವೇದಜ್ಞರು ಸದ್ದು ಮಾಡಿದರೆ "ಅದು ಅರೆಬರೆ ವಿದ್ಯೆ; ವೇದವನ್ನು ಮಾರಿ ಹೊಟ್ಟೆ ತುಂಬಿಸಿಕೊಳ್ಳುವ ಘಾತಕತನ" ಎಂದೂ ಅಂದುಕೊಳ್ಳಬಹುದು. ಈಗಲೂ ವೇದವನ್ನು ಮಾರುವ ಯೋಗ್ಯತೆಯುಳ್ಳವರು ಎಲ್ಲೋ ಕೆಲವರಿದ್ದರೆ ಕೊಳ್ಳುವ ಯೋಗ್ಯತೆಯುಳ್ಳವರು ದುರ್ಲಭ; ಅಕಸ್ಮಾತ್ ಕೊಳ್ಳುವವನಿದ್ದರೆ ಸಮರ್ಥವಾಗಿ ಮಾರಬಲ್ಲವನೇ ಇಲ್ಲ...  ಎಂಬಂತಾಗಿದೆ. ಈ ಹಿನ್ನೆಲೆಯಲ್ಲಿ ವೇದವು ಸದ್ಯಕ್ಕೆ ಸುರಕ್ಷಿತವಾಗಿದೆ! (ಅಂದುಕೊಳ್ಳಬಹುದು!) ಅಥವ ತನ್ಮೂಲಕ ಸ್ವತಹ ವೇದವೇ ತನ್ನನ್ನು ತಾನು ರಕ್ಷಿಸಿಕೊಂಡಿರಬಹುದೆ? ಎಂದೂ ಅನ್ನಿಸುವುದಿದೆ. ಏನೇ ಆದರೂ ಪಾತಕಕ್ಕೂ ಘಾತಕಕ್ಕೂ ವೇದವಿರುವಲ್ಲಿ ಎಂದಿಗೂ ಅವಕಾಶವಿಲ್ಲ.

ಸಾಮಾಜಿಕ ಚಿಂತನೆಯಿದ್ದ ಪೂರ್ವದ ಋಷಿವಾಕ್ಯಗಳನ್ನು ವಸ್ತು ನಿಷ್ಠವಾಗಿ ಪೂರ್ಣ ಗೌರವದಿಂದ ನೋಡಿ ಇಂದೂ ಅಳವಡಿಸಿಕೊಳ್ಳಲು ಸಾಧ್ಯವಿದೆ. ಅದು Improvisation (ಉನ್ನತೀಕರಣ) ಆಗಿರಬೇಕು; ಇಳಿಯುವ ಆಟವಾಗಬಾರದು. ಏಕೆಂದರೆ ಕಲಿಯುಗದಲ್ಲಿ ನಾವೀಗ ಬಹು ದೂರ ಬಂದಿದ್ದೇವೆ. "ಕಡಿಮೆ ದುಃಖ ಹೆಚ್ಚು ಸುಖ" - ಎಂಬ ಎಲ್ಲೂ ಅಸ್ತಿತ್ವವೇ ಇಲ್ಲದ ಮಾಯಾವಿಯನ್ನು ಮುಷ್ಟಿಯಲ್ಲಿರಿಸಿಕೊಳ್ಳಲು ನಾವೀಗ ತಿಣುಕಾಡುತ್ತಿದ್ದೇವೆ. ಕರ್ಮಶೀಲತೆ ಮತ್ತು ಸದ್ವಿಚಾರಗಳತ್ತ ನಮ್ಮ ಆಕರ್ಷಣೆ ತಗ್ಗುತ್ತಿದೆ. ಏಕೆಂದರೆ ನಮಗೀಗ ಎಲ್ಲವೂ ಸುಲಭದಲ್ಲಿ ಸಿಗಬೇಕು; ದೇವರೂ ಕೂಡ! (ಅದೂ ದೇವರಿಗೆ ಬೇಕಿದ್ದರೆ...) "ಒಂದು ಕಡೆ ಇಟ್ಟ ಅಂಡನ್ನು ಅಲುಗಾಡಿಸದೆ ಕೂತರೂ ನಮ್ಮ ಬದುಕು ಸಾಂಗವಾಗಿ ನಡೆಯಬೇಕು" - ಎಂಬ ದಿಕ್ಕಿನಲ್ಲಿ ನಾವೀಗ ಹೆಜ್ಜೆ ಹಾಕುತ್ತಿದ್ದೇವೆ. ಇಂದ್ರಿಯ, ಮನಸ್ಸು, ಬುದ್ಧಿಯನ್ನು ನಿಯಂತ್ರಿಸಿ ವಿದ್ಯೆಯ ಉಪಾಸಕರಾಗುವ ವಿದ್ಯಾ ಪರಿಸರದ ಕೊರತೆಯೂ ಇದೆ. ಭಾರತದ ಸಾಂಪ್ರದಾಯಿಕ ಶಿಕ್ಷಣಕ್ಕೆ ಪುನಶ್ಚೇತನ ನೀಡಿ ಗುಣವರ್ಧನೆ ಮಾಡುವ ಅಗತ್ಯವಿದೆ. ಇಂದಿನ ನಮ್ಮ ಶಿಕ್ಷಣ ಶಾಸ್ತ್ರವು ಅನಾಥಾಲಯದ ಶಿಶುವಿನಂತಿದೆ. ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನದಂತಿದೆ. ಇಂದಿನ ಶಿಕ್ಷಣವು ವ್ಯಕ್ತಿತ್ವ ನಿರ್ಮಾಣಕ್ಕೆ ಪೂರಕವಾಗಿ ಇಲ್ಲವೇ ಇಲ್ಲ. ಆದ್ದರಿಂದಲೇ ಕೆಟ್ಟ ಗುರು, ಕೆಟ್ಟ ಶಿಷ್ಯ, ಕೆಟ್ಟ ಸಾಮಾಜಿಕ ಪರಿಸರಕ್ಕೆ ನಾವೆಲ್ಲರೂ ಸಾಕ್ಷಿಯಾಗುತ್ತಿದ್ದೇವೆ. ಪದವಿ ಪತ್ರದ ಆಧಾರದಲ್ಲಿ ವಿದ್ಯೆಯ ಆಳ ಅಗಲಗಳನ್ನು ಅಳೆಯುವ ಕೆಟ್ಟ ಅಪ್ರಾಯೋಗಿಕ ಪ್ರಯೋಗದಿಂದಲೇ ನಾವಿಂದು ಸೋಲುತ್ತಿದ್ದೇವೆ. "ಅಳೆಯುವವನೂ ಲೊಳಲೊಟ್ಟೆ; ಅಳೆಸಿಕೊಳ್ಳುವವನು ಕೊಳೆತ ಮೊಟ್ಟೆ" - ಎಂಬ ಜೋಡಾಟ ಈಗ ನಡೆಯುತ್ತಿದೆ. ಆದ್ದರಿಂದಲೇ ಇಂದಿನ ಮಾತು ಕೃತಿಗಳು ಅಲ್ಲಲ್ಲಿ ಹಳಿ ತಪ್ಪುತ್ತಿವೆ.

                                        ಉದ್ದುರುಟು ಮಾತಾಡಿ ಇದ್ದುದನು ಹೋಗಾಡೆ
                                        ಉದ್ದನ ಮರದ ತುದಿಗೇರಿ ಕೈಜಾರಿ
                                        ಬಿದ್ದು ಸತ್ತಂತೆ ಸರ್ವಜ್ಞ

ವಿನಯ ವಿವೇಕವಿಲ್ಲದ ವಿದ್ಯೆಯಿಂದ ಅಪಾರ ನಷ್ಟವುಂಟಾಗುತ್ತದೆ. ಆದರೆ...ಶ್ವಾನದಂತಾನೆ ಬೊಗಳಿದರೆ ಆನೆಯ ಮಾನವೇ ಹಾನಿ. ಆದ್ದರಿಂದ ಪೂರ್ವಾಪರ ತಿಳಿಯದೆ ತೂರಿಬಿಡುವ ಯಾವುದೇ ಮಾತು - ವರ್ತನೆಯು ಅವಿವೇಕದ ಮಾದರಿಯಾಗಿ ಬಹುಕಾಲ ಪೀಡಿಸುತ್ತ ಉಳಿಯುತ್ತದೆ.

ಉಳಿಯೇಟು ಬೀಳದೆ ಯಾವುದೇ ಕಲ್ಲು ಶಿಲ್ಪವಾಗದು; ಅಂತೆಯೇ ಶಿಕ್ಷೆಯ ಭೀತಿಯಿಲ್ಲದೆ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗದು. ಉಪಾಧ್ಯಾಯರಿಗೆ ತಮ್ಮ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ನಡೆಸಿಕೊಳ್ಳುವ ಮತ್ತು ಶಿಕ್ಷಿಸುವ ಎರಡೂ ಹಕ್ಕುಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಸಂಶಯಗಳನ್ನು ವಿಧೇಯತೆಯಿಂದ ಪ್ರಶ್ನಿಸಿ ತಿಳಿದುಕೊಳ್ಳುವ ಹಕ್ಕಿದೆ; ಅಷ್ಟೆ. ಆದರೆ ಇಂದಿನ ಪಾಶ್ಚಾತ್ಯ ತೆವಲಿನ ತಿರುಪೋಕಿತನದಿಂದಾಗಿ ಭಾರತದ ಸಂಪನ್ನ ವಿದ್ಯಾ ಕ್ಷೇತ್ರವು ರುಂಡವಿಲ್ಲದೆ ನಲುಗುವಂತಾಗಿದೆ. ವಿದ್ಯಾರ್ಥಿಯು ಅಧ್ಯಾಪಕನಿಗೆ ಹೊಡೆದರೆ "ಭೇಶ್" ಎನ್ನುವ, ಅದಕ್ಕೆ ತದ್ವಿರುದ್ಧವಾಗಿ ಶಿಕ್ಷಕರು ವಿದ್ಯಾರ್ಥಿಗೆ ಥಳಿಸಿದಾಗ ಹಾಹಾಕಾರವೆಬ್ಬಿಸುತ್ತ ಶಿಕ್ಷಕ ವೃಂದವನ್ನು ಮುತ್ತಿ ಪೀಡಿಸುವ ಇಂದಿನ ಮಾಧ್ಯಮಗಳು ವಿದ್ಯಾರ್ಥಿಗಳ ಬದುಕನ್ನು ನಿಶ್ಚಯವಾಗಿ ಹಾಳುಗೆಡವುತ್ತಿದ್ದಾರೆ. ಇಂತಹ ಘಟನೆಗಳು ಸ್ಥಳೀಯವಾಗಿ ಮುಗಿದು ಹೋದರೆ ತಕ್ಕಮಟ್ಟಿಗಾದರೂ ಸಾಮಾಜಿಕ ಸ್ವಾಸ್ಥ್ಯವು ಉಳಿಯುತ್ತದೆ. ಅದಲ್ಲದೆ ಇಂತಹ ಅನರ್ಥಕಾರೀ ಘಟನೆಗಳಿಗೆ "ಸಾಧನೆ" ಎಂಬಂತೆ ದೇಶವ್ಯಾಪೀ ಪ್ರಚಾರವು ದೊರೆತರೆ ಅಂತಹ ಅಪರಾಧಿಗಳಿಗೆ ಅಪರಾಧವೆಸಗುವ ಹೊಸಹೊಸ ದಾರಿಗಳನ್ನೂ ಸೂಚಿಸಿದಂತಾಗದೆ? ಆದ್ದರಿಂದಲೇ ಹುಚ್ಚು ಕುದುರೆಯೇರಿದಂತೆ - ದೇಶಪ್ರೇಮವಿಲ್ಲದಂತೆ ವರ್ತಿಸುತ್ತಿರುವ ಇಂದಿನ ಮಾಧ್ಯಮಗಳ ಕಾರ್ಯಸೂಚಿಯು ಯಾವುದೋ ಹೊರ ದೇಶದಲ್ಲಿ ರಹಸ್ಯವಾಗಿ ಸಿದ್ಧವಾಗುತ್ತಿರಬಹುದೆ? ಎಂದೂ ಬಲವಾಗಿ ಅನ್ನಿಸುತ್ತದೆ. "ತರಗತಿಯು ಮುಗಿಯುವ ವರೆಗೆ ನಿಂತಿರು" - ಎಂದು ತರಗತಿಯಲ್ಲಿ - ಶಿಕ್ಷಕರು ವಿದ್ಯಾರ್ಥಿಗೆ ಶಿಕ್ಷಾ ರೂಪದಲ್ಲಿ ಹೇಳಿದರೆ - ಅಷ್ಟಕ್ಕೇ ಅವಮಾನವಾಗಿ ಮುಂದೆಂದೂ ಅಂತಹ ತಪ್ಪನ್ನು ಹಿಂದಿನ ವಿದ್ಯಾರ್ಥಿಗಳು ಮಾಡುತ್ತಿರಲಿಲ್ಲ. ಆದರೆ ಇಂದಿನ ಮಾಧ್ಯಮಗಳಿಗೆ ತೆರೆದುಕೊಂಡಿರುವ ನಮ್ಮ ಮಕ್ಕಳು ಅಷ್ಟೊಂದು ಸಂವೇದನಾಶೀಲರಾಗಿಯೂ ಉಳಿದಿಲ್ಲ. ದಿನವೂ ಬಗೆಬಗೆಯ ದುಷ್ಟತನವನ್ನು ನೋಡುತ್ತಲೇ ಅವರೆಲ್ಲರೂ ಬೆಳೆಯುತ್ತಿದ್ದಾರೆ. ಆದ್ದರಿಂದಲೇ ಮಕ್ಕಳ ಭಾವತಂತುಗಳು ಸ್ಪಂದನಹೀನವಾಗಿ - ಜಡವಾಗಿ ಹೋಗಿವೆ. "ದುಷ್ಟತನವು ತಮ್ಮ ಜನ್ಮಸಿದ್ಧ ಹಕ್ಕು" ಎಂದು ಇಂದಿನ ವಿದ್ಯಾರ್ಥೀ ಸಮೂಹವು ತಿಳಿದುಕೊಂಡಂತೆಯೂ ಭಾಸವಾಗುತ್ತದೆ. "ಮಕ್ಕಳನ್ನು ಗಟ್ಟಿಗೊಳಿಸುವ ವಿಧಾನ" ಎನ್ನುತ್ತ Ragging ನ್ನೂ ಪ್ರೋತ್ಸಾಹಿಸುವ ನಷ್ಟಬುದ್ಧಿಯವರು ಈಗಲೂ ಇದ್ದಾರೆ! ಒಟ್ಟಿನಲ್ಲಿ ಮಾನವಂತರಾಗಿರುವುದು ಈಗ ಶ್ರೇಷ್ಠತೆಯ ಲಕ್ಷಣವಾಗಿ ಉಳಿದಿಲ್ಲ. ಇಷ್ಟಾಗಿಯೂ ಮಾನವಂತರಾಗಿ ಇನ್ನೂ ಉಳಿದಿರುವವರು ತಮ್ಮ ಶೈಕ್ಷಣಿಕ ಪರಿಸರದಲ್ಲಿ "ಪೆದ್ದು, ನಾಲಾಯಕ್" ಎಂಬ ಅವಹೇಳನಕ್ಕೂ ಒಳಗಾಗುತ್ತಿದ್ದಾರೆ. ಆದ್ದರಿಂದ "ಜಾಣ, ದೊಡ್ಡವರು" ಎಂದು ಹೇಳಿಸಿಕೊಳ್ಳಲು ಚಡಪಡಿಸುವವರು ಸ್ವತಹ ಸಂವೇದನಾರಹಿತರಾಗುವುದು, ಮಾನ ಬಿಡುವುದು - ಅನಿವಾರ್ಯವೆಂಬಂತಾಗಿದೆ. ಆದ್ದರಿಂದ ಮಾನಗೇಡಿಗಳಾಗುವಲ್ಲಿಯೂ ಎಡೆಬಿಡದೆ ಸ್ಪರ್ಧೆ ನಡೆಯುತ್ತಿದೆ. ಒಟ್ಟಿನಲ್ಲಿ, "ಮಾನ" ಎಂಬುದರ ವ್ಯಾಖ್ಯೆಯೇ ಬದಲಾಗಿ ಮಾನ - ಹೋಗಿದೆ.

ಆದ್ದರಿಂದ ಇಂದಿನ ಕಾಲಘಟ್ಟಕ್ಕೆ ಹೊಂದುವಂತೆ "ಅಂದಿನ" ವಿದ್ವದ್ ಋಷಿಗಳ ತತ್ವಗಳನ್ನು ಪುನರ್ನವೀಕರಿಸಿಕೊಳ್ಳಬೇಕು. ಅದು ಹೇಗೆಂದರೆ -

1. "ಯಾರನ್ನು ಯಾರು ನಿಂದಿಸಿದರೂ - ಅದು ಸರಿಯಲ್ಲ" ಎಂಬ ವಿಶಾಲಾರ್ಥದಲ್ಲಿ ಎಲ್ಲ ವರ್ಗಗಳನ್ನೂ ಸೇರಿಸಬಹುದು.

ಈ ರೀತಿಯ ಸಭ್ಯತೆಯು ದುರ್ಭರ - ಘೋರ - ಸ್ವಾತಂತ್ರ್ಯ ಹರಣವೆನ್ನಿಸಿದರೆ, ಯಾರೂ ಯಾರನ್ನೂ ನಿಂದಿಸದೆ ನಿಸ್ಸಾರವಾಗಿ ಬದುಕುವುದು ವ್ಯರ್ಥವೆನ್ನಿಸಿದರೆ...

2. "ಯಾರು ಯಾರನ್ನು ಬೇಕಾದರೂ ಮನಸೋ ಇಚ್ಛೆ ನಿಂದಿಸಬಹುದು.." ಎಂಬ ನಿರ್ಣಯಕ್ಕೆ ಬಂದು ನವ ಲಂಕಾಪುರಿಯನ್ನು ಕಟ್ಟಬಹುದು.

ಎಲ್ಲರಿಗೂ ನ್ಯಾಯ ಸಿಗಲು ಇವೆರಡೇ ದಾರಿ ಉಳಿದಿರುವುದು.

......ನಮಗಿರುವುದು ಇವೆರಡೇ ದಾರಿ.

"ಒಬ್ಬನು ಎಂತಹ ಮಹಾನ್ ವ್ಯಕ್ತಿಯಾದರೂ ಕಣ್ಣು ಮುಚ್ಚಿಕೊಂಡು ಯಾರನ್ನೂ ಅನುಸರಿಸಬೇಡಿ. ಪ್ರತೀ ಪ್ರಾಣಿಗೂ ಕಣ್ಣು, ಮೂಗು, ಬಾಯಿ, ಕಿವಿ, ತಲೆ - ಎಲ್ಲವನ್ನೂ ಪ್ರತ್ಯೇಕವಾಗಿ ಕೊಟ್ಟ ದೇವರ ಇಚ್ಛೆಯೂ ಇದೇ ಆಗಿದೆ" ಎಂದ ಸ್ವಾಮಿ ವಿವೇಕಾನಂದರ ಮಾತು - ಸದಾ ಎಚ್ಚರದಲ್ಲಿರುವಂತೆ, ಚಟ್ಟು ಸ್ಪರ್ಧೆಗಿಳಿಯದಂತೆ ನಮ್ಮನ್ನು ಪ್ರೇರೇಪಿಸುವಂತಿದೆ. ಸಂಪ್ರದಾಯ ಪರಂಪರೆಯ ತತ್ವರಥವನ್ನು ಎಳೆಯಲು ಮನಸ್ಸಿಲ್ಲದಿದ್ದರೆ ಬಿಟ್ಟುಬಿಡಿ; ಆದರೆ ಆ ರಥವನ್ನು ಇತರರೂ ಎಳೆಯಲು ಬಿಡದಿರುವುದು - ಆ ರಥವನ್ನೇ ಮುರಿಯುವಂತೆ ಅಪ್ಪಣೆ ಕೊಡಿಸುವುದು...ಇವೆಲ್ಲವೂ ಸಭ್ಯತೆಯಲ್ಲ. ಪರಂಪರೆಯೆಂಬುದು ದೀಪದ ಕಂಬದಂತೆ. ಚತುರ ವಿವೇಕಿಗಳು ಆ ಕಂಬವನ್ನು ತಮ್ಮ ಮಾರ್ಗದರ್ಶನಕ್ಕಾಗಿ ಯುಕ್ತಿಯಿಂದ  ಉಪಯೋಗಿಸುತ್ತಾರೆ. ಆದರೆ ಕುಡುಕರು ತಮ್ಮ ಅಸ್ಥಿರ ದೇಹವನ್ನು ಒರಗಿಸಲು ಆ ಕಂಬವನ್ನು ಹಿಡಿಯುತ್ತಾರೆ! ಆ "ಪರಮಾತ್ಮ"ನ ಸ್ವರ್ಗ ಸುಖದಲ್ಲಿ ಏನೇನೋ ಗಳಹುತ್ತಾರೆ! ಆದರೆ ನಹುಷಗಿರಿಯು ಹೆಬ್ಬಾವಾಗಲು ಎಷ್ಟು ಹೊತ್ತು ಬೇಕು?

ಹಾಗೆ ನೋಡಿದರೆ, ಈಗ ಎಲ್ಲರದೂ ಒಂದೇ ಆಶ್ರಮ ಧರ್ಮ. ಅದು "ವಿತ್ತ ಸಂಚಯ ಧರ್ಮ". ಅಂದಮೇಲೆ ತಮಗೆ ವಿಶ್ವಾಸವಿಲ್ಲದ ಎಂದಿನದೋ ಆಚಾರ ವಿಚಾರಗಳ ಕುರಿತು - ಅದರಲ್ಲಿ ಅಂತಹ ನಂಬಿಕೆಯಿಲ್ಲದವರು, ಅಧ್ಯಯನವೂ ಇಲ್ಲದವರು ತಮ್ಮ ಮೂಗು ತೂರಿಸುವ ಅಗತ್ಯವಾದರೂ ಏನಿದೆ? ಹೀಗಾದಾಗಲೇ ಕೂಟಾಸುರರ ಅವಿದ್ಯಾ ಸಂಸಾರದ ಅವತಾರವಾಗುವುದು. ನಿಜವಾದ ವಿದ್ವಾಂಸರಾದವರು ಕ್ಷೋಭೆಯನ್ನುಂಟುಮಾಡುವ ಯಾವುದೇ ಕ್ಷುದ್ರ ಉಪದ್ವ್ಯಾಪಗಳಲ್ಲಿ ಮುಳುಗುವುದಿಲ್ಲ. ವಿದ್ವಾಂಸರೆನ್ನಿಸಿಕೊಳ್ಳಲು ಬಯಸುವವರು ತಮ್ಮ ವಿದ್ಯಾ ಪರಿಧಿಯ ಶಿಷ್ಟತೆಗೆ ಬದ್ಧರಾಗಿ ಇತರರಿಗೂ ಮಾದರಿಯಾಗಿರುವುದು ಅಪೇಕ್ಷಣೀಯ.

ಕಾಲಾನುಕ್ರಮದಲ್ಲಿ ಯಾವುದೇ ಆಶ್ರಮದ ಕೆಟ್ಟ ಪರಿವರ್ತನೆಗೆ ಅವುಗಳ ಅನುಯಾಯಿಗಳ ಅಚಲವಾದ ನಂಬಿಕೆ ಮತ್ತು ಶ್ರದ್ಧೆಗಳು ಎಂದಿಗೂ ಕಾರಣವಾಗಲಾರದು. ನಂಬಿಕೆ ಮತ್ತು ಶ್ರದ್ಧೆಯಿಂದ ದೂರವುಳಿದಿರುವ ವಿಕೃತ ಮನೋಬುದ್ಧಿಯ ಹೊಟ್ಟೆಬಾಕ ತಲೆಹಿಡುಕರಿಂದಲೇ ಸಾಮಾಜಿಕ ಕ್ಷೋಭೆ ಮತ್ತು ಸಂಕಷ್ಟಗಳು ಹುಟ್ಟಿಕೊಳ್ಳುತ್ತವೆ ಎಂಬುದು ಸಿದ್ಧ ಸತ್ಯ. ತಮ್ಮ ತಮ್ಮ ಕರ್ತವ್ಯ ಕರ್ಮಗಳನ್ನು ಪ್ರತಿಯೊಬ್ಬರೂ ತಲೆತಗ್ಗಿಸಿ ಮಾಡುವ ಸಮಾಜದಲ್ಲಿ ಕೀಟಲೆ ತರಲೆಗಳು ಎಂದೂ ಹುಟ್ಟುವುದಿಲ್ಲ. ಆದರೆ ಕೀಟಲೆ ತರಲೆಗಳನ್ನು ಹುಟ್ಟಿಸುವವರಿಗೆ ವಿಶೇಷ ಸನ್ಮಾನ ನಡೆಸುವ ಸಮಾಜದಲ್ಲಿ ಪೀಡೆಯು ಎಂದೂ ತಪ್ಪುವುದಿಲ್ಲ. ಹದ ತಪ್ಪಿದ ಬುಧಜನರಿಂದ ಯಾವತ್ತೂ ಅಪಕಾರವೇ ಹೆಚ್ಚು. ಅಂತಹ ಜ್ಞಾನಿಗಳಿಗಿಂತ ಅಜ್ಞಾನಿಗಳೇ ನಿರಪಾಯಕಾರಿಗಳು.

ಹಗಲನ್ನು ಹಗಲು ಎಂದು, ಕತ್ತಲನ್ನು ಕತ್ತಲೆಂದು ಒಪ್ಪಿಕೊಳ್ಳುವುದು ಇಷ್ಟು ಕಷ್ಟವೆ? ಎಲ್ಲೋ ಕೊಂಡಿ ತಪ್ಪಿದೆ; ಅಥವ ತಪ್ಪಿಸಲಾಗಿದೆ. ತಿರುಳನ್ನು ಹೊರಚೆಲ್ಲಿ ಸಿಪ್ಪೆ ಮಾತ್ರ ತಿನ್ನುವ Zero Figure ನ ತೆವಲಿನವರಂತೆ ಇದೊಂದು ಶ್ರೀಮಂತ ಆವಾಹಿತ ರೋಗ. ನಿರೋಗಿಗಳಿಗೂ ರೋಗ ಅಂಟಿಸುವ ಉಚಿತ ಭೋಗ! ಇಂತಹ ಬೌದ್ಧಿಕ ರೋಗಿಗಳ "ತುತ್ತೂರಿ ಗಾಡಿ"ಯ ಶಬ್ದ ಮಾಲಿನ್ಯವು ಮಿತಿಮೀರಿದರೆ ಅದನ್ನು ಎತ್ತಂಗಡಿ ಮಾಡಿಸಿ Dump Yard ಗೆ ಸೇರಿಸುವುದು "ಬಹುಜನ ಹಿತಾಯ ಬಹುಜನ ಸುಖಾಯ" ಕಾರ್ಯವೆನಿಸುತ್ತದೆ. "ಅಡಿಬಿದ್ದರೂ ಮೂಗು ಮೇಲೆ" ಎನ್ನುತ್ತ, ದಿನಕ್ಕೊಂದು ಹಾಳು ವರಸೆ ತೋರಿಸಿ ಪರಪರ ಕೆರೆದುಕೊಳ್ಳುವ ಬಿಟ್ಟಿ ಮಾಗಧರಿಂದ ಬೀದಿಗಳಂತೂ ಹಾಳಾಗುವುದು ನಿಶ್ಚಯ. ಶ್ರುತಿ ಸೇರದ, ಪ್ರೇಮವಿಲ್ಲದ ಇವರ ನಿತ್ಯಗಾನವು - ....ಬಚ್ಚಿಟ್ಟ ಹಳಸಿದ ಅಡುಗೆಯಂತೆ - ಕರ್ಕಶ, ಕಠೋರ, ದುರ್ನಾತ. ಇಂತಹ ಇಳಿಯುವ - ಅಳಿಯುವ ಚಟ್ಟು ಪೊಟ್ಟು ಸ್ಪರ್ಧೆಯು ಬೇಕೆ?